- ರಾಘವೇಂದ್ರ ಅಡಿಗ ಎಚ್ಚೆನ್.
ಸಿನಿ ತಂಡಗಳು ಪ್ರೇಕ್ಷಕರನ್ನ ಸೆಳೆಯಲು ಎಲ್ಲಿಲ್ಲದ ಕಸರತ್ತು ಮಾಡುತ್ತವೆ. ಭರ್ಜರಿ ಪ್ರಚಾರ, ಕಾಲೇಜುಗಳಿಗೆ ಭೇಟಿ, ನಟ-ನಟಿಯರು ಆಟೋ ಓಡಿಸುವುದು ಇನ್ನೂ ಏನೇನೋ, ಇವುಗಳಲ್ಲಿ ಬಹುಮಾನ ಘೋಷಣೆಯೂ ಒಂದು. ಸಿನಿಮಾ ನೋಡಿ ಪ್ರಶ್ನೆಗೆ ಉತ್ತರಿಸಿದವರಿಗೆ ಬಹುಮಾನ ಎಂದೆಲ್ಲ ಹಿಂದೆ ಆಫರ್ಗಳನ್ನು ನೀಡಲಾಗುತ್ತಿತ್ತು. ಸಿನಿಮಾದ ಕ್ಯಾಸೆಟ್ ಖರೀದಿಸಿದವರಿಗೆ ಬಹುಮಾನ ನೀಡಲಾಗುತ್ತಿತ್ತು. ಈಗಲೂ ಆಗೊಮ್ಮೆ-ಈಗೊಮ್ಮೆ ಇಂಥ ಆಫರ್ಗಳನ್ನು ಚಿತ್ರತಂಡಗಳು ನೀಡುವುದುಂಟು. ಇದೀಗ ‘ಕೊರಗಜ್ಜ’ ಚಿತ್ರತಂಡ ಇಂಥಹದ್ದೇ ಆಫರ್ ನೀಡಿದೆ. ‘ಕೊರಗಜ್ಜ’ ಸಿನಿಮಾದ ಹಾಡುಗಳಿಗೆ ರೀಲ್ಸ್ ಮಾಡಿ ಹಂಚಿಕೊಂಡವರಿಗೆ ಕೋಟಿ ರೂಪಾಯಿ ಬಹುಮಾನದ ಆಫರ್ ಅನ್ನು ಸಹ ಚಿತ್ರತಂಡ ನೀಡಿದೆ. ಚೆನ್ನಾಗಿ ರೀಲ್ಸ್ ಮಾಡಿ ಹಂಚಿಕೊಂಡು, ಅದರಲ್ಲಿ ಚಿತ್ರತಂಡ ಆಯ್ಕೆ ಮಾಡಿದವರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆಯಂತೆ. ಆದರೆ ಇದಕ್ಕೆ ಕೊಡಗಿನ ದೈವ ನರ್ತಕರಿಂದ ಆಕ್ರೋಶ ವುಕ್ತವಾಗಿದೆ.

ಸುಧೀರ್ ಅತ್ತಾವರ್ ನಿರ್ದೇಶನದ ‘ಕೊರಗಜ್ಜ’ ಸಿನಿಮಾದ ಹಾಡುಗಳು ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಹಾಡುಗಳಿಗೆ ರೀಲ್ಸ್ ಮಾಡಿ ಹಂಚಿಕೊಂಡವರಿಗೆ ಕೋಟಿ ರೂಪಾಯಿ ಬಹುಮಾನದ ಆಫರ್ ಅನ್ನು ಚಿತ್ರತಂಡ ನೀಡಿದೆ. ʻಕಾಂತಾರʼ ಸಿನಿಮಾದಲ್ಲಿ ದೈವ ವಿಡಂಬನೆ ಕುರಿತು ಸಾಕಷ್ಟು ಜನ ದೈವದ ವೇಷಭೂಷಣ ಹಾಕಿಕೊಂಡು ಸಿಕ್ಕಸಿಕ್ಕಲ್ಲಿ ರೀಲ್ಸ್ ಮಾಡುತ್ತಾ ದೈವಗಳಿಗೆ ಅಪಮಾನ ಮಾಡಿದ್ದರು. ಇದೀಗ ತುಳುನಾಡಿನ ಆರಾಧ್ಯ ದೈವವಾಗಿರುವ ಕೊರಗಜ್ಜನ ಕುರಿತು ರೀಲ್ಸ್ ಮಾಡಿ ಹೆಚ್ಚು ಲೈಕ್ಸ್, ವೀವ್ಸ್ ಗಳಿಸಿದವಿಗೆ ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಹೇಳಿರುವುದು ಖಂಡನೀಯವಾಗಿದೆ. ಈ ತಪ್ಪು ಮುಂದುವರಿದ್ರೆ, ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ದೈವದ ಮೊರೆ ಹೋಗುವುದಾಗಿ ಹೇಳಿದ್ದಾರೆ.
ಈ ರೀಲ್ಸ್ ಸ್ಪರ್ಧೆ ಆಯೋಜನೆಯಿಂದ ಸಾವಿರಾರು ಯುವ ಜನತೆ ಬೀದಿ ಬೀದಿಗಳಲ್ಲಿ ಕೊರಗಜ್ಜನ ವೇಷ ಧರಿಸಿ ಕುಣಿಯಲು ಶುರುಮಾಡುತ್ತಾರೆ, ಇದರಿಂದ ದೈವ ನಿಂದನೆಯಾಗುತ್ತದೆ. ದೇವರ ಅಪಹಾಸ್ಯ ಮಾಡಿದಂತಾಗುತ್ತದೆ. ಇದು ಜನಪದ ಕಲೆಯಲ್ಲ. ಬದಲಿಗೆ ದೈವ ಆರಾಧನೆ. ಕೊರಗಜ್ಜನನ್ನ ನಂಬುವ ಕೋಟ್ಯಂತರ ಭಕ್ತರಿದ್ದಾರೆ. ಕೊರಗಜ್ಜನ ರೀಲ್ಸ್ ಮಾಡುವುದರಿಂದ ಇವರೆಲ್ಲರ ನಂಬಿಕೆಗೆ ಘಾಸಿಯಾಗುತ್ತದೆ ಎಂದು ದೈವ ಆರಾಧಕರು ಆಕ್ರೋಶ ಹೊರ ಹಾಕಿದ್ದಾರೆ. ಕೊರಗಜ್ಜ ಸಿನಿಮಾ ತಂಡದ ವಿರುದ್ಧ ಫಿಲ್ಮ್ ಚೇಂಬರ್ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ದೈವ ನರ್ತಕ ಮಂಜುನಾಥ್ ಆಗ್ರಹಿಸಿದ್ದಾರೆ.

ಕರಾವಳಿ ಭಾಗದ ಕಾರಣಿಕದ ಶಕ್ತಿಯಾಗಿರುವ ಕೊರಗಜ್ಜ ದೈವದ ಕಥೆ ಆಧರಿತ ಸಿನಿಮಾ ಬಿಡುಗಡೆಗೆ ಸಿದ್ಧಗೊಂಡಿದೆ. ಚಿತ್ರದ ಪ್ರಚಾರಕ್ಕಾಗಿ ಕೊರಗಜ್ಜ ಚಿತ್ರದಲ್ಲಿರುವ 6 ಹಾಡುಗಳನ್ನು ಪ್ರೇಕ್ಷಕರಿಗೆ ತಲುಪಿಸುವ ನಿಟ್ಟಿನಲ್ಲಿ ಹಾಗೂ ಸಿನಿಮಾದ ಪ್ರಚಾರಕ್ಕಾಗಿ ಕೊರಗಜ್ಜ ರೀಲ್ಸ್ ಎಂಬ ಸ್ಪರ್ಧೆಯನ್ನು ಆಯೋಜಿಸಿದೆ. ಇದನ್ನ ಕೊಡಗು ಜಿಲ್ಲಾ ದೈವ ಆರಾಧಕರು ಮತ್ತು ದೈವ ನರ್ತಕರ ಸಂಘ ತೀವ್ರವಾಗಿ ಖಂಡಿಸಿದೆ. ಕಾನೂನು ಹೋರಾಟಕ್ಕೂ ಮುಂದಾಗುವುದಾಗಿ ದೈವ ನರ್ತಕರ ಸಂಘದ ಪ್ರಮುಖರು ತಿಳಿಸಿದ್ದಾರೆ. ನಂಬಿದವರಿಗೆ ಇಂಬು ನೀಡುವ ದೇವರೆಂದೇ ಖ್ಯಾತಿಯಾಗಿರುವ ಕೊರಗಜ್ಜನನ್ನ ಬಳಸಿ ರೀಲ್ಸ್ ಮಾಡಲು ಹೊರಟಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.





