ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿದ್ದ ಮಜಾ ಟಾಕೀಸ್ನ ಕೊನೆಯ ದಿನದ ಎಪಿಸೋಡ್ ಭಾನುವಾರ ಪ್ರಸಾರವಾಗಿದ್ದು, ಕನ್ನಡದ ಜನಪ್ರಿಯ ಶೋ ಮಜಾ ಟಾಕೀಸ್ ಅಂತ್ಯಗೊಂಡಿದೆ.
ಸೃಜನ್ ಲೋಕೇಶ್ ನೇತೃತ್ವದಲ್ಲಿ ಮೂಡಿ ಬರುತ್ತಿದ್ದ ‘ಮಜಾ ಟಾಕೀಸ್’ ಫಿನಾಲೆ ಸಂಚಿಕೆಗಳು ಭಾನುವಾರ ಪ್ರಸಾರ ಕಂಡಿದ್ದು, ಅತಿಥಿಯಾಗಿ ದೊಡ್ಡಣ್ಣ ಹಾಗೂ ಚಿಕ್ಕಣ್ಣ ಕಾರ್ಯಕ್ರಮಕ್ಕೆ ಬಂದಿದ್ದರು. ಬೇಸರದ ಸಂಗತಿ ಏನೆಂದರೆ 32 ಎಪಿಸೋಡ್ಗೆ ಮಜಾ ಟಾಕೀಸ್ ಕೊನೆಗೊಂಡಿದೆ.ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದ್ದ ಮಜಾ ಟಾಕೀಸ್ ಮುಕ್ತಾಯದ ಬಗ್ಗೆ ಸೃಜನ್ ಲೋಕೇಶ್ ಅವರು ಲೈವ್ಗೆ ಬಂದು ಬೇಸರ ವ್ಯಕ್ತಪಡಿಸಿದ್ದಾರೆ. ಅದರ ಜೊತೆಗೆ ಗುಡ್ ನ್ಯೂಸ್ ಕೂಡ ಹಂಚಿಕೊಂಡಿದ್ದಾರೆ. ಅದು ಏನೆಂದರೆ ಶೀಘ್ರದಲ್ಲೇ ‘ಜಿಎಸ್ಟಿ’ ಸಿನಿಮಾ ತೆರೆಗೆ ಬರುತ್ತಿದೆ.
ಪ್ರೀತಿಯ ಕನ್ನಡಿಗರಿಗೆ ನಾನು ತಲೆಬಾಗಿ ಧನ್ಯವಾದ ಹೇಳುತ್ತೇನೆ. ನೀವಿಲ್ಲದೇ ನಾವು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಈ ಮಜಾ ಟಾಕೀಸ್ ಅನ್ನು ಮುಕ್ತಾಯ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಾವು ಬೇರೆ ಒಳ್ಳೊಳ್ಳೆಯ ಕಾರ್ಯಕ್ರಮಗಳೊಂದಿಗೆ ಬರುತ್ತಿದ್ದೇವೆ. ಇದರ ಜೊತೆಗೆ ನನ್ನ ಸಿನಿಮಾ ಜಿಎಸ್ಟಿ ಬರುತ್ತಿದೆ. ಘೋಸ್ಟ್ ಇನ್ ಟ್ರಬಲ್ ಅಂತ ಅದರ ಪೂರ್ತಿ ಹೆಸರು. ಕೆಲವೇ ವಾರಗಳಲ್ಲೇ ಅದನ್ನು ಥಿಯೇಟರ್ನಲ್ಲಿ ರಿಲೀಸ್ ಮಾಡುತ್ತಿದ್ದೇವೆ. ಆ ಸಿನಿಮಾಗೆ ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಬೇಕು. ಕನ್ನಡ ಸಿನಿಮಾಗಳನ್ನು ಎಲ್ಲರೂ ಬೆಳೆಸಿ. ನಿಮ್ಮೆಲ್ಲರ ಪ್ರೋತ್ಸಾಹದಿಂದ ಹಳೆಯ ವಿಜೃಂಭಣೆಯ ದಿನಗಳನ್ನು ನಾವು ನೋಡಬೇಕಿದೆ.ಜಿಎಸ್ಟಿ ಮೂಲಕ ಈ ಬಾರಿ ಒಳ್ಳೆಯ ಸಿನಿಮಾ ಮಾಡಿದ್ದೇನೆ ಎಂಬ ನಂಬಿಕೆ ಇದೆ. ಈಗಾಗಲೇ ಮಜಾ ಟಾಕೀಸ್ನಲ್ಲೂ ಜಿಎಸ್ಟಿ ಬಗ್ಗೆ ಹೇಳಿದ್ದೇವೆ. ಬೇರೆ ಭಾಷೆಯ ಸಿನಿಮಾಗಳಿಗಿಂತಲೂ ನಮ್ಮ ಸಿನಿಮಾಗಳು ಮೇಲೆ ಹೋಗಬೇಕು. ನಮ್ಮ ಮಜಾ ಟಾಕೀಸ್ನಲ್ಲಿ ಹಲವು ಕನ್ನಡ ಸಿನಿಮಾಗಳನ್ನು ಪ್ರಮೋಷನ್ ಮಾಡಿದ್ದೇವೆ. ಸುಮಾರು 10 ವರ್ಷಗಳಿಂದ ಕನ್ನಡಿಗರ ಪ್ರೀತಿ ಗಳಿಸಿರುವ ಮಜಾ ಟಾಕೀಸ್ನ ಕಲಾವಿದರಿಗೆ ಧನ್ಯವಾದಗಳು. ಮಿಮಿಕ್ರಿ ದಯಾನಂದ್, ಅಪರ್ಣಾ, ಶ್ವೇತಾ ಚೆಂಗಪ್ಪ, ಕುರಿ ಪ್ರತಾಪ್, ತರಂಗ ವಿಶ್ವ, ನವೀನ್ ಪಡೀಲ್, ಪವನ್, ವಿ. ಮನೋಹರ್, ಇಂದ್ರಜಿತ್ ಲಂಕೇಶ್, ರಜನಿ, ಯೋಗರಾಜ್ ಭಟ್, ಮಿಮಿಕ್ರಿ ಗೋಪಿ, ರಾಘವೇಂದ್ರ ಮತ್ತು ಗಿಚ್ಚಿ ಗಿಲಿಗಿಲಿ ಶೋ ಕಲಾವಿದರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಸೃಜನ್ ಹೇಳಿದ್ದಾರೆ.