ರಾಘವೇಂದ್ರ ಅಡಿಗ ಎಚ್ಚೆನ್.

ಖ್ಯಾತ ಗಾಯಕಿ Mangli ವಿರುದ್ಧ ಹೈದರಾಬಾದ್‌ನಲ್ಲಿ ಎಫ್‌ಐಆರ್ ದಾಖಲಾಗಿರುವ ಘಟನೆ ಸಂಚಲನ ಮೂಡಿಸಿದೆ. ಪಂಜಾಗುಟ್ಟಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಈ ಪ್ರಕರಣ, ಮೈಕ್ರೋಫೈನಾನ್ಸ್ ಹೆಸರಿನಲ್ಲಿ ನಡೆದ ದೊಡ್ಡ ಮಟ್ಟದ ವಂಚನೆ ಆರೋಪಕ್ಕೆ ಸಂಬಂಧಿಸಿದೆ.

ಸಿಕಂದರಾಬಾದ್ ಮೂಲದ ವಕೀಲ ಸುಬ್ಬಾರಾವ್ ನೀಡಿದ ದೂರಿನ ಪ್ರಕಾರ, ಮಂಗ್ಲಿ ಮತ್ತು ಆಕೆಯ ಸಹಚರರು “ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ” ಎಂಬ ಆಮಿಷ ತೋರಿಸಿ, ಸುಮಾರು 150 ಜನರಿಂದ 10 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಣವನ್ನು ಗೋಕುಲಾನಂದನ ಇನ್‌ಫ್ರಾ ಇಂಡಿಯಾ ಎಂಬ ಕಂಪನಿಯಲ್ಲಿ ಹೂಡಿಕೆ ಮಾಡಲಾಗಿದೆ …

ದೂರಿನಲ್ಲಿ, ಹೂಡಿಕೆದಾರರ ಹಣದ ಬಗ್ಗೆ ಪ್ರಶ್ನೆ ಕೇಳಿದಾಗ ಮಂಗ್ಲಿ ಅವಮಾನಕಾರಿ ರೀತಿಯಲ್ಲಿ ವರ್ತಿಸಿದ್ದು, ಪ್ರಕರಣವನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪಗಳೂ ಸೇರಿವೆ.

ಇದಕ್ಕೆ ಪ್ರತಿಯಾಗಿ, ಮಂಗ್ಲಿ ಕೂಡ ಪ್ರತಿದೂರು ದಾಖಲಿಸಿದ್ದು, ಸುಬ್ಬಾರಾವ್ ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ತಮಗೆ ಬೆದರಿಕೆ ಹಾಕಲಾಗಿದೆ ಹಾಗೂ ಮಾನಹಾನಿ ಮಾಡುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿ, ನಾರ್ಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಪ್ರಕರಣ ಈಗ ಎರಡು ಕಡೆಗಳಿಂದ ತೀವ್ರವಾಗಿದ್ದು, ಇಬ್ಬರೂ ಪರಸ್ಪರ ಗಂಭೀರ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ವಾಸ್ತವಾಂಶಗಳನ್ನು ಪರಿಶೀಲಿಸುತ್ತಿದ್ದಾರೆ.

ಒಟ್ಟಿನಲ್ಲಿ, ಮೈಕ್ರೋಫೈನಾನ್ಸ್ ಹೂಡಿಕೆ ಹೆಸರಿನಲ್ಲಿ ನಡೆದಿರುವುದಾಗಿ ಹೇಳಲಾಗುತ್ತಿರುವ ಈ ವಿವಾದ, ಗಾಯಕಿ ಮಂಗ್ಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಮುಂದಿನ ಬೆಳವಣಿಗೆಗಳ ಮೇಲೆ ಎಲ್ಲರ ಗಮನ ನೆಟ್ಟಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ