ರಾಘವೇಂದ್ರ ಅಡಿಗ ಎಚ್ಚೆನ್. 

ರಕ್ತದೊತ್ತಡದಲ್ಲಿ ತೀವ್ರ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದ ನಟ ವಿನೋದ್ ಪ್ರಭಾಕರ್ ಇದೀಗ ಚೇತರಿಸಿಕೊಂಡಿದ್ದು, ‘ಬಲರಾಮನ ದಿನಗಳು’ ಚಿತ್ರದ ಮೊದಲ ಪ್ರದರ್ಶನದ ವೇಳೆ ಥಿಯೇಟರ್‌ಗೆ ಆಗಮಿಸಿ ತಮ್ಮ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹೃದಯಾಘಾತವಾಗಿದೆ ಎಂಬ ವದಂತಿಗಳನ್ನು ನೇರವಾಗಿ ತಳ್ಳಿಹಾಕಿದ ಅವರು, “ನನಗೆ ಹೃದಯಾಘಾತ ಆಗಿರಲಿಲ್ಲ. ಕೇವಲ ಬಿಪಿ ಲೋ ಆಗಿತ್ತು” ಎಂದು ತಿಳಿಸಿದ್ದಾರೆ.

ಒಂದು ವಾರದ ಹಿಂದೆ ರಕ್ತದೊತ್ತಡದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ವಿನೋದ್ ಪ್ರಭಾಕರ್ ಅವರನ್ನು ಬೆಂಗಳೂರಿನ ನಾಗರಭಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದ ಅವರು, ಆಸ್ಪತ್ರೆಯಲ್ಲಿ ಸಾಮಾನ್ಯ ವಾರ್ಡ್ ಲಭ್ಯವಿರದ ಕಾರಣ ಸಿಸಿಯುವಿನಲ್ಲಿ ಚಿಕಿತ್ಸೆ ಪಡೆದಿದ್ದರು. ಇದೇ ಕಾರಣಕ್ಕೆ ಅವರಿಗೆ ಹೃದಯಾಘಾತವಾಗಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

ಈ ಬಗ್ಗೆ ಪ್ರತಿಕ್ರಿಯಿಸಿದ ವಿನೋದ್ ಪ್ರಭಾಕರ್, “ನನಗೆ ಸುಸ್ತು ಮತ್ತು ಲೋ ಬಿಪಿ ಆಗಿತ್ತು. ನಾರ್ಮಲ್ ಬೆಡ್ ಸಿಗದ ಕಾರಣ ಸಿಸಿಯುನಲ್ಲಿ ಇರಬೇಕಾಯಿತು. ಚಿಕಿತ್ಸೆ ಇನ್ನೂ ಮುಂದುವರಿದಿದೆ. ಥಿಯೇಟರ್‌ಗೆ ಬರುವ ಮುನ್ನವೂ ಇಂಜೆಕ್ಷನ್ ತೆಗೆದುಕೊಂಡು ಬಂದಿದ್ದೇನೆ. ಈಗ ಸುಮಾರು 75 ಶೇಕಡಾ ಚೇತರಿಸಿಕೊಂಡಿದ್ದೇನೆ” ಎಂದು ಹೇಳಿದರು.

ಆರೋಗ್ಯದ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, “ಇದು ಪ್ರಚಾರದ ಗಿಮಿಕ್ ಎಂದು ಹೇಳುತ್ತಿದ್ದಾರೆ. ಪ್ರಚಾರಕ್ಕಾಗಿ ಹೀಗೆ ಮಾಡಬೇಕಾದ ಪರಿಸ್ಥಿತಿ ನನಗಿಲ್ಲ. ಇದು ನನ್ನ ಮೊದಲ ಸಿನಿಮಾ ಅಲ್ಲ, ಈಗಾಗಲೇ 25 ಸಿನಿಮಾಗಳಲ್ಲಿ ನಟಿಸಿದ್ದೇನೆ” ಎಂದು ಖಡಕ್ ಉತ್ತರ ನೀಡಿದರು.

ಸತತ ಸಿನಿಮಾ ಪ್ರಚಾರ, ವಿಶ್ರಾಂತಿಯ ಕೊರತೆ ಮತ್ತು ನಿದ್ರಾಹೀನತೆಯಿಂದ ದೇಹ ದಣಿದಿದ್ದೇ ಆರೋಗ್ಯ ಸಮಸ್ಯೆಗೆ ಕಾರಣ ಎಂದು ವಿನೋದ್ ಪ್ರಭಾಕರ್ ಸ್ಪಷ್ಟಪಡಿಸಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ