- ರಾಘವೇಂದ್ರ ಅಡಿಗ ಎಚ್ಚೆನ್.
ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ತಮ್ಮ ಮೊದಲ ಸಿನಿಮಾ ‘ದೀವಾನಾ’ ಬಿಡುಗಡೆಯಾಗಿ 35 ವರ್ಷ ಪೂರೈಸಿದ ಸಂಭ್ರಮದ ಅಂಗವಾಗಿ ಮಂಗಳೂರಿಗೆ ಭೇಟಿ ನೀಡಿ, ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಾವಿರಾರು ಅಭಿಮಾನಿಗಳ ನಡುವೆ ಮಾತನಾಡಿದ ಅವರು, ಮಂಗಳೂರಿನೊಂದಿಗಿನ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡು, “ನಾನು ನಟನಾಗದೇ ಇದ್ದಿದ್ದರೆ ಮಂಗಳೂರಿನಲ್ಲೇ ಶಿಕ್ಷಕನಾಗಿರುತ್ತಿದ್ದೆ” ಎಂದು ಹೇಳಿ ಎಲ್ಲರ ಮನಗೆದ್ದರು.
ವೇದಿಕೆಗೆ ಬಂದ ತಕ್ಷಣವೇ “ನಮಸ್ಕಾರ ಕುಡ್ಲ… ಎಂಚ ಉಲ್ಲಾರ್?” ಎಂದು ತುಳುವಿನಲ್ಲೇ ಮಾತು ಆರಂಭಿಸಿದ ಶಾರುಖ್, ಮಂಗಳೂರು ಜನರ ಪ್ರೀತಿ ಮತ್ತು ಆತ್ಮೀಯತೆಗೆ ಧನ್ಯವಾದ ಸಲ್ಲಿಸಿದರು. ವಿಮಾನ ನಿಲ್ದಾಣದಿಂದ ಕಾರ್ಯಕ್ರಮದ ಸ್ಥಳದವರೆಗೆ ಜನರು ತೋರಿದ ಅಭಿಮಾನ ಎಂದಿಗೂ ಮರೆಯಲಾಗದು ಎಂದು ಹೇಳಿದರು.
ಮಂಗಳೂರಿನೊಂದಿಗೆ ತಮ್ಮ ಕುಟುಂಬದ ನಂಟಿನ ಬಗ್ಗೆ ಮಾತನಾಡಿದ ಶಾರುಖ್, ಬಾಲ್ಯದಲ್ಲಿ ಸುಮಾರು ಐದು ವರ್ಷಗಳ ಕಾಲ ತಾತ-ಅಜ್ಜಿಯೊಂದಿಗೆ ಮಂಗಳೂರಿನಲ್ಲಿ ವಾಸಿಸಿದ್ದಾಗಿ ನೆನಪಿಸಿಕೊಂಡರು. ಅವರ ತಾಯಿ ಚಿಕ್ಕ ವಯಸ್ಸಿನಲ್ಲೇ ಮಗನನ್ನು ಅಜ್ಜಿಗೆ ಸಾಕಲು ನೀಡಿದ್ದರಂತೆ. 1960ರ ದಶಕದಲ್ಲಿ ಅವರ ತಾತ ಮಂಗಳೂರು ಬಂದರಿನಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ತಾವು ಇಲ್ಲಿಯೇ ಬೆಳೆದಿದ್ದೆ ಎಂದು ಹೇಳಿದರು.
ಆ ದಿನಗಳ ಬಗ್ಗೆ ಹೆಚ್ಚು ನೆನಪುಗಳಿಲ್ಲದಿದ್ದರೂ, ಮಂಗಳೂರಿನಲ್ಲಿ ತೆಗೆದ ಹಳೆಯ ಫೋಟೋಗಳು ಇನ್ನೂ ತಮ್ಮ ಬಳಿ ಇವೆ ಎಂದು ಹೇಳಿ, ವೇದಿಕೆಯಲ್ಲೇ ಆ ಚಿತ್ರಗಳನ್ನು ಪ್ರದರ್ಶಿಸಿದರು.
ಮಂಗಳೂರು ಎಂದರೆ ತಮ್ಮ ಮನಸ್ಸಿಗೆ ತುಂಬಾ ಹತ್ತಿರದ ನಗರ. ಇಲ್ಲಿನ ಸಂಸ್ಕೃತಿ, ಜನರ ಪ್ರೀತಿ ಹಾಗೂ ವಿಶೇಷವಾಗಿ ನೀರು ದೋಸೆ ತಮ್ಮ ಅಚ್ಚುಮೆಚ್ಚಿನದ್ದು ಎಂದು ಹೇಳಿದರು. ಮಂಗಳೂರು ಮತ್ತು ಮುಂಬೈ ನಡುವಿನ ಆತ್ಮೀಯ ಬಾಂಧವ್ಯವನ್ನೂ ಅವರು ನೆನಪಿಸಿದರು.
“ನಾನು ನಟನಾಗದೇ ಇದ್ದಿದ್ದರೆ, ಸೇಂಟ್ ಅಲೋಷಿಯಸ್, ಮೌಂಟ್ ಕಾರ್ಮೆಲ್ ಅಥವಾ ಶಾರದಾ ವಿದ್ಯಾ ಮಂದಿರದಂತಹ ಶಾಲೆಗಳಲ್ಲಿ ಶಿಕ್ಷಕನಾಗಿ ಮಕ್ಕಳಿಗೆ ಪಾಠ ಹೇಳುತ್ತಿದ್ದೆ. ಮಕ್ಕಳಿಗೆ ಬೋಧನೆ ಮಾಡುವುದು ನನಗೆ ತುಂಬಾ ಇಷ್ಟ. ಆ ಜೀವನದಲ್ಲೂ ನಾನು ಅಷ್ಟೇ ಸಂತೋಷವಾಗಿರುತ್ತಿದ್ದೆ” ಎಂದು ಶಾರುಖ್ ಭಾವುಕರಾಗಿ ಹೇಳಿದರು.





