– ರಾಘವೇಂದ್ರ ಅಡಿಗ ಎಚ್ಚೆನ್.
ʼʼರಿಷಬ್ಗೆ ರಿಷಬೇ ಸಾಟಿ. ಕನ್ನಡ ಜನತೆ ʼಕಾಂತಾರʼವನ್ನು ನಮ್ಮ ಸಿನಿಮಾ ಎಂದು ಒಪ್ಪಿಕೊಂಡಿದ್ದೀರ. ಈ ಚಿತ್ರಕ್ಕೂ ಅದೇ ರೀತಿ ಆಶೀರ್ವಾದ ಮಾಡಬೇಕುʼʼ ಎಂದು ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಮನವಿ ಮಾಡಿ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದರು.
ರಿಷಬ್ ಶೆಟ್ಟಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿ, ನಿರ್ದೇಶನವನ್ನೂ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇನ್ನೇನು ಬಿಡುಗಡೆ ಆಗಲಿದೆ. ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಅವರು ಈ ಸಿನಿಮಾಗೆ ವಸ್ತ್ರ ವಿನ್ಯಾಸ ಮಾಡಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದಾರೆ.
ʼಕಾಂತಾರʼ, ʼಕಾಂತಾರ ಚಾಪ್ಟರ್ 1ʼ ಚಿತ್ರಗಳಿಗೆ ಸುಮಾರು 5 ವರ್ಷಗಳ ಕಾಲ ಕೆಲಸ ಮಾಡಿದ ಅನುಭವವನ್ನು ರಿಷಬ್ ಪತ್ನಿ ಪ್ರಗತಿ ಶೆಟ್ಟಿ ತೆರೆದಿಟ್ಟರು. ಎಲ್ಲ ದೇವರು, ದೈವದ ಆಶೀರ್ವಾದದಿಂದ ಟ್ರೈಲರ್ ಹೊರಬಂದಿದೆ ಎಂದು ಹೇಳಿ ಮಾತು ಆರಂಭಿಸಿದ ಪ್ರಗತಿ, ʼʼಚಿತ್ರಕ್ಕಾಗಿ ಬೆಂಗಳೂರು ಬಿಟ್ಟು ಕುಂದಾಪುರಕ್ಕೆ ಹೋಗಿ ನೆಲೆಸಿದ್ದೇವೆ. ಮಕ್ಕಳನ್ನು ಅಲ್ಲಿನ ಶಾಲೆಗೆ ಸೇರಿಸಿದ್ದೇವೆʼʼ ಎಂದು ತಿಳಿಸಿದರು.
ʼʼಒಬ್ಬ ವ್ಯಕ್ತಿ ಒಂದು ಕನಸು ಕಾಣಲು ಹೊರಟಾಗ ಹಲವರ ಸಹಾಯ ಬೇಕಾಗುತ್ತದೆ. ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರು ನಾವು ಕಂಡ ಈ ಕನಸು ನನಸು ಮಾಡಲು ನೆರವಾಗಿದ್ದಾರೆ. ಎಲ್ಲರೂ ಸಿನಿಮಾ ಉತ್ತಮವಾಗಿ ಬರಬೇಕು ಎಂದು ಕೆಲಸ ಮಾಡಿದ್ದಾರೆ. ರಿಷಬ್ ಡ್ಯೂಪ್ ಇಲ್ಲದೆ ಫೈಟ್ ಮಾಡಿದ್ದಾರೆ. ಇದಕ್ಕೆ ಸ್ಟಂಟ್ ಮಾಸ್ಟರ್ ಸಹಕಾರ ಮರೆಯುವಂತಿಲ್ಲʼʼ ಎಂದರು.
ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
ಮಾತಿನ ನಡುವೆ ಪ್ರಗತಿ ಶೆಟ್ಟಿ ಅವರು ಎಲ್ಲರಿಗೂ ಕ್ಷಮೆ ಕೇಳಿದರು. ಮೂರು ವರ್ಷದ ಬಳಿಕ ಕಾಂತಾರದ ಕಾಡಿನ ಪ್ರಪಂಚದಿಂದ ಊರಿಗೆ ಕಾಲಿಡುತ್ತಿದ್ದೇವೆ. ಎಲ್ಲರನ್ನೂ ನೋಡಿ ಖುಷಿ ಆಗುತ್ತಿದೆ. ಮಾಧ್ಯಮದವರೆಲ್ಲರಿಗೂ ನಾನು ಕ್ಷಮೆ ಕೇಳುತ್ತೇನೆ. ಯಾಕೆಂದರೆ, ನಾವು 3 ವರ್ಷ ಮನೆ-ಮಠ, ಮಕ್ಕಳನ್ನು ಕರೆದುಕೊಂಡು ಹೋಗಿ ಕುಂದಾಪುರದಲ್ಲಿ ಇದ್ದೆವು. ನಮ್ಮನ್ನು ನೀವು ಸಂಪರ್ಕಿಸಿದಾಗ ಸಿಗಲು ಸಾಧ್ಯವಾಗಿಲ್ಲ. ಯಾರೂ ಬೇಜಾರು ಮಾಡಿಕೊಳ್ಳಬೇಡಿ’ ಎಂದು ಪ್ರಗತಿ ಶೆಟ್ಟಿ ಅವರು ಹೇಳಿದರು.