ಪ್ರಕೃತಿ ಸೌಂದರ್ಯಾ
ಎಲ್ಲೆಲ್ಲೂ ಪರಭಾಷಾ ನಟಿಯರ ದಾಂಧಲೆ ನಡೆಯುತ್ತಿರುವ ಕನ್ನಡದ ಸ್ಯಾಂಡಲ್ ವುಡ್ ಗೆ, ಅಪ್ಪಟ ಹೊಸ ಪ್ರತಿಭೆ ಪ್ರಕೃತಿ ಸೌಂದರ್ಯಾ ಎಂಟ್ರಿ ಆಗಿದೆ. ಇವರು ಮೇರುಮಟ್ಟದಲ್ಲಿ ಹೆಸರು ಗಳಿಸಲಿ ಎಂಬುದೇ ಎಲ್ಲರ ಆಶಯ.......!
ಕನ್ನಡ ಚಿತ್ರರಂಗದಲ್ಲಿ ಇದೀಗ ಸಾಕಷ್ಟು ಹೊಸ, ಯುವ ಪ್ರತಿಭೆಗಳ ಆಗಮನವಾಗುತ್ತಿದೆ. ಹಾಗೆ ಬಂದವರಲ್ಲಿ ಸರಳ ಸೌಂದರ್ಯವತಿಯಾದ ಪ್ರಕೃತಿ ಸೌಂದರ್ಯಾ ಕೂಡ ಒಬ್ಬರು. ದುನಿಯಾ ವಿಜಯ್ ನಿರ್ದೇಶನದ `ಭೀಮ' ಚಿತ್ರದಲ್ಲಿ ಡ್ರಾಗನ್ ಮಂಜು ಪತ್ನಿಯಾಗಿ `ರಗಡ್' ಅವತಾರದಲ್ಲಿ ಕಾಣಿಸಿಕೊಂಡಿದ್ದ ಇವರ ಪಾತ್ರ ಎಲ್ಲರ ಗಮನ ಸೆಳೆದಿತ್ತು.

ಮೂಲತಃ ತುಮಕೂರಿನವರಾದ ಪ್ರಕೃತಿ ಸೌಂದರ್ಯಾ ಚಿಕ್ಕಂದಿನಿಂದಲೇ ಕಲೆಯ ನಂಟು ಬೆಳೆಸಿಕೊಂಡರು. ಇವರ ತಾತಾ ಕೂಡ ರಂಗಭೂಮಿ ಕಲಾವಿದರಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು. ಕಾಲೇಜು ದಿನಗಳಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿದ್ದ ಪ್ರಕೃತಿ ಸೌಂದರ್ಯಾಗೆ ಸ್ನೇಹಿತರೆಲ್ಲ ನೀನು ಚೆನ್ನಾಗಿದ್ದೀಯ, ಹಾಡುವುದಕ್ಕಿಂತ ಆ್ಯಕ್ಟಿಂಗ್ ಮಾಡಿದರೆ ಚೆನ್ನಾಗಿರುತ್ತೆ ಎಂದು ಸಲಹೆ ನೀಡಿದರಂತೆ. ಆ ಮಾತನ್ನೇ ಆಳವಾಗಿ ತೆಗೆದುಕೊಂಡ ಪ್ರಕೃತಿ ನಾನು ಕಲಾವಿದೆಯಾಗಿ ಬೆಳೆಯಬೇಕು ಎಂದು ಕನಸು ಕಟ್ಟಿಕೊಂಡಿದ್ದಾರೆ.

ನಂತರ ಸ್ನೇಹಿತರೊಬ್ಬರ ಸಹಾಯದಿಂದ ಕಿರುತೆರೆಯ `ಗೀತಾ' ಧಾರಾವಾಹಿಯಲ್ಲಿ ಸಣ್ಣದೊಂದು ಪಾತ್ರ ಗಿಟ್ಟಿಸಿಕೊಂಡಿದ್ದಾರೆ. ಆನಂತರ ಸಿಕ್ಕ ದೊಡ್ಡ ಅವಕಾಶವೇ `ಕನ್ಯಾದಾನ'. ಈ ಸೀರಿಯಲ್ ನ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡ ಪ್ರಕೃತಿ ಸೌಂದರ್ಯಾರ ಪಾತ್ರ, ಅಭಿನಯ ಎಲ್ಲರ ಗಮನ ಸೆಳೆಯಿತು. ಅದಾದ ನಂತರ ದುನಿಯಾ ವಿಜಯ್, ತಮ್ಮ `ಭೀಮ' ಚಿತ್ರದ ಪ್ರಮುಖ ಪಾತ್ರಕ್ಕೆ ಇವರೇ ಸೂಕ್ತ ಎಂದು ಆಯ್ಕೆ ಮಾಡಿಕೊಂಡಿದ್ದಾರೆ.

`ಭೀಮ' ಚಿತ್ರದ ಪಾತ್ರ ನೋಡಿ, ತೆಲುಗು ಚಿತ್ರರಂಗದ ಕಡೆಯಿಂದಲೂ ಇವರಿಗೆ ಹಲವಾರು ಆಫರ್ ಗಳು ಬರುತ್ತಿವೆ! ಈಗಾಗಲೇ ತೆಲುಗು ಸೀರಿಯಲ್ ಒಂದರಲ್ಲಿ ಕೂಡ ಪ್ರಕೃತಿ ಸೌಂದರ್ಯಾ ಅಭಿನಯಿಸಿದ್ದಾರೆ. ಸದ್ಯ ಕನ್ನಡದ ಬಿಗ್ ಪ್ರಾಜೆಕ್ಟ್ ವೊಂದರಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದು, ಅದರ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುವುದಾಗಿ ಹೇಳಿದ ಪ್ರಕೃತಿ ಸೌಂದರ್ಯಾರಿಗೆ, ಜನರು ಗುರುತಿಸುವಂಥ ಹಾಗೂ ಅಭಿನಯಕ್ಕೆ ಹೆಚ್ಚು ಅವಕಾಶ ಇರುವಂಥ ಪಾತ್ರಗಳಲ್ಲಿ ತಾನು ಕಾಣಿಸಿಕೊಳ್ಳಬೇಕೆಂಬ ಕನಸಿದೆ.

ಇತ್ತೀಚೆಗಷ್ಟೇ ಆತ್ಮೀಯರ ನಡುವೆ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಕೃತಿ ಸೌಂದರ್ಯಾಗೆ, ಇದೇ ಸಂದರ್ಭದಲ್ಲಿ ಹೊಸ ಹೊಸ ಚಿತ್ರಗಳ ಆಫರ್ ಬರುತ್ತಿರುವುದು ಅವರಿಗೆ ಡಬಲ್ ಖುಷಿ ನೀಡಿದೆ. ಗೃಹಶೋಭಾ ಓದುಗರೆಲ್ಲರ ಪರವಾಗಿ ಪ್ರಕೃತಿ ಸೌಂದರ್ಯಾರಿಗೆ ಆಲ್ ದಿ ಬೆಸ್ಟ್!
- ರಾಘವೇಂದ್ರ ಅಡಿಗ ಎಚ್.ಎನ್.





