ಸ್ಟಾರ್ರೋಲ್‌…….!

ಸಿನಿಮಾದೊಳಗೊಂದು ಸಿನಿಮಾ…. ನೋಡುವುದು, ಅಂಥ ಪ್ರಯತ್ನಕ್ಕೆ ಕೈ ಹಾಕೋದು ಎರಡೂ ರಿಸ್ಕಿ ಅಂತ ಗೊತ್ತಿದ್ದೂ, ಕೆಲವರು `ಒಂದು ಕೈ ನೋಡೇ ಬಿಡೋಣ,’ ಎನ್ನುತ್ತಾರೆ. ಪೂಜಾ ಗಾಂಧಿ ಬಹಳ ರಿಸ್ಕ್ ತಗೊಂಡು `ಅಭಿನೇತ್ರಿ’ ಚಿತ್ರ ನಿರ್ಮಿಸಿದ್ದರು. ಮಿನುಗುತಾರೆ ಕಲ್ಪನಾ ಅವರ ಬದುಕಿನಾಧಾರಿತ ಚಿತ್ರ. ಸಾಕಷ್ಟು ಲಾಸ್‌ ಮಾಡಿಕೊಂಡಿದ್ದಳು ಪೂಜಾ. ಕಲ್ಪನಾ ಅವರ ಪಾತ್ರ ವಹಿಸುವುದರಲ್ಲಿ ಪೂಜಾ ಎಲ್ಲಿ ಎಡವಿದರೋ ಗೊತ್ತಿಲ್ಲ. ಈಗ ಕನ್ನಡದ ಮತ್ತೊಬ್ಬ ಸೂಪರ್‌ ಸ್ಟಾರ್‌ ಬದುಕಿನ ಚಿತ್ರ ಸಿದ್ಧವಾಗಲಿದೆ. ಆಕೆ ಯಾರು ಎಂಬುದನ್ನು ರಿವೀವ್ ಮಾಡಿಲ್ಲ. ಆದರೆ ಆ ತಾರೆಯ ಪಾತ್ರವನ್ನು ವಹಿಸುತ್ತಿರುವುದು ಸಿಂಪಲ್ ಹುಡುಗಿ ಶ್ವೇತಾ ಶ್ರೀವಾಸ್ತವ್, ಸೂಪರ್‌ ಸ್ಟಾರ್‌ ನಟಿಯಾಗಿ ಕಾಣಿಸಿಕೊಳ್ಳಲಿರುವ ಶ್ವೇತಾ ಕಿರಗೂರಿನ ನಂತರ ನಾನು ಒಪ್ಪಿಕೊಂಡಿರುವ ದಿ ಬೆಸ್ಟ್ ಸಿನಿಮಾ ಇದು. ಭಾವನೆಗಳ ಮೇಲೆ ಸಾಗುವ ಚಿತ್ರ ಆದರೆ ಯಾವ ನಟಿಯ ಬದುಕು ಎಂಬುದನ್ನು ಈಗಲೇ ಹೇಳಲಾಗದು ಎನ್ನುತ್ತಾರೆ ಶ್ವೇತಾ ಶ್ರೀವಾಸ್ತವ್.

ಅಂಬಿಯ ಬ್ಯಾಕ್ಬೋನ್

ಕನ್ನಡ ಚಿತ್ರರಂಗದ ಅಪರೂಪದ ತಾರಾ ದಂಪತಿ ಎಂದೇ ಜನಪ್ರಿಯರಾಗಿರುವ ಅಂಬರೀಷ್‌ ಸುಮಲತಾ ಎಲ್ಲರಿಗೂ ಮಾದರಿಯಾಗಿಬಿಟ್ಟಿದ್ದಾರೆ. ಅಂಬರೀಷ್‌ ಅನಾರೋಗ್ಯದಿಂದ ಬಳಲುತ್ತಿದ್ದಾಗ ಹಗಲುರಾತ್ರಿ ಎನ್ನದೇ ಆಸ್ಪತ್ರೆಯಲ್ಲಿ ನೋಡಿಕೊಳ್ಳುತ್ತಿದ್ದರು ಸುಮಲತಾ. ಸಿಂಗಾಪೂರಿಗೆ ಹೆಚ್ಚಿನ ಚಿಕಿತ್ಸೆಗೆಂದು ಕರೆದುಕೊಂಡು ಹೋಗುವಾಗಲೂ ಅಭಿಮಾನಿಗಳಿಗೆ ಸುಮಲತಾ ಹೇಳಿದ್ದು ಒಂದೇ ಮಾತು. `ನಿಮ್ಮ ರೆಬಲ್ ಸ್ಟಾರ್‌ನ್ನು ಆರೋಗ್ಯವಂತರನ್ನಾಗಿ ಕ್ಷೇಮವಾಗಿ ಕರೆದುಕೊಂಡು ಬರ್ತೀನಿ,’ ಅಂತ ಭರವಸೆ ಕೊಟ್ಟಿದ್ದರು. ನುಡಿದಂತೆ ನಡೆದರು. ಪತಿ ಎಲ್ಲೇ ಹೋದರೂ ಸುಮಲತಾ ಜೊತೆಗೆ ಹೋಗುತ್ತಾರೆ. ಇತ್ತೀಚೆಗೆ `ಅಕ್ಕ’ ಸಂಭ್ರಮದಲ್ಲಿ ಪಾಲ್ಗೊಳ್ಳಲು ವಿದೇಶಕ್ಕೆ ಹೋಗಿದ್ದಾಗಲೂ ಸಹ ಅವರು ಜೊತೆಯಲ್ಲಿ ಹೋಗಿದ್ದರು. ಒಟ್ಟಿನಲ್ಲಿ ಎಲ್ಲ ವಿಷಯದಲ್ಲೂ ಅಂಬಿಯ ಬ್ಯಾಕ್‌ ಬೋನ್‌ ಆಗಿ ನಿಲ್ಲುವ ಸುಮಲತಾ ನಿಜಕ್ಕೂ ಗ್ರೇಟ್‌!

ವಿನ್ನರ್ಶಶಾಂಕ್

ಸ್ಯಾಂಡಲ್‌ವುಡ್‌ನ ಯಶಸ್ವೀ ನಿರ್ದೇಶಕ. ಜನ ಶಶಾಂಕ್‌ ಚಿತ್ರ ಎಂದೇ ನೋಡಲು ಹೋಗುವುದುಂಟು. ಇವರ ನಿರ್ದೇಶನದ `ಮುಂಗಾರುಮಳೆ-2′ ಚಿತ್ರ ಭಾರೀ ನಿರೀಕ್ಷೆ ಮೂಡಿಸಿತ್ತು. ಮುಂಗಾರುಮಳೆಯಂತೆ ಇದೂ ಸೂಪರ್‌ ಹಿಟ್‌ ಆಗಬಹುದೇ….. ಅಷ್ಟೇ ಚೆನ್ನಾಗಿರುತ್ತಾ….. ಎಂಬ ನಿರೀಕ್ಷೆಯಲ್ಲ ಬಿಡುಗಡೆಯಾಯಿತು. ಅಂದಹಾಗೆ ಶಶಾಂಕ್‌ಗೆ ಈ ಚಿತ್ರ ಸಿಕ್ಕಿದ್ದು ಆ ಘಳಿಗೆ ವಿಶೇಷವಾಗಿದೆ. ನಿರ್ಮಾಪಕ ಗಂಗಾಧರ್‌ ಮುಂಗಾರುಮಳೆ ಬಿಡುಗಡೆಯಾದ ಸಮಯದಲ್ಲೇ ಈ ಟೈಟಲ್ ರಿಜಿಸ್ಟರ್ ಮಾಡಿದ್ದರಂತೆ. ಭಟ್ಟರು ಬಿಜಿಯಾಗಿದ್ದರಿಂದ ಯಾರಿಂದ ಈ ಸಿನಿಮಾ ಮಾಡಿಸೋದು ಎಂದು ಯೋಚಿಸುತ್ತಿದ್ದಾಗ ಅವರ ಕಣ್ಮುಂದೆ ಬಂದದ್ದು ಶಶಾಂಕ್‌. ಇಂತಹ ಕಥೆಗಳನ್ನು ಮಾಡಲು ಅವರೇ ಸೂಕ್ತ ಎಂದು ಸಿನಿಮಾ ನಿರ್ದೇಶಿಸುವಂತೆ ಕೇಳಕೊಂಡರಂತೆ. ಚಿತ್ರ ಬಿಡುಗಡೆಯಾಗಿದೆ….. `ಮುಂಗಾರಮಳೆ-2′ ತನ್ನ ಮೊದಲಿನ ಕ್ರೇಜನ್ನು ಹುಟ್ಟುಹಾಕಬಹುದೇ? ಕಾದು ನೋಡೋಣ.

ಗೋವಾದಲ್ಲಿ ಜೋಡಿಯಾದರು

ಸ್ಯಾಂಡಲ್‌ ವುಡ್‌ನ ಯಂಗ್‌ ಕಪಲ್ ಎಂದೇ ಜನಪ್ರಿಯರಾದರು ಯಶ್‌ ಮತ್ತು ರಾಧಿಕಾ ಪಂಡಿತ್‌. `ನಂದಗೋಕುಲ’ ಧಾರಾವಾಹಿಯಿಂದ ಕಿರುತೆರೆಗೆ ಪರಿಚಿತರಾದ ಇಬ್ಬರೂ `ಮೊಗ್ಗಿನ ಮನಸು’ ಚಿತ್ರದ ಮೂಲಕ ಬೆಳ್ಳಿತೆರೆ ಅಲಂಕರಿಸಿದರು. ಅಂದಿನಿಂದ ಬೆಳೆದ ಸ್ನೇಹ ಇರದು. ಯಶ್‌ ರಾಧಿಕಾ ಬಗ್ಗೆ ಗಾಸಿಪ್‌ ಕೇಳುತ್ತಲೇ ಇವತ್ತಾದರೂ ಅವರಿಬ್ಬರೂ ಎಂದಿಗೂ ಆ ರೀತಿ ಸೆಟ್‌ನಲ್ಲಿ ನಡೆದುಕೊಳ್ಳುತ್ತಿರಲಿಲ್ಲ. ಇವರ ಗೆಳೆತನ ಪ್ರೀತಿಗೆ ತಿರುಗಿದಾಗಲೂ ಸಹ ಈ ಜೋಡಿ ಪ್ರೇಮಿಗಳಾಗಿ ವರ್ತಿಸುತ್ತಿರಲಿಲ್ಲ. ಇಂಥಿಂದು ಅಪರೂಪದ ಜೋಡಿ ಇತ್ತೀಚೆಗೆ ಗೋವಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಾಗ ಚಿತ್ರರಂಗದ ತಾರೆಗಳ ಮೆರವಣಿಗೆ ಹೊರಟಿತು. ಅಂಬರೀಷ್‌, ಸುಮಲತಾ, ಮಾಳವಿಕಾ, ಅವಿನಾಶ್‌, ಪುನೀತ್‌ ರಾಜ್‌ಕುಮಾರ್‌ ಹೀಗೆ ತಾರಾ ಮೇಳವೇ ಅಲ್ಲಿ ಜಮಾಯಿಸಿತ್ತು. ಈ ಸುಂದರ ಜೋಡಿ ಉಂಗುರ ತೊಡಿಸುವುದರ ಮೂಲಕ ತಮ್ಮ ಇಷ್ಟು ದಿನದ ಪ್ರೀತಿಗೆ ಹೊಸ ಅರ್ಥ ಕಲ್ಪಿಸಿಕೊಟ್ಟರು. ಜನವರಿಯಲ್ಲಿ ಮದುವೆಯಾಗಲಿದ್ದಾರೆಂಬ ಸುದ್ದಿಯನ್ನು ಅವರ ಕುಟುಂಬದವರು ಸುದ್ದಿಗಾರರ ಮುಂದಿಟ್ಟರು.

ತಾರಾ ಮತ್ತು ಸೋಡ

ಕನ್ನಡದ ಪ್ರತಿಭಾವಂತ ಕಲಾವಿದೆ ತಾರಾ ಇಂದಿಗೂ ಬಹಬೇಡಿಕೆಯ ನಟಿ ಎಂದೇ ಹೇಳಬಹುದು. ರಾಷ್ಟ್ರ ಪ್ರಶಸ್ತಿ ವಿಜೇತೆ ಈ ನಟಿ ಎಲ್ಲ ಕಾಲಕ್ಕೂ ಎಲ್ಲ ಕಥೆಗಳಿಗೂ ಹೊಂದಿಕೊಳ್ಳುವಂಥ ಪ್ರತಿಭೆ ಇರೋದ್ರಿಂದ ತಾರಾಗೆ ಭಾರಿ ಡಿಮ್ಯಾಂಡ್‌. ಇತ್ತೀಚೆಗೆ `ಮಡಮಕ್ಕಿ’ ಚಿತ್ರದಲ್ಲಿ ಎಲ್ಲರಿಂದ ಪ್ರಶಂಸೆ ಪಡೆದುಕೊಂಡಂಥ ತಾರಾ ಇದೀಗ `ಗೋಲಿ ಸೋಡ’ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿ ನೈಜತೆಗೆ ಮೆರೆಗು ನೀಡಿದ್ದಾರೆ. `ಈ ಚಿತ್ರದಲ್ಲಿ ನಟಿಸಿದ್ದು ನನಗೆ ಅತ್ಯಂತ ಖುಷಿ ತಂದುಕೊಟ್ಟಿದೆ. ಮೂಲ ಚಿತ್ರಕ್ಕಿಂತ ಇದು ಚೆನ್ನಾಗಿ ಮೂಡಿಬಂದಿದೆ. ಒಳ್ಳೆ ಪ್ಲಾನಿಂಗ್‌ ಹಾಕ್ಕೊಂಡು ನಿರ್ದೇಶಕರು ಸಿನಿಮಾ ಮಾಡಿದ್ದಾರೆ. ಇದೊಂದು ಒಳ್ಳೆ ಸಂದೇಶ ಇರುವಂಥ ಚಿತ್ರ’ ಎಂದು ಹೊಗಳಿದರು. ತಾರಾ ನಟಿಯಾಗಿ, ರಾಜಕಾರಣಿಯಾಗಿ ವಿಧಾನ ಪರಿಷತ್‌ ಸದಸ್ಯಳಾಗಿ ಎಲ್ಲರ ಗಮನ ಸೆಳೆದಿದ್ದರೂ ಆಕೆಯ ಬಹಳ ದಿನದ ಆಸೆ ನಿರ್ದೇಶಕಿಯಾಗೋದು. ಆ ದಿನ ಯಾವಾಗ ಬರುತ್ತದೋ ಎಂದು ಕೇಳಿದರೆ ಸದ್ಯದಲ್ಲೇ ಎನ್ನುತ್ತಾರೆ ತಾರಾ.

ಮನ ಮಂಥನ

ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದರಲ್ಲಿ ಸುರೇಶ್‌ ಹೆಬ್ಳಿಕರ್‌ ಕೂಡಾ ಒಬ್ಬರು. ಕಾಡಿನ ಬೆಂಕಿ, ಆಘಾತ, ಉಷಾಕಿರಣ, ಚಮತ್ಕಾರ ಚಿತ್ರಗಳನ್ನು ನಿರ್ದೇಶಿಸಿದ್ದ ಈ ನಟ ಈಗ `ಮನ ಮಂಥನ’ ಎಂಬ ಹೊಸ ಸಿನಿಮಾದೊಂದಿಗೆ ಬಹಳ ವರ್ಷಗಳ ನಂತರ ವಾಪಸ್ಸಾಗಿದ್ದಾರೆ. ನೈಜ ಘಟನೆಯಾಧಾರಿತ ಕಥಾವಸ್ತುವನ್ನು ಸಿನಿಮಾಗಿಳಿಸಿರುವ ಸುರೇಶ್‌ ಹೆಬ್ಬಿಕರ್‌ ಪ್ರಮುಖ ಪಾತ್ರವನ್ನು ಸಹ ಈ ಚಿತ್ರದಲ್ಲಿ ಮಾಡಿದ್ದಾರೆ. ಈ ಸಿನಿಮಾ ಮಾಡಲು ಕಾರಣ ಅಶೋಕ್‌ ಪೈ ಎಂದು ಹೇಳಿದ ಹೆಬ್ಳೀಕರ್‌, “ಪೈಯವರು ನನ್ನ ಹಳೆಯ ಫ್ರೆಂಡ್‌. ಅವರ ಹತ್ತಿರ ಒಂದು ಕಥೆ ಇತ್ತು. ಇವತ್ತಿಗೆ ಬಹಳ ಹತ್ತಿರವಾದಂಥ ಕಥೆ. ನನಗದು ತುಂಬಾನೆ ಇಷ್ಟವಾಯ್ತು, ಇಂಥದೊಂದು ಚಿತ್ರದೊಂದಿಗೆ ಮತ್ತೆ ಬರೋಣ ಅಂತ ಈ ಸಿನಿಮಾ ಮಾಡಿದೆ” ಎನ್ನುತ್ತಾರೆ.

`ಮನ ಮಂಥನ’ ಚಿತ್ರದಲ್ಲಿ ನಿರ್ದೇಶಕ ಸುರೇಶ್‌ ಹೆಬ್ಳೀಕರ್‌ ಸೈಕ್ರಾಟಿಸ್‌ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಇವರೇ ಹಾಡು ಬರೆದಿದ್ದಾರೆ. ಪ್ರವೀಣ್‌ ಡಿ. ರಾವ್ ‌ಸಂಗೀತ ಸಂಯೋಜಿಸಿದ್ದಾರೆ. ಪಿ. ರಾಜನ್‌ ಕ್ಯಾಮೆರಾ ವರ್ಕ್‌.

ಬಣ್ಣ ಬಯಲು ಮಾಡಿದಳು

ಸ್ಯಾಂಡಲ್‌ ವುಡ್‌ ಬೆರಗಾಗುವಂಥ ಸುದ್ದಿ ಪತ್ರಿಕೆಗಳಲ್ಲಿ ಸ್ಛೋಟಗೊಂಡಾಗ ಯಾರೀ ಹುಡುಗಿ ಅಂತ ಎಲ್ಲ ಒಂದ್ಸಲ ತಿರುಗಿದ್ದುಂಟು. ಆ ಬೆಡಗಿ ಪ್ರಿಯಾಂಕಾ ಜೈನ್‌ `ಗೋಲಿಸೋಡ’ ಚಿತ್ರದ ನಾಯಕಿ. ಬಾಲಿವುಡ್‌ನಿಂದ ಬಂದಿರುವ ಪ್ರಿಯಾಂಕಾಗೆ ಈ ಮೊದಲು ಸಾಕಷ್ಟು ಆಫರ್ಸ್‌ ಕನ್ನಡದಿಂದ ಬಂದಿದ್ದರೂ ಆ ಚಿತ್ರಗಳ ನಿರ್ದೇಶಕರು, ನಿರ್ಮಾಪಕರು ಪ್ರಿಯಾಂಕಾಳಿಂದ ನಟನೆಯನ್ನಷ್ಟೇ ಅಪೇಕ್ಷಿಸದೆ ಬೇರೆ ಇನ್ನೇನೋ ಬಯಸಿದಾಗ ಈ ನಟಿ ಅಂಥ ಚಿತ್ರಗಳನ್ನು ತೊರೆದು ಹೊರಬಂದವಳಂತೆ. `ಮುಂಬೈ ಹುಡುಗಿ ಅಂದಾಕ್ಷಣ ಎಲ್ಲದಕ್ಕೂ ರೆಡಿ,’ ಅಂದುಕೊಳ್ತಾರೆ ಕೆಲವರು ಎಂದು ಬಾಂಬ್‌ ಸಿಡಿಸಿರುವ ಪ್ರಿಯಾಂಕಾ `ಗೋಲಿ ಸೋಡ’ ಚಿತ್ರ ಒಪ್ಪಿಕೊಳ್ಳಲು ಕಾರಣ, ಈ ಚಿತ್ರದ ನಿರ್ದೇಶಕರು ಹಾಗೂ ಅವರ ವೃತ್ತಿಪರತೆ. ಇಂಥಿಂದು ಒಳ್ಳೆಯ ತಂಡದಲ್ಲಿ ಕೆಲಸ ಮಾಡಲು ಸದಾ ಸಿದ್ಧಳು ಎಂದು ಪ್ರಿಯಾಂಕಾ ಹೊಗಳಿದ್ದಾಳೆ.

ಜಾಗ್ವಾರ್ಹಾಡುಗಳ ಓಟ

ನಿಖಿಲ್ ‌ಹೀರೋ ಆಗಬೇಕು ಎಂದು ಎಚ್‌.ಡಿ. ಕುಮಾರಸ್ವಾಮಿಯವರು ಹತ್ತು ವರ್ಷಗಳ ಹಿಂದೆಯೇ ಕನಸು ಕಂಡಿದ್ದರಂತೆ. ಆದರೆ ಪುತ್ರ ನಿಖಿಲ್ ‌ಈಗಲೇ ಬೇಡಪ್ಪ ಎಂದಿದ್ದರಂತೆ. ಇದ್ದಕ್ಕಿದ್ದಂತೆ ಒಂದು ದಿನ ಅಪ್ಪನ ಬಳಿ ಬಂದು ನಾನು ನಟಿಸುತ್ತೇನೆ ಎಂದಾಗ ಅಪ್ಪನಿಗಾದ ಸಂತೋಷ ಅಷ್ಟಿಷ್ಟಲ್ಲ. `ಜಾಗ್ವಾರ್‌’ ಚತ್ರ ಹುಟ್ಟಿಕೊಂಡಿದ್ದರ ಬಗ್ಗೆ,  `ಜಾಗ್ವಾರ್‌’ ಚಿತ್ರದಲ್ಲಿ ಕಥೆಯೇ ಹೀರೋ. ನಾನು ಕಲಾವಿದ ಮಾತ್ರ. ಅಪ್ಪ ರಾಜಕೀಯ ಒತ್ತಡದ ನಡುವೆಯೂ `ಜಾಗ್ವಾರ್‌’ ಚಿತ್ರ ತಯಾರಿಕೆಗಾಗಿ ಸಾಕಷ್ಟು ಸಮಯ ಕೊಟ್ಟಿದ್ದಾರೆ, ಎಂದು ಹೇಳುವ ನಿಖಿಲ್‌ನ ಈ ಅದ್ಧೂರಿ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಮಂಡ್ಯದಲ್ಲಿ ಅದ್ಧೂರಿಯಾಗಿಯೇ ನಡೆಯಿತು. ತಾತಾ, ಅಜ್ಜಿ. ಅಮ್ಮ, ಅಪ್ಪ ಇವರೆಲ್ಲರ ಆಶೀರ್ವಾದ ಪಡೆದ ನಿಖಿಲ್ ‌ತನ್ನ ಮೊದಲ ಚಿತ್ರದ ಆಡಿಯೋ ಬಿಡುಗಡೆಯನ್ನು ಜನರ ನಡುವೆ ನಿಂತು ಅವರೊಂದಿಗೆ ಬಿಡುಗಡೆ ಮಾಡುವಂತೆ ಹಟ ಹಿಡಿದದ್ದು ವಿಶೇಷವಾಗಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ