ಓಣಂ ಸಧ್ಯಾ ಎಂದರೆ ಭೂರಿ ಭೋಜನದ ಪ್ರತೀಕ! ಇದರಲ್ಲಿ ಕನಿಷ್ಠ 20-25 ಜನಗಳಿದ್ದು ನಿಮ್ಮ ಬಾಯಲ್ಲಿ ನೀರೂರಿಸುತ್ತವೆ. ಇದು ಕೇರಳದ ಸಮೃದ್ಧ ಸಂಸ್ಕೃತಿಯ ಸಾಂಪ್ರದಾಯಿಕ ಹಬ್ಬದಡುಗೆ. ಇದರಲ್ಲಿ ಬಗೆಬಗೆಯ ವ್ಯಂಜನಗಳಿದ್ದು ಪಾಯಸ, ಪರಮಾನ್ನಗಳನ್ನು ಒಳಗೊಂಡು ರಸಗವಳ ಎನಿಸುತ್ತದೆ. ಓಣಂ ಹಬ್ಬದ ನೆಪದಲ್ಲಿ ಇಂಥ ಗ್ರಾಂಡ್ ಔತಣ ಸವಿಯಲು ನೀವು ಸಿದ್ಧರಾಗಿ....!

ಸಧ್ಯಾ ಸಾಂಬಾರ್
ಈ ಸಾಂಬಾರ್ ಕೇರಳದ ಒಂದು ಪ್ರಮುಖ, ಪೌಷ್ಟಿಕ ಡಿಶ್ ಆಗಿದ್ದು ಬೇಳೆ, ಇಂಗು, ತರಕಾರಿ, ಮಸಾಲೆಗಳ ಅದ್ಭುತ ಮಿಶ್ರಣವಾಗಿದೆ!
ಸಾಮಗ್ರಿ : 4-5 ಕಪ್ ಮಿಶ್ರ ತರಕಾರಿಗಳ ಹೋಳು (ನಿಮ್ಮ ಆಯ್ಕೆ), 1 ಕಪ್ ತೊಗರಿಬೇಳೆ, ರುಚಿಗೆ ತಕ್ಕಷ್ಟು ಹುಣಿಸೇ ಕಿವುಚಿದ ರಸ, ತೆಂಗಿನ ತುರಿ, ಹುರಿದ ಕಡಲೆಕಾಯಿ ಬೀಜ, ಉಪ್ಪು, ಖಾರ, ಧನಿಯಾಪುಡಿ, ತುಸು ಉದ್ದು/ಕಡಲೆಬೇಳೆ, 3-4 ಬ್ಯಾಡಗಿ ಮೆಣಸು, ಮೆಂತ್ಯಪುಡಿ, ಕಾಯಾ ಪೌಡರ್, 7-8 ತುಂಡು ಒಣ ಮೆಣಸಿನಕಾಯಿ, 2 ಹಸಿಮೆಣಸು, ಅರಿಶಿನ, 3-4 ಹುಳಿ ಟೊಮೇಟೊ, 12-15 ಸಾಂಬಾರ್ ಈರುಳ್ಳಿ, ಒಗ್ಗರಣೆಗೆ ತುಸು ಕೊಬ್ಬರಿ ಎಣ್ಣೆ, ಮೆಂತ್ಯ, ಕರಿಬೇವು, ಅಚ್ಚಖಾರ, ಇಂಗು, ಸಾಸುವೆ, ಜೀರಿಗೆ.
ವಿಧಾನ : ಒಂದು ಪ್ರೆಷರ್ ಕುಕ್ಕರ್ ನಲ್ಲಿ ತೊಗರಿಬೇಳೆ, ತುಸು ಅರಿಶಿನ, ತುಪ್ಪ, ಉಪ್ಪು, 2 ಕಪ್ ನೀರು ಬೆರೆಸಿ ಹದನಾಗಿ ಬೇಯಿಸಿ, ಬೇರೆಯಾಗಿಡಿ. ಅದೇ ಕುಕ್ಕರ್ ನಲ್ಲಿ ಹೆಚ್ಚಿದ ತರಕಾರಿ ಹೋಳು ಹಾಕಿ 1 ಸೀಟಿ ಬರುವಂತೆ ಬೇಯಿಸಿ.
ನಂತರ ಒಂದು ಸಣ್ಣ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಉ/ಕ ಬೇಳೆ, ಧನಿಯಾ, ಮೆಂತ್ಯ, ತುಂಡರಿಸಿದ ಒಣಮೆಣಸು, ಬ್ಯಾಡಗಿ ಮೆಣಸು ಎಲ್ಲಾ ಸೇರಿಸಿ ಬಾಡಿಸಿ. ಕೊನೆಯಲ್ಲಿ ತೆಂಗಿನ ತುರಿ ಹಾರಿ ಕೆದಕಿ ಕೆಳಗಿಳಿಸಿ.
ಅದೇ ಬಾಣಲೆಯಲ್ಲಿ ಮತ್ತೆ ತುಸು ಎಣ್ಣೆ ಬಿಸಿ ಮಾಡಿ ಇನ್ನಷ್ಟು ತೆಂಗಿನ ತುರಿ, ಹಸಿ ಮೆಣಸು, ಜಜ್ಜಿದ 3-4 ಸಾಂಬಾರ್ ಈರುಳ್ಳಿ, ಕರಿಬೇವು ಹಾಕಿ, ಘಮ್ಮೆನ್ನುವಂತೆ ಹುರಿದು ಕೆಳಗಿಳಿಸಿ. ಇದನ್ನು ನೀಟಾಗಿ ರುಬ್ಬಿಕೊಳ್ಳಿ.
ಅದೇ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಬದನೆ, ಟೊಮೇಟೊ ಹೋಳು ಹಾಕಿ ಬಾಡಿಸಿ ಬೇರೆಯಾಗಿಡಿ. ನಂತರ ದಪ್ಪ ತಳದ ಪಾತ್ರೆಯಲ್ಲಿ ಮೊದಲು ಹುಣಿಸೇ ರಸ ಹಾಕಿ ಕುದಿಸಿ. ಇದಕ್ಕೆ ಬೆಂದ ಬೇಳೆ, ತರಕಾರಿ ಹಾಕಿ ಕೈಯಾಡಿಸಿ. ಆಮೇಲೆ ಬದನೆ, ಟೊಮೇಟೊ ಹಾಕಿ 1 ಕುದಿ ಬರಿಸಿ. ನಂತರ ಇದಕ್ಕೆ ರುಬ್ಬಿಕೊಂಡ ಮಿಶ್ರಣ, ಧನಿಯಾ ಮಿಶ್ರಣ ಹಾಕಿ, ಉಪ್ಪು, ಅಗತ್ಯಕ್ಕೆ ತಕ್ಕಷ್ಟು ನೀರು ಬೆರೆಸಿ 10 ನಿಮಿಷ ಸಾಂಬಾರ್ ಕುದಿಸಿರಿ.
ನಂತರ ಚಿಕ್ಕ ಬಾಣಲೆಯಲ್ಲಿ ತುಸು ಕೊಬ್ಬರಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಸಾಸುವೆ, ಜೀರಿಗೆ, ಕರಿಬೇವು, ಇಂಗು ಹಾಕಿ ಒಗ್ಗರಣೆ ಕೊಡಿ. ನಂತರ ಇದಕ್ಕೆ ತುಂಡರಿಸಿದ ಒಣಮೆಣಸು, ಮೆಂತ್ಯ, ಕಾಯಾ ಪೌಡರ್ ಹಾಕಿ ಕೆದಕಿ, ಇದನ್ನು ತಕ್ಷಣ ಕುದಿಯುತ್ತಿರುವ ಸಾಂಬಾರ್ ಗೆ ರವಾನಿಸಿ. ಬಿಸಿ ಬಿಸಿ ಅನ್ನಕ್ಕೆ ತುಪ್ಪ ಹಾಕಿ, ಸಾಂಬಾರ್ ಜೊತೆ ಸವಿಯಿರಿ!





