ಯುಗಾದಿ ಸೃಷ್ಟಿಯ ಸಂಕೇತ. ಸೃಷ್ಟಿ ಹೊಸತನ್ನು ಪ್ರತಿನಿಧಿಸುತ್ತದೆ. ಒಟ್ಟಿನಲ್ಲಿ ಸಿಹಿ ಕಹಿ, ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಬೇಕೆಂಬ ದಿವ್ಯ ಸಂದೇಶವನ್ನು ಸಾರುವ ಈ ಯುಗಾದಿ ಹಬ್ಬದ ಆಚರಣೆಯ ಬಗ್ಗೆ ವಿವರಗಳನ್ನು ತಿಳಿಯೋಣವೇ.....?
ಯುಗಾದಿ ಹಬ್ಬ ಮತ್ತೆ ಬಂದಿದೆ! ಹಿಂದಿನ ಕ್ರೋಧಿನಾಮ ಸಂವತ್ಸರ ಕಳೆದು ಶ್ರೀವಿಶ್ವವಸು ನಾಮ ಸಂವತ್ಸರಕ್ಕೆ ಕಾಲಿಟ್ಟಿದೆ. ಈ ಹಬ್ಬ ಹಳೆಯದಕ್ಕೆ ಹೊಸತನ್ನು ಸೇರಿಸುವ ಕೊಂಡಿ. ಫಾಲ್ಗುಣ ಬಹುಳ ಅಮವಾಸ್ಯೆಯ ದಿನ ಹಳೆಯ ವರ್ಷಕ್ಕೆ ವಿದಾಯ ಹೇಳಿ. ಮಾರನೆಯ ದಿನ ಚೈತ್ರ ಮಾಸದ ಶುಕ್ಲ ಪ್ರತಿಪದೆಯೆಂದು ಬರುವ ಈ ಯುಗಾದಿ ಹಬ್ಬವನ್ನು ವರ್ಷದ ಮೊದಲ ಹಬ್ಬವಾಗಿ ಆಚರಿಸುತ್ತೇವೆ. ಹಿಂದಿನ ವರ್ಷದ ಕಹಿ ಘಟನೆಗಳನ್ನು ಮರೆತು ಸಿಹಿ ಸಂತಸದ ಕ್ಷಣಗಳನ್ನು ನೆನೆಯುತ್ತಾ ಭವಿಷ್ಯದ ಸುಖಕ್ಕಾಗಿ ಯುಗಾದಿಯನ್ನು ಆಚರಿಸುತ್ತೇವೆ.

ಎರಡು ಬಾರಿ ಆಚರಣೆ
ಸೂರ್ಯ ಚಂದ್ರರ ಹಿನ್ನೆಲೆಯಲ್ಲಿ ಯುಗಾದಿ ಎರಡು ಬಾರಿ ಆಚರಣೆಯಲ್ಲಿ ಇದೆ. ನಮ್ಮಲ್ಲಿ ಸೌರಮಾನ ಚಾಂದ್ರಮಾನದ ಎರಡು ಹಬ್ಬಗಳು ಪ್ರದೇಶಾನುಸಾರವಾಗಿ ರೂಢಿಯಲ್ಲಿದೆ. ಈ ಚಾಂದ್ರಮಾನ ಯುಗಾದಿಯನ್ನು ಪ್ರಥಮಾ ತಿಥಿಯಲ್ಲಿಯೇ ಸಾಂಪ್ರದಾಯಿಕವಾಗಿ ಆಚರಿಸಬೇಕು. ಸೌರಮಾನ ಯುಗಾದಿಯನ್ನು ಮೇಷ ಸಂಕ್ರಣದಲ್ಲಿ ಆಚರಿಸಬೇಕು. ಆಚರಣೆಯಲ್ಲಿ ಕೆಲವು ವಿಶೇಷಗಳಿವೆ.

ಪುರಾಣದ ಹಿನ್ನೆಲೆ
ಪುರಾಣದ ಹಿನ್ನೆಲೆ ಪ್ರಕಾರ ಬ್ರಹ್ಮನು ಪರಿಪೂರ್ಣವಾದ ಸೃಷ್ಟಿ ಕಾರ್ಯವನ್ನು ಮುಗಿಸಿದ್ದು ಯುಗಾದಿಯ ದಿನ. ಕೃತ ಯುಗದ ಪ್ರಾರಂಭವಾದ ದಿನ. ಶಕರು, ಹೂಣರನ್ನು ಸೋಲಿಸಿ ವಿಜಯವನ್ನು ಪಡೆದ ದಿನ. ಈ ದಿನದಿಂದಲೇ ಶಾಲಿವಾಹನ ಶಕೆ ಪ್ರಾರಂಭವಾಯಿತು. ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ ವಿಜಯವನ್ನು ಪಡೆದನು. ಶ್ರೀರಾಮಚಂದ್ರನು ಚೈತ್ರ ಶುದ್ಧ ಪಾಡ್ಯಮಿಯಂದೇ ವಿಜಯೋತ್ಸವ ಆಚರಿಸಿದ ದಿನ. `ಯುಗಾದಿ' ಶುಭದಿನದಂದು ಶ್ರೀರಾಮಚಂದ್ರ ಪಟ್ಟಾಭಿಷಿಕ್ತನಾಗುತ್ತಾನೆ. ಭಗವಂತ ಶ್ರೀಕೃಷ್ಣನು ನೃಪಕೇತುವಿಗೆ ದರ್ಶನ ನೀಡಿದ್ದು ಈ ವಿಕ್ರಮನಾಮ ಸಂವತ್ಸರದ ಚೈತ್ರ ಮಾಸದ ಮೊದಲ ದಿನ. ಗಂಗೆ ಶಿವನ ಜಟೆಯಲ್ಲಿ ಬಂಧಿತಳಾಗಿದ್ದು ಚೈತ್ರ ಮಾಸದ ರುಧಿರೋದ್ಗಾರಿ ಸಂವತ್ಸರದ ಯುಗಾದಿಯಂದು. ಈ ಯುಗಾದಿ ಹಬ್ಬ ಜೈನರಿಗೂ ಪವಿತ್ರವಾದದ್ದು. ಹದಿನಾಲ್ಕನೆಯ ತೀರ್ಥಂಕರನಾದ ಮಲ್ಲಿನಾಥನು ಜನಿಸಿದ್ದು, ಯುಗಾದಿಯ ದಿನದಂದು ಎಂದು ಜೈನ ಪುರಾಣ ತಿಳಿಸುತ್ತದೆ.
ಯುಗಾದಿ ಎಂದರೆ ಯುಗದ ಆದಿ. `ಸೃಷ್ಟಿಯ ಪ್ರಥಮ ಕ್ಷಣ.' ಮೊದಲ ದಿನ ಹೌದು. ಆ ಮೊದಲ ದಿನ ಪ್ರತಿ ವರ್ಷ ಬರುತ್ತದೆ ಎಂಬುದು ವಿಶೇಷ. ಆ ಪ್ರಥಮ ಕ್ಷಣ ನಮ್ಮ ಜೀವನದುದ್ದಕ್ಕೂ ಜೊತೆಯಾಗಿರುತ್ತದೆ ಎಂಬುದು ಸ್ವಾರಸ್ಯಕರ. ಮಾಹೆಗಳಲ್ಲಿ ಚೈತ್ರ ಇದ್ದಂತೆ, ಋತುಗಳಲ್ಲಿ ವಸಂತ ಋತು ಇದ್ದಂತೆ, ಹಾಗಾಗಿ ಎಲ್ಲ ಚೈತ್ರ ಶುದ್ಧ ಪ್ರಥಮ ದಿನ ಇರುವುದರಿಂದ ಈ ದಿನಕ್ಕೆ ಹೆಚ್ಚು ಮಹತ್ವ ಬಂದಿದೆ.

ಯುಗಾದಿ ಸ್ವಾಗತಕ್ಕೆ ಸಜ್ಜು
ಯುಗಾದಿ ಹಬ್ಬ ಎಲ್ಲಾ ಹಬ್ಬದ ಹಾಗಲ್ಲ. ಅದು ಪ್ರಕೃತಿಯೊಂದಿಗೆ ನೇರ ಸಂಬಂಧ ಹೊಂದಿರುವಂಥದ್ದು. ಯುಗಾದಿ ಬಂದಿತೆಂದು ನಿಸರ್ಗವೇ ನಮಗೆ ಹೇಳುತ್ತದೆ. ಯುಗಾದಿಯನ್ನು ಸಂತೋಷ ಸಂಭ್ರಮದಿಂದ ಸ್ವಾಗತಿಸಲು ಇಡೀ ಪ್ರಕೃತಿ ಸಜ್ಜಾಗಿರುತ್ತದೆ. ಎಲ್ಲೆಡೆ ಕಂಗೊಳಿಸುತ್ತಿರುವ ಮಾವ ಬೇವಿನ ಚಿಗುರು ಹೊಸ ಚೈತನ್ಯವನ್ನು ಪ್ರತಿಬಿಂಬಿಸುವ ಹೊತ್ತಿನಲ್ಲಿಯೇ, ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಿಕೊಂಡ ಮರಗಿಡಗಳು ಕಣ್ಣಿಗೆ ಸೊಬಗನ್ನು, ಮನಕ್ಕೆ ಉಲ್ಲಾಸವನ್ನು ನೀಡುತ್ತದೆ. ಮಾವು, ಬೇವು ಚಿಗುರಿ, ಆ ಚಿಗುರಿಗೆ ಮನಸೋತ ಕೋಗಿಲೆ ಹಾಡಲು ವಸಂತ ನಲಿಯಬೇಕು. ಇದು ಪ್ರಕೃತಿಯ ಸಹಜ ಧರ್ಮ.





