ನವ ಸಂವತ್ಸರ ಭೂಮಿಗೆ ಬಂದು ಸುರಲೋಕದ ಸುರನದಿಯಲಿ ಮಿಂದು ನವ ಸಂವತ್ಸರ ಭೂಮಿಗೆ ಬಂದು ಕರೆಯುತಿದೆ ನಮ್ಮನ್ನು ಇಂದು ಮಾವಿನ ಬೇವಿನ ತೋರಣ ಕಟ್ಟಿ ಬೇವು ಬೆಲ್ಲಗಳ ಒಟ್ಟಿಗೆ ಕುಟ್ಟಿ ಜೀವನವೆಲ್ಲ ಬೇವು ಬೆಲ್ಲ! ಎಂಬ ಪ್ರಕೃತಿ ಕವಿ ಕುವೆಂಪು ಸಾಲಿನಂತೆ ಮತ್ತೊಂದು ಸಂವತ್ಸರದ ಸ್ವಾಗತಕ್ಕೆ ನಾವೆಲ್ಲ ಸಜ್ಜಾಗಿದ್ದೇವೆ. ಏಪ್ರಿಲ್ ‌ಯುಗಾದಿ ಹಬ್ಬ ಅಂದು ನಾವು ಶಾರ್ವರಿ ಸಂವತ್ಸರ ದಾಟಿ ವಿಪ್ಲವ ಸಂತ್ಸರಕ್ಕೆ ಕಾಲಿಡುತ್ತೇವೆ. ಇದು 60 ಸಂವತ್ಸರಗಳಲ್ಲಿ 25ನೆಯದು. ಇಂತಹ ಸಂವತ್ಸರ ಚಕ್ರ ಹಿಂದೆಷ್ಟೋ ಕಳೆದುಹೋಗಿವೆ. 60 ಸಂವತ್ಸರಗಳಿಗೆ ಒಂದು ಸಂವತ್ಸರ ಚಕ್ರ ಮುಕ್ತವಾಯಾಗುತ್ತದೆ. ಪ್ರಭವನಾಮ ಸಂವತ್ಸರ ಮೊದಲನೆಯದಾದರೆ ಅಕ್ಷಯ ಸಂವತ್ಸರ ಕಡೆಯದು.

ಚೈತ್ರ ಬಂದಿಹಳು ಚೈತನ್ಯ ತಂದಿಹಳು ಗಾನಕೋಗಿಲೆ ಕೂಗಿ ಕರೆದಿದೆ ಚೈತ್ರ ಮಾಸನಿಲ್ಲಿಗೆ ಎಂಬ ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಮಹತ್ವದ ಸ್ಥಾನವಿರುವ ಯುಗಾದಿ ಬಗ್ಗೆ ಒಂದಷ್ಟು ಮಾತು. ಭಾರತೀಯರ ಹೊಸ ವರ್ಷ ಯುಗಾದಿಯಿಂದಲೇ ಪ್ರಾರಂಭವಾಗುತ್ತದೆ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ತೀವ್ರವಾಗಿರುವ ಈ ದಿನಮಾನಗಳಲ್ಲಿ ಭಾರತೀಯ ಹಬ್ಬಗಳ ಹಾಗೂ ಅವುಗಳ ಸಾಂಸ್ಕೃತಿಕ ಆಯಾಮಗಳನ್ನು ಅವಲೋಕನ ಮಾಡುವುದು ಮುಖ್ಯವಾಗಿದೆ.

ಭಾರತೀಯ ಹಬ್ಬಗಳಿಗೆ ಪುರಾಣ ಪರಂಪರೆಯೇ ಪ್ರಧಾನವಾಗಿದೆ. ಅದರಲ್ಲಿ ಯುಗಾದಿ ಹಾಗೂ ಸಂಕ್ರಾಂತಿಯಂತಹ ಹಬ್ಬಗಳು ಪುರಾಣದ ಕಥೆ ಅವಲಂಬನೆಯ ಜೊತೆಗೆ ಕಾಲಘಟ್ಟದ ಪ್ರಮುಖ ತಿರುವುಗಳಾಗಿ ಬೆಳೆದುಕೊಂಡು ಬಂದಿವೆ. `ಯುಗ’ ಮತ್ತು `ಆದಿ’ ಸೇರಿ ಯುಗಾದಿ ಆಗಿದೆ.

ugadi-1_0_0_0_0

ಯುಗಾದಿ ಮೂಲತಃ ಸಂಸ್ಕೃತ ಪದ, ಇದರ ತದ್ಭವವೇ `ಉಗಾದಿ.’ ಯುಗವೆಂದರೆ ಕಾಲ, ವರ್ಷ ಇಂತಹ ವರ್ಷದ ಆರಂಭವೇ ಯುಗಾದಿ ಎನ್ನಬಹುದು.

`ಯುಗಾದಿ’ಯನ್ನು ಆಯನಗಳ ಜೋಡಿ ಎಂದು ಕರೆಯುವುದು `ಯುಗ’ ಪದಕ್ಕೆ `ಜೋಡಿ’ ಅಥವಾ `ಜೊತೆ’ ಎಂಬ ಅರ್ಥ ಇದೆ. ಹಾಗಿದ್ರೆ ಯಾವ ಜೊತೆ ಎಂದು ಯೋಚಿಸಿದರೆ ನಮಗೆ ತಕ್ಷಣಕ್ಕೆ `ಉತ್ತರಾಯಣ’ ಮತ್ತು `ದಕ್ಷಿಣಾಯನ’ಗಳೆಂಬ ಎರಡು ಆಯನಗಳ ಜೋಡಿ ನೆನಪಾಗುತ್ತದೆ. ಈ ಆಯನಗಳ ಜೋಡಿ ಕಳೆದು ಹೊಸ ಜೋಡಿ ಪ್ರಾರಂಭವಾಗುವುದರಿಂದ ಇದು ಯುಗಾದಿ.

`ಯುಗ’ ಪದಕ್ಕಿರುವ ಮತ್ತೊಂದು ಅರ್ಥ ದ್ವಂದ್ವ ಅರ್ಥಾತ್‌ ಸುಖದುಃಖಗಳೆಂಬ ದ್ವಂದ್ವ. `ಯುಗಾದಿ’ ಆಡು ಮಾತಿನಲ್ಲಿ `ಉಗಾದಿ’ ಆಗಿದೆ. ಚೈತ್ರ ಶುದ್ಧ ಪಾಡ್ಯದಂದೇ ಏಕೆ ಹಬ್ಬ ಆಚರಿಸಬೇಕು? ಅದಕ್ಕೂ ಕಾರಣವಿದೆ ಕೇಳಿ. ಜಗತ್ತು ಸೃಷ್ಟಿಯಾದದ್ದು ಚೈತ್ರ ಶುದ್ಧ ಪಾಡ್ಯದಂದೇ ಎಂದು ಬ್ರಹ್ಮಾಂಡ ಪುರಾಣದಲ್ಲಿ ವ್ಯಕ್ತವಾಗಿದೆ. ಬ್ರಹ್ಮ ಚೈತ್ರ ಮಾಸದ ಶುಕ್ಲಪಕ್ಷದ ಪ್ರಥಮ ದಿನದಂದು ಸೂರ್ಯೋದಯದ ವೇಳೆಯಲ್ಲಿ ಗ್ರಹ, ಋತು, ತಿಂಗಳು ಅಧಿಪತಿಗಳನ್ನೊಳಗೊಂಡಂತೆ ಸಮಸ್ತ ಲೋಕವನ್ನು ಸೃಷ್ಟಿಸಿದರು.

ಕಾಲದ ಗಣನೆಯನ್ನೂ ಸಹ ಅಂದಿನಿಂದಲೇ ಆರಂಭಿಸಲಾಯಿತು. ಈ ಕಾಣದಿಂದಾಗಿ ಚೈತ್ರ ಶುದ್ಧ ಪಾಡ್ಯವೇ ವರ್ಷದ ಮೊದಲ ದಿನವೆಂದು ಪರಿಗಣನೆಯಾಯಿತು.

diya

ಪ್ರಪಂಚದಲ್ಲಿ ಯುಗಾದಿ ಹಬ್ಬದ ಆಚರಣೆ ತುಂಬಾ ಪ್ರಾಚೀನ ಕಾಲದಿಂದ ನಡೆದುಕೊಂಡು ಬಂದಿದೆ. ಕಿ.ಪೂ.ದಲ್ಲಿ ಮೆಸಟೋಮಿಯಾದಲ್ಲೂ ಯುಗಾದಿ ಆಚರಣೆಯಿತ್ತು ಎಂದು ಹೇಳುವುದಿದೆ. ಮಲ್ಲಿನಾಥನೆಂಬ 14ನೇ ತೀರ್ಥಂಕರ ಹುಟ್ಟಿದ್ದು, ಆದಿ ತೀರ್ಥಂಕರನ ಮಗ ಭರತ ದಿಗ್ವಿಜಯ ಸಾಧಿಸಿದ್ದು ಯುಗಾದಿ ದಿನವಾದ್ದರಿಂದ ಜೈನರಿಗೂ ಯುಗಾದಿ ಮಹತ್ವದ ದಿನವೇ.

ಯುಗಾದಿಯ ಮೊದಲ ತಿಂಗಳಿಗೆ `ಚೈತ್ರ’ ಎಂಬ ಹೆಸರು ಬರಲೂ ಕಾರಣವಿದೆ. ಹುಣ್ಣಿಮೆಯ ದಿನ ಚಂದ್ರನು ಯಾವ ನಕ್ಷತ್ರದೊಂದಿಗೆ ಇರುತ್ತಾನೋ ಅದನ್ನು ಅನುಸರಿಸಿ ಆ ತಿಂಗಳನ್ನು ಹೆಸರಿಡುತ್ತಾರೆ. ಚಿತ್ತ ನಕ್ಷತ್ರದಿಂದ ಚೈತ್ರಮಾಸ, ವಿಶಾಖ ನಕ್ಷತ್ರದಿಂದ ವೈಶಾಖ ಮಾಸ, ಜೆಯಿಷ್ಠಾ ನಕ್ಷತ್ರದಿಂದ ಜ್ಯೇಷ್ಠ ಮಾಸ ಇತ್ಯಾದಿ….. ನವ ಸಂವತ್ಸರದ ಆಗಮನದ ದ್ಯೋತಕವೆಂದರೆ ಪ್ರಕೃತಿಯ ಹಸಿರು ಸೀರೆಯನ್ನು ನವ ವಧುವಿನಂತೆ ಮಲ್ಲಿಗೆ ಮಾಲೆ ಮುಡಿದು ಹೂ ಹಣ್ಣುಗಳಿಂದ ತುಂಬಿ ತುಳುಕುತ್ತಿರುತ್ತಾಳೆ. ಮಾವು ಮಲ್ಲಿಗೆಯ ಕಂಪಿನೊಂದಿಗೆ ಬೇವಿನ ಕಂಪು ಸೇರಿಸಿ ಎಲ್ಲೆಡೆಯೂ ಕಾಜಾಣ ಕೋಗಿಲೆಗಳ ಸಡಗರವಿರುತ್ತದೆ. ಮನೆಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿ ಹೆಂಗಳೆಯರು ಸಂಭ್ರಮಿಸುತ್ತಾರೆ. ಎಲ್ಲೆಲ್ಲೂ ಧವನ, ಮರುಗ, ಮೈಸೂರು ಮಲ್ಲಿಗೆಯ ಪರಿಮಳದ್ದೇ ಸಂಭ್ರಮ.

ಯುಗಾದಿಯ ದಿನ ಉಷಾ ಕಾಲಕ್ಕೆ ಎದ್ದು ತೈಲಾಭ್ಯಂಗ ಮಾಡಿ, ನೂತನ ಪಂಚಾಗವನ್ನು ಪೂಜಿಸಿ ನಂತರ ಬೇವುಬೆಲ್ಲ ಸ್ವೀಕರಿಸಿ, ಮಂತ್ರಾಕ್ಷತೆ, ಗಂಧ ಇತ್ಯಾದಿಗಳನ್ನು ಪಂಚಾಗಕ್ಕೆ ಅರ್ಪಿಸಿ ಸಂವತ್ಸರದ ಫಲ ಕೇಳಬೇಕೆಂಬುದಾಗಿ ಹೇಳುತ್ತಾರೆ. ಯುಗಾದಿ ಅಂದರೆ `ನಿಂಬಕದಳ ಭಕ್ಷಣ.’ ಯುಗಾದಿ ದಿನ ಆಚರಿಸುವ ಕರ್ತವ್ಯಗಳಲ್ಲಿ ಒಂದು. ಅಂದರೆ ಬೇವು ಬೆಲ್ಲಗಳ ಸೇವನೆ.

ಇದಕ್ಕೆ ಕಾರಣವೇನು?

A_Happy_Ugadi_puja_tray_Telugu_Hindu_New_Year_Vaisakhi

ಮಾನವನ ಜೀವನ ಸುಖದುಃಖಗಳ ಮಿಶ್ರಣ. ಸುಖ ಬಂದಾಗ ಹಿಗ್ಗಬಾರದು, ದುಃಖ ಬಂದಾಗ ಕುಗ್ಗಬಾರದು. ಇವೆರಡನ್ನೂ ಸಮಾನವಾಗಿ ಕಾಣಬೇಕೆಂಬುದೇ ಬೇವುಬೆಲ್ಲ ಸೇವನೆಯ ಸಂಕೇತ. ಭಗವದ್ಗೀತೆಯಲ್ಲಿಯೂ ಸಹ `ಸುಖದುಃಖವೇ ಸಮೇಕೃತ್ವಾ’ ಎಂದು ಉಪದೇಶಿಸಲಾಗಿದೆ. ಕೆಲವರ ಜೀವನದಲ್ಲಿ ಬೆಲ್ಲ ಹೆಚ್ಚಾಗಿರಬಹುದು. ಆದರೂ ಈ ದ್ವಂದ್ವಗಳನ್ನು ಸಂಭ್ರಮಂದಿಂದಲೇ ಸ್ವೀಕರಿಸಬೇಕು. ಬೇವು ದುಃಖದ ಸಂಕೇತವಾದರೆ ಬೆಲ್ಲ ಸುಖದ ಸಂಕೇತ. ಇದನ್ನು ಸಮಪ್ರಮಾಣದಲ್ಲಿ ಸ್ವೀಕರಿಸಬೇಕು.

ಬೇವೇ ಏಕೆ? ಮಾವು ಏಕಾಗಬಾರದು? ಇದಕ್ಕೂ ಕಾರಣವಿದೆ. ಬಿಲ್ವ, ಅಶ್ವತ್ಥ ಮುಂತಾದ ವೃಕ್ಷಗಳ ಆರಾಧನೆ ನಮ್ಮಲ್ಲಿ ಬಹು ಹಿಂದಿನಿಂದಲೂ ನಡೆದು ಬಂದಿದೆ. ಅಂತಹ ಪೂಜಾರ್ಹ ವೃಕ್ಷಗಳಲ್ಲಿ ಬೇವು ಒಂದು. ಬೇವಿನ ಚಿಗುರು, ಹೂವು, ಎಲೆ, ತೊಗಟೆ, ಬೀಜ, ಬೇರು, ಕಾಂಡ, ಎಣ್ಣೆ ಎಲ್ಲ ರೋಗ ಪರಿಹಾರಕ ಮತ್ತು ಶಕ್ತಿವರ್ಧಕ ಎಂದು ಆಯುರ್ವೇದದಲ್ಲಿ ಉಕ್ತವಾಗಿದೆ.

ಯುಗಾದಿ ದಿನ ಬೇವಿನ ಎಸಳುಗಳನ್ನು ಭಕ್ಷಿಸುವಾಗ ಹೇಳುವ ಶ್ಲೋಕವೇ ಇದಕ್ಕೆ ಸಾಕ್ಷಿ.

ಶತಾಯುವರ್ಜ್ರದೇಹಾಯಸರ್ ಸಂಪತ್ಕಾರಾಯಚಸರ್ ವಾರಿಷ್ಟ ವಿನಾಶಾಯ ನಿಂಬಕದಳ ಭಕ್ಷಣಂ ಬೇವಿನೊಂದಿಗೆ ಬೆಲ್ಲವೇ ಏಕೆ? ಇದಕ್ಕೂ ಆಯುರ್ವೇದಿಯ ಕಾರಣವಿದೆ. ಸಿಹಿ ಸುಖದ ಸಂಕೇತ. ಆಗಲಿ ಸಕ್ಕರೆಯೂ ಸಿಹಿಯೇ ಅಲ್ಲವೇ? ಸಕ್ಕರೆ `ಶರ್ಕರ’  ಎಂಬ ಹೆಸರಿನಿಂದಲೂ ನಮ್ಮಲ್ಲಿ ಬಳಕೆಯಲ್ಲಿದೆ.

`ತಾನಾಃ ಶಿಲಾಃ ಶರ್ಕರಾಃ ವಸಂತು ಸರ್ವಾಲಾಃ’ ಎಂಬ ವೇದೋಕ್ತ ಚನವೇ ಇದಕ್ಕೆ ಸಾಕ್ಷಿ. ಆದರೂ ಬೆಲ್ಲವನ್ನೇ ಏಕೆ ಬಳಸಬೇಕು ಎಂದರೆ ಆರೋಗ್ಯದ ದೃಷ್ಟಿಯಿಂದ ಇಲ್ಲಿ ಸಕ್ಕರೆಗಿಂತಲೂ ಬೆಲ್ಲವೇ ಶ್ರೇಷ್ಠ. ಬೆಲ್ಲ ಆಯಾಸ ನಿವಾರಕ ಹಾಗೂ ಕ್ರಿಮಿನಾಶಕ. ಸಕ್ಕರೆಗೆ ಈ ಗುಣವಿಲ್ಲ. ಹಾಗಾಗಿ ಸಂಕ್ರಾಂತಿಯಲ್ಲೂ ಎಳ್ಳಿನ ಸಂಗಡ ಬೆಲ್ಲವನ್ನೇ ಮಿಶ್ರಣ ಮಾಡುವ ಪದ್ಧತಿ ಇಲ್ಲಿ ಉಲ್ಲೇಖನೀಯ. ಶತಾರಿಗುಡ, ಶುಂಠಿಗುಡ, ಚ್ಯವನಪ್ರಾಶ, ಕೂಶ್ಮಾಂಡ ಲೇಹ್ಯ, ದ್ರಾಕ್ಷಾದಿ ರಸಾಯನ ಇತ್ಯಾದಿ ಆಯುರ್ವೇದಿಯ ಔಷಧಿಗಳಲ್ಲಿ ಬೆಲ್ಲವೇ ಮುಖ್ಯ ಸಾಮಗ್ರಿ ಆಗಿರುತ್ತದೆ.

Ugadi_Recipes

ವರ್ಷದ ಹಬ್ಬಗಳಿಗೆ ಮುನ್ನುಡಿ ಬರೆಯುವ ಯುಗಾದಿ ನಿಸರ್ಗದ ಮರು ಹುಟ್ಟನ್ನು ಸಂಕೇತಿಸುತ್ತದೆ. ಬೇಂದ್ರೆಯವರ ಗೀತೆಯ ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷ ಹೊಸತು ತರುತಿದೆ ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ಎಂಬ ಸಾಲುಗಳನ್ನು ಕೇಳಿದಷ್ಟು ಮತ್ತೊಮ್ಮೆ ಮಗದೊಮ್ಮೆ ಕೇಳಬೇಕೆನ್ನಿಸುತ್ತದೆ. ಚಂದ್ರನ ಚಲನೆಯ ಗತಿಯನ್ನು ಆಶ್ರಯಿಸಿ ಚಾಂದ್ರಮಾನ ಯುಗಾದಿ, ಸೂರ್ಯನ ಚಲನೆಯ ಗತಿಯನ್ನು ಆಶ್ರಯಿಸಿ ಸೌರಮಾನ ಯುಗಾದಿ ಎಂದು ನಿರ್ಧಾರ ಮಾಡುವುದಿದೆ. ಕರ್ನಾಟಕದಲ್ಲಿ ಚೈತ್ರ ಶುದ್ಧ ಪ್ರತಿಪದೆಯಿಂದ ಫಾಲ್ಗುಣ ಮಾಸದ ಅಮಾಸ್ಯೆಯವರೆಗೆ ಹನ್ನೆರಡು ತಿಂಗಳುಗಳ ಅವಧಿ ಚಾಂದ್ರಾತ್ಸವರನಿಸುತ್ತದೆ.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರಗಳಲ್ಲಿ ಚಾಂದ್ರಾಮಾನ ಯುಗಾದಿಯ ಆಚರಣೆಯಾದರೆ, ತಮಿಳುನಾಡು ಕೇರಳಗಳಲ್ಲಿ ಸೌರಮಾನ ಯುಗಾದಿಯ ಆಚರಣೆ. ತುಳು ನಾಡಿನವರು ಬಿಸು ಹಬ್ಬ ಎಂಬ ಹೆಸರಿನಿಂದ ಸೌರಮಾನ ಯುಗಾದಿಯನ್ನೇ ಆಚರಿಸುತ್ತಾರೆ.

ugadi-1-eps-(1)

ಯುಗಾದಿಯನ್ನು ಶ್ರೀಮಂತ, ಬಡ ಎಂಬ ಭೇದವಿಲ್ಲದೆ, ಪಟ್ಟಣಿಗ, ಹಳ್ಳಿಗನೆಂಬ ತಾರತಮ್ಯವಿಲ್ಲದೆ ಎಲ್ಲರೂ ಆಚರಿಸುತ್ತಾರೆ. ಅನಕ್ಷರಸ್ಥರು ಅವರು ಕಂಡ ಯುಗಾದಿಗಳ ಆಧಾರದ ಮೇಲೆ ತಮ್ಮ ವಯಸ್ಸನ್ನು ಹೇಳುವುದಿತ್ತು.

ಯುಗಾದಿಯನ್ನು ಕುರಿತಂತೆ, ಊರಾಗ ಯುಗಾದಿ ಉಂಡ್ಹೋಗ ಅಣ್ಣಯ್ಯ ಶಾವೀಗಿ ಆಗಿ ಗುಳಿಗ್ಯಾಗಿ ಮ್ಯಾಲೀನ ಬಾನ ಬಸಿಯೋದು ತಡವಿಲ್ಲ ಎಂದು ಜನಪದ ಮಹಿಳೆ ಹೇಳುತ್ತಾಳೆ. ಇಲ್ಲಿ ಹಬ್ಬದಲ್ಲಿ ಮಾಡುವ ಅಡುಗೆಗಳ ಪರಿಚಯ ಆಗುತ್ತದೆ. ಬೇವಿನ ಹೂವಿನ ಹುಡಿಯ ಗಂಧ ಮಾವಿನ ಮಿಡಿಗಾಯಿ ಬಲು ಚಂದ ಎಂಬಂತೆ ಕರ್ನಾಟಕದಲ್ಲಿ ಬೇವಿನ ಹೂಗಳನ್ನು ಸೇರಿಸಿ ಚಟ್ನಿಯನ್ನು ಮಾಡುವುದಿದೆ.

ಬೇಳೆ ಹೋಳಿಗೆ, ಹೋಳಿಗೆ ಸಾಂಬಾರು, ಮಾವಿನಕಾಯಿ ಚಿತ್ರಾನ್ನಾ, ಹುಳಿ ಅನ್ನ ಎಂತಹವರ ಬಾಯಲ್ಲೂ ನೀರೂರಿಸುತ್ತವೆ.

ಆಂಧ್ರದಲ್ಲಿ ಬೇವುಬೆಲ್ಲ, ಹುಣಿಸೇಹುಳಿ, ಖಾರ ಸೇರಿಸಿ ಪಚಡಿ ಮಾಡಿ ದೇವಸ್ಥಾನದಲ್ಲಿ ಪ್ರಸಾದದ ರೂಪದಲ್ಲಿ ಕೊಡುತ್ತಾರೆ. ಇಲ್ಲಿ ಸೇರುವ ಮೂರು ಪದಾರ್ಥಗಳು ಜೀವನದ ಅಂಶಗಳನ್ನು ಸಂಕೇತಿಸುತ್ತವೆ. ವಸಂತ ಋತುವಿನ ಕಾಯಿಲೆಗಳನ್ನು ತಡೆಯಲು ಬೇವುಬೆಲ್ಲ ಅತ್ಯಂತ ಸಹಕಾರಿ. ಆಯುರ್ವೇದದ ಪ್ರಕಾರ ಮುಂಜಾನೆ ಖಾಲಿ ಹೊಟ್ಟೆಗೆ ಬೇವನ್ನು ತಿಂದರೆ ಕಫಕ್ಕೆ ಸಂಬಂಧಿಸಿದ ತೊಂದರೆಗಳು ಗುಣವಾಗುತ್ತವೆ ಎನ್ನುತ್ತಾರೆ. ಯುಗಾದಿ ಆರಂಭದಿಂದ ಎರಡು ತಿಂಗಳು ಕಹಿ ಮತ್ತು ಒಗರುಗಳಿಂದ ಕೂಡಿದ ತರಕಾರಿಗಳನ್ನು ಸೇವಿಸಬೇಕು ಎನ್ನುತ್ತಾರೆ.

ಹಾಗಲ, ಹೀರೆ, ಪಡವಲ, ಸೋರೆ, ಒಂದೆಲಗ (ಬ್ರಾಹ್ಮಿ), ಮೆಂತೆ, ಬೂದುಕುಂಬಳ ಇತ್ಯಾದಿ…. ಅದರಲ್ಲೂ ಹಾಗಲಕಾಯಿ, ಹೀರೇಕಾಯಿ, ಪಡವಲಕಾಯಿಗೆ ಮೊದಲ ಆದ್ಯತೆ.

ಈ ಋತುವಿನಲ್ಲಿ ಚಳಿ ಕಡಿಮೆಯಾಗಿ ಬಿಸಿಲಿನ ರವ ಹೆಚ್ಚಾಗುತ್ತದೆ. ಹೇಗೆ ಗಿಡಮರಗಳು ಚಿಗುರುತ್ತವೋ ಹಾಗೆ ನಮ್ಮ ಚರ್ಮ ಲವಲವಿಕೆಯನ್ನು ಪಡೆದುಕೊಳ್ಳುತ್ತದೆ. ಅಂತಹ ಚರ್ಮಕ್ಕೆ ಶ್ರೀಗಂಧ, ಲಾವಂಚ, ಅರಿಶಿನ ಮುಂತಾದವುಗಳಿಂದ ತಯಾರಿಸಿದ ಚೂರ್ಣದಿಂದ ಸ್ನಾನ ಮಾಡಬೇಕೆನ್ನುತ್ತಾರೆ. ಇಲ್ಲಿ ಬೇವಿನ ಎಲೆಗಳನ್ನು ಅದರ ತೊಗಟೆ ಸಹಿತ ಬಿಸಿ ನೀರಿನಲ್ಲಿ ಹಾಕಿ ಸ್ನಾನ ಮಾಡಿದರಂತೂ ಚರ್ಮದ ಕಾಯಿಲೆಗಳಿಗೆ, ಬೆನ್ನು ನೋವಿನಂತಹ ಸಮಸ್ಯೆಗಳಿಗೆ ರಾಮಬಾಣ ಎನ್ನುತ್ತಾರೆ ಹಿರಿಯರು.

ಈ ಋತುವಿನಲ್ಲಿ ಬಿಸಿಲಿನ ಝಳ ಹೆಚ್ಚಾಗುವ ಕಾರಣದಿಂದ ಮೊಸರಿನ ಬದಲು ಮಜ್ಜಿಗೆಯನ್ನು ಕುದಿಸಿ ಆರಿಸಿದ ನೀರನ್ನು ಯಥೇಚ್ಛವಾಗಿ ಸೇವಿಸಬೇಕು. ಇದರಿಂದ ನಿರ್ಜಲೀಕರಣ ಜೀರ್ಣಾಂಗಕ್ಕೆ ಸಂಬಂಧಿಸಿದ ವ್ಯಾಧಿಗಳನ್ನು ದೂರವಿಡಬಹುದು ಎನ್ನುತ್ತಾರೆ.

Ugadi-(1)

`ಉಗಾದಿ ಉಂಡು ಚಂದ್ರನನ್ನು ನೋಡಬೇಕು’ ಎಂಬ ಮಾತು ಬಳಕೆಯಲ್ಲಿದೆ. `ಯುಗಾದಿ’ ಈ ಪದ ಚಲನಶೀಲತೆಗೂ ನಾಂದಿ ಹಾಡುತ್ತದೆ. ಮಹಾಲಯ ಅಮವಾಸ್ಯೆ ಶರನ್ನವರಾತ್ರಿ ಸಂಕೇತಿಸಿದರೆ ಯುಗಾದಿ ಅಮವಾಸ್ಯೆ ವಸಂತ ನವರಾತ್ರಿಯನ್ನು ಸಂಕೇತಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಊರ ಉತ್ಸವ, ದೇವತೆಗಳ ಉತ್ಸವ ಮೆರವಣಿಗೆ ಅದ್ಧೂರಿಯಾಗಿ ನಡೆಯುತ್ತದೆ. ರಥೋತ್ಸವ, ಮಹನೀಯರ ಜಯಂತಿಗಳ ಪರ್ವ ಇಲ್ಲಿಂದಲೇ ಪ್ರಾರಂಭವಾಗುತ್ತದೆ. ಹೋಳಿ ಹುಣ್ಣಿಮೆ ಕಳೆದು 15 ದಿನಕ್ಕೆ ಉಗಾದಿ ಹಬ್ಬ. ಉಗಾದಿ ಹಬ್ಬ ಕಳೆದು ಒಂಬತ್ತನೇ ದಿನಕ್ಕೆ ಶ್ರೀರಾಮನವಮಿ. ಮುಂದಿನ ಅಮವಾಸ್ಯೆ ಕಳೆದು ಮೂರನೇ ದಿನಕ್ಕೆ ಅಕ್ಷಯ ತದಿಗೆ.

ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಬಾಗೀವಾಳು ಗ್ರಾಮದಲ್ಲಿ ಯುಗಾದಿ ದಿನವೇ ಕರಗ ಮಹೋತ್ಸವ ಜರುಗುತ್ತದೆ. ಉಳಿದಂತೆ ನಾಡಿನಾದ್ಯಂತ ಕತ್ತಿವರಸೆ, ದೊಣ್ಣೆವರಸೆ, ತೆಂಗಿನಕಾಯಿ ಒಡೆಯುವ ಸ್ಪರ್ಧೆ ಮುಂತಾದ ಗ್ರಾಮೀಣ ಹಬ್ಬಗಳು ಜರುಗುತ್ತವೆ.

ವಸಂತ ಋತು ಎಂದರೆ `ಋತುಗಳ ರಾಜ’ ಅದಕ್ಕೆ ವಸಂತ ಬಂದ ಋತುಗಳ ರಾಜ ತಾ ಬಂದ ಎಂದು ಹಾಡಿರುವುದು. ಈ ಮಾಸ ಆಸೆ ಚೈತನ್ಯಗಳ ಹೊರೆಯನ್ನೇ ಹೊತ್ತು ತರುತ್ತದೆ. ಹೊಸ ಸಂವತ್ಸರದಲ್ಲಿ ರೈತರು ಹೊನ್ನಾರು ಉತ್ಸವದ ಹೆಸರಿನಲ್ಲಿ ಬೇಸಾಯ ಪ್ರಾಂಭಿಸುವುದೂ ಇದೆ. ಇದಕ್ಕೆ ಚಿನ್ನದ ಉಳುಮೆ, ಮೊದಲ ಉಳುಮೆ ಎಂತಲೂ ಕರೆಯುತ್ತಾರೆ.

ದನಕರುಗಳ ಶೃಂಗಾರ ಮಾಡಿ ನೇಗಿಲು, ನೊಗ ಮುಂತಾದ ಕೃಷಿ ಪರಿಕರಗಳನ್ನು ಒಪ್ಪಾಗಿ ಜೋಡಿಸಿ ಅದಕ್ಕೆ ಪೂಜೆ ಮಾಡಿ, ಮಾಡಿದ ಹಬ್ಬದಡುಗೆಯನ್ನು ಜಾನುವಾರುಗಳಿಗೆ ತಿನ್ನಿಸುವುದಿದೆ, ನಂತರ ಊರಿನ ಪ್ರಮುಖರು ಮೆರವಣಿಗೆಯಲ್ಲಿ ಹೋಗಿ ಭೂದೇವಿಗೂ ಪೂಜೆ ಸಲ್ಲಿಸಿ ಉಳುಮೆಗೆ ನಾಂದಿ ಹಾಡುತ್ತಾರೆ. ಇಲ್ಲಿ ಸೆಗಣಿಯ ಬೆನಕನನ್ನು ಇಟ್ಟು ನೇಗಿಲು ಮತ್ತು ಭೂಮಿಯನ್ನು ಪೂಜಿಸುತ್ತಾರೆ. ಫಲವತ್ತತೆಯ ಸೆಗಣಿ, ಸಸ್ಯ ಸಂಕುಲದ ಸಂಕೇತ ಗರಿಕೆ ಈ ಎರಡರ ಸಮತೂಕದ ಸಂಯೋಜನೆ ಹೊಸ ವರ್ಷದ ಹೊಸ ಬೇಸಾಯಕ್ಕೆ ನಾಂದಿಯಾಗುತ್ತದೆ. ಹೊಸ ಮನೆ ಕಟ್ಟಲು ಪ್ರಾರಂಭಿಸುವರು ಇದೇ ದಿನ ಗುದ್ದಲಿ ಪೂಜೆ ಮಾಡುತ್ತಾರೆ. ದಾನ ಕೊಡುವ ಪದ್ಧತಿ `ವರ್ಷತೊಡಕು’ ಆಚರಣೆ ಸಂಪೂರ್ಣ `ವರ್ಷದ ತೊಡಕು’ ನಿವಾರಿಸಲಿ ಎಂದುಕೊಳ್ಳುವುದು. ಪಂಚಾಂಗ ಅಂದರೆ ವಾರ, ತಿಥಿ, ನಕ್ಷತ್ರ, ಕರಣಯೋಗ, ಮಳೆ ಬೆಳೆ, ಧನಾಧಿಪತಿ, ಸಸ್ಯಾಧಿಪತಿ, ಗ್ರಹಣ, ಜಾತ್ರೆ, ಉತ್ಸವ, ಮದುವೆ, ಮುಂಜಿ, ನಾಮಕರಣ ಇತ್ಯಾದಿಗಳಿಗೆ ನಾವು ಯುಗಾದಿಯ ಹೊಸ ಪಂಚಾಂಗವನ್ನೇ ಆಶ್ರಯಿಸುತ್ತೇವೆ. ಯುಗಾದಿ ಬಂದಿದೆ ಮಾವು ಬೇವುಗಳ ಸಂಚಯನದೊಂದಿಗೆ ನವ ವರ್ಷ ಆಚರಿಸೋಣ. ಹೊಸ ಉಲ್ಲಾಸದಿಂದ ನವ ಯುಗಾದಿಯನ್ನು ಸ್ವಾಗತಿಸೋಣ.

ಸಮಸ್ತ ಓದುಗರಿಗೆ ಗೃಹಶೋಭಾ ಪರವಾಗಿ ಯುಗಾದಿಯ ಶುಭಾಶಯಗಳು.

– ಸುಮಾ ವೀಣಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ