ಅತ್ತ ಗಂಡೂ ಅಲ್ಲದೆ, ಇತ್ತ ಹೆಣ್ಣು ಅಲ್ಲದೆ ಮಂಗಳಮುಖಿಯರ ವಾಸ್ತವಿಕ ಜೀವನ ಅತೀ ಕಠೋರವಾದುದು. ಇಂಥವರ ಆಂತರಿಕ ಬದುಕಿನ ಕುರಿತಾಗಿ ಒಂದು ಕಿರು ನೋಟ ಇಲ್ಲಿದೆ……!
“ಸುಮೀ…. ಸುಮೀ….” ಎಂದು ಒಂದೇ ಸಮನೆ ಸುಶೀಲಮ್ಮ ಕೂಗುತ್ತಲೇ ಇದ್ದರು. ಸುಮಿ ಹಿಂದಿನ ದಿನ ತಾನೇ ಚಿಕ್ಕಪ್ಪನ ಮನೆಯಿಂದ ರಜೆ ಮುಗಿಸಿಕೊಂಡು ಬಂದಿದ್ದಳು. ಸುಮಿಗೆ ಚಿಕ್ಕಪ್ಪನ ಮನೆಯಲ್ಲಿ ಫ್ರಿಜ್, ವಾಷಿಂಗ್ ಮೆಷಿನ್, ಮಿಕ್ಸಿ, ತರಾವರಿ ಅಡುಗೆ, ಪ್ರತಿನಿತ್ಯ ಸ್ನಾನ….. ಹೀಗೆ ಅಭ್ಯಾಸವಾಗಿಬಿಟ್ಟಿತ್ತು. ಇಲ್ಲಿ ಮನೆಗೆ ವಾಪಸ್ ಬಂದರೆ ಅದೇ ಬಿಂದಿಗೆ ತೆಗೆದುಕೊಂಡು ಬಾವಿಯಿಂದ ನೀರು ಸೇದಿ ಹೊರುವುದು, ಅಮ್ಮ ಹಸಿ ಸೌದೆ ಒಲೆಗೆ ಇಟ್ಟು ಉರಿ ಹಾಕಿ ಕಣ್ಣೆಲ್ಲಾ ಕೆಂಪಗೆ ಮಾಡಿಕೊಂಡು ಹಂಡೆಯಲ್ಲಿ ನಮಗೆಲ್ಲಾ ವಾರಕ್ಕೊಮ್ಮೆ ನೀರು ಕಾಯಿಸುತ್ತಿದ್ದರು.
ಅವಳ ಅಪ್ಪನಿಗೆ ಮನೆಗೆ ದಿನಸಿ ತರುವುದು ಎಂದರೆ ಭಾರಿ ಲೆಕ್ಕಾಚಾರ. ಸುಮಿಗೆ ಖಾರ, ಸಿಹಿ ತಿಂಡಿ ತಿನ್ನುವಾಸೆ. ಹಾಗೆಯೇ ಸಾರು ಪಲ್ಯಕ್ಕೆ ತಾನೇ ರುಬ್ಬುವ ಕಲ್ಲಿನಿಂದ ಮಸಾಲೆ ತಿರುವಬೇಕಿತ್ತು. ಬಟ್ಟೆ ತೊಳೆಯಬೇಕೆಂದರೆ ಮೈಲಿ ದೂರ ಹೋಗಿ ಬಾವಿಯಿಂದ ನೀರು ಸೇದಿ ಬಟ್ಟೆ ತೊಳೆದು ತರಬೇಕಿತ್ತು.
ಆದರೆ ಚಿಕ್ಕಪ್ಪನ ಮನೆಯಲ್ಲಿ ಎಲ್ಲಾ ಅಚ್ಚುಕಟ್ಟಾದ ವ್ಯವಸ್ಥೆ ನೋಡಿ ಬಂದವಳಿಗೆ, `ನಾನು ಯಾಕಾದ್ರೂ ನಮ್ಮನೆಗೆ ವಾಪಸ್ಸು ಬಂದೆನೋ…’ ಎಂದೆನಿಸಿ ಪೆಚ್ಚುವೋರೆ ಹಾಕಿಕೊಂಡು ಯೋಚಿಸುತ್ತಾ ಕುಳಿತಿದ್ದಳು. ಹಾಗಾಗಿ ಅವರಮ್ಮ ಎಷ್ಟು ಸಾರಿ ಕೂಗಿದರೂ ಅದು ಅವಳ ತಲೆಗೆ ಹೋಗಿರಲಿಲ್ಲ.
“ಸುಮೀ…. ಒಲೆ ಮೇಲೆ ಅಕ್ಕಿ ಹಾಕಿದ್ದೀನಿ…. ಎಲ್ಲಾ ಉಕ್ಕಿ ಹೋಗಿದೆ, ಬಸಿ ಬಾ…..” ಎಂದು ಸುಶೀಲಮ್ಮ ಜೋರಾಗಿ ಗದರಿಸಿದರು.
ಚಿಕ್ಕಪ್ಪನ ಮನೆಯಲ್ಲಿ ಗ್ಯಾಸ್ ಸ್ಟವ್ ಮೇಲೆ ಕುಕ್ಕರಿನಲ್ಲಿ ಬೇಯುತ್ತಿದ್ದ ಅನ್ನವನ್ನು ನೋಡಿ ಬೆರಗಾಗಿದ್ದಳು. ಇಲ್ಲಿ ಅರ್ಧಂಬರ್ಧ ಹಸಿ ಸೌದೆಯಲ್ಲಿ ಬೇಯಿಸುತ್ತಿದ್ದ ಅನ್ನ. ಅನ್ನ ಬೆಂದ ಮೇಲೆ ಸಾರಿಗೆ ಕಾಳು, ಸೊಪ್ಪು ಬೇಯಿಸಲು ಇಡಬೇಕು. ಇಂತಹ ಪರಿಸ್ಥಿತಿಯಲ್ಲಿ ಸುಮಿಯ ಜೀವನ ಸಾಗುತ್ತಿತ್ತು.
ಸುಮಿಯ ವಿಚಿತ್ರವಾದ ಫ್ರೆಂಡ್
ಸುಮಿ ಶಾಲೆಗೆ ಹೋಗುತ್ತಿದ್ದಾಗ ಅವಳಿಗೆ ಒಬ್ಬ ಗೆಳತಿ ಇದ್ದಳು. ಅವಳ ಹೆಸರು ಜ್ಞಾನವಿ, ಅವಳು ತುಂಬಾ ಸುಂದರವಾಗಿದ್ದಳು. ಅವಳ ಅಣ್ಣ ಸಂಜಯ್ ತಂಗಿಗಿಂತ ಸ್ಛುರದ್ರೂಪಿ. ಅವನು 9ನೇ ತರಗತಿಯಲ್ಲಿ ಓದುತ್ತಿದ್ದ. ಅವನು ಆ ವಯಸ್ಸಿನಲ್ಲಿಯೇ ಸಹಜವಾಗಿ ಎಲ್ಲರೊಂದಿಗೆ ಬೆರೆಯುತ್ತಾ, ಹಾಡುತ್ತಾ….. ಕುಣಿಯುತ್ತಾ ಸಂತಸದಿಂದ ಇರುತ್ತಿದ್ದವು.
ಆಂತರಿಕ ಬದಲಾವಣೆ
10ನೇ ತರಗತಿಗೆ ಬರುವ ಹೊತ್ತಿಗೆ ಅವನಲ್ಲಿ ಭಾವನೆಗಳು ಬದಲಾಗುತ್ತಾ ಹೋದವು. ತಂಗಿಯ ಬಳೆಗಳನ್ನು ಹಾಕಿಕೊಳ್ಳುವುದು, ಅವಳಿಲ್ಲದಿದ್ದಾಗ ಅವಳ ಉಡುಪುಗಳನ್ನು ಹಾಕಿಕೊಂಡು ಕನ್ನಡಿಯಲ್ಲಿ ನೋಡುವುದು, ಕಣ್ಣಿಗೆ ಕಾಡಿಗೆ ಹಚ್ಚಿಕೊಳ್ಳುವುದು ಹೀಗೆ…..
ಮೊದ ಮೊದಲು ಸುಮಿಯ ಗೆಳತಿ ಅವನು ಈಗೀಗ ವಿಚಿತ್ರವಾಗಿ ವರ್ತಿಸುತ್ತಿದ್ದಾನೆ ಎಂದು ಗಲಿಬಿಲಿಗೊಂಡು ಅಣ್ಣನನ್ನು ಬೈಯುತ್ತಿದ್ದಳು. ತಾನು ಇಲ್ಲದಿದ್ದಾಗ ತನ್ನ ಉಡುಪುಗಳನ್ನು ಏಕೆ ಹಾಕಿಕೊಳ್ಳಬೇಕು, ತನ್ನ ವಸ್ತುಗಳನ್ನು ಏಕೆ ಉಪಯೋಗಿಸಬೇಕು ಎಂದು ಸಿಡುಕುತ್ತಿದ್ದಳು.
ಆದರೆ ದಿನೇ ದಿನೇ ಸಂಜಯ್ ನ ಮನಸ್ಸಿನಲ್ಲಿ ಹೆಣ್ಣಿನಲ್ಲಿ ಇರಬೇಕಾದ ಆಸೆ, ಭಾವನೆಗಳು ಹೆಚ್ಚಾಗ ತೊಡಗಿದವು. ತರಗತಿಯಲ್ಲಿ ಹುಡುಗರ ಬದಲಾಗಿ ಹುಡುಗಿಯರ ಜೊತೆಗೆ ಹೆಚ್ಚಾಗಿ ಬೆರೆಯತೊಡಗಿದ. ಇದನ್ನು ಕಂಡು ಹುಡುಗರೆಲ್ಲಾ ಗೇಲಿ ಮಾಡಿ ನಗಲು ಪ್ರಾರಂಭಿಸಿದರು. ಆದರೂ ಅವನಿಗೆ ತನ್ನಲ್ಲಿ ಆಗುತ್ತಿರುವ ಬದಲಾವಣೆ, ಭಾವನೆಗಳನ್ನು ಹತ್ತಿಕ್ಕಲಾಗದೆ ಒದ್ದಾಡುತ್ತಿದ್ದ.
ಅವನು ತನ್ನ ಶಾರೀರಿಕ ಬದಲಾವಣೆಗಳನ್ನು ಮಾನಸಿಕವಾಗಿ ಅನುಭವಿಸುತ್ತಾ, ಯಾರೊಂದಿಗೂ ಹಂಚಿಕೊಳ್ಳಲಾಗದೆ ಒಳಗೊಳಗೇ ನೋವು ಅನುಭವಿಸುತ್ತಿದ್ದ. ಅವನ ತಾಯಿಗೆ ಮಗನಲ್ಲಾಗುತ್ತಿದ್ದ ಬದಲಾವಣೆ ನುಂಗಲಾರದ ತುತ್ತಾಯಿತು. ಏಕೆಂದರೆ ಸಂಜಯ್ ನ ತಂದೆ ಶಿಸ್ತಿನ ಸಿಪಾಯಿ. ಮರ್ಯಾದೆ, ಘನತೆ, ಗೌರವಕ್ಕೆ ಹೆಚ್ಚು ಒತ್ತು ಕೊಡುವ ಮನುಷ್ಯ. ಮಗನ ವರ್ತನೆ ಅವರ ಪಿತ್ತ ನೆತ್ತಿಗೇರುವಂತೆ ಮಾಡಿತ್ತು.
ಸಂಜಯ್ ನ ತಂದೆಗೆ, ಮಗನಿಗೆ ಉನ್ನತ ವಿದ್ಯಾಭ್ಯಾಸ ಮಾಡಿಸಿ, ಸರ್ಕಾರಿ ಹುದ್ದೆ ಕೊಡಿಸಬೇಕೆಂಬ ಅದಮ್ಯ ಆಸೆ ಇತ್ತು. ಆದರೆ ಮಗನ ವರ್ತನೆ ಅವರಿಗೆ ನೋವುಂಟು ಮಾಡಿತ್ತು. ಅವನ ಆಂತರಿಕ ಭಾವನೆಗಳಿಗೆ, ಪ್ರಾಕೃತಿಕ ಬದಲಾವಣೆಗಳಿಗೆ ಯಾರು ತಾನೇ ಹೊಣೆ? ತಾಯಿಗೆ ತನ್ನ ಮಗ ಕಳೆದುಹೋಗುತ್ತಿದ್ದಾನೆ ಎಂಬ ಭಯ, ಆತಂಕ, ನೋವು, ಅದೇನೋ ಸಂಕಟ. ಮಗನನ್ನು ಪ್ರೀತಿಸಲೂ ಆಗದೆ, ದ್ವೇಷಿಸಲೂ ಆಗದೆ ನೋವು ಅನುಭವಿಸುತ್ತಿದ್ದರು.
ಅಗೋಚರ ಭವಿಷ್ಯ
10ನೇ ತರಗತಿ ಮುಗಿದ ಮೇಲೆ ಕಾಲೇಜಿಗೆ ಸೇರಿಸಲು ಒತ್ತಾಯ ಮಾಡಿದರು. ಕಾಲೇಜು ಮೆಟ್ಟಿಲು ಹತ್ತಲು ಒಪ್ಪದೆ ಅವನು ರೂಮಿನಲ್ಲಿ ಬಾಗಿಲು ಹಾಕಿಕೊಂಡು ಅಂತರ್ಮುಖಿ ಆಗತೊಡಗಿದ. ಅಪ್ಪನ ಕೋಪ, ಅಮ್ಮನ ನೋವಿನ ಮಧ್ಯೆ ಅವನಿಗೆ ಬೆಂದು ಹೋದಂತೆ ಭಾಸವಾಗತೊಡಗಿತು. ಅವನು ಕೊನೆಗೊಂದು ನಿರ್ಧಾರಕ್ಕೆ ಬಂದ. ಇವರ ಯಾರ ಬಂಧನವೂ ಬೇಡ. ತಾನು ತನ್ನ ರೀತಿಯಲ್ಲಿ ಜೀವನ ನಡೆಸುವವರೊಂದಿಗೆ ಸೇರಿ ಬಿಡುವುದೆಂದು ನಿರ್ಧರಿಸಿ, ಮರುದಿನ ಬೆಳಗಿನ ಜಾವ ಮನೆ ಬಿಟ್ಟು ಹೊರಟುಹೋದ. ಮುಂದೆ ಅವನು ಮಂಗಳಮುಖಿಯರ ಜೊತೆ ಬೆರೆತು ಜೀವನ ಸಾಗಿಸತೊಡಗಿದ. ಅಲ್ಲಿನ ಆರಂಭದ ದಿನದ ಭಾವನೆಗಳು, ಬದಲಾವಣೆಗಳು, ಜೀವನಶೈಲಿ, ಸಮಾಜದ ಸ್ಪಂದನೆ ಎಲ್ಲವೂ ವಿಭಿನ್ನವಾಗಿಯೇ ಇತ್ತು.
ದೌರ್ಜನ್ಯ ಮತ್ತು ಕಳ್ಳತನನ್ನು ಕೇವಲ ಮಂಗಳಮುಖಿಯರು ಮಾಡುತ್ತಿಲ್ಲ. ಆದರೆ ಸಣ್ಣ ಸಣ್ಣ ತಪ್ಪನ್ನು ದೊಡ್ಡದಾಗಿ ಬಿಂಬಿಸಿ ಆ ಸಮುದಾಯವನ್ನು ಸಮಾಜದಿಂದ ಹೊರಗಿಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ನಾನು ಒಬ್ಬ ಪ್ರತಿಭಾನ್ವಿತ ಮಂಗಳಮುಖಿಯನ್ನು ಭೇಟಿ ಮಾಡಿ, ಅವರ ಜೀವನ ಶೈಲಿಯ ಬಗ್ಗೆ ಕೇಳಿದಾಗ, ಆಕೆ ಕೊಟ್ಟ ಉತ್ತರಗಳು ಹೀಗಿವೆ…..
ವಾಸ್ತವ ಜೀವನ ಬಾಲ್ಯ ಹೇಗೆ ಕಳೆಯುತ್ತಿ ಎಂದು ನಾನು ಅವರನ್ನು ಕೇಳಿದಾಗ…..
ನಾನು ಗಂಡು ಆದರೆ ನನ್ನೊಳಗಿನ ಭಾವನೆಗಳು ಹೆಣ್ಣು. ಆಗ ನನಗೆ ಸುಮಾರು ಎಂಟು ವರ್ಷ. ಆಗ ಆ ಸೂಕ್ಷ್ಮ ನನಗೆ ಗೋಚರಕ್ಕೆ ಬರತೊಡಗಿತು. ನಾನು ಏಕೆ ಬೇರೆಯಾಗಿದ್ದೇನೆ? ನಾನು ಏಕೆ ಬೇರೆ ಮಕ್ಕಳ ತರಹ ಇಲ್ಲ? ಹುಡುಗಿಯ ಬಟ್ಟೆ ಧರಿಸಬೇಕು ಎಂಬ ಆಸೆ. ಹಾಗಾಗಿ ನಮ್ಮಂತಹವರ ಬಾಲ್ಯ ವಿಭಿನ್ನವಾಗಿರುತ್ತದೆ ಎನ್ನುತ್ತಾರೆ.
ಯೌವನದಲ್ಲಿ ನಿಮ್ಮ ಪ್ರಾಯವನ್ನು ಹೇಗೆ ಎದುರಿಸುವಿರಿ?
ನನಗೆ ಈ ಪ್ರಾಯದಲ್ಲಿ ಒಬ್ಬ ಹುಡುಗನ ಬಗ್ಗೆ ಒಲವು ಮೂಡಿತ್ತು. ಅದು ತೀರ ಸ್ವಾಭಾವಿಕವಾಗಿಯೇ ಇತ್ತು. ಆ ಸಮಯದಲ್ಲಿ ಸಹಜವಾಗಿ ನನ್ನ ಪ್ರೀತಿಯ ಹುಡುಗನನ್ನು ನೋಡುವುದು, ನಾಚಿಕೊಳ್ಳುವುದು, ಸಂಕೋಚ ಪಡುವುದು, ಮುಖ ತೋರಿಸದೆ ಇರುವುದು, ಅವನ ಜೊತೆ ಮಾತನಾಡುವ ಬಯಕೆ, ಮನದ ಸಂಭ್ರಮವನ್ನು ತಾಳಲಾರದೆ ಬರೆಯಲಾರಂಭಿಸಿದೆ. ಅವುಗಳನ್ನು ಓದುತ್ತಿದ್ದಂತೆ ಮನಸ್ಸಿಗೆ ಮುದವೆನಿಸುತ್ತಿತ್ತು. ಕ್ರಮೇಣ ನಾನು ಬರೆಯಲು ಪ್ರಾರಂಭಿಸಿ ಕವಯತ್ರಿಯಾದೆ ಎನ್ನುತ್ತಾರೆ.
ಹೀಗೆ ಕೆಲವರು ಅವಮಾನವನ್ನು ಸಹಿಸುತ್ತಾ ತಮ್ಮ ಕಾಲ ಮೇಲೆ ತಾವೇ ನಿಂತು ಸಮಾಜಕ್ಕೆ, ಹೆತ್ತವರಿಗೆ ಹೆಸರು ತಂದಿದ್ದಾರೆ. ಇದಕ್ಕೆ ಸೂಕ್ತ ಉದಾಹರಣೆ ಜಾನಪದ ಅಕಾಡೆಮಿಯ ಅಧ್ಯಕ್ಷ ಮಂಜಮ್ಮ ಜೋಗತಿ. ಇವರು ರಾಷ್ಟ್ರಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಪ್ರತಿಭಾನ್ವಿತ ಮಂಗಳಮುಖಿಯರು
ನನ್ನ ಗೆಳತಿ, ಸಾರಿಕಾ ಎಂಬ ಒಬ್ಬ ಮಂಗಳಮುಖಿಯನ್ನು ಒಂದು ಕಾರ್ಯಕ್ರಮದಲ್ಲಿ ಭೇಟಿ ಮಾಡಿಸಿದರು. ಹಾಗೆ ಮಾತನಾಡುತ್ತಾ ಅವರೊಬ್ಬ ಮಂಗಳಮುಖಿ ಎಂಬುದು ತಿಳಿಯಿತು. ಅವರೊಬ್ಬ ಹೋರಾಟಗಾರ್ತಿಯೂ ಆಗಿದ್ದರು. ಸಮಾಜವನ್ನೇ ಸುಧಾರಿಸಲು ಪಣತೊಟ್ಟ ಅವರ ಗಾಂಭೀರ್ಯ ನೋಡಿ ಅವರ ಬದುಕಿನ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲ.
ಕಷ್ಟ ಬೇಡ ಎಂದರೆ ಕಷ್ಟ ಯಾವ ಶತ್ರುವಿಗೂ ಇಂತಹ ಕಷ್ಟ ಬರೋದೇ ಬೇಡ ಎಂದು ಕಷ್ಟವನ್ನು ನೆನೆದು ಕಣ್ಣೀರು ಕೆನ್ನೆಯ ಮೂಲಕ ಜಾರಲು ಪ್ರಾರಂಭಿಸಿತು. ಅದರ ನೆನೆಪುಗಳು ಕೂಡ ಬೇಡ ಎನ್ನುತ್ತಾರೆ.
ವೈರುಧ್ಯದ ಮನೋಸ್ಥಿತಿ
ದೇವರ ದೃಷ್ಟಿಯಲ್ಲಿ ನಾವೆಲ್ಲರೂ ಸಮಾನರು, ಎನ್ನುವ ನಾವುಗಳೇ ಮಂಗಳಮುಖಿಯರನ್ನು ಕಂಡರೆ ಯಾವುದೊ ವಿಚಿತ್ರ ಜೀವಿಯನ್ನು ಕಂಡಂತೆ ಭಾವಿಸುತ್ತೇವೆ. ವಿಭಿನ್ನ ಶರೀರ ಮತ್ತು ವೈರುಧ್ಯದ ಮನೋಸ್ಥಿತಿಯನ್ನು ಹೊಂದಿ ಊಹಿಸಲೂ ಸಾಧ್ಯವಿಲ್ಲದ ಕಷ್ಟ ಕಾರ್ಪಣ್ಯದ ಬದುಕಿಗೆ ತಮ್ಮನ್ನು ತಾವು ಒಡ್ಡಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗಿರುವವರಿಗೆ ನಾವು ಸಹಾನುಭೂತಿಯನ್ನು ತೋರಿಸಬೇಕೇ ಹೊರತು ನಿರ್ಲಕ್ಷ್ಯ ಅಥವಾ ಅಸಡ್ಡೆಯನ್ನಲ್ಲ, ಎಂದು ಪುಸ್ತಕದಲ್ಲಿಯೂ ಹೇಳಿದ್ದಾರೆ.
ಹದಿಹರೆಯದಲ್ಲಿ ಮಾನಸಿಕವಾಗಿ, ದೈಹಿಕವಾಗಿ ಬದಲಾಗುತ್ತಿರುವ ಮಕ್ಕಳಿಗೆ ಸೂಕ್ತ ಸಯಮದಲ್ಲಿ ಮಾರ್ಗದರ್ಶನ ಪ್ರೀತಿ ಲಭಿಸಿದರೆ, ಅವರಲ್ಲಿಯೂ ಆತ್ಮವಿಶ್ವಾಸ ಹೆಚ್ಚುತ್ತದೆ.
ನೀವು ಗಂಡು ಅಥವಾ ಹೆಣ್ಣಾಗಿ ಹುಟ್ಟಿದರೆ…. ನಿಖರ ದೇಹ ಮತ್ತು ಮನಸ್ಥಿತಿ ಕೊಟ್ಟಿದ್ದರೆ…. ಈ ಜೀವನ ಪೂರ್ತಿ ನೀವು ದೇವರಿಗೆ ಕೃತಜ್ಞರಾಗಿರಲೇಬೇಕು. ಇದು ದೇವರು ಕೊಟ್ಟ ಅತಿ ದೊಡ್ಡ ಕೊಡುಗೆ.
ಸಾಮಾಜಿಕ ಬದುಕು
ಮನಸ್ಸಿಗೆ ಹೆಣ್ಣಿನ ಹಂಬಲ. ದೇಹ ಮಾತ್ರ ಗಂಡಸಿನ ಹಾಗೆ. ಅಂತಹವರ ಮನಸ್ಸಿನ ಬಿರುಸು ಭಾವಗಳಂತೂ ಅಲ್ಲೋಲ ಕಲ್ಲೋಲ ಇದ್ದಂಗೆ ಇದು ಅಲ್ಲ, ಹೆಚ್ಚಾಗಿ ಅದು ದಕ್ಕುತ್ತಿಲ್ಲ. ಸಮಾಜ ಎಲ್ಲಕ್ಕಿಂತ ಮೊದಲೇ ಅವರನ್ನು ರಸ್ತೆಗೆ ಇಳಿಸಿರುತ್ತದೆ. ಇದು ಹಿಜಿಡಾಗಳ ಜಗತ್ತು. ಇವರು ಮದುವೆಯಾಗುತ್ತಾರೆ ಎಂದರೆ ಹೌದು, ಯಾರೊಂದಿಗೆ ಇವರು ಮದುವೆಯಾಗುತ್ತಾರೆ? ಇವರ ಆರಾಧ್ಯ ದೈವ ಆ ಆರಾಮನ ಜೊತೆ ಕೇವಲ ಒಂದು ದಿನದ ಮಟ್ಟಿಗೆ ಮದುವೆಯಾಗುತ್ತಾರೆ. ಆದರೆ ಮಾರನೆಯ ದಿನವೇ, `ನನ್ನ ಗಂಡ ಸತ್ತ,’ ಎಂದು ಮಂಗಳಸೂತ್ರ ತೆಗೆದುಹಾಕಿ ಕಣ್ಣೀರು ಹಾಕುತ್ತಾರೆ.
ಹಾಗೆಯೇ ಇವರು ತೀರಿ ಹೋದಾಗ ಮಧ್ಯರಾತ್ರಿಯಲ್ಲಿ ಗೌಪ್ಯವಾಗಿ ಶವ ಸಂಸ್ಕಾರ ಮಾಡಲಾಗುತ್ತದೆಯಂತೆ. ಏಕೆಂದರೆ ತೀರಿ ಹೋದ ಮಂಗಳಮುಖಿಯರ ಶವವನ್ನು ಸಾಮಾನ್ಯ ಜನರು ನೋಡಿದರೆ, ಮುಂದಿನ ಜನ್ಮದಲ್ಲಿ ಕೂಡ ಅವರು ಮಂಗಳಮುಖಿಯರಾಗಿಯೇ ಹುಟ್ಟುತ್ತಾರೆ ಎಂಬ ನಂಬಿಕೆ ಇದೆ. ಇವರು ತೀರಿ ಹೋದಾಗ ಅವರ ಮುಖಕ್ಕೆ ಚಪ್ಪಲಿಯಿಂದ ಹೊಡೆಯುತ್ತಾರೆ. ಏಕೆಂದರೆ ಅವರಿಗೆ ಯಾವುದಾದರೂ ಪಾಪಗಳು ಇದ್ದರೆ ಹೋಗಲಿ ಹಾಗೂ ಮುಂದಿನ ಜನ್ಮದಲ್ಲಿ ಸುಖವಾಗಿ ಹುಟ್ಟಲಿ ಎಂದು ಹೀಗೆ ಮಾಡಲಾಗುತ್ತದೆ.
ಪುಟಿದೇಳುವ ಉತ್ಸಾಹ
ನಿರಾಶೆ, ದೌರ್ಜನ್ಯ, ಶೋಷಣೆ ಅವಮಾನಗಳ ನಡುವೆಯೂ ಕಾರಂಜಿಯಂತೆ ಪುಟಿದೆದ್ದು ಸಾಧನೆ ಮಾಡಿದ ಮಂಗಳಮುಖಿಯರಿಗೆ ಏನೂ ಕಡಿಮೆ ಇಲ್ಲ. ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿಯವರ ಕೈಂಕರಣೆಗೊಂದು ಸಲಾಮ್. ಇವರ ಆತ್ಮಕಥೆ ಸಹ ಇದಾಗಲೇ ಪ್ರಕಟಣೆಗೊಂದು ಜನಪ್ರಿಯಗೊಂಡಿದೆ.
ನಿರೂಪಕಿಯಾಗಿ, ಮೇಯರ್ ಆಗಿ, ನ್ಯಾಯಾಧೀಶರಾಗಿ, ಪೊಲೀಸ್ ಅಧಿಕಾರಿಯಾಗಿ ಹೀಗೆ ಹಲವಾರು ಹುದ್ದೆಗಳನ್ನು ಅಲಂಕರಿಸಿ ಸಾಧನೆಗೈದ ಅನೇಕ ಮಂಗಳಮುಖಿಯರು ನಮ್ಮ ಮಧ್ಯೆ ಇದ್ದಾರೆ. ಇವರೆಲ್ಲರೂ ಉಳಿದ ಮಂಗಳಮುಖಿಯರೆಲ್ಲರಿಗೂ ಸ್ಛೂರ್ತಿಯಾಗಲಿ. ಬೀದಿ ಬೀದಿ ಬದಿಯಲ್ಲಿ ಚಪ್ಪಾಳೆ ತಟ್ಟಿ ಭಿಕ್ಷೆ ಬೇಡುವ ಇವರನ್ನು ನೋಡಿದಾಗ ನಿಜಕ್ಕೂ ಮನಸ್ಸಿಗೆ ಬೇಸರ ಎನಿಸುತ್ತದೆ.
– ಕೀರ್ತಿ ಕಿರಣ್ ಕುಮಾರ್





