ಮಾನವನಿಗೆ ಬಹುವಾಗಿ ಕಾಡಿದ, ಹಲವು ರೀತಿಯ ಕಲ್ಪನೆಗಳಿಗೆ ಒಳಪಟ್ಟ ಮತ್ತು ಜಿಜ್ಞಾಸೆಗೊಳಗಾದ ವಿಷಯ –
ಅದಕ್ಕೆ ಸಂಬಂಧಿಸಿದಂತೆ ಅಂತರ್ಜಾಲದಲ್ಲಿ ಕಂಡುಬಂದ ಲೇಖನ. ಆಸಕ್ತರಿಗಾಗಿ….
ಸಾವಿನ ನಂತರ ಸ್ವರ್ಗ ಸಿಗುತ್ತದೆ ಎಂಬ ಆಶೆಯಿಂದ ಮನುಷ್ಯನು ಜೀವನಪೂರ್ತಿ ಅನೇಕ ಪ್ರಯತ್ನಗಳನ್ನು ಮಾಡುತ್ತಾನೆ. ಯಾರೋ ಕೆಲವರು ಉಪವಾಸ ಮಾಡುತ್ತಾರೆ, ಇನ್ಯಾರೋ ದಾನಧರ್ಮ ಮಾಡುತ್ತಾರೆ, ಮತ್ತಾರೋ ತೀರ್ಥಯಾತ್ರೆ ಹೋಗುತ್ತಾರೆ, ಇನ್ನೂ ಕೆಲವರು ದೇವರಿಗೆ ಹರಕೆ ಹೊರುತ್ತಾರೆ.
ಸ್ವರ್ಗವೆಂದರೆ ಒಂದು ಗೃಹ ಸಮುಚ್ಚಯ (ಹೌಸಿಂಗ್ ಸೊಸೈಟಿ) ದಂತೆ, ಅಲ್ಲಿಗೆ ಪ್ರವೇಶಿಸಲು ಪುಣ್ಯದ ಅಂಕಗಳನ್ನು ಪಡೆಯಬೇಕು ಎನ್ನುವಂತೆ…..ಒಂದು ಕ್ಷಣ ಹೀಗೊಮ್ಮೆ ಯೋಚಿಸಿ…
ನಾವು ಈಗಾಗಲೇ ಸ್ವರ್ಗದಲ್ಲೇ ಬದುಕುತ್ತಿದ್ದೇವೋ? ಏನೋ… ಅಂತ.
ಬೆಳಿಗ್ಗೆ ಎದ್ದ ಕೂಡಲೇ ಸುತ್ತಮುತ್ತ ಒಮ್ಮೆ ಗಮನಿಸಿ.
ಒಂದು ಗುಂಡಿ ಒತ್ತಿದರೆ ಕತ್ತಲೆ ಬೆಳಕಾಗುತ್ತದೆ.
ಇನ್ನೊಂದು ಗುಂಡಿ ಒತ್ತಿದರೆ ಫ್ಯಾನ್ ತಿರುಗಲು ಆರಂಭಿಸುತ್ತದೆ.
ಮೂರನೇ ಗುಂಡಿ ಒತ್ತಿದರೆ ತಂಪಾದ ಗಾಳಿ ಕೋಣೆಯನ್ನು ತುಂಬುತ್ತದೆ.
ಕೊಳವೆ ತೆರೆದರೆ ನೀರು ಹರಿದು ಬರುತ್ತದೆ.
ಗ್ಯಾಸ್ ಹಚ್ಚಿದರೆ ಕೆಲವೇ ನಿಮಿಷಗಳಲ್ಲಿ ಊಟ ಸಿದ್ಧವಾಗುತ್ತದೆ.
ಜೇಬಿನಿಂದ ಮೊಬೈಲ್ ತೆಗೆದರೆ ಇಡೀ ಜಗತ್ತೇ ನಿಮ್ಮ ಅಂಗೈಯೊಳಗೆ ಕಾಣಿಸುತ್ತದೆ.
ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ನಿಮ್ಮ ಪ್ರೀತಿಪಾತ್ರರು ಕೆಲವೇ ಕ್ಷಣಗಳಲ್ಲಿ ನಿಮ್ಮ ಕಣ್ಣೆದುರಿಗೆ ಕಾಣಿಸಿಕೊಳ್ಳುತ್ತಾರೆ.
ಇಷ್ಟೆಲ್ಲಾ ಅದ್ಭುತ ಸೌಲಭ್ಯಗಳು…
ಆದರೆ ಇವೆಲ್ಲವನ್ನೂ ನಾವು ಬಹಳ ಸಾಮಾನ್ಯವೆಂದು ಪರಿಗಣಿಸುತ್ತೇವೆ. ಇವೆಲ್ಲವೂ ನಮ್ಮ ಜನ್ಮಸಿದ್ಧ ಹಕ್ಕು ಎಂಬಂತೆ ವರ್ತಿಸುತ್ತೇವೆ.
ಒಮ್ಮೆ ಊಹಿಸಿ…
ಇನ್ನೂರು ವರ್ಷಗಳ ಹಿಂದೆ ಇದ್ದ ಒಬ್ಬ ರಾಜನು ಇಂದು ನಿಮ್ಮ ಮನೆಗೆ ಬಂದರೆ, ಬಹುಶಃ ತನ್ನ ಅರಮನೆಗೆ ಹಿಂದಿರುಗಲು ಕೂಡ ಇಷ್ಟಪಡುವುದಿಲ್ಲ.
ಅವನು ಆಶ್ಚರ್ಯದಿಂದ ಕೇಳುತ್ತಾನೆ—
“ಇದೇನು?” — ಬಿಸಿ ನೀರು!
“ಹಾಗಾದರೆ ಇದು?” — ತಂಪಾದ ಗಾಳಿ!
“ಇದು ಏನು?” — ಇಡೀ ಜಗತ್ತಿನ ಮಾಹಿತಿ!
“ಇದು?” — ಹತ್ತು ನಿಮಿಷಗಳಲ್ಲಿ ಮನೆಗೆ ಬರುವ ಆಹಾರ!
ಆಗ ಅವನು ಬಹುಶಃ ನಗುತ್ತಾ ಹೇಳುತ್ತಾನೆ—
“ನಾನು ಜೀವನಪೂರ್ತಿ ರಾಜ್ಯಭಾರ ಮಾಡಿದೆ, ಯುದ್ಧಗಳನ್ನು ಗೆದ್ದೆ, ಅಪಾರ ಸಂಪತ್ತು ಸಂಪಾದಿಸಿದೆ… ಆದರೆ ಇಂತಹ ಸೌಕರ್ಯಗಳು ನನಗೂ ಎಂದಿಗೂ ಸಿಗಲಿಲ್ಲ.”

ಇದೇ ನಿಜ!
ಇಂದು ಒಬ್ಬ ಸಾಮಾನ್ಯ ಮನುಷ್ಯನೂ ಅನೇಕ ಸೌಲಭ್ಯಗಳ ವಿಷಯದಲ್ಲಿ ಹಿಂದಿನ ಕಾಲದ ಅತ್ಯಂತ ಶಕ್ತಿಶಾಲಿ ರಾಜರಿಗಿಂತಲೂ ಹೆಚ್ಚು ಶ್ರೀಮಂತ.
ಆದರೂ…
ನಾವು ಸಂತೋಷವಾಗಿಲ್ಲ.
ಏಕೆ?
ಏಕೆಂದರೆ ಮನುಷ್ಯನಿಗೆ ಸಿಕ್ಕಿದ್ದರ ಮೌಲ್ಯ ಕಾಲಕ್ರಮೇಣ ಕಡಿಮೆಯಾಗುತ್ತದೆ.
ಎ ಸಿ ನಡೆಯುತ್ತಿದೆ — ಆದರೆ ಸಂತೋಷವಿಲ್ಲ. ನಿಂತರೆ ಮಾತ್ರ ತೊಂದರೆ ಕಾಣುತ್ತದೆ.
ಜಾಲ ಸಂಪರ್ಕದಲ್ಲಿ ಮೊಬೈಲ್ ಕೈಯಲ್ಲಿದೆ — ಸಂತೋಷವಿಲ್ಲ. ಆದರೆ ನೆಟ್ವರ್ಕ್ ಹೋದರೆ ಜಗತ್ತೇ ಮುಗಿದಂತಾಗುತ್ತದೆ.
ಸ್ವಂತ ಮನೆ ಇದೆ — ಸಂತೃಪ್ತಿ ಇಲ್ಲ.
ಪಕ್ಕದ ಮನೆ ದೊಡ್ಡದಾಗಿದೆ ಎಂಬ ನೋವು.
ಸ್ವಂತ ಕಾರು ಇದೆ — ತೃಪ್ತಿ ಇಲ್ಲ.
ಅವರಿವರ ಕಾರು ದೊಡ್ಡದು ಎಂಬ ಚಿಂತೆ.
ಅಂದರೆ ಮನುಷ್ಯನು ತನ್ನ ಸ್ವರ್ಗದಲ್ಲೇ ನಿಂತು, ಇನ್ನೊಬ್ಬರ ಸ್ವರ್ಗದೊಂದಿಗೆ ತನ್ನನ್ನು ಹೋಲಿಸಿಕೊಂಡು ದುಃಖಪಡುತ್ತಾನೆ.
ಆದರೆ ಇದೇ ಭೂಮಿಯ ಮೇಲೆ ಮತ್ತೊಂದು ಲೋಕವೂ ಇದೆ…
ಇಂದಿಗೂ ಲಕ್ಷಾಂತರ ಜನ ಒಂದು ಬಿಂದಿಗೆ ನೀರಿಗಾಗಿ ಗಂಟೆಗಟ್ಟಲೆ ಸಾಲಿನಲ್ಲಿ ನಿಂತಿದ್ದಾರೆ.
ಲಕ್ಷಾಂತರ ಕುಟುಂಬಗಳಿಗೆ ಗಟ್ಟಿಮನೆಯೇ ಇಲ್ಲ.
ದಿನಕ್ಕೆ ಎರಡು ಹೊತ್ತಿನ ಊಟವೂ ಖಚಿತವಿಲ್ಲ.
ಮಕ್ಕಳ ಕನಸುಗಳು ಶಾಲೆಯ ಬಾಗಿಲು ತಲುಪುವ ಮುನ್ನವೇ ಒಡೆದು ಹೋಗುತ್ತವೆ.
ದೇಹ ಮುಚ್ಚಿಕೊಳ್ಳಲು ಸರಿಯಾದ ಬಟ್ಟೆಗಳೂ ಇಲ್ಲ.
ನಾವು “ಸಾಮಾನ್ಯ” ಎಂದು ಭಾವಿಸುವ ಸೌಲಭ್ಯಗಳೇ ಮತ್ತೊಬ್ಬರಿಗೆ ಜೀವನದ ದೊಡ್ಡ ಕನಸು.
ನಮಗೆ ಎಸಿ ರಿಮೋಟ್ ಸಿಗದಿದ್ದರೆ ಕೋಪ ಬರುತ್ತದೆ.
ಅವರಿಗೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮರದ ನೆರಳೂ ಸಿಗುವುದಿಲ್ಲ.
ನಾವು ಡಯಟ್ ಚಾರ್ಟ್ ಹುಡುಕುತ್ತೇವೆ.
ಅವರು ಮುಂದಿನ ಹೊತ್ತಿನ ಊಟದ ಬಗ್ಗೆ ಯೋಚಿಸುತ್ತಾ ಮಲಗುತ್ತಾರೆ.
ಇದನ್ನು ಗಂಭೀರವಾಗಿ ಗಮನಿಸಿದಾಗ ಅರ್ಥವಾಗುತ್ತದೆ…
ಸ್ವರ್ಗ ಮತ್ತು ನರಕ ಎನ್ನುವುದು ಸಾವಿನ ನಂತರ ಸಿಗುವ ಸ್ಥಳಗಳಲ್ಲ…
ಅವು ಇಲ್ಲಿಯೇ ಇವೆ… ಈ ಭೂಮಿಯ ಮೇಲೆಯೇ…
ಈ ನಗರದಲ್ಲೇ… ಈ ಬೀದಿಯಲ್ಲೇ… ಕೆಲವೊಮ್ಮೆ ಒಂದೇ ಗೋಡೆಯ ಆಚೆ ಈಚೆಗಳಲ್ಲೂ…
ಒಂದು ಮನೆಯವರ ಮಗ ತನ್ನ ಹೊಸ ಮೊಬೈಲ್ ಸ್ವಲ್ಪ ನಿಧಾನವಾಗಿದೆ ಎಂದು ಬೇಸರಪಡುತ್ತಾನೆ.
ಎದುರಿನ ಮನೆಯವರ ಮಗ ಆನ್ಲೈನ್ ಓದಲು ಮೊಬೈಲೇ ಇಲ್ಲ ಎಂದು ಕಣ್ಣೀರಿಡುತ್ತಾನೆ.
ಒಬ್ಬ ವ್ಯಕ್ತಿ ಬಿಸಿ ನೀರು ಐದು ನಿಮಿಷ ತಡವಾಗಿ ಬಂದಿತೆಂದು ದೂರುತ್ತಾನೆ.
ಇನ್ನೊಬ್ಬ ವ್ಯಕ್ತಿ ಇಂದು ನೀರು ಸಿಕ್ಕರೆ ಸಾಕು ಎಂದು ದೇವರನ್ನು ಪ್ರಾರ್ಥಿಸುತ್ತಾನೆ.
ವ್ಯತ್ಯಾಸ ಪರಿಸ್ಥಿತಿಗಳಲ್ಲಷ್ಟೇ ಇಲ್ಲ…
ವ್ಯತ್ಯಾಸ ದೃಷ್ಟಿಕೋನದಲ್ಲಿಯೂ ಇದೆ.
ಕೆಲವರು ಕಷ್ಟದ ಪರಿಸ್ಥಿತಿಯಲ್ಲಿಯೂ ನಗುವುದನ್ನು ಕಲಿತಿದ್ದಾರೆ.
ಇನ್ನೂ ಕೆಲವರು ಎಲ್ಲಾ ಸೌಕರ್ಯಗಳ ನಡುವೆಯೂ ದೂರುಗಳಿಂದ ಹೊರಬರಲಾರರು.

ಮನುಷ್ಯನ ಅತ್ಯಂತ ವಿಚಿತ್ರ ಅಭ್ಯಾಸವೇನೆಂದರೆ— ತನ್ನ ಬಳಿ ಇಲ್ಲದ್ದನ್ನು ಪ್ರತಿದಿನ ಲೆಕ್ಕ ಹಾಕುತ್ತಾನೆ…
ಆದರೆ ತನ್ನ ಬಳಿ ಇರುವುದನ್ನು ಎಂದಿಗೂ ಲೆಕ್ಕ ಹಾಕುವುದಿಲ್ಲ.
ಪ್ರತಿ ರಾತ್ರಿ ಮಲಗುವ ಮುನ್ನ ಕೇವಲ ಈ ಐದು ವಿಷಯಗಳನ್ನು ಗಮನಿಸಿದರೆ —
-ಇಂದು ನಾನು ಉಸಿರಾಡುತ್ತಿದ್ದೇನೆ.
-ಇಂದು ನನ್ನ ಬಳಿ ಕುಡಿಯಲು ನೀರು ಇದೆ.
-ಇಂದು ನನಗೆ ಊಟ ಸಿಕ್ಕಿದೆ.
-ಇಂದು ನನಗೆ ತಲೆಮರೆಸಿಕೊಳ್ಳಲು ಒಂದು ಮನೆ ಇದೆ.
-ಇಂದು ನನ್ನವರು ನನ್ನ ಜೊತೆಯಲ್ಲಿದ್ದಾರೆ
ಬಹುಶಃ ನಮ್ಮ ಜೀವನವೇ ಬದಲಾಗಬಹುದು.
ಬಹುಶಃ “ಸ್ವರ್ಗ” ಎನ್ನುವುದು ಒಂದು ಸ್ಥಳವಲ್ಲ…
*ಅದು ನಮ್ಮ ಮಾನಸಿಕ ಸ್ಥಿತಿ ಮತ್ತು ಅನುಭವ!*
ಹಾಗೆಯೇ “ನರಕ”ವೂ ಒಂದು ಸ್ಥಳವಲ್ಲ…
ಸ್ವರ್ಗೀಯ ಅನುಭವವನ್ನು ಮರೆಯುವುದು ನರಕ!

ನಮ್ಮ ಬಳಿ ಇರುವ ಸ್ವರ್ಗೀಯ ಅನುಭವಕ್ಕೆ ಕೃತಜ್ಞತೆ ಸಲ್ಲಿಸುವುದೇ ಸ್ವರ್ಗ.
ಸಿಕ್ಕಿರುವುದನ್ನು ಮರೆತು, ದೂರುಗಳಲ್ಲೇ ಬದುಕುವುದು ನರಕ.
ಸಾವಿನ ನಂತರ ಏನಾಗುತ್ತದೆ ಎಂಬುದು ಯಾರಿಗೂ ಖಚಿತವಾಗಿ ತಿಳಿದಿಲ್ಲ. ಡಿವಿಜಿಯವರು ಹೇಳುವಂತೆ *”ಹೋಗಿ ಬಂದವರಿಲ್ಲ; ಸುದ್ದಿ ತಂದವರಿಲ್ಲ”*
ಆದರೆ ಬದುಕಿರುವಾಗಲೇ ನಮಗೆ ಈ ಸುಂದರ ಭೂಮಿ, ಉಸಿರಾಡಲು ಗಾಳಿ, ಕುಡಿಯಲು ನೀರು, ತಿನ್ನಲು ಅನ್ನ, ಪ್ರೀತಿಸುವ ನಮ್ಮವರು, ಒಂದು ಗುಂಡಿ ಒತ್ತಿದರೆ ಸಾಕು .. ಲೆಕ್ಕವಿಲ್ಲದಷ್ಟು ಸೌಲಭ್ಯಗಳು, ಸುಖಭೋಗಗಳು ದೊರೆತಿವೆ.
ಇಷ್ಟೆಲ್ಲಾ ಇದ್ದೂ ನಾವು ಯಾವಾಗಲೂ ದುಃಖದಲ್ಲೇ ಇದ್ದರೆ…
ಅದಕ್ಕಿಂತ ದೊಡ್ಡ ದುರದೃಷ್ಟ ಮತ್ತೇನು?
ಬಹುಶಃ ಮೇಲಿರುವ ಭಗವಂತನು ನಗುತ್ತಾ ಹೀಗೆ ಹೇಳುತ್ತಿದ್ದಾನೇನೋ? :
“ನಿನ್ನನ್ನು ನಾನು ಸ್ವರ್ಗದಲ್ಲೇ ಇಟ್ಟಿದ್ದೇನೆ… ಆದರೆ ನೀನು ಅಲ್ಲಿಯೂ ದೂರುಗಳ ಕಚೇರಿಯನ್ನೇ ತೆರೆದಿದ್ದೀಯ!”
ಆದ್ದರಿಂದ ದೂರುಗಳನ್ನು ಎಣಿಸುವುದನ್ನು ಬಿಟ್ಟು “ಕೃತಜ್ಞತೆಗಳನ್ನು” ಎಣಿಸಿ. ಏಕೆಂದರೆ…
*”ಕೃತಜ್ಞತೆ” ಇರುವ ಹೃದಯದಲ್ಲೇ ನಿಜವಾದ ಸ್ವರ್ಗ ಇರುತ್ತದೆ*
ಕೊನೆಯಲ್ಲಿ ಡಿವಿಜಿಯವರ ಮಾತಿನಂತೆ…
ಬರದಿಹುದರೆಣಿನಿಕೆಯಲಿ ಬಂದಿಹುದ ಮರೆಯದಿರು ।
ಗುರುತಿಸು ಒಳಿತಿರುವುದನು ಕೇಡುಗಳ ನಡುವೆ ।।
ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು ।
ಹರುಷಕದೆ ದಾರಿಯೆಲೊ – ಮಂಕುತಿಮ್ಮ ।।





