ವಿವಾದದ ಮುಖ್ಯ ವಿಷಯ `ಮನೆ ಖರ್ಚುಆಗಿದ್ದು, ಅದರಿಂದ ಸಂಬಂಧಕ್ಕೆ ಧಕ್ಕೆ ಬರುವ ಸಾಧ್ಯತೆ ಇದ್ದರೆ, `ಹಾವೂ ಸಾಯಬಾರದು, ಕೋಲೂ ಮುರಿಯಬಾರದುಎಂಬ ತತ್ವ ಅನುಸರಿಸಿ……!

ಮಧ್ಯಮ ವರ್ಗದ ಒಂದು ಕುಟುಂಬದಲ್ಲಿ ಗಂಡಹೆಂಡತಿ ನಡುವೆ ಹೆಚ್ಚು ಚರ್ಚೆಯ ವಿಷಯವೆಂದರೆ, ಅದು ಮನೆ ಖರ್ಚಿನ ಬಗೆಗೆ ಇರುತ್ತದೆ. ಪ್ರತಿಯೊಂದು ಮನೆಯಲ್ಲೂ ನಡೆಯುವ ವಿವಾದದ ಚಿತ್ರಕಥೆ ಒಂದೇ ರೀತಿಯದ್ದಾಗಿರುತ್ತದೆ. ಅದನ್ನು ಬಹುಮತದ ಚಿತ್ರಕಥೆ ಎಂದೂ ಹೇಳಬಹುದು. ಅದರಲ್ಲಿ ಪತಿ ಹೇಳುತ್ತಾನೆ, “ಇತ್ತೀಚೆಗೆ ಮನೆ ಖರ್ಚು ಹೆಚ್ಚಾಗುತ್ತಿದೆ. ಸ್ವಲ್ಪ ಎಚ್ಚರಿಕೆಯಿಂದ ಮನೆ ನಡೆಸು. ಹಣ ಏನೂ ಮರದಿಂದ ಉದುರೋದಿಲ್ಲ.”

ಆ ಮಾತಿಗೆ ಹೆಂಡತಿ ಸುಮ್ಮನಿರೋದಿಲ್ಲ. ಅವಳು ಹೇಳುತ್ತಾಳೆ, “ಖರ್ಚು ಆಗೋದು ಎಲ್ಲ ನಿಮಗಾಗಿಯೇ…. ನಾನಂತೂ ಉಪ್ಪಿನಕಾಯಿ ಜೊತೆಗೇ ರೊಟ್ಟಿ ತಿನ್ನಬಲ್ಲೇ.”

ಆ ಮಾತಿಗೆ ಗಂಡ ಹೇಳುತ್ತಾನೆ, “ಉಪ್ಪಿನಕಾಯಿ ಜೊತೆಗೆ ರೊಟ್ಟಿ ತಿಂದು ಖುಷಿಯಾಗಿರು. ಆದರೆ ಎ.ಸಿ ಹಾಕಿಕೊಂಡು ಟಿವಿ ನೋಡ್ತಾ ಇರ್ತೀಯಾ….. ಅದರಿಂದ ವಿದ್ಯುತ್‌ ಬಿಲ್ ‌ಹೆಚ್ಚಿಗೆ ಬರುತ್ತೆ. ಅದಕ್ಕೇನಂತಿಯಾ?”

“ನಾನು ಟಿ.ವಿ ನೋಡೋದು ನಿಮಗೆ ಕಾಣುತ್ತೆ. ನೀವು ಉರಿಬಿಸಿಲಲ್ಲೂ ನೀರು ಕಾಯಿಸೋಕೆ ವಿದ್ಯುತ್‌ ಖರ್ಚು ಮಾಡ್ತೀರಾ, 8-10 ಸಲ ಚಹಾಕ್ಕೆ ಸಕ್ಕರೆ ಚಹಾಪುಡಿ ಬೇಕು. ಗ್ಯಾಸ್‌ ಖರ್ಚು ಆಗುತ್ತೆ. ಅದರ ಬಗ್ಗೆ ನೀವು ಮರೆತೇ ಬಿಡ್ತೀರಾ?”

ಮನೆಯ ಜೊತೆಗೆ `ಖರ್ಚು’ ಶಬ್ದ ಸೇರಿಕೊಂಡಿದೆ. ಅದರ ಬಗ್ಗೆ ಮನೆಯ ಬೇರೆ ಸದಸ್ಯರ ಅಭಿಪ್ರಾಯದ ವ್ಯಾಖ್ಯೆ ಕೂಡ ಬೇರೆಬೇರೆಯೇ ಆಗಿರುತ್ತದೆ. ಉದಾಹರಣೆಗೆ, ಒಂದು ಕುಟುಂಬದಲ್ಲಿ ಅತ್ತೆ ಮಾವ, ಗಂಡಹೆಂಡತಿ ಹಾಗೂ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರು ಹೊರಗೆ ಊಟ ಮಾಡಲೆಂದು ಹೋಟೆಲೊಂದಕ್ಕೆ ಹೋದಾಗ 1500 ರೂ. ಖರ್ಚು ಆಯಿತು. ಅತ್ತೆಗೆ ಹೊರಗೆ ಊಟ ಮಾಡುವುದರ ಅರ್ಥ ಮೈಗಳ್ಳತನ ಹಾಗೂ ಮೋಜಿನ ಪ್ರತೀಕವಾಗಿತ್ತು. ಅವರ ಪ್ರಕಾರ 1,500 ರೂ.ಗಳ ವ್ಯರ್ಥ ಖರ್ಚು ಆಗಿತ್ತು. ಊಟ ಮಾಡುತ್ತ ಅವರು ಮೇಲಿಂದ ಮೇಲೆ ಇದನ್ನೇ ಹೇಳುತ್ತಿದ್ದರು, “ಹೋಟೆಲ್ ‌ನಲ್ಲಿ ಊಟ ಮಾಡುವ ಬದಲು ಮನೆಯಲ್ಲಿಯೇ ಮಾಡಿ ತಿನ್ನಬಹುದಿತ್ತು. ಇಂದಿನ ಜನರು ಹೊರಗೆ ತಿಂದು ತಮ್ಮ ಹಾಗೂ ಮನೆಯ ಆರ್ಥಿಕ ಆರೋಗ್ಯವನ್ನು ಹದಗೆಡಿಸುತ್ತಿದ್ದಾರೆ.”

ಮಾವನ ದೃಷ್ಟಿಯಲ್ಲಿ ಈ ಖರ್ಚು ಸಂಬಂಧದಲ್ಲಿ ಸುಧಾರಣೆಯ ಹೂಡಿಕೆಯಾಗಿತ್ತು. ಮನೆಯವರೆಲ್ಲರೂ ಬಹಳ ದಿನಗಳ ನಂತರ ಒಟ್ಟಾಗಿ ಊಟಕ್ಕಾಗಿ ಸೇರಿರುವುದು ಅವರಿಗೆ ಬಹಳ ಖುಷಿ ನೀಡಿತ್ತು. ಇಂತಹ ಔಟಿಂಗ್‌ ಸಂಬಂಧಕ್ಕೆ ಅತ್ಯವಶ್ಯ. ಸೊಸೆಗೂ ಕೂಡ ಈ ಲಂಚ್‌ ಅವಶ್ಯಕತೆ ಇತ್ತು. ಏಕೆಂದರೆ ಆಕೆಯ ಸೊಂಟದಲ್ಲಿ ನೋವಿತ್ತು. ಹೊರಗೆ ಬಂದು ತಿಂದಿದ್ದರಿಂದ ಆಕೆಗೆ ಹತ್ತೆಂಟು ಕೆಲಸಗಳಿಂದ ಮುಕ್ತಿ ದೊರಕಿತ್ತು. ಮಕ್ಕಳು ಕೂಡ ಬರಲಿರುವ 1-2 ತಿಂಗಳು ಹೊರಗೆ ಊಟಕ್ಕೆ ಕರೆದುಕೊಂಡು ಹೋಗಪ್ಪ ಎಂದು ಕೇಳುವುದು ತಪ್ಪಿತು ಎನ್ನುವ ಚಿಂತೆ ಪತಿಯನ್ನು ಮುಕ್ತಗೊಳಿಸಿತು.

ನೋಡಿದಿರಾ? ಬೇರೆ ಬೇರೆ ದೃಷ್ಟಿಕೋನದ ಕಾರಣದಿಂದ ಒಂದೇ ಖರ್ಚು ಎಷ್ಟೊಂದು ಅರ್ಥಗಳನ್ನು ಕೊಟ್ಟಿತು ಎಂದು. ಒಬ್ಬರಿಗೆ ಒಂದು ಖರ್ಚು ವ್ಯರ್ಥ ಅನ್ನಿಸಿದರೆ, ಇನ್ನೊಬ್ಬರಿಗೆ ಅದು ಹೂಡಿಕೆ, ಮತ್ತೊಬ್ಬರಿಗೆ ಅದು ಅಗತ್ಯ, ಇನ್ನೊಬ್ಬರಿಗೆ ಅದು ನಿರಾಳತೆ.

ಎಲ್ಲಿ ದೃಷ್ಟಿಕೋನ ವಿಭಿನ್ನಾಗಿರುತ್ತದೋ ಮತ್ತು ಪರಸ್ಪರರಿಗಾಗಿ ಸ್ವೀಕಾರಾರ್ಹ ಆಗಿರುವುದಿಲ್ಲವೋ, ಅಲ್ಲಿಯೇ ವಿವಾದಗಳು ಸೃಷ್ಟಿಯಾಗುತ್ತವೆ. ಇಬ್ಬರು ವಿವಾದಗ್ರಸ್ತ ವ್ಯಕ್ತಿಗಳ ನಡುವೆ ಆರೋಗ್ಯಕರ ಸಂಪರ್ಕ ಇರುವುದಿಲ್ಲವೋ ಅವರ ನಡವೆ ಬಾಹ್ಯ ಹಸ್ತಕ್ಷೇಪ ಶುರುವಾಗುತ್ತದೆ. ಒಂದು ವೇಳೆ ವಿವಾದದ ವಿಷಯ ಮನೆ ಖರ್ಚು ಆಗಿದ್ದರೆ ಅಲ್ಲಿ ಗಂಡಹೆಂಡತಿಯ ಇಬ್ಬರೂ ತಾಯಂದಿರು ಹಸ್ತಕ್ಷೇಪ ಮಾಡುತ್ತಾರೆ. ಏಕೆಂದರೆ ಹುಡುಗನೊಬ್ಬ ತನ್ನ ತಾಯಿ ಮನೆ ಖರ್ಚು ಮಾಡಿದ್ದನ್ನು ನೋಡಿರುತ್ತಾನೆ. ಅದೇ ಸರಿಯಾದ ವಿಧಾನ ಎಂದು ಭಾವಿಸಿ, ಹೆಂಡತಿ ಕೂಡ ಹಾಗೆಯೇ ಮಾಡಬೇಕು ಎಂದು ಅವನು ಬಯಸುತ್ತಾನೆ. ಅದೇ ಮಾತು ಹೆಂಡತಿಗೂ ಅನ್ವಯಿಸುತ್ತದೆ. ತವರಿನಲ್ಲಿ ಅವಳು ತನ್ನ ತಾಯಿ ಖರ್ಚು ಮಾಡಿದ್ದನ್ನು ನೋಡಿರುತ್ತಾಳೆ. ಅದೇ ಗುಣಗಳು ಅವಳಲ್ಲಿ ಮೇಳೈಸುತ್ತವೆ.

ರಜನಿಯ ತಾಯಿ ರಾತ್ರಿ ಉಳಿದ ಆಹಾರವನ್ನು ಬಿಸಾಡುತ್ತಿರಲಿಲ್ಲ. ಅವರ ದೃಷ್ಟಿಯಲ್ಲಿ ಹಾಗೆ ಮಾಡುವುದು ಹಣ ಪೋಲು ಮಾಡಿದಂತೆ. ರಜನಿಗಿರುವ ಮತ್ತೊಂದು ವಿಚಿತ್ರ ಸಂಸ್ಕಾರವೆಂದರೆ ಸಂಜೆಯಾದ ಬಳಿಕ ಆಕೆ ಮನೆಯ ಎಲ್ಲ ಲೈಟುಗಳನ್ನು ಆನ್ ಮಾಡುತ್ತಾಳೆ. ಸಂಜೆ ಹೊತ್ತು ಮನೆಯನ್ನು ಕತ್ತಲಲ್ಲಿರುವುದು ಅವಳ ದೃಷ್ಟಿಯಲ್ಲಿ ಅಪಶಕುನ. ಈ ಎರಡೂ ಅಭ್ಯಾಸಗಳನ್ನು ತವರಿನಲ್ಲಿ ಕಲಿತುಕೊಂಡು ಬಂದಿದ್ದ ಆಕೆ ಅತ್ತೆಮನೆಯಲ್ಲಿ ತದ್ವಿರುದ್ಧ ಪದ್ಧತಿಯನ್ನು ಕಂಡಳು. ಆ ಮನೆಯಲ್ಲಿ ಅಂದಿನ ಆಹಾರವನ್ನು ಮರುದಿನ ತಿನ್ನುವುದಿರಲಿ, ಮಧ್ಯಾಹ್ನದ ಊಟವನ್ನು ರಾತ್ರಿ ತಿನ್ನುತ್ತಿರಲಿಲ್ಲ. ಇನ್ನೊಂದೆಡೆ, ಅಗತ್ಯವಿಲ್ಲದಾಗ  ಲೈಟು, ಫ್ಯಾನುಗಳು ಹಾಗೆಯೇ ಓಡುತ್ತ ಇದ್ದರೆ ಅತ್ತೆ ಅದನ್ನು ಸಹಿಸಿಕೊಳ್ಳುವುದಿಲ್ಲ.

ಮನೆ ಖರ್ಚಿಗೆ ಸಂಬಂಧಿಸಿದಂತೆ ಉದ್ಭವವಾಗುವ ವಿವಾದಗಳಲ್ಲಿ ತಾಯಂದಿರ ಹಸ್ತಕ್ಷೇಪದಿಂದ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆಗಳು ಹೆಚ್ಚು ಇರುತ್ತವೆ. ಸಾಮಾನ್ಯವಾಗಿ ಇಂತಹ ವಿವಾದಗಳಲ್ಲಿ ಅತ್ತೆ ತನ್ನ ಮಗನ ಪರವಹಿಸಿದರೆ, ತಾಯಿ ತನ್ನ ಮಗಳ ಪರವಹಿಸುತ್ತಾಳೆ. ತಮ್ಮ ತಮ್ಮ ಮಕ್ಕಳ ವ್ಯರ್ಥ ಖರ್ಚು ಕೂಡ ಅವರಿಗೆ ಅಗತ್ಯ ಹಾಗೂ ಬೇರೆಯವರ ಅಗತ್ಯ ಖರ್ಚು ಕೂಡ ವ್ಯರ್ಥ ಖರ್ಚು ಎನಿಸುತ್ತದೆ. ಅವರು ಇದೇ ಆಧಾರದ ಮೇಲೆ ತಮ್ಮ ತಮ್ಮ ಸಲಹೆ ನೀಡುತ್ತಾರೆ.

Ghar-kharch-main-parents

ಅಮ್ಮ ಅತ್ತೆಯ ಹಸ್ತಕ್ಷೇಪ ಎಷ್ಟು ಸರಿ?

ಒಂದು ವೇಳೆ ಮಗ ಸೊಸೆ ಸ್ವತಂತ್ರವಾಗಿ ಬೇರೆ ಮನೆಯಲ್ಲಿ ವಾಸಿಸುತ್ತಿದ್ದರೆ, ಬೇರೆಯವರ ಆರ್ಥಿಕ ಅವಲಂಬನೆಯಲ್ಲಿ ಇಲ್ಲದಿದ್ದರೆ, ತಾಯಿ ಅಥವಾ ಅತ್ತೆ ಅವರ ಮಧ್ಯೆ ಹಸ್ತಕ್ಷೇಪ ಮಾಡಲು ಹೋಗಬಾರದು. ಒಂದು ವೇಳೆ ಅತ್ತೆ ಹಸ್ತಕ್ಷೇಪ ಮಾಡಿದರೆ ಹೆಂಡತಿಗೆ ತೊಂದರೆ ಎನಿಸುತ್ತದೆ. ಹೆಂಡತಿಯ ತಾಯಿ ಹಸ್ತಕ್ಷೇಪ ಮಾಡಿದರೆ ಅದು ಗಂಡನಿಗೆ ತೊಂದರೆ ಎನಿಸುತ್ತದೆ. ಅವರಿಬ್ಬರೂ ಸ್ವತಃ ಮಧ್ಯಸ್ಥಿಕೆಯ ಪಾತ್ರದಿಂದ ದೂರವಿರಬೇಕು. ಗಂಡಹೆಂಡತಿ ಇಬ್ಬರೂ ತಾಯಿ ಅಥವಾ ಅತ್ತೆಯ ಸಲಹೆಯ ಬಗ್ಗೆ ಅನ್ಯಥಾ ಭಾವಿಸದೆ ಅದನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಮನೆ ನಡೆಸುವ ಕಲೆಯನ್ನು ಕಲಿತುಕೊಳ್ಳಬೇಕು.

ಆರೋಗ್ಯಕರ ಸಂಬಂಧವನ್ನು ಪ್ರೇರೇಪಿಸಿ

ಮಧುರಾ ತನ್ನ ಪತಿ ರಾಜೀವನ ಒಂದು ಅಭ್ಯಾಸದಿಂದ ಬೇಸತ್ತು ಹೋಗಿದ್ದಳು. ಮನೆಯ ಚಿಕ್ಕಪುಟ್ಟ ಖರ್ಚನ್ನು ರಾಜೀ ಚಾಚೂ ತಪ್ಪದೇ ನಮೂದಿಸಿ ಇಡುತ್ತಿದ್ದ. ಇದರ ಆಧಾರದ ಮೇಲೆ ಅವನು ಮುಂದಿನ ಪ್ಲಾನಿಂಗ್‌ ಮಾಡಲು ಯೋಜಿಸುತ್ತಿದ್ದ. ಆದರೆ ಮಧುರಾಗೆ ಇದು ಇಷ್ಟವಿರಲಿಲ್ಲ. ರಾಜೀವ್ ‌ಗೆ ತನ್ನ ಮೇಲೆ ನಂಬಿಕೆ ಇಲ್ಲ. ಅದಕ್ಕೆ ಲೆಕ್ಕ ಬರೆದಿಡಲು ಹೇಳುತ್ತಿದ್ದಾನೆ ಎಂದು ಅವಳಿಗೆ ಅನ್ನಿಸುತ್ತಿತ್ತು. ಅವಳಿಗೆ ಈ ಬಗ್ಗೆ ಕೆಡುಕೆನಿಸಲು ಮತ್ತೊಂದು ಕಾರಣವೆಂದರೆ, ಅವಳ ತಂದೆ ಎಂದೂ ಈ ರೀತಿ ಮಾಡುತ್ತಿರಲಿಲ್ಲ. ಈ ಕಾರಣದಿಂದ ಮಧುರಾ ಹಾಗೂ ರಾಜೀವ್ ನಡುವೆ ಆಗಾಗ ಜಗಳ ಆಗುತ್ತಿತ್ತು. ಅದೊಂದು ದಿನ ಮಧುರಾ ಕೋಪದಿಂದ ರಾಜೀವ್ ‌ಮನೆ ಖರ್ಚಿಗೆಂದು ಕೊಟ್ಟಿದ್ದ ಹಣವನ್ನು ಅವನ ಕೈಗೆ ಇಟ್ಟು ಹೇಳಿದಳು, “ಈಗ ನೀವೇ ಮನೆ ನಡೆಸಿ, ಲೆಕ್ಕಾನೂ ನೀವೇ ಬರ್ಕೊಳ್ಳಿ.”

ಮಧುರಾ ಈ ವಿಷಯವನ್ನು ಅಮ್ಮನ ಮುಂದೆ ಪ್ರಸ್ತಾಪಿಸಿದಾಗ, ಅವರು ಆಕೆಗೆ ತಿಳಿವಳಿಕೆ ಕೊಡುತ್ತಾ ಹೇಳಿದರು, “ರಾಜೀವ್ ಹಾಗೆ ಮಾಡ್ತಾ ಇರೋದು ಒಳ್ಳೆಯದೇ. ಮನೆಯ ಬಗ್ಗೆ ಅವನಿಗೆ ಎಷ್ಟೊಂದು ಆಸಕ್ತಿ ಇದೆ ಎನ್ನುವುದನ್ನು ಇದು ತೋರಿಸುತ್ತದೆ. ನಿನ್ನ ಅಪ್ಪ ಮನೆ ಖರ್ಚು ಹಾಗೂ ಉಳಿತಾಯದ ಬಗ್ಗೆ ಎಂದೂ ಮಹತ್ವ ಕೊಡಲಿಲ್ಲ. ಹೀಗಾಗಿ ಕುಟುಂಬದ ಜವಾಬ್ದಾರಿ ಸದಾ ನನ್ನ ಮೇಲೆಯೇ ಇರುತ್ತಿತ್ತು. ನೀನು ರಾಜೀವ್ ‌ಜೊತೆ ಜಗಳ ಆಡುವ ಬದಲು ಅವನ ಭಾವನೆಗಳನ್ನು ಅರ್ಥ ಮಾಡಿಕೊ ಹಾಗೂ ನಿನ್ನ ಯೋಜನೆಯ ಬಗೆಗೂ ಮನವರಿಕೆ ಮಾಡಿಕೊಡು. “ಇಬ್ಬರೂ ಸೇರಿಯೇ ಯಾವುದಕ್ಕೆ ಖರ್ಚು ಮಾಡಬೇಕು, ಯಾವುದಕ್ಕೆ ಬೇಡ ಎಂಬುದರ ಬಗ್ಗೆ ನಿರ್ಧರಿಸಬಹುದು. ಅದೇ ರೀತಿ ಎಷ್ಟು ಉಳಿತಾಯ ಮಾಡಬೇಕು, ಎಲ್ಲಿ ಮಾಡಬೇಕು ಎನ್ನುವುದರ ಬಗೆಗೂ ನಿರ್ಧರಿಸಿ,” ಅಮ್ಮ ಹೇಳಿದ ಪ್ರಕಾರ, ಮಧುರಾ ರಾಜೀವ್ ಜೊತೆ ಮಾತನಾಡಿ ಎಲ್ಲ ವಿವಾದವನ್ನು ಬಗೆಹರಿಸಿಕೊಂಡಳು.

ವಿವಾದ ಬಗೆಹರಿಸಿಕೊಳ್ಳುವ ಮನಸ್ಸಿದ್ದರೆ ಯಾವುದೇ ಬಗೆಯ ಸಮಸ್ಯೆಗಳನ್ನಾದರೂ ಇತ್ಯರ್ಥ ಪಡಿಸಿಕೊಳ್ಳಬಹುದು. ಇಬ್ಬರೂ ತಾಯಂದಿರು ಹಸ್ತಕ್ಷೇಪದ ಬದಲು ಗಂಡ ಹೆಂಡತಿಗೆ ಪರಸ್ಪರ ಮಾತುಕಥೆ ನಡೆಸಲು ಪ್ರೇರೇಪಿಸಬೇಕು.

ನನ್ನದಲ್ಲ, ನಮ್ಮದು

ಯಾವ ಮನೆಯಲ್ಲಿ ಹೆಂಡತಿ ಉದ್ಯೋಗಸ್ಥೆ ಆಗಿರುತ್ತಾಳೊ, ಅಲ್ಲಿ ಮನೆ ಖರ್ಚಿನ ಬಗ್ಗೆ ವಿವಾದ ಉಂಟಾಗಬಾರದು. ಏಕೆಂದರೆ ಅಲ್ಲಿ ಸಾಕಷ್ಟು ಆದಾಯ ಬರುತ್ತಿರುತ್ತದೆ. ಆದರೆ ಆಗುವುದು ಅದಕ್ಕೆ ತದ್ವಿರುದ್ಧ ದೃಷ್ಟಿಕೋನದ್ದು. ತನ್ನ ಖರ್ಚು ಅಗತ್ಯದ್ದು, ಬೇರೆಯವರು ಮಾಡುವುದು ದುಂದುವೆಚ್ಚ ಎಂದು ಅವರಿಗೆ ಅನಿಸುತ್ತದೆ. ತಮ್ಮ ಖರ್ಚನ್ನು ಪ್ರತಿಯೊಬ್ಬರೂ ತರ್ಕಬದ್ಧ ಎಂದು ಹೇಳುತ್ತಾರೆ.

ಮನೆ ಖರ್ಚಿನ ಬಗ್ಗೆ ನಡೆಯುವ ವಿವಾದದಲ್ಲಿ ಗೃಹಿಣಿಯಾದವಳು ಅಷ್ಟಿಷ್ಟು ತಲೆಬಾಗುತ್ತಾಳೆ. ಏಕೆಂದರೆ ಅವಳು ಗಳಿಸುವುದಿಲ್ಲ. ಆದರೆ ಉದ್ಯೋಗಸ್ಥೆ ಮಾತ್ರ ತಲೆ ಬಾಗಿಸುವುದಿಲ್ಲ. ಹೀಗಾಗಿ ಈ ತೆರನಾದ ವಿವಾದಗಳು,’ ನನ್ನದನ್ನು ನಾನು ನೋಡ್ಕೊಳ್ತೀನಿ, ನಿನ್ನದನ್ನು ನೀನು ನೋಡಿಕೊ,’ ಎಂಬ ಭಾವದಲ್ಲಿ ಅಂತ್ಯಗೊಳ್ಳುತ್ತವೆ.

ಇಂತಹ ಸ್ಥಿತಿ ಉದ್ಭವಿಸದಿರಲು ಇಬ್ಬರ ತಾಯಂದಿರು ಮದುವೆಗೂ ಮುಂಚೆಯೇ ಈ ವಿಷಯದ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡ ಬೇಕು. ಮದುವೆಯ ಬಳಿಕ ಜೀವನವನ್ನು ಶೇರ್‌ ಮಾಡಲು ಹೊರಟಿರುವಿರಿ. ಅಲ್ಲಿ ನನ್ನದು ನಿನ್ನದು ಎಂಬುದು ನಡೆಯುವುದಿಲ್ಲ. ಅಲ್ಲಿ ಏನಿದ್ದರೂ ನಮ್ಮದು ಎನ್ನುವ ರೀತಿಯಲ್ಲಿ ಜೀವಿಸಬೇಕು. ಅಲ್ಲಿ ಪರಸ್ಪರರನ್ನು ಗೌರವಿಸಬೇಕಾಗುತ್ತದೆ. ಪರಸ್ಪರರ ಒಪ್ಪಿಗೆಯಿಂದಲೇ ಖರ್ಚು ಮಾಡಲು ಕಲಿಯಬೇಕು. ಹಾಗಾಗದಿದ್ದರೆ ಮನೆ ಕುರುಕ್ಷೇತ್ರವಾಗುತ್ತದೆ.

ಸಲಹೆ ಒತ್ತಾಯವಾಗಬಾರದು

ಅಮ್ಮ ಅಥವಾ ಅತ್ತೆ, ಮಗ ಸೊಸೆಗೆ ಮನೆ ಖರ್ಚಿನ ಬಗ್ಗೆ ಯಾವುದೇ ಸಲಹೆ ಕೊಟ್ಟರೆ ಅದು ಸಲಹೆಯ ರೀತಿಯಲ್ಲಿರಲಿ. ಒತ್ತಾಯಪೂರ್ವಕ ಅಥವಾ ಹೇರಲ್ಪಟ್ಟ ವಿಷಯವನ್ನು ಇಂದಿನ ಯುವಪೀಳಿಗೆ ಒಪ್ಪುವುದಿಲ್ಲ. ಬದಲಿಗೆ ಅದನ್ನು ಜೋರಾಗಿ ಪ್ರತಿಭಟಿಸಲೂಬಹುದು.

ರಂಜಿತಾ ಮತ್ತು ಆಕೆಯ ಪತಿ ತಮ್ಮದೇ ಪ್ರತ್ಯೇಕ ಮನೆಯಲ್ಲಿ ವಾಸಿಸತೊಡಗಿದಾಗ ಆಕೆ ತನ್ನದೇ ಲೆಕ್ಕಾಚಾರದಲ್ಲಿ ಮನೆ ನಡೆಸತೊಡಗಿದಳು. ಉಳಿದ ಆಹಾರವನ್ನು ಫ್ರಿಜ್‌ ನಲ್ಲಿಟ್ಟು, ರಾತ್ರಿ ಊಟದ ಸಮಯದಲ್ಲಿ ಮತ್ತೆ ಬಿಸಿ ಮಾಡಿಕೊಳ್ಳುತ್ತಿದ್ದಳು.  ಅದೊಂದು ಸಲ ಅತ್ತೆ ತನ್ನ ಸೊಸೆಯ ಮನೆಗೆ ಬಂದಾಗ ಆಕೆ ಮಾಡುವುದನ್ನು ನೋಡಿ ನೀನು ಹೀಗೆ ಮಾಡುವುದು ತಪ್ಪು ಎಂದು ಹೇಳಿದಳು. ಅತ್ತೆ ಮೇಲಿಂದ ಮೇಲೆ ಈ ಬಗ್ಗೆ ಹೇಳತೊಡಗಿದಾಗ ರಜನಿ ಉತ್ತರ ಕೊಟ್ಟಳು, “ನಿಮ್ಮ ಮನೆಯಲ್ಲಿ ಹಾಗೆ ಮಾಡಲಿಕ್ಕಿಲ್ಲ, ಆದರೆ ಇದು ನನ್ನ ಮನೆ,” ರಜನಿಯ ಉತ್ತರ ಕೇಳಿ ಅತ್ತೆಯ ಮುಖ ಇಳಿದುಹೋಯಿತು.

ಮಗ ಸೊಸೆ ತಮ್ಮದೇ ಆದ ಸ್ವತಂತ್ರ ಮನೆಯಲ್ಲಿ ವಾಸಿಸುತ್ತಿದ್ದು, ಅವರ ಮನೆ ನಡೆಸುವ ರೀತಿ ನಿಮಗೆ ಸರಿ ಎನಿಸದಿದ್ದರೆ, ನೀವು ನಿಮ್ಮ ಅಭಿಪ್ರಾಯ ತಿಳಿಸಬಹುದು. ಆದರೆ ನೀವು ಹೀಗೆಯೇ ಮಾಡಿ ಎಂದು ಅದರ ಮೇಲೆ ಒತ್ತಡ ಹೇರುವಂತಿಲ್ಲ.

ನಿಮ್ಮ ಖರ್ಚನ್ನು ನೀವೇ ನಿರ್ವಹಿಸಿ

ಕೆಲವು ಪೋಷಕರು ತಮ್ಮ ಮಕ್ಕಳ ಬಗ್ಗೆ ಅತಿಯಾದ ಮೋಹ ಹೊಂದಿರುತ್ತಾರೆ. ಮದುವೆಯ ಬಳಿಕ ಅವರನ್ನು ಚಿಕ್ಕ ಮಗು ಎಂಬಂತೆ ಭಾವಿಸುತ್ತಾರೆ. ತಮ್ಮ ಮಕ್ಕಳ ಮನೆ ಖರ್ಚಿನ ಲೆಕ್ಕಪತ್ರ ತಮ್ಮ ಕೈಯಲ್ಲಿಯೇ ಇರಬೇಕೆಂದು ಬಯಸುತ್ತಾರೆ. ಬ್ಯಾಂಕ್ ವಿವರ, ಉಳಿತಾಯ ಮಾಹಿತಿ ಎಲ್ಲವೂ ತಮಗೆ ಗೊತ್ತಿರಬೇಕೆಂದು ಬಯಸುತ್ತಾರೆ. ಇದೇ ಗಂಡಹೆಂಡತಿಯ ನಡುವೆ ವಾದ ವಿವಾದಕ್ಕೆ ಕಾರಣವಾಗಬಹುದು. ಪೋಷಕರು ಹೀಗೆ ಮಾಡಬಾರದು. `ಮನಿ ಮ್ಯಾನೇಜ್‌ ಮೆಂಟ್‌’ ಬಗ್ಗೆ ಅವರನ್ನು ಸ್ವಾವಲಂಬಿಗಳಾಗಿಸಿ. ಏಕೆಂದರೆ ನೀವು ಖಾಯಂ ಆಗಿ ಅವರ ಜೊತೆ ಇರುವುದಿಲ್ಲ.

ಕೆಲವು ತಾಯಂದಿರ ಅಭ್ಯಾಸ ಹೇಗಿರುತ್ತದೆಂದರೆ, ಮಗ ಅಥವಾ ಮಗಳು ಹೆಚ್ಚುತ್ತಿರುವ ಮನೆ ಖರ್ಚಿನ ಬಗ್ಗೆ ಸ್ವಲ್ಪ ಗೋಳು ಹೇಳಿಕೊಂಡರೂ ಸಾಕು, ಅವರಿಗೆ ತಕ್ಷಣವೇ ಹಣ ಕೊಟ್ಟು ನೆರವು ನೀಡುತ್ತಾರೆ. ಇದಕ್ಕೆ ಅವರು ಪ್ರೀತಿ ಅಥವಾ `ಕೇರ್‌’ ಎಂದು ಹೆಸರು ಕೊಡುತ್ತಾರೆ. ಆದರೆ ಇದು ಪ್ರೀತಿಯಲ್ಲ, ಅವರನ್ನು ಹಾಳು ಮಾಡುವ ಕೆಲಸ. ಹೀಗೆ ಮಾಡುವುದರಿಂದ ಅವರು ಸರಿಯಾಗಿ ಮನೆ ನಿರ್ವಹಣೆ ಮಾಡುವುದಿಲ್ಲ, ಜೊತೆಗೆ ಉಳಿತಾಯ ಕೂಡ ಮಾಡುವುದಿಲ್ಲ.

ನೀವು ನಿಮ್ಮ ಮಗ ಅಥವಾ ಮಗಳ ಹಿತ ಬಯಸುವವರಾಗಿದ್ದರೆ, ಪ್ರೀತಿಯ ಹೆಸರಿನಲ್ಲಿ ಅವರ ಜೀವನದಲ್ಲಿ ಹಸ್ತಕ್ಷೇಪ ಮಾಡಬೇಡಿ. ಅವರಿಗೆ ಸಕಾಲಕ್ಕೆ ಕುಟುಂಬದ ಸುಖ ದುಃಖದ ಅರಿವು ಆಗಬೇಕು. ಮಕ್ಕಳಿಗೆ ಬಾಲ್ಯದಿಂದಲೇ ಹಣದ ಲೆಕ್ಕ ಇಡುವ ಬಗ್ಗೆ, ಉಳಿತಾಯದ ಬಗ್ಗೆ, ಅನಗತ್ಯ ಖರ್ಚುಗಳ ಮೇಲೆ ನಿಯಂತ್ರಣ ಇಡುವ ಬಗ್ಗೆ ಅಗತ್ಯವಾಗಿ ತಿಳಿಸಿ. ಏಕೆಂದರೆ ಅವರು ಭವಿಷ್ಯದಲ್ಲಿ ಉತ್ತಮ ಕುಟುಂಬ ಜೀವನ ನಡೆಸಲು ಸಾಧ್ಯವಾಗುತ್ತದೆ.

ವನಿತಾ ವಿಶ್ವನಾಥ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ