ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಸಮಾಜದಲ್ಲಿ ಬಹಳಷ್ಟು ಬದಲಾವಣೆ ಆಗಿರುವುದನ್ನು ನಾವು ಕಾಣುತ್ತೇವೆ. ಆದರೆ ವಿವಾಹ ವ್ಯವಸ್ಥೆ ಈಗಲೂ ತನ್ನ ಗಟ್ಟಿತನ ಉಳಿಸಿಕೊಂಡು ಬಂದಿದೆ. ಪಾರಂಪರಿಕ ಭಾರತದಲ್ಲಿ ಇದನ್ನು ಇನ್ನಷ್ಟು ಬಲಪಡಿಸಲು ಹಲವು ಬದಲಾವಣೆಗಳಾಗಿವೆ. ಇದೇ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯ ಲಿವ್ ಇನ್‌ ರಿಲೇಶನ್‌ಗಳಿಗೂ ಮಾನ್ಯತೆ ನೀಡಿದೆ. ಇಂದಿನ ಯುವಕ ಯುವತಿಯರು ಭಿನ್ನ ಸಂಸ್ಕೃತಿಯ ರಾಗಿ, ಭಿನ್ನ ಧರ್ಮದವರಾಗಿಯೂ ವಿವಾಹ ಬಂಧನದಲ್ಲಿ ಬಂಧಿಯಾಗುತ್ತಿದ್ದಾರೆ ಹಾಗೂ ಈ ಮದುವೆಗಳು ಯಶಸ್ವಿ ಕೂಡ ಆಗುತ್ತಿವೆ.

ಮ್ಯಾರೇಜ್‌ ಕೌನ್ಸೆಲರ್‌ ಡಾ. ಗೀತಾಂಜಲಿ ಇಂತಹ ದಿಟ್ಟ ಹೆಜ್ಜೆ ಇಡುತ್ತಿರುವ ಯುವತಿಯರಿಗೆ ಹೀಗೆ ಸಲಹೆ ನೀಡುತ್ತಾರೆ. ಅವರು ಅಂತರ್ಜಾತಿ ಅಥವಾ ಅಂತರ್ಧಾರ್ಮಿಕ ವಿವಾಹವಾಗುತ್ತಿದ್ದಾರೆ. ಇದು ಅವರಲ್ಲಿ ಹೊಸ ವಿಶ್ವಾಸವನ್ನು ತುಂಬುತ್ತದೆ. ಆದರೆ ಈ ರೀತಿಯ ಸಂಬಂಧಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವ ಮುಂಚೆ ಜಾತಿ, ಧರ್ಮಗಳನ್ನು ಒಂದು ಬದಿಗೆ ಇಟ್ಟುಬಿಡಿ. ಹೀಗೆ ಮಾಡುವುದರಿಂದ ಮಾತ್ರ ವೈವಾಹಿಕ ಜೀವನದಲ್ಲಿ ಸುಖಿಯಾಗಿರಬಹುದು.

24 ವರ್ಷದ ರುಕ್ಸಾನಾ ಹಿಂದೂ ಯುವಕನೊಬ್ಬನನ್ನು ಮದುವೆಯಾಗಿದ್ದಾಳೆ. ಈಗ ಅವಳು 1 ವರ್ಷದ ಮಗುವಿನ ತಾಯಿ ಕೂಡ. ಅವಳು ತನ್ನ ವೈವಾಹಿಕ ಜೀವನದಲ್ಲಿ ಪರಿಪೂರ್ಣ ಸಂತೃಪ್ತಳು ಹಾಗೂ ಖುಷಿಯಿಂದಿರುವುದು ಗೊತ್ತಾಗುತ್ತದೆ. `ನಿಮಗೆ ಯಾವುದೇ ಸಮಸ್ಯೆ ಆಗಲಿಲ್ಲವೇ?’ ಎಂಬ ಪ್ರಶ್ನೆಗೆ ಅವರು ಹೀಗೆ ಉತ್ತರಿಸುತ್ತಾರೆ, `ನನ್ನ ಗಂಡನ ಕುಟುಂಬದ ಕಡೆಯಿಂದ ಯಾವುದೇ ಸಮಸ್ಯೆ ಇರಲಿಲ್ಲ. ನನ್ನ ಕುಟುಂಬದವರಿಂದ ಅಷ್ಟಿಷ್ಟು ವಿರೋಧವಿತ್ತು. ನಾವಿಬ್ಬರೂ 10ನೇ ತರಗತಿಯಿಂದಲೇ ಪರಿಚಿತರಾಗಿದ್ದೆವು. ಬಳಿಕ ನಾವು ರಿಜಿಸ್ಟರ್‌ ಮದುವೆಯಾದೆವು. ಆ ಬಳಿಕ ನನ್ನ ಕುಟುಂಬದವರೂ ಈ ಮದುವೆಯನ್ನು ಒಪ್ಪಿಕೊಂಡರು.’

`ಒಂದು ವೇಳೆ ನಿಮ್ಮ ಪತಿಯ ಕುಟುಂಬದವರು ನಿಮ್ಮನ್ನು ಸ್ವೀಕರಿಸದೇ ಇದ್ದಿದ್ದರೆ ನೀವು ಪರಿಸ್ಥಿತಿಯನ್ನು ಹೇಗೆ ನಿರ್ವಹಿಸುತ್ತಿದ್ದಿರಿ?’ ಇದರ ಬಗ್ಗೆ ಬ್ಯೂಟಿಷಿಯನ್‌ ರೇಷ್ಮಾ ಅವರ ಅನುಭವಗಳನ್ನು ಆಲಿಸಿ. ಅವರ ವೈವಾಹಿಕ ಜೀವನಕ್ಕೆ ಈಗ 20  ತುಂಬಿದೆ. ರೇಷ್ಮಾ ಹೀಗೆ ಹೇಳುತ್ತಾರೆ, `ನಾನು ಎಲ್ಲವನ್ನು ಬಿಟ್ಟು ಪರಿಪೂರ್ಣವಾಗಿ ಬದಲಾಗಿರುವೆ. ನನ್ನ ಪತಿಯ ಕುಟುಂಬದವರು ಮದುವೆಯ ಬಗ್ಗೆ ಸಂಪೂರ್ಣ ವಿರೋಧವಾಗಿದ್ದರು. ನಮ್ಮ ಮದುವೆಗೆ ಗಂಡನ ಸೋದರಮಾವ ಹಾಗೂ ಅವರ ಸೋದರಿಯ ಹೊರತಾಗಿ ಬೇರಾರೂ ಬಂದಿರಲಿಲ್ಲ.

`ನಾವು `ನಿಕಾಹ್‌’ ಆದ ಬಳಿಕ 4 ವರ್ಷಗಳವರೆಗೆ ನನ್ನ ತಂದೆತಾಯಿಯ ಜೊತೆಗೇ ಇದ್ದೆ. ಆದರೆ ಅಲ್ಲಿ 3 ತಿಂಗಳು ಮಾತ್ರ ಇದ್ದೆ. ಏಕೆಂದರೆ ಅಲ್ಲಿ ನಾವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು. ಬಳಿಕ ಪ್ರತ್ಯೇಕವಾಗಿ ವಾಸಿಸತೊಡಗಿದೆ. ಈಗ ನಾವು ಖುಷಿಯಿಂದ ಜೀವನ ಸಾಗಿಸುತ್ತಿದ್ದೇವೆ.’

ಪ್ರೀತಿ ಅವರು ಕೂಡ ಅಂತರ್ಜಾತೀಯ ವಿವಾಹವಾಗಿದ್ದಾರೆ. ಅವರು ಈ ಕುರಿತಂತೆ ಹೀಗೆ ಹೇಳುತ್ತಾರೆ, `ಹೊಂದಾಣಿಕೆಯ ವಿಷಯ ಬಂದಾಗ, ನಾನು ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳಬೇಕಾಗಿ ಬರಲಿಲ್ಲ. ಏಕೆಂದರೆ ನನ್ನ ಕುಟುಂಬದವರು ಹೆಚ್ಚು ಉದಾರವಾದಿಗಳಾಗಿದ್ದಾರೆ. ನನ್ನ ಪೋಷಾಕುಗಳು ಹಾಗೂ ಧಾರ್ಮಿಕ ವಿಚಾರಗಳ ಕುರಿತಾಗಿಯೂ ಅವರು ಯಾವುದೇ ಕಟ್ಟುಪಾಡು ಹಾಕಿಲ್ಲ. ನಾನು ನನ್ನ ಧರ್ಮ ಪಾಲಿಸುವುದರಲ್ಲಿ ಯಾವುದೇ ಅಡ್ಡಿಗಳಿಲ್ಲ.’

ಮನೋರೋಗ ತಜ್ಞ ಡಾ. ಹೇಮಂತ್‌ ಅವರು ಹೇಳುವುದು ಹೀಗೆ, ಮದುವೆಗೂ ಮುಂಚೆ ಆಂತರಿಕ ಹಾಗೂ ಬಾಹ್ಯ ಪರಿಸ್ಥಿತಿಗಳ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು. ಅದರ ಜೊತೆ ಜೊತೆಗೆ ನಿಮ್ಮ ನಿರ್ಧಾರಗಳ ಬಗೆಗೂ ನಿಮಗೆ ವಿಶ್ವಾಸವಿರಬೇಕು. ನಿಮ್ಮನ್ನು ಮದುವೆಯಾಗಲಿರುವ ಹುಡುಗನ ಬಗೆಗೂ ಚೆನ್ನಾಗಿ ತಿಳಿದುಕೊಳ್ಳಿ. ಏಕೆಂದರೆ ಆ ವ್ಯಕ್ತಿ ಸಂದಿಗ್ಧ ಪರಿಸ್ಥಿತಿಯಲ್ಲಿ ನಿಮಗೆ ಜೊತೆ ಕೊಡುತ್ತಾನೋ ಇಲ್ಲವೋ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಬೇಕು.

ಡಾ. ಹೇಮಂತ್‌ ಅವರು ಆರ್ಥಿಕ ವಿಷಯಗಳ ಬಗ್ಗೆ ವಿಚಾರ ಮಾಡಲು ಸಲಹೆ ನೀಡುತ್ತಾರೆ. ಹೆಸರಾಂತ ವ್ಯಕ್ತಿಗಳು ಕೈಗೊಂಡ ನಿರ್ಧಾರಗಳು ಜನಸಾಮಾನ್ಯರಿಗೆ ಹೊಂದಾಣಿಕೆ ಆಗುವುದಿಲ್ಲ. ವಾಸ್ತವ ಬಹಳ ಕಹಿಯಾಗಿರುತ್ತದೆ. ನೀವು ಮನಸ್ಸಿನಿಂದ ಪಕ್ಕಾ ಆಗಿದ್ದರೆ, ಮದುವೆಯಾಗಲೇ ಬೇಕೆಂದು ನಿರ್ಧಾರ ಮಾಡಿದ್ದರೆ, ಸಂತೋಷದ ವಾತಾವರಣ ಸೃಷ್ಟಿಸಿಕೊಳ್ಳುವುದು ಮುಖ್ಯ. ಇಂತಹ ನಿರ್ಧಾರ ಕೈಗೊಳ್ಳುವ ಹುಡುಗಿಯರು ಒಂದು ಸಂಗತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪಾರಂಪರಿಕ ಭಾರತದಲ್ಲಿ ಹುಡುಗರಿಗಿಂತ ಹುಡುಗಿಯರೇ ಹೆಚ್ಚಾಗಿ ಹೊಂದಾಣಿಕೆ ಮಾಡಿಕೊಳ್ಳಬೇಕೆಂದು ಬಯಸಲಾಗುತ್ತದೆ. ಹೀಗಾಗಿ ಮದುವೆಯ ಬಳಿಕ ಹುಡುಗಿ ಪ್ರತಿಯೊಬ್ಬರ ಜೊತೆ ಖುಷಿಯಿಂದ ಇರಲು ಪ್ರಯತ್ನಿಸಬೇಕು. ನೀವು ಯಾರನ್ನಾದರೂ ಇಷ್ಟಪಡದೇ ಹೋದರೂ ಅದು ಅವರ ಅನುಭಕ್ಕೆ ಬರದೇ ಇರುವಂತೆ ನೋಡಿಕೊಳ್ಳಿ.

ಯಾವುದೋ ಒಂದು ಸಂಗತಿಯ ಬಗ್ಗೆ ನಿಮಗೆ ಮೇಲಿಂದ ಮೇಲೆ ಕಿರಿಕಿರಿ ಅನಿಸುತ್ತಿದ್ದರೆ, ನಿಮ್ಮ ಪತಿಯ ಜೊತೆಗೆ ಚರ್ಚಿಸಿ, ಪರಸ್ಪರ ಮಾತುಕತೆಯಿಂದಲೇ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅಂತರ್ಜಾತೀಯ ಅಥವಾ ಅಂತರ್ಧಾರ್ಮಿಕ ವಿವಾಹಗಳು ಯಾವಾಗ ಯಶಸ್ವಿಯಾಗುತ್ತವೆ ಎಂದರೆ, ಸ್ತ್ರೀಪುರುಷರಿಬ್ಬರೂ ತಮ್ಮ ಜಾತಿಯ ಹಾಗೂ ಧರ್ಮದ ಕಂದಾಚಾರಗಳನ್ನು ತೊರೆದು ಬಂದಾಗಲೇ. ಹಾಗಾಗಿ ಮಾನವೀಯ ಸಂಬಂಧಗಳಿಗೆ ಮಾತ್ರ ಬೆಲೆ ಕೊಡಿ.

ಡಾ. ಪ್ರೇಮಲತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ