ಗಂಡ 100% ಅಂಧ ವ್ಯಕ್ತಿ. ಐಎಎಸ್‌ ಪರೀಕ್ಷೆಯಲ್ಲಿ ಅವರಿಗೆ ಯಶಸ್ಸು ದೊರೆಯುವಲ್ಲಿ ಪತ್ನಿ ಹಗಲಿರುಳು ಶ್ರಮಿಸುತ್ತಾಳೆ. ತನ್ನ ಮೆಚ್ಚಿನ ಕೆಲಸ ಬಿಟ್ಟು, ಗಂಡ ಗ್ರಹಿಸಿಕೊಳ್ಳಬೇಕಾದ ಎಲ್ಲ ವಿಷಯಗಳನ್ನು ಅವರ ಮುಂದೆ ಕುಳಿತು ದಿನ ಗಟ್ಟಿಯಾಗಿ ಓದಿ ಹೇಳುತ್ತಾಳೆ. ಅಷ್ಟೇ ಅಲ್ಲ, ಕೆಲವು ವಿಷಯಗಳನ್ನು ರೆಕಾರ್ಡ್‌ ಕೂಡ ಮಾಡಿಕೊಡುತ್ತಾಳೆ. ಇದೆಲ್ಲದರ ಒಟ್ಟು ಫಲಶ್ರುತಿ ಗಂಡ ಐಎಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಾನೆ!

ಈ ಯಶೋಗಾಥೆ ಭಾರತದ ನಾಗರಿಕ ಪರೀಕ್ಷೆಯ ಇತಿಹಾಸದಲ್ಲಿಯೇ ಒಂದು ಮೈಲಿಗಲ್ಲಾಗಿ ನಿಲ್ಲುತ್ತದೆ. ಆ ದಾಖಲೆ ಬರೆದವರು ಮೈಸೂರಿನ ಸಿದ್ಧಾರ್ಥ ನಗರದ ಕೆಂಪಹೊನ್ನಯ್ಯ. ಅವರ ಈ ಯಶೋಗಾಥೆಗೆ ಕಾರಣೀಭೂತರಾದವರು ಅವರ ಪತ್ನಿ ಅಚಿಂತಾ.

ಬುದ್ಧಿಮಾಂದ್ಯ ಮಕ್ಕಳಿಗಾಗಿ ತರಬೇತಿ

ಅಚಿಂತಾ ಮೂಲತಃ ಬೆಂಗಳೂರಿನವರು. ಅವರ ತಂದೆ ಜಾರ್ಜ್‌ ವಿಲಿಯಂ ಕೊಡಗಿನಲ್ಲಿ ಶಿಕ್ಷಕರಾಗಿ ಬಹಳ ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತರಾಗಿ ಮೈಸೂರಿನಲ್ಲಿಯೇ ನೆಲೆಸಿದ್ದರು. ತಾಯಿ ಪದ್ಮಾ ವಿಲಿಯಂ ಕೂಡ ಶಿಕ್ಷಕಿ. ಹೀಗಾಗಿ ಅಚಿಂತಾರಿಗೆ ಮೈಸೂರೇ ಬಾಲ್ಯದ ಊರಾಗಿ, ಕಾರ್ಯಕ್ಷೇತ್ರದ ಊರಾಯಿತು.

ಮೈಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅಚಿಂತಾ, ಬೆಂಗಳೂರಿನಲ್ಲಿ `ಡಿಪ್ಲೋಮಾ ಇನ್‌ ಸ್ಪೆಷಲ್ ಎಜುಕೇಶನ್‌’ ಪೂರೈಸಿದರು. `ಬುದ್ಧಿಮಾಂದ್ಯ ಮಕ್ಕಳ ನಿರ್ವಹಣೆಗಾಗಿ ಒಂದು ಕೋರ್ಸ್‌ ಇದೆ. ಅದನ್ನು ನೀನ್ಯಾಕೆ ಮಾಡಬಾರದು?’ ಎಂದು ಅವರ ಚಿಕ್ಕಪ್ಪ ಲಾರೆನ್ಸ್ ನೀರೋ ಹೇಳಿದ್ದನ್ನು ಕೇಳಿ ಅಚಿಂತಾ ಆ ಕೋರ್ಸ್‌ ಪೂರೈಸಿದರು.

ಬುದ್ಧಿಮಾಂದ್ಯ ವ್ಯಕ್ತಿಗಳಿಗೆ ಸ್ವಯಂ ನೆರವು ಹಾಗೂ ದೈನಂದಿನ ಜೀವನ ನಿರ್ವಹಣೆಯ ಕೌಶಲ ತಿಳಿಸಿಕೊಟ್ಟರೆ ಅವರು ಚೆನ್ನಾಗಿಯೇ ಜೀವನ ಸಾಗಿಸಬಹುದು ಎಂಬ ಅರಿವು ಅಚಿಂತಾರಿಗೆ ಇತ್ತು. ಹೀಗಾಗಿ ಅವರು ಆ ತರಬೇತಿ ಪಡೆದು ಮೈಸೂರಿನಲ್ಲಿಯೇ ಕಾರ್ಯಪ್ರವೃತ್ತರಾದರು.

ಆರಂಭದಲ್ಲಿ ಅವರು `ಮೈತ್ರಿ ಚಾರಿಟೆಬಲ್ ಟ್ರಸ್ಟ್’ ನಡೆಸಲು ಶಾಲೆಯ ಹೆಡ್‌ ಮಿಸೆಟ್ರಸ್‌ ಆಗಿ ಕೆಲಸ ಮಾಡಿದರು. ಬಳಿಕ `ಸ್ನೇಹ ಕಿರಣ’ದಲ್ಲಿ ಬುದ್ಧಿಮಾಂದ್ಯ ಮಕ್ಕಳಿಗೆ ತರಬೇತಿ ನೀಡಿ ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆ ತರಲು ಪ್ರಯತ್ನಿಸಿದರು.

ಕೆಂಪಹೊನ್ನಯ್ಯರ ಪರಿಚಯ

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಚೌಡನಕುಪ್ಪೆ ಗ್ರಾಮದ ಅಂಧ ವ್ಯಕ್ತಿ ಕೆಂಪಹೊನ್ನಯ್ಯ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿಕೊಂಡಿದ್ದರು. ಅಷ್ಟೊತ್ತಿಗೆ ಅಚಿಂತಾ ಬುದ್ಧಿಮಾಂದ್ಯ ಮಕ್ಕಳ ಶಾಲೆಗಳಿಗೆ ಹೋಗಿ ಕಲಿಸುವುದನ್ನು ನಿಲ್ಲಿಸಿ ತಮ್ಮ ಮನೆಯಲ್ಲಿಯೇ 7-8 ಬುದ್ಧಿಮಾಂದ್ಯ ವ್ಯಕ್ತಿಗಳಿಗೆ ಆಶ್ರಯ ಕಲ್ಪಿಸಿ, ಅಂಧ ವ್ಯಕ್ತಿಗಳ ಪೋಷಕರ ಅಷ್ಟಿಷ್ಟು ತಲೆನೋವನ್ನು ಕಡಿಮೆ ಮಾಡಿದ್ದರು. ಹೀಗೆಯೇ ಒಂದು ದಿನ ಬನ್ನಿಮಂಟಪ ಬಸ್‌ಸ್ಟಾಪ್‌ನಲ್ಲಿ ಅಚಿಂತಾ ಬಸ್‌ಗಾಗಿ ಕಾಯುತ್ತಾ ನಿಂತಿದ್ದರು. ಅಲ್ಲಿ ಒಬ್ಬ ಅಂಧ ವ್ಯಕ್ತಿ ಕುಳಿತುಕೊಳ್ಳಲು ಪರದಾಡುತ್ತಿದ್ದರು. ಅದನ್ನು ಗಮನಿಸಿ ಅಚಿಂತಾ ಹತ್ತಿರ ಹೋಗಿ ಕುಳಿತುಕೊಳ್ಳಲು ಸ್ಥಳ ತೋರಿಸಿದ್ದಲ್ಲದೆ, ಸ್ವಲ್ಪ ಹೊತ್ತಿನ ಬಳಿಕ ಆತ ಹೋಗಬೇಕಾದ ಬಸ್ಸಿನಲ್ಲಿ ಕೂರಿಸಿ ಕಳಿಸಿದರು. ಈ ಮಧ್ಯೆ ಅವರ ನಡುವೆ ಪರಿಚಯ ಪ್ರಕ್ರಿಯೆ ನಡೆಯುತ್ತದೆ. ಅಚಿಂತಾ ತಾನು ಬುದ್ಧಿಮಾಂದ್ಯ ವ್ಯಕ್ತಿಗಳಿಗಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದನ್ನು ಕೇಳಿದ ಕೆಂಪಹೊನ್ನಯ್ಯ ತನಗೂ ಏನಾದರೂ ನೆರವು ಸಿಗಬಹುದೆಂಬ ಆಶಾಭಾವನೆಯಿಂದ ಒಂದು ವಿಷಯವನ್ನು ಅವರ ಮುಂದೆ ಪ್ರಸ್ತಾಪಿಸುತ್ತಾರೆ, “ಸ್ಪರ್ಧಾತ್ಮಕ ಪರೀಕ್ಷೆಗೆ ಕುಳಿತು ಯಾವುದಾದರೊಂದು ಸರ್ಕಾರಿ ಹುದ್ದೆ ಪಡೆದು ಕೊಳ್ಳಲೇಬೇಕೆಂಬ ಅಪೇಕ್ಷೆ ನನಗಿದೆ. ನನಗಾಗಿ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳನ್ನು ಓದಿ ಹೇಳುವವರು ಯಾರಾದರೂ ಸಿಗಬಹುದಾ? ಕೇಳಿ ಹೇಳ್ತಿರಾ….?” ಎಂದರು.

ಕೆಂಪಹೊನ್ನಯ್ಯರ ಮಾತಿಗೆ ಅಚಿಂತಾ ತಕ್ಷಣವೇ ಉತ್ತರ ಕೊಡದೇ, `ನಾನೇ ಏಕೆ ಅವರಿಗೆ ಪುಸ್ತಕಗಳನ್ನು ಓದಿ ಹೇಳಬಾರದು, ನನಗೆ ಈಗ ಹೇಗೂ ಅಷ್ಟೊಂದು ಕೆಲಸ ಇಲ್ಲ,’ ಎಂದು ಯೋಚಿಸಿ ಬಳಿಕ, “ನಾನೇ ನಿಮ್ಮ ಮುಂದೆ ಕುಳಿತು ನೀವು ತಂದುಕೊಡುವ ಪುಸ್ತಕಗಳನ್ನು ಓದಿ ಹೇಳಲು ಸಿದ್ಧ,” ಎಂದು ಹೇಳಿ ಅವರ ಕೈಗೆ ತಮ್ಮ ವಿಳಾಸದ ಕಾರ್ಡ್‌ನ್ನು  ಕೊಡುತ್ತಾರೆ.

“ನಾನು ಮೊದಲು `ಡಿಪ್ಲೋಮಾ ಇನ್‌ ಸ್ಪೆಷಲ್ ಎಜುಕೇಶನ್‌’ ಪರೀಕ್ಷೆಗಾಗಿ ಪುಸ್ತಕಗಳನ್ನು ಅವರ ಮುಂದೆ ಗಟ್ಟಿಯಾಗಿ ಓದಿ ಹೇಳಿದೆ. ಅಷ್ಟೇ ಅಲ್ಲ, ಅವರ ಪರೀಕ್ಷಾ ಸಹಾಯಕಿಯಾಗಿ  (ಸ್ಕ್ರೈವೆಬ್‌) ಪರೀಕ್ಷೆ ಬರೆದೆ. ಅದರಲ್ಲಿ ಅವರ ಹೆಸರು ಸೆಕೆಂಡ್‌ ಲಿಸ್ಟ್ ನಲ್ಲಿ ಬಂತು,” ಎಂದು ತಮ್ಮ ಮೊದಲ ಪರೀಕ್ಷೆಯ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು.

ಆಮೇಲೆ ಕೆಂಪಹೊನ್ನಯ್ಯ ಅಚಿಂತಾರ ಮನೆಗೆ ಹೋಗುವುದು, ಪುಸ್ತಕಗಳನ್ನು ಓದಿಸಿಕೊಳ್ಳುವುದು ನಡೆದೇ ಇತ್ತು. ಕೆಂಪಹೊನ್ನಯ್ಯ ಅಚಿಂತಾರ ಮುಂದೆ ವಿಧೇಯ ವಿದ್ಯಾರ್ಥಿಯಂತೆ ಕುಳಿತು ಆಲಿಸುವುದು, ಅದನ್ನು ಗ್ರಹಿಸುವುದು ಅಚಿಂತಾರಿಗೆ ಒಂದು ರೀತಿಯ ರೋಮಾಂಚನವನ್ನುಂಟು ಮಾಡುತ್ತಿತ್ತು. ಹಲವಾರು ತಿಂಗಳುಗಳ ಒಡನಾಟದಿಂದ ಅಚಿಂತಾರಿಗೆ ಕೆಂಪಹೊನ್ನಯ್ಯರ ಮೇಲೆ ಒಂದು ರೀತಿಯ ಪ್ರೀತಿಯ ಭಾವನೆ ಮೊಳಕೆ ಒಡೆದಿತ್ತು. ಈ ಕುರಿತು ಅಚಿಂತಾ ಹೀಗೆ ಹೇಳುತ್ತಾರೆ, “ಕೆಂಪಹೊನ್ನಯ್ಯರ ವ್ಯಕ್ತಿತ್ವ ನನಗೆ ಮೊದಲ ದಿನವೇ ಇಷ್ಟವಾಗಿತ್ತು. ಆ ಪ್ರೀತಿಯ ಮೊಳಕೆ ಕ್ರಮೇಣ ದೊಡ್ಡದಾಗುತ್ತಾ ಹೋಯಿತು.

“ಆದರೆ ಆ ಬಗ್ಗೆ ನಾನು ಅವರ ಮುಂದೆ ಎಂದೂ ಪ್ರಸ್ತಾಪಿಸಲು ಹೋಗಿರಲಿಲ್ಲ. ಸಮಯ ಬಂದಾಗ ಹೇಳೋಣ ಎಂದು ಹಾಗೆಯೇ ಸುಮ್ಮನಿದ್ದೆ. ಅಂತಹ ಒಂದು ಸಂದರ್ಭ ಒದಗಿ ಬಂದಾಗ ಅವರ ಮುಂದೆ ನನ್ನ ಪ್ರೀತಿಯ ಪ್ರಸ್ತಾಪ ಇಟ್ಟಾಗ ಅದು ಅವರಿಗೆ ಆಶ್ಚರ್ಯ ಉಂಟು ಮಾಡಿತ್ತು. ಅವರು ಸ್ವಲ್ಪ ಹೊತ್ತು ಮಾತಾಡದೆ ಹಾಗೆಯೇ ಕುಳಿತಿದ್ದರು.

ಬಳಿಕ ನನ್ನನ್ನು, “ನನ್ನಂಥ ಅಂಧ ವ್ಯಕ್ತಿಯನ್ನು ಕಟ್ಟಿಕೊಂಡು ನೀವೇಕೆ ಜೀವನವಿಡೀ ಹೆಣಗಾಡಬೇಕು? ನಿಮಗೆ ಒಳ್ಳೆಯ ಉದ್ಯೋಗವಿರುವ ಹುಡುಗನೇ ಸಿಗುತ್ತಾನೆ. ಮದುವೆಯಾಗಿ ಸುಖವಾಗಿರಿ,” ಎಂದು ತಮ್ಮ ಮಾತು ಮುಗಿಸಿದರು.

ಕೆಂಪಹೊನ್ನಯ್ಯ ಹಾಗೆ ಹೇಳಿದರೆಂದು ಅಚಿಂತಾ ಸ್ವಲ್ಪವೂ ಬೇಸರ ಮಾಡಿಕೊಳ್ಳಲಿಲ್ಲ. ಮದುವೆ ಆದರೆ ಅವರನ್ನೇ ಎಂದು ಅಚಿಂತಾ ಪಟ್ಟುಹಿಡಿದರು. ಅಚಿಂತಾರ ತಾಯಿ ಕೂಡ ಬುದ್ಧಿ ಹೇಳಿದರೂ ಅವರಲ್ಲೇನೂ ಬದಲಾವಣೆ ಕಂಡುಬರಲಿಲ್ಲ. ಕೊನೆಗೆ ಕೆಂಪಹೊನ್ನಯ್ಯರ ತಾಯಿ ಕುಣಿಗಲ್‌ನಿಂದ ಮೈಸೂರಿಗೆ ಬಂದು ಅಚಿಂತಾರನ್ನು ಭೇಟಿ ಮಾಡಿ, “ನನ್ನ ಅಂಧ ಮಗನನ್ನು ಮದುವೆಯಾಗಿ ನಿನ್ನ ಬಾಳನ್ನು ಕತ್ತಲೆಯಾಗಿಸಿಕೊಳ್ಳಬೇಡ. ನಿನಗೆ ಒಳ್ಳೆಯ ಹುಡುಗನೇ ಸಿಗುತ್ತಾನೆ,” ಎಂದು ಅವರೂ ಸಹ ಸಾಕಷ್ಟು ಬುದ್ಧಿವಾದ ಹೇಳಿದರು. ಆದರೆ ಅವರ ಮಾತಿಗೂ ಅಚಿಂತಾ ಸೊಪ್ಪು ಹಾಕಲಿಲ್ಲ.

“ನಾನು ಅವರನ್ನೇ ಮದುವೆಯಾಗೋದು. ಅವರು ಅಂಧ ವ್ಯಕ್ತಿ ಅಂತಾ ನನಗೆ ಅನಿಸುವುದೇ ಇಲ್ಲ. ಜೀವನದ ಬಗೆಗಿನ ಅವರ ಉತ್ಸಾಹ ನನಗೆ ಬಹಳ ಹಿಡಿಸಿದೆ. ಅವರ ಜೊತೆಯಲ್ಲೇ ಬಾಳಬೇಕೆನ್ನುವುದು ನನ್ನ ಆಸೆ,” ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದರು.

ಕೆಂಪಹೊನ್ನಯ್ಯ ಹಾಗೂ ಅಚಿಂತಾ ಅವರ ತಾಯಂದಿರಿಗೆ ಕೊನೆಗೆ ಒಪ್ಪಿಗೆ ಕೊಡಲೇ ಬೇಕಾದ ಅನಿವಾರ್ಯ ಸ್ಥಿತಿ ಉಂಟಾಯಿತು.

ಮದುವೆಗೆ ಒಪ್ಪಿಗೆ ದೊರೆತ ನಂತರ ಮತ್ತೊಂದು ತೊಡಕು ಉದ್ಭವಿಸಿತು. ಅಚಿಂತಾ ಕ್ರಿಶ್ಚಿಯನ್‌ ಸಂಪ್ರದಾಯದವರು. ಕೆಂಪಹೊನ್ನಯ್ಯ ಹಿಂದೂ. ಕೆಂಪಹೊನ್ನಯ್ಯ ಕುಟುಂಬದ ಕೆಲವರು ಹಾಗೂ ಊರಿನ ಕೆಲವರು “ಇದ್ಹೇಗೆ ಸಾಧ್ಯ?” ಎಂದು ಅಪಸ್ವರ ಎತ್ತಿದರು. ಎಲ್ಲಿ ತಮ್ಮ ಮದುವೆಗೆ ಕಲ್ಲು ಬೀಳುತ್ತದೋ ಎಂದು ಅಚಿಂತಾ ಕೆಂಪಹೊನ್ನಯ್ಯ ಆತಂಕದಲ್ಲಿದ್ದರು.

ಆದರೆ ಕೆಂಪಹೊನ್ನಯ್ಯನವರ ತಾಯಿ ಮಾತ್ರ ಜಾತಿಯ ಕಾರಣದಿಂದ ಮದುವೆಯನ್ನು ಮುರಿಯಲು ಸಿದ್ಧರಿರಲಿಲ್ಲ. ಅವರು ಅಷ್ಟೇ ನಿಷ್ಠುರವಾಗಿ, “ನನ್ನ ಅಂಧ ಮಗನ ಕೈ ಹಿಡಿಯಲು ತಾನಾಗಿಯೇ ಸ್ವಯಂ ಸ್ಛೂರ್ತಿಯಿಂದ ಒಪ್ಪಿಕೊಂಡು ಬಂದಿರುವ ಹುಡುಗಿಯನ್ನು ನಾನು ಯಾವುದೇ ಕಾರಣಕ್ಕೂ ನಿರಾಕರಿಸುವುದಿಲ್ಲ. ಅವಳನ್ನೇ ಮನೆ ತುಂಬಿಸಿಕೊಳ್ಳುತ್ತೇನೆ,” ಎಂದು ಹೇಳಿದರು. ಹೀಗಾಗಿ ಅವರ ಮದುವೆಗಿದ್ದ ಎಲ್ಲ ಅಡ್ಡಿ ಆತಂಕಗಳೂ ಕ್ರಮೇಣ ನಿವಾರಣೆಯಾದವು.

ಅಚಿಂತಾ ಕೆಂಪಹೊನ್ನಯ್ಯರ ಮದುವೆ ಮೊದಲು ಕ್ರಿಶ್ಚಿಯನ್‌ ಸಂಪ್ರದಾಯದ ಪ್ರಕಾರ ಮೈಸೂರಿನ ಚರ್ಚ್‌ನಲ್ಲಿ ನಡೆಯಿತು. ಕೆಲವು ದಿನಗಳ ಬಳಿಕ ಕುಣಿಗಲ್ ತಾಲ್ಲೂಕಿನ ಚೌಡನಕುಪ್ಪೆ ಗ್ರಾಮದಲ್ಲಿ ಹಿಂದೂ ವಿಧಿವಿಧಾನದ ಪ್ರಕಾರ ನಡೆಯಿತು.

ಮದುವೆಯ ಬಳಿಕ

ಮದುವೆಯಾಗುವ ಹೊತ್ತಿಗೆ ಕೆಂಪಹೊನ್ನಯ್ಯರಿಗೆ ಯಾವುದೇ ಉದ್ಯೋಗವಿರಲಿಲ್ಲ. ಅಚಿಂತಾ ಕೂಡ ತಮ್ಮ ಮನೆಯಲ್ಲಿ ಬುದ್ಧಿಮಾಂದ್ಯರಿಗಾಗಿ ನಡೆಸುತ್ತಿದ್ದ ಹಾಸ್ಟೆಲ್‌ನ್ನು ನಿಲ್ಲಿಸಿಬಿಟ್ಟಿದ್ದರು. ಹೀಗಾಗಿ ಅವರಿಗೆ ಬರುತ್ತಿದ್ದ ಅಷ್ಟಿಷ್ಟು ಅನಿಶ್ಚಿತ ಆದಾಯ ಕೂಡ ನಿಂತುಹೋಗಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆ ದಂಪತಿಗಳನ್ನು ಸಲಹಿದವರು ಅಚಿಂತಾರ ತಾಯಿ ಪದ್ಮಾ ವಿಲಿಯಂ.ಮದುವೆಯ ಬಳಿಕ ಅಚಿಂತಾ ಸ್ಪರ್ಧಾತ್ಮಕ ವಿಷಯ ವಾಚನ ಮಾಡುವುದು ಹಾಗೂ ಕೆಂಪಹೊನ್ನಯ್ಯ ಅದನ್ನು ಆಲಿಸುವ ನಿರಂತರ ಪ್ರಕ್ರಿಯೆ ಮುಂದುವರಿದಿತ್ತು. ಯಾವುದಾದರೂ ಚಿಕ್ಕ ಉದ್ಯೋಗ ಪಡೆದೇ ತೀರಬೇಕೆಂದು ಕೆಂಪಹೊನ್ನಯ್ಯ ಬಹಳ ಸಂಘರ್ಷ ನಡೆಸಿದ್ದರು. ಅಚಿಂತಾ ಅವರ ಬೆನ್ನಿಗೆ ನಿಂತು ಸದಾ ಪ್ರೋತ್ಸಾಹ ನೀಡುತ್ತಿದ್ದರು. ಎಲ್ಲಿ ಹೋದರೂ ಅವರ ಜೊತೆಗೇ ಹೋಗುತ್ತಿದ್ದರು.

2006ರಲ್ಲಿ ಒಮ್ಮೆ ಕೆಂಪಹೊನ್ನಯ್ಯ ಕೆಎಎಸ್‌ ಪರೀಕ್ಷೆಯನ್ನು ಸಹಾಯಕರ ನೆರವಿನಿಂದ ಬರೆದರೂ ಆ ಪರೀಕ್ಷೆಯಲ್ಲಿ ಅವರಿಗೆ ಯಶಸ್ಸು ಒಲಿದು ಬರಲಿಲ್ಲ. ಅಷ್ಟರಲ್ಲಿ ಕಾಲೇಜು ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಿರುವ ವಿಷಯ ಕೆಂಪಹೊನ್ನಯ್ಯರ ಕಿವಿಗೆ ಬಿದ್ದಿತು. ಈ ಪರೀಕ್ಷೆಗೆ ಅರ್ಜಿ ಹಾಕಿದ ಬಳಿಕ ಕೆಂಪಹೊನ್ನಯ್ಯ ಕನ್ನಡ ಸಾಹಿತ್ಯದ ಬೇರೆ ಬೇರೆ ಮಗ್ಗಲುಗಳ ಬಗ್ಗೆ ಅನೇಕ ಪುಸ್ತಕಗಳನ್ನು ಕ್ರೋಢೀಕರಿಸಿ ಅಚಿಂತಾರ ಮುಂದೆ ಇಟ್ಟರು. ಅವರು ಕನ್ನಡಕ್ಕೆ ಸಂಬಂಧಪಟ್ಟ ಒಂದೊಂದು ಪಾಠಗಳನ್ನೂ ಗಟ್ಟಿಯಾಗಿ, ಅರ್ಥವಾಗುವ ರೀತಿಯಲ್ಲಿ ಓದಿ ಹೇಳುತ್ತಿದ್ದರು.

ಹಳಗನ್ನಡದ ಗದ್ಯಪದ್ಯಗಳನ್ನು ಆರಂಭದಲ್ಲಿ ಓದುವುದು ಅಚಿಂತಾರಿಗೆ ಕಬ್ಬಿಣದ ಕಡಲೆ ಎನಿಸಿತು. ಆದರೆ ಅದರ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದ ಕೆಂಪಹೊನ್ನಯ್ಯ ಅಚಿಂತಾರಿಗೆ ಹಳಗನ್ನಡದ ಕಾವ್ಯವನ್ನು ಹೇಗೆ ಓದಬೇಕೆಂದು ತಿಳಿಸಿಕೊಟ್ಟರು. ಅಚಿಂತಾರ ಬೆಂಬಲದೊಂದಿಗೆ ಅಂತೂ ಕೆಂಪಹೊನ್ನಯ್ಯ ಕಾಲೇಜು ಉಪನ್ಯಾಸಕರ ಹುದ್ದೆಗೆ ಆಯ್ಕೆಯಾದರು. ಉದ್ಯೋಗ ಪಡೆದು ಕೊಳ್ಳಬೇಕೆಂಬ ಅವರ ತಪಸ್ಸಿಗೆ ಒಳ್ಳೆಯ ಫಲ ಸಿಕ್ಕಿತು. ಅವರ ಪ್ರಥಮ ನೇಮಕಾತಿ ಆದದ್ದು ಮೈಸೂರು ಜಿಲ್ಲೆ ಎಚ್‌.ಡಿ. ಕೋಟೆ ತಾಲ್ಲೂಕಿನ ಬಿ. ಮಟಕೆರೆಯ ಸರ್ಕಾರಿ ಕಾಲೇಜಿನಲ್ಲಿ. ಅಲ್ಲಿಂದ ಅವರು ಒಂಟಿಕೊಪ್ಪಲು ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.

ಕಾಲೇಜು ಉಪನ್ಯಾಸಕ ಹುದ್ದೆ ಯಾವುದೇ ಒಬ್ಬ ವ್ಯಕ್ತಿಗೆ ತೃಪ್ತಿ ಕೊಡುವ ಕೆಲಸ. ಅದರಿಂದಾಚೆಗೆ ಯಾರೂ ಯಾವುದೇ ವಿಶೇಷ ಪ್ರಯತ್ನ ಮಾಡಲು ಬಯಸುವುದಿಲ್ಲ. ಆದರೆ ಕೆಂಪಹೊನ್ನಯ್ಯ ಮಾತ್ರ ಇನ್ನೂ ಮುಂದೆ ಸಾಗಬೇಕೆಂಬ ಪ್ರಬಲ ಆಕಾಂಕ್ಷೆ ಹೊಂದಿದ್ದರು. ಎರಡು ಸಲ ಕೆಎಎಸ್‌ ಪರೀಕ್ಷೆಯಲ್ಲಿ ಯಶ ಕಾಣದೆ ತಮ್ಮ ಮೂರನೇ ಪ್ರಯತ್ನದಲ್ಲಿ ಅವರು ಯಶಸ್ಸು ಸಾಧಿಸಿದರು. ಆ ಪರೀಕ್ಷೆಯಲ್ಲಿ ಹಲವು ಅಭ್ಯರ್ಥಿಗಳು ಅಕ್ರಮ ನಡೆಸಿದ್ದರಿಂದ ಆ ಸಾಲಿನ ಇಡೀ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಡೆಹಿಡಿಯಿತು. ಆ ಫಲಿತಾಂಶವನ್ನು ತಡೆಹಿಡಿಯದೇ ಇದ್ದಿದ್ದರೆ ಕೆಂಪಹೊನ್ನಯ್ಯ ತಹಸೀಲ್ದಾರ್‌ ಆಗುವ ಅವಕಾಶ ಇತ್ತು.

ಕೆಎಎಸ್‌ ಪರೀಕ್ಷಾ ಫಲಿತಾಂಶ ತಡೆಹಿಡಿದ ಬಳಿಕ ಕೆಂಪಹೊನ್ನಯ್ಯ ಯುಪಿಎಸ್‌ಸಿ ನಡೆಸುವ ಐಎಎಸ್‌ ಪರೀಕ್ಷೆಯತ್ತ ತಮ್ಮ ಗಮನ ಕೇಂದ್ರೀಕರಿಸಿದರು. ಆ ಪರೀಕ್ಷೆಗಾಗಿ ಅಚಿಂತಾ ಹಿಂದಿನ ಪರೀಕ್ಷೆಗಳಿಗಿಂತ ಹೆಚ್ಚು ಓದಬೇಕಾದ ಅನಿವಾರ್ಯತೆ ಇತ್ತು. ಆಗಲೇ ಅವರ ಮಡಿಲಲ್ಲಿ ಒಬ್ಬ ಕಂದ ಬಂದುಬಿಟ್ಟಿದ್ದ. ಮಗು ಮಲಗಿದ ಮೇಲೆಯೇ ಓದುವುದು, ರೆಕಾರ್ಡ್‌ ಮಾಡುವುದು ಹೀಗೆ ವ್ಯವಸ್ಥಿತ ರೀತಿಯಲ್ಲಿ ಕೆಂಪಹೊನ್ನಯ್ಯರನ್ನು ಅಚಿಂತಾ ಅಣಿಗೊಳಿಸಿದರು. ಒಂದು ಸಲ ಅಚಿಂತಾರೇ `ಸ್ಕ್ರೈವೆಬ್‌’ ಆಗಿ ಪರೀಕ್ಷೆ ಬರೆದಿದ್ದರು. ಆದರೆ ಆ ಪರೀಕ್ಷೆಯಲ್ಲಿ ಯಶ ಅವರತ್ತ ಒಲಿಯಲಿಲ್ಲ. ಮೂರನೇ ಬಾರಿ ಮಾತ್ರ ಯಶಸ್ಸು ಅವರ ಕೈ ಬಿಡಲಿಲ್ಲ. ಯುಪಿಎಸ್‌ಸಿಯಲ್ಲಿ 340ನೇ ರಾಂಕ್ ಪಡೆದರು. ಹೀಗೆ ಪತ್ನಿ ಸಹಕಾರದಿಂದ ಕೆಂಪಹೊನ್ನಯ್ಯ ಜೀವನದಲ್ಲಿ ಬಹು ದೊಡ್ಡದ್ದನ್ನೇ ಸಾಧಿಸಿದ್ದರು.

“ಪತಿಯ ಸಾಧನೆಯ ಬಗ್ಗೆ ನೀವೇನು ಹೇಳುತ್ತೀರಿ?” ಎಂದು ಕೇಳಿದರೆ ಅಚಿಂತಾ ಹೀಗೆ ಉತ್ತರಿಸುತ್ತಾರೆ,

“ಕೆಂಪಹೊನ್ನಯ್ಯ ಅಸಾಮಾನ್ಯ ಗ್ರಹಿಕೆಯ ಸಾಮರ್ಥ್ಯ ಹೊಂದಿದ್ದರು. ಅವರ ಮುಂದೆ ನಾನು ಓದಿದರೆ ಸಾಕು, ಅದು ಅವರ ಮೆದುಳಿನಲ್ಲಿ ಅಚ್ಚೊತ್ತಿಬಿಡುತ್ತಿತ್ತು. ಕನ್ನಡ ಸಾಹಿತ್ಯದ ಬಗೆಗಿನ ಅವರ ಜ್ಞಾನ ಅಪಾರವಾಗಿತ್ತು.

“ಅವರ ಬಗ್ಗೆ ಒಂದು ಮಾತು ಹೇಳಲು ಇಷ್ಟಪಡುತ್ತೇನೆ. ನಾನು ಅವರನ್ನು ಎಂದೂ ಅಂಧ ವ್ಯಕ್ತಿ ಎಂಬಂತೆ ಕಂಡಿಲ್ಲ. ಅವರು ನನಗೆ ಇತರರ ಹಾಗೆ ಸಾಮಾನ್ಯ ವ್ಯಕ್ತಿ ಎಂಬಂತೆ ಗೋಚರಿಸುತ್ತಾರೆ. ಅವರ ಸಾಧನೆಯಲ್ಲಿ ನಾನು ನೆಪ ಮಾತ್ರ. ಅವರನ್ನು ಕೈಹಿಡಿದು ಮುಂದೆ ಕರೆದೊಯ್ದ ಸಂತೃಪ್ತಿ ಮಾತ್ರ ನನಗಿದೆ,” ಎಂದು ಹೆಮ್ಮೆಯಿಂದ ಹೇಳುತ್ತಾರೆ.

“ನೀವು ನಿಮ್ಮ ಪತಿಗಾಗಿ ಹಗಲಿರುಳು ಅಷ್ಟೊಂದು ವಿಷಯಗಳನ್ನು ಓದಿದಿರಿ, ಧ್ವನಿ ಮುದ್ರಿಸಿ ಕೊಟ್ಟಿರಿ. ಆ ಧ್ವನಿ ಮುದ್ರಿಕೆಗಳನ್ನೆಲ್ಲ ಏನು ಮಾಡಿದಿರಿ?” ಎಂಬ ಪ್ರಶ್ನೆಗೆ ಅಚಿಂತಾ ಹೀಗೆ ಉತ್ತರಿಸುತ್ತಾರೆ, “ನನ್ನ ಪತಿಯಂತೆಯೇ ಇತರ ಅಂಧ ವ್ಯಕ್ತಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕು, ಯಶಸ್ಸು ಸಾಧಿಸಿ ಸ್ವಾವಲಂಬಿ ಜೀವನ ನಡೆಸಬೇಕೆಂಬುದು ನನ್ನ ಆಶಯ. ಆ ನಿಟ್ಟಿನಲ್ಲಿ ಅಂಧ ವ್ಯಕ್ತಿಗಳಿಗೆ ಮಾರ್ಗದರ್ಶನ ನೀಡುತ್ತಿರುವ ಮೈಸೂರಿನ ಶಾರದಾದೇವಿ ನಗರದ `ಲೂಯಿ ಬ್ರೈಲ್‌ ದೃಷ್ಟಿ ವಿಕಲಚೇತನರ ಸೇವಾ ಪ್ರತಿಷ್ಠಾನ’ಕ್ಕೆ ಎಲ್ಲ ಧ್ವನಿ ಮುದ್ರಿಕೆಗಳನ್ನೂ ಕೊಟ್ಟಿದ್ದೇವೆ.”

ಫಲಿತಾಂಶದ ಬಳಿಕ

ಯುಪಿಎಸ್‌ಸಿ ಫಲಿತಾಂಶದ ಬಳಿಕ ಕೆಂಪಹೊನ್ನಯ್ಯ ಕರ್ನಾಟಕದಲ್ಲಿ ಮನೆ ಮಾತಾಗಿಬಿಟ್ಟರು. ಅವರ `ಸಾಧನೆಯ ಹಿಂದಿನ ಕಣ್ಣು’ ಅಚಿಂತಾರ ಬಗ್ಗೆಯೇ ಹೋದಲ್ಲೆಲ್ಲ ಮಾತು. ಮೈಸೂರು, ಬೆಂಗಳೂರು ಸೇರಿದಂತೆ ಅನೇಕ ಕಡೆ ಕೆಂಪಹೊನ್ನಯ್ಯ ಅಚಿಂತಾರನ್ನು ಸನ್ಮಾನಿಸಲಾಯಿತು. ಒಂದು ಪ್ರಮುಖ ಸಮಾರಂಭದಲ್ಲಿ ಕರ್ನಾಟಕದ ಎಲ್ಲ ಐಎಎಸ್‌ ಸಾಧಕರನ್ನು ಸನ್ಮಾನಿಸಲಾಯಿತು. ಅದರಲ್ಲಿ ಪ್ರಥಮ ಸ್ಥಾನ ಪಡೆದ ಕೋಲಾರದ ಕೆ.ಆರ್‌. ನಂದಿನಿ ಕೂಡ ಇದ್ದರು. ಅವರು ಕೆಂಪಹೊನ್ನಯ್ಯರ ಪಕ್ಕದಲ್ಲಿ ಕುಳಿತಿದ್ದ ಅಚಿಂತಾರನ್ನು ಅಭಿನಂದಿಸುತ್ತಾ, “ನಿಜಕ್ಕೂ ಇದು ಕೆಂಪಹೊನ್ನಯ್ಯರ ಸಾಧನೆಯಲ್ಲ, ಅಚಿಂತಾರ ಸಾಧನೆ,” ಎಂದು ಹೇಳಿದ್ದರು.

ಪೂರ್ಣಕುಂಭ ಸ್ವಾಗತ

ಬೇರೆಲ್ಲ ನಗರಗಳ ಸನ್ಮಾನಕ್ಕಿಂತ ಕೆಂಪಹೊನ್ನಯ್ಯ ಅಚಿಂತಾರಿಗೆ ಹುಟ್ಟೂರ ಸನ್ಮಾನ ಸ್ಮರಣೀಯ ಎನಿಸುತ್ತದೆ. ಕುಣಿಗಲ್ ತಾಲ್ಲೂಕಿನ ಚೌಡನಕುಪ್ಪೆ ಗ್ರಾಮದಲ್ಲಿ ಸನ್ಮಾನ ಏರ್ಪಡಿಸಲಾಗಿತ್ತು. ಇಡೀ ಊರಿಗೆ ಊರೇ ಆ ಸಮಾರಂಭದಲ್ಲಿ ಪಾಲ್ಗೊಂಡಿದ್ದು ವಿಶೇಷ. ಕೆಂಪಹೊನ್ನಯ್ಯ ದಂಪತಿಗಳನ್ನು ಊರ ಹೊರಭಾಗದಿಂದ ಬ್ಯಾಂಡು ಬಾಜಾ, ಪೂರ್ಣಕುಂಭ ಸ್ವಾಗತದೊಂದಿಗೆ ಊರ ಮಧ್ಯಭಾಗಕ್ಕೆ ಕರೆತರಲಾಯಿತು. ಎಲ್ಲರೂ ಕೆಂಪಹೊನ್ನಯ್ಯರ ಸಾಧನೆಯ ಬಗ್ಗೆ ಹೊಗಳಿದ್ದೇ ಹೊಗಳಿದ್ದು. ಅಚಿಂತಾರ ಬಗ್ಗೆಯೂ ಎಲ್ಲರೂ ಹೃದಯಪೂರ್ವಕವಾಗಿ ಮಾತನಾಡಿದರು.

ಅಂದು ಹಾಗೆ ಇಂದು ಹೀಗೆ

ಕೆಂಪಹೊನ್ನಯ್ಯ ಆಗ ಊರಿನವರಿಗೆ ಒಬ್ಬ ಸಾಧಾರಣ ವ್ಯಕ್ತಿ. ಅವರು ಬೇರೆ ಜಾತಿಯ ಹುಡುಗಿಯ ಜೊತೆ ಮದುವೆ ಆದಾಗ ಅವರ ಸಂಬಂಧಿಕರು ಹಾಗೂ ಊರಿನ ಕೆಲವರು, `ಆ ಹುಡುಗಿ ಕೆಂಪಹೊನ್ನಯ್ಯನ ಜೊತೆ ಅದೆಷ್ಟು ದಿನ ಇರ್ತಾಳೋ ನೋಡಬೇಕು. ಹೆಚ್ಚೆಂದರೆ ಆರು ತಿಂಗಳು ಅಥವಾ ಒಂದು ವರ್ಷ ಇದ್ದು ಹೋಗಿಬಿಡುತ್ತಾಳೆ,’  ಎಂದು ಏನೇನೋ ಮಾತನಾಡಿದ್ದರು.

ಗ್ರಾಮದಲ್ಲಿ ಸನ್ಮಾನ ಏರ್ಪಟ್ಟ ದಿನದಂದು ಹಿಂದೆ ಟೀಕಿಸಿ ಮಾತನಾಡಿದ್ದವರೇ ಅಂದು, `ನಿನ್ನ ತ್ಯಾಗ, ಪರಿಶ್ರಮದಿಂದ ನಮ್ಮ ಹುಡುಗ ಈ ಸಾಧನೆ ಮಾಡಲು ಸಾಧ್ಯವಾಯಿತು. ನೀನು ಚಮತ್ಕಾರವನ್ನೇ ಮಾಡಿಬಿಟ್ಟೆ. ನಮ್ಮೂರಿನ ಹೆಸರನ್ನು ಭಾರತದಲ್ಲೆಲ್ಲ ಕೇಳುವಂತೆ ಮಾಡಿದೆ,’ ಎಂದು ಮನಃಪೂರ್ವಕವಾಗಿ ಮಾತನಾಡಿದ್ದರು. ಆ ಮಾತುಗಳನ್ನು ಕೇಳಿ ಅಚಿಂತಾ ಆನಂದದ ಕಣ್ಣೀರು ಸುರಿಸಿದ್ದರು.

– ಅಶೋಕ ಚಿಕ್ಕಪರಪ್ಪ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ