ಬೌದ್ಧ ಗುಹಾಂತರ ದೇವಾಲಯವಾದ ಅಜಂತಾ ಗುಹೆಗಳ ವರ್ಣಮಯ ಚಿತ್ರಗಳು ಹಾಗೂ ಶಿಲ್ಪಕಲೆಯ ಬಗ್ಗೆ ಸವಿವರವಾಗಿ ತಿಳಿಯೋಣವೇ.....?
ಕಾಣದ ಕೈಗಳಿಂದ ನಿರ್ಮಿತವಾದ ಊಹೆಗೂ ನಿಲುಕದ ಬೌದ್ಧ ಗುಹಾಂತರ ದೇವಾಲಯ ಅಜಂತಾ. ಇಲ್ಲಿಯ ವರ್ಣರಂಜಿತ ಭಿತ್ತಿ ಚಿತ್ರಗಳು ಹಾಗೂ ಬುದ್ಧನ ಪ್ರತಿಮೆಗಳು ವಿಸ್ಮಯಕಾರಿ ಕಥೆಗಳನ್ನು ಸಾರುತ್ತಿವೆ.
ನನಗೆ ಮೊದಲಿನಿಂದಲೂ ಪ್ರವಾಸಕ್ಕಾಗಿ ಊರು ಸುತ್ತುವುದು, ಬೇರೆ ಬೇರೆ ಸ್ಥಳಗಳ ಐತಿಹಾಸಿಕ ಕಥೆಗಳನ್ನು ತಿಳಿದುಕೊಳ್ಳುವುದು ಎಂದರೆ ತುಂಬಾ ಕುತೂಹಲ. ನನಗೆ ಬಹಳ ದಿನಗಳಿಂದ ಅಂಜತಾ ಎಲ್ಲೋರ ಗುಹೆಗಳನ್ನು ನೋಡುವ ಬಯಕೆ ಇತ್ತು. ಅದರಂತೆ ನಾನು ಹಾಗೂ ನನ್ನ ಮನೆಯವರು ಆಗಸ್ಟ್ ತಿಂಗಳಲ್ಲಿ ಪ್ಲಾನ್ ಮಾಡಿ ಹೊರಟೇಬಿಟ್ಟೆ.

ಇತಿಹಾಸ
ಅಜಂತಾ ಗುಹೆಗಳು ಭಾರತದ ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಜಿಲ್ಲೆಯ ಲಂಗೋರ ನದಿಯ ಸುತ್ತ ಆವರಿಸಿಕೊಂಡಿದೆ. ಈ ಗುಹಾ ದೇವಾಲಯವನ್ನು ರಾಷ್ಟ್ರಕೂಟರು ಹಾಗೂ ಶಾತವಾಹನರು ನಿರ್ಮಿಸಿದ್ದು ನಮ್ಮ ಹಿಂದೂ ಸಂಸ್ಕೃತಿಯ ಐತಿಹಾಸಿಕ ಮಹತ್ವವನ್ನು ಪ್ರದರ್ಶಿಸುತ್ತದೆ.
ಈ ಗುಹಾಲಯ ಮೊದಲು ದಟ್ಟ ಅರಣ್ಯದಿಂದ ಸಂಪೂರ್ಣ ಮುಚ್ಚಿಹೋಗಿದ್ದು, ಬ್ರಿಟಿಷರ ಅವಧಿಯಲ್ಲಿ ಅಂದರೆ 1819ರಲ್ಲಿ ಬ್ರಿಟಿಷ್ ಅಧಿಕಾರಿ ಜಾನ್ ಸ್ಮಿತ್ ಹುಲಿಯನ್ನು ಬೇಟೆಯಾಡುತ್ತಾ ಈ ಗುಹೆಯನ್ನು ಬಂದು ತಲುಪಿದರು. ತದನಂತರ ಈ ತಾಣ ಜನರನ್ನು ಆಕರ್ಷಿಸುವ ಮೂಲಕ ಜಗತ್ಪ್ರಸಿದ್ಧಿ ಪಡೆಯಿತು. ಬ್ರಿಟಿಷರ ಕಾಲಾನಂತರ ಮೊಘಲರ ಆಳ್ವಿಕೆಯಲ್ಲಿ ಈ ತಾಣ ಹೈದರಾಬಾದ್ ನಿಜಾಮರ ಅಧೀನದಲ್ಲಿತ್ತು.
ಸ್ವಾತಂತ್ರ್ಯದ ನಂತರ ಮಹಾರಾಷ್ಟ್ರ ಸರ್ಕಾರ ಪ್ರವಾಸೋದ್ಯಮ ಮತ್ತು ಸಂಶೋಧನೆಗಳನ್ನು ಹೆಚ್ಚಿಸಲು ಉತ್ತಮ ಮೂಲಸೌಕರ್ಯ ಸೌಲಭ್ಯಗಳನ್ನು ನಿರ್ಮಿಸಿತು. ಇಂದು ಅಜಂತಾ ಗುಹೆಗಳು ಆಧುನಿಕ ಸೌಕರ್ಯಗಳೊಂದಿಗೆ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದ್ದು, ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.

ವೀಕ್ಷಣೆಗೆ ಸಕಾಲ
ಚಳಿಗಾಲದಲ್ಲಿ ಹವಾಮಾನ ಆಹ್ಲಾದಕರವಾಗಿದ್ದು, ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಹಾಗೆಯೇ ಮಾನ್ ಸೂನ್ ಸಮಯದಲ್ಲಿ ಬೆಟ್ಟ ಗುಡ್ಡ ಹಚ್ಚ ಹಸುರಿನಿಂದ ಕೂಡಿದ್ದು, ಗುಹೆಗಳ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಬೇಸಿಗೆ ಸಮಯದಲ್ಲಿ ಅತಿಯಾದ ತಾಪವಿರುವುದರಿಂದ ನಡೆಯಲು ಕಷ್ಟವಾಗುತ್ತದೆ. ಆದ್ದರಿಂದ ಪ್ರವಾಸಿಗರು ಬೇಸಿಗೆಯಲ್ಲಿ ಭೇಟಿ ಕೊಡುವುದನ್ನು ತಪ್ಪಿಸಬೇಕು. ಬದಲಿಗೆ ಚಳಿಗಾಲ ಹಾಗೂ ಮಾನ್ ಸೂನ್ ಸಮಯ ಅಜಂತಾ ಗುಹೆಗಳನ್ನು ವೀಕ್ಷಿಸಲು ಸೂಕ್ತ ಸಮಯ ಎನ್ನಬಹುದು.

ನಮ್ಮ ಪಯಣ
ಮೊದಲು ನಾವು ಅಜಂತಾ ಗುಹಾಲಯದ ಕಡೆ ಬೆಳಗ್ಗೆ 7 ಗಂಟೆಗೆ ಪಯಣ ಬೆಳೆಸಿದೆ. ದಾರಿಯಲ್ಲಿ ಸಾಯಿ ಹೋಟೆಲ್ ನಲ್ಲಿ ಮಹಾರಾಷ್ಟ್ರದ ಪ್ರಸಿದ್ಧಿ ಪಡೆದ ತಿಂಡಿಗಳಾದ ಸಾಬುದಾನಿ ಖಿಚಡಿ, ಮಿಸ್ ಪಲಾವ್ ತಿಂದು ಮುಂದೆ ಸಾಗಿದೆ. ಅಜಂತಾ ಗುಹಾಲಯದ ಪ್ರವೇಶ ಟಿಕೆಟ್ ಗಳನ್ನು ಮೊದಲೇ ಆನ್ ಲೈನ್ ನಲ್ಲಿ ಬುಕ್ ಮಾಡಿದ್ದೆ. ಪ್ರವೇಶ ದ್ವಾರದಿಂದ ಗುಹೆಯ ತನಕ ಬಸ್ ನಲ್ಲಿ ನಮ್ಮನ್ನು ಕರೆದುಕೊಂಡ ಹೋಗುತ್ತಾರೆ. ಬಸ್ ನಲ್ಲಿ 20 ನಿಮಿಷಗಳ ಕಾಲ ಕ್ರಮಿಸಿದರೆ ಸಿಗುವುದೇ ಅತ್ಯದ್ಭುತವಾದ ಊಹೆಗೂ ನಿಲುಕದ ಅಜಂತಾ ಗುಹಾಲಯ!

ದೇವಾಲಯದ ವಾಸ್ತುಶಿಲ್ಪ ಕಲೆ
ಅಜಂತಾ ಹಿಂದೂಗಳ ಬೌದ್ಧ ಗುಹಾ ಸ್ಮಾರಕವಾಗಿದ್ದು, ವರ್ಣಚಿತ್ರಗಳು ಮತ್ತು ರಾಕ್ ಕಟ್ ಶಿಲ್ಪಗಳನ್ನು ಒಳಗೊಂಡಿವೆ. ಆದರೆ ಇಲ್ಲಿ ಬಂಡೆಗಲ್ಲನ್ನು ಮೇಲಿನಿಂದ ಕೆಳವರೆಗೆ ಕೆತ್ತಿ ನಿರ್ಮಿಸಲಾಗಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ವಿಶೇಷವಾಗಿ ಇಲ್ಲಿನ ಶಿಲ್ಪಕಲೆಗಳು ಸನ್ನೆ, ಮುದ್ರೆ, ಭಂಗಿ ಮತ್ತು ರೂಪದ ಮೂಲಕ ಭಾವನೆಗಳನ್ನು ಪ್ರಸ್ತುತಪಡಿಸುತ್ತವೆ.





