ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಭವ್ಯವಾದ ಮಂದಿರವನ್ನು ನಿರ್ಮಿಸಲು ನೆರವೇರಿದ ಶಿಲಾನ್ಯಾಸದಲ್ಲಿ ದೇಶದ ಎಲ್ಲಾ ಭಾಗಗಳ ನದಿಗಳ ನೀರು ಮತ್ತು ಪುಣ್ಯಕ್ಷೇತ್ರಗಳ ಮೃತ್ತಿಕೆಯನ್ನು ಬಳೆಸಲಾಗಿತ್ತು. ಅಂತಹ ಪುಣ್ಯಕಾರ್ಯಕ್ಕೆ ಕನ್ನಡಿಗರ ಜೀವನದಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಿಂದಲೂ ಜುಲೈ 23ರಂದು ಕಾವೇರಿ ತೀರ್ಥ ಹಾಗೂ ಮೃತ್ತಿಯನ್ನು ಕಳುಹಿಸಿ, ಮನೆಯಿಂದಲೇ ರಾಮಮಂದಿರದ ಶಿಲಾನ್ಯಸ ನೋಡಿ ಸಂಭ್ರಮಿಸಿದ್ದ ತಲಕಾವೇರಿಯ ಪ್ರಧಾನ ಅರ್ಚಕರಾದ ಟಿ.ಎಸ್. ನಾರಾಯಣಾಚಾರ್ ಸೇರಿದಂತೆ ಅವರ ಹಿರಿಯ ಸೋದರ, ಪತ್ನಿ ಹಾಗೂ ಇಬ್ಬರು ಸಹಾಯಕ ಅರ್ಚಕರು ಮತ್ತು ಅವರ ಮನೆಯ ಸಾಕು ಪ್ರಾಣಿಗಳೂ ಸೇರಿದಂತೆ ಎಲ್ಲರೂ ಮೊನ್ನೆ ಗುರುವಾರದಿಂದ ಕಣ್ಮರೆಯಾಗಿದ್ದಾರೆ.

ಮೊನ್ನೆ ಗುರುವಾರ ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಕಾವೇರಿಯ ಉಗಮ ತಲಕಾವೇರಿಯ ಪಕ್ಕದ ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿ ಭಾರೀ ಜಲಸ್ಫೋಟವಾಗಿ ಭೂಕುಸಿತದಿಂದ ಅವರುಗಳು ವಾಸಿಸುತ್ತಿದ್ದ ಮನೆಗಳು ಸಂಪೂರ್ಣ ಭೂಮಿಯೊಳಗೆ ಮುಚ್ಚಿಹೋಗಿದ್ದು, ಎಲ್ಲರೂ ಬಹುತೇಕ ಜೀವಂತ ಸಮಾಧಿಯಾಗಿರುವ ಶಂಕೆಯಿದೆ ಕೊಡಗಿನಾದ್ಯಂತ ಮೈಚಾಚಿ ಇಷ್ಟೂ ವರ್ಷಗಳ ಕಾಲ ರಮಣೀಯವಾಗಿದ್ದ ಪಶ್ಚಿಮ ಘಟ್ಟ ಇದೀಗ ನರಕ ಸದೃಶ್ಯದಂತೆ ಬಾಸವಾಗುತ್ತಿದೆ. ಈ ಮೂರು ವರ್ಷಗಳ ಕೆಳಗೆಯೂ ಇಂತಹದ್ದೇ ಪ್ರಸಂಗ ನಡೆದು ಎಲ್ಲರ ಪರಿಶ್ರಮದಿಂದ ಸರಿಹೋಗುತ್ತಿದ್ದಂತೆಯೇ ಮತ್ತೊಮ್ಮೆ ಈ ದುರಂತ ನಡೆದು ಎಲ್ಲರನ್ನೂ ನಿಬ್ಬೆರಗಾಗಿಸಿದೆ. ಕಳೆದ ನಾಲ್ಕು ದಶಕಗಳಿಂದಲೂ ತಲಕಾವೇರಿಯಲ್ಲೇ ನೆಲೆಸಿರುವ ಟಿ.ಎಸ್. ನಾರಾಯಣಾಚಾರ್ ತೀರ್ಥಕ್ಷೇತ್ರದ ಅರ್ಚಕರಷ್ಟೇ ಆಗಿರದೆ ಹಿಂದೆ ಭಾಗಮಂಡಲ ಪಂಚಾಯತ್ ಮಂಡಲ ಪ್ರಧಾನರಾಗಿಯೂ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವಹಿಂದೂ ಪರಿಷದ್ ಮತ್ತು ಹಿಂದೂ ಜಾಗರಣಾವೇದಿಕೆಯೊಂದಿಗೆ ನಿಕಟವಾದ ಸಂಪರ್ಕಹೊಂದಿದ್ದ ಒಬ್ಬ ಪ್ರಗತಿಪರ ಧಾರ್ಮಿಕ ವ್ಯಕ್ತಿಯಾಗಿದ್ದರು. ಕೇವಲ ಮೂರು ದಿನಗಳ ಹಿಂದೆಯೇ ಪರಿಸರ ಕಾಳಜಿಯಿಂದ ಗಿಡ ನೆಡುವ ಕಾರ್ಯಕ್ರಮದಲ್ಲಿಯೂ ಸಕ್ರೀಯವಾಗಿ ಭಾಗಿಯಾಗಿದ್ದರು.

ಅವರ ಮನೆ ಗುಡ್ಡದಲ್ಲಿರುವುದರಿಂದ ಇಂತಹ ಅವಘಡಗಳು ಸಂಭವಿಸ ಬಹುದು ಎಂದು ಊಹಿಸಿ, ಶೀಘ್ರದಲ್ಲಿಯೇ ಮನೆ ಖಾಲಿ ಮಾಡಿ ಬೇರೆಡೆ ತೆರಳುವಂತೆ ನೋಟೀಸ್ ಕೊಟ್ಟಿದ್ದರೂ, ತಾಯಿ ಕಾವೇರಮ್ಮ ನೋಡಿಕೊಳ್ಳುತ್ತಾಳೆ ಬಿಡಿ ಎಂಬ ಬಂಢ ದೈರ್ಯ ತೋರಿದ್ದು ಅವರ ಜೀವಕ್ಕೇ ಕುತ್ತಾದದ್ದು ನಿಜಕ್ಕೂ ದುಖಃಕರವೇ ಸರಿ.
ಆದರೆ ಇಂತಹ ದೈನೇಸಿ ಸ್ಥಿತಿಗೆ ಬರಲು ಕಾರಣವೇನು? ಇದಕ್ಕೆ ಕಾರಣೀ ಭೂತರು ಯಾರು? ಇಂತಹ ಪ್ರಕೃತಿ ವಿಕೋಪಕ್ಕೆ ಕೊನೆ ಎಂದು? ಇದಕ್ಕೆ ಶಾಶ್ವತ ಪರಿಹಾರವೇನು? ಎಂದು ಯಾರಾದರೂ ಯೋಚಿಸಿದ್ದಾರಾ?

ಇಪ್ಪತೈದು ಮುವತ್ತು ವರ್ಷಗಳ ಹಿಂದೆ ಇದಕ್ಕಿಂತಲೂ ಹೆಚ್ಚು ಜೋರಾಗಿ ಎಲ್ಲಾ ಕಡೆಯಲ್ಲೂ ಮಳೆ ಬರುತ್ತಿತ್ತು. ಅಂದು ವಾರಗಟ್ಟಲೆ ನಿರಂತರವಾಗಿ ಒಂದು ಘಳಿಗೆಯೂ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದರೂ ಗುಡ್ಡಗಳು ಉರುಳುವುದಾಗಲೀ, ಊರಿಡೀ ಮುಳುಗುವುದಾಗಲಿ, ಮನೆಗಳು ಬೀಳುವುದಾಗಲಿ, ಪ್ರಾಣ ಹಾನಿಯಾಗಲೀ ಕೇಳಿಯೇ ಇರಲಿಲ್ಲ. ಆದರೆ ಈಗ ಕೇವಲ ಮೂರ್ನಾಲ್ಕು ದಿನ ಬಿದ್ದ ಜಡಿ ಮಳೆಗೆ ಇಡೀ ಊರಿಗೆ ಊರೇ ಮುಳುಗಿ ನಾಶವಾಗಲು ಕಾರಣವೇನು? ಎಂದು ಯೋಜಿಸಿದರೆ ಬರುವ ಉತ್ತರವೇ ಮನುಷ್ಯರ ಸ್ವಾರ್ಥ.





