ಉತ್ತರ ಗೋವಾದ ಅರ್ಪೋರದ “ಬಿರ್ಚ್ ಬೈ ರೊಮಿಯೊ ಲೇನ್” ನೈಟ್ಕ್ಲಬ್ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟ 25 ಮಂದಿಯಲ್ಲಿ ಬೆಂಗಳೂರು ಮೂಲದ ಯುವಕ ಇಶಾಕ್ ಸಹ ಒಬ್ಬ ಎಂದು ಗೋವಾದ ಹಣಜುಣ ಪೊಲೀಸರು ಹೇಳಿದ್ದಾರೆ.
ಬೆಂಗಳೂರಿನಿಂದ ಅರ್ಪೋರಾ ನೈಟ್ ಕ್ಲಬ್ಗೆ ಬಂದಿದ್ದ ಇಶಾಕ್, ಕ್ಲಬ್ನಲ್ಲಿ ಘಟನೆ ನಡೆಯುವ ಮುಂಚೆಯೇ ಹೊರಗೆ ಬಂದಿದ್ದ. ಆದರೆ, ಕ್ಲಬ್ನಲ್ಲಿ ಮೊಬೈಲ್ ಬಿಟ್ಟು ಬಂದ ಕಾರಣ ಮರಳಿ ಕ್ಲಬ್ಗೆ ತೆರಳಿದ್ದಾನೆ. ಈ ವೇಳೆ ಕ್ಲಬ್ನಲ್ಲಿ ದಟ್ಟ ಹೊಗೆ ತುಂಬಿ ಹೊರಬರಲಾಗದೇ ಅಲ್ಲಿಯೇ ಸಿಲುಕಿದ್ದಾನೆ.
ದುರ್ಘಟನೆ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಗೋವಾ ಸರ್ಕಾರದಿಂದ ಮೃತರಿಗೆ ತಲಾ ಐದು ಲಕ್ಷ ರೂ., ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ರೂ., ಗಾಯಾಳುಗಳಿಗೆ ಗೋವಾ ಸರ್ಕಾರದಿಂದ 50 ಸಾವಿರ ರೂ. ಹಾಗೂ ಪ್ರಧಾನಿಗಳ ನಿಧಿಯಿಂದ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.
ದುರಂತದಲ್ಲಿ ಕೆಲವರ ಗುರುತು ಮಾತ್ರ ಪತ್ತೆಯಾಗಿದ್ದು, ಇವರ ಮೃತದೇಹವನ್ನು ಅವರ ಮನೆಗೆ ಕಳುಹಿಸಲಾಗುವುದು. ಇದಕ್ಕಾಗಿ ಪೊಲೀಸ್ ಎಸ್.ಡಿ.ಎಂ ಸಮಿತಿ ರಚಿಸಿದೆ. ಇನ್ನು ಎಲ್ಲಾ ನೈಟ್ ಕ್ಲಬ್ಗಳ ಆಡಿಟ್ ನಡೆಸಿ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಲಾಗುತ್ತದೆ. ಇದಕ್ಕಾಗಿ ಸಮಿತಿ ರಚನೆ ಮಾಡಲಾಗಿದೆ. ಘಟನೆ ಸಂಬಂಧ ಹಣಜುಣ ಪೊಲೀಸರು ನಾಲ್ವರು ವ್ಯವಸ್ಥಾಪಕರನ್ನು ಬಂಧಿಸಿದ್ದಾರೆ. ಕ್ಲಬ್ ಮಾಲೀಕ ಸೌರಭ್ ಲುಥರಾ, ಗೌರವ್ ಲುಥರಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಹಲವರನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ ಎಂದು ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
ಮೃತಪಟ್ಟವರು: ಜಾರ್ಖಂಡ್ನ ಮೋಹಿತ ಎಟವಾ ಮುಂಡಾ (18), ಪ್ರದೀಪ್ ಮಹತೋ (22), ಬಿನೋದ್ ಮಹತೋ (19), ಅಸ್ಸಾಂನ ರಾಹುಲ್ ತಾಂತಿ (60) ಉತ್ತರಖಂಡನ ಸತೀಶ್ಸಿಂಗ್ ರಾಣಾ (26), ಅಸ್ಸಾಂನ ಮನೋಜಿತ್ ಮಲ್ (24), ಹರಿಯಾಣದ ಚೂರ್ಣ ಪುನ್ (33), ಉತ್ತರಾಖಂಡ್ನ ಸುರೇಂದ್ರ ಸಿಂಗ್ (38) ಪಶ್ಚಿಮ ಬಂಗಾಳದ ಸುಭಾಷ್ ಛೆತ್ರಿ (22), ಉತ್ತರಾಖಂಡ್ ಜಿತೇನ್ ಸಿಂಗ್ (21), ಸುಮೀತ್ ನೇಗಿ (44), ದೆಹಲಿಯ ಸರೋಜ್ ಜೋಶಿ (42) ಹಾಗೂ ಬೆಂಗಳೂರಿನ ಇಶಾಕ್ ಎನ್ನಲಾಗಿದೆ.





