ರಾತ್ರಿ 2 ಗಂಟೆ ಆಗುವುದರಲ್ಲಿತ್ತು. ಮಾಮಾ ಮಾಮಿ ಇಬ್ಬರೂ ಗಾಢ ನಿದ್ದೆಯಲ್ಲಿದ್ದರು. ಇದ್ದಕ್ಕಿದ್ದಂತೆ ಮಾಮಿಯ ಮೊಬೈಲ್‌ಗೆ ಎಲ್ಲಿಂದಲೋ ಒಂದು ಮೇಸೇಜ್‌ ಬಂದಿತು… ಬ್ಯೂಟಿಫುಲ್! ಮಾಮನ ನಿದ್ದೆ ಹಾರಿಹೋಯ್ತು. ಮಾಮಿ ಮುಖಕ್ಕೆ ನೀರು ಚಿಮುಕಿಸಿ ಎಬ್ಬಿಸಿದರು.

“ಏನ್ರಿ ನಿಮ್ಮ ಗೋಳು? ನೆಮ್ಮದಿಯಾಗಿ ನಿದ್ದೆ ಮಾಡೋಕ್ಕೂ ಬಿಡೋಲ್ಲ….” ಮಾಮಿ ಗೊಣಗಿದರು.

“ಏನೇ ಇದು? ಇಷ್ಟು ಹೊತ್ತಿನಲ್ಲಿ ಯಾವನು ನಿನಗೆ ಬ್ಯೂಟಿಫುಲ್ ಅಂತ ಮೆಸೇಜ್‌ ಕಳುಹಿಸಿದ್ದಾನೆ?” ಮಾಮ ಗುಡುಗಿದರು.

ಒಂದು ಕ್ಷಣ ಕಸಿವಿಸಿಗೊಂಡ ಮಾಮಿ 50ರ ಹರೆಯದಲ್ಲಿ ಯಾರಪ್ಪ ತಮಗೆ ಹೀಗೆ ಮೆಸೇಜ್‌ ಕಳುಹಿಸಿದ್ದು ಎಂದು ನೋಡುತ್ತಾರೆ, “ಅಯ್ಯೋ ಬಡ್ಕೊಂಡ್ರು….. ಕನ್ನಡಕ ಹಾಕಿಕೊಂಡು ಓದಿ ಅನ್ನೋದು ಅದಕ್ಕೇ….. ಬ್ಯೂಟಿಫುಲ್ ಅಲ್ಲ ಅದು…. ಬ್ಯಾಟ್ರಿ ಫುಲ್ ಅಂತ!” ಮಾಮ ಫುಲ್ ಸುಸ್ತು.

ಹಾಗೆ ನೋಡಿದರೆ ತಾಯಿ ಮತ್ತು ಪತ್ನಿ ಇಬ್ಬರೂ ಗುರುಗಳೇ ಆಗುತ್ತಾರೆ. ತಾಯಿ ಹೇಳುವುದು, ಮುಂದೆ ನಿನ್ನ ಹೆಂಡತಿ ಕಲಿಸುತ್ತಾಳೆ ಬಿಡು ಅಂತ. ಹೆಂಡತಿ ಹೇಳುವುದು, ತಾಯಿಯೇ ಕಲಿಸುತ್ತಾರೆ ಅಂತ. ಇಬ್ಬರಿಗೂ ಎಷ್ಟು ವಿನಮ್ರತೆ ಎಂದರೆ, ಅದರ ಪರಾಕಾಷ್ಠೆ ಪ್ರದರ್ಶಿಸುವ ಸಲುವಾಗಿ, ಕಲಿಸುವ ಶ್ರೇಯಸ್ಸನ್ನು ಕೂಡ ತಾವೇ ತೆಗೆದುಕೊಳ್ಳಲಾರರು.

ನವ ದಂಪತಿಗಳು ಮಧುಚಂದ್ರಕೆ ಹೊರಟಿದ್ದರು. ಅಲ್ಲಿನ ಸಾಗರ ತೀರ ಕಂಡು ಭಾವುಕಳಾದ ಪತ್ನಿ, “ಏನ್ರಿ, ಎಲ್ಲಿಯವರೆಗೂ ನೀವು ನನ್ನನ್ನು ಹೀಗೆ ಪ್ರೀತಿಸುತ್ತೀರಿ?” ಎಂದು ಕೇಳಿದಳು. ಅವಳ ಕಂಗಳು ಅಷ್ಟು ಹೊತ್ತಿಗೆ ಕಂಬನಿ ಮಿಡಿದಿದ್ದವು.

“ಅಷ್ಟೊಂದು ಸೆಂಟಿಮೆಂಟ್‌ ಆಗ್ಬೇಡ ಡಿಯರ್‌….” ಎನ್ನುತ್ತಾ ಗಂಡ ಅವಳ ಕಂಬನಿಯ ಒಂದು ಹನಿಯನ್ನು ತೆಗೆದು ಸಾಗರಕ್ಕೆ ಬೆರೆಸುತ್ತಾ, “ಸಮುದ್ರದ ನೀರಿನಲ್ಲಿ ನಿನ್ನ ಕಣ್ಣೀರನ್ನು ನೀನು ಎಂದು ಗುರುತಿಸಬಲ್ಲೆಯೋ ಅಲ್ಲಿಯವರೆಗೂ…” ಎಂದಾಗ ಅವಳು ಮುಗುಳ್ನಕ್ಕಳು.

ತಲೆ ಚಚ್ಚಿಕೊಳ್ಳುತ್ತಾ ಸಮುದ್ರ ಹೇಳಿತಂತೆ, “ಪ್ರತಿ ವರ್ಷ ಒಬ್ಬೊಬ್ಬ ಗರ್ಲ್ ಫ್ರೆಂಡ್‌ನ್ನು ಇಲ್ಲಿಗೆ ಕರೆದುಕೊಂಡು ಬಂದಾಗಲೂ ಇವನ ಡೈಲಾಗ್‌ ಇದೇ ಆಯ್ತಲ್ಲ…”

ಮನೆಯಲ್ಲಿ  ಕರೆಂಟು ಹೋಗಿತ್ತು. ಮನೆ ಯಜಮಾನಿ ಕೆಲಸದಾಕೆಗೆ, “ಸರೋಜಾ, ಕರೆಂಟ್‌ ಬರೋವರೆಗೂ ಹಾಗೆ ಅಲುಗಾಡದೆ ನಿಂತಿರು. ಜಾರಿ ಬಿದ್ದೀಯಾ ಹುಷಾರು…” ಎಂದಳು.

ಕೆಲಸದಾಕೆ, “ಚಿಂತೆ ಮಾಡಬೇಡಿ ಅಮ್ಮಾವ್ರೇ…! ಯಜಮಾನರು ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ,” ಎನ್ನುವುದೇ?

ಗಿರಾಕಿ : ಒಂದು ಪ್ಲೇಟು ಉಪ್ಪಿಟ್ಟು…. ಹೀಗೇ ಒಂದೆರಡು ಒಳ್ಳೇ ಮಾತು.

ಮಾಣಿ : ತಗೊಳ್ಳಿ ಸಾರ್‌ ಉಪ್ಪಿಟ್ಟು.

ಗಿರಾಕಿ : ಒಳ್ಳೆ ಮಾತು….?

ಮಾಣಿ : ಪಾಪ ಇದನ್ನು ನೀವು ತಿನ್ನಬೇಕಲ್ಲ….

ಹೆಂಡತಿ : ನಾನು ಯಾವುದಾದರೂ ಕೆಲಸ ಶುರು ಮಾಡಿದರೆ ಅದರಲ್ಲೇ ಮುಳುಗಿ ಹೋಗ್ತೀನಿ.

ಗಂಡ : ಮತ್ತೆ ನೀನ್ಯಾಕೆ ಒಂದು ಬಾವಿ ತೋಡಬಾರದು?

ಗಂಡ : ಲೇ ಹಸುವಿನ ಮೇಲೆ ಸಾಲ ತಗೊಂಡಿದ್ದಿಯಲ್ಲ…. ಹೇಗೆ ಕಟ್ಟುತ್ತೀಯಾ?

ಹೆಂಡತಿ : ಹಗ್ಗದಿಂದ ಕಟ್ತೀನಿ.

ಗಂಡ : ಒಂದಲ್ಲಾ ಒಂದು ದಿನ ನಮ್ಮ ಮಗು ಈ ದೇಶದ ಪ್ರಧಾನಿಯಾಗಬಹುದು.

ಹೆಂಡತಿ : ಹೌದು ರೀ! ಇದುವರೆಗೂ ಯಾವ ಮಗು ಈ ದೇಶದ ಪ್ರಧಾನಿಯಾಗಿದ್ದನ್ನು ನಾನು ನೋಡಿಲ್ಲ.

ಗುಂಡ : ಶೆಟ್ಟರೇ, 5 ಕೆ.ಜಿ. ಈರುಳ್ಳಿ ಕೊಡಿ.

ಶೆಟ್ಟರು : ಸಣ್ಣದು ಕೊಡಲೋ? ದೊಡ್ಡದು ಕೊಡಲೋ?

ಗುಂಡ : ಸಣ್ಣದೇ ಕೊಡಿ. ದೊಡ್ಡದಾದರೆ ತುಂಬಾ ಭಾರ ಆಗಬಹುದು.

ಮಗ : ಅಪ್ಪಾ ಅರ್ಜುನ ಅಂದ್ರೆ ಯಾರು?

ತಂದೆ : ಅಷ್ಟೂ ಗೊತ್ತಿಲ್ವೇನೋ ಮೂರ್ಖ! ಮಹಾಭಾರತ ಓದು ಗೊತ್ತಾಗುತ್ತದೆ.

ಗಂಡ : ನಿನ್ನ ಹುಟ್ಟುಹಬ್ಬಕ್ಕೆ ಸೀರೆ ಕೊಡಿಸಲಾ ಅಥವಾ ಚೂಡಿದಾರ್‌ ಕೊಡಿಸಲಾ…?

ಹೆಂಡತಿ : ನಿಮಗೆ ಒಗೆಯೋದಕ್ಕೆ ಯಾವುದು ಸುಲಭ ಆಗುತ್ತದೋ ಅದನ್ನೇ ಕೊಡ್ಸಿ.

ವರನ ತಂದೆ : ನಿಮ್ಮ  ಹುಡುಗಿ ನಮಗೆಲ್ಲರಿಗೂ ಹಿಡಿಸಿದಾಳೆ. ಮದುವೇಲಿ ಅವಳಿಗೆ ಏನೇನು ಹಾಕ್ತೀರಿ…?

ವಧುವಿನ ತಂದೆ : ತಲೆಗೂದಲಿಗೆ ಡೈ, ತುಟಿಗೆ ಲಿಪ್‌ಸ್ಟಿಕ್‌, ಕಣ್ಣಿಗೆ ಕಪ್ಪು, ಕೈಗಳಿಗೆ ಗೋರಂಟಿ.

ಪೋಸ್ಟ್ ಮ್ಯಾನ್‌ : ರಂಗಮ್ಮ ಇದಾರಾ?

ಗುಂಡ : ನಾನು ಆಕೆಯ ಗಂಡ. ಏನು ಸಮಾಚಾರ?

ಪೋಸ್ಟ್ ಮ್ಯಾನ್‌ : ಅವರಿಗೆ ಸರ್ಕಾರದಿಂದ ವಿಧವಾ ವೇತನ ಬಂದಿದೆ. ಅವರನ್ನೇ ಕರೀರಿ. ಕೂಡಲೇ ಗುಂಡ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದ.

ರಾಯರು : ಏನ್ರೀ ಗುಂಡ, ನಿಮ್ಮ ಮಗನಿಗೆ ಮದುವೆ ಮಾಡಬೇಕೂಂತಿದ್ದೀರಂತೆ ಯಾಕೆ?

ಗುಂಡ : ಹೌದೂ ಸಾರ್‌! ಇಷ್ಟು ದಿನ ಇವನು ಸುಖವಾಗಿ ಕಾಲ ಕಳೆದಿದ್ದು ಸಾಕು ಅನಿಸಿತು ಅದಕ್ಕೆ ಮದುವೆ ಮಾಡೋಣ ಅಂತ.

ಹೆಂಡತಿ : ರೀ ಹುಡುಗ ನೋಡಲು ತುಂಬಾ ಚೆನ್ನಾಗಿದ್ದಾನೆ. ನನಗಂತೂ ತುಂಬಾ ಹಿಡಿಸಿದಾನೆ.

ಗಂಡ : ಲೇ ಸುಮ್ಮನಿರೇ! ಅವನು ನಮ್ಮ ಮಗಳಿಗೆ ಬಂದ ವರ.

ಗೆಳೆಯ : ಗ್ರಹಣಗಳಲ್ಲಿ ಯಾವುದು ಸಂಕಷ್ಟ ಕಾಲ? ಸೂರ್ಯ ಗ್ರಹಣವೇ? ಚಂದ್ರ ಗ್ರಹಣವೇ?

ಗುಂಡ : ಎರಡೂ ಅಲ್ಲ….! ಪಾಣಿಗ್ರಹಣ.

ಗಂಡ : ನನಗೆ ಸಂಬಂಧವಿಲ್ಲದ ಒಂದು ಜೋಕ್‌ ಹೇಳು.

ಹೆಂಡತಿ : ನಾನೀಗ ಆರು ತಿಂಗಳ ಗರ್ಭಿಣಿ.

ಹೆಂಡತಿ : ರೀ ನೀವು ಕೆಲಸದ ಮೇಲೆ ಅಂತ ಹೋಗಿ 15 ದಿನ ಆಯಿತು. ನಿಮ್ಮನ್ನು ಕಾಣದೆ ಅರ್ಧ ಸತ್ತಿದ್ದೇನೆ. ಯಾವಾಗ ಬರುತ್ತೀರಿ..?

ಗಂಡ : ಇನ್ನೂ ಹದಿನೈದು ದಿನ ಬಿಟ್ಟು ಬರುತ್ತೇನೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ