ರಾಮಣ್ಣನಿಗೆ ಮದುವೆಯಾಗಿ 20 ವರ್ಷ ಕಳೆದಿತ್ತು. ಆಸಾಮಿ ಒಂದು ದಿನವಾದರೂ ಹೆಂಡತಿಯ ಕೈ ಅಡುಗೆ ರುಚಿಯನ್ನು ಹೊಗಳಿದವನೇ ಅಲ್ಲ. ಈ ಪ್ರಾಣಿಗೇನೂ ಗೊತ್ತಾಗೋಲ್ಲ ಎಂದುಕೊಂಡು ಸರೋಜಾ ಸುಮ್ಮನಾಗಿದ್ದಳು.
ಒಂದು ಸಲ ಆಫೀಸಿನಲ್ಲಿ ಕೌಟುಂಬಿಕ ಚರ್ಚೆ ಆಗುತ್ತಿದ್ದಾಗ, ರಾಮಣ್ಣನ ಈ ದರ್ಬುದ್ಧಿ ಬಗ್ಗೆ ಎಲ್ಲರೂ ಮಾತನಾಡಿಕೊಂಡರು. ಏನೇ ಆಗಲಿ, ಹೀಗೆ ಮಾಡಬಾರದು. ಆದದ್ದು ಆಯಿತು, ಇವತ್ತು ರಾತ್ರಿ ಊಟ ಮಾಡುವಾಗ ಬಾಯಿ ತುಂಬಾ ಹೆಂಡತಿಯ ಕೈ ರುಚಿ ಹೊಗಳಲೇಬೇಕು ಎಂದು ತಾಕೀತು ಮಾಡಿ ಕಳುಹಿಸಿದರು.
ಅಂತೂ ರಾಮಣ್ಣ ರಾತ್ರಿ ಐಪಿಎಲ್ ಕ್ರಿಕೆಟ್ ನೋಡುತ್ತಿದ್ದಾಗ, ಎಂದಿನಂತೆ ಸರೋಜಾ ಬಿಸಿಬೇಳೆ ಭಾತ್, ಆಲೂ ಚಿಪ್ಸ್ ಹಾಕಿ ತಟ್ಟೆಯನ್ನು ಗಂಡನ ಕೈಗೆ ಕೊಟ್ಟಳು. 4 ತುತ್ತು ತಿಂದು ಮುಗಿಸಿದ ರಾಮಣ್ಣ ಸಹೋದ್ಯೋಗಿಗಳ ಮಾತು ನೆನಪಾಗಿ, ಬಾಯಿ ತುಂಬಾ ಹೆಂಡತಿಯ ಕೈ ರುಚಿಯನ್ನು ಹೊಗಳಿದ್ದೇ ಹೊಗಳಿದ್ದು!
``ಅಯ್ಯೋ ಬಡ್ಕೊಂಡ್ರು ನಿಮ್ಮ ಬುದ್ಧೀಗೆ... 20 ವರ್ಷಗಳಿಂದ ನಾನು ಹೊತ್ತೊತ್ತಿಗೆ ಅಡುಗೆ ಮಾಡಿ ಬಡೀತಿದ್ದೀನಿ. ಒಂದು ದಿನ ನನ್ನ ಕೈ ಅಡುಗೆ ಚೆನ್ನಾಗಿದೆ ಅಂದಿಲ್ಲ. ಇವತ್ತು ಅಪರೂಪಕ್ಕೆ ಪಕ್ಕದ್ಮನೆ ಪಂಕಜಾ ಬಿಸಿಬೇಳೆ ಭಾತ್ ಕೊಟ್ಟರೆ ಈ ಪಾಟಿ ಹೊಗಳುವುದೇ....?''
ರಾಮಣ್ಣನ ಗಂಟಲಲ್ಲಿ ಅನ್ನ ಸಿಲುಕಲು ಜೋರಾಗಿ ಕೆಮ್ಮತೊಡಗಿದ.
ಸೋಮು ಬಹಳ ಬೇಸರದಿಂದ ಖಿನ್ನನಾಗಿ ಕುಳಿತಿದ್ದ. ಆಗ ಅವನ ಚಡ್ಡಿ ದೋಸ್ತ್ ಕಿಟ್ಟಿ ಅಲ್ಲಿಗೆ ಬಂದ. ಸೋಮುವಿನ ದುಃಖ ಕಂಡು ಕಿಟ್ಟಿ ಗಾಬರಿಯಾದ.
ಕಿಟ್ಟಿ : ಏನಾಯ್ತು ಸೋಮು.... ಏನು ನಿನ್ನ ಕಥೆ?
ಸೋಮು : ಕಳೆದು ಹೋಗಿರುವ ನನ್ನ ಸುಖ, ಶಾಂತಿ, ನೆಮ್ಮದಿಗಳನ್ನು ಪಡೆಯಬೇಕೆಂದಿರುವೆ. ಅದಕ್ಕೆ ದಾರಿ ಇದೆಯೇ?
ಕಿಟ್ಟಿ : ಇದಕ್ಕೆ ಇರುವುದು ಒಂದೇ ದಾರಿ.... ನೀನು ಕೂಡಲೇ ಡೈವೋರ್ಸ್ ತಗೋ!
ವಿಶಾಲಮ್ಮ ಎಲ್ಲಾ ಬಗೆಯ ವ್ಯಾಯಾಮ, ಡಯೆಟಿಂಗ್ ಮಾಡಿ ಮುಗಿಸಿದರೂ ಒಂದಿಷ್ಟು ಸಣ್ಣ ಆಗಲಿಲ್ಲ. ಅವರಿಗೂ ಬಹಳ ರೋಸಿಹೋಗಿತ್ತು. ಸರಿ, ಗಂಡ ಬಂದ ಮೇಲೆ ಮಾತನಾಡೋಣ ಎಂದು ಸುಮ್ಮನಾದರು.
ವಿಶಾಲಮ್ಮ : ನಿಮಗೆ ತೆಳ್ಳಗಿರುವ ಆದರೆ ಸದಾ ಸಿಡುಕುವ ಹೆಂಡತಿ ಬೇಕೋ, ಅಥವಾ ದಪ್ಪಗಿದ್ದರೂ ಸದಾ ನಸುನಗುತ್ತಾ ಗಂಡನ ಆದರಿಸುವ ಹೆಂಡತಿ ಬೇಕೋ?
ವಿಶ್ವನಾಥ್: ಅದೆಲ್ಲ ಇರಲಿ, ನೀನು ಸದಾ ನಗುನಗುತ್ತಾ ಗುಡ್ ಮೂಡ್ನಲ್ಲಿರಲು ಇನ್ನೂ ಅದೆಷ್ಟು ದಪ್ಪ ಆಗಬೇಕು ಮಾರಾಯ್ತಿ.....?
ಗುಂಡನ ಹೆಂಡತಿ ಆಷಾಡಕ್ಕೆಂದು ತವರಿಗೆ ಹೋದವಳು ಶ್ರಾವಣವಾದರೂ ಬರಲೇ ಇಲ್ಲ. ಇದರಿಂದ ಸಿಟ್ಟಿಗೆದ್ದ ಗುಂಡ ಒಂದು ಸಲ ಮಾವನ ಮನೆಗೆ ಹೊರಟೇಬಿಟ್ಟ. 11 ಗಂಟೆ ರಾತ್ರಿ ಮಾವನ ಮನೆ ತಲುಪಿದ ಗುಂಡ, ಹೆಂಡತಿಯ ದರ್ಶನವಾಗದೆ, ಉಳಿದಿದ್ದ ಚೂರುಪಾರು ಉಂಡು, ಮಾವನ ಪಕ್ಕದಲ್ಲೇ ಮಲಗಬೇಕಾಯಿತು. ಮಾವನ ಗೊರಕೆ ತಡೆಯಲಾಗದೆ. ಗುಂಡನಿಗೆ ನಿದ್ದೆ ದೂರವಾಯಿತು.
ಅಂತೂ ಕಣ್ಣೆಳೆಯುವಷ್ಟರಲ್ಲಿ ಯಾರೋ ಹತ್ತಿರದಿಂದ ಜೋರಾಗಿ ಬಳೆ ಸದ್ದು ಮಾಡಿದಂತಾಯ್ತು. ರೋಮಾಂಚಿತನಾದ ಗುಂಡ ಹೆಂಡತಿಯೇ ಕರೆಯುತ್ತಿದ್ದಾಳೆ ಎಂದು ಎದ್ದು ಕುಳಿತು ಬೇರೆ ಕೋಣೆಗಳತ್ತ ಕಣ್ಣು ಹಾಯಿಸಿದ. ಆದರೆ ಯಾರೂ ಕಾಣಲಿಲ್ಲ.