ಸೀನ ಪಾರ್ಕಿನಲ್ಲಿ ಕುಳಿತು ಜೋರಾಗಿ ಬಿಕ್ಕಳಿಸುತ್ತಿದ್ದ. “ನಾನು ನನ್ನ ಹೆಂಡತಿಯಿಂದ 5 ತಿಂಗಳ ಹಿಂದೆ 3 ಸಾವಿರ ಹಣ ಸಾಲ ಪಡೆದಿದ್ದೆ. ಅದನ್ನು 3 ಸಲ ಮರಳಿಸಿದರೂ, ಅದು ಬಡ್ಡಿಗಾಯ್ತು…. ಇನ್ನೂ ಅಸಲು 3 ಸಾವಿರ ಉಳಿದಿದೆ ಅಂತಾಳಲ್ಲ…. ಏನು ಮಾಡಲಿ?”
ಇವನಿಗೆ ಸಮಾಧಾನ ಹೇಳಿದ ನಾಣಿ, “ಅದಕ್ಕೆ ಹೇಳೋದು…. ಹೆಂಡತಿ ಹತ್ತಿರ ಎಂದೂ ಸಾಲ ಮಾಡಬಾರದು ಅಂತ!”
ಪುಂಡ ಪೋಕರಿಗಳ ತಲೆನೋವಿನ ಮೆಸೇಜ್ ಗಳಿಂದ ಪಾರಾಗುವುದು ಹೇಗೆ? ಇಲ್ಲಿದೆ ಒಂದು ಉದಾ :
ಮಜ್ನು : ಮೋಸ ಮಾಡಲೆಂದೇ ಬುವಿಗೆ ಬಂದೆಯಾ? ನನ್ನ ಹೃದಯ ಸುಟ್ಟು ನೀನು ಬೂದಿ ಮಾಡಿಬಿಟ್ಟೆಯಾ……?
ರಜನಿ : ಏನೂ ಲಾಸ್ ಆಗಲ್ಲ ಬಿಡು, ಆ ಬೂದಿ ನನ್ನ ಕಾಲೇಜ್ ವಿಳಾಸಕ್ಕೆ ಕಳಿಸು, ಪಾತ್ರೆ ತೊಳೆಯಲು ಬಳಸಿಕೊಳ್ಳುತ್ತೇವೆ!
ಗಂಡ ಹೆಂಡತಿ ಅಪರೂಪಕ್ಕೆ ಹೋಟೆಲ್ ಗೆ ಡಿನ್ನರ್ ಗೆಂದು ಬಂದಿದ್ದರು. ಊಟ ಮುಗಿದ ಮೇಲೆ ಎಂದಿನಂತೆ ಗಂಡ ತಟ್ಟೆ, ಬಟ್ಟಲು ತೊಳೆಯಲೆಂದು ಎಲ್ಲವನ್ನೂ ಜೋಡಿಸತೊಡಗಿದ.
ಇದರಿಂದ ಕುಪಿತಳಾದ ಹೆಂಡತಿ ಕಿರುಚಿದಳು, “ಇದೇನು ಮನೇನಾ? ಬಂದಿರೋದು ಹೋಟೆಲ್ ಗೆ ಅಂತ ನೆನಪಿಡಿ!”
ಬೀರುವಿನ ಮೇಲಿದ್ದ ಹಳೆ ಪೇಪರ್ ಗಳ ಮಧ್ಯೆ ಹೆಂಡತಿಯ ಶಾಲೆಯವರು ಅವಳ ನಡತೆ ಬಗ್ಗೆ ನೀಡಿದ್ದ ಸರ್ಟಿಫಿಕೇಟ್ ಓದತೊಡಗಿದ ಗುಂಡ.
`ಮಧುರಭಾಷಿಣಿ, ಶಾಂತಪ್ರಿಯೆ, ಬೆರೆತುಕೊಳ್ಳುವ ಸ್ವಭಾವ, ಹೊಂದಾಣಿಕೆಯ ಗುಣ…..’ ಇದನ್ನು ಜೀರ್ಣಿಸಿಕೊಳ್ಳಲಾರದ ಗುಂಡ ಮೂರ್ಛೆ ಹೋದ.
ಡಾಕ್ಟರ್ : ನೋಡ್ರಿ ಮೂರ್ತಿ, ಈ ವಿಷಯ ಈಗ ತಾನೇ ಮೆಡಿಕಲ್ ರಿಪೋರ್ಟ್ ನಿಂದ ಕನ್ ಫರ್ಮ್ ಆಗಿದೆ. ನಿಮ್ಮ ಹೆಂಡತಿ ಕೇವಲ ಈ ಭೂಮಿಯಲ್ಲಿ ಇನ್ನು 2-3 ತಿಂಗಳ ಅತಿಥಿ ಮಾತ್ರ….
ಮೂರ್ತಿ : ಓಹ್ ನೋ… ಇದು ನಿಜಾನಾ ಡಾಕ್ಟರ್!
ಡಾಕ್ಟರ್ : ಹೌದು ರೀ, ನಿಮ್ಮನ್ನು ನೀವು ಸಂಭಾಳಿಸಿಕೊಳ್ಳಿ ಮಿಸ್ಟರ್, ಈ ಕಷ್ಟ ನಿಮಗೆ ಬರಬಾರದಿತ್ತು!
ಮೂರ್ತಿ : ಅಯ್ಯೋ ಬಿಡಿ, ಕಳೆದ 12 ವರ್ಷಗಳಿಂದ ಸಂಭಾಳಿಸಿದ್ದೇನೆ, ಇನ್ನೇನು 2-3 ತಿಂಗಳು ತಾನೇ…?
ಬಾಯ್ ಫ್ರೆಂಡ್ : ಸಂಗೀತಕ್ಕೆ ನಿಜಕ್ಕೂ ಅಪಾರ ಶಕ್ತಿ ಇದೆ. ತಾನ್ ಸೇನ್ ಅಂಥವರು ದೀಪಕ ರಾಗ ಹಾಡಿದರೆ, ದೀಪ ತಾನೇ ಹೊತ್ತಿ ಉರಿಯುತ್ತಿತ್ತು….. ಮೇಘಮಲ್ಹಾರ ಹಾಡಿದರೆ ಮಳೆ ತಾನಾಗಿ ಸುರಿಯುತ್ತಿತ್ತು….
ಗರ್ಲ್ ಫ್ರೆಂಡ್ : ನಿಜಕ್ಕೂ ಹೌದೇ?
ಬಾಯ್ ಫ್ರೆಂಡ್ : ನಿನಗೆ ಗೊತ್ತೇ? ತೋಡಿ ರಾಗದಲ್ಲಿ ಹಾಡಿದರೆ ತಣ್ಣೀರು ಸಹ ಬಿಸಿಯಾಗಿ ಬಿಡುತ್ತಂತೆ!
ಗರ್ಲ್ ಫ್ರೆಂಡ್ : ನಿನ್ನ ಗಾರ್ದಭ ಗಾಯನ ಕೇಳಿ ನನ್ನ ರಕ್ತವೇ ಕುದಿಯುತ್ತಿದೆ, ಹಾಗಿರುವಾಗ ನೀರು ಬಿಸಿ ಆಗುವುದೇನು ಮಹಾ….?
ಪತ್ನಿ : ನೋಡಿ, ನಾಳೆ ಇಡೀ ದಿನ ಪೂರ್ತಿ ನಾನು ನಿಮ್ಮ ಜೊತೆ ಮಾತೇ ಆಡೋಲ್ಲ!
ಪತಿ : ಓ.ಕೆ. ಸರಿ ಬಿಡು.
ಪತ್ನಿ : ಇದೇನು ಇಷ್ಟು ಸಲೀಸಾಗಿ ತಗೊಂಡು ಬಿಟ್ರಿ! ಯಾಕೆ ಏನು ಅಂತ ವಿಚಾರಿಸೋದಿಲ್ವಾ?
ಪತಿ : ನಾನೊಬ್ಬ ಆದರ್ಶ ಪತಿ. ಹಾಗೆಲ್ಲ ವಿಚಾರಿಸಿ ಪತ್ನಿಯ ಮನಸ್ಸಿಗೆ ದುಃಖ ತರಲ್ಲ!
ಉಮೇಶ್ : ಒಂದು ಮಾತು ನಿಜ ಕಣಯ್ಯ, ಹೆಂಡ್ತೀನ ಕರೆದುಕೊಂಡು ಎಂದೂ ವೆಕೇಶನ್ ಗೆ ಅಂತ ಹೊರಗೆ ಹೋಗಲೇಬಾರದು!
ಸುರೇಶ್ : ಅದ್ಯಾಕೆ ಹಾಗೆ ಹೇಳ್ತಿದ್ದೀಯಾ?
ಉಮೇಶ್ : ಹಾಗೊಂದು ವೇಳೆ ಕರೆದುಕೊಂಡು ಹೋದೆ ಅಂತಿಟ್ಕೊ, ಆಗ ಅದು ವೆಕೇಶನ್ ಅಲ್ಲ, ಚೇಂಜ್ ಆಫ್ ಲೊಕೇಶನ್ ಆಗುತ್ತೆ ಅಷ್ಟೆ!
ಅಂಬುಜಮ್ಮ ಅಂಗಡಿಗೆ ಹೋದಾಗೆಲ್ಲ ಚೌಕಾಶಿ ಮಾಡದೆ ವ್ಯಾಪಾರಕ್ಕೆ ಇಳಿಯುತ್ತಿರಲಿಲ್ಲ.
ಅಂಬುಜಮ್ಮ : ಏನ್ರಿ, ಸೇಬಿನ ಬೆಲೆ ಎಷ್ಟು?
ಅಂಗಡಿಯ : 10 ಹಣ್ಣಿಗೆ 100/ ರೂ. ಮೇಡಂ.
ಅಂಬುಜಮ್ಮ : ಅಯ್ಯೋ! ಬಹಳ ದುಬಾರಿ ಆಯ್ತು. ಮೊದಲು ಬೆಲೆ ಕಡಿಮೆ ಮಾಡಿ.
ಅಂಗಡಿಯವ : ನಿಮಗೋಸ್ಕರ…. 80/ ರೂ.ಗೆ 8 ಕೊಡ್ತೀನಿ ತಗೊಳ್ಳಿ.
ಅಂಬುಜಮ್ಮ : ಹಾಗೆ ಬಾ ದಾರೀಗೆ…..
ಪತಿ : ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ಸಂಪೂರ್ಣ ವಾಕ್ ಸ್ವಾತಂತ್ರ್ಯ ಇದ್ದೇ ಇದೆ. ಅದು ಗಂಡಂದಿರಿಗೂ ಇದೆ ಎಂದೇ ಈ ಲೇಖಕ ಬಂದಿದ್ದಾನೆ.
ಪತ್ನಿ : ಬರೀ ಬರೆದಿದ್ದಾನೆ…. ಅಷ್ಟೇ ತಾನೇ?
ಮಾಧವ ರಾಯರಿಗೆ 90 ವರ್ಷ ದಾಟಿತ್ತು. ಎಂದಿನಂತೆ ಅವರ ಮೊಬೈಲಿಗೆ ಫೋನ್ ಬಂತು.
ಕಾಲರ್ : ಸಾರ್, ಇವತ್ತು ನೀವು ನಮ್ಮ ಬ್ಯಾಂಕಿನಲ್ಲಿ 50 ಸಾವಿರ ಹಣ FD ಅಕೌಂಟಿಗೆ ಹಾಕಿದರೆ, ಮುಂದಿನ ವರ್ಷ ಇದೇ ತಾರೀಖಿಗೆ ನಿಮಗೆ 1 ಲಕ್ಷ ಹಣ ಬಂದುಬಿಡುತ್ತೆ!
ರಾಯರು : ನೋಡಪ್ಪ, ನನಗಾಗಿರುವ ವಯಸ್ಸಿಗೆ, ಸುಮಾರಾಗಿ ಕಾಯಿಯಾಗಿರುವ ಬಾಳೇಹಣ್ಣನ್ನೇ ವಾರದಲ್ಲಿ ಮಾಗುತ್ತೆ ಅಂತ ನಂಬಿ ನಾನು ತಗೊಳ್ಳೊಲ್ಲ…. ಹಾಗಿರುವಾಗ FD ಮಾತೇಕೆ?
ರಾಜು : ನೋಡೇ, ನನ್ನ ಮದುವೆ ಬಗ್ಗೆ ನಿನ್ನ ತಂದೆ ಬಳಿ ಯಾವಾಗ ಬಂದು ಮಾತಾಡಲಿ?
ಗರ್ಲ್ ಫ್ರೆಂಡ್ : ಇದೇನು ಕರ್ಮ? `ನಮ್ಮ ಮದುವೆ’ ಅನ್ನೋದು ಬಿಟ್ಟು `ನನ್ನ ಮದುವೆ’ ಅಂತಿದ್ದೀಯಾ? ಬರೀ ನಿನ್ನ ಮದುವೆ ಬಗ್ಗೆ ಮಾತನಾಡಲು ಬಂದರೆ, ನಮ್ಮಪ್ಪ ಗುಂಡು ಹಾಕಿರಬಾರದು ನೋಡು, ಆಗ ಬಾ, ಇಲ್ಲದಿದ್ದರೆ ನೀನು ಕೆಟ್ಟೆ!
ಗುಂಡಪ್ಪ : ಮೇಡಂ, ನನ್ನ ಮಗ ಇತಿಹಾಸ ಹೇಗೆ ಕಲಿಯುತ್ತಿದ್ದಾನೆ? ನಾನಂತೂ ಇತಿಹಾಸದಲ್ಲಿ ಬಹಳ ವೀಕಾಗಿದ್ದೆ. ಇವನಾದರೂ ಬೆಟರ್ರಾ….?
ಮೇಡಂ : ನಿಮ್ಮ ಮನೆಯ ಇತಿಹಾಸ ರಿಪೀಟ್ ಆಗ್ತಿದೆ ಅಂತ ತಿಳಿದುಕೊಳ್ಳಿ.
ಒಂದು ರಾತ್ರಿ 10 ಗಂಟೆಗೆ ಕರೆಂಟ್ ಹೋಯ್ತು, ಮಳೆ ಜೋರಾಗಿ ಬರ್ತಿತ್ತು. 11 ಗಂಟೆ ಆದರೂ ಕರೆಂಟ್ ಬರಲಿಲ್ಲ ಅಂತ ಗುಂಡ ಮಲಗಲು ಹೋದ. ಗುಂಡನಿಗೆ ಆಗ ಗ್ಯಾಸ್ ಸಿಲಿಂಡರ್ ಆನ್ ಮಾಡಿ ಟೀ ಕುಡಿಯೋಣ ಅಂತ ನೆನಪಾಯ್ತು. ಲೈಟರ್ ಎಲ್ಲೂ ಸಿಗಲಿಲ್ಲ ಹುಡುಕಿ ಹುಡುಕಿ ಸಾಕಾಗಿ, ಹಚ್ಚಿಟ್ಟಿದ್ದ ಕ್ಯಾಂಡಲ್ ಆಫ್ ಮಾಡಿ ಮಲಗಿದ!
ಟೀಚರ್ : ಕಿಟ್ಟಿ, ನಮ್ಮ ತ್ರಿವರ್ಣ ಧ್ವಜವನ್ನು ಮೊದಲು ಎಲ್ಲಿ ಹಾರಿಸಿದರು?
ಕಿಟ್ಟಿ ಬಹಳ ಯೋಚಿಸಿದ ನಂತರ ಆಮೇಲೆ ಉತ್ತರಿಸಿದ.
ಕಿಟ್ಟಿ : ಯಾರಾದರೇನು? ಖಂಡಿತಾ ಒಂದು ಕಂಬದಿಂದ ಹಾರಿಸಿರ್ತಾರೆ ಬಿಡಿ! ಅದನ್ನು ಕೇಳಿಸಿಕೊಂಡ ಮೇಡಂ ಮೂರ್ಛೆ ಹೋದರು.
ಸಿಂಗಯ್ಯ : ಸಾರ್, ಜೋರಾಗಿ ಮಳೆ ಬರ್ತಿದೆ. ಈ ದಿನ ಆಫೀಸಿಗೆ ಬರಲೇಬೇಕು ಅಂತೀರಾ?
ಮ್ಯಾನೇಜರ್ : ಹೆಂಡತಿ ಕಾಟ ತಡೆಯಲಾರದೆ ನಾನು ಈಗ ತಾನೇ ಮಳೆಯಲ್ಲೇ ಹೇಗೋ ಆಫೀಸಿಗೆ ಬಂದೆ. ನಿನ್ನ ಸ್ಥಿತಿ ಹೇಗೆ? ಇಡೀ ದಿನ ಬೈಸಿಕೊಳ್ಳುತ್ತಾ ಮನೇಲಿ ಇರ್ತೀಯಾ ಅಥವಾ ಆಫೀಸ್ ಗೆ ಬರ್ತೀಯಾ?
ಸಿಂಗಯ್ಯ : ಇನ್ನು ಅರ್ಧ ಗಂಟೇಲಿ ಆಫೀಸಿಗೇ ಬರ್ತೀನಿ ಸಾರ್!
ಗುಂಡ ಏದುಸಿರು ಬಿಡುತ್ತಾ ಹೇಗೋ ಓಡೋಡಿ ಪೊಲೀಸ್ ಸ್ಟೇಷನ್ ತಲುಪಿದ.
ಗುಂಡ : ಸಾರ್, ಹೇಗಾದರೂ ನನ್ನ ಗೆಳೆಯನನ್ನು ಕಾಪಾಡಿ. ಮೊದಲು ನನ್ನ ಕಡೆ ರಿಪೋರ್ಟ್ ಬರೆಸಿಕೊಂಡು ಅವನ ಜೀವ ಉಳಿಯುವಂತೆ ಮಾಡಿ.
ದಫೇದಾರ : ಅಂಥಾದ್ದು ಏನಾಯ್ತು ಈಗ?
ಗುಂಡ : ಅವನು ನನ್ನ ಹೆಂಡ್ತಿ ಜೊತೆ ಓಡಿ ಹೋಗಿದ್ದಾನೆ, ಮುಂದೆ ಅವನ ಪರಿಸ್ಥಿತಿ ನೆನೆಪಿಸಿಕೊಂಡ್ರೆ ಅಯ್ಯೋ ಅನಿಸುತ್ತೆ!