ಮಹಿಳೆಯರಿಂದಲೇ ಇಂದಿಗೂ ಜಾನಪದ ಜೀವಂತ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ ಜಾನಪದ ಬಾಲಾಜಿ ತಿಳಿಸಿದರು.

ಬೆಂಗಳೂರು ಜೆಪಿ ನಗರದ ಪ್ರೇಮಾಂಜಲಿ ಫೌಂಡೇಶನ್ ಅಂದ ಮಕ್ಕಳ ಶಾಲೆಯ ಆವರಣದಲ್ಲಿ ನಡೆದ ಬೆಂಗಳೂರು ನಗರ ಜಿಲ್ಲಾ ಮಹಿಳಾ ಘಟಕವನ್ನು ಧಾನ್ಯವನ್ನು ಮೊರಗಳಿಗೆ ಸುರಿಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಸಂಸ್ಕೃತಿಯಿಂದ ಜಾನಪದ ಉಗಮವಾದರೆ ಇಂದಿಗೂ ಅದನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವುದು ಹೆಣ್ಣು ಮಕ್ಕಳೇ ಎಂದು ಹೇಳಿದರು.

ಜಾನಪದ ಮಹಿಳಾ ಪ್ರಧಾನವಾದದ್ದು, ಇದಕ್ಕೆ ಇತಿಮಿತಿ ಹಾಗೂ ಚೌಕಟ್ಟು ಇರುವುದಿಲ್ಲ, ಮಹಿಳೆಯರಿಗೆ ಹೆಚ್ಚು ಜವಾಬ್ದಾರಿ ನೀಡಲು ರಾಜ್ಯಾದ್ಯಂತ ಮಹಿಳಾ ಘಟಕಗಳನ್ನು ದಶಮಾನೋತ್ಸವದ ಸಂದರ್ಭದಲ್ಲಿ ಸ್ಥಾಪಿಸಿ, ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮಹಿಳಾ ತಂಡಗಳನ್ನು ತರಬೇತಿ ಮೂಲಕ ಸೃಷ್ಟಿಸಿ ಮಹಿಳಾ ಜಾನಪದ ಜಾಗೃತಿಯನ್ನು ಮೂಡಿಸಲಾಗುವುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ರಾಜ್ಯ ಸಂಚಾಲಕಿ ಡಾ ಪೂರ್ಣಿಮಾ ಜೋಗಿ, ಜಾನಪದಿಂದ ಸಾಕಷ್ಟು ಜನ ಕೆಲಸ ಮಾಡಲು ಅವಕಾಶವಿದೆ. ರಾಜ್ಯಾದ್ಯಂತ ನಿರಂತರವಾಗಿ ಕೆಲಸ ಮಾಡುವ ಪ್ರಯತ್ನವನ್ನು ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ ಮಾಡುತ್ತದೆ ಎಂದು ತಿಳಿಸಿದರು.

ಪದವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಡಾ ನಂದಿನಿ, ಮುಂದಿನ ದಿನಗಳಲ್ಲಿ ಎಲ್ಲಾ ಶಾಲಾ ಕಾಲೇಜು ಹಂತಗಳಲ್ಲಿ ಜನಪದ ವಿಚಾರ ಸಂಕೀರ್ಣ, ತರಬೇತಿ, ಕಾರ್ಯಗಾರಗಳನ್ನು ಏರ್ಪಡಿಸಲಾಗುವುದು ಹಾಗೂ ಶಾಲಾ ಕಾಲೇಜುಗಳಲ್ಲಿ ಮಹಿಳಾ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷೆ ಡಾ ನಂದಿನಿ ಎನ್, ಡಾ ಭಾಗ್ಯಲಕ್ಷ್ಮಿ, ಡಾ ಅಶ್ವತಮ್ಮ ಕೆ, ಪ್ರೊ ನಂದಿನಿ ಎಸ್, ಪ್ರೊ. ಪುಷ್ಪಲತಾ ಕೆ ಪಿ, ಪ್ರೊ ಅಳಿಲಾವತಿ ಪಿ, ಪ್ರೊ ವಜ್ರೇಶ್ವರಿ, ಡಾ ಭಾರತಿ, ಶ್ವೇತಾ ಬಿ.ಎಸ್ ಪದವಿ ಪತ್ರ ಪ್ರದಾನ ಮಾಡಿದರು.

ಪ್ರೇಮಾಂಜಲಿ ಅಂಧ ಮಕ್ಕಳ ಶಾಲೆ ವಿದ್ಯಾರ್ಥಿಗಳಿಂದ ಜನಪದ ಗೀತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬಿ ಇ ಎಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ