ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ನಡೆಯದ ರೋಮಾಂಚನವಿಲ್ಲ. ಈ ಸಲದ 2024 ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ನಡೆದ ಅಂಥ ವಿಶೇಷ ವಿಸ್ಮಯಕಾರಿ ಘಟನೆಗಳೇನು ಎಂಬುದನ್ನು ಗಮನಿಸೋಣವೇ......?
ಕ್ರೀಡೆ ಎನ್ನುವುದು ಎಲ್ಲರನ್ನೂ ಒಟ್ಟುಗೂಡಿಸುತ್ತದೆ ಎಂಬುದರ ಪ್ರತೀಕವಾಗಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಪ್ರಪಂಚದ 200ಕ್ಕೂ ಹೆಚ್ಚಿನ ರಾಷ್ಟ್ರಗಳು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿವಿಧ ಕ್ರೀಡೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಿ ಪ್ರಾಬಲ್ಯವನ್ನು ಮೆರೆಯುತ್ತವೆ. ಇಂತಹ ಕ್ರೀಡಾಕೂಟಗಳಲ್ಲಿ ನೂರಾರು ದಾಖಲೆಗಳು ನಿರ್ಮಾಣವಾಗುವುದರ ಜೊತೆಗೆ ಅನೇಕ ಅಚ್ಚರಿಯ ಸಂಗತಿಗಳೂ ನಡೆಯುವ ಮೂಲಕ ಕ್ರೀಡಾಕೂಟವನ್ನು ವಿಶೇಷ ಮಾಡುತ್ತವೆ. ಅಂತಹಗಳಲ್ಲಿ ವಿಶೇಷ ಮತ್ತು ಅಷ್ಟೇ ಕುತೂಹಲಕಾರಿ ಎನಿಸುವಂತಹ ವಿಸ್ಮಯಕಾರಿ ಫಲಿತಾಂಶಗಳನ್ನು ಮೆಲುಕು ಹಾಕೋಣ ಬನ್ನಿ.
2024ರ ಒಲಿಂಪಿಕ್ಸ್ ಜುಲೈ 26 ಶುಕ್ರವಾರ ಆರಂಭವಾಗಿ ಆಗಸ್ಟ್ 11ರ ಭಾನುವಾರದವರೆಗೂ ಇದ್ದಕಾರಣ, ಎಲ್ಲಾ ಕ್ರೀಡಾಪಟುಗಳು ಸಾಕಷ್ಟು ಮುಂಚಿತವಾಗಿಯೇ ತಮ್ಮ ತಮ್ಮ ಕ್ರೀಡೆಗಳು ನಡೆಯುವ ಸ್ಥಳಕ್ಕೆ ಆಗಮಿಸಿದ್ದರು. ಭದ್ರತೆಯ ಕಾರಣದಿಂದಾಗಿ ಈ ಎಲ್ಲಾ ಕ್ರೀಡಾಳುಗಳು ಅನುಮತಿ ಇಲ್ಲದೇ, ಆ ಕ್ರೀಡಾಗ್ರಾಮದಿಂದ ಹೊರಗೆ/ಒಳಗೆ ಬರುವಂತಿಲ್ಲ.
ಐಫೆಲ್ ಟವರ್ ಪ್ರಕರಣ ಆದರೂ, ಒಲಿಂಪಿಕ್ಸ್ ಆರಂಭವಾದ ಮೊದಲನೇ ದಿನವೇ, ಜುಲೈ 26ರಂದು ಪ್ರಣಯ ನಗರಿ ಪ್ಯಾರಿಸ್ ನ ಐಫೆಲ್ ಟವರ್ ನೋಡುವ ಸಲುವಾಗಿ ಕ್ರೀಡಾಧಿಕಾರಿಗಳ ಅನುಮತಿಯಿಲ್ಲದೆ ಬ್ರೆಜಿಲ್ ನ ಈಜುಗಾರ್ತಿ ಆನಾ ಕೆರೊಲಿನಾ ವಿಯೆರಾ ಮತ್ತು ಆಕೆಯ ಗೆಳೆಯ ಮತ್ತೊಬ್ಬ ಬ್ರೆಜಿಲ್ ಈಜುಗಾರರಾಗಿರುವ ಗೇಬ್ರಿಯೆಲ್ ಸ್ಯಾಂಟೋಸ್ ಇಬ್ಬರೂ ಹೋಗಿದ್ದರು.
ಅಲ್ಲಿ ಕಳೆದ ಸುಂದರ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದನ್ನು ಗಮನಿಸಿದ ಅಧಿಕಾರಿಗಳು ಆಕೆಯನ್ನು ವಿಚಾರಿಸಲು ಮುಂದಾದಾಗ, ಆಕೆ ತೋರಿದ ಉದ್ಧಟತನದಿಂದಾಗಿ ಉಟ್ಟ ಬಟ್ಟೆಯಲ್ಲೇ ಒಲಿಂಪಿಕ್ಸ್ ಗೇಮ್ಸ್ ವಿಲೇಜ್ ನಿಂದ ಹೊರಹಾಕಲಾಯಿತು.
ತಕ್ಷಣವೇ ಬ್ರೆಜಿಲ್ ಗೆ ಕಳುಹಿಸಿದರೆ, ಆಕೆಯ ಗೆಳೆಯನಿಗೆ ಎಚ್ಚರಿಕೆಯನ್ನು ನೀಡಿದ್ದು ಕ್ರೀಡಾಕೂಟಕ್ಕೆ ಒಂದು ರೀತಿಯ ಕಪ್ಪು ಚುಕ್ಕೆಯಂತಾಯಿತು.

ವಿನೇಶ್ ಪೋಗಟ್ ಳ ಸಾಹಸ
ಇನ್ನು ಭಾರತದ ಪರ 50 ಕೆ.ಜಿ. ಕುಸ್ತಿ ಪಂದ್ಯಾವಳಿಯಲ್ಲಿ ಪ್ರಪ್ರಥಮ ಬಾರಿಗೆ ಫೈನಲ್ಸ್ ತಲುಪಿ, ಇನ್ನೇನು ಚಿನ್ನ/ಬೆಳ್ಳಿ ಪದಕದೊಂದಿಗೆ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಲು ತುದಿಗಾಲಲ್ಲಿ ನಿಂತಿದ್ದ ವಿನೇಶ್ ಪೋಗಟ್ ಫೈನಲ್ಸ್ ಪಂದ್ಯಾವಳಿಯ ದಿನ ದೇಹದ ತೂಕ ಹೆಚ್ಚಿಗೆ ಇದ್ದ ಕಾರಣ, ಹರಸಾಹಸ ಮಾಡಿ ಇಳಿಸಲು ಪ್ರಯತ್ನಪಟ್ಟರು. ಅದು ವಿಫಲವಾಗಿ ಕೇವಲ 100 ಗ್ರಾಂ ಹೆಚ್ಚಿನ ತೂಕದಿಂದಾಗಿ ಪಂದ್ಯಾಳಿಯಿಂದಲೇ ಅನರ್ಹಗೊಂಡು 140 ಕೋಟಿ ಭಾರತೀಯರ ದುಃಖಕ್ಕೆ ಕಾರಣಳಾದಳು. ಈ ಕುರಿತಂತೆ ಈಕೆ ಒಲಿಂಪಿಕ್ಸ್ ಕ್ರೀಡಾ ಮಂಡಳಿಗೆ ಮನವಿ ಸಲ್ಲಿಸಿದಳಾದರೂ, ಅದು ತಿರಸ್ಕೃತಗೊಂಡಿತು. ಹೀಗಾಗಿ ಭಾರತಕ್ಕೆ ಬಹುತೇಕ ಕೈಗೆ ಬಂದಿದ್ದ ಮತ್ತೊಂದು ಬೆಳ್ಳಿ ಪದಕ ಸಿಗದೇ ಹೋಯಿತು.

ಅಮನ್ ಸೆಹ್ರಾತ್ ನ ಸಾಧನೆ
ವಿನೇಶ್ ಪೋಗಟ್ ಪ್ರಸಂಗದಿಂದ ಎಚ್ಚೆತ್ತುಕೊಂಡ ಭಾರತದ ಕೇವಲ 21 ವರ್ಷದ ಕುಸ್ತಿ ಆಟಗಾರ ಅಮನ್ ಸೆಹ್ರಾತ್ ಕಂಚಿನ ಪದಕಕ್ಕಾಗಿ ನಡೆಯುವ ಸ್ಪರ್ಧೆಗೂ ಮುಂಚೆ ಅವರ ದೇಹದ ತೂಕ ಸುಮಾರು 4.6 ಕೆ.ಜಿ. ಹೆಚ್ಚಾಗಿದ್ದು, ಅನರ್ಹಗೊಳ್ಳುವ ಭೀತಿಯಿಂದಾಗಿ ಇಡೀ ರಾತ್ರಿ ಶ್ರಮವಹಿಸಿ ಕೇವಲ 10 ಗಂಟೆಗಳ ಕಾಲದಲ್ಲಿ ಮೊದಲ ಒಂದೂವರೆ ಗಂಟೆಗಳ ಕಾಲ ಮ್ಯಾಟ್ ಸೆಷನ್ ನೊಂದಿಗೆ ಪ್ರಾರಂಭಿಸಿ, ಅಲ್ಲಿ ಅಮನ್ ನಿಂತಿರುವ ಕುಸ್ತಿಯಲ್ಲಿ ತೊಡಗಿಸಿಕೊಂಡು ಚೆನ್ನಾಗಿ ಬೆವರುವ ಮೂಲಕ ಸ್ವಲ್ಪ ತೂಕವನ್ನು ಕಳೆದುಕೊಂಡರು.





