ಪಕ್ಷಿಗಳೆಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ನಾನಾ ವರ್ಣದ ರೆಕ್ಕೆ, ಪುಕ್ಕ, ವೈವಿಧ್ಯಮಯ ಕತ್ತು, ಕೊಕ್ಕು ಮೊದಲಾದುವುಗಳ ಮನವೋಹಕ ಮೈಮಾಟ, ಕತ್ತು ಕೊಂಕಿಸಿ ನೋಡುವ ಮುದ್ದಾದ ಮುಗ್ಧ ನೋಟ, ವಿಮಾನದ ಆವಿಷ್ಕಾರಕ್ಕೆ ಆಯಾಮನ್ನು ಒದಗಿಸಿ, ಕಲ್ಪನೆಗೂ ಮೀರಿ ಬಾನಂಗಳದಲ್ಲಿ ಸ್ವಚ್ಛಂಧವಾಗಿ ವಿಹರಿಸುವ ಅಥವಾ ಶಿಸ್ತುಬದ್ಧ ಸಿಪಾಯಿಗಳಂತೆ ಅಥವಾ ವಾಯುಪಡೆಯ ಏರ್‌ ಷೋನಂತೆ ಬಾನಿಗೆ ತೋರಣ ಅಥವಾ ಪುಷ್ಪ ಮಾಲೆಯಂತಿವೆ ಗುಂಪುಗುಂಪಾಗಿ ಸಾಗುವ ಹಾಗೂ ನೀರಿನಲ್ಲಿ ತೇಲಾಡುವ ನಯನ ಮನೋಹರ ಹಾಗೂ ಕಾವ್ಯಮಯವಾದ ದೃಶ್ಯವೈಭವ, ಮಂತ್ರಮುಗ್ಧಗೊಳಿಸುವ ಇನಿದನಿಗಳ ಇಂಚರ, ಮಾನವರಿಗೆ ಮಾದರಿಯಾಗುವಂತೆ ಶಿಸ್ತುಬದ್ಧ ಜೀವನ, ಗೂಡು ಕಟ್ಟುವ ಕೌಶಲ್ಯ, ಮರಿಗಳನ್ನು ಸಲಹುವ ಅಪರಿಮಿತ ಮಾತೃವಾತ್ಸಲ್ಯ, ಸಾಮರಸ್ಯ ಬದುಕು ಮೊದಲಾದವುಗಳೆಲ್ಲಾ ಯಾರನ್ನು ತಾನೇ ಸಮ್ಮೋಹನಗೊಳಿಸುವುದಿಲ್ಲ. ಆದರೇನು ಮಾಡುವುದು?

ಇತ್ತೀಚಿನ ದಿನಗಳಲ್ಲಿ ಕಾಡುಗಳೆಲ್ಲಾ ಕಾಂಕ್ರಿಟ್‌ ಜಂಗಲ್ ಆಗಿರುವ, ಆಗುತ್ತಿರುವ, ಆಗಲಿರುವ ನಗರ ಪ್ರದೇಶಗಳಲ್ಲಿ ವಿಶೇಷ ಪಕ್ಷಿಗಳಿರಲಿ ಸಾಮಾನ್ಯ ಪಕ್ಷಿಗಳಾದ ಕಾಗೆ, ಗುಬ್ಬಚ್ಚಿಗಳೂ ಕಾಣ ಸಿಗುತ್ತಿಲ್ಲ. ಆದರೆ, ನಮ್ಮ ಹಾಗೂ ನಮ್ಮ ಮುಂದಿನ ಪೀಳಿಗೆಯ ಅದೃಷ್ಟಕ್ಕೆ ಹಲವು ಪಕ್ಷಿಧಾಮಗಳು ಪಕ್ಷಿ ಸಂಕುಲವನ್ನು ಪೋಷಿಸುತ್ತಾ ಆಸಕ್ತರಿಗೆ ಪಕ್ಷಿಗಳ ಪ್ರಪಂಚವನ್ನು ಪರಿಚಯಿಸುತ್ತಿರುವುದು ಸಮಾಧಾನಕರ ಸಂಗತಿ. ಅಂತಹವುಗಳಲ್ಲಿ ಕಾವೇರಿ ನದಿ ತನ್ನ ಒಡಲಲ್ಲಿ ಮಮತೆಯಿಂದ ಪೋಷಿಸುತ್ತಾ ಪ್ರತಿ ವರ್ಷ ಮೂರು ಲಕ್ಷಕ್ಕೂ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತಿರುವ `ಕರ್ನಾಟಕ ಪಕ್ಷಿಕಾಶಿ' ಖ್ಯಾತಿಯ ರಂಗನತಿಟ್ಟು ಪ್ರಮುಖವಾದುದು. ಅದು ಮೈಸೂರು ಸಂಸ್ಥಾನದ ಅರಸರಾದ ಕಂಠೀರವ ನರಸಿಂಹರಾಜ ಒಡೆಯರ್‌ರವರ ಆಡಳಿತಾವಧಿಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಒಡ್ಡಿನ ಪರಿಣಾಮವಾಗಿ ಸುಂದರ ದ್ವೀಪಗಳು ಸೃಷ್ಟಿಯಾದವು. ಅವುಗಳಲ್ಲಿ ಶ್ರೀರಂಗಪಟ್ಟಣದಿಂದ 3 ಕಿ.ಮೀ. ದೂರದಲ್ಲಿ ನಿಸರ್ಗದ ರಮಣೀಯ ತಾಣದ ಪ್ರಶಾಂತ ಪರಿಸರದಲ್ಲಿ 40 ಎಕರೆ ವ್ಯಾಪ್ತಿಯನ್ನೊಳಗೊಂಡ ಆರು ಚಿಕ್ಕ ದ್ವೀಪ ಸಮೂಹವಾದ ರಂಗನತಿಟ್ಟು ಅಸಂಖ್ಯ ಪಕ್ಷಿ ಸಂಕುಲಕ್ಕೆ ಪೂರಕ ನೆಲೆಯಾಯಿತು.

ಇದನ್ನು ಕಂಡ ಪಕ್ಷಿತಜ್ಞ ಡಾ. ಸಲೀಂ ಅಲಿಯವರು ರಂಗನತಿಟ್ಟನ್ನು ಪಕ್ಷಿಧಾಮ ಎಂದು ಘೋಷಿಸಿ ಸೂಕ್ತ ವ್ಯವಸ್ಥೆಯೊಂದಿಗೆ ಪಕ್ಷಿ ಸಂಕುಲವನ್ನು ಪೋಷಿಸುವಂತೆ ವಿನಂತಿಸಿದರು. ಪ್ರಾಣಿಪಕ್ಷಿ ಪ್ರಿಯರಾದ ಒಡೆಯರ್‌ರವರೂ ಡಾ. ಸಲೀಂರಲ್ಲಿದ್ದ ಪಕ್ಷಿ ಸಂಕುಲದ ಕಳಿಕಳಿಯನ್ನು ಮನಗಂಡು ರಂಗನತಿಟ್ಟನ್ನು ಸಂರಕ್ಷಿತ ಪಕ್ಷಿಧಾಮ ಎಂದು ಘೋಷಿಸಿದರು. ಒಡೆಯರ್‌ರವರು ಈ ಕ್ರಮ ಕೈಗೊಳ್ಳದಿದ್ದರೆ, ವಿಶೇಷ ಹಾಗೂ ವಿಶಿಷ್ಟವಾದ ಇಲ್ಲಿನ ಪಕ್ಷಿಗಳು ಯಾರು ಯಾರ ಮನೆ ಅಥವಾ ಉದರ ಸೇರಿ ಅಸ್ತಿತ್ವದಲ್ಲಿ ಇಲ್ಲದಂತಾಗಿ ಬಿಡುತ್ತಿದ್ದವೋ ಏನೋ? ಈ ಕಾರಣಕ್ಕಾದರೂ ನಾವು ಒಡೆಯರ್‌ ಮತ್ತು ಡಾ. ಸಲೀಂ ಅಲಿಯವರಿಗೆ ಆಭಾರಿಯಾಗಿರಬೇಕು. ಈಗ ಅರಣ್ಯ ಇಲಾಖೆಯ ಸುಪರ್ದು ಮತ್ತು ನಿರ್ವಹಣೆಗೆ ಒಳಪಟ್ಟಿರುವುದು ಸಮಾಧಾನಕರ ಸಂಗತಿ. ಕಳೆದ ಹತ್ತಾರು ವರ್ಷಗಳ ಹಿಂದೆ ಈ ಪಕ್ಷಿಧಾಮದಲ್ಲಿ ಪಕ್ಷಿಗಳಿಗೇನೂ ಬರವಿರಲಿಲ್ಲ. ಆದರೆ, ಅವುಗಳನ್ನು ವೀಕ್ಷಿಸಲು ಬರುವ ಸಂದರ್ಶಕರಿಗೆ ಹೇಳಿಕೊಳ್ಳುವಂತಹ ಮೂಲಭೂತ ಸೌಲಭ್ಯ ಹಾಗೂ ಸೌಕರ್ಯಗಳು ಇರಲಿಲ್ಲ. ಆದರೀಗ ರಂಗನತಿಟ್ಟು  ಮೂಲಭೂತ ಅವಶ್ಯಕತೆ ಹಾಗೂ ಹಲವು ಹೊಸತನದಿಂದ ಕಂಗೊಳಿಸುತ್ತಾ ಪಕ್ಷಿ ಪ್ರೇಮಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿ ಪರಿವರ್ತನೆಯ ಪರ್ವದಲ್ಲಿರುವುದು ಶ್ಲಾಘನೀಯ. ಕಾವೇರಿ ನದಿಯ ಬಲ ದಂಡೆಯ ಮೇಲಿರುವ ಪಕ್ಷಿಧಾಮ ಪ್ರದೇಶದ ಆಸುಪಾಸಿನ ಖಾಸಗಿ ಕೃಷಿ ಭೂಮಿಯನ್ನು ಖರೀದಿಸಿ ವಿಸ್ತರಣೆಯ ವಿವಿಧ ಕಾಮಗಾರಿಗಳ ಮೂಲಕ ವಿನೂತನ ಸ್ಪರ್ಶ ನೀಡಲಾಗಿದೆ. ಸಂದರ್ಶಕರ ವಾಹನಗಳ ನಿಲುಗಡೆಗಾಗಿ ಈಗ ವಿಶಾಲ ಕಾರ್‌ ಪಾರ್ಕಿಂಗ್‌ ವ್ಯವಸ್ಥೆ ಇದೆ. ಮಣ್ಣಿನಿಂದ ಕೂಡಿದ್ದ ಕಾಲು ಹಾದಿಗೆಲ್ಲಾ ಟೈಲ್ಸ್ ಗಳನ್ನು ಅಳಡಿಸಲಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ