ಸರಸ್ವತಿ*
ಅಭಿನಯ ಚತುರ ಸತೀಶ್ ನೀನಾಸಂ ಅವರ ಭತ್ತಳಿಕೆಯಿಂದ ಬರ್ತಿರುವ ಬಹು ನಿರೀಕ್ಷಿತ ಸಿನಿಮಾ ದಿ ರೈಸ್ ಆಫ್ ಅಶೋಕ. ಟೈಟಲ್ ಹಾಗೂ ಕಂಟೆಂಟ್ ಮೂಲಕ ಪ್ರೇಕ್ಷಕರ ವಲಯದಲ್ಲಿ ಕುತೂಹಲ ಗರಿಗೆದರುವಂತೆ ಮಾಡಿರುವ ಈ ಚಿತ್ರದ ಮೊದಲ ಹಾಡು ಅನಾವರಣಗೊಂಡಿದೆ. ಮಾದೇವನ ಕುರಿತ ಹಾಡನ್ನು ಬೆಂಗಳೂರಿನ ಪ್ರಸಿದ್ಧ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು. ಸ್ವತಃ ಸತೀಶ್ ಏಳೋ ಏಳೋ ಮಹಾದೇವ ಗೀತೆ ಕ್ಯಾಚಿಮ್ಯಾಚಿ ಪದ ಪೊಣಿಸಿ ಸಾಹಿತ್ಯ ಬರೆದಿದ್ದಾರೆ.
ಹಾಡು ಬಿಡುಗಡೆ ಬಳಿಕ ಭಾವುಕರಾಗಿಯೇ ಮಾತನಾಡಿದ ಸತೀಶ್ ನೀನಾಸಂ, ಅಯೋಗ್ಯ ಲೆಕ್ಕ ಅಲ್ಲಾ ನನಗೆ ಮನೇಲಿ ಮಲಗಿದ್ದರು ಜನ ಆ ಸಿನಿಮಾ ನೋಡ್ತಾರೆ. ಅಯೋಗ್ಯ ಬ್ರಾಂಡ್ ಕ್ರಿಯೇಟ್ ಮಾಡಿದೆ. ಪ್ಯಾನ್ ಇಂಡಿಯಾ ಮಾಡೋ ಹುಚ್ಚ ಅಂತಾರೆ? ಒಂದು ಕೆಜಿಎಫ್, ಒಂದು ಕಾಂತಾರ ಮಾಡಬೇಕು ಅನ್ನೋ ಆಸೆ ನನಗಿದೆ. ಒಂದು ರೂಪಾಯಿ ನಾನು ಸೈನಿಂಗ್ ದುಡ್ಡು ತಗೊಂಡಿಲ್ಲ. ನಾಳೆ ಶೂಟಿಂಗ್ ಮಾಡಬೇಕು ಅಂತ ಹೋದ್ರೆ ನಿರ್ದೇಶಕ ಆತ್ಮಹತ್ಯೆ ಮಾಡ್ಕೊಂಡಿದ್ರು. ಅಲ್ಲಿಂದ ಜವಾಬ್ದಾರಿ ಜಾಸ್ತಿ ಆಯ್ತು. ಇಷ್ಟೆಲ್ಲ ಮಾಡಿ ಈ ಸಿನಿಮಾ ಶೂಟಿಂಗ್ ಶುರು ಆದಮೇಲೆ ನನ್ನ ಅಣ್ಣಗೆ ಆಕ್ಸಿಡೆಂಟ್ ಆಗುತ್ತೆ. ಮೂರು ವರ್ಷ ರಾತ್ರಿ ಕಣ್ಣೀರು ಹಾಕಿ ಸಿನಿಮಾ ಕಂಪ್ಲೀಟ್ ಮಾಡಿದ್ದೇವೆ. ನನ್ನ ಶತ್ರುಗಳು ಈ ಸಿನಿಮಾ ನೋಡಿ ಹೆಮ್ಮೆ ಪಡ್ತಾರೆ. ಒಂದು ಸಿನಿಮಾಗೆ 50 ಲಕ್ಷ ರೂ. ತಗೊಂಡು 6 ಸಿನಿಮಾ ಮಾಡಬೋದಿತ್ತು ಮೂರು ವರ್ಷದಲ್ಲಿ, ಆದ್ರೆ ಮಾಡ್ಲಿಲ್ಲ ಸರ್ವಸ್ವವು ನಮಗೆ ರೈಸ್ ಆಫ್ ಅಶೋಕ ಆಗಿತ್ತು ಎಂದಿದ್ದಾರೆ.

ನಟಿ ಸಪ್ತಮಿ ಗೌಡ ಮಾತನಾಡಿ, ಬಹಳ ಖುಷಿಯಾಗ್ತಿದೆ. ನಾನು ಸಿನಿಮಾ ತಂಡಕ್ಕೆ ಲಾಸ್ಟ್ ಆರ್ಟಿಸ್ಟ್ ಆಗಿ ಸೇರ್ಪಡೆಯಾಗಿದ್ದು. ನಾನು ಈ ಚಿತ್ರ ಭಾಗವಾಗಿದ್ದೇನೋ ಅಂದಿನಿಂದ ಇಂದಿನವರೆಗೂ ಯಾವುದೇ ಸಾಂಗ್, ಡೈಲಾಗ್ , ಸೀನ್, ಕಾಸ್ಟ್ಯೂಮ್ ಎಲ್ಲರ ಬಗ್ಗೆಯೂ ಚರ್ಚೆ ನಡೆಸುತ್ತಾರೆ. ನಮ್ಮ ಅಭಿಪ್ರಾಯ ಕೇಳುತ್ತಾರೆ. ಸತೀಶ್ ಸರ್ ತುಂಬಾ ಸಪೋರ್ಟ್ ಮಾಡಿದ್ದಾರೆ. ಹೂ ಮಾರುವ ಹುಡುಗಿ ಅಂಬಿಕಾ ಎಂಬ ಪಾತ್ರ ಮಾಡಿದ್ದೇನೆ. ಇಡೀ ತಂಡಕ್ಕೆ ಸಾಕಷ್ಟು ಜನ ಕೆಲಸ ಮಾಡಿದ್ದಾರೆ. ಎಲ್ಲರೂ ಅವರ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದರು.

ಶಿವನ ಕುರಿತಾದ ಈ ಹಾಡಿಗೆ ಕೈಲಾಶ್ ಕೇರ್ ಸಾಧ್ವಿನಿ ಕೊಪ್ಪ ಹಾಗೂ ಸಿದ್ದು ಧ್ವನಿಯಾಗಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಮಾದೇವ ಗೀತೆಯ ತೂಕ ಹೆಚ್ಚಿಸಿದೆ. ಬೀಸುವ ಕಲ್ಲು, ಗಾಳಿಯಲ್ಲಿಯೂ ಶಿವನ್ನು ವರ್ಣಿಸಿರುವ ಸತೀಶ್ ನೀನಾಸಂ, ಶಿವನ ಭಕ್ತಿ ಭಾವದಲ್ಲಿ ತೇಲುವಂತೆ ಮಾಡಿದ್ದಾರೆ.
ದಿ ರೈಸ್ ಆಫ್ ಅಶೋಕ 70ರ ದಶಕದಲ್ಲಿ ನಡೆಯುವ ಸಿನಿಮಾ. ಚಿತ್ರದಲ್ಲಿ ಸತೀಶ್ ನೀನಾಸಂ ಕ್ರಾಂತಿಕಾರಿ ಯುವಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡುವ ಯುವಕನ ಬದುಕು ಹಾಗೂ ಸಂಘರ್ಷದ ಸುತ್ತಾ ಸಾಗುವ ಕಥೆಯೇ ದಿ ರೈಸ್ ಆಫ್ ಅಶೋಕ.





