ಡಾ. ವೀಣಾಮೂರ್ತಿ ವಿಜಯ್
ನೃತ್ಯ ಜಗತ್ತಿನಲ್ಲಿ ಡಾ. ವೀಣಾಮೂರ್ತಿ ಹೆಸರು ಅತ್ಯಂತ ಸುಪ್ರಸಿದ್ಧ, ಅಷ್ಟೇ ಜನಪ್ರಿಯ ಕೂಡ. ಇವರ ಬಹುಮುಖ ಪ್ರತಿಭೆ ಅನನ್ಯ ಅಮೋಘ, ಅಪಾರ! ಇವರ ಬಗ್ಗೆ ಸವಿವರವಾಗಿ ತಿಳಿದುಕೊಳ್ಳೋಣವೇ…..?
ನೃತ್ಯ ಜಗತ್ತಿನಲ್ಲಿ ಡಾ. ವೀಣಾಮೂರ್ತಿ ಹೆಸರು ಅತ್ಯಂತ ಸುಪ್ರಸಿದ್ಧ, ಅಷ್ಟೇ ಜನಪ್ರಿಯ ಕೂಡ. ವರ್ಷವಿಡೀ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಕ್ರಿಯಾಶೀಲೆಯಾದ ಇವರ, ವಿಶ್ವಮಟ್ಟದಲ್ಲಿ ಗಮನ ಸೆಳೆದ ಪ್ರಯೋಗಿಕ ನೃತ್ಯ ಪರಿಕಲ್ಪನೆಗಳು ಎಂದೂ ವಿಶಿಷ್ಟವಾಗಿರುತ್ತವೆ. ನೂರಾರು ಉದಯೋನ್ಮುಖ ಮತ್ತು ನುರಿತ ಕಲಾವಿದರಿಗೆ ಅಪರಿಮಿತ ಉತ್ತೇಜನ, ಸದವಕಾಶ ಮತ್ತು ಪ್ರತಿಷ್ಠಿತ ವೇದಿಕೆಗಳನ್ನು ಒದಗಿಸುತ್ತಾ ಬಂದಿರುವುದು ಅವರ ಅಸ್ಮಿತೆ.
ಯಾವುದೇ ದೊಡ್ಡ ನೃತ್ಯೋತ್ಸವವಾಗಲಿ ಬಹು ಅಚ್ಚುಕಟ್ಟಾಗಿ, ಅಷ್ಟೇ ಸುಲಭದಲ್ಲಿ ಸಂಘಟಿಸುವ ಇವರ ಲೋಕಪ್ರಿಯತೆ, ಕಲಾವಿದರ ಸಂಪರ್ಕ, ಸಾಂಗತ್ಯ, ಕಾರ್ಯಚತುರತೆ, ಕ್ಷಮತೆ ಅವರು ಆಯೋಜಿಸುವ ನೃತ್ಯ ಹಬ್ಬ ಉತ್ಸವಗಳನ್ನು ನೋಡಿದವರಿಗೆ ಸ್ವಯಂ ವಿಧಿತ. ಎಂಥ ಸಣ್ಣಪುಟ್ಟ, ಉದಯೋನ್ಮುಖ ಕಲಾವಿದರ ಕಾರ್ಯಕ್ರಮ ಎಂದರೂ ತಾರತಮ್ಯ ಮಾಡದೆ ಸಮಾನ ಆದ್ಯತೆ ನೀಡಿ ಕಲಾಪೋಷಣೆ ನೀಡುವ ಔದಾರ್ಯ ಅವರ ಸರಳತೆಗೆ ಹಿಡಿದ ಕೈಗನ್ನಡಿ.
ಇಂಥ ಹಿರಿಯ ಪ್ರತಿಭಾನ್ವಿತ ಕೂಚ್ಚುಪುಡಿ ನೃತ್ಯ ಕಲಾವಿದೆ ವೀಣಾಮೂರ್ತಿರವರ ಚಟುವಟಿಕೆಗಳನ್ನು ಗಮನಿಸಿದರೆ ಅಚ್ಚರಿಯುಂಟಾಗುತ್ತದೆ. ಇವರ ಬಹಮುಖ ಪ್ರತಿಭೆಯ ಹಿನ್ನೆಲೆ, ಸಾಧನೆಗಳ ಯಾದಿ ಅಗಾಧ. ಸಕಲ ಕಲಾಪೂರ್ಣೆಯಾದ ಇವರ ನೃತ್ಯಯಾನವೇ ಕುತೂಹಲ ವಿಸ್ಮಯಗಳ ಆಗರ!

ನನಸಾದ ತಂದೆಯ ಕನಸು
ವೀಣಾರಿಗೆ `ನಾಟ್ಯ’ ಬಾಲ್ಯದ ಆಸಕ್ತಿಯೇನಲ್ಲಾದರೂ ತಂದೆ ಪಿ.ಎನ್.ಎಸ್ ಮೂರ್ತಿಯರಿಂದ. ದೊಡ್ಡ ಕಲಾಪೋಷಕರು, ಸಂಗೀತ ನೃತ್ಯಗಳ ಬಗ್ಗೆ ಅತೀವ ಆಸಕ್ತಿಯಿದ್ದ ಅವರಿಗೆ, ಮಗಳನ್ನು ನೃತ್ಯ ಕಲಾವಿದೆಯನ್ನಾಗಿ ರೂಪಿಸಲೇಬೇಕು ಎನ್ನುವ ಕನಸಿತ್ತು.
ಅದಮ್ಯ ಆಕಾಂಕ್ಷೆ, ಚುರುಕಾಗಿದ್ದ ಮಗಳ, ಆರನೇ ವಯಸ್ಸಿಗೆ ಗುರು ನಾಗಭೂಷಣ್ ರಿಂದ ಪ್ರತಿದಿನ ತಪ್ಪದೆ, ಭರತನಾಟ್ಯ ಶಿಕ್ಷಣದ ಆರಂಭಕ್ಕೆ ಬೆಂಬಲವಾದರು. ಅನಂತರ ನಾಟ್ಯ ಗುರು ಲೋಕಯ್ಯನವರಿಂದ ಕಲಿತು 10ನೇ ವಯಸ್ಸಿಗೆ `ರಂಗಪ್ರವೇಶ’ ಮಾಡಿದ ಅತ್ಯಂತ ಕಿರಿಯ ವಯಸ್ಸಿನ ನೃತ್ಯಗಾರ್ತಿ ಎಂಬ ಅಗ್ಗಳಿಕೆ ವೀಣಾರದು.
ಕಥಕ್ ನೃತ್ಯ ಕಲಿಕೆ
ಅನಂತರ ಲಚ್ಚು ಮಹಾರಾಜ್ ಶಿಷ್ಯ ಮುಕಂದರಾವ್ ರಿಂದ `ಕಥಕ್’ ನೃತ್ಯ ಕಲಿತು 13 ವರ್ಷಕ್ಕೆ `ರಂಗಮಂಚ್’ ಪೂರೈಸಿ, ಡಾ. ಕೊರಾಡ ನರಸಿಂಹರಾಯ ಅವರಿಂದ ಎಂಟು ವರ್ಷಗಳ ಕಾಲ ಕೂಚ್ಚುಪುಡಿ ನೃತ್ಯ ಕಲಿತ ವೀಣಾ, ತಮ್ಮ ಆಸಕ್ತಿಯನ್ನು `ಕೂಚ್ಚುಪುಡಿ’ ನೃತ್ಯ ಪ್ರಕಾರದಲ್ಲಿ ಗುರುತಿಸಿಕೊಂಡು ಗಂಭೀರ ಸಾಧನೆಗೆ ತೊಡಗಿದರು. 14 ವರ್ಷಕ್ಕೇ ಕೂಚ್ಚುಪುಡಿಯ `ರಂಗಪ್ರವೇಶ’ವನ್ನೂ ಮುಗಿಸಿಕೊಂಡ ವಿಶೇಷತೆ ಇವರದು. ಹೀಗೆ ಮೂರು ನೃತ್ಯ ಶೈಲಿಗಳಲ್ಲೂ ತುಂಬಾ ಎಳವೆಯಲ್ಲೇ ರಂಗ್ರಪ್ರವೇಶಗಳ `ತ್ರಿವಿಕ್ರಮ’ ಸಾಧಿಸಿದ ಹಿರಿಮೆ ಇವರದು.

ನೃತ್ಯದಲ್ಲಿ ಉನ್ನತ ಶಿಕ್ಷಣ
ಅನಂತರ ಗುರು ಸಿ.ಆರ್. ಆಚಾರ್ಯಲುರವರಿಂದ ಉನ್ನತ ಶಿಕ್ಷಣ. ಪದ್ಮಭೂಷಣ ಡಾ. ವೆಂಕಟಲಕ್ಷ್ಮಮ್ಮನವರಿಂದ `ಅಭಿನಯ ಕಲೆ’ಯಲ್ಲಿ ತರಬೇತಿ. ಡಾ. ಆರ್. ಸತ್ಯನಾರಾಯಣ, ಡಾ. ವೆಂಪಟಿ ಚಿನ್ನಸತ್ಯಂರಿಂದ ಹೆಚ್ಚಿನ ಮಾರ್ಗದರ್ಶನ, ಡಾ. ಮಾಯಾರಾವ್ ರವರಲ್ಲಿ ನೃತ್ಯ ಸಂಯೋಜನೆ ಕಲಿಕೆ ಬಗ್ಗೆ.
ಹೀಗೆ ವೀಣಾ ಅನೇಕ ವಿಶೇಷ ತರಬೇತಿಗಳನ್ನು ಪಡೆದುಕೊಂಡರು. ಇದರ ಜೊತೆಗೆ ಆರ್.ಕೆ. ಶ್ರೀನಿವಾಸಮೂರ್ತಿ ಹಾಗೂ ಚೆನ್ನಮ್ಮರಿಂದ ವೀಣೆಯನ್ನು ಎಂಟು ವರ್ಷಗಳ ಕಾಲ ಕಲಿತು, ಸಣ್ಣ ವಯಸ್ಸಿಗೇ ಕಚೇರಿಗಳನ್ನೂ ನೀಡಲಾರಂಭಿಸಿದ ವೈಶಿಷ್ಟ್ಯ ಇವರದು. ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಶ್ರೀರಂಗಮ್ಮನವರಿಂದ, ಚಂದ್ರಮೌಳಿಯವರಿಂದ ಮೃದಂಗವಾದವನ್ನೂ ಕಲಿತ ಬಹುಮುಖ ಪ್ರತಿಭಾನ್ವಿತೆ ಈಕೆ.
ಇತರ ಚಟುವಟಿಕೆಗಳಲ್ಲೂ ಆಸಕ್ತಿ
ಓದು ಹಾಗೂ ಇತರ ಚಟುವಟಿಕೆಗಳಲ್ಲೂ ವೀಣಾ ಮಹಾಜಾಣೆ. ಶಾಲೆಯಲ್ಲಿದ್ದಾಗ ಬ್ಯಾಡ್ಮಿಂಟನ್, ಯೋಗಶಿಕ್ಷಣ (ರಾಜ್ಯಕ್ಕೆ ರನ್ನರ್ ಅಪ್), ಸಂಸ್ಕೃತದಲ್ಲಿ ಐದು ಪರೀಕ್ಷೆಗಳನ್ನೂ ಮುಗಿದರು. ಫನಪಾಟಿಗಳಿಂದ ವೇದಪಾಠಗಳನ್ನು ಅಭ್ಯಾಸ ಮಾಡಿ, ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಉತ್ತಮ ತಳಹದಿ ಪಡೆದ ಅದೃಷ್ಟವಂತೆ. ಅನೇಕ ಕನ್ನಡ ನಾಟಕಗಳಲ್ಲಿ ಅಭಿನಯಿಸಿದ ಅನುಭವ ಉಂಟು.

ಸರ್ಕಾರಿ ನೃತ್ಯೋತ್ಸವಗಳು
ಎಂಬತ್ತರ ದಶಕದಲ್ಲಿ ನಾಡಿನ ಯಾವುದೇ ಸರ್ಕಾರಿ ನೃತ್ಯೋತ್ಸವಗಳಾಗಲಿ ವೀಣಾರ ನೃತ್ಯ ಪ್ರದರ್ಶನ ಇರಲೇಬೇಕು ಎಂಬ ಜನಪ್ರಿಯತೆ. ಕೊನಾರ್ಕ್ ಮತ್ತು ಖಜುರಾಹೋ ಉತ್ಸವಗಳಲ್ಲಿ ಏಕವ್ಯಕ್ತಿ ನೃತ್ಯ ಪ್ರದರ್ಶನ. ಭರತನಾಟ್ಯ, ಕಥಕ್ ಮತ್ತು ಕೂಚ್ಚುಪುಡಿ ಮೂರು ನೃತ್ಯ ಪ್ರಕಾರಗಳಲ್ಲೂ ರಂಗಪ್ರವೇಶ ನೆರವೇರಿಸಿಕೊಂಡರೂ ಪರಿಣತಿ, ಪ್ರಯೋಗಶೀಲತೆ ಸಾಧಿಸಿದ್ದು ಮಾತ್ರ ಕೂಚ್ಚುಪುಡಿಯಲ್ಲೇ. ತಮ್ಮ `ರಾಜ ರಾಜೇಶ್ವರಿ ಕಲಾನಿಕೇತನ’ ನೃತ್ಯ ಸಂಸ್ಥೆಯ ನಿರ್ದೇಶಕಿ ನಾಟ್ಯಗುರುವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣ ನೀಡುವ ಜೊತೆಗೆ, ತಾವು ಹೊಸ ಪರಿಕಲ್ಪನೆಯ ನೃತ್ಯ ನಾಟಕಗಳನ್ನೂ ರಚಿಸಿ, ನಿರ್ದೇಶಿಸಿ ದೇಶ ವಿದೇಶಗಳಲ್ಲಿ ಪ್ರದರ್ಶಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವುದು ವೀಣಾರ ಅಗ್ಗಳಿಕೆ.
ಅಖಂಡ ಬಹುಮುಖ ಪ್ರತಿಭೆ
ಕಳೆದ 40 ವರ್ಷಗಳಿಂದ ವರ್ಷದುದ್ದಕ್ಕೂ ಒಂದಿಲ್ಲೊಂದು ಸಂಗೀತ, ನೃತ್ಯೋತ್ಸವ, ಏಮ್ಸ್ ನಿರ್ದೇಶಕಿಯಾಗಿ ಬಿ.ಐ.ಎ.ಎಫ್ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು, ವರ್ಲ್ಡ್ ಡ್ಯಾನ್ಸ್ ಅಲೆಯನ್ಸ್ ಕರ್ನಾಟಕ ಚಾಪ್ಟರ್, ಏಷ್ಯಾ ಪೆಸಿಫಿಕ್ ನ ಅಧ್ಯಕ್ಷರೂ ಆಗಿ, ಅಸಂಖ್ಯಾತ ಕಲಾವಿದರಿಗೆ ವೇದಿಕೆಗಳನ್ನು ಒದಗಿಸುತ್ತ ಬಂದಿರುವ ಕಲಾ ಪ್ರೋತ್ಸಾಹಕರು ಇವರು.

ಕೂಚ್ಚುಪುಡಿಯಲ್ಲಿ ಪಾರಂಗತೆ
ಕೂಚ್ಚುಪುಡಿಯಲ್ಲಿ ಭಾಮಾಕಾಪಂ ಮತ್ತು ತರಂಗಂ ಪರಿಣತಿ ಅಲ್ಲದೆ, ನೃತ್ಯ ಸಂಯೋಜಕಿಯಾಗಿ ಗೀತಾ ಗಂಗಾಧರ, ರಾಮಾಯಣ ಕಥಾಸುಧಾ, ಚಿತ್ರಾಂಗದಾ, ಗಂಗಾ ಗೌರಿ ವಿಲಾಸ ನೃತ್ಯರೂಪಕಗಳ ರಚನೆ, ಕೃಷ್ಣಲೀಲಾ ಪ್ರಸಂಗಗಳು, ಜಯದೇವನ ಅಷ್ಟಪದಿಗಳು, ದೇವಾಲಯ ವಿಶಿಷ್ಟ ನೃತ್ಯ ಸಂಯೋಜನೆಯಲ್ಲಿ ವೀಣಾ ಛಾಪು ಮೂಡಿಸಿ ಹೆಸರು ಗಳಿಸಿದ್ದಾರೆ.
ವಿದೇಶಗಳಲ್ಲಿ ನೃತ್ಯೋತ್ಸವ
ಅಮೆರಿಕಾ, ಫ್ರಾನ್ಸ್, ಜರ್ಮನಿಯ ದೂರದರ್ಶನ, ರೇಡಿಯೋ ಕೇಂದ್ರಗಳಲ್ಲಿ ಸೋದಾಹರಣ ಪ್ರಾತ್ಯಕ್ಷಿಕೆಗಳನ್ನು ನೀಡಿರುವುದು ಇವರ ಅತಿಶಯದ ಸಂಗತಿ.
ನರ್ತಿಸುತ್ತಲೇ ರಂಗೋಲಿ!
ಅತ್ಯಂತ ಕ್ಲಿಷ್ಟ ತಾಳವೆನಿಸಿದ `ಸಿಂಹನಂದಿನಿ’ಯನ್ನು ನರ್ತಿಸುತ್ತಲೇ ರಂಗೋಲಿಯ ಮೇಲೆ ಸಿಂಹದ ಚಿತ್ರ ಬಿಡಿಸುವ ಕಲೆ ಇವರಿಗೆ ಕರಗತ. ಸರಸ್ವತಿ, ಚಾಮುಂಡೇಶ್ವರಿ, ಅಷ್ಟಮೂರ್ತಿ ದರ್ಶನ ಮುಂತಾದ ಪ್ರಯೋಗಾತ್ಮಕ ನೃತ್ಯ ಸಂಯೋಜನೆಯೊಂದಿಗೆ ಶಿಷ್ಯ ತಂಡದೊಂದಿಗೆ ನೃತ್ಯ ಪ್ರದರ್ಶಿಸಿದ್ದಾರೆ. ಟಿಬೆಟ್ ಶ್ಲೋಕಗಳಿಗೆ ನೃತ್ಯ ಅಳವಡಿಸಿ ಯು.ಎಸ್.ಎನಲ್ಲಿ ನೃತ್ಯ ಪ್ರದರ್ಶಿಸಿದ್ದಾರೆ. `ವಿಜಯ ವಿಲಾಸ’ ಕರ್ನಾಟಕ ಯಕ್ಷಗಾನವನ್ನು ಕೂಚ್ಚುಪುಡಿ ಶೈಲಿಯೊಂದಿಗೆ ಸಮ್ಮಿಳಿತಗೊಳಿಸಿ ಪ್ರದರ್ಶಿಸಿದ್ದು ನೂತನ ಪ್ರಯೋಗ.
ಹೆಸರು ತಂದುಕೊಟ್ಟ ಪ್ರಕಾರಗಳು
ಅವರ ನಿರ್ದೇಶನದ ನೃತ್ಯರೂಪಕ `ಸಿಲಪ್ಪದಿಗಾರಂ’ ಮತ್ತು `ಶ್ರೀ ರಾಮಾನುಜ ವೈಭವಂ’ ಕೃತಿಗಳು ಹೆಸರು ತಂದುಕೊಟ್ಟ ನಿರ್ಮಾಣಗಳು. ಅದೇ ಸಾಲಿಗೆ ಸೇರುವ `ಚಿತ್ರಪಟ’ ಮತ್ತು `ಸ್ತ್ರೀ’ ನೃತ್ಯ ನಾಟಕಗಳೂ ಬಹುಮಾನ್ಯವಾಗಿವೆ. ಇತ್ತೀಚಿನ ನೃತ್ಯ ಸಂಯೋಜನೆಗಳಾದ ಹಾರ್ಮೋನಿ, ಶಶಿರೇಖಾ ಪರಿಣಯ, ಅಗಸ್ತ್ಯ, ಶ್ರೀ ರಾಮಯಾನ, ಧ್ರುವ ಸ್ಟಾರ್, ಬಲರಾಮ ಆನೆಯ ಕಥೆ, ಗೋ ಚೇಂಜ್ ದ ವರ್ಲ್ಡ್, ತುಂಗಭದ್ರಾ ಇವುಗಳೆಲ್ಲಾ 50ಕ್ಕೂ ಹೆಚ್ಚು ಹೆಸರಾಂತ ನೃತ್ಯ ಕವಾವಿದರುಗಳು ಪಾಲ್ಗೊಂಡ ಬೃಹತ್ ನೃತ್ಯ ಸಂಯೋಜನೆಗಳಾಗಿವೆ.
ವಿದ್ಯಾರ್ಥಿಗಳಿಗೆ ತರಬೇತಿ
ನರಸ ಕೃಷ್ಣ ಹಾಗೂ ನರಸದುರ್ಗಾ ಅಮೆರಿಕಾದಲ್ಲಿನ ನೃತ್ಯ ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ನಿರ್ದೇಶನ ನೀಡಿ ಅಮೆರಿಕಾದಲ್ಲಿ ಪ್ರದರ್ಶಿಸಲ್ಪಟ್ಟಿವೆ. `ಕೃಷ್ಣ ದಿ ಮ್ಯಾನ್ ಫಾರ್ ಆಲ್ ಟೈಮ್ಸ್’ ಎಂಬ ಕಾಂಟೆಂಪರರಿ ನೃತ್ಯ ನಾಟಕವನ್ನು ಹತ್ತು ಜನ ಸಂಗೀತಗಾರರೊಂದಿಗೆ ಡಾ. ಸುಮಾ ಸುಧೀಂದ್ರರರ ಸಂಗೀತ ನಿರ್ದೇಶನದಲ್ಲಿ ನೃತ್ಯ ನಿರ್ದೇಶಿಸಿ ಯಶಸ್ವಿಯಾಗಿದ್ದಾರೆ.
`ಶ್ರೀ ರಾಜರಾಜೇಶ್ವರಿ ಕಲಾನಿಕೇತನ’ದ ಆಶ್ರಯದಲ್ಲಿ ಸುಮಾರು 35 ವರ್ಷಗಳಿಗೂ ಹೆಚ್ಚುಕಾಲ ರಾಮೋತ್ಸವ ನಡೆಸಿ ಅಂತಾರಾಷ್ಟ್ರೀಯ ಖ್ಯಾತಿಯ ಸಂಗೀತ ಕಲಾವಿದರ ಕಚೇರಿಗಳನ್ನು ಆಯೋಜಿಸಿದ ಅನುಭವ, ಕೀರ್ತಿ ಇವರದು.
ಪುಸ್ತಕ ರಚನೆ
ಕರ್ನಾಟಕದಲ್ಲಿ ಕೂಚ್ಚುಪುಡಿ ಅಸ್ತಿತ್ವ ಕುರಿತು `ತೆರೆ’ ಪುಸ್ತಕ ರಚನೆ, ಕೇಂದ್ರ ಸರ್ಕಾರದ ಸೀನಿಯರ್ ಫೆಲೋಶಿಪ್ ಗಳಿಕೆ, ಕೂಚ್ಚುಪುಡಿ ಮತ್ತು ಯಕ್ಷಗಾನ ಏಕ್ಯಕ್ತಿ ಅಭಿವ್ಯಕ್ತಿ ಬಗ್ಗೆ ಸಂಶೋಧನೆ, `ಸಮನ್ವಯ’ ಡ್ಯಾನ್ಸ್ ಕಂಪನಿಯ ನೇತೃತ್ವ ವಹಿಸಿಕೊಂಡು ರಾಜ್ಯಾದ್ಯಂತ ನೃತ್ಯ ಪ್ರದರ್ಶನ ಇವರ ಹೆಗ್ಗಳಿಕೆ. ಪ್ರಶಸ್ತಿ ಪುರಸ್ಕಾರಗಳು.
ನಾಲ್ಕು ದಶಕಗಳಿಗೂ ಮೀರಿದ ವೀಣಾರ ಅನುಪಮ ಸೇವೆ ಪರಿಗಣಿಸಿ ಕರ್ನಾಟಕ ಸಂಗೀತನೃತ್ಯ ಅಕಾಡೆಮಿ `ಕರ್ನಾಟಕ ಕಲಾಶ್ರೀ,’ ಮಹಾನಗರ ಪಾಲಿಕೆಯ `ಕೆಂಪೇಗೌಡ’ ಪ್ರಶಸ್ತಿಗಳೊಂದಿಗೆ ಭರತಕಲಾ ಪ್ರಪೂರ್ಣೆ, ಕೂಚ್ಚುಪುಡಿ ನೃತ್ಯ ವಿಶಾರದೆ, ನಾಟ್ಯ ಮಯೂರಿ, `ಕಲಾ ಆರತಿ ರತ್ನ’ ಬಿರುದು, ಸನ್ಮಾನಗಳು ಲಭಿಸಿವೆ.
ಜೊತೆಗೆ ನಾಟ್ಯಗುರು ಕೊರಾಡ ನರಸಿಂಹರಾವ್ ಸ್ಮಾರಕ ಪ್ರಶಸ್ತಿ (ಆಂಧ್ರ ಸರ್ಕಾರದ ಸಂಸ್ಕೃತಿ ಇಲಾಖೆ), ವರ್ಲ್ಡ್ ಕೂಚ್ಚುಪುಡಿ ಕಾನ್ಛರೆನ್ಸ್ ಕನ್ವೆನ್ಶನ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗೌರವ ಸನ್ಮಾನ, ವಸುಂಧರಾ ಪರ್ಫಾರ್ಮಿಂಗ್ ಆರ್ಟ್ಸ್, ಮೈಸೂರು ಗೌರವ ಸನ್ಮಾನ ಮುಂತಾದ ಅಸಂಖ್ಯಾತ ಗೌರವಗಳು ಇವರಿಗೆ ಸಂದಿವೆ. ಇವಕ್ಕೆಲ್ಲ ಶಿಖರಪ್ರಾಯವಾಗಿ ಅಮೆರಿಕಾದ ಡ್ಯೂಕ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಲಭಿಸಿದೆ!
– ವೈ.ಕೆ. ಸಂಧ್ಯಾ ಶರ್ಮ





