ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಗೆದ್ದ ವಿಜಯೋತ್ಸವಕ್ಕೆ ಒಂದೇ ದಿನದಲ್ಲಿ ಕಾರ್ಮೋಡ ಕವಿದಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ವಿಜಯೋತ್ಸವವು ವಿಜಯದ ಸಂಭ್ರಮವನ್ನೇ ಕಸಿದಿದೆ. ವಿಜಯೋತ್ಸವಕ್ಕೆ ಲಕ್ಷಾಂತರ ಮಂದಿ ಜಮಾಯಿಸಿದ್ದರಿಂದ ಕಾಲ್ತುಳಿತ ಉಂಟಾಗಿ, 11 ಅಭಿಮಾನಿಗಳು ಮೃತಪಟ್ಟಿದ್ದು, 47 ಮಂದಿ ತೀವ್ರ ಗಾಯಗೊಂಡಿದ್ದಾರೆ.ತಂಡದ ಗೆಲುವನ್ನು ಸಂಭ್ರಮಿಸಲು ಬಂದವರು ಸಾವಿನ ಮನೆ ಸೇರಿದ್ದಾರೆ. ಆರ್ಸಿಬಿ ತಂಡ 18 ವರ್ಷಗಳ ಬಳಿಕ ಕಪ್ ಗೆದ್ದ ಖುಷಿ ಒಂದೇ ದಿನದಲ್ಲೇ ಕಮರಿ ಹೋಗಿದೆ.
ಈ ಘಟನೆಯಲ್ಲಿ 47 ಮಂದಿ ಗಾಯಗೊಂಡಿದ್ದು, ಅವರಲ್ಲಿ 33 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ.ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಗೆಲುವಿನ ವಿಜಯೋತ್ಸವ ಹಾಗೂ ತಂಡದ ಆಟಗಾರರಿಗೆ ವಿಶೇಷ ಅಭಿನಂದನಾ ಸಮಾರಂಭ ಏರ್ಪಡಿಸಿತ್ತು. ಈ ಸುದ್ದಿ ತಿಳಿದ ಲಕ್ಷಾಂತರ ಅಭಿಮಾನಿಗಳು ಬೆಳಗ್ಗೆಯಿಂದ ಕ್ರೀಡಾಂಗಣದ ಬಳಿ ಜಮಾಯಿಸಲು ಆರಂಭಿಸಿದರು. ಗಂಟೆಗಟ್ಟಲೆ ಕಾದರೂ ಅವರಿಗೆ ಕ್ರೀಡಾಂಗಣದ ಒಳಗೆ ಪ್ರವೇಶಿಸಲು ಅವಕಾಶ ದೊರೆಯಲಿಲ್ಲ.
ಮಧ್ಯಾಹ್ನದ ಸುಮಾರು 3,6,7,12,17 ಹಾಗೂ 18ನೇ ಗೇಟ್ ತೆರೆಯುತ್ತಿದ್ದಂತೆ ಅಭಿಮಾನಿಗಳು ಏಕಾಏಕಿ ನುಗ್ಗಲು ಮುಂದಾದರು. ಈ ವೇಳೆ ನೂಕು ನುಗ್ಗಲು, ತಳ್ಳಾಟ ಉಂಟಾಗಿ ಸಾಕಷ್ಟು ಮಂದಿ ನೆಲಕ್ಕೆ ಬಿದ್ದಿದ್ದಾರೆ. ಕ್ರೀಡಾಂಗಣದ ಒಳಗೆ ಹೋಗುವ ಧಾವಂತದಲ್ಲಿ ಕಾಲ್ತುಳಿತ ಉಂಟಾಗಿದೆ.ಕೆಳಗೆ ಬಿದ್ದು ಗಾಯಗೊಂಡವರನ್ನು ಪೊಲೀಸರು ಸಮೀಪದ ಬೌರಿಂಗ್, ವೈದೇಹಿ ಹಾಗೂ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಸಾಕಷ್ಟು ಗಾಯಗೊಂಡವರು ಮಾರ್ಗ ಮಧ್ಯೆಯೇ ಉಸಿರು ಚೆಲ್ಲಿದ್ದಾರೆ. ಮತ್ತಷ್ಟು ಮಂದಿ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಸ್ಥಳದಲ್ಲಿದ್ದ ಜನರು ಕಾಲ್ತುಳಿತದಲ್ಲಿ ಸಿಲುಕಿದವರನ್ನು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ ಗಾಯಾಳುಗಳಲ್ಲಿ ಕೆಲವರು ಅರೆ ಪ್ರಜ್ಞಾವಸ್ಥೆ ತಲುಪಿದ್ದು, ಸಾಕಷ್ಟು ಮಂದಿ ಕೈ ಕಾಲುಗಳು ಮುರಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.