ವಿವಾಹ ಮುರಿದಾಗ ಸಮತೋಲನ ಅಗತ್ಯ
ವಿವಾಹ ಸಂಬಂಧವನ್ನು ಕಾಯ್ದುಕೊಂಡು ಹೋಗುವ ಜವಾಬ್ದಾರಿ ಈಗ ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರ ಹೆಗಲೇರಿ ಕೂತಿದೆ. ವಿವಾಹ ಕಾನೂನುಗಳು ಮತ್ತು ನ್ಯಾಯಾಲಯಗಳು ತಮ್ಮ ನಿರ್ಧಾರಗಳಲ್ಲಿ ಹೆಂಡತಿಯರನ್ನು `ಮುಗ್ಧ' ಎಂದು ಮನ್ನಿಸಿ, ಆದಾಯ ಮತ್ತು ಆಸ್ತಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಪಾಲು ಕೊಡಿಸಿ ಪರೋಕ್ಷ ರೂಪದಲ್ಲಿ ಜಗಳಕ್ಕೆ ಕುಮ್ಮಕ್ಕು ಕೊಡುತ್ತಿವೆ.
ಇತ್ತೀಚೆಗೆ ದೆಹಲಿ ಸೆಷನ್ಸ್ ನ್ಯಾಯಾಧೀಶರು ಮಹಿಳೆಯೊಬ್ಬಳಿಗೆ ತಿಂಗಳಿಗೆ ಒಂದೂವರೆ ಲಕ್ಷ ರೂ. ಜೀವನಾಂಶದ ರೂಪದಲ್ಲಿ ಕೊಡಿಸಿದರು. ಆದರೆ ಮಹಿಳೆ ಚೆನ್ನಾಗಿ ಓದು ಬಲ್ಲವಳು. ನೌಕರಿ ಮಾಡುವ ಅರ್ಹತೆ ಇದ್ದವಳು. ಪತಿಯ ಮನೆಯಲ್ಲಿದ್ದಾಗ ಆಕೆಗೆ ಸಿಗುವಷ್ಟು ಮೊತ್ತ, ಏಕಾಂಗಿಯಾಗಿರುವಾಗಲೂ ಲಭಿಸಬೇಕು, ಜೊತೆಗೆ ಪರಿಹಾರ ಮೊತ್ತ ಕೊಡ ಸಿಗಬೇಕು.
ಮದುವೆ ಮುರಿದು ಬಿದ್ದಾಗ ಹೆಂಡತಿಯರು ನಿರಾಶ್ರಿತರಾಗಬಾರದು. ಕುಟುಂಬ ಬೀದಿಗೆ ಬೀಳಬಾರದು ಎಂಬುದೇನೋ ಸರಿ, ಆದರೆ ಆ ಕಾರಣಕ್ಕಾಗಿ ಗಂಡ ಆರ್ಥಿಕವಾಗಿ ಗುಲಾಮನಾಗುವ ಕಾನೂನು ವ್ಯವಸ್ಥೆ ಕೂಡ ಸರಿಯಲ್ಲ.
ಇಂದಿನ ಯುಗದಲ್ಲಿ ಯುವಕ ಯುವತಿಯರು ತಮ್ಮ ತಮ್ಮ ಅಂತಸ್ತು ನೋಡಿಯೇ ವಿವಾಹವಾಗುತ್ತಾರೆ. ಆಸ್ತಿ ಗಂಡನ ಹೆಸರಿನ ಮೇಲೆಯೇ ಇರಬಹುದು. ಆದರೆ ಆ ಆಸ್ತಿಯ ಮೇಲೆ ಹೆಂಡತಿಗೆ ಪರಿಪೂರ್ಣ ಹಕ್ಕು ಇರುತ್ತದೆ. ಒಂದುವೇಳೆ ಗಂಡಹೆಂಡತಿ ಮದುವೆ ಮುರಿದುಕೊಂಡರೆ ಅದರ ದುಷ್ಪರಿಣಾಮ ಇಬ್ಬರ ಮೇಲೂ ಉಂಟಾಗಬೇಕು. ಆದರೆ ಆ ಮದುವೆ ಮುರಿಯಲು ಕೇವಲ ಗಂಡನನ್ನಷ್ಟೇ ಹೊಣೆಗಾರನನ್ನಾಗಿ ಮಾಡಬಾರದು.
ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರಿಗೆ ಪರಿಪೂರ್ಣ ಶಿಕ್ಷಣ ದೊರೆಯುತ್ತಿದೆ. ವಿವಾಹಕ್ಕೂ ಮುಂಚೆಯೇ ಯುವತಿಯರು ಉದ್ಯೋಗದ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಹೆಚ್ಚಿನ ಮನೆಯಲ್ಲಿ ಗಂಡಹೆಂಡತಿ ಇಬ್ಬರೂ ಉದೋಗಿಗಳಾಗಿದ್ದಾರೆ. ಮಕ್ಕಳ ಹೊರತಾಗಿ ಆರ್ಥಿಕ ಪಾಲುದಾರಿಕೆ ಕೂಡ ನಿಭಾಯಿಸುತ್ತಿದ್ದಾರೆ. ಇಂತಹ ಪತ್ನಿಯರು ಪತಿಯರನ್ನು ಜೀವನವಿಡೀ ಮೆಂಟೇನನ್ಸ್ ನ ಆರ್ಥಿಕ ಗುಲಾಮನನ್ನಾಗಿಸಿಕೊಳ್ಳುವುದು ವಿವಾಹ ವ್ಯವಸ್ಥೆಯನ್ನು ಹಾಳು ಮಾಡಬಹುದು.
ಇತ್ತೀಚೆಗೆ ಬಹಳಷ್ಟು ಪತಿಯರು ನೌಕರಿ ಬಿಟ್ಟು, ವ್ಯಾಪಾರ ತೊರೆದು, ಅಘೋಷಿತ ಗಳಿಕೆಗೆ ಇಳಿಯುತ್ತಾರೆ. ಇದರ ಮುಖ್ಯ ಉದ್ದೇಶ ಹೆಂಡತಿಗೆ ಜೀವನಾಂಶ ನೀಡಬಾರದು ಎಂಬುದಾಗಿರುತ್ತದೆ. ಅವರು ವಕೀಲರಿಗೆ ಹೆಚ್ಚು ಖರ್ಚು ಮಾಡುತ್ತಾರೆ, ಹೆಂಡತಿಯರಿಗೆ ಕಡಿಮೆ. ಏಕೆಂದರೆ ಅವರ ಮೈ ಮನಸ್ಸಿನಲ್ಲಿ ಅಹಂ ಪುಟಿದೇಳುತ್ತದೆ.
ಗಂಡನೇ ಹೆಂಡತಿಯ ಯೋಗಕ್ಷೇಮ ನೋಡಿಕೊಳ್ಳಬೇಕು ಎಂಬುದು ಇಂದಿನ ಸಮಾನತೆಯ ಯುಗದಲ್ಲಿ ತಪ್ಪು ಸಿದ್ಧಾಂತವಾಗಿದೆ. ಈ ಸಿದ್ಧಾಂತದಲ್ಲಿ ಬದಲಾವಣೆ ತರುವ ಅಗತ್ಯವಿದೆ. ಏಕೆಂದರೆ ಇದು ಕ್ರಮೇಣ ಬ್ಲ್ಯಾಕ್ಮೇಲ್ನ ಅಸ್ತ್ರವಾಗಿದೆ. ಪತ್ನಿಯರು ತಮ್ಮ ಗಂಡಂದಿರಿಗೆ `ನೀನು ನನ್ನ ಆದೇಶ ಪಾಲಿಸು, ಇಲ್ಲದಿದ್ದರೆ ಮೊಕದ್ದಮೆ ಎದುರಿಸಲು ಸಿದ್ಧನಾಗು' ಎಂದು ಬೆದರಿಕೆ ಹಾಕುವ ಮಟ್ಟಕ್ಕೆ ಇಳಿದಿದ್ದಾರೆ.
ಈ ಮೊಕದ್ದಮೆಗಳಲ್ಲಿ ಇಬ್ಬರೂ ತೊಂದರೆಗೊಳಗಾಗುತ್ತಾರೆ. ತನ್ನ ನಿರ್ಧಾರದಿಂದಾಗಿ ಗಂಡ ಏಕಾಂಗಿಯಾಗುತ್ತಾನೆ, ಸಹಾಯಕ್ಕಾಗಿ ಅಂಗಲಾಚಬೇಕಾಗುತ್ತದೆ ಎಂಬುದನ್ನು ಪತ್ನಿಯರು ಮರೆತುಬಿಡುತ್ತಾರೆ. ಹೆಂಡತಿಯರೇನೂ ಖುಷಿಯಾಗಿರುವುದಿಲ್ಲ. ಅವರೂ ಕೂಡ ಖಿನ್ನತೆಗೆ ತುತ್ತಾಗುತ್ತಾರೆ. ಯಾರು ತನ್ನನ್ನು ಲೂಟಿ ಮಾಡುತ್ತಿರುತ್ತಾರೊ ಅವರ ಮೇಲೆಯೇ ಆಕೆ ಆಶ್ರಿತರಾಗಬೇಕಾಗುತ್ತದೆ. ಲೂಟಿ ಮಾಡುವರು ತಂದೆ ತಾಯಿ, ಅಣ್ಣ ಅತ್ತಿಗೆ, ಗೆಳೆಯ ಗೆಳತಿ ಇವರಲ್ಲಿ ಯಾರೇ ಆಗಿರಬಹುದು. ಅಮ್ಮನ ಮೇಲೆ ಅವಲಂಬಿಸಿರುವ ತನಕ ಮಕ್ಕಳು ಅವರ ಯೋಗಕ್ಷೇಮ ನೋಡಿಕೊಳ್ಳುತ್ತಾರೆ. ಒಂದುವೇಳೆ ಅವರು ಅಮ್ಮನ ಬಳಿಯೇ ಇರಬೇಕಾದ ಅನಿವಾರ್ಯತೆ ಬಂದರೆ ಅಪ್ಪನನ್ನು ತಮ್ಮಿಂದ ದೂರ ಮಾಡಿದ ಆರೋಪವನ್ನು ಅಮ್ಮನ ಮೇಲೆ ಹೊರಿಸುತ್ತಾರೆ. ಈ ಅಪರಾಧ ಪ್ರಜ್ಞೆಯಿಂದ ಆ ತಾಯಿಯ ಜೀವನ ಅರೆಬರೆಯಾಗಿ ಉಳಿದುಬಿಡುತ್ತದೆ. ನ್ಯಾಯಾಲಯಗಳ ಮುಖಾಂತರ ವಿವಾಹ ಮುರಿದು ಬಿದ್ದಾಗ ಗಂಡ ಹೆಂಡತಿ ಇಬ್ಬರೂ ಸಮತೋಲನ ಕಾಯ್ದುಕೊಳ್ಳಬೇಕೇ ಹೊರತು, ಒಬ್ಬರಿಗೆ ದಂಡ, ಇನ್ನೊಬ್ಬರಿಗೆ ಸಹಾನುಭೂತಿಯುಳ್ಳ ಪರಿಹಾರ ಸಿಗುವಂತೆ ಮಾಡಬಾರದು.