– ನಾಡೋಜ ಡಾ ಮಹೇಶ ಜೋಶಿ.
ಪ್ರತಿಷ್ಠಿತ ‘ಬುಕರ್ ಅಂತರಾಷ್ಟ್ರೀಯ ಪ್ರಶಸ್ತಿ’ಯನ್ನು ಮೊಟ್ಟ ಮೊದಲನೇ ಬಾರಿಗೆ ಕನ್ನಡಕ್ಕೆ ತಂದು ‘ಕನ್ನಡದ ಬಾನಿನಲ್ಲಿ ಎದೆಯ ಹಣತೆಯ ಮೂಲಕ ದೀಪ ಬೆಳಗಿದವರು, ಕನ್ನಡದ ಪ್ರಸಿದ್ಧ ಲೇಖಕಿ ಹಾಗೂ ಬರಹಗಾರ್ತಿ ಬಾನು ಮುಷ್ತಾಕ್’.
ಕನ್ನಡ ನಾಡು-ನುಡಿಯ ಹಿರಿಮೆಯನ್ನು ಗರಿಮೆಯನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿದು ಕನ್ನಡ ಭಾಷೆಯ ಸಾಮರ್ಥ್ಯವನ್ನು ಶಕ್ತಿಯನ್ನು ಹಾಗೂ ಮಹಿಮೆಯನ್ನು ಜಗತ್ತಿಗೆ ತೋರಿಸಿ ಕನ್ನಡಿಗರಲ್ಲಿ ಹೊಸ ಅಭಿಮಾನವನ್ನು ಮೂಡಿಸಿ ಪ್ರಶಸ್ತಿಗೆ ಹೊಸ ಅರ್ಥ ತಂದವರು ಬಾನು ಮುಷ್ತಾಕ್.
ಲೇಖಕಿ ಹಾಗೂ ಬರಹಗಾರ್ತಿಯಾಗಿ ಎಲ್ಲಾ ಬಗೆಯ ಕಷ್ಟಗಳನ್ನು ಅದರಲ್ಲೂ ಒಂದೆಡೆ ಸಮುದಾಯದ ಒಳಗಿನ ಎಲ್ಲಾ ಕಟ್ಟುಪಾಡುಗಳನ್ನುಇನ್ನೊಂದೆಡೆ ಸಮಾಜದಲ್ಲಿ ಎದ್ದು ಕಾಣುವ ಅಸಹಿಷ್ಣುತೆ ಗಳನ್ನು ಸವಾಲಾಗಿ ಸ್ವೀಕರಿಸಿ ಘನತೆ
ಹಾಗೂ ತಾಳ್ಮೆಯಿಂದ ಹೊಸ ಬದುಕನ್ನು ಕಟ್ಟಿಕೊಂಡವರು ಬಾನು ಮುಷ್ತಾಕ್.
“ಯಾವ ಹಾಡು ಹಾಡಲಿ, ಸುತ್ತಮುತ್ತ ಮನೆಮಠಗಳು ಹತ್ತಿಕೊಂಡು ಉರಿಯುವಲ್ಲಿ, ಯಾವ ಹಾಡಿನಿಂದ, ನಿಮಗೆ ನೆಮ್ಮದಿಯನ್ನು ನೀಡಲಿ” ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಅವರ ನಿಟ್ಟುಸಿರಿನ ವಿಷಾದದ ವಾತಾವರಣದಲ್ಲಿ, ಈ ಎದೆಯ ಹಣತೆ, ಮುಸುಕದೀ ಮಬ್ಬಿನಲಿ ಕೈಹಿಡಿದು ನಡೆಸಬಲ್ಲ, ಮಾನವೀಯ ಶಕ್ತಿಯನ್ನು ಹೊಂದಿದೆ ಹಾಗೂ Heart Lamp ಜಗತ್ತಿನ ಹೃದಯಕ್ಕೆ ಕನ್ನಡದ ಬೆಳಕನ್ನು ಎಲ್ಲೆಡೆ ಹರಡಿಸಿದೆ.
2025 ನೇ ಸಾಲಿನ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಮೊದಲ ಕನ್ನಡದ ಲೇಖಕಿ, ಬಾನು ಮುಸ್ತಾಕ್ ಅವರನ್ನು ಬಳ್ಳಾರಿಯಲಿ ನಡೆಯುವ 88ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ, ಸಮ್ಮೇಳನಾಧ್ಯಕ್ಷರನ್ನಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ಆಯ್ಕೆ ಮಾಡಿದೆ. ಈ ಆಯ್ಕೆಯನ್ನು ಬಾನು ಮುಸ್ತಾಕ್ ಅವರು ಸಂತೋಷದಿಂದ ಒಪ್ಪಿ,ಕನ್ನಡದ ಕೆಲಸ ನನ್ನ ಮೊದಲ ಕರ್ತವ್ಯ ಎಂದು ಹೇಳಿದ್ದಾರೆ ಎಂದು ತಮಗೆಲ್ಲರಿಗೂ ತಿಳಿಸಲು, ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ಹೆಮ್ಮೆ ಪಡುತ್ತದೆ .
ತಮ್ಮ ಸಾಹಿತ್ಯ ಸಾಧನೆ ಜಗತ್ತಿಗೆ ಗೊತ್ತಾಗುವಲ್ಲಿ ಪ್ರಧಾನ ಪಾತ್ರವಹಿಸಿದ ದೀಪಾ ಭಾಸ್ತಿ ಅವರನ್ನು ಸಮ್ಮೇಳನದಲ್ಲಿ ವಿಶೇಷವಾಗಿ ಗೌರವಿಸಲು ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ನಿರ್ಣಯಿಸಿದೆ ಎಂಬುದನ್ನೂ ತಿಳಿಸಲು ಹರ್ಷಿಸುತ್ತದೆ.