ಸ್ಮಶಾನ ಎಂದರೆ ಭಯಪಡುವ ಜಾಗ ಆಗಿರುವಾಗ ಅಲ್ಲಿನ ಸಿಬ್ಬಂದಿಯ ಮಕ್ಕಳ ಏಳಿಗೆಗಾಗಿ ಇಂಥ ಒಂದು ಪಾಠಶಾಲೆ ಇದೆ.  ಇದರ ಕುರಿತು ಇಲ್ಲೊಂದು ವಿವರವಾದ ಮಾಹಿತಿ……….!

ಸಾಮಾನ್ಯವಾಗಿ ಸ್ಮಶಾನ ಎಂದರೆ ಎಲ್ಲರೂ ಹೆದರಿ ದೂರ ಓಡುತ್ತಾರೆ. ಯಾವುದೇ ಸಾವು ಸಂಭವಿಸಿದ್ದಲ್ಲಿ ಮಾತ್ರವೇ ಸ್ಮಶಾನದತ್ತ ತೆರಳುವ ನಮಗೆ, ಅಲ್ಲಿಯೇ ನೆಲೆಸಿ ಮೃತ ದೇಹವನ್ನು ಮಣ್ಣಾಗಿಸಲು ಸಹಕರಿಸುವವರ ಕುಟುಂಬದ ಕುರಿತಂತೆ ಯಾವ ಭಾವನೆಯೂ ಇರುವುದಿಲ್ಲ. ಸಮಾಜದ ಮುಖ್ಯ ವಾಹಿನಿಯಿಂದ ದೂರವೇ ಉಳಿದ ಈ ಕುಟುಂಬಗಳು ಇಂದಿಗೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ.

ಕಳೆದ ಐದು ತಲೆಮಾರುಗಳಿಂದ ಸ್ಮಶಾನದ ಕೆಲಸಗಳನ್ನೇ ಮಾಡುತ್ತಾ ಬಂದಿರುವ ಇವರ ಮಕ್ಕಳು ಸಹ ಇತ್ತೀಚಿನವರೆಗೂ ಶಾಲೆ, ಶಿಕ್ಷಣದಿಂದ ದೂರವೇ ಉಳಿದಿದ್ದರು. ಸ್ಮಶಾನದಲ್ಲಿನ ಗೋರಿ, ಬಾವಲಿ, ಗೂಬೆ, ಹಾವುಚೇಳುಗಳ ಸಂಗದಲ್ಲಿಯೇ ಬೆಳೆದ ಈ ಮಕ್ಕಳ ಮನೋಭಾವ ಐವತ್ತರ ವಯೋಮಾನದ ವ್ಯಕ್ತಿಗಳಂತಿರುವುದು ಅಚ್ಚರಿಯಾದರೂ ಸತ್ಯ.

sos

ಪ್ರತಿನಿತ್ಯ ಸಾವು, ಸಂಕಟವನ್ನು ಕಂಡ ಈ ಕಂದಮ್ಮಗಳಿಗೆ ವಯೋಸಹಜವಾಗಿ ಇರಬೇಕಾದ ತುಂಟತನ, ಹಾಸ್ಯ, ಆಟದ ಪರಿವೆಯೇ ಇಲ್ಲ. ಬದಲಿಗೆ ಗಂಭೀರತೆಯೇ ಮನತುಂಬಿಕೊಂಡು ಎಲ್ಲರೊಡನೆಯೂ ಸ್ಥಿತಪ್ರಜ್ಞರಂತೆ ವರ್ತಿಸುತ್ತಾರೆ. ಆದರೆ ಇದೀಗ ಇಂತಹ ಮಕ್ಕಳಿಗೂ ತಕ್ಕ ಶಿಕ್ಷಣ ದೊರೆಯುವಂತೆ ಮಾಡಿ ಅವರನ್ನು ಸಾಮಾನ್ಯ ಜನರ ನಡುವೆ ಬದುಕುವಂತೆ ಮಾಡಬೇಕೆನ್ನುವ ಸದುದ್ದೇಶ ಹೊಂದಿರುವ ಇಬ್ಬರು ಫ್ರೆಂಡ್ಸ್ ಬೆಂಗಳೂರಿನ ವಿವಿಧ ಸ್ಮಶಾನಗಳಿಗೆ ತೆರಳಿ ಅಲ್ಲಿನ ಕೆಲಸಗಾರರ ಮಕ್ಕಳಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡುತ್ತಿದ್ದಾರೆ!

ಸುಶಿಕ್ಷಿತ ಕುಟುಂಬದ ಹಿನ್ನೆಲೆ ಹೊಂದಿರುವ ಗ್ಲೀಡಾ ಡಿಸಿಲ್ವಾ ಮತ್ತು ಸ್ಯಾಮ್ಯುಯೆಲ್ ಗ್ಲಾಡ್‌ಸನ್‌ ಎನ್ನುವ ಫ್ರೆಂಡ್ಸ್ ವಿಭಿನ್ನ ಪರಿಸರದಲ್ಲಿ ವಾಸವಿರುವ ಈ ಮಕ್ಕಳಿಗೆ ಶಿಕ್ಷಣದ ಮಹತ್ವ ತಿಳಿಸಿಕೊಡುತ್ತಿದ್ದಾರೆ. ಸೇಂಟ್‌ ಜೋಸೆಫ್‌ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ ಈ ಇಬ್ಬರು ಫ್ರೆಂಡ್ಸ್ ಗೆ ಮೊದಲಿನಿಂದಲೂ ತಾವು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ತುಡಿತವಿತ್ತು.

so

ಅದರಂತೆ ಇಬ್ಬರೂ ವಿವಿ ವ್ಯಾಸಂಗ ಪೂರೈಸಿ ತಮ್ಮ ಕನಸಿಗೆ ಸಾಕಾರ ರೂಪ ಕೊಡಲು ಮುಂದಾದರು. ಗ್ಲೀಡಾ ಮುಂಬೈನಲ್ಲಿ ಸ್ನಾತಕಪದವಿ ಪೂರೈಸಿದರೆ, ರೈಲ್ವೆ ಅಧಿಕಾರಿಯ ಮಗನಾದ ಸ್ಯಾಮ್ಯುಯೆಲ್ ಬೆಂಗಳೂರಿನಲ್ಲಿ ವ್ಯಾಸಂಗ ಮುಗಿಸಿದರು. ಮನೆಯವರ ವಿರೋಧವನ್ನು ಲೆಕ್ಕಿಸದೆ, ತಮ್ಮ ಇಷ್ಟದ ಸಾಮಾಜಿಕ ಕಾರ್ಯವನ್ನು ಮಾಡಲು ಮುಂದಾದ ಈ ಯುವ ಜೋಡಿಯ ಕೆಲಸ ಸ್ವಾಗತಾರ್ಹ. ಪ್ರತಿನಿತ್ಯ ಬೆಂಗಳೂರಿನ ಕಾಕ್ಸ್ ಟೌನ್‌ ಸಮೀಪದ ಕಲಪನಹಳ್ಳಿ ಸ್ಮಶಾನ, ಶಾಂತಿನಗರದ ಸ್ಮಶಾನಕ್ಕೆ ತೆರಳಿ ಅಲ್ಲಿನ ಮಕ್ಕಳಿಗೆ ಶೈಕ್ಷಣಿಕ ತರಬೇತಿ ನೀಡುತ್ತಿದ್ದಾರೆ.

ಸಾವಿನಲ್ಲಿ ಸಿಕ್ಕಿತು ಪ್ರೇರಣೆ

ಸ್ಮಶಾನನ್ನು ಗುರುಕುಲವನ್ನಾಗಿ ಮಾಡಹೊರಟ ಇವರಿಬ್ಬರ ಕೆಲಸಕ್ಕೆ ಪ್ರೇರಣೆ ದೊರಕಿದ್ದು ಸಾವಿನಿಂದ! ಗ್ಲೀಡಾರ ತಂದೆ ವಿಪರೀತ ಮದ್ಯವ್ಯಸನಿಯಾಗಿದ್ದರು. ತಾಯಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ತಂದೆಯ ಈ ಚಟದಿಂದ ಗ್ಲೀಡಾ ಮತ್ತವರ ತಾಯಿ ಅನುಭವಿಸಿದ ಅವಮಾನ, ನೋವು ವಿಪರೀತವಾಗಿತ್ತು. ಅದೇ ಕುಡಿತದ ಚಟ ತಂದೆಯನ್ನು ಬಲಿ ತೆಗೆದುಕೊಂಡಿತು. ಗ್ಲೀಡಾಗೆ ಇದು ದೊಡ್ಡ ಪಾಠವಾಯಿತು. ಬದುಕಿನಲ್ಲಿ ಕಂಡ ಏರಿಳಿತಗಳೇ ಅವರಲ್ಲಿ ನಿಸ್ವಾರ್ಥ ಸೇವಾ ಮನೋಭಾವ ಬೆಳೆಸಲು ಕಾರಣವಾಯಿತು.

ಇನ್ನು ಸ್ಯಾಮ್ಯುಯೆಲ್ ಗ್ಲಾಡ್‌ಸನ್‌ ಅವರ ಅನುಭವ ವಿಭಿನ್ನ. ಸೇಂಟ್‌ ಜೋಸೆಫ್‌ ಕಾಲೇಜಿನಲ್ಲಿ ಸಾಮಾಜಿಕ ಕಾರ್ಯ ವಿಷಯ ಕಲಿಯುತ್ತಿರುವಾಗಲೇ ಸಂಶೋಧನೆಗಾಗಿ ಇರುವ ಸ್ಮಶಾನದಲ್ಲಿ ವಾಸಿಸುವ ಕುಟುಂಬಗಳ ಜೀವನ ಸ್ಥಿತಿಗತಿಗಳ ವಿಷಯವನ್ನು ಆಯ್ಕೆ ಮಾಡಿಕೊಂಡರು. ಆದರೆ ಕಾಲೇಜಿನ ಉಪನ್ಯಾಸಕರು ಈ ಕ್ಷೇತ್ರ ಕಾರ್ಯಕ್ಕೆ ಸಹಕರಿಸಲು ನಿರಾಕರಿಸಿದರು. ಇದರಿಂದ ಸ್ಯಾಮ್ಯುಯೆಲ್ ತಮ್ಮ ನಿರ್ಧಾರದಿಂದ ವಿಚಲಿತರಾಗಲಿಲ್ಲ. ಅದೇ ಸಮಯದಲ್ಲಿ ಅವರ ತಾತನ ಸಾವು ಸಂಭವಿಸಿತು. ಆಗ ಸ್ಮಶಾನಕ್ಕೆ ಭೇಟಿ ಕೊಟ್ಟಿದ್ದ ಸ್ಯಾಮ್ಯುಯೆಲ್ ಗೆ ಅಲ್ಲಿ ಗುಂಡಿ ತೋಡಿದ ವ್ಯಕ್ತಿ ತಾನು ಮಾಡಿದ ಕೆಲಸ ನಿಮಗೆ ತೃಪ್ತಿಯಾಗಿದ್ದಲ್ಲಿ ನಿಮ್ಮ ಕೈಲಾದ ಸಹಾಯ ಮಾಡಿರೆಂದು ದಯನೀಯವಾಗಿ ಬೇಡಿದ. ಇದು ಸ್ಯಾಮ್ಯುಯೆಲ್ ‌ರ ಮನಕಲಕಿತು. ಮುಂದೆ ಇವರ ವಿಚಾರವಾಗಿ ಇನ್ನೂ ಹೆಚ್ಚು ತಿಳಿಯಬೇಕು, ಇವರ ಜೀವನವನ್ನು ಸುಧಾರಿಸಲು ಏನಾದರೂ ಸಹಾಯ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದ ಸ್ಯಾಮ್ಯುಯೆಲ್‌ ಬೆಂಗಳೂರಿನ ಹಿಂದೂ, ಕ್ರೈಸ್ತ, ಮುಸ್ಲಿಂ ಸ್ಮಶಾನಗಳನ್ನೆಲ್ಲ ಸುತ್ತಿ ಅಲ್ಲಿ ನೆಲೆಸಿರುವ ಕುಟುಂಬಗಳ ಬಗೆಗೆ ವಿವರ ಕಲೆಹಾಕಿದರು. ಮುಂದೆ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುವಾಗಲೂ ಇದೇ ವಿಷಯವನ್ನು ಸಂಶೋಧನೆಗೆ ಆಯ್ದುಕೊಂಡು ವರದಿ ತಯಾರಿಸಿ ಉಪನ್ಯಾಸಕರಿಗೆ ನೀಡಿದಾಗ ಬಹಳ ಮೆಚ್ಚುಗೆ ವ್ಯಕ್ತವಾಯಿತು. ಕೆಲವು ತಿಂಗಳು ಉರುಳಿದವು. ಮತ್ತೆ ಸ್ಮಶಾನದ ಕಡೆ ಹೋಗುವ ಆಲೋಚನೆ ಇದ್ದರೂ ಸಾಧ್ಯವಾಗಿರಲಿಲ್ಲ. ಯಾವುದೇ ಕೆಲಸ ಪ್ರಾರಂಭಿಸುವ ಸ್ಪಷ್ಟತೆ ಹೊಳೆದಿರಲಿಲ್ಲ. ಅದೇ ವೇಳೆ ಡಾರ್ಜಿಲಿಂಗ್‌ನಿಂದ ಬಂದಿದ್ದ ಸ್ಯಾಮ್ಯುಯೆಲ್ ರ ಗೆಳತಿಯೊಬ್ಬರು ರಕ್ತದ ಕ್ಯಾನ್ಸರ್‌ನಿಂದ ಮೃತಪಟ್ಟರು. ಅವರ ಅಂತ್ಯ ಸಂಸ್ಕಾರಕ್ಕೆ ತೆರಳಿದ್ದ ಸ್ಯಾಮ್ಯುಯೆಲ್ ರನ್ನು ಅಲ್ಲಿ ನೆಲೆಸಿದ್ದ ಕುಟುಂಬ ಸದಸ್ಯರು ಗುರುತಿಸಿದರು. ಅವರ ಮಕ್ಕಳೂ ಸಹ ಗುರುತಿಸಿ ಮಾತನಾಡಿಸಿದರು. ಇದರಿಂದ ಸ್ಯಾಮ್ಯುಯೆಲ್ ರಿಗೆ ಈ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಏನಾದರೂ ಮಾಡಬೇಕೆನ್ನುವ ಕಲ್ಪನೆ ಹೊಳೆಯಿತು. ಅದರಂತೆ ಸ್ಮಶಾನದಲ್ಲಿಯೇ ಶೈಕ್ಷಣಿಕ ತರಬೇತಿ ನೀಡಲು ಪ್ರಾರಂಭ ಮಾಡಿದರು.

ಗೋರಿಯ ಮೇಲೆ ಪಾಠ

ಗ್ಲೀಡಾ ಮತ್ತು ಸ್ಯಾಮ್ಯುಯೆಲ್‌ ತರಬೇತಿ ಕೊಡಲು ಪ್ರಾರಂಭಿಸಿದ ಮಕ್ಕಳ ಪೋಷಕರು ಸ್ಮಶಾನದಲ್ಲಿ ಗುಂಡಿ ತೋಡುವ, ಗೋರಿಗಳ ಮೇಲೆ ಹೆಸರು ಕೆತ್ತುವ, ಶವಪೆಟ್ಟಿಗೆ ತಯಾರಿಸುವ ಕಾಯಕ ಮಾಡುತ್ತಾ ಬಂದಿದ್ದಾರೆ. ಇಂದಿನವರೆಗೂ ಯಾರೂ ಶಾಲೆಯ ಮುಖ ಕಂಡವರಲ್ಲ. ಆದರೆ ಈಗಿನ ಕೆಲವು ಮಕ್ಕಳು ಸಮೀಪದ ಸರ್ಕಾರಿ, ಖಾಸಗಿ ಶಾಲೆಗಳಿಗೆ ತೆರಳಿ ಶಿಕ್ಷಣ ಪಡೆಯುತ್ತಿದ್ದಾರಾದರೂ ಶೈಕ್ಷಣಿಕ ಪ್ರಗತಿ ತೀರಾ ಅಲ್ಪ ಪ್ರಮಾಣದಲ್ಲಿದೆ.

ಮಕ್ಕಳು ಬೆಳೆಯುತ್ತಿರುವ ಪರಿಸರವೇ ಇದಕ್ಕೆ ಕಾರಣವೆಂದು ಬಗೆದ ಈ ಫ್ರೆಂಡ್ಸ್ ಅವರಿದ್ದ ಸ್ಥಳದಲ್ಲಿಯೇ ಶಿಕ್ಷಣ ನೀಡಲು ಪ್ರಾರಂಭಿಸಿದರು. ಸ್ಮಶಾನದ ಗೋರಿಗಳೇ ವಿದ್ಯಾರ್ಥಿಗಳ ಬೆಂಚಾಗಿತ್ತು. ಅದೇ ಸ್ಮಶಾನದ ಮರಗಳೇ ಶಾಲೆಯ ಸೂರಾಗಿದ್ದವು! ಆಟದೊಂದಿಗೆ ಪಾಠ ಕಲಿಸುವ ಯೋಜನೆ ನಿರ್ಮಾಣವಾಯಿತು. ಮಕ್ಕಳ ಮನೋಭಾವ, ಶೈಕ್ಷಣಿಕ ಶ್ರೇಣಿಯನ್ನು ಗುರುತಿಸಿ ಅವರ ಆಸಕ್ತಿಗೆ ತಕ್ಕಂತೆ ವಿವಿಧ ವಿಷಯಗಳನ್ನು ಬೋಧಿಸಲು ಪ್ರಾರಂಭ ಮಾಡಿದರು. ಒರಟು ಸ್ವಭಾವ, ಹಿಂಸಾ ಮನೋಭಾವವೇ ಹೆಚ್ಚಾಗಿದ್ದವು ಈ ಮಕ್ಕಳು ಶಾಲೆಯಲ್ಲಿದ್ದ ಇತರ ಮಕ್ಕಳೊಡನೆ ಸಹಜವಾಗಿ ಬೆರೆಯುತ್ತಿರಲಿಲ್ಲ. ಅಲ್ಲದೆ ಇರುವ ಶಾಲಾ ಪರೀಕ್ಷೆಗಳಲ್ಲೂ `ಡಿ’ ದರ್ಜೆಗಿಂತ ಮೇಲೆ ಬರುತ್ತಿರಲಿಲ್ಲ. ಆದರೆ ಈ ಜೋಡಿಯ ಸತತ ಪ್ರಯತ್ನದಿಂದ ಇದೀಗ ಮಕ್ಕಳು `ಎ’ ಮತ್ತು `ಬಿ’ ಗ್ರೇಡ್‌ ಪಡೆಯುತ್ತಿದ್ದಾರೆ. ಹಾಗೆಯೇ ತಮ್ಮ ಮೂಲ ಸ್ವಭಾವದಲ್ಲಿಯೂ ಸಾಕಷ್ಟು ಬದಲಾವಣೆ ಹೊಂದಿದ್ದಾರೆ. ಇನ್ನು ಕೆಲವರು ಶಾಲಾ ಶಿಕ್ಷಣದಲ್ಲಿ ಅನುತ್ತೀರ್ಣರಾಗಿ ತಂದೆಯ ಕೆಲಸದಲ್ಲಿ ಸಹಾಯಕ್ಕೆ ನಿಂತಿದ್ದಾರೆ. ಈ ಜೋಡಿ ಆ ಮಕ್ಕಳ ಸೃಜನಶೀಲತೆಗೆ ಅನುಸಾರವಾಗಿ ತರಬೇತಿ ನೀಡುತ್ತಿದ್ದಾರೆ.

ಇವರು ಪ್ರಾರಂಭಿಸಿರುವ ಈ ಕಾರ್ಯಕ್ರಮದಲ್ಲಿ ಪ್ರತಿ ದಿನ ಸಂಜೆ 4 ರಿಂದ ಸ್ಮಶಾನದಲ್ಲಿ ನಿತ್ಯ ಪಾಠಪ್ರವಚನ ನಡೆಯುತ್ತದೆ. ಪ್ರತೀ ಭಾನುವಾರ ವಿಶೇಷ ತರಗತಿಗಳು, ಪರಿಣಿತ ಕಲಾವಿದರು, ಚಿತ್ರಕಾರರಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತದೆ. ಜೊತೆಗೆ ಬೇಸಿಗೆ ಶಿಬಿರ ಏರ್ಪಡಿಸುವುದಲ್ಲದೆ,  `ಜಂಗಲ್ ಬುಕ್‌’ ಚಿತ್ರ ಬಂದ ಸಮಯದಲ್ಲಿ ಮಕ್ಕಳನ್ನು ಚಿತ್ರಮಂದಿರಕ್ಕೆ ಕರೆದೊಯ್ದು ಚಿತ್ರ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟರು. ಎಷ್ಟೋ ಮಕ್ಕಳು ಪ್ರಥಮ ಬಾರಿಗೆ ಚಿತ್ರಮಂದಿರಕ್ಕೆ ಬಂದಿದ್ದರೆನ್ನುವುದು ಇಲ್ಲಿನ ವಿಶೇಷ.

ಪ್ರಸ್ತುತ ಬೆಂಗಳೂರಿನ ಹಿಂದೂ, ಕ್ರೈಸ್ತ ಸ್ಮಶಾನಗಳಲ್ಲಿ ವಾಸಿಸುತ್ತಿರುವ 16 ಕುಟುಂಬಗಳ 41 ಮಕ್ಕಳನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಈ ಕಾರ್ಯಕ್ರಮ ನಡೆಸಬೇಕು ಎನ್ನುವ ಯೋಜನೆ ಇವರದು. ಇಲ್ಲಿ ತರಬೇತಿ ಪಡೆದ ಮಕ್ಕಳು ಮುಂದೆ ತಮ್ಮ ಸಮುದಾಯದವರಿಗೆ ತರಬೇತಿ ನೀಡುವಂತಾಗಬೇಕು ಎನ್ನುವುದು ಇವರ ಅಭಿಲಾಷೆ.

ಹ್ಯಾಂಡ್‌ ಇನ್‌ ಹ್ಯಾಂಡ್‌

ಈ ಮಹತ್ವದ ಯೋಜನೆಗೆ ಸರಿಯಾದ ಹಣಕಾಸಿನ ನೆರವು ಸಿಗುತ್ತಿಲ್ಲ. ಸಾಕಷ್ಟು ಸಂಖ್ಯೆಯ ಸ್ವಯಂಸೇವಕರ ಅಗತ್ಯ ಇದಕ್ಕಿದೆ. ಹೀಗಾಗಿ ಈ ಜೋಡಿ ಗ್ಲಾಡ್‌ಸನ್‌ರ ಸ್ನೇಹಿತರೊಬ್ಬರು ಸ್ಥಾಪಿಸಿದ `ಹ್ಯಾಂಡ್‌ ಇನ್‌ ಹ್ಯಾಂಡ್‌ ಚ್ಯಾರಿಟೆಬಲ್ ಟ್ರಸ್ಟ್’ನ ಅಡಿಯಲ್ಲಿ ತಮ್ಮ ಕಾರ್ಯಚಟುವಟಿಕೆ ನಡೆಸುತ್ತಿದ್ದಾರೆ. ಇದರಿಂದ ಅದೆಷ್ಟೋ ಸಹೃದಯರಿಗೆ ಇವರ ಕಾರ್ಯಕ್ರಮದ ವಿವರ ತಿಳಿದು ತಾವೇ ಸ್ವತಃ ಸ್ಮಶಾನಕ್ಕೆ ಭೇಟಿ ನೀಡುವುದಲ್ಲದೆ, ಮಕ್ಕಳಿಗೆ ಊಟ, ಬಟ್ಟೆಗಳನ್ನು ನೀಡಿ ಇವರ ಈ ಕಾರ್ಯಕ್ಕೆ ಪ್ರೋತ್ಸಾಹ ವ್ಯಕ್ತಪಡಿಸಿದ್ದಾರೆ.

ಇದರೊಂದಿಗೆ ಸ್ಮಶಾನದಲ್ಲಿ ವಾಸಿಸುವ ಕುಟುಂಬದಲ್ಲಿನ ಮಹಿಳೆಯರಿಗೂ ಈ ಜೋಡಿ ವಿವಿಧ ಕರಕುಶಲ ತರಬೇತಿಗಳನ್ನು ನೀಡುತ್ತಾರೆ. ಅವರು ತಯಾರಿಸಿದ ಕುಸುರಿ ವಸ್ತುಗಳು, ಪೇಪರ್‌ ಬ್ಯಾಗ್‌,  ಕ್ಯಾಂಡಲ್ ಗಳಿಗೆ ಮಾರುಕಟ್ಟೆ ಒದಗಿಸುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿಸುವುದಲ್ಲದೆ, ಆದಾಯದ ಒಂದಂಶವನ್ನು ಮಕ್ಕಳ ಶಿಕ್ಷಣ ಯೋಜನೆಗೆ ಬಳಸಿಕೊಳ್ಳುತ್ತಿದ್ದಾರೆ.

ಸಮಾಜದ ಹೊಣೆ ಹೇಳಬೇಕೆಂದರೆ, ಸ್ಮಶಾನದಲ್ಲಿ ಕೆಲಸ ಮಾಡುವವರಿಗೆ ಬಿಬಿಎಂಪಿ ವತಿಯಿಂದ ಸಂಬಳ ಸಂದಾಯವಾಗುತ್ತಿದೆ. ಆದರೆ ಅದೆಷ್ಟೋ ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳೇ ಇಲ್ಲ. ಶೌಚಾಲಯದಂತಹ ಅಗತ್ಯ ಸೌಲಭ್ಯ ಇಲ್ಲದಿರುವುದು ಶೋಚನೀಯ. ಇನ್ನೂ ಎಷ್ಟೋ ಕಡೆ ಸರಿಯಾದ ವಾಸದ ಮನೆಗಳಿಲ್ಲ. ಸಾಮಾಜಿಕ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಸಮಾಜದ ಇತರ ಸಮುದಾಯದ ಬಹುತೇಕರು ಇಂದಿಗೂ ಸ್ಮಶಾನ ವಾಸಿಗಳಾದ ಇವರನ್ನು ಪ್ರತ್ಯೇಕವಾಗಿಯೇ ಕಾಣುತ್ತಿದ್ದಾರೆ. ಈ ಧೋರಣೆ ಬದಲಾಗಬೇಕು.

ಸ್ಮಶಾನ ಸ್ಛೂರ್ತಿಯ ತಾಣವಾಗಬೇಕು. ಸ್ಮಶಾನದಲ್ಲಿ ದುಡಿಯುವವರೂ ಸಮಾಜದ ಮುಖ್ಯವಾಹಿನಿಯ ಒಂದು ಭಾಗವೆನ್ನುವುದನ್ನು ಅರಿತುಕೊಳ್ಳಬೇಕು. ಆ ನಿಟ್ಟಿನಲ್ಲಿ ನಮ್ಮ ಕೆಲಸ ಸಾಗಿದೆ ಎನ್ನುವುದು ಗ್ಲೀಡಾ ಮತ್ತು ಸ್ಯಾಮ್ಯುಯೆಲ್ ರ ಮಾತು.

ಭವಿಷ್ಯದಲ್ಲಿ ಇವರ ಈ ಸದುದ್ದೇಶದ ಕಾರ್ಯ ಇನ್ನಷ್ಟು ಯಶಸ್ವಿಯಾಗಿ ಸಾಗಲಿ. ಇವರ ಕೆಲಸದಿಂದ ಸ್ಛೂರ್ತಿ ಪಡೆದು ಮತ್ತಷ್ಟು ಯುವಜನತೆ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿ, ವಿದ್ಯೆಯ ಬೆಳಕು ಎಲ್ಲೆಲ್ಲೂ ಪಸರಿಸಿ ಎಲ್ಲರ ಮನೆಮನಗಳನ್ನು ಬೆಳಗಲಿ ಎಂದು ಗೃಹಶೋಭಾ ಹಾರೈಸುತ್ತಾಳೆ……..

– ರಾಘವೇಂದ್ರ ಅಡಿಗ ಎಚ್ಚೆನ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ