ಎಲ್ಲರಲ್ಲೂ ಪ್ರತಿಭೆ ಇದ್ದೇ ಇರುತ್ತದೆ, ಆದರೆ ಅಕಾಶ ಕ್ರಿಯೇಟ್ ಮಾಡಿಕೊಳ್ಳುವ ಸಾಮರ್ಥ್ಯ ಕೆಲವರಲ್ಲಿ ಮಾತ್ರ ಇರುತ್ತದೆ. ಎಷ್ಟೋ ಜನ ಹಣದ ಅಭಾವದಿಂದಾಗಿ ತಮ್ಮ ಕ್ರಿಯಾಶೀಲತೆಯನ್ನು ಒಂದು ಸೂಕ್ತ ವೇದಿಕೆಗೆ ತರಲಾರರು. ಇಂಥ ಕ್ರಿಯೇಟಿವ್ಹಾಗೂ ಉತ್ತಮ ಯೋಗ್ಯತೆಯುಳ್ಳ ಜನರಿಗೆ ಆರ್ಥಿಕ ನೆರವು ನೀಡಲೆಂದೇ ಇದ್ದಾರೆ ಶೀತಲ್ ಮೆಹ್ತಾ.
ತಮ್ಮ ಕುರಿತು ಪರಿಚಯ
ತಮ್ಮ ಕುರಿತು ಶೀತಲ್ ಹೇಳುತ್ತಾರೆ, “ನಾನು ಸಾಂಪ್ರದಾಯಿಕ ಗುಜರಾತಿ ಕುಟುಂಬಕ್ಕೆ ಸೇರಿದವಳು. ನಾನು ಹುಟ್ಟಿದ್ದು ಯುಗಾಂಡಾದ ಕಂಪಾಲಾ ನಗರದಲ್ಲಿ, ನಂತರ ನಮ್ಮ ಕುಟುಂಬ ಕೆನಡಾದಲ್ಲಿ ಸೆಟಲ್ ಆಯಿತು. ಅಲ್ಲೇ ನಾನು ನನ್ನ ಶಿಕ್ಷಣ ಪೂರೈಸಿದೆ. ನನ್ನ ತಂದೆ ಅಲ್ಬೆರ್ಟಾದಲ್ಲಿ ಗುಜರಾತಿ ಕಲ್ಚರ್ ಅಸೋಸಿಯೇಷನ್ನಿನ ಸಂಸ್ಥಾಪಕರಾಗಿದ್ದರು. ಹೀಗಾಗಿ ವಿದೇಶದಲ್ಲಿ ಹುಟ್ಟಿ ಬೆಳೆದರೂ ನಾನು ಅಪ್ಪಟ ಭಾರತೀಯ ಸಂಪ್ರದಾಯಗಳನ್ನು ರೂಢಿಸಿಕೊಂಡಿದ್ದೇನೆ.”
ಶೀತಲ್ರ ಅತಿ ದೊಡ್ಡ ನಿರ್ಧಾರ ಎಂದರೆ ಮೈಕ್ರೋಸಾಫ್ಟ್ ನಂಥ ಕಂಪನಿ ಬಿಟ್ಟು ಒಬ್ಬ ಸಾಮಾಜಿಕ ಕಾರ್ಯಕರ್ತೆಯಾಗಿ ನಿಲ್ಲಲು ದೃಢ ಮನಸ್ಸು ಮಾಡಿದ್ದು. ಇದರ ಕುರಿತಾಗಿ ಆಕೆ, “ನಾನು ಬಿಲ್ ಗೇಟ್ಸ್ ರನ್ನು ಸದಾ ನನ್ನ ಆದರ್ಶ ವ್ಯಕ್ತಿಯಾಗಿ ಪರಿಗಣಿಸುತ್ತೇನೆ. ಅವರು ಯಾವ ರೀತಿ ಅತಿ ಅಪರೂಪದ ಅಪರಿಚಿತ ಕ್ಷೇತ್ರಗಳಲ್ಲೂ ಸೌಲಭ್ಯಗಳನ್ನು ಪಡೆದುಕೊಳ್ಳಲು ಹೊಸ ಹೊಸ ಟೆಕ್ನಿಕ್ಸ್ ಕಂಡುಹಿಡಿದರೋ ಅದುವೇ ನನಗೆ ಪ್ರೇರಣೆಯ ಮೂಲಮಂತ್ರ.
“ಕೆಲಸದ ಸಲುವಾಗಿ ಒಮ್ಮೆ ನಾನು ಯುಗಾಂಡಾದ ಹಿಂದುಳಿದ ಕ್ಷೇತ್ರಗಳಲ್ಲಿ ಉಳಿಯುವಂತಾಯಿತು. ಅಲ್ಲಿ ನಮಗೆ ಒಂದು ಟೆಲಿಸೆಂಟರ್ ಸೆಟ್ ಅಪ್ ಮಾಡಬೇಕಾಯ್ತು. ಆ ಸಂದರ್ಭದಲ್ಲಿ ನಾನು 90 ವರ್ಷದ ಒಬ್ಬ ವಯೋವೃದ್ಧೆಯನ್ನು ಭೇಟಿಯಾದೆವು, ಆಕೆ ಸೆಂಟರ್ ಬಳಸಿಕೊಳ್ಳುವುದು ಹೇಗೆ ಎಂದು ಹಳ್ಳಿಯವರಿಗೆ ತಿಳಿಹೇಳುತ್ತಿದ್ದರು.
“ಆಗ ಮೊದಲ ಬಾರಿಗೆ ನನಗೊಂದು ಐಡಿಯಾ ಹೊಳೆಯಿತು, ಬಿಲ್ ಗೇಟ್ಸ್ ತರಹ ಎಷ್ಟೋ ಜನ ಇರಬಹುದು, ಅವರು ಹೊಸ ಹೊಸ ತಾಂತ್ರಿಕ ವಿಧಾನಗಳನ್ನು ಕಂಡುಹಿಡಿದಿದ್ದರೂ ಹಣದ ಅಭಾವದಿಂದಾಗಿ ಅದನ್ನು ಪ್ರಪಂಚದೊಡನೆ ಹಂಚಿಕೊಳ್ಳಲಾಗದೆ ಇರಬಹುದು ಎಂದು ಕಂಡುಕೊಂಡೆ.”
ಶಾಂತಿ ಲೈಫ್ನ ಆರಂಭ
ಈ ಘಟನೆ ಶೀತಲ್ರ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ, ಇಂಥ ಜನರಿಗಾಗಿಯೇ ಒಂದು ಸಂಸ್ಥೆ ತೆರೆದು ಅವರಿಗೆ ಆರ್ಥಿಕ ನೆರವು ನೀಡಲು ಬಯಸಿದರು. ತಮ್ಮ ಸಂಸ್ಥೆ ಕುರಿತು ಆಕೆ ಹೇಳುತ್ತಾರೆ, “ಈ ಸಂಸ್ಥೆ ಅಪ್ಪಟ ನಾನ್ ಪ್ರಾಫಿಟೆಬಲ್. ನಮ್ಮ ಸಂಸ್ಥೆ ಭಾರತದಲ್ಲಿ ಮಾತ್ರವಲ್ಲದೆ ಅಮೆರಿಕಾ, ಕೆನಡಾ, ಇಂಗ್ಲೆಂಡ್ನಲ್ಲೂ ಇವೆ. ನಮ್ಮ ಸಂಸ್ಥೆಯಿಂದ ಬಡವರಿಗೆ ತಾವು ವ್ಯಾಪಾರ ಶುರು ಮಾಡುವಂತೆ, ಅತಿ ಕನಿಷ್ಠ ದರದಲ್ಲಿ ಬಡ್ಡಿ ಅಂದರೆ ಶೇ.10ರಂತೆ ಕೊಡುತ್ತೇವೆ.”
ಇದರಲ್ಲಿ ಇನ್ನೊಂದು ಮುಖ್ಯ ವಿಷಯವೆಂದರೆ, ತಮಗೆ ದೊರೆತ ಈ ಬಡ್ಡಿ ಹಣವನ್ನು ಶೀತಲ್ ತಮಗಾಗಿ ಬಳಸಿಕೊಳ್ಳದೆ, ಹಳ್ಳಿಗಳಲ್ಲಿ ಶೌಚಾಲಯ ನಿರ್ಮಿಸಿ, ಹಳ್ಳಿ ಜನರ ಆರೋಗ್ಯ ರಕ್ಷಣೆಯ ಸಲುವಾಗಿ ಖರ್ಚು ಮಾಡುತ್ತಾರೆ. ತಮ್ಮ ಈ ಕೆಲಸದ ಕುರಿತಾಗಿ, “ಇಷ್ಟೆಲ್ಲ ಆಧುನಿಕ ಸೌಲಭ್ಯಗಳಿರುವ ಈ ಯುಗದಲ್ಲಿ, ಇಂದಿಗೂ ನಮ್ಮ ಗ್ರಾಮವಾಸಿಗಳು ಶೌಚಕ್ಕಾಗಿ ಬಯಲು ಪ್ರದೇಶ ಹುಡುಕಿಕೊಳ್ಳಬೇಕಾಗಿರುವುದು ಖೇದದ ಸಂಗತಿ.
“ಒಮ್ಮೊಮ್ಮೆ ಅಂಥ ಜಾಗಗಳಲ್ಲಿ ಹೆಂಗಸರ ಮೇಲೆ ಅತ್ಯಾಚಾರ ನಡೆದ ಪ್ರಕರಣಗಳೂ ಉಂಟು. ಇಂಥ ಅವಘಡಗಳನ್ನು ತಡೆಯಲಿಕ್ಕಾಗಿಯೇ ಮನೆಯಲ್ಲೇ ಶೌಚಾಲಯ ಇರಬೇಕಾದುದು ಅನಿವಾರ್ಯ. ಹೀಗಾಗಿಯೇ ನಮಗೆ ಬಡ್ಡಿ ರೂಪದಲ್ಲಿ ದೊರಕುವ ಹಣವನ್ನು ಈ ರೀತಿ ಸದ್ವಿನಿಯೋಗ ಮಾಡುತ್ತೇವೆ,” ಎನ್ನುತ್ತಾರೆ ಶೀತಲ್.
ಕೇವಲ ಮಹಿಳೆಯರ ಸುರಕ್ಷೆಕ್ಕೊಂದೇ ನೋಡದೆ, ಅವರನ್ನು ಸ್ವಾವಲಂಬಿಗಳಾಗಿಸು ನಿಟ್ಟಿನಲ್ಲೂ ಶೀತಲ್ ಹಲವಾರು ಪ್ರಯಾಸಗಳನ್ನು ಪಟ್ಟಿದ್ದಾರೆ. ಕೇವಲ ಮಹಿಳೆಯರು ಸಶಕ್ತರಾಗಲೆಂದೇ ಈಕೆ ಪ್ರತ್ಯೇಕ ಸಂಸ್ಥೆ ತೆರೆಯದೇ ಇದ್ದರೂ, ಆಕೆ ಮಹಿಳೆಯರಿಗೆ ನೀಡುವ ಸಂದೇಶವೆಂದರೆ, ಮಹಿಳೆ ಯಾರಾದರೂ ಆಗಿರಲಿ, ಬ್ಯೂಟಿ ಅಥವಾ ಪ್ರತಿಭಾವಶಾಲಿಯೇ ಇರಲಿ, ತಮ್ಮನ್ನು ತಾವು ಎಂದೂ ದುರ್ಬಲರೆಂದು ಭಾವಿಸಬಾರದು, ಬದಲಿಗೆ ಸಶಕ್ತರೆಂದೇ ತಿಳಿಯಬೇಕು.
ಕಷ್ಟಗಳಿಂದಲೇ ಕಲಿಕೆ
ಶೀತಲ್ ತಮ್ಮನ್ನು ತಾವು ದುರ್ಬಲರೆಂದು ಎಂದೂ ಭಾವಿಸಿದ್ದೇ ಇಲ್ಲ. ತಮ್ಮ ದಾರಿಯಲ್ಲಿ ಎಷ್ಟೇ ಅಡ್ಡಿಅಡಚಣೆಗಳು ಬರಲಿ, ತಮ್ಮ ಶ್ರದ್ಧೆ ಹಾಗೂ ತಿಳಿವಳಿಕೆಯಿಂದ ಎಲ್ಲವನ್ನೂ ಎದುರಿಸುತ್ತಾರೆ. ಆಕೆ ಶಾಂತಿ ಲೈಫ್ ಸಂಸ್ಥೆಯ ಆರಂಭದ ದಿನಗಳಲ್ಲಿ ಎದುರಾದ ಸಮಸ್ಯೆಗಳ ಕುರಿತಾಗಿ ಹೇಳುತ್ತಾ, “ಆರಂಭದಲ್ಲಿ ನಾವು ಕೆಲವೊದು ಲೋಕಲ್ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದೆ. ಅವರು ನಮ್ಮ ದುಡ್ಡನ್ನು ತೆಗೆದುಕೊಂಡರೇ ಹೊರತು ನಮಗೆ ಯಾವ ಸಹಾಯವನ್ನೂ ಮಾಡಲಿಲ್ಲ. ಬಡವರ ಸಹಾಯಕ್ಕೆಂದು ಇರಿಸಿದ್ದ ಹಣವನ್ನು ಈ ರೀತಿ ದುರ್ಬಳಕೆ ಮಾಡಲು ಹಿಂಜರಿಯುವುದಿಲ್ಲವಲ್ಲ ಎಂದು ಬೇಸರವಾಯಿತು. ತಕ್ಷಣ ಅಂಥ ಸಂಸ್ಥೆಗಳಿಗೆ ನಮಸ್ಕಾರ ಹಾಕಿ ನಮ್ಮ ಕೆಲಸ ಮುಂದುರಿಸಿದೆ.”
ಫಿಟ್ ಆಗಿದ್ದರೆ ಮಾತ್ರ ಹಿಟ್
ಶೀತಲ್ ಸದಾ ಎಚ್ಚರಿಕೆಯಿಂದಿರಬೇಕು ಎಂಬುದನ್ನು ಪ್ರೊಫೆಷನಲ್ ಆಗಿ ಮಾತ್ರವಲ್ಲದೆ, ತಮ್ಮ ಪರ್ಸನಲ್ ಲೈಫ್ನಲ್ಲೂ ಅಳವಡಿಸಿಕೊಂಡಿದ್ದಾರೆ. ಆಕೆಯ ಆರೋಗ್ಯದ ಗುಟ್ಟು ಇದೇ. ದಿನನಿತ್ಯ ವ್ಯಾಯಾಮ, ಲಾಕಿಂಗ್ ಇತ್ಯಾದಿಗಳು ತಮ್ಮ ಜೀವನದ ಅವಿಭಾಜ್ಯ ಅಂಗವೆಂದೇ ಭಾವಿಸುತ್ತಾರೆ. ಯಾವುದೇ ಒಳ್ಳೆಯ ಕಾರ್ಯ ಮಾಡಬೇಕೆಂದು ನಿಶ್ಚಯಿಸಿರುವಾಗ, ಅದಕ್ಕಾಗಿ ನೀವು ಆರೋಗ್ಯವಂತ ದೀರ್ಘಾಯುಗಳಾಗಬೇಕಾದ್ದು ಅನಿವಾರ್ಯ ಎನ್ನುತ್ತಾರೆ. ಹೆಚ್ಚು ಆಯುಷ್ಯ ಇದ್ದಾಗ ಮಾತ್ರ ಹೆಚ್ಚು ಸೇವೆ ಮಾಡಲು ಸಾಧ್ಯ. ಹೀಗಾಗಿ ದೀರ್ಘಾಯುಷ್ಯಕ್ಕಾಗಿ ದೇಹವನ್ನು ಹೆಚ್ಚು ಆರೋಗ್ಯಕರ, ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಅದಕ್ಕಾಗಿ ವ್ಯಾಯಾಮ ಅತ್ಯಗತ್ಯ ಎನ್ನುತ್ತಾರೆ.
ಶೀತಲ್ರಿಗೆ ತಮ್ಮ ಕುಟುಂಬದವರೊಂದಿಗೆ ಹೆಚ್ಚು ಹೊತ್ತು ಕಳೆಯುವುದು ಬಲು ಇಷ್ಟ. ಇದಕ್ಕಾಗಿ ಏನಾದರೊಂದು ನೆಪ ಹುಡುಕುವಲ್ಲಿ ಅವರು ಅಗ್ರಗಣ್ಯರು. ಹೆಚ್ಚಿಗೇನೂ ಆಗಲಿಲ್ಲವೆಂದರೆ ಕನಿಷ್ಠ ಒಂದು ಕೌಟುಂಬಿಕ ಪ್ರವಾಸ ಏರ್ಪಡಿಸಿಯೇ ಬಿಡುತ್ತಾರೆ.
ನಿಮ್ಮ ಇದುವರೆಗಿನ ಪ್ರವಾಸಗಳಲ್ಲಿ ಯಾವುದು ಬೆಸ್ಟ್ಟ ಎನಿಸಿತು ಎಂದಾಗ, “ನನ್ನ ತಾಯಿ ತಂದೆ ನನಗೆ ಇಡೀ ವಿಶ್ವ ಸುತ್ತಾಡುವ ಅವಕಾಶ ಕೊಟ್ಟಿದ್ದರು. ಆದರೆ ನನ್ನ ಗಂಡ, ಮಗಳ ಜೊತೆ ಹೃಷಿಕೇಶದ ಯಾತ್ರೆ ಹೊರಟಿದ್ದನ್ನು ನಾನೆಂದೂ ಮರೆಯಲಾರೆ. ಮತ್ತೆ ಅವಕಾಶ ಸಿಕ್ಕಿದರೆ ನಾನು ವರ್ಷಕ್ಕೆ 3 ಸಲ ಇದೇ ಜಾಗಕ್ಕೆ ಫ್ಯಾಮಿಲಿ ಸಮೇತ ಹೋಗಲು ಇಷ್ಟಪಡುವೆ.”
ತಮ್ಮ ಮಗಳು ಸರಸ್ವತಿ ಜೊತೆ ಆಟವಾಡುವುದು ಎಂದರೆ ಅವರಿಗೆ ಬಹಳ ಇಷ್ಟ, “ಪ್ರತಿ ಮಹಿಳೆಯೂ ತನ್ನ ಮಕ್ಕಳ ಜೊತೆ ಆದಷ್ಟು ಹೆಚ್ಚು ಹೊತ್ತನ್ನು ಕಳೆಯಬೇಕು. ಅವರೊಂದಿಗೆ ಆಟೋಟ, ಹರಟೆ, ತಮಾಷೆ ಎಲ್ಲ ಸ್ವಾರಸ್ಯಕರ. ಹೀಗೆ ಮಾಡುವುದರಿಂದ ಅವರು ತಮ್ಮೆಲ್ಲ ಟೆನ್ಶನ್ಗಳಿಂದ ದೂರವಾಗುತ್ತಾರೆ. ಟೆನ್ಶನ್ ದೂರವಾದಾಗ ಪ್ರೊಫೆಶನಲಿ ನೀವು ಬೆಸ್ಟ್ ನೀಡಬಹುದು,” ಎನ್ನುತ್ತಾರೆ ಶೀತಲ್.
– ಆಶಿಷ್ ಶ್ರೀವತ್ಸ