ದೆಹಲಿಯ ಬುರಾಡಿ ಎಂಬ ಭಾಗದಲ್ಲಿ ಭಾಟಿಯಾ ಕುಟುಂಬದ 11 ಜನರ ಸಾಮೂಹಿಕ ಆತ್ಮಹತ್ಯೆಯ ವಿಷಯ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಅವರುಗಳ ಬೌದ್ಧಿಕ ದಿವಾಳಿತನ ಹಾಗೂ ಧಾರ್ಮಿಕ ಉನ್ಮಾದಕ್ಕಿಂತ ಹೆಚ್ಚಾಗಿ ಮೋಕ್ಷದ ಬಗ್ಗೆಯೇ ಚರ್ಚೆ ಜೋರಾಗಿತ್ತು. ಆದರೆ ಯಾವೊಬ್ಬ ಬುದ್ಧಿಜೀವಿಯಾಗಲಿ, ಚಿಂತಕರಾಗಲಿ ಇದೆಲ್ಲ ಧರ್ಮದ ಕಾರಣದಿಂದ ಸಂಭವಿಸಿತೆಂದು ಹೇಳುವ ಧೈರ್ಯ ತೋರಿಸಲಿಲ್ಲ.

ಭಾಟಿಯಾ ಕುಟುಂಬದ ಮುಖ್ಯ ಉದ್ದೇಶ ಮೋಕ್ಷ ಪಡೆಯುವುದಾಗಿತ್ತು. ಇನ್ನೊಂದೆಡೆ ಅದೇ ವರ್ಷ ಅಮರನಾಥ್‌ ಪ್ರವಾಸಕ್ಕೆ ಹೊರಟಿದ್ದ ಲಕ್ಷಾಂತರ ಭಕ್ತರ ಅಪೇಕ್ಷೆ ಮೋಕ್ಷ ಪಡೆಯುವುದು ಇಲ್ಲವೆ ಪುಣ್ಯ ಸಂಪಾದನೆ ಮಾಡುವುದಾಗಿತ್ತು. ಆಶ್ಚರ್ಯದ ಸಂಗತಿಯೆಂದರೆ, ಅಲ್ಲೂ ಕೂಡ ಪುಣ್ಯ ಸಂಪಾದನೆಗೆ ಬಂದ 11 ಜನರು ಸತ್ತು ಹೋದರು. ಇಲ್ಲಿನ ವ್ಯತ್ಯಾಸ ಇಷ್ಟೇ, ಇಲ್ಲಿನ 11 ಜನರು ಒಂದೇ ಕುಟುಂಬದವರಾಗಿರದೆ, ದೇಶದ ಬೇರೆಬೇರೆ ರಾಜ್ಯಗಳು, ಬೇರೆ ಬೇರೆ ಧರ್ಮದವರಾಗಿದ್ದರು.

ಆಂಧ್ರ ಪ್ರದೇಶದ 75 ವರ್ಷದ ಥೋಟಾ ರಾಧನಮ್ ಜುಲೈ 3ರ ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಸಾವು ಸಂಭವಿಸಿದಾಗ ಅವರು ಒಂದು ಧರ್ಮಶಾಲೆಯ ಅಡುಗೆಮನೆಯಲ್ಲಿದ್ದರು. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯವರಾದ ರಾಧಾಕೃಷ್ಣ ಶಾಸ್ತ್ರೀ ಅವರ ಸಾವು ಅಮರನಾಥ ಗುಹೆಯೊಂದರ ಸಮೀಪ ಸಂಭವಿಸಿತು. ಅವರಿಗೂ ಕೂಡ ಹೃದಯಾಘಾತ ಸಂಭವಿಸಿತ್ತು.

ಅದೇ ಸಮಯದಲ್ಲಿ ಪಲ್ಲಕ್ಕಿ ಹೊತ್ತೊಯ್ಯುತ್ತಿದ್ದ ಒಬ್ಬ ವ್ಯಕ್ತಿ ಹಾಗೂ ಧಾರ್ಮಿಕ ಸಮಿತಿಯ ಕಾರ್ಯಕರ್ತ ಕೂಡ ಸಾವನ್ನಪ್ಪಿದ. ಬಿಎಸ್‌ಎಫ್‌ನ ಒಬ್ಬ ಅಧಿಕಾರಿ ಕೆಟ್ಟ ಹವಾಮಾನವನ್ನು ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಇನ್ನುಳಿದ 5 ಜನರ ಸುಳಿವು ಸಿಕ್ಕಿರಲಿಲ್ಲ.

ಮೋಕ್ಷ ಮತ್ತು ಸಾವು

ಈ ಎಲ್ಲ ಜನರ ಅಕಾಲಿಕ ಸಾವಿನ ಬಗ್ಗೆ ಯಾರೊಬ್ಬರೂ ಗುಲ್ಲೆಬ್ಬಿಸಲಿಲ್ಲ. ಅದಕ್ಕೆ ತದ್ವಿರುದ್ಧ ಎಂಬಂತೆ ಅಲ್ಲಿದ್ದ ಎಲ್ಲರೂ ಹೇಳುತ್ತಿದ್ದುದು ಹೀಗೆ, ಅಮರನಾಥ ಬಾಬಾನ ಸನ್ನಿಧಿಗೆ ಬಂದು ಇಲ್ಲಿಯೇ ಸತ್ತು ಹೋಗಿದ್ದು ನಿಜಕ್ಕೂ ಪುಣ್ಯದ ಕೆಲಸ. ನಿಜ ಹೇಳಬೇಕೆಂದರೆ ಅವರು ಇಲ್ಲಿಗೆ ಬಂದು ಸಾಯಲಿಲ್ಲ, ಅವರಿಗೆ ಶಂಕರನೇ ಮೋಕ್ಷ ದಯಪಾಲಿಸಿದ.

ದೆಹಲಿಯ ಭಾಟಿಯಾ ಕುಟುಂಬದವರಿಗೆ ಮೋಕ್ಷದ ಈ ಮಾರ್ಗ ಗೊತ್ತಾಗಿದ್ದರೆ ಅವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಇರಲಿಲ್ಲ. ಅವರು ಕೂಡ ಅಮರನಾಥ್‌ ಯಾತ್ರೆಗೆ ಬಂದು ಸಾವಿನ ಗೇಮನ್ನೇ ಆಡಲು ಇಚ್ಛಿಸುತ್ತಿದ್ದರು. ಪ್ರತಿಕೂಲ ಹವಾಮಾನ, ಹೃದಯಾಘಾತ ಅಥವಾ ಬೇರೆ ಯಾವುದೇ ಕಾರಣದಿಂದ ಸಾವಿಗೀಡಾಗಿದ್ದರೂ ಮೋಕ್ಷ ಸಿಗುತ್ತಿತ್ತು.

ಮೇಲ್ಕಂಡ ಘಟನೆಗಳು ನೇರವಾಗಿ ಸಂಬಂಧಿಸಿರುವುದು ಧರ್ಮಕ್ಕೆ. ಅಮರನಾಥ ಯಾತ್ರೆಯ ಸಂದರ್ಭದಲ್ಲಿ ಯಾವ ಯಾತ್ರಾರ್ಥಿಗಳು ಸತ್ತರೋ ಅವರೇನು ಸಮಾಜ ಸೇವೆಗೆ ಹೋದವರಾಗಿರಲಿಲ್ಲ. ಅವರ ಉದ್ದೇಶ ಮೋಕ್ಷ ಪಡೆಯುವುದಾಗಿತ್ತು. ಸತ್ತು ಮೋಕ್ಷ ಸಿಕ್ಕಿತೊ ಇಲ್ಲವೋ ಎನ್ನುವುದು ದೇವರು ಇದ್ದರೆ ಅದು ಅವನಿಗೇ ಗೊತ್ತು.

ವ್ಯವಹಾರಿಕ ಹಾಗೂ ನೇರ ತರ್ಕದ ಸಂಗತಿಯೆಂದರೆ, ಯಾತ್ರಾರ್ಥಿಗಳು ಭಾಟಿಯಾ ಕುಟುಂಬದವರ ಹಾಗೆ ಮೂರ್ಖತನವನ್ನು ಬೇರೊಂದು ರೀತಿಯಲ್ಲಿ ತೋರಿಸಿದರು. ಹೀಗಾಗಿ ಸಾವು ಕೂಡ ಅವರಿಗೆ ಬೇರೊಂದು ರೀತಿಯಲ್ಲಿಯೇ ಬಂತು. ಇಂತಹ ಸ್ಥಿತಿಯಲ್ಲಿ ಮೋಕ್ಷ ಹಾಗೂ ಸಾವಿನ ನಡುವೆ ವ್ಯತ್ಯಾಸ ಕಂಡುಕೊಳ್ಳುವುದು ಕಷ್ಟ. ಸಾಯುವುದರಿಂದ ಮೋಕ್ಷ ದೊರೆಯುತ್ತದೋ ಅಥವಾ ಮೋಕ್ಷ ದೊರೆತ ಬಳಿಕ ಸಾವು ಬರುತ್ತದೊ?

ಅಪಾಯಕಾರಿ ತೀರ್ಥಯಾತ್ರೆಗಳು

ಧರ್ಮದ ವ್ಯಾಪಾರಿಗಳು ಹಾಗೂ ಗುತ್ತಿಗೆದಾರರು ಹೇಳುವುದೇನೆಂದರೆ, ದೇವರು ಹಾಗೆ ಸುಮ್ಮನೆ ಕಾಣಿಸುದಿಲ್ಲ. ದಾನದಕ್ಷಿಣೆ ಕೊಡದೇ ಇದ್ದರೆ ಕಣ್ಣಿಗೆ ಬೀಳುವುದೇ ಇಲ್ಲ. ಹೀಗಾಗಿ ಭಕ್ತರು ನಾಲ್ಕೂ ದಿಕ್ಕಿನಲ್ಲೂ ತೀರ್ಥಯಾತ್ರೆಗಳನ್ನು ಮಾಡುತ್ತಿರುತ್ತಾರೆ. ನಮ್ಮ ಪಾಪ ಕಳೆಯುತ್ತದೆ. ಮೋಕ್ಷ ದೊರೆಯುತ್ತದೆ ಎಂಬುದೇ ಅವರ ಅಪೇಕ್ಷೆಯಾಗಿರುತ್ತದೆ.

ಮತ್ತೊಂದು ಸತ್ಯ ಸಂಗತಿ ಏನೆಂದರೆ ಮೋಕ್ಷ ಸತ್ತವರಿಗಷ್ಟೇ ಸಿಗುತ್ತದೆ ಎಂಬುದರ ಖಾತ್ರಿ ಕೊಟ್ಟರೆ ಭಕ್ತರು ಯಾವಾಗ ಬೇಕಾದರೂ ಸಾಯಲು ಕೂಡ ಸಿದ್ಧರಾಗಿದ್ದಾರೆ.

ಅಮರನಾಥ ಯಾತ್ರೆಯ ಅಪಾಯಗಳು ಒಂದೆರಡಲ್ಲ, ಅವು ಹೆಜ್ಜೆ ಹೆಜ್ಜೆಗೂ ಇವೆ. ಜಮ್ಮು ದಾಟಿದ ಬಳಿಕ ಭಕ್ತರು ಅಪಾಯದ ದಾರಿಯಲ್ಲಿ ಸಾಗುತ್ತಿರುತ್ತಾರೆ. ಭೂಕುಸಿತ, ಭಾರಿ ಮಳೆ, ಮೇಘಸ್ಛೋಟ ಇವು ಸಾಮಾನ್ಯ ಅಪಾಯಗಳು. ಮತ್ತೊಂದು ದೊಡ್ಡ ಅಪಾಯವೆಂದರೆ ಉಗ್ರರು, ಭಯೋತ್ಪಾದಕರು ಹಲ್ಲೆ ಮಾಡುವ ಸಾಧ್ಯತೆ.

ಪುಸಲಾಯಿಸುವ ಏಜೆಂಟರು

ಪ್ರತಿಯೊಂದು ನಗರ ಪಟ್ಟಣಗಳಲ್ಲಿ ಅಮರನಾಥ ತೀರ್ಥಯಾತ್ರೆಗೆ ಕರೆದುಕೊಂಡು ಹೋಗಲು ಏಜೆಂಟರಿರುತ್ತಾರೆ. ಅವರ ಫ್ಲೆಕ್ಸ್ ಎಲ್ಲ ದೇಗುಲಗಳಲ್ಲಿ ನೇತು ಹಾಕಲ್ಪಟ್ಟಿರುತ್ತವೆ. ಹೀಗಾಗಿ ಹಿಮ ಬಾಬಾನ ದರ್ಶನದ ಹೆಸರಿನ ಮೇಲೆ ದೇಶಾದ್ಯಂತ ಗುಂಪು ಕಟ್ಟಿಕೊಂಡು ಜನರು ಅಮರನಾಥ ಪ್ರವಾಸಕ್ಕೆ ಹೊರಟು ನಿಲ್ಲುತ್ತಾರೆ. ಜಮ್ಮುವಿನ ಬಳಿಕ ಪಹಲ್‌ಗಾಮ್ ಮತ್ತು ಬಾಲ್‌ಟಾವ್‌ನ 2 ದಾರಿಗಳಿಂದ ಅಮರನಾಥ ಗುಹೆ ತನಕ ತಲುಪಬಹುದು. ಇದರಲ್ಲಿ ಬಾಲ್‌‌ಟಾವ್‌ ಗುಂಟ ಹೋಗುವ ರಸ್ತೆ ಅತ್ಯಂತ ಕ್ಲಿಷ್ಟಕರ ಹಾಗೂ ದೂರ ಪ್ರಯಾಣದ್ದಾಗಿದೆ. ಆಶ್ಚರ್ಯದ ಸಂಗತಿಯೆಂದರೆ, ಭಕ್ತರು ಇದೇ ಅಪಾಯಕಾರಿ ದುರ್ಗಮ ರಸ್ತೆ ಮೂಲಕ ಸಾಗಲು ಯತ್ನಿಸುತ್ತಾರೆ.

ಭಾಟಿಯಾ ಕುಟುಂಬದವರಿಗೆ ಯಾರೋ ಮಾಂತ್ರಿಕ ಪುಸಲಾಯಿಸಿದ್ದರಿಂದ ಅವರು ಹಾಗೆ ಮಾಡಿಕೊಂಡಿರಬೇಕು. ಅದೇ ರೀತಿ ಯಾತ್ರಾರ್ಥಿಗಳನ್ನು ಪುಸಲಾಯಿಸುವ ಪೂಜಾರಿ ಪುರೋಹಿತರ ಸಂಖ್ಯೆ ದೇಶದಲ್ಲಿ ಕಡಿಮೆ ಏನಿಲ್ಲ. ಈ ಪಾಪಿ ಜೀವನದಿಂದ ಜೀವನವನ್ನು ಸುಧಾರಿಸಿಕೊಳ್ಳಲು ತೀರ್ಥಯಾತ್ರೆ ಒಂದೊಳ್ಳೆ ಉಪಾಯವೆಂದು ಅವರು ಭಕ್ತರಿಗೆ ಸಲಹೆ ಕೊಡುತ್ತಿರುತ್ತಾರೆ. ಯಾರು ತೀರ್ಥಯಾತ್ರೆ ಮಾಡುವುದಿಲ್ಲವೋ ಅವರ ಜೀವನ ವ್ಯರ್ಥ, ಪ್ರಾಣಿಗಳ ರೀತಿ ಎಂದೆಲ್ಲ ಬೊಗಳೆ ಹೊಡೆಯುತ್ತಾರೆ.

ತೀರ್ಥಸ್ಥಳಗಳ ಮಹತ್ವವನ್ನು ಯಾವ ರೀತಿ ಬಿಂಬಿಸಲಾಗುತ್ತಿದೆ ಎಂದರೆ, ಭಕ್ತರು ಅಲ್ಲಿಗೆ ಹೋಗಲು ಚಡಪಡಿಸುತ್ತಾರೆ. ತಾವು ಜೀವನವಿಡೀ ಗಳಿಸಿದ ಮೊತ್ತವನ್ನು ಎತ್ತಿಕೊಂಡು ಪ್ರವಾಸಕ್ಕೆ ಹೊರಟು ನಿಲ್ಲುತ್ತಾರೆ. ಕೆಲವರು ದುಬಾರಿ ಬಡ್ಡಿ ದರದಲ್ಲಿ ಸಾಲ ಕೂಡ ಪಡೆದು ಪ್ರವಾಸಕ್ಕೆ ಹೊರಡುತ್ತಾರೆ.

ಧರ್ಮ ಪ್ರಧಾನವಾದ ನಮ್ಮ ದೇಶದಲ್ಲಿ ಇಂಥ ಶ್ರದ್ಧೆ ಬಗ್ಗೆ ಯಾರೊಬ್ಬರೂ ಪ್ರಶ್ನಿಸುವುದಿಲ್ಲ. ಹಾಗೆ ಯಾರಾದರೂ ಪ್ರಶ್ನಿಸಿದರೆ ಅವರದ್ದು ಮಹಾಪರಾಧ ಎಂಬಂತೆ ಪರಿಗಣಿಸಲಾಗುತ್ತದೆ. ಕಳೆದ ವರ್ಷ 11 ಜನರು ಮೃತರಾದದ್ದು ಕೆಲವರಿಗೆ ಖೇದದ ಸಂಗತಿಯಲ್ಲ. ಅವರಿಗೆ ಅದು ವ್ಯವಹಾರದ ದೃಷ್ಟಿಯಿಂದ ಬ್ರ್ಯಾಂಡಿಂಗ್‌ ವಿಷಯವಾಗಿತ್ತು. ದೇವರೇ ಅವರನ್ನು ಬುಲಾವ್‌ ನೀಡಿ ಕರೆಸಿಕೊಂಡಿದ್ದು ಎಂಬುದಾಗಿತ್ತು. ಅವರು ಸಾಯಲಿಲ್ಲ, ಮೋಕ್ಷಕ್ಕೆ ಪ್ರಾಪ್ತಿಯಾದರು.

ತೊಂದರೆಗಳು ಕಡಿಮೆಯಲ್ಲ

ಅಮರನಾಥ್‌ಗೆ ಹೋದ ಭಕ್ತರಿಗೆ ಅಷ್ಟೇನೂ ಅನುಭವ ಇರುವುದಿಲ್ಲ. ಕಳೆದ ವರ್ಷ ಹವಾಮಾನ ವೈಪರೀತ್ಯದಿಂದ ಪ್ರವಾಸವನ್ನು ಅನೇಕ ಸಲ ಸ್ಥಗಿತಗೊಳಿಸಲಾಗಿತ್ತು. ಭಕ್ತರು ಎಲ್ಲಿದ್ದರೊ ಅಲ್ಲಿಂದಲೇ ಭೊಲೋ ಭೊಲೋ ಎಂದು ಜೈಕಾರ ಹಾಕುತ್ತಿದ್ದರು. ಹವಾಮಾನ ತಿಳಿಯಾದಾಗ ಭಕ್ತರು ಹಿಮಬಾಬಾ ನಮಗೆ ದರ್ಶನ ಕೊಡಲು ಇಚ್ಛಿಸಿದ್ದಾನೆ ಎಂದು ಅಂದುಕೊಂಡು ತಮ್ಮ ಪ್ರವಾಸ ಮುಂದುವರಿಸಿದರು.

ಯೋಚಿಸಬೇಕಾದ ಒಂದು ಸಂಗತಿಯೆಂದರೆ, ಹವಾಮಾನ ತೀರಾ ಹದಗೆಟ್ಟಾಗ ಬಾಬಾನಲ್ಲಿ ಅಷ್ಟು ಶಕ್ತಿಯಿದ್ದಿದ್ದರೆ, ಅವನು ಅದನ್ನೇಕೆ ಕ್ಲಿಯರ್‌ ಮಾಡಬಾರದಿತ್ತು? 11 ಸಾವು ಎಂಬುದು ಚಮತ್ಕಾರದ ವಿಷಯವೇನಾಗಿರಲಿಲ್ಲ. ಚಮತ್ಕಾರ ಆಗಿದ್ದಿದ್ದರೆ ಅವರು ಸಾವಿನ ಮನೆಯಿಂದ ಜೀವಂತ ವಾಪಸ್‌ ಬರುತ್ತಿದ್ದರು. ಸಿನಿಮಾಗಳಲ್ಲಷ್ಟೇ ಮೂರ್ತಿಯ ಕಣ್ಣು, ತಲೆಯಿಂದ ಬೆಳಕು ಹೊರಬರುತ್ತದೆ. ಮರಣಶಯ್ಯೆಯಲ್ಲಿ ಮಲಗಿದ ವ್ಯಕ್ತಿ ಕೂಡ ಎದ್ದು ಭಜನೆ ಕೀರ್ತನೆಯಲ್ಲಿ ಶಾಮೀಲಾಗುತ್ತಾನೆ.

ಧರ್ಮಕರ್ತರ ಲೂಟಿ

ಅಮರನಾಥ್‌ ಯಾತ್ರೆಗೆ ಬರುವ ಭಕ್ತರ ದುರಾಸೆ ಅಲ್ಲಿನ ಧರ್ಮಶಾಲೆಗಳು. ಇವು ಅಲ್ಲಿನ ಆಹಾರದ ಮನೆಗಳಾಗಿದ್ದು, ಅಲ್ಲಿ ದೇಶದ ಯಾವುದೇ ಭಾಗದ ಆಹಾರ ದೊರೆಯುತ್ತದೆ, ಉಚಿತವಾಗಿ ಹೊಟ್ಟೆ ತುಂಬ ಸವಿಯಬಹುದು ಎಂದೆಲ್ಲ ಪ್ರಚಾರ ಮಾಡಲಾಗುತ್ತದೆ.

ಅಲ್ಲಿಗೆ ಧರ್ಮಶಾಲೆ ಹಾಕಲು ಬರುವರು ದೇಶಾದ್ಯಂತ ದಾನದ ಮೂಲಕ ಪಡೆದ ದವಸ ಧಾನ್ಯಗಳನ್ನು ಇಲ್ಲಿಗೆ ತಂದು ಉಣಬಡಿಸುತ್ತಾರೆ. ಇಲ್ಲಿಗೆ ಬಂದವರು ಕೂಡ ಪುಣ್ಯ ಗಳಿಸಲೆಂದು ಮತ್ತಷ್ಟು ಹಣವನ್ನು ಕೈ ಎತ್ತಿಕೊಡುತ್ತಾರೆ. ಕೆಲವು ಧರ್ಮಶಾಲೆಗಳಲ್ಲಿ ಕಾಣಿಕೆ ಡಬ್ಬ ಕೂಡ ಇಟ್ಟಿರಲಾಗಿರುತ್ತದೆ.

ಇಲ್ಲಿನ ಧರ್ಮಶಾಲೆಗಳ ವ್ಯವಹಾರ ಹೇಗಿದೆ ಎಂದರೆ ಯಾವುದೇ ಮೆನು ಇಲ್ಲ, ಆರ್ಡರ್‌ ಇಲ್ಲ, ಜಿಎಸ್‌ಟಿ ಅಂತೂ ಇಲ್ಲವೇ ಇಲ್ಲ. ನಿಮಗೆಷ್ಟು ಬೇಕೋ ಅಷ್ಟು ತಿನ್ನಿ ಮತ್ತು ನಿಮಗೆ ತಿಳಿದಷ್ಟು ಮೊತ್ತ ದೇಣಿಗೆ ಕೊಟ್ಟು ಹೋಗಿ. ಸಾಮಾನ್ಯವಾಗಿ ತಿಂದವರು ಅದಕ್ಕಿಂತ ಹೆಚ್ಚೇ ಕೊಟ್ಟು ಹೋಗುತ್ತಾರೆ. ಭಕ್ತರ ಅನುಕೂಲಕ್ಕೆ ನಾವು ಎಷ್ಟೊಂದು ಸೌಲಭ್ಯ ಕೊಡುತ್ತಿದ್ದೇವೆ ನೋಡಿ ಎಂದು ಧರ್ಮಶಾಲೆಗಳ ಸಮಿತಿಯವರು ತಮ್ಮನ್ನೇ ತಾವು ಸಮರ್ಥಿಸಿಕೊಂಡು ಭಕ್ತರ ಕರ್ತವ್ಯವನ್ನು ನೆನಪಿಸುತ್ತಾರೆ. ಹೀಗಾಗಿ ಭಕ್ತರು ತಮ್ಮ ಕೈಲಾದುದಕ್ಕಿಂತ ಹೆಚ್ಚಾಗಿ ದಾನ ಕೊಟ್ಟು ಹೋಗುತ್ತಾರೆ. ದಾನದ ಈ ಲಕ್ಷಾಂತರ ರೂ.ಗಳ ಮೊತ್ತವನ್ನು ಸಮಿತಿಗಳು ತಮ್ಮ ತಮ್ಮ್ಲಲ್ಲೇ ಹಂಚಿಕೊಳ್ಳುತ್ತವೆ.

ಕಳೆದ ವರ್ಷ ಹವಾಮಾನ ತೀರಾ ಹದಗೆಟ್ಟಾಗ ಆಹಾರ ಧಾನ್ಯಗಳ ಪೂರೈಕೆ ಅಸ್ತವ್ಯಸ್ತಗೊಂಡಿತು. ಆಗ ಅವರು ಪ್ರವಾಸಿಗರಿಂದ ಮನಬಂದಂತೆ ಹಣ ವಸೂಲಿ ಮಾಡಿದರು. ಕೆಲವು ಧರ್ಮಶಾಲೆಯವರು ತಮ್ಮಲ್ಲಿ ಉಳಿದುಕೊಳ್ಳಲು ಬಂದ ಭಕ್ತಾದಿಗಳಿಂದ ಪ್ರತಿದಿನಕ್ಕೆ 600 ರೂ.ನಂತೆ ವಸೂಲಿ ಮಾಡುತ್ತಾರೆ. 20 ರೂ. ಬಾಟಲ್ ನೀರನ್ನು 60 ರೂ.ಗೆ ಮಾರುತ್ತಾರೆ.

ಇಂತಹ ವಿವಾದಗಳೆದ್ದಾಗ ಯಾರೊಬ್ಬರೂ ಪ್ರತಿಕ್ರಿಯೆ ಕೊಡುವುದಿಲ್ಲ. ತೀರ್ಥಯಾತ್ರೆ ಸ್ಥಗಿತಗೊಂಡ ಬಗ್ಗೆ ಯಾರೂ ವಿಷಾದ ಕೂಡ ವ್ಯಕ್ತಪಡಿಸುವುದಿಲ್ಲ.

ಹಾಗಾದರೆ ಈ ತೀರ್ಥಕ್ಷೇತ್ರಗಳೇಕೆ ಹೀಗೆ? ಪ್ರವಾಸಿಗರು ಹಣ ಖರ್ಚು ಮಾಡಿ ಬರುತ್ತಾರೆ. ಅವರಿಗೆ ಉಳಿದುಕೊಳ್ಳಲು ಒಳ್ಳೆಯ ರೂಮುಗಳು, ಊಟತಿಂಡಿಯ ವ್ಯವಸ್ಥೆ ಇರಬೇಕೆನ್ನುತ್ತಾರೆ. ಆದರೆ ಅವೆಲ್ಲ ಇಂತಹ ತೀರ್ಥಕ್ಷೇತ್ರಗಳಲ್ಲಿ ಮರೀಚಿಕೆಯಾಗಿವೆ. ಪ್ರವಾಸಿಗರು ದುಬಾರಿ ಹಣ ಕೊಟ್ಟು ಮುರುಕು ಮಂಚದ ಮೇಲೆ ಮಲಗುತ್ತಾರೆ. ಕೊಟ್ಟದ್ದನ್ನು ಮಕ್ಕಳ ಹಾಗೆ ಮುಗಿಬಿದ್ದು ತಿನ್ನುತ್ತಾರೆ.

ಇತ್ತ ಕಡೆ ಕುಟುಂಬದವರಿಗೆ ತೀರ್ಥಕ್ಷೇತ್ರಕ್ಕೆ ಹೋದವರು ಯಾವಾಗ ಬರುತ್ತಾರೋ ಎಂಬ ಆತಂಕದಿಂದ ಊಟ ಗಂಟಲಿನಿಂದ ಕೆಳಕ್ಕೆ ಇಳಿಯುವುದಿಲ್ಲ. ಅವರು ತೀರ್ಥಕ್ಷೇತ್ರಕ್ಕೆ ಹೋಗುವಾಗ ರಾಜಕಾರಣಿಗಳು ಮಾಲೆ ಹಾಕಿ ಸುರಕ್ಷಿತವಾಗಿ ವಾಪಸ್‌ ಬನ್ನಿ ಎಂದು ಶುಭ ಹಾರೈಸುತ್ತಾರೆ. ಅಮರನಾಥ್‌ನಿಂದ ಸುರಕ್ಷಿತವಾಗಿ ವಾಪಸ್‌ ಬರುವುದೇ ಒಂದು ಸವಾಲು ಎಂಬಂತಿರುತ್ತದೆ.

ಪ್ರವಾಸ ಅವರ ದೃಷ್ಟಿಯಲ್ಲಿ ತೀರ್ಥಯಾತ್ರೆ. ಹೀಗಾಗಿ ಅವರು ವಾಪಸ್‌ ಬಂದು ತಮ್ಮ ಕಷ್ಟವನ್ನು ಯಾರ ಮುಂದೆಯೂ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಹಿಮಸ್ವಾಮಿಗೆ ಜಯಕಾರ ಹಾಡುತ್ತಾ ನೋವನ್ನು ನುಂಗಿ ತಾವು ಜೀವಂತವಾಗಿ ವಾಪಸ್‌ ಬಂದದ್ದಕ್ಕೆ ಮನಸ್ಸಿನಲ್ಲಿಯೇ ಕೃತಜ್ಞತೆ ಸಲ್ಲಿಸುತ್ತಾರೆ.

3 ವರ್ಷಗಳ ಹಿಂದೆ ಕೆಮಿಸ್ಟ್ ಅನಿಲ್‌ ಲಲಾನಿ ಅವರು ತಮ್ಮ ಗೆಳೆಯರೊಂದಿಗೆ ಅತ್ಯಂತ ಉತ್ಸಾಹದಿಂದ ಅಮರನಾಥ್‌ ಯಾತ್ರೆಗೆ ಹೊರಟು ನಿಂತರು. ಜಮ್ಮುವಿನ ನಂತರ ಅಲ್ಲಿನ ದೃಶ್ಯ ನೋಡಿ ಅವರಿಗೆ ತಮ್ಮ ಹೆಂಡತಿ ಮಕ್ಕಳ ನೆನಪು ಕಾಡತೊಡಗಿತು. ಅಲ್ಲಿ  ನನಗೇನಾದರೂ ಆಗಿಬಿಟ್ಟರೆ ಕುಟುಂಬದವರ ಪಾಡೇನು? ಆ ದೇವರು ಅಂಗಡಿಯನ್ನೇನೂ ನಡೆಸುವುದಿಲ್ಲ. ಹೆಂಡತಿ ಮಕ್ಕಳನ್ನು ಸಲಹಲು ಅವತಾರ ಎತ್ತಿ ಬರುವುದಿಲ್ಲ, ಎಂದು ತಮ್ಮ ಅಳಲು ತೋಡಿಕೊಂಡರು.

ದುಬಾರಿ ಆಗುತ್ತಿರುವ ತೀರ್ಥಯಾತ್ರೆಗಳು

ಅಮರನಾಥ್‌ ಅಥವಾ ಬೇರೆ ಯಾವುದೇ ತೀರ್ಥಯಾತ್ರೆಯಾಗಿರಬಹುದು. ಅಲ್ಲಿಗೆ ಅಗ್ಗದ ದರದಲ್ಲಿ ಪ್ರವಾಸ ಮಾಡಲು ಸಾಧ್ಯವಿಲ್ಲ. ಈಗಂತೂ ಕೆಲವರು ಇಂತಹ ಪ್ರವಾಸಗಳನ್ನು ಐಷಾರಾಮಿ ಪ್ರವಾಸಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಅವರು ಉಳಿದುಕೊಳ್ಳುವುದು ದುಬಾರಿ ಹೋಟೆಲ್‌ಗಳಲ್ಲಿ. ಆದರೆ ಅಮರನಾಥ್‌ನಲ್ಲಿ ಅದು ಸಾಧ್ಯವಾಗುದಿಲ್ಲ. ಆದರೆ ಇಲ್ಲಿ ಹೆಜ್ಜೆ ಹೆಜ್ಜೆಗೆ ಲೂಟಿ ಮಾಡಲು ಪೂಜಾರಿ ಪುರೋಹಿತರು ಅವರ ಏಜೆಂಟರು ಕಾಯುತ್ತಿರುತ್ತಾರೆ. ಚುಚ್ಚುಮದ್ದು ಹಾಕಿಸುವುದರಿಂದ ಹಿಡಿದು ನಾವೆಯಲ್ಲಿ ಸುತ್ತಾಡಿಸುವ ತನಕದ ದಕ್ಷಿಣೆಯನ್ನು ಪ್ರೀತಿಯಿಂದ ಇಲ್ಲಿ ಜಗಳವಾಡಿಯಾದರೂ ವಸೂಲಿ ಮಾಡುತ್ತಾರೆ.

ಧಾರ್ಮಿಕ ಕ್ಷೇತ್ರಗಳು ಕೊಳಕಿನಿಂದ ತುಂಬಿ ಹೋಗಿರುತ್ತವೆ. ಅಲ್ಲಿ ಮೋಕ್ಷವಂತೂ ಸಿಗುವುದಿಲ್ಲ. ಲೂಟಿ ಹೇಗೆ ಹೊಡೆಯುತ್ತಾರೆ ಎನ್ನುವುದರ ಬಗ್ಗೆ ಮಾತ್ರ ತಿಳಿಯುತ್ತದೆ. ಸ್ಥಳೀಯರು ಹಾಗೂ ಪೊಲೀಸರು ಕೂಡ ಪುರೋಹಿತರಿಗೆ ಬೆಂಬಲ ಕೊಡುತ್ತಾರೆ. ಹೀಗಾಗಿ ಯಾವುದೇ ರೀತಿಯ ಅನ್ಯಾಯವಾದರೆ ಯಾವುದೇ ದೂರು ಸಲ್ಲಿಸಲು ಸಾಧ್ಯವಾಗುವುದಿಲ್ಲ. ಮೇಲಾಗಿ ಅವರ ಬೈಗುಳ ಕೇಳಿಸಿಕೊಳ್ಳಬೇಕಾಗಿ ಬರುತ್ತದೆ. ಕೇಳಿಸಿಕೊಳ್ಳುವುದು ಅನಿವಾರ್ಯ. ಏಕೆಂದರೆ ಅದು ಮೋಕ್ಷದ ವಿಷಯ ಅಲ್ಲವೇ?

ಅಮರನಾಥ್‌ದಂತಹ ಯಾತ್ರೆಗಳಿಗೆ ಸರ್ಕಾರ ಕೂಡ ಸಾಕಷ್ಟು ಖರ್ಚು ಮಾಡುತ್ತದೆ. ದೇಶ ಸೇವೆ ಮಾಡಬೇಕಾದ ಸೈನಿಕರನ್ನು ಇಲ್ಲಿ ಧರ್ಮಸೇವೆಗೆ ತಂದು ನಿಲ್ಲಿಸಲಾಗುತ್ತದೆ. ತೀರ್ಥಯಾತ್ರೆಗಳ ಸುರಕ್ಷತೆಯ ಹೆಸರಿನಲ್ಲಿ ಕೋಟಿ ಕೋಟಿ ಖರ್ಚಾಗುತ್ತದೆ. ಅದನ್ನು ಯಾವುದೇ ದೇಗುಲ ಕೊಡುವುದಿಲ್ಲ. ಜನಸಾಮಾನ್ಯರ ತೆರಿಗೆ ಹಣದಿಂದ ಭರಿಸಲಾಗುತ್ತದೆ.

ಪ್ರತಿ ವರ್ಷ ದೇಶದ ಒಂದಿಲ್ಲೊಂದು ನಗರದಲ್ಲಿ ಯಾವುದಾದರೂ ದೇವಸ್ಥಾನದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಹಲವು ಜನರು ಸಾಯುತ್ತಾರೆ. ಈ ಬಗ್ಗೆ ಯಾರೊಬ್ಬರೂ ಚಕಾರ ಎತ್ತುವುದಿಲ್ಲ. ಮಾಧ್ಯಮಗಳಂತೂ ಏನೇನೂ ಮಾತನಾಡುವುದಿಲ್ಲ. ಏಕೆಂದರೆ ಅವರ ಧರ್ಮದ ಅಂಗಡಿ ನಡೆಯುತ್ತಿರುವುದೇ ಇಂತಹದರಿಂದ. ಟಿಆರ್‌ಪಿ ಹಾಗೂ ರೀಡರ್‌ಶಿಪ್‌ ಧರ್ಮದ ಬಂಡವಾಳ ಬಯಲು ಮಾಡುವುದರಿಂದ ದೊರೆಯುವುದಿಲ್ಲ. ಅವನ್ನು ಹಾಡಿ ಹೊಗಳುವುದರಿಂದ ಸಿಗುತ್ತದೆ.

ಭಾಟಿಯಾ ಕುಟುಂಬದ ಸಾಮೂಹಿಕ ಆತ್ಮಹತ್ಯೆಯ ಬಗ್ಗೆ ಮೋಕ್ಷದ ಮೂರ್ಖತೆಯ ಬಗ್ಗೆ ಯಾರೂ ಪ್ರಶ್ನೆ ಎತ್ತುವುದಿಲ್ಲ. ಮೋಕ್ಷಕ್ಕಾಗಿ ಸತ್ತಾಗ ಧರ್ಮವೇ ಅದಕ್ಕೆ ಹೊಣೆ ಎಂದು ಯಾವೊಂದು ಮಾಧ್ಯಮ ಹೇಳಲು ಹೋಗುವುದಿಲ್ಲ. ಭಾಟಿಯಾ ಕುಟುಂಬದವರ ಬಗ್ಗೆ ಎಲ್ಲರೂ ಹೇಳಿದ್ದು ಮೋಕ್ಷಕ್ಕಾಗಿ ಆತ್ಮಹತ್ಯೆ ಮಾಡಿಕೊಂಡರು ಎಂದು. ಪ್ರತಿಕೂಲ ಹವಾಮಾನ ಹಾಗೂ ಅಪಾಯದ ಮಧ್ಯೆಯೂ ಅಮರನಾಥ್‌ ಯಾತ್ರಿಗಳ ಉತ್ಸಾಹ ಕುಂದಿಲ್ಲ. ಅಮರನಾಥ್‌ ಯಾತ್ರಿಗಳ ಬಗ್ಗೆ ಈ ರೀತಿ ಹೇಳಿಕೆ ನೀಡುವುದರ ಮೂಲಕ ಅವರ ಯಾತ್ರೆಗೆ ಪ್ರೋತ್ಸಾಹ ನೀಡಲಾಗುತ್ತದೆ.

ಕಂಡೂ ಕಂಡೂ ಅಪಾಯದ ಕೂಪಕ್ಕೆ ಬೀಳುವುದು, ಯಾವ ಬುದ್ಧಿವಂತಿಕೆ? ಧರ್ಮದ ಹುಚ್ಚು ಜನರ ತಲೆ ತುಂಬಿಕೊಂಡಿದೆ ಎನ್ನುವುದು ಗುಟ್ಟಿನ ವಿಷಯವಲ್ಲ. ಈಗ ಯುವಕರು ಹಾಗೂ ಮಹಿಳೆಯರು ಕೂಡ ತೀರ್ಥಯಾತ್ರೆಗೆ ಉತ್ಸಾಹ ತೋರಿಸುತ್ತಿದ್ದಾರೆ.

ಏನಾಯ್ತೋ ಅದು ಮೇಲಿನವನ ಮರ್ಜಿಯಿಂದ ಆಯಿತು ಎಂದೆಲ್ಲ ಜನರು ಹೇಳುತ್ತಿರುತ್ತಾರೆ. ಸರ್ಕಾರೀ ಪೂಜಾರಿ ಪುರೋಹಿತರ ಅಂಗಡಿ ವ್ಯಾಪಾರ ಹೆಚ್ಚಿಸಲು ಟೊಂಕಕಟ್ಟಿ ನಿಂತರೆ ಜನ ಸಾಯುತ್ತಲೇ ಇರುತ್ತಾರೆ.

ಬಹಳಷ್ಟು ರಾಜ್ಯ ಸರ್ಕಾರಗಳು ಕೂಡ ತೀರ್ಥಯಾತ್ರೆಗಳಿಗಾಗಿ ಸಾಕಷ್ಟು ಮೊತ್ತ ಖರ್ಚು ಮಾಡುತ್ತಲೇ ಇವೆ. ತೆರಿಗೆದಾರರ ಹಣ ಖರ್ಚು ಮಾಡಲು ಯಾವುದೇ ನಿಯಂತ್ರಣವಿಲ್ಲ. ಇದೇ ತೀರ್ಥಯಾತ್ರೆಯ ನಿಜವಾದ ಮಹತ್ವ.

– ಎಸ್‌. ಭರತ್‌ಭೂಷಣ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ