ಒಂದೇ ಕಲೆಯಲ್ಲಿ ಪ್ರಾವೀಣ್ಯತೆ ಪಡೆಯುವುದು ಕಷ್ಟಕರ. ಇನ್ನು ಎರಡೆರಡು ಸಂಗೀತ ಕಲೆಗಳಲ್ಲಿ ನೈಪುಣ್ಯತೆ ಪಡೆಯುವುದು ಅಪರೂಪದಲ್ಲಿ ಅಪರೂಪದ ಸಂಗತಿಯೇ ಹೌದು. ಅಂತಹ ಪ್ರತಿಭಾವಂತೆ ಒಬ್ಬರಿದ್ದಾರೆ. ಅವರೇ ಬೆಂಗಳೂರಿನ ವಾರಿಜಾಶ್ರೀ ವೇಣುಗೋಪಾಲ್.
ವಾರಿಜಾಶ್ರೀ ಅವರ ತಂದೆ ವಿದ್ವಾನ್ ಎಚ್.ಎಸ್. ವೇಣುಗೋಪಾಲ್. ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಕೊಳಲು ವಾದನದಲ್ಲಿ ಹೆಸರುವಾಸಿಯಾದವರು. ತಾಯಿ ಟಿ.ವಿ. ರಮಾ ಕರ್ನಾಟಕ ಶಾಸ್ತ್ರೀಯ ಸಂಗೀತದ ಹಾಡುಗಾರ್ತಿ.
ಬಾಲ ಪ್ರತಿಭೆ
ವಾರಿಜಾಶ್ರೀ ಬಾಲಕಲಾವಿದೆ. ಚಿಕ್ಕ ವಯಸ್ಸಿನಲ್ಲಿಯೇ ಅನೇಕ ರಾಗಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದ್ದಳು. ಒಂದೂವರೆ ವರ್ಷದವಳಿದ್ದಾಗ ತಂದೆಯ ಜೊತೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದಳು. ಸಭಾಂಗಣದಲ್ಲಿ ಸಂಗೀತದ ಅಲೆಗಳು ತೇಲಿ ಬರುತ್ತಿದ್ದರೆ, ಇತ್ತ ಸಭಾಂಗಣದ ಹೊರಗಡೆ ಪುಟ್ಟ ಬಾಲೆ ಮಣ್ಣಲ್ಲಿ ಆಟ ಆಡುವುದರಲ್ಲಿ ಮಗ್ನಳಾಗಿದ್ದಳು. ಸ್ವಲ್ಪ ಹೊತ್ತಿನ ಬಳಿಕ ವಾರಿಜಾಶ್ರೀ, “ಅಪ್ಪಾ, ಹಂಸಪತಿ….” ಎಂದು ಜೋರಾಗಿ ಕೂಗಿದಳು. `ಇದೇನಿದು, ಮಗಳು ಹೀಗೇಕೆ ಕೂಗಿದಳು?’ ಎಂದು ಯೋಚಿಸುತ್ತಲೇ ಅಪ್ಪ ಹೊರಗೆ ಬಂದರು.
ಆಮೇಲೆ ಗೊತ್ತಾದದ್ದು ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಗಾಯಕರು ಹಾಡುತ್ತಿದ್ದದ್ದು `ಹಂಸ ಧ್ವನಿ’ ರಾಗದ ಸ್ತುತಿ ಗೀತೆಯೊಂದನ್ನು. ತಂದೆಗೆ ಆಶ್ಚರ್ಯವೋ ಆಶ್ಚರ್ಯ! ಮಗಳ ಮೆದುಳಿನಲ್ಲಿ ರಾಗಗಳು ರೆಜಿಸ್ಟರ್ಡ್ ಆಗುತ್ತಿವೆ ಎನ್ನುವುದು ಅವರಿಗೆ ಮನವರಿಕೆಯಾಯಿತು. ಮನೆಗೆ ಬಂದ ಬಳಿಕ ಅವರು ಬೇರೆ ಬೇರೆ ಹಾಡುಗಳನ್ನು ಹಾಡಿ ಮಗಳಿಗೆ ಇದು ಯಾವ ರಾಗ? ಇದು ಯಾವ ರಾಗ? ಎಂದು ಕೇಳುತ್ತ ಹೋದರು. ಕೇವಲ ಒಂದೂವರೆ ವರ್ಷದಲ್ಲಿಯೇ ಅವಳು 20-25 ರಾಗಗಳನ್ನು ಗುರುತಿಸಬಲ್ಲವಳಾಗಿದ್ದಳು!
ಶಾಸ್ತ್ರೋಕ್ತ ಕಲಿಕೆ
4ನೇ ವಯಸ್ಸಿನಲ್ಲಿ ವಾರಿಜಾಶ್ರೀಗೆ ವಿದೂಷಿ ಎಚ್. ಗೀತಾರವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಶಾಸ್ತ್ರೋಕ್ತ ಕಲಿಕೆ ಆರಂಭ. ಅಲ್ಲಿಯವರೆಗೆ ಅವಳಿಗೆ 150-200 ರಾಗಗಳ ಪರಿಚಯವಾಗಿತ್ತು ಎಂದರೆ, ಅದೆಂಥ ದೈತ್ಯ ಪ್ರತಿಭೆಯಾಗಿತ್ತು ಎಂದು ಊಹಿಸಬಹುದು.
ಪ್ರಥಮ ಕಚೇರಿ
ವಾರಿಜಾಶ್ರೀ 7ನೇ ವರ್ಷದವಳಿದ್ದಾಗ ಗಾಯನ ಸಮಾಜದಲ್ಲಿ ಪ್ರಥಮ ಸಂಗೀತ ಕಚೇರಿ ನಡೆಸಿಕೊಟ್ಟಿದ್ದಳು. ಅದು ನಡೆದದ್ದು 1998ರಲ್ಲಿ. 7ನೇ ವರ್ಷದ ಬಳಿಕ ತಾಯಿಯ ಗುರುಗಳಾದ ವಸಂತಾ ಶ್ರೀನಿವಾಸನ್ ಬಳಿ ಅಪರೂಪದ ರಚನೆಗಳು, ರಾಗಮಾಲಿಕೆಗಳನ್ನು ಕಲಿಯುವ ಸದವಕಾಶ ದೊರೆಯಿತು. ವಿದ್ವಾನ್ ಡಿ.ಎ. ಶ್ರೀವತ್ಸ ಬಳಿ ಭಜನೆಗಳು, ಅಭಂಗಗಳನ್ನು ಹಾಡುವ ಕಲೆ ಸಿದ್ಧಿಸಿತು. 72 ಮೇಳ ಕರ್ತ ರಾಗಗಳ ಬಗ್ಗೆ ಮಹಾ ವೈದ್ಯನಾಥ ಶಿವನ್ ಅಯ್ಯರ್ ಬಳಿ ತರಬೇತಿ ಸಿಕ್ಕಿತು.
ಮಹತ್ವದ ತಿರುವು
ವಾರಿಜಾಶ್ರೀಯರ ಜೀವನಕ್ಕೆ ಮಹತ್ವದ ತಿರುವು ದೊರೆತದ್ದು ಗಾನ ಕಲಾನಿಧಿ ವಿದ್ವಾನ್ ಸೇಲಂ ಪಿ. ಸುಂದರೇಶನ್ ಅವರ ಬಳಿ. 14-15 ವರ್ಷಗಳ ಕಾಲ ಅವರ ಹತ್ತಿರ ಅಭ್ಯಾಸ ಮಾಡುವ ಅವಕಾಶ ದೊರೆಯಿತು. “ತ್ಯಾಗರಾಜರ ಪರಂಪರೆಯಿಂದ ಬಂದ ಅಂತಹ ಮಹಾನ್ ಕಲಾವಿದರ ಬಳಿ ಕಲಿಯಲು ಅವಕಾಶ ದೊರೆತದ್ದು ನನ್ನ ಅದೃಷ್ಟ ಎಂದೇ ಭಾವಿಸುತ್ತೇನೆ. ಅವರೇ ನನ್ನ ಸಂಗೀತ ವಾಹಿನಿಗೆ ಪ್ರಮುಖ ತಿರುವು ನೀಡಿದರು. ಹೀಗಾಗಿ ನಾನು ಅವರಿಗೆ ಚಿರಋಣಿ,” ಎಂದು ವಾರಿಜಾಶ್ರೀ ಹೆಮ್ಮೆಯಿಂದ ಹೇಳುತ್ತಾರೆ.
ಕೊಳಲು ಜೊತೆಯಾದದ್ದು
ಅಪ್ಪ ವೇಣುಗೋಪಾಲ್ ಕೊಳಲು ನುಡಿಸುವುದರಲ್ಲಿ ಎತ್ತಿದ ಕೈ. ಹಾಗೆಂದು ಅವರು ಮಗಳಿಗೆ `ನೀನೂ ಕೊಳಲು ನುಡಿಸಲು ಅಭ್ಯಾಸ ಮಾಡು’ ಎಂದು ಒತ್ತಡ ಹೇರಿರಲಿಲ್ಲ. ಮಕ್ಕಳು ತಮಗೆ ಇಷ್ಟವಾದದ್ದನ್ನು ಸ್ವಯಂಸ್ಛೂರ್ತಿಯಿಂದ ಕಲಿಯಬೇಕು, ಆಗಲೇ ಕಲೆ ಸಿದ್ಧಿಸುತ್ತದೆ ಎಂದು ಅಪ್ಪ ಹೇಳುತ್ತಾರೆ.
ಅಪ್ಪ ಹಾಡು ಹೇಳುತ್ತ, ಕೊಳಲು ನುಡಿಸುವುದು, ಇತರೆ ಮಕ್ಕಳಿಗೆ ಪಾಠ ಹೇಳುವುದನ್ನು ವಾರಿಜಾಶ್ರೀ ದಿನ ಗಮನಿಸುತ್ತಿದ್ದಳು. ಆದರೆ ಒಂದು ಸಲ ಅಪ್ಪನ ಮುಂದೆ `ನಾನೂ ಕೊಳಲು ನುಡಿಸಲು ಕಲಿಯುತ್ತೇನೆ’ ಎಂದು ಹೇಳಿರಲಿಲ್ಲ.
ಅದೊಂದು ದಿನ ವಾರಿಜಾಶ್ರೀ ಅಪ್ಪನ ಮುಂದೆ, “ಅಪ್ಪಾ, ನೀವು ಹೇಗೆ ಕೊಳಲು ನುಡಿಸ್ತೀರಿ ಎಂದು ನಾನು ತೋರಿಸಲಾ?” ಎಂದು ಕೇಳುತ್ತಾಳೆ. ಮಗಳು ಏನೋ ಒಂದು ನುಡಿಸುತ್ತಾ, ಕತ್ತು ಅಲ್ಲಾಡಿಸುತ್ತಾ ತನ್ನನ್ನು ಅನುಕರಣೆ ಮಾಡುತ್ತಾಳೆ ಎಂದು ಭಾವಿಸಿದ್ದರು. ಆದರೆ ಅವಳು ಕಷ್ಟಕರವಾದ ಕೃತಿಯೊಂದನ್ನು ಕೊಳಲಿನಲ್ಲಿ ನುಡಿಸಿ ತೋರಿಸುತ್ತಾಳೆ. ಮಗಳ ಈ ಗುಪ್ತ ಪ್ರತಿಭೆಯ ಬಗ್ಗೆ ಅವರಿಗೆ ಆಶ್ಚರ್ಯ ಉಂಟಾಯಿತು. ಇದೆಲ್ಲ ಹೇಗೆ ಸಾಧ್ಯವಾಯಿತು ಎಂದು ಮಗಳನ್ನು ಕೇಳಿದಾಗ ನೀವು ಪಾಠ ಮಾಡುವುದನ್ನು ದಿನ ಕೇಳಿ ಕೇಳಿ ನಾನು ಒಳಗೊಳಗೆ ಕೊಳಲು ನುಡಿಸುವುದನ್ನು ಕಲಿತೆ ಎಂದು ಹೇಳಿದಳು.
ಆ ಬಳಿಕ ವೇಣುಗೋಪಾಲ್ ಮಗಳಿಗೆ ಕೊಳಲು ವಾದನದ ಶಾಸ್ತ್ರೋಕ್ತ ಪಾಠ ಹೇಳಿಕೊಟ್ಟರು. ನಂತರ ಅಪ್ಪನ ಕಚೇರಿಗಳಲ್ಲಿ ಮಗಳು ವಾರಿಜಾಶ್ರೀಯ ಕೊಳಲು ವಾದನದ ಸಾಥ್ ಇದ್ದೇ ಇರುತ್ತಿತ್ತು. ನೆರೆದ ಸಂಗೀತಾಭಿಮಾನಿಗಳು ಅವಳ ಕೊಳಲು ವಾದನಕ್ಕೆ ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಿದ್ದರು.
ವಿಶ್ವ ಸಂಗೀತದತ್ತ ಒಲವು
ಅಪ್ಪ ಅಮ್ಮ ಎಲ್ಲಿಗೇ ಹೋದರೂ ಕರ್ನಾಟಕ ಶಾಸ್ತ್ರೀಯ ಸಂಗೀತ ಸೇರಿದಂತೆ ವಿಶ್ವದ ಬೇರೆ ಬೇರೆ ಪ್ರಕಾರಗಳ ಸಂಗೀತದ ಆಲ್ಬಂಗಳನ್ನು ತೆಗೆದುಕೊಂಡು ಬಂದು ಆಲಿಸುತ್ತಿದ್ದರು. ಬೇರೆ ಬೇರೆ ಪ್ರಕಾರದ ಸಂಗೀತ ಆಲಿಸಿ ವಾರಿಜಾಶ್ರೀಗೆ ವಿಶ್ವ ಸಂಗೀತದತ್ತ ಒಲವು ಹೆಚ್ಚುತ್ತ ಹೋಯಿತು.
ಕರ್ನಾಟಕ ಶಾಸ್ತ್ರೀಯ ಸಂಗೀತದ ಸಾಂಪ್ರದಾಯಿಕತೆಯ ಜೊತೆಗೆ ಹೊಸ ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುವ ಮನಸ್ಸು ಅವರದ್ದಾಗಿತ್ತು. ಅಲ್ಲಿಂದಾಚೆಗೆ ಅವರು ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಭಾರತೀಯ ಸಂಗೀತದ ಘಮಲು ಪಸರಿಸುವುದರಲ್ಲಿ ನಿರತರಾಗಿದ್ದಾರೆ. ವಿದೇಶಿ ಹಾಡುಗಳನ್ನು ಕರ್ನಾಟಕ ಸಂಗೀತದಲ್ಲಿ ಹೇಗೆ ಹಾಡಬಹುದು ಎಂಬುದನ್ನು ತೋರಿಸಿಕೊಟ್ಟು, ವಿಶ್ವಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ.
ಚಕ್ರಾಪೇನಿಕ್ಸ್ ತಂಡ : ಹೆಸರಾಂತ ಸಂಗೀತ ನಿರ್ದೇಶಕ ಪ್ರವೀಣ್ ಡಿ. ರಾವ್ ನೇತೃತ್ವದಲ್ಲಿ `ಚಕ್ರಾಪೇನಿಕ್ಸ್’ ಎಂಬ ತಂಡವೊಂದು ಹಲವು ವರ್ಷಗಳಿಂದ ಬೇರೆ ಬೇರೆ ದೇಶಗಳಲ್ಲಿ ಸುತ್ತುತ್ತಿದೆ. ಶಾಸ್ತ್ರೀಯ ಹಾಗೂ ಪಾಶ್ಚಾತ್ಯ ಸಂಗೀತದ ಮಿಶ್ರಣವನ್ನು ಈ ತಂಡ ಉಣಬಡಿಸುತ್ತಿದೆ. ಪ್ರಮಥ್ ಕಿರಣ್, ಅಜಯ್ ವಾರಿಯರ್ ಜೊತೆ ವಾರಿಜಾಶ್ರೀ ಕೂಡ ಆಗಾಗ ಬೇರೆ ಬೇರೆ ದೇಶಗಳಿಗೆ ಹೋಗಿ ಕಾರ್ಯಕ್ರಮ ಕೊಡುತ್ತಾರೆ.`ಚಕ್ರಾಪೇನಿಕ್ಸ್’ ತಂಡಕ್ಕೆ ಸಿಕ್ಕ ಅದ್ಭುತ ಯಶಸ್ಸು ವಾರಿಜಾಶ್ರೀಯವರ ವಿಶ್ವ ಸಂಗೀತದ ಒಲವಿಗೆ ಹೊಸ ದ್ವಾರ ತೆರೆಯಿತು. ಅಷ್ಟೇ ಅಲ್ಲ, ಬೇರೆ ಬೇರೆ ದೇಶಗಳ ಹೊಸ ತಲೆಮಾರಿನ ಗಾಯಕರು ಮತ್ತು ಸಂಗೀತಗಾರರ ಪರಿಚಯವಾಗಿ ಹೊಸ ಹೊಸ ಅವಕಾಶಗಳು ಅವರ ಮುಂದೆ ತೆರೆದುಕೊಳ್ಳುತ್ತ ಹೋದವು.
ಇಟಲಿಯ ರಿಕಾರ್ದೋನೋವಾ ಮಹಾಭಾರತದ ಸಂಸ್ಕೃತ ಭಾಗವೊಂದನ್ನು ಆಧರಿಸಿ ಯೂರೋಪಿಯನ್ ಕಾಂಟೆಂಪರರಿ ಶೈಲಿಯಲ್ಲಿ ಹಾಡುಗಳನ್ನು ಪ್ರಸ್ತುತಪಡಿಸಲಿದ್ದು, ಅದರಲ್ಲಿ ವಾರಿಜಾಶ್ರೀಗೆ ಹಾಡಲು ಅವಕಾಶ ದೊರೆತಿದೆ. ನಿಜಕ್ಕೂ ಇದು ಭಾರತೀಯ ಪ್ರತಿಭೆಗೆ ದೊರೆತ ದೊಡ್ಡ ಗೌರವ ಎಂದೇ ಹೇಳಬೇಕು.
ಸಂಗೀತ ಕಾರ್ಯಾಗಾರ
ಇಟಲಿಗೆ ಹೋದಾಗ ಅಲ್ಲಿನ ಕೆಲವು ಸಂಗೀತ ಅಭಿಮಾನಿಗಳು ಅವರ ಮುಂದೆ ಒಂದು ಬೇಡಿಕೆ ಇಟ್ಟರು. ನಮ್ಮಲ್ಲಿನ ಸಂಗೀತ ಪ್ರೇಮಿಗಳಿಗೆ ನೀವು ಭಾರತೀಯ ಶಾಸ್ತ್ರೀಯ ಸಂಗೀತದ ಕುರಿತಂತೆ ಎರಡು ದಿನಗಳ ಕಾರ್ಯಾಗಾರ ನಡೆಸಿಕೊಡಬೇಕೆಂದು ಹೇಳಿದರು. ಇಟಲಿಯ ಸಾರ್ಡೇನಿಯಾ ದ್ವೀಪದಲ್ಲಿ ವಾರಿಜಾಶ್ರೀ ಈ ಕಾರ್ಯಾಗಾರ ನಡೆಸಿಕೊಟ್ಟು, ಭಾರತೀಯ ಶಾಸ್ತ್ರೀಯ ಸಂಗೀತದ ಛಾಪನ್ನು ವಿದೇಶಿ ನೆಲದಲ್ಲಿ ಮೂಡಿಸುವಲ್ಲಿ ಯಶಸ್ವಿಯಾದರು.
ಜರ್ಮನಿಯ ಮಾರ್ಕ್ಸ್ ಕ್ಲೂಟ್ ಗಿಟಾರ್ನಲ್ಲಿ ಭಾರತೀಯ ಸಂಗೀತವನ್ನು ಹೇಗೆ ಬಳಸಬಹುದೆಂಬ ಪ್ರಯತ್ನದಲ್ಲಿದ್ದಾರೆ. ಅವರ ಜೊತೆಗೂ ಹಾಡುವ ಅವಕಾಶ ವಾರಿಜಾಶ್ರೀಗೆ ದೊರಕಿದೆ.
ಅಮೆರಿಕದ ವಿಕ್ಟರ್ ಟನ್ರ `ಟ್ರಿಪ್ನಾಟಿಕ್ಸ್’ ಆಲ್ಬಂನಲ್ಲಿ ವಾರಿಜಾಶ್ರೀ ಹಾಡಿದ ಹಾಡೊಂದು ಸೇರಿಕೊಂಡಿತು. ಅವರ ತಂಡ ಅಮೆರಿಕಾದ ಬೇರೆ ಬೇರೆ ನಗರಗಳಲ್ಲಿ ಲೈವ್ ಶೋ ಕೊಡಲಿದ್ದು, ಅದರಲ್ಲಿ ವಾರಿಜಾಶ್ರೀ ಅವರಿಗೂ ಪಾಲ್ಗೊಳ್ಳಲು ಕರೆ ಬಂದದ್ದು ಅವರಲ್ಲಿ ಪುಳಕವನ್ನುಂಟು ಮಾಡಿದೆ. ಕನ್ನಡದ ಅಪ್ಪಟ ಪ್ರತಿಭೆ ಕಡಲಾಚೆಗೂ ತನ್ನ ಪ್ರತಿಭೆಯ ಛಾಪು ಮೂಡಿಸುತ್ತಿರುವುದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.
“ನಾನು ಎಲ್ಲಿಗೆ ಹೋದರೂ ಅಲ್ಲಿನ ಸಂಗೀತ ಅಭಿಮಾನಿಗಳಿಗೆ ನಮ್ಮ ಸಂಗೀತದ ಬಗ್ಗೆ ಮಾತನಾಡುವ ಅವಕಾಶ ದೊರೆಯುತ್ತಿರುವುದು ನಿಜಕ್ಕೂ ನನಗೆ ಹೆಮ್ಮೆಯ ವಿಷಯ,” ಎಂದು ವಾರಿಜಾಶ್ರೀ ಹೇಳುತ್ತಾರೆ.
ಧಾರಾವಾಹಿಗಳಲ್ಲಿ ವಾರಿಜಾಶ್ರೀ
ಅನೇಕ ಧಾರಾವಾಹಿಗಳಲ್ಲಿ ತಮ್ಮ ಕಂಠಸಿರಿಯನ್ನು ಮೆರೆದಿದ್ದಾರೆ. ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟದ್ದು `ಹೆಳವನಕಟ್ಟೆ ಗಿರಿಯಮ್ಮ’ ಧಾರಾವಾಹಿ. ಖ್ಯಾತ ಸಂಗೀತ ನಿರ್ದೇಶಕ ಪ್ರವೀಣ್ ಡಿ. ರಾವ್ರ ಸಂಗೀತ ನಿರ್ದೇಶನದಲ್ಲಿ ಈ ಧಾರಾವಾಹಿಯೊಂದಕ್ಕೆ 300 ದಾಸರ ಪದಗಳನ್ನು ಹಾಡಿದ್ದಾರೆ. ಪ್ರತಿಯೊಂದು ಕಂತಿನಲ್ಲಿ ಒಂದೊಂದು ಹಾಡು ಇರುತ್ತಿತ್ತು. ನಿಜಕ್ಕೂ ಅದೊಂದು ದೊಡ್ಡ ಪ್ರಾಜೆಕ್ಟ್ ಎಂದು ವಾರಿಜಾಶ್ರೀ ಹೇಳುತ್ತಾರೆ.
ಬಳಿಕ ಆ 300 ಹಾಡುಗಳಿಗೆ ವಾರಿಜಾಶ್ರೀ ಗಜಲ್ ಶೈಲಿಯ ರೂಪ ನೀಡಿ ಒಂದು ಆಲ್ಬಂ ಹೊರತಂದರು. ಟಿ.ಎನ್. ಸೀತಾರಾಂರವರ ನಿರ್ದೇಶನದ `ಮಗಳು ಜಾನಕಿ’ಯ ಟೈಟಲ್ ಸಾಂಗ್ಗೆ ವಿಜಯ ಪ್ರಕಾಶ್ ಜೊತೆ ಹಾಡುವ ಅವಕಾಶ ದೊರೆಯಿತು.
ಶತಾವಧಾನಿ ಆರ್.ಗಣೇಶ್ ನಿರ್ದೇಶನದ `ಅಷ್ಟಾವಧಾನ’ ಸಾಕ್ಷ್ಯ ಚಿತ್ರದಲ್ಲಿ ಹಿನ್ನೆಲೆ ಗಾಯನದ ಅವಕಾಶ ಕೂಡ ದೊರೆಯಿತು.
ಗಜಲ್ ಗಾಯನ ಖ್ಯಾತ ಗಾಯಕ ಹರಿಹರನ್ರ ಗಜಲ್ ಕಚೇರಿಯಲ್ಲಿ ಹಾಡಿದ ಖ್ಯಾತಿ ಇವರದ್ದಾಗಿದೆ. ಪ್ರಖ್ಯಾತ ಗಜಲ್ ಗಾಯಕ ಗುಲಾಮ್ ಅಲಿ ಜೊತೆಗೂ ಹಾಡಿ ಅವರಿಂದ ಭೇಷ್ ಎನಿಸಿಕೊಂಡಿದ್ದಾರೆ.
ಸಿನಿಮಾದಲ್ಲಿ ವಿ. ಮನೋಹರ್ರ ಸಂಗೀತ ನಿರ್ದೇಶನದ `ಪಾಗಲ್’ ಚಿತ್ರದಿಂದ ವಾರಿಜಾಶ್ರೀ ಸಿನಿಮಾ ಹಿನ್ನೆಲೆ ಗಾಯನಕ್ಕೂ ಕಾಲಿರಿಸಿದರು. ಮಂಥನ, ಮದರಂಗಿ, ಸೆಕೆಂಡ್ ಹಾಫ್ ಮುಂತಾದ ಚಲನಚಿತ್ರಗಳ ಜೊತೆಗೆ ಇತ್ತೀಚೆಗೆ `ಟಗರು’ ಚಲನಚಿತ್ರದಲ್ಲೂ ಒಂದು ಹಾಡಿಗೆ ಧ್ವನಿ ಕೊಟ್ಟಿದ್ದಾರೆ.
ಆಲ್ಪಂ ಹಾಡು ಮತ್ತು ಕೊಳಲು ಎರಡರ ಸಂಗಮದ `ಬಿದಿರು’ ಆಲ್ಬಂ ಸೇರಿದಂತೆ, ಅಪರ್ಣಾ, ಉಪಾಸನಾ, ಮೇಳರಾಗ `ಕಾಯೊ ಎನ್ನ ಗೋಪಾಲ’ ಮುಂತಾದ ಹೆಸರಿನ ಆಲ್ಬಂಗಳು ಇವರಿಗೆ ಅಪಾರ ಹೆಸರು ತಂದುಕೊಟ್ಟಿವೆ.
ಪ್ರಶಸ್ತಿಗಳು
ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ, ವಿದ್ಯಾರತ್ನ ಪ್ರಶಸ್ತಿ, ಗಾನ ವಿನೋದಿನಿ, ಪರ್ಲ್ ಆಫ್ ಬೆಂಗಳೂರು, ಉಗಾದಿ ಪುರಸ್ಕಾರ, ಅನನ್ಯ, ನಾದಜ್ಯೋತಿ, ಅನನ್ಯ ಪ್ರತಿಭೆ, ಕಿಮಾ ಶ್ರೇಷ್ಠ ಹಾಡುಗಾರ್ತಿ, ಸುವರ್ಣ ಶ್ರೇಷ್ಠ ಗಾಯಕಿ, ಮಿರ್ಚಿ ಅವಾರ್ಡ್ ಹೀಗೆ ಅನೇಕ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ.
“ಈ ಎಲ್ಲ ಪ್ರಶಸ್ತಿಗಳಿಗಿಂತ ವಿಶ್ವಾದ್ಯಂತ ಜನರು ನನಗೆ ತೋರಿಸುತ್ತಿರುವ ಪ್ರತಿಕ್ರಿಯೆಯೇ ಅತಿದೊಡ್ಡ ಪ್ರಶಸ್ತಿ!” ಎಂದು ಹೇಳುತ್ತಾರೆ.
ಸದಾ ಹೊಸತನ್ನು ಕಲಿಯುತ್ತಾ ಇರಿ
`ಸಂಗೀತ ಅಭ್ಯಾಸ ಮಾಡುವವರು, ಉದಯೋನ್ಮುಖ ಕಲಾವಿದರಿಗೆ ನೀವೇನು ಹೇಳಲು ಬಯಸುತ್ತೀರಿ?’ ಎಂಬ ಪ್ರಶ್ನೆಗೆ ಹೀಗೆ ಹೇಳಿದರು, “ಈ ರಂಗದಲ್ಲಿ ನಾವು ಪ್ರತಿದಿನ ಏನಾದರೊಂದು ಹೊಸತನ್ನು ಕಲಿಯಲು ಪ್ರಯತ್ನಿಸಬೇಕು. ಆಗ ನಮಗೆ ಕಲಿಯಲು ಬೇಕಾದಷ್ಟಿದೆ ಎಂಬುದು ಮನವರಿಕೆಯಾಗುತ್ತದೆ. ಕಲೆಗೆ ಗೌರವ ಕೊಟ್ಟಾಗಲೇ ನಮಗೆ ಮತ್ತಷ್ಟು ಕಲಿಯುವ ಅವಕಾಶ ದೊರೆಯುತ್ತೆ. ಕಲಿಯುವವರು ತಮಗೆ ತಾವೇ ಯಾವುದೇ ಗಡಿ ರೇಖೆ ಎಳೆದುಕೊಳ್ಳಬಾರದು. ಯಾರಿಂದ, ಯಾವಾಗ, ಏನನ್ನು ಕಲಿಯಲು ಸಿಗುತ್ತೊ ಹೇಳಲಾಗದು. ಹಾಗಾಗಿ ನಾವು ಕಣ್ಣನ್ನು, ಹೃದಯವನ್ನು ಸದಾ ಮುಕ್ತವಾಗಿರಿಸಿಕೊಂಡಿರಬೇಕು.”
– ಅಶೋಕ ಚಿಕ್ಕಪರಪ್ಪಾ
ದ್ವಿದಶಕದ ಹೆಜ್ಜೆ ಗುರುತು
ವಾರಿಜಾಶ್ರೀ ತಮ್ಮ ಪ್ರಥಮ ಸಂಗೀತ ಕಚೇರಿಯನ್ನು 7ನೇ ವಯಸ್ಸಿನಲ್ಲಿ ಅಂದರೆ 1998ರಲ್ಲಿ ಗಾಯನ ಸಮಾಜದಲ್ಲಿ ನಡೆಸಿಕೊಟ್ಟಿದ್ದರು. ಅದೇ ಗಾಯನ ಸಮಾಜದಲ್ಲಿ 2018ರಲ್ಲಿ 20 ವರ್ಷ ಪೂರೈಸಿದ ಸ್ಮರಣಾರ್ಥ ವಾರಿಜಾಶ್ರೀ ಒಂದು ಕಾರ್ಯಕ್ರಮ ನಡೆಸಿಕೊಟ್ಟರು. “ನಾನು ನಡೆದು ಬಂದ ದಾರಿಯನ್ನು ನೆನಪಿಸಿಕೊಳ್ಳಲು ಅದೊಂದು ವೇದಿಕೆಯಾಯಿತು,” ಎಂದು ಅವರು ಹೇಳುತ್ತಾರೆ.
ಕೊಳಲು ಗಾಯನದ ಮೋಡಿ
ಹಾಡುಗಳ ರೆಕಾರ್ಡಿಂಗ್ ಸಮಯದಲ್ಲಿ ಎಷ್ಟೋ ಹಾಡುಗಳಲ್ಲಿ ಹಾಡುವುದರ ಜೊತೆಗೆ ಕೊಳಲು ನುಡಿಸುವ ಇಬ್ಬಗೆಯ ಜವಾಬ್ದಾರಿ ವಾರಿಜಾಶ್ರೀ ಮೇಲಿರುತ್ತಿತ್ತು. ರೆಕಾರ್ಡಿಂಗ್ನಲ್ಲಿ ಇದು ಸಾಧ್ಯವಾಗುವುದಾದರೆ, ಲೈವ್ನಲ್ಲಿ ಏಕೆ ಸಾಧ್ಯವಿಲ್ಲವೆಂದು ತಮ್ಮನ್ನೇ ಪ್ರಶ್ನಿಸಿಕೊಂಡು ಆ ಒಂದು ಸಾಹಸಕ್ಕೂ ಕೈ ಹಾಕಿ ಅದರಲ್ಲಿ ಸೈ ಎನಿಸಿಕೊಂಡರು.