ಬಹಳಷ್ಟು ಹೆಣ್ಣುಮಕ್ಕಳು ಮದುವೆಯಾದ ನಂತರ ತಮ್ಮ ಸಂಸಾರದಲ್ಲಿ ತಲ್ಲೀನರಾಗಿ ಬಿಡುತ್ತಾರೆ. ಇನ್ನು ಮಕ್ಕಳಾಗಿಬಿಟ್ಟರೆ ದೇವರೇ ಗತಿ. ತಮ್ಮೆಲ್ಲಾ ಆಶೋತ್ತರಗಳನ್ನು ಅವರಲ್ಲಿ ತುಂಬಿಸಿ, ಅವರ ಪ್ರತಿ ದಿನದ ಆಗುಹೋಗುಗಳನ್ನು ತಮ್ಮದೇ ಸಾಧನೆ ಎನ್ನುವ ಭ್ರಮೆಯಲ್ಲಿ ತೇಲಿ ಹೋಗಿಬಿಡುತ್ತಾರೆ. ತಮ್ಮೆಲ್ಲಾ ವೈಯಕ್ತಿಕ ಆಸೆಗಳನ್ನು ಅದುಮಿ ಇಟ್ಟುಕೊಂಡು ಬಿಡುತ್ತಾರೆ. ಮಕ್ಕಳು ಓದಿ ಒಂದು ಹಂತಕ್ಕೆ ಬಂದುಬಿಟ್ಟರೆ ಸಾಕು, ನನಗೆ ಮತ್ತಿನ್ನೇನು ಬೇಕು ಎನ್ನುವ ಭಾವ. ಅದರಲ್ಲೂ ಹೆಣ್ಣುಮಕ್ಕಳಾಗಿ ಬಿಟ್ಟರೆ ಅವರ ವಿದ್ಯಾಭ್ಯಾಸ, ಮದುವೆ, ಮಕ್ಕಳು, ಬಾಣಂತನ ಇವುಗಳೇ ಅವರ ಜೀವನದ ಧ್ಯೇಯವಾಗಿ ಬಿಡುತ್ತದೆ. ಅಷ್ಟಲ್ಲದೇ ಏನು? ಹೆಣ್ಣು ಕರುಣಾಮಯಿ ಅಲ್ಲವೇ?

ಇನ್ನು ಮಗನ ವಿದ್ಯಾಭ್ಯಾಸ ಒಂದು ಹಂತಕ್ಕೆ ಬಂದಿತು. ಅವನು ಬುದ್ಧಿವಂತ ಅಂದ ಮೇಲೆ ದೇಶದಲ್ಲಿ ಎಲ್ಲಿ ಇರುತ್ತಾನೆ? ವಿದೇಶಕ್ಕೆ ಹೊರಟ. ಮಗಳು ಗಂಡನ ಮನೆಗೆ ಹೋದಳು. ಅವಳ ಮಕ್ಕಳು ದೊಡ್ಡವರಾದರು. ಇಷ್ಟು ದಿನ ರಾಟವಾಳದಂತೆ ಮಕ್ಕಳಿಗಾಗಿ ಜೀವ ತೇಯ್ದ ಹೆಣ್ಣಿಗೆ ಏಕಾಂಗಿತನದ ಭಾವ, ಏನೋ ಅನಾಥ ಪ್ರಜ್ಞೆ. ತನ್ನ ಅಗತ್ಯ ಯಾರಿಗೂ ಇಲ್ಲ, ಅಲ್ಲವೇ ಎನ್ನುವ ಉದಾಸ ಭಾವ. ಆಗ ಅವಳು ಎಚ್ಚೆತ್ತು ಕೊಳ್ಳುತ್ತಾಳೆ. ಇದು ನನ್ನ ಜೀವನ. ಇನ್ನೂ ಕಾಲ ಮೀರಿಲ್ಲ. ಈಗಲಾದರೂ ಅಂದು ಪೂರೈಸಲಾದ ಆಸೆಗಳನ್ನು ಪೂರೈಸಿಕೊಳ್ಳೋಣ. ತನ್ನನ್ನು ತಾನು ಗುರುತಿಸಿಕೊಂಡು, ಮಿಕ್ಕವರೂ ಗುರುತಿಸುವಂತೆ ಮಾಡೋಣ. ನನ್ನ ವ್ಯಕ್ತಿತ್ವಕ್ಕೆ ಮೆರುಗನ್ನು ನೀಡೋಣ ಎನ್ನುವ ಮನೋಭಾವ ಶುರುವಾಗುತ್ತದೆ. ಮಲೆನಾಡಿನ ತವರೂರಾದ ಚಿಕ್ಕಮಗಳೂರಿನ ವೀಣಾಗೂ ಆದದ್ದು ಇದೇ. ಮಗ ದೊಡ್ಡವನಾಗುವತನಕ ಅವನದೇ ಕೆಲಸಗಳು, ಅವರ ಆದ್ಯತೆಯಾಗಿತ್ತು. ಅವನು ಹೆಚ್ಚಿನ ಓದನ್ನು ಓದಲು ವಿದೇಶಕ್ಕೆ ಹೋದಾಗ ಎಲ್ಲಿಲ್ಲದ ಏಕಾಂಗಿತನ ಆರಂಭವಾಯಿತು. ಆಗ ಈವರೆಗೂ ಅದುಮಿಟ್ಟಿದ್ದ ಅವರ ಆಸೆಗಳು ಗರಿಬಿಚ್ಚಿ ಹೊರ ಹೊಮ್ಮಿದವು. 1984ರಲ್ಲಿ ಮಿಸ್‌ ಚಿಕ್ಕಮಗಳೂರು ಆಗಿದ್ದ ನೆನಪು. ಮರಳಿ ಬಂದಿತು. ಮತ್ತೆ ರಾಂಪ್ ಹತ್ತುವ ಆಸೆ ನಾನಿನ್ನು ಒಳಗಿರಲಾರೆ ಎಂದು ಧುಮ್ಮಿಕ್ಕಿ ಹೊರಬಂದಿತು.

ಆ ಸಮಯಕ್ಕೆ ಸರಿಯಾಗಿ ಶ್ರೀಮತಿ ಕರ್ನಾಟಕ ಸ್ಪರ್ಧೆಗೆ ರಿಜಿಸ್ಟರ್‌ ಮಾಡುವ ಅವಕಾಶ ಒದಗಿ ಬಂತು. ಇನ್ನೇನು ಇವರ ಪಯಣ ಕಿರೀಟದತ್ತ ಪ್ರಾರಂಭವಾಯಿತು. ಅಂತೂ ಇಂದು ಪರಿಶ್ರಮದಿಂದ ಇರುವ ಗುರಿ ಮುಟ್ಟುವ ಆಸೆ ಎಲ್ಲ ಸೇರಿ ಅಂತಿಮ ಹಂತಕ್ಕೆ ತಲುಪಿಯೇ ಬಿಟ್ಟರು. ಎಲ್ಲ ಅರಿಚಿತರೊಂದಿಗೆ ಮೂರು ದಿನ ಕಳೆಯುವಾಗ ಅದೊಂದು ವಿಭಿನ್ನ ಅನುಭವ. ಪ್ರತಿಯೊಂದು ಹಂತದಲ್ಲೂ ಸವಾಲಿನ ಮೇಲೆ ಸವಾಲುಗಳು, ನೃತ್ಯ, ಫೋಟೋ ಶೂಟ್‌, ನಡಿಗೆ ಎಲ್ಲ ವಿಭಿನ್ನ ಮತ್ತು ಆಸಕ್ತಿದಾಯಕವಾಗಿತ್ತು. ಅಂತೂ ಆ ಕೊನೆಯ ಕ್ಷಣ ಬಂದೇಬಿಟ್ಟಿತು. ಫಲಿತಾಂಶ ನೀಡುವ ಸಮಯ, ಅದೃಷ್ಟ ಒಲಿದು ಮೂರು, ಮೂರು ಕಿರೀಟಗಳು ಅವರ ಮಡಿಲಿಗೆ ಬಂದುಬಿದ್ದವು.

ಶ್ರೇಷ್ಠ ನಿರ್ವಹಣೆ

ಶ್ರೀಮತಿ ಮಿಸೆಸ್‌ ಚಿಕ್ಕಮಗಳೂರು, ಶ್ರೀಮತಿ ಇಂಡಿಯ ಕರ್ನಾಟಕ, ಎರಡನೆಯ ಸ್ಥಾನ. “ಈ ವಿಜಯ ಪತಾಕೆ ನನ್ನ ಕುಟುಂಬ ಮತ್ತು ಹಿತೈಷಿಗಳೆಲ್ಲರಿಗೂ ಸಂತಸ ತಂದಿದೆ! ಜೊತೆಗೆ ಅಭಿಮಾನ ಹೌದು,” ಎನ್ನುತ್ತಾರೆ ಶ್ರೀಮತಿ ಚಿಕ್ಕಮಗಳೂರು ವೀಣಾ. ಈ ಹಂತಕ್ಕೆ ತಲುಪಿ ವಿಜಯಮಾಲೆ ಹಾಕಿಸಿಕೊಂಡವರಲ್ಲಿ ಚಿಕ್ಕಮಗಳೂರಿಗೆ ನಾನೇ ಮೊದಲಿಗಳು ಎಂದು ತಿಳಿಸಲು ನಿಜಕ್ಕೂ ಹೆಮ್ಮೆ ಎನಿಸುತ್ತದೆ, ಎಂದು ಉದ್ಗರಿಸುತ್ತಾರೆ. ಇವರ ಈ ಕನಸುಗಳನ್ನು ಸಾಕಾರಗೊಳಿಸಲು ಸಹಕಾರ ನೀಡಿದ ಇವರ ಪತಿ ಜಿ.ಎಲ್. ಶ್ರೀನಿವಾಸ್‌ ಮೂರ್ತಿಯ ಬಗ್ಗೆ ತುಂಬು ಅಭಿಮಾನವನ್ನು ಹೊಂದಿದ್ದಾರೆ. ಇವರ ಈ ವಿಜಯ ಪತಾಕೆ ಇದೇ ಮೊದಲನೆಯದಲ್ಲ.

ಶ್ರೀ ಕೃಷ್ಣಯ್ಯ ಚೆಟ್ಟಿ ಜ್ಯೂವೆಲರ್ಸ್‌ ಅವರ ರೂಪದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಮೈಸೂರಿನಲ್ಲಿ ಶೈನಿಂಗ್‌ ಸ್ಟಾರ್‌ ಎನ್ನುವ ಬಿರುದು.

ಬೆಂಗಳೂರಿನಲ್ಲಿ ಅತ್ಯುತ್ತಮ ತಾಯಿ ಎನ್ನುವ ಬಿರುದು.

ಉತ್ತಮ ಮಹಿಳಾ ಉದ್ಯಮಿ. ಒಳ್ಳೆಯ ಗೃಹಿಣಿ. ಸಮಾಜ ಸೇವಾಕರ್ತೆ. ಫ್ಯಾಷನ್‌ ಮತ್ತು ಫಿಟ್ನೆಸ್‌ನಲ್ಲಿ ಆಸಕ್ತಿಯುಳ್ಳ ಚಿಕ್ಕಮಗಳೂರಿನ ಇನ್ನರ್‌ ವೀಲ್ ಕ್ಲಬ್‌ನ ಸಕ್ರಿಯ ಸದಸ್ಯೆ. ವಯಸ್ಸು ಎನ್ನುವುದು ಒಂದು ಸಂಖ್ಯೆ ಅಷ್ಟೇ. ನಿಜವಾದ ಜೀವನ ನಲವತ್ತರ ನಂತರವೇ ಪ್ರಾರಂಭವಾಗುತ್ತದೆ, ಎನ್ನುವುದು ಅವರ ಮೂಲಮಂತ್ರ. ಕುಟುಂಬಕ್ಕೆ ಅಗತ್ಯವಾದ ಸಹಕಾರ ನೀಡಿ. ಅಂತೆಯೇ ನಿಮ್ಮ ಕನಸುಗಳನ್ನು ಮರೆಯಬೇಡಿ. ಅವಕಾಶ ಸಿಕ್ಕಿದಾಗ ಉದಾಸೀನ ಮಾಡದೆ ನಿಮ್ಮ ಕನಸುಗಳನ್ನು ಸಾಕಾರ ಮಾಡಿಕೊಳ್ಳಿ ಎನ್ನುತ್ತಾರೆ.

ಇವರು ತಮ್ಮ ಅಂಗಾಂಗಗಳನ್ನು (ಮರಣಾನಂತರ) ದಾನ ಮಾಡಿದ್ದಾರೆ. ಈ ಬಗ್ಗೆ ಹೆಚ್ಚು ಜನರಲ್ಲಿ ಅರಿವು ಮೂಡಿಸುವ ಆಸೆ ಇವರದು. ಇವರ ಒಬ್ಬನೇ ಮಗ ಚಿರಾಗ್‌ ಇವರ ಜೀವನದ ದೀಪ ಎನ್ನುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಅವನು ಓದಲು ವಿದೇಶಕ್ಕೆ ಹೋದ ನಂತರವೇ ಇವರ ಕನಸುಗಳು ನಿಜವಾಗಿದ್ದು. ಸುಮಧುರ ವೀಣಾ ನಿನಾದ ಹೊರಹೊಮ್ಮಿದ್ದು!

– ಮಂಜುಳಾ ರಾಜ್‌ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ