ಕಳೆದ ವರ್ಷದ ದೀಪಾವಳಿ ಹಬ್ಬದ ಸಂದರ್ಭದಲ್ಲಿಯೇ ಇನ್ಮುಂದೆ ದೀಪಾವಳಿ ಖರೀದಿಯನ್ನು 5-6 ದಿನಗಳ ಮುಂಚೆಯೇ ಮುಗಿಸಿಬಿಡಬೇಕು, ಎಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ರುದ್ರೇಶ್‌ ನಿರ್ಧರಿಸಿಬಿಟ್ಟಿದ್ದರು. ಕಳೆದ ದೀಪಾವಳಿ ಹಬ್ಬದ ಮುಂಚೆ ತಮ್ಮದೇ ನಗರದ ಟ್ರಾಫಿಕ್‌ ಜಾಮ್ ನಲ್ಲಿ ಸಿಲುಕಿ ನಲುಗಿಹೋಗಿದ್ದರು.

ಅವರಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯಲ್ಲಿ ಹೆಚ್ಚಿನ ಕೆಲಸದ ಹೊರೆ ಇತ್ತು. ಹೀಗಾಗಿ ಅವರು ಆಫೀಸ್‌ನಿಂದ ಹೊರಡುತ್ತಿದ್ದಂತೆ ಶಾಪಿಂಗ್‌ ಹೋಗುವುದಾಗಿ ನಿರ್ಧರಿಸಿದರು. ಅವರು ಪತ್ನಿಗೆ ಮೊದಲೇ ಕಾಲ್ ಮಾಡಿ, “7 ಗಂಟೆಗೆ ಸರಿಯಾಗಿ ರೆಡಿ ಇರು. ನಾನು ಹೊರಗಡೆ ಬಂದು ಹಾರ್ನ್‌ ಹಾಕ್ತಿದ್ದಂತೆ ಕಾರಿನಲ್ಲಿ ಬಂದು ಕುಳಿತುಕೊಳ್ಳಬೇಕು. ಹೋಗುವಾಗ ಅಲ್ಲಿಯೇ ಎಲ್ಲಿಯಾದರೂ ತಿಂಡಿ ತಿನ್ನೋಣ,” ಎಂದು ಹೇಳಿದರು.

ಅವರು ಹೇಳಿದಂತೆಯೇ ಸರಿಯಾದ ಸಮಯದಲ್ಲಿ ಮನೆಗೆ ಬಂದರು. ಹೆಂಡತಿ ಹಾಗೂ ಇಬ್ಬರು ಮಕ್ಕಳು ಕೂಡ ಕಾರಿನಲ್ಲಿ ಹತ್ತಿ ಕುಳಿತರು. 3 ಕಿ.ಮೀ. ದೂರ ಸಾಗುತ್ತಿದ್ದಂತೆ ಟ್ರಾಫಿಕ್‌ನಲ್ಲಿ ಸಿಲುಕಿಬಿಟ್ಟರು. ರಸ್ತೆಯ ಉದ್ದಕ್ಕೂ ದೀಪ ಮಾಲೆಗಳು ಗೋಚರಿಸುತ್ತಿದ್ದವು. ಅಲ್ಲಿ ಪಟಾಕಿಗಳು ಸಿಡಿಯುತ್ತಿದ್ದವು. ರುದ್ರೇಶ್‌ ಒಮ್ಮೆ ತಮ್ಮನ್ನು ಹಾಗೂ ಇನ್ನೊಮ್ಮೆ ಟ್ರಾಫಿಕ್‌ನ್ನು ಹಳಿಯುತ್ತಿದ್ದರು. ಇನ್ನೊಂದೆಡೆ ಹೆಂಡತಿ ಹಾಗೂ ಮಕ್ಕಳು ಕೂಡ ಟ್ರಾಫಿಕ್‌ನಿಂದಾಗಿ ಬೇಸತ್ತು ಹೋಗಿದ್ದರು. ಮುಂದಿನ ಒಂದು ವಾಹನ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಇನ್ನೇನು ಟ್ರಾಫಿಕ್‌ ಕ್ಲಿಯರ್‌ ಆಯ್ತು ಎಂದುಕೊಳ್ಳುವಷ್ಟರಲ್ಲಿ ಮತ್ತೆ ಅದೇ ಹಾಡು ಎಂಬಂತಾಗುತ್ತಿತ್ತು.

ಅವರು ಟ್ರಾಫಿಕ್‌ ವ್ಯವಸ್ಥೆ, ಸರ್ಕಾರ, ಏಕಕಾಲಕ್ಕೆ ಎಲ್ಲರೂ ಮಾರುಕಟ್ಟೆಗೆ ದಾಳಿ ಇಡುವುದು ಹಾಗೂ ಪರಂಪರೆಯನ್ನು ಹಳಿದರೂ, ಹೆಚ್ಚಾಗಿ ಹಳಿದುಕೊಂಡದ್ದು ತಮ್ಮನ್ನೇ! ದೀಪಾವಳಿಯಂತಹ ಮಹತ್ವದ ಹಬ್ಬದ ಖರೀದಿಯನ್ನು 5-6 ದಿನಗಳ ಮುಂಚೆಯೇ ಮಾಡಿ ಮುಗಿಸಿದ್ದರೆ ತಾವು ಹೀಗೆ ರಸ್ತೆ ಮಧ್ಯೆ ಸಿಲುಕಿಕೊಂಡು ಮುಂದೆಯೂ ಹೋಗುವ ಹಾಗಿರಲಿಲ್ಲ, ಹಿಂದೆ ವಾಪಸ್‌ ಹೋಗಲು ಸಾಧ್ಯವಿರಲಿಲ್ಲ ಎಂದು ಕಷ್ಟಪಡುವ ಅಗತ್ಯವಿರುತ್ತಿರಲಿಲ್ಲ.

ಮಕ್ಕಳು ಆಗಲೇ ಹಸಿವಿನಿಂದ ಕಂಗಾಲಾಗಿ ಹೋಗಿದ್ದರು. ದೊಡ್ಡ ಮಗನಿಗೆ ಅಂಗಡಿಗಳು ಎಲ್ಲಿ ಮುಚ್ಚಿಬಿಡುತ್ತವೋ ಎಂಬ ಆತಂಕ, ಚಿಕ್ಕವನಿಗೆ ಹಸಿವು.

ದೀಪಾವಳಿಯ ಖುಷಿ ಒಂದು ದಿನದ ಮುಂಚೆಯೇ ಠುಸ್ಸಾಗಿತ್ತು. ಅವರು ಅಂಗಡಿ ಹತ್ತಿರ ಹೋದಾಗ 10 ಗಂಟೆ ಆಗಿಬಿಟ್ಟಿತ್ತು. ಮೊದಲು ಅವರು ಮಗನಿಗೆ ತಿಂಡಿ ಕೊಡಿಸಿದರು. ಬಳಿಕವೇ ಖರೀದಿಗಿಳಿದರು. ತಿಂಗಳ ಮೊದಲೇ ಏನೇನು ಖರೀದಿಸಬೇಕೆಂದು ಯೋಚಿಸಿದ್ದರೂ ಅದೆಲ್ಲ ಸರಿಯಾಗಿ ಆಗಲಿಲ್ಲ.

ಕಳೆದ ಸಲದ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ಗಮನದಲ್ಲಿಟ್ಟುಕೊಂಡು ಹಬ್ಬದ ಖರೀದಿಯನ್ನು ಇನ್ನು ಮುಂದೆ 5-6 ದಿನಗಳ ಮುಂಚೆಯೇ ಮುಗಿಸಬೇಕು ಹಾಗೂ ರಾತ್ರಿ ಮಾರ್ಕೆಟ್‌ಗೆ ಹೋಗುವ ಬದಲು ಮಧ್ಯಾಹ್ನವೇ ಹೊರಡಬೇಕೆಂದು ತೀರ್ಮಾನಿಸಿದರು. ವಾಹನದಲ್ಲಿ ಮಕ್ಕಳಿಗೆ ಏನಾದರೂ ತಿಂಡಿ ಹಾಗೂ ಕಾರಿಗೆ ಪೆಟ್ರೋಲ್‌ ಹಾಕಿಸುವ ಬಗ್ಗೆ ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಳ್ಳಬೇಕೆಂದು ಅವರು ನಿರ್ಧರಿಸಿದರು. ಕಳೆದ ಸಲ ಮಾಡಿದ ಒಂದು ಒಳ್ಳೆಯ ಕೆಲಸವೆಂದರೆ, ಕಾರಿಗೆ ಮೊದಲೇ ಪೆಟ್ರೋಲ್ ಹಾಕಿಸಿದ್ದು, ಇಲ್ಲದಿದ್ದರೆ ರಸ್ತೆ ಮಧ್ಯೆಯೇ ತುಂಬಾ ಕಿರಿಕಿರಿ ಅನುಭವಿಸಬೇಕಾಗುತ್ತಿತ್ತು.

ತೊಂದರೆಯಲ್ಲಿ ಸಿಲುಕಬೇಡಿ

ಬೆಂಗಳೂರಿನ ಸರ್ಕಾರಿ ಇಲಾಖೆಯಲ್ಲಿ ಎಂಜಿನಿಯರ್‌ ಆಗಿರುವ ಚಿದಾನಂದರ ಅನುಭವ ರುದ್ರೇಶ್‌ ಅವರಿಗಿಂತ ಸ್ವಲ್ಪ ಕಹಿಯಾಗಿದೆ. ಅವರು ಪ್ರತಿಸಲದಂತೆ ದೀಪಾವಳಿ ಹಬ್ಬ ಆಚರಿಸಲೆಂದು ತಮ್ಮ ತಂದೆತಾಯಿಯನ್ನು ಕರೆದುಕೊಂಡು ಶಿವಮೊಗ್ಗಕ್ಕೆ ಹೊರಟಿದ್ದರು. ಸಂಜೆ 4 ಗಂಟೆಗೆ ಹೊರಟು ರಾತ್ರಿ 10 ಗಂಟೆ ಹೊತ್ತಿಗೆ ಶಿವಮೊಗ್ಗಕ್ಕೆ ತಲುಪುವುದು ಅವರ ಯೋಚನೆಯಾಗಿತ್ತು. ಆದರೆ ಬೆಂಗಳೂರಿನ ಟ್ರಾಫಿಕ್‌ನಿಂದ ನೆಲಮಂಗಲ ತಲುಪುವ ಹೊತ್ತಿಗೆ 2 ಗಂಟೆ ದಾಟಿ ಹೋಗಿತ್ತು. ಇನ್ನೇನು ಮುಂದೆ ಸರಾಗವಾಗಿ ಹೋಗಬೇಕೆಂದು ಕೊಂಡವರಿಗೆ ನೆಲಮಂಗಲದಿಂದ ಸ್ವಲ್ಪ ದೂರದಲ್ಲಿಯೇ ಅವರ 4 ವರ್ಷದ ಹಳೆಯ ಕಾರು ಕೆಟ್ಟು ನಿಂತಿತ್ತು. ತಮಗೆ ಗೊತ್ತಿರುವ ಎಲ್ಲ ಉಪಾಯ ಮಾಡಿದರೂ ಅದು ಜಪ್ಪಯ್ಯ ಅಂದ್ರೂ ಸ್ಟಾರ್ಟ್‌ ಆಗಲಿಲ್ಲ. ಇವರು ನಿಂತಿರುವುದನ್ನು ನೋಡಿ ಕೆಳಗಿಳಿದು ಬಂದು ಡ್ರೈವರ್‌ಗಳು ಇವರಿಗೆ ಉಪದೇಶದ ಸುರಿಮಳೆ ಸುರಿಸಿದರು.

ದೀರ್ಘ ಪ್ರಯಾಣಕ್ಕೆ ಹೊರಡುವ ಮುನ್ನ ಕಾರಿನ ಸರ್ವೀಸಿಂಗ್‌ ಅವಶ್ಯ ಮಾಡಿಸಿಕೊಳ್ಳಿ.

ಗಾಡಿಯ ಸಣ್ಣಪುಟ್ಟ ತೊಂದರೆಗಳನ್ನು ನಿಭಾಯಿಸುವುದನ್ನು ನೀವೇ ಕಲಿತುಕೊಳ್ಳಿ.

ಎಂಜಿನ್‌ ಆಯಿಲ್ ಬ್ರೇಕ್‌ ಆಯಿಲ್‌ ಸರಿಯಾಗಿ ಇದೆಯೇ ಎಂದು ನೋಡಿಕೊಂಡು ಹೊರಡಿ.

ವಾಟರ್‌ ಕೂಲೆಂಟ್‌ನ್ನು ಕೂಡ ಪರಿಶೀಲಿಸಿಕೊಳ್ಳಿ.

ನಿಮ್ಮ ವಾಹನದಲ್ಲಿ ಇಂಧನವನ್ನು ಭರ್ತಿಯಾಗಿಸಿಕೊಂಡೇ ಹೊರಡಿ.

5-10 ನಿಮಿಷಗಳ ಕಾಲ ಆ ಡ್ರೈವರ್‌ ಧರ್ಮ ಗುರುವಿನ ಹಾಗೆ ಬೋಧನೆ ಮಾಡುತ್ತಲೇ ಇದ್ದ. ಇವರು ಭಕ್ತನ ಹಾಗೆ ಅದನ್ನು ಆಸಕ್ತಿಯಿಂದ ಆಲಿಸುತ್ತಿದ್ದರು. ದೀಪಾವಳಿ ಹಬ್ಬವಾದ್ದರಿಂದ ಆಗ ಸಮೀಪದಲ್ಲಿ ಯಾರೂ ಮೆಕ್ಯಾನಿಕ್‌ಗಳೂ ಸಿಗಲಿಲ್ಲ. ಕೊನೆಗೆ ಪರಿಚಿತರೊಬ್ಬರ ಮುಖಾಂತರ ಮೆಕ್ಯಾನಿಕ್‌ ಒಬ್ಬನನ್ನು ಕರೆಸಿಕೊಂಡು ಅಂತೂ ರಿಪೇರಿ ಮಾಡಿಸಿದ್ದಾಯ್ತು. ಹೀಗಾಗಿ ರಾತ್ರಿ ಊಟ ಬೆಂಗಳೂರು ಹೊರವಲಯದಲ್ಲಿ ಮುಗಿಸಿ ಶಿವಮೊಗ್ಗ ತಲುಪುವ ಹೊತ್ತಿಗೆ ಬೆಳಗಿನ 4 ಗಂಟೆ ಆಗಿತ್ತು.

ಏನು ಉಪಾಯ?

ಹಬ್ಬದ ಮುನ್ನಾ ದಿನಗಳಂದು ಅಲ್ಲಲ್ಲಿ ಟ್ರಾಫಿಕ್‌ ಆಗುವುದು ಸಹಜ. ಹೀಗಾಗಿ ಎಲ್ಲಿಗೇ ಹೊರಡುವ ಮುಂಚೆ ಒಂದಿಷ್ಟು ಮುಂಜಾಗ್ರತೆ ವಹಿಸುವುದು ಮುಖ್ಯ.

ನಿಮ್ಮ ಮೊದಲ ಪ್ರಯತ್ನ ಟ್ರಾಫಿಕ್‌ ಜಾಮ್ ನಲ್ಲಿ ಸಿಲುಕದಿರುವಂತೆ ನೋಡಿಕೊಳ್ಳುವುದು. ಆದರೆ ಇದಕ್ಕೆ ಯಾವುದೇ ನಿರ್ದಿಷ್ಟ ಫಾರ್ಮುಲಾ ಇಲ್ಲ. ಆದರೆ ನಿಮ್ಮ ಸ್ಮಾರ್ಟ್‌ ಫೋನ್‌ ಮುಖಾಂತರ ಟ್ರಾಫಿಕ್‌ ಬಗ್ಗೆ ಮುಂಚೆಯೇ ಮಾಹಿತಿ ತಿಳಿಯಬಹುದು.

ಹಬ್ಬ, ಜಾತ್ರೆ, ಉತ್ಸವ ಮುಂತಾದ ಸಮಾರಂಭಗಳು ಇದ್ದಾಗ ಭಾರಿ ಜನದಟ್ಟಣೆ ಆಗುತ್ತದೆ. ಆಗ ನೀವು ಕಾರು ತೆಗೆದುಕೊಂಡು ಹೋಗದಿರುವುದೇ ಸರಿ. ಅಂತಹ ಸಂದರ್ಭದಲ್ಲಿಯೇ ಟ್ರಾಫಿಕ್‌ ಜಾಮ್ ಜಾಸ್ತಿ ಆಗುತ್ತದೆ.

ನೀವು ಹಬ್ಬದ ಸಿದ್ಧತೆಗೆ ತೊಡಗುವ ಮುಂಚೆಯೇ ವಾಹನದ ಪೆಟ್ರೋಲ್‌ ಟ್ಯಾಂಕ್‌ ಭರ್ತಿ ಮಾಡಿಕೊಳ್ಳಿ. ಹಬ್ಬದ ದಿನಗಳಲ್ಲಿ ಪೆಟ್ರೋಲ್ ಬಂಕ್‌ ಮುಂದೆಯೂ ದಟ್ಟಣೆ ಆಗಬಹುದು.

ಪ್ರಯಾಣ ಹೊರಡುವ ಮುನ್ನ ಯಾವ ದಾರಿಯಲ್ಲಿ ಹೊರಟರೆ ಸುಲಭವಾಗಿ ಮುಂದೆ ಹೋಗಬಹುದು ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ರಸ್ತೆ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿ.  ವಾಹನದಲ್ಲಿ ಏನಾದರೂ ತೊಂದರೆ ಇದ್ದರೆ ಅದನ್ನು ತೆಗೆದುಕೊಂಡು ಹೋಗದೇ ಇರುವುದು ಉತ್ತಮ. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ.

ಹಬ್ಬಗಳು ಆನಂದದ ಸಂಕೇತ. ಹೀಗಾಗಿ ಹಬ್ಬದ ಸಂದರ್ಭದಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸಬೇಡಿ. ಅದು ನಿಮ್ಮ ಕುಟುಂಬದವರಿಗೆ ಕಿರಿಕಿರಿಯಾಗಿ ಪರಿಣಮಿಸಬಹುದು. ಕುಟುಂಬ ಸಮೇತ ಊರಿಗೆ ಹೋಗಬೇಕಿದ್ದರೆ ಹಬ್ಬಕ್ಕಿಂತ 2 ದಿನ ಮುಂಚೆಯೇ ಹೊರಡಿ.

ಟ್ರಾಫಿಕ್‌ ಜಾಮ್ ನಿಂದ ಪಾರಾಗಲು ಒಂದು ಒಳ್ಳೆಯ ಉಪಾಯವೆಂದರೆ, ದೂರ ಪ್ರಯಾಣ ಮಾಡಬೇಕಿದ್ದರೆ ಮುಂಜಾನೆಯೇ ಹೊರಡಿ ಹಾಗೂ ರಾತ್ರಿಯಾಗುವುದರೊಳಗೆ ಊರು ತಲುಪಿ.

ಸಂಚಾರ ದಟ್ಟಣೆಯಲ್ಲಿ ಸಿಲುಕಿದಾಗ ಪೆಟ್ರೋಲ್ ಹೆಚ್ಚು ವ್ಯಯವಾಗುತ್ತದೆ. ಹೀಗಾಗಿ ಫುಲ್ ಟ್ಯಾಂಕ್‌ ಮಾಡಿಸಿಕೊಳ್ಳಿ. ಜೊತೆಗೆ ಮೆಕಾನಿಕ್‌ಗಳ ನಂಬರ್‌ ಜೊತೆಗಿಟ್ಟುಕೊಳ್ಳಿ.

– ಭಾರತಿ ಹೆಗಡೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ