ಕಡು ಬಡತನದಲ್ಲಿ ಬಳಲುತ್ತಿದ್ದ ತಮ್ಮ ಜೀವನಕ್ಕೆ ಮೂಲಾಧಾರವಾಗಿದ್ದ ತಮ್ಮ ಹೊಲಿಗೆ ಯಂತ್ರ ಎಂದರೆ ಮಾಧವಿಯವರಿಗೆ ಎಲ್ಲಿಲ್ಲದ ಅಭಿಮಾನ! ಆದರೆ ಇವರ ಶ್ರೀಮಂತ ಆಧುನಿಕ ಸೊಸೆಯ ಸ್ಟೇಟಸ್ಸಿಂಬಲ್ ಗೆ ಅದು ಮಂಕುಬಡಿಸುತ್ತಿತ್ತು. ಅದನ್ನು ಸೊಸೆ ಇಲ್ಲವಾಗಿಸಲು ಯತ್ನಿಸಿದಾಗ ಮುಂದೆ ಮನೆಯಲ್ಲಿ ನಡೆದದ್ದೇನು…….!

ಮಾಧವಿ ಮನೆಯ ಎದುರಿನ ಸಿಟ್‌ ಔಟ್‌ ನಲ್ಲಿ ಪೇಪರ್‌ ಓದುತ್ತಾ ಕುಳಿತಿದ್ದರು. ಅಷ್ಟರಲ್ಲಿ ಸೊಸೆ ಭುವನಾ, “ಅತ್ತೆ… ಬನ್ನಿ, ತಿಂಡಿ ತಿನ್ನಿ. ದೋಸೆ ತಣ್ಣಗಾಗುತ್ತದೆ,” ಎಂದು ಕರೆದಾಗ ಮೆಲ್ಲನೆ ಎದ್ದು ಅಡುಗೆ ಮನೆಗೆ ಬಂದು, “ಇಷ್ಟು ಬೇಗ ಬೇಡಮ್ಮಾ…. ನನಗೆ ಹಸಿವೆ ಇಲ್ಲ, ಆಮೇಲೆ ತಿಂತೀನಿ,” ಎಂದರು.

“ಅತ್ತೆ, ನೀವು ತಿನ್ನೋವರೆಗೂ ನಾನು ಈ ದೋಸೆ ಹಿಟ್ಟು ಹೊರಗಿಟ್ಟರೆ ಹಿಟ್ಟು ಹುಳಿಯಾಗುತ್ತೆ. ಎಲ್ಲರಿಗೂ ದೋಸೆ ಮಾಡಿ ಉಳಿದ ಹಿಟ್ಟನ್ನು ಫ್ರಿಜ್‌ ನಲ್ಲಿ ಇಟ್ಟರೆ ಕಿಚನ್‌ ಸ್ಲ್ಯಾಬ್‌ ನ್ನು ಬೇಗ ಬೇಗ ಕ್ಲೀನ್‌ ಮಾಡಬಹುದಲ್ಲ…..” ಎಂದಳು ಭುವನಾ.

ಸೊಸೆಯ ಗಡಿಬಿಡಿ ನೋಡಿ, “ಇನ್ನೂ ಸಮಯ ಏಳೂವರೆ ಅಷ್ಟೆ! ದಿನಾಲೂ ಇಷ್ಟು ಹೊತ್ತಿಗೆ ನಿನ್ನ ಗಂಡ, ಮಕ್ಕಳು ಮಾತ್ರ ತಿಂಡಿ ತಿನ್ನೋದು. ನಾನು, ನೀನು ಆಮೇಲೆ ತಾನೇ ತಿನ್ನೋದಲ್ವಾ…..? ಇವತ್ತು ಯಾಕೆ ಅವಸರ ಮಾಡ್ತಾ ಇದೀಯಾ…? ಎಲ್ಲಿಗಾದರೂ ಹೋಗಬೇಕಾ….? ಹಾಗಿದ್ದರೆ ಕಿಚನ್‌ ಕೆಲಸ ಎಲ್ಲವೂ ಹಾಗೇ ಬಿಡು. ಉಳಿದದ್ದು ನಾನು ಮಾಡ್ತೀನಿ. ನೀನು ಹೊರಡು,” ಎನ್ನುತ್ತಾ ಸೊಸೆಯ ಕೈಯಿಂದ ದೋಸೆಯ ಸೌಟನ್ನು ತೆಗೆದುಕೊಂಡು ಕಾವಲಿಯ ಮೇಲೆ ಕಾದಿದ್ದ ದೋಸೆಯನ್ನು ಮೆಲ್ಲನೆ ಎಬ್ಬಿಸಿ ಡೈನಿಂಗ್‌ ಟೇಬಲ್ ಮುಂದೆ ತಿಂಡಿ ತಿನ್ನಲು ಕೂತಿದ್ದ ಮಗ ಶೈಲೇಶನ ಪ್ಲೇಟ್‌ ಗೆ ಹಾಕಿದರು.

“ಎಲ್ಲಿಗೂ ಹೋಗಲ್ಲ ಅತ್ತೆ. ನನ್ನ ಚಿಕ್ಕಪ್ಪನ ಮನೆಯ ಗೃಹಪ್ರವೇಶಕ್ಕೆ ಒಂದೊಳ್ಳೆ ರೇಷ್ಮೆ ಸೀರೆ ಶಾಪಿಂಗ್‌ ಮಾಡಬೇಕು. ಅದಕ್ಕೆ ಶೈಲೇಶ್‌ ಜೊತೆ ಕಾರಿನಲ್ಲಿ ಹೋಗ್ತೀನಿ. ಅವರು ನನ್ನನ್ನು ಅಲ್ಲೇ ಡ್ರಾಪ್‌ ಮಾಡಿ ಆಫೀಸಿಗೆ ಹೋಗ್ತಾರೆ….” ಎಂದಳು ಭುವಿ.

“ಗೃಹಪ್ರವೇಶಕ್ಕೆ ಎರಡು ತಿಂಗಳಿದೆ ಅಲ್ವಾ…..? ಯಾಕಿಷ್ಟು ಅವಸರ…..?” ಮಾಧವಿ ಆಶ್ಚರ್ಯದಿಂದ ಕೇಳಿದರು.

“ಅತ್ತೇ, ಬರೀ ಸೀರೆ ಕೊಂಡರೆ ಸಾಕಾ…..? ಅದಕ್ಕೆ ಡಿಸೈನರ್‌ ಬ್ಲೌಸ್‌ ಹೊಲಿಸಬೇಕು. ಮದುವೆ, ಗೃಹಪ್ರವೇಶದ ಸೀಸನ್‌ ನಲ್ಲಿ ಎಲ್ಲ ಟೇಲರ್ಸ್‌ ಬಿಜಿ ಇರ್ತಾರೆ. ಅದಕ್ಕೇ ಬೇಗ ಸೀರೆ ಕೊಂಡು ಬ್ಲೌಸ್‌ ಹೊಲಿಸೋಕೆ ಕೊಟ್ಟು ಬಿಡ್ತೀನಿ…” ಎಂದ ಭುವಿಯ ಮಾತನ್ನು ತುಂಡರಿಸಿದ ಮಾಧವಿ, “ಬ್ಲೌಸ್‌ ಬೇಕಾದರೆ ನಾನು ಹೊಲಿದುಕೊಡ್ತೀನಿ. ನನಗೆ ಎರಡು ದಿನ ಸಾಕು….” ಎಂದರು ಸಹಜವಾಗಿ.

“ಅಯ್ಯೋ ಅತ್ತೆ. ಅದೇನೋ ಅಂತಾರಲ್ಲ…. ಸಾವಿರಾರು ರೂಪಾಯಿ ಕೊಟ್ಟು ಎಮ್ಮೆ ತಂದು ಅದನ್ನು ಕಟ್ಟೋಕೆ ನೂರು ರೂಪಾಯಿ ಹಗ್ಗಕ್ಕೆ ಲೆಕ್ಕ ಹಾಕಿದ್ರು ಅನ್ನೋ ಹಾಗೆ 15-20 ಸಾವಿರ ರೂಪಾಯಿ ರೇಷ್ಮೆ ಸೀರೆ ಶಾಪಿಂಗ್‌ ಮಾಡಿ ನಿಮ್ಮ ಹತ್ತಿರ ಮಾಮೂಲಿ ಬ್ಲೌಸ್‌ ಹೊಲಿಸೋದಾ…? ನೋಡಿದವರು ಏನಂತಾರೆ…..? ಇದು ನಿಮ್ಮ ಕಾಲ ಅಲ್ಲ ಅತ್ತೆ. ಈಗ ಎಲ್ಲರೂ ಡಿಸೈನರ್ ಬ್ಲೌಸ್‌, ಆರಿ ವರ್ಕ್‌, ಎಂಬ್ರಾಯಿಡರಿ ಇರೋ ಬ್ಲೌಸ್‌ ಹಾಕ್ತಾರೆ. ಅದರ ರೇಟ್‌ ಎಷ್ಟು ಗೊತ್ತಾ…..? ಒಂದು ಬ್ಲೌಸ್‌ ಗೆ 4-6 ಸಾವಿರ ಆಗುತ್ತೆ. ಈಗ ಸೀರೆಗಿಂತ ಬ್ಲೌಸ್‌ ಗೆ ಬೆಲೆ ಜಾಸ್ತಿ ಆಗಿದೆ,” ಎಂದಳು ಭುವಿ.

“ನಾನೂ ಸಣ್ಣ ಪುಟ್ಟ ಎಂಬ್ರಾಯಿಡರಿ ಹಾಕ್ತೀನಮ್ಮ. ಶೈಲೇಶ್‌ ನನಗೊಂದು ಸ್ಮಾರ್ಟ್‌ ಫೋನ್‌ ಕೊಡಿಸಿದ ಮೇಲೆ ನಾನೂ ಹೊಸ ಹೊಸ ನೆಕ್‌ ಡಿಸೈನ್‌ ಎಲ್ಲ ಕಲಿತಿದೀನಿ. ಅದೂ ಅಲ್ಲದೆ, ಶೈಲೇಶ್‌ ನನಗೆ ಹೊಸ ಮಾದರಿಯ ಹೊಲಿಗೆ ಮೆಷಿನ್ ತಂದುಕೊಟ್ಟ ಮೇಲೆ ನನಗೂ ಎಂಬ್ರಾಯಿಡರಿ ಮಾಡೋದು ಬಹಳ ಸುಲಭವಾಗಿದೆ.

“ಮೊನ್ನೆ ನಿನ್ನ ಫ್ರೆಂಡ್‌ ಸುಚಿತ್ರಾ ಕೂಡ ತನ್ನ ಎರಡು ರೇಷ್ಮೆ ಸೀರೆ ಬ್ಲೌಸ್‌ ಗಳನ್ನು ನನಗೆ ಹೊಲಿಯೋಕೆ ಕೊಟ್ಟಿದ್ದಳು. ನಾನು ಆ ಬ್ಲೌಸ್‌ ಕುತ್ತಿಗೆಗೆ, ಕೈಗೆಲ್ಲಾ ಎಂಬ್ರಾಯಿಡರಿ ಮಾಡಿಕೊಟ್ಟಿದ್ದೆ. ತುಂಬಾ ಚೆನ್ನಾಗಿದೆ ಎಂದು ಹೇಳಿದ್ಲು,” ಎಂದು ಮಾಧವಿ ತಮ್ಮ ಬಗ್ಗೆ ಹೆಮ್ಮೆ ಪಡುತ್ತಾ ಹೇಳಿದರು.

ಅತ್ತೆಯ ಮಾತಿಗೆ, “ಅತ್ತೆ…. ಸುಚಿತ್ರಾ ಕಥೆ ನಿಮಗೆ ಗೊತ್ತಿಲ್ಲ, ಅವಳು ದೊಡ್ಡ ಕಂಜೂಸು. ಟೇಲರ್‌ ಹತ್ತಿರ ಕೊಟ್ರೆ ತುಂಬಾ ಹಣ ಕೊಡಬೇಕಾಗುತ್ತೆ ಅಂತ ನಿಮ್ಮ ಹತ್ತಿರ ಕೊಟ್ಟಿದ್ದಾಳೆ ಅಷ್ಟೇ!,” ಎಂದು ಭುವಿ ಕಿಸಕ್ಕನೆ ನಕ್ಕಳು.

ಸೊಸೆಯ ವ್ಯಂಗ್ಯ ಮಾಧವಿಯವರ ಮನಸ್ಸನ್ನು ನೋಯಿಸಿತು. ಹೆಂಡತಿಯ ಮುಖದಲ್ಲಿ ಮೂಡಿದ ತಿರಸ್ಕಾರವನ್ನು ಗಮನಿಸಿದ ಶೈಲೇಶ್‌, “ಭುವಿ, ನಮ್ಮಮ್ಮ ಬ್ಲೌಸ್‌ ಹೊಲಿಯೋದರಲ್ಲಿ ಎಕ್ಸ್ ಪರ್ಟ್‌. ನಾನು ಇವತ್ತು ಇಷ್ಟು ದೊಡ್ಡ ಕಂಪನಿಯಲ್ಲಿ ಸಾಫ್ಟ್ ವೇರ್‌ ಎಂಜಿನಿಯರ್‌ ಆಗಿದೀನಿ ಅಂದ್ರೆ ಅದಕ್ಕೆ ನಮ್ಮಮ್ಮ ಹೊಲಿಗೆಯ ಶ್ರಮವೇ ಕಾರಣ,” ಎಂದು ಕೂಡಲೇ ಅಮ್ಮನ ಗುಣಗಾನ ಮಾಡಿದ.

Ratna-Nahi-Rukegi

`ಹ್ಞೂಂ… ಶುರುವಾಯಿತು ಇವರ ಅಮ್ಮನ ಗುಣಗಾನದ ಸಹಸ್ರನಾಮ. ಗಂಡ ಸತ್ತ ಮೇಲೆ ಬದುಕೋಕೆ ಅಂತ ಅತ್ತೆ ಹೊಲಿಗೆ ಕಲಿತು ತನ್ನನ್ನು ಸಾಕಿದ್ದನ್ನೇ ಮಹಾನ್‌ ಸಾಧನೆ ಅಂತ ತಿಳಿದಿದ್ದಾರೆ ಈ ಶೈಲೇಶ್‌, ಅದಕ್ಕೆ ಯಾವಾಗ ನೋಡಿದ್ರೂ ಅದನ್ನೇ ಹೇಳ್ತಾರೆ,’ ಎಂದು ಭುವಿ ಮನದಲ್ಲೇ ಗೊಣಗಿಕೊಂಡಳು.

ಭುವನಾ ಶೈಲೇಶ್‌ ನನ್ನು ಮದುವೆ ಆದಾಗಿನಿಂದಲೂ ತನ್ನ ತಾಯಿಯನ್ನು ಮತ್ತು ಅವರು ತನಗಾಗಿ ಪಟ್ಟ ಶ್ರಮವನ್ನು ಹಾಡಿ ಹಾಡಿ ಹೊಗಳುತ್ತಿದ್ದುದ್ದನ್ನು ಕೇಳುತ್ತಲೇ ಬಂದಿದ್ದಳು. ಗಂಡ ತನ್ನ ತಾಯಿಯನ್ನು ಹೊಗಳಿದಾಗ, ಸಣ್ಣದೊಂದು ಹೊಟ್ಟೆಕಿಚ್ಚು ಅವಳಲ್ಲಿ ಹುಟ್ಟಿಕೊಳ್ಳುತ್ತಿತ್ತು.

ಅಸಲಿಗೆ ಭುವನಾಳಿಗೆ ಅತ್ತೆಯೊಡನೆ ಒಂದೇ ಸೂರಿನಡಿ ಇರುವುದೇ ಇಷ್ಟವಿರಲಿಲ್ಲ. ಆದರೆ ಮದುವೆಗೂ ಮುನ್ನ ಶೈಲೇಶ್‌ ಹಾಕಿದ ಮೊದಲನೇ ಕಂಡೀಷನ್‌ ಅದೇ ಆಗಿತ್ತು. ಅವನು ಖಡಾಖಂಡಿತವಾಗಿ, “ಭುವಿ, ಈಗಿನ ಕಾಲದ ಹುಡುಗಿಯರ ಹಾಗೆ ನಿನಗೆ ಗಂಡಹೆಂಡತಿ ಮಾತ್ರ ಸಪರೇಟ್‌ ಆಗಿ ಬೇರೆ ಮನೆಯಲ್ಲಿ ಇರಬೇಕು ಅಂತೇನಾದ್ರೂ ಕನಸುಗಳಿದ್ದರೆ, ನೀನು ನನ್ನನ್ನು ಮದುವೆ ಆಗುವುದರಲ್ಲಿ ಯಾವ ಅರ್ಥ ಇಲ್ಲ. ಏಕೆಂದರೆ ನಾನು ಯಾವುದೇ ಕಾರಣಕ್ಕೂ ನನ್ನ ತಾಯಿಯನ್ನು ಬಿಟ್ಟಿರೊಂಥವನಲ್ಲ. ನನ್ನನ್ನು ಅಪ್ಪ, ಅಮ್ಮ ಎರಡೂ ಆಗಿ ಸಾಕಿದ ನನ್ನ ಅಮ್ಮನೇ ನನ್ನ ಪಾಲಿನ ದೇವರು. ಹೀಗಾಗಿ ನೀನು ನನ್ನನ್ನು ಮದುವೆಯಾಗುವ ಮೊದಲೇ ಈ ಬಗ್ಗೆ ಚೆನ್ನಾಗಿ ಯೋಚನೆ ಮಾಡಿ ಮುಂದುವರಿ,” ಎಂದು ಹೇಳಿದ್ದ.

ಆದರೆ ಶೈಲೇಶ್‌ ನ ರೂಪಕ್ಕೆ, ಅವನ ಮೃದು ಸ್ವಭಾವಕ್ಕೆ ಅದಾಗಲೇ ಮನಸೋತಿದ್ದ ಭುವಿ ಅವನು ಹಾಕಿದ ಷರತ್ತಿಗೆ ಮರು ಮಾತಿಲ್ಲದೆ ಒಪ್ಪಲೇಬೇಕಾಯಿತು. ಚಿಕ್ಕಮಗಳೂರಿನಿಂದ ಎಂಜಿನಿಯರಿಂಗ್‌ ಕಲಿಯಲೆಂದು ಬೆಂಗಳೂರಿಗೆ ಬಂದವಳು ಭುವಿ. ಅವಳ ಜೊತೆಯಲ್ಲೇ ಎಂಜಿನಿಯರಿಂಗ್‌ ಓದುತ್ತಿದ್ದ ಶೈಲೇಶ್‌ ನ ರೂಪಕ್ಕೆ, ಆಕರ್ಷಕ ವ್ಯಕ್ತಿತ್ವಕ್ಕೆ ಮನಸೋತಿದ್ದಳು. ಎತ್ತರದ ನಿಲುವಿನ, ಮಿಂಚು ಕಂಗಳ, ಚಿಗುರು ಮೀಸೆಯ ಶೈಲೇಶನ ಹಿಂದೆ ಭುವನಾ ಮಾತ್ರವಲ್ಲದೆ, ಬಹಳಷ್ಟು ಹುಡುಗಿಯರು ಬಿದ್ದಿದ್ದರು. ಆದರೆ ಅವನ ಹೃದಯ ಗೆಲ್ಲುವಲ್ಲಿ ಭುವಿ ಮಾತ್ರ ಸಫಲಳಾಗಿದ್ದಳು. ಎಂಜಿನಿಯರಿಂಗ್‌ ಕಾಲೇಜಿನ ಕಲ್ಚರ್‌ ಕ್ಲಬ್‌ ನಲ್ಲಿ ಇಬ್ಬರೂ ಡ್ರಾಮಾ ಕ್ಲಬ್‌ ಗೆ ಸೆಲೆಕ್ಟ್ ಆಗಿದ್ದರು.

ಹೀಗಾಗಿ ಅವರ ನಾಟಕಗಳು ಕಾಲೇಜಿನಲ್ಲಿ ಮಾತ್ರವಲ್ಲದೆ, ಬೇರೆ ಬೇರೆ ಊರುಗಳಲ್ಲಿ ನಡೆಯುತ್ತಾ, ಇಂಟರ್‌ ಕಾಲೇಜ್‌ ಫೆಸ್ಟ್ ಗಳಲ್ಲಿ ಕೂಡ ಭಾಗವಹಿಸಲು ಕಾಲೇಜಿನ ನಾಟಕ ತಂಡದ ಭಾಗವಾಗಿ ಇವರಿಬ್ಬರೂ ಹೋಗುತ್ತಿದ್ದರು.

ಆಗೆಲ್ಲಾ ಭುವಿ, “ಶೈಲೇಶ್‌, ನೀವು ಈ ಟೀಮ್ ನಲ್ಲಿ ಇದೀರಿ ಎನ್ನುವ ಭರವಸೆಯ ಮೇಲೆ ನಾನು ಹೀಗೆ ಊರಿಂದೂರಿಗೆ ಬಂದಿರೋದು. ಇಲ್ಲದಿದ್ದರೆ ನನಗೆ ಹೀಗೆ ಬರೋಕೆ ಧೈರ್ಯ ಸಾಕಾಗುತ್ತಿರಲಿಲ್ಲ,” ಎಂದು ಶೈಲೇಶ್‌ ನ ಮೇಲೆ ಅಲ್ಲದೆ ಬೇರೆ ಯಾರ ಮೇಲೂ ನಂಬಿಕೆ ಇಲ್ಲ ಎನ್ನುವಂತೆ ಮಾತನಾಡುತ್ತಿದ್ದಳು.

ಹೀಗೆ ಅವರಿಬ್ಬರಲ್ಲಿ ಟಿಸಿಲೊಡೆದ ಸ್ನೇಹ ನಿಧಾನವಾಗಿ ಪ್ರೀತಿಯಾಗಿ ರೂಪಾಂತರಗೊಂಡಿತು. ಚಿಕ್ಕಮಗಳೂರು ದೊಡ್ಡ ಕಾಫಿ ಎಸ್ಟೇಟ್‌ ಓನರ್‌ ಆಗಿದ್ದ ಭುವಿಯ ತಂದೆಗೆ ತನ್ನ ಮಗಳ ಗಂಡನಾಗಿ ಬರುವನು ವಿದ್ಯಾವಂತ ಆಗಿರುವುದರ ಜೊತೆಗೆ, ತನ್ನ ಮನೆ ಅಳಿಯನಾಗಿ ಎಸ್ಟೇಟ್‌ ನೋಡಿಕೊಳ್ಳಬೇಕು ಎಂಬ ಮಹದಾಸೆ ಇತ್ತು.

ತಂದೆ ಇಲ್ಲದ ಬಡ ತಾಯಿಯ ಮಗ ಶೈಲೇಶ್‌ ನ ಸಂಬಂಧ ಅವರಿಗೆ ಎಳ್ಳಷ್ಟೂ ಇಷ್ಟವಿರಲಿಲ್ಲ. ಆದರೆ ಭುವಿ ತಾನು ಮದುವೆ ಆಗುವುದಾದರೆ ಅವನನ್ನೇ ಆಗುತ್ತೇನೆ, ಇಲ್ಲದಿದ್ದರೆ ಸನ್ಯಾಸ ದೀಕ್ಷೆ ತೆಗೆದುಕೊಂಡು ಯಾವುದಾದರೂ ಆಶ್ರಮ ಸೇರುತ್ತೇನೆ ಎಂದು ಊಟ ನಿದ್ದೆ ಬಿಟ್ಟು ಹಠ ಹಿಡಿದು ಕುಳಿತ ಮಗಳ ಮುಂದೆ ಸೋತು ಶೈಲೇಶ್‌ ನ ಜೊತೆ ಅವಳ ಮದುವೆ ಮಾಡಿಕೊಟ್ಟಿದ್ದರು.

ಆದರೆ, ತಮ್ಮ ನಂತರವಾದರೂ ಮಗಳು ಅಳಿಯ ತಮ್ಮ ಎಸ್ಟೇಟ್‌ ನ್ನು ಯಾರಿಗೂ ಮಾರದೇ ತಾವೇ ಅದರ ವ್ಯವಹಾರ ನೋಡಿಕೊಳ್ಳಬೇಕು ಎಂದು ಕಂಡೀಷನ್‌ ಹಾಕಿದ್ದರು. ಭುವಿಯ ಹೆತ್ತವರು ಇನ್ನೂ ಗಟ್ಟಿಮುಟ್ಟಾಗಿದ್ದರಿಂದ ಇನ್ನೊಂದು 20-25 ವರ್ಷಗಳ ಕಾಲ ಎಸ್ಟೇಟ್‌ ನೋಡಿಕೊಳ್ಳುವ ಪ್ರಮೇಯ ತನಗೆ ಬರುವುದಿಲ್ಲವೆಂದು ಭಾವಿಸಿದ ಶೈಲೇಶ್‌ ಕೂಡ ಅದಕ್ಕೆಲ್ಲಾ ಒಪ್ಪಿದ್ದ.

ಭುವಿ ಶೈಲೇಶ್‌ ನನ್ನು ಮದುವೆಯಾಗಿ ಮುದ್ದಾದ ಎರಡು ಮಕ್ಕಳ ತಾಯಿಯಾಗಿ ಅವನ ಮನೆ ಮನ ತುಂಬಿ  ಹನ್ನೆರಡು ವರ್ಷಗಳೇ ಕಳೆದುಹೋದವು. ವರ್ಕ್‌ ಲೋಡ್‌ಹೆಚ್ಚಾಗಿ ಮಕ್ಕಳ ಕಡೆ ಸರಿಯಾಗಿ ಗಮನ ಕೊಡಲಾಗುತ್ತಿಲ್ಲವೆಂದು ಅವಳು ತನ್ನ ಜಾಬ್‌ ರಿಸೈನ್‌ ಮಾಡಿದ್ದಳು. ಶೈಲೇಶನಿಗೂ ಕೆಲಸದಲ್ಲಿ ಪ್ರಮೋಷನ್‌ ಸಿಕ್ಕಿ, ಸಂಬಳ ಸಾಕಷ್ಟು ಏರಿದ್ದರಿಂದ ಯಾವುದೇ ಕೊರತೆ ಇರಲಿಲ್ಲ.

ಆದರೆ ಭುವಿಗೆ ಇದ್ದ ಚಿಂತೆ ಎಂದರೆ, ಅವಳ ಅತ್ತೆ ಮತ್ತು ಅದಕ್ಕಿಂತ ಹೆಚ್ಚಾಗಿ ಅವರ ಹೊಲಿಗೆ ಮೆಷಿನ್‌. ಅವಳತ್ತೆ ಮಾಧವಿ ಮನೆಗೆ ಬರುವವರ, ಹೋಗುವವರ ಮುಂದೆಲ್ಲಾ ತನ್ನ ಹೊಲಿಗೆ ಮೆಷಿನ್‌ ಪುರಾಣವನ್ನು ಪದೇಪದೇ ಹೇಳುತ್ತಿದ್ದುದು ಭುವಿಗೆ ಒಂದೆಡೆ ಹಿಂಸೆಯಾದರೆ, ಇನ್ನೊಂದು ಕಡೆ ಅವಮಾನ ಎನಿಸುತ್ತಿತ್ತು.

ಮೊನ್ನೆ ಮೊನ್ನೆ ಭುವಿಯ ಚಿಕ್ಕಪ್ಪ, ಚಿಕ್ಕಮ್ಮ ಚಿಕ್ಕಮಗಳೂರಿನಿಂದ ಬಂದಿದ್ದರು. ಆಗ ಮಾಧವಿ, ಸ್ಮಾರ್ಟ್‌ ಫೋನ್‌ ನ್ನು ಟಿವಿಗೆ ಕನೆಕ್ಟ್ ಮಾಡಿಕೊಂಡು ಅದರಲ್ಲಿ  ಷ್ಯಾಷನ್‌ ಬ್ಲೌಸ್‌ ಹೊಲಿಯುವ ಯೂಟ್ಯೂಬ್‌ ವಿಡಿಯೋ ನೋಡುತ್ತಿದ್ದರು.

“ಓ, ನಿಮಗೆ ಹೊಲಿಗೆ ಎಂದರೆ ಅಷ್ಟು ಇಷ್ಟಾನಾ,” ಎಂದು ಭುವಿಯ ಚಿಕ್ಕಮ್ಮ ಕೇಳಿದ್ದೇ ತಡ, ಮಾಧವಿ ಹೊಲಿಗೆಯಿಂದ ತನ್ನ ಬದುಕು ಉದ್ಧಾರವಾದ ಇಡೀ ಆತ್ಮಕಥೆಯನ್ನು ಅವರೆದುರು ಹೇಳಿದರು.

ಅದರಿಂದ ಭುವಿಗೆ ಆದ ಅವಮಾನ ಅಷ್ಟಿಷ್ಟಲ್ಲ. ಇದರ ಬಗ್ಗೆ ಅತ್ತೆಯೆದುರು ಅಸಮಾಧಾನ ತೋಡಿಕೊಂಡಿದ್ದೂ ಆಯಿತು, ಗಂಡನಿಗೆ ಚಾಡಿ ಹೇಳಿದ್ದೂ ಆಯಿತು. ಆದರೆ ಯಾರೂ ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಲೇ ಇಲ್ಲ. ಮಾಧವಿಯಂತೂ ತನ್ನ ಹೊಲಿಗೆಯ ಬಗ್ಗೆ ಕೊಚ್ಚಿಕೊಳ್ಳುವುದನ್ನು ಬಿಡಲಿಲ್ಲ. ಇಷ್ಟು ಸಾಲದೆಂಬಂತೆ ಸ್ಥಳೀಯ ಮಹಿಳಾ ಮಂಡಳಿಯೊಂದು ಮಾಧವಿಯ ಹೊಲಿಗೆ ಕಸೂತಿಯ ನೈಪುಣ್ಯತೆಯನ್ನು ಗುರುತಿಸಿ, `ಸಾಧಕ ಮಹಿಳೆ’ ಎಂದು ಗೌರವಿಸಿತ್ತು. ಆ ಮಹಿಳಾ ಮಂಡಲಿಗೆ ಶೈಲೇಶ್ ದೊಡ್ಡ ಮೊತ್ತದ ಡೊನೇಷನ್‌ ಕೊಟ್ಟಿದ್ದ. ಈ ಕಾರಣಕ್ಕೇ ಅವರು ಅತ್ತೆಯನ್ನು ಸನ್ಮಾನಿಸಿದ್ದು ಎಂಬುದು ಭುವಿಯ ಅನಿಸಿಕೆ. ಆದರೆ ಮಾಧವಿಗೆ ಅದರ ಹಿನ್ನೆಲೆ ಗೊತ್ತಿರಲಿಲ್ಲ. ಮಾಧವಿ ಅದು ತನ್ನ ಪ್ರತಿಭೆಗೆ ಸಂದ ಗೌರವವೆಂದು ಭಾವಿಸಿದ್ದರು. ಅವರು ಆ ಸನ್ಮಾನ ಪತ್ರ ಮತ್ತು ಸ್ಮರಣಿಕೆಯನ್ನು ತನ್ನ ಕೋಣೆಯಲ್ಲಿದ್ದ ಹಳೆಯ ಹೊಲಿಗೆ ಮೆಷಿನ್‌ ಮುಂದೆ ಇಟ್ಟು ನಮಸ್ಕರಿಸಿ, ಅಲ್ಲಿ ತನಗೆ ಕೊಟ್ಟ ಶಾಲನ್ನು ಆ ಮೆಷಿನ್‌ ಗೆ ಹೊದಿಸಿ ಆನಂದಬಾಷ್ಪ ಸುರಿಸಿದ್ದರು.

ಬಾಗಿಲ ಮರೆಯಲ್ಲಿ ನಿಂತು ಅತ್ತೆಗೆ ತಿಳಿಯದಂತೆ ಈ ದೃಶ್ಯವನ್ನು ನೋಡುತ್ತಿದ್ದ ಭುವಿ ತನಗೆ ಬರುತ್ತಿದ್ದ ನಗುವನ್ನು ಕಷ್ಟಪಟ್ಟು ತಡೆದುಕೊಂಡಿದ್ದಳು. ಆ ಹಳೆಯ ಹೊಲಿಗೆ ಮೆಷಿನ್‌ ನಲ್ಲಿ ಮಾಧವಿ ಈಗ ಹೊಲಿಯದಿದ್ದರೂ ಪ್ರತಿದಿನ ಅದಕ್ಕೆ ಎರಡು ಊದುಬತ್ತಿ ಹಚ್ಚಿ ಕೈ ಮುಗಿಯುವುದನ್ನು ಮಾತ್ರ ಬಿಟ್ಟಿರಲಿಲ್ಲ.

ಕೆಳ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಮಾಧವಿ ಪುಟ್ಟದೊಂದು ಹೋಟೆಲ್ ‌ನಡೆಸುತ್ತಿದ್ದ ಶಾಮಣ್ಣನನ್ನು ಮದುವೆಯಾಗಿ ಗಂಡನ ಮನೆ ಸೇರಿದ ಹೊಸತರಲ್ಲಿ ಎಲ್ಲವೂ ಚೆನ್ನಾಗಿತ್ತು. ಶೈಲೇಶ್‌ ಹುಟ್ಟಿದ ಮೇಲೆ ಶಾಮಣ್ಣನ ಹೋಟೆಲ್ ವ್ಯಾಪಾರ ಮೊದಲಿಗಿಂತ ಚೆನ್ನಾಗಿ ನಡೆದಿತ್ತು. ಆದರೆ ಹಣ ಬಂದಂತೆಲ್ಲ ಶಾಮಣ್ಣನಿಗೆ ಒಂದಷ್ಟು ಸ್ನೇಹಿತರು ಜೊತೆಯಾದರು. ಯಾವ ದುರಭ್ಯಾಸಗಳು ಇಲ್ಲದ ಶಾಮಣ್ಣನಿಗೆ ಇಸ್ಪೀಟ್‌ ಚಟ ಹತ್ತಿಸಿಬಿಟ್ಟರು. ಮೊದಲೆಲ್ಲ ಗೆದ್ದು ಬೀಗಿದ ಶಾಮಣ್ಣ ನಿಧಾನಕ್ಕೆ ಸೋಲಿನ ಸುಳಿಗೆ ಸಿಲುಕಿ ಮತ್ತೆ ಮತ್ತೆ ಸೋಲತೊಡಗಿದ. ಸಾಲ ಮಾಡಿ ಮತ್ತೆ ಆಡಿ ಕಳೆದುಕೊಂಡಿದ್ದನ್ನು ಪಡೆಯುವ ಛಲದಲ್ಲಿ ಆಟ ಮುಂದುವರಿಸಿ, ಸಾಲ ತೀರಿಸಲಾಗದೆ ಆ ತಲೆಬಿಸಿಗೆ ಕುಡಿತ ಅಂಟಿಕೊಂಡಿತು. ಮಾಧವಿ ಗಂಡನನ್ನು ಸರಿದಾರಿಗೆ ತರಲು ಅದೆಷ್ಟು ಪ್ರಯತ್ನಿಸಿದರೂ ಎಲ್ಲ ವಿಫಲವಾಯಿತು.

ದೊಡ್ಡ ಕುಡುಕನಾಗಿದ್ದ ಶಾಮಣ್ಣ ಒಂದು ದಿನ ಹೀಗೆ ಕುಡಿದು ತೂರಾಡುತ್ತಾ ಒಂದು ಲಾರಿ ಅಡಿಗೆ ಸಿಕ್ಕಿ ಸತ್ತುಹೋದ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ಹೋಟೆಲ್ ಬಾಗಿಲು ಮುಚ್ಚಿತು. ಸಾಲಗಾರರು ಬಂದು ಶಾಮಣ್ಣನ ಮನೆಯನ್ನು ಜಪ್ತಿ ಮಾಡಿಕೊಂಡರು. ಗಂಡನನ್ನು ಕಳೆದುಕೊಂಡ ಮಾಧವಿ ಮಗನನ್ನು ಕರೆದುಕೊಂಡು ಬರಿಗೈಯಲ್ಲಿ ತವರು ಸೇರಿದಾಗ, ತವರಿನಲ್ಲೂ ಯಾರೂ ಅಕ್ಕರೆ ತೋರಲಿಲ್ಲ. ಬೇಸತ್ತ ಮಾಧವಿ ಮಗನನ್ನು ಕರೆದುಕೊಂಡು ಕೆರೆಗೆ ಹಾರಲು ಹೋದಾಗ ಅದನ್ನು ಕಂಡು ತಪ್ಪಿಸಿದವರು ವಾಸಂತಿ ಟೀಚರ್‌.

ವಾಸಂತಿ ಆ ಊರಿನ ಶಾಲೆಯಲ್ಲಿ ಕ್ರಾಫ್ಟ್ ಟೀಚರ್‌ ಆಗಿ ಕೆಲಸ ಮಾಡುತ್ತಿದ್ದರು. ಅವರು ಮಾಧವಿಯನ್ನು ಸಮಾಧಾನಗೊಳಿಸಿ, `ನೀನು ಸಾಯೋದಲ್ಲದೆ, ಏನೂ ಅನ್ಯಾಯ ಮಾಡದ ಆ ಪುಟ್ಟ ಕಂದನ ಬದುಕನ್ನು ಏಕೆ ಕೊನೆಗೊಳಿಸುತ್ತಿ ಮಾಧವಿ? ನಾನು ನಿನಗೆ ಹೊಲಿಗೆ ಕಲಿಸುತ್ತೇನೆ. ನಿನ್ನ ಕಾಲ ಮೇಲೆ ನೀನು ನಿಂತುಕೊ. ಬ್ಯಾಂಕಿನಿಂದ ಸಾಲ ಮಾಡಿ ನಿನಗೊಂದು ಹೊಲಿಗೆ ಮೆಷಿನ್‌ ಕೊಡಿಸ್ತೀನಿ. ಕಂತಿನಲ್ಲಿ ಅದನ್ನು ಕಟ್ಟಿಕೊಂಡು ಹೋಗು, ನಿನ್ನ ಬದುಕನ್ನು ನೀನೇ ನೋಡಿಕೊ,’ ಎಂದು ಬುದ್ಧಿ ಹೇಳಿ ಅವಳಿಗೆ ದಿನನಿತ್ಯ ಶಾಲೆ ಬಿಟ್ಟ ಮೇಲೆ ಹೊಲಿಗೆ ಕಲಿಸಿ ತಾವೇ ಮುತುವರ್ಜಿ ವಹಿಸಿ, ಹೊಲಿಗೆ ಮೆಷಿನ್‌ ತೆಗೆಸಿಕೊಟ್ಟು ಅವಳ ಬದುಕನ್ನು ಅವಳೇ ಕಂಡುಕೊಳ್ಳುವ ಹಾಗೆ ಮಾಡಿದರು.

ಹೊಲಿಗೆಯಿಂದ ಒಂದಷ್ಟು ಹಣ ಗಳಿಸತ್ತಿದ್ದ ಮಾಧವಿ ಮತ್ತು ಮಗನನ್ನು ಈಗ ಅಣ್ಣ ಅತ್ತಿಗೆಯೂ ಅಕ್ಕರೆಯಿಂದ ನೋಡಿಕೊಳ್ಳತೊಡಗಿದರು.

ಹೀಗೆ ಹೊಲಿಗೆ ಮೆಷಿನ್‌ತುಳಿಯುತ್ತಲೇ ವರ್ಷಗಳು ಕಳೆದುಹೋದವು. ಮೊದಲಿನ ಕಷ್ಟಗಳು ಕಳೆದು ಮಗನಿಗೆ ಒಳ್ಳೆಯ ನೌಕರಿ ಸಿಕ್ಕಿ ಅವನು ತನ್ನ ಕಾಲ ಮೇಲೆ ನಿಂತ ಮೇಲೂ ಆ ಹಳೆ ಹೊಲಿಗೆ ಮೆಷಿನ್‌ ಮಾತ್ರ ಶೈಲೇಶನ ಹೊಸ ಮನೆಯಲ್ಲೂ ಮಾಧವಿಯ ಕೋಣೆಯ ಮೂಲೆಯನ್ನು ಅಲಂಕರಿಸಿತ್ತು. ಈಗ ಮಾಧವಿ ಅದರಲ್ಲಿ ಹೊಲಿಯದಿದ್ದರೂ ತಮ್ಮ ಗತಕಾಲದ ನೆನಪಿಗಾಗಿ ಅದನ್ನು ಹಾಗೆಯೇ ಇಟ್ಟುಕೊಂಡಿದ್ದರು.

ಆದರೆ ಅವರ ಸೊಸೆಗೆ ಮಾತ್ರ ಅದನ್ನು ನೋಡಿದರೆ ಆಗುತ್ತಿರಲಿಲ್ಲ. ಅತ್ತೆಯನ್ನಂತೂ ಮನೆಯಿಂದ ಹೊರಗೆ ಹಾಕಲು ಆಗುವುದಿಲ್ಲ. ಏನಾದರೂ ಮಾಡಿ ಈ ಹೊಲಿಗೆ ಮೆಷಿನ್‌ ನ್ನಾದರೂ ಮನೆಯಿಂದ ಎತ್ತಂಗಡಿ ಮಾಡಬೇಕು. ಆಗಲಾದರೂ ಅತ್ತೆಯ ಅಹಂಗೆ ಒಂದು ಪೆಟ್ಟು ಕೊಟ್ಟಂತಾಗುತ್ತದೆ ಎಂದು ಕಾಯುತ್ತಿದ್ದ ಅವಳಿಗೆ ಅವಕಾಶವೊಂದು ಸುಲಭವಾಗಿ ದೊರೆಯಿತು.

ಮಾಧವಿಯ ಅಣ್ಣನ ಮಗಳು ಗರ್ಭಿಣಿಯಾಗಿದ್ದಳು. ಇನ್ನೇನು ಹೆರಿಗೆಯ ದಿನ ಹತ್ತಿರ ಬಂದಿತ್ತು. ಮಾಧವಿಯ ಅತ್ತಿಗೆ ಅದಾಗಲೇ ಕಣ್ಣುಚ್ಚಿಕೊಂಡು ಎರಡು ವರ್ಷವಾಗಿತ್ತು. ತನ್ನ ಕಷ್ಟ ಕಾಲದಲ್ಲಿ ಆಸರೆ ನೀಡಿದ ಅಣ್ಣ ಅತ್ತಿಗೆಯನ್ನು, ಅವರು ಮಾಡಿದ ಉಪಕಾರವನ್ನು ಮರೆಯಲಾಗದ ಮಾಧವಿ, ಸೋದರ ಸೊಸೆಯ ಬಾಣಂತನಕ್ಕೆಂದು ಚೆನ್ನೈಗೆ ಹೋದರು.

ಮಾಧವಿ ಸೊಸೆಯ ಬಾಣಂತನ ಮುಗಿಸಿ ಮರಳಿ ಬಂದಾಗ, ಹೊಲಿಗೆ ಮೆಷಿನ್‌ ಕಾಣೆಯಾಗಿತ್ತು. ಇದು ಸೊಸೆಯದೇ ಕೆಲಸವೆಂದು ಅವರಿಗೆ ತಿಳಿಯಿತು.

“ಭುವಿ, ನನ್ನ ಹೊಲಿಗೆ ಮೆಷಿನ್‌ ಏನು ಮಾಡಿದೆ…..?” ಎಂದು ಮಗನ ಎದುರಿಗೆ ಸೊಸೆಯನ್ನು ಕೇಳಿದರು.

ಗಂಡನೆದುರು ಉತ್ತರಿಸಲು ತಡವರಿಸಿದ ಭುವಿ, “ಗುಜರಿಯವನು ಬಂದಿದ್ದ ಅತ್ತೆ, ಹಳೆಯ ಸಾಮಾನುಗಳನ್ನೆಲ್ಲ ಕೊಟ್ಟುಬಿಟ್ಟೆ. ಆ ಮೆಷಿನ್‌ ನೀವೇನು ಉಪಯೋಗಿಸುತ್ತಾ ಇರಲಿಲ್ಲವಲ್ಲ… ಅದಕ್ಕೆ ಅದನ್ನೂ ಕೊಟ್ಟುಬಿಟ್ಟೆ,” ಎಂದು ಉತ್ತರಿಸಿದಳು.

ಶೈಲೇಶನಿಗೆ ವಿಪರೀತ ಕೋಪ ಬಂದು, “ಭುವಿ, ಅದು ಅಮ್ಮನ ಆಸ್ತಿ. ಅಮ್ಮನ್ನ ಕೇಳದೆ ಯಾಕೆ ಕೊಟ್ಟೆ? ನೀನೇನು ಅದನ್ನು ನಿನ್ನ ತಲೆ ಮೇಲೆ ಹೊತ್ತುಕೊಂಡಿದ್ದೆಯಾ….? ಆ ಹೊಲಿಗೆ ಮೆಷಿನ್‌ ಇಲ್ಲದಿದ್ದರೆ ನಾವು ಅಮ್ಮ ಮಗ ಕೆರೆಗೆ ಆಹುತಿ ಆಗಿರುತ್ತಿದ್ದೆವು ಎಂದು ನಾನು ಎಷ್ಟು ಸಲ ನಿನಗೆ ಹೇಳಿಲ್ಲ….. ಹ್ಞಾಂ…. ಶ್ರೀಮಂತರ ಮನೆಯ ಹೆಣ್ಣು ನೀನು, ನಮ್ಮಂತ ಬಡವರ ಕಷ್ಟ, ಫೀಲಿಂಗ್ಸ್ ನಿನಗೆ ಹೇಗೆ ಅರ್ಥವಾಗಬೇಕು….? ಹೋಗಲಿ, ಯಾವ ಗುಜರಿಯವನಿಗೆ  ಕೊಟ್ಟೆ ಹೇಳು…..? ಅವನ ಹತ್ತಿರ ವಿಚಾರಿಸಿಕೊಂಡು ಬರ್ತೀನಿ,” ಎಂದು ಸಿಡುಕಿದ.

ಇನ್ನು ನಿಜ ಸಂಗತಿ ಮುಚ್ಚಿಟ್ಟು ಪ್ರಯೋಜನವಿಲ್ಲ ಎನಿಸಿ, “ಗುಜರಿಗೆ ಕೊಡಲಿಕ್ಕೆಂದು ಮನೆಯ ಕಾಂಪೌಂಡ್‌ ನಲ್ಲಿ ಇಟ್ಟಿದ್ದೆ. ಅದನ್ನು ನೋಡಿ ಕೆಲಸದ ನಿಂಗಮ್ಮ ತನ್ನ ಮಗಳಿಗೆ ಬೇಕು ಎಂದು ತೊಗೊಂಡು ಹೋದಳು,” ಎಂದಳು ಭುವಿ.

ಮರುದಿನ ಮನೆ ಕೆಲಸಕ್ಕೆ ಬಂದ ನಿಂಗಮ್ಮ, ಮಾಧವಿ ಊರಿನಿಂದ ಮರಳಿ ಬಂದಿದ್ದು ನೋಡಿ, “ಅಮ್ಮಾವ್ರೇ ಯಾವಾಗ ಬಂದ್ರಿ…. ನಿಮ್ಮ ಸೊಸೆ ನಿಮ್ಮ ಹಳೆ ಹೊಲಿಗೆ ಮೆಷಿನ್‌ ನಂಗೆ ಕೊಟ್ರು. ನನ್‌ ಮಗ್ಳು ತನ್ನ ಕುಡುಕ ಗಂಡನ್ನ ಬುಟ್ಬುಟ್ಟು ವಾಪಸ್ ತವರು ಮನೇಗೆ ಬಂದವ್ಳೆ ಅಮ್ಮೋರೆ, ಅವಳ ಬದುಕಿಗೊಂದು ದಾರಿ ಆಗಬೇಕಲ್ಲ. ಈಗ ಹೊಲಿಗೆ ಮೆಷಿನ್‌ ನಲ್ಲಿ ಒಂದಷ್ಟು ಬಟ್ಟೆ ಹೊಲ್ದು ನಾಲ್ಕು ಕಾಸು ದುಡಿತಾವ್ಳೆ, ಅಮ್ಮೋರೆ, ಸಣ್ಣಮ್ಮೋರಿಗೆ ದೊಡ್ಡ ಮನಸ್ಸು. ದೇವ್ರು ಅವರನ್ನು ಚೆಂದಾಕಿಟ್ಟಿರ್ಲಿ,” ಎಂದು ನಿಟ್ಟುಸಿರುಬಿಟ್ಟಳು ನಿಂಗಮ್ಮ.

ಅಷ್ಟರಲ್ಲಿ ಅಲ್ಲಿಗೆ ಬಂದ ಶೈಲೇಶ್‌, “ನಿಂಗಮ್ಮ, ಭುವಿ ನಮ್ಮನೆ ಮೆಷಿನ್‌ ನ್ನು ನಿನ್ನ ಮಗಳಿಗೆ ಕೊಟ್ಟಿದ್ದಾಳೆ ಅನ್ನೋದು ಗೊತ್ತಾಯ್ತು. ನಾನು ನಿನ್ನೇನೆ ನಿನ್ನ ಮಗಳಿಗೆ ಅಂತಾನೆ ಆನ್‌ ಲೈನ್‌ ನಲ್ಲಿ ಹೊಸ ಹೊಲಿಗೆ ಮೆಷಿನ್‌ ಗೆ ಆರ್ಡರ್‌ ಮಾಡಿದೀನಿ. ಅದರ ಹಣ ನಾನೇ ಕೊಡ್ತೀನಿ. ಅದು ಅವಳಿಗೆ ನಾನು ಮಾಡೋ ಪುಟ್ಟ ಸಹಾಯ ಅಂದ್ಕೊ. ನಮ್ಮ ಹಳೆ ಹೊಲಿಗೆ ಮೆಷಿನ್ ನಮಗೇ ವಾಪಸ್‌ ಕೊಟ್ಟುಬಿಡು. ಅದು ನಮ್ಮ ಪಾಲಿನ ದೇವರು,” ಎಂದು ಹೇಳಿದ.

ನಿಂಗಮ್ಮನಿಗೆ ಆಶ್ಚರ್ಯವಾದರೂ ದೊಡ್ಡವರ ವಿಷಯ ತನಗೇಕೆಂದು ಸುಮ್ಮನೆ ಖುಷಿಯಿಂದ ತಲೆ ಅಲ್ಲಾಡಿಸಿದಳು. ಮಗನ ಮಾತು ಕೇಳಿ ಮಾಧವಿಯ ಮುಖದಲ್ಲಿ ಮೂಡಿದ ಸಂತೃಪ್ತಿ ಕಂಡು ಕೋಪಗೊಂಡ ಭುವಿ ಅಲ್ಲಿ ನಿಲ್ಲಲಾರದೆ ಸರಸರನೆ ಒಳನಡೆದಳು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ