ಮರದ ಕೊಂಬೆಗಳು ಸರ್ರನೆ ತೀಡಿ, ತಂಗಾಳಿ ಬೀಸುವಂತೆ ಮಾಡಿದವು. ಪ್ರಸಾದ್ ತನ್ನ ತಲೆಯನ್ನು ಮತ್ತೊಮ್ಮೆ ಆ ಕಡೆ ಈ ಕಡೆ ತಿರುಗಿಸಿ ನೋಡಿ ಏನೂ ತಿಳಯದಾಗಲು ವಿಸ್ಮಯಗೊಂಡ. ಯಾರೋ ಮರೆಯಲ್ಲಿ ಅಡಗಿ ತನ್ನನ್ನೇ ಗಮನಿಸುತ್ತಿದ್ದಾರೆ ಎನಿಸಿತು. ಆಗ ತನ್ನ ಶರ್ಟ್ನ ಹಿಂಭಾಗದಲ್ಲಿ ಏನೋ ಚುಚ್ಚಿದಂತಾಯಿತು. ಅರಿವಿಲ್ಲದೆಯೇ ಅವನ ಕೈ ಹಿಂಬದಿ ತಡಕಾಡಿತು.
ಯಾವುದೋ ಹುಲ್ಲುಕಡ್ಡಿ ಅದು ಹೇಗೆ ತನ್ನ ಟೀ ಶರ್ಟ್ನ ಹಿಂಬದಿ ಸೇರಿಕೊಂಡಿತು ಎಂದು ಅವನಿಗೆ ಅರ್ಥವಾಗಲಿಲ್ಲ. ಅವನು ಅದನ್ನು ಕಿತ್ತು ಒಂದು ಕಡೆ ಎಸೆದ. ಆದರೆ ಇದು ಎಲ್ಲಿಂದ ಹೇಗೆ ಬಂದು ಸೇರಿಕೊಂಡಿತು ಎಂದು ಯೋಚಿಸತೊಡಗಿದ. ಆ ತರಹದ ಹುಲ್ಲು ಕಡಿಮೆ ಆ ಪಾರ್ಕಿನ ವಾತಾವರಣದಲ್ಲಿ ಎಲ್ಲೂ ಕಂಡುಬರುತ್ತಿರಲಿಲ್ಲ. ಅವನು ಮತ್ತಷ್ಟು ಸೂಕ್ಷ್ಮವಾಗಿ ಎಲ್ಲಾ ಕಡೆ ಹುಡುಕಾಡಿದ.
ಆಗ ಅವನ ಬಾಲ್ಯದ ಗೆಳೆಯ ಸತೀಶ್ ಅಲ್ಲಿಗೆ ಬಂದು ತಲುಪಿದವನೆ ಪ್ರಸಾದ್ನನ್ನು ಕೇಳಿದ, ``ಏನು ಹುಡುಕುತ್ತಿದ್ದೀಯಾ?''
``ಓ.... ನೀನು ಈಗ ಬಂದೆಯಾ? ಅರ್ಧ ಗಂಟೆಯಿಂದ ನಿನಗಾಗಿ ಇಲ್ಲಿ ಕಾದು ಕಾದು ಬೋರಾಗಿ ಯಾವುದೋ ಮೆಸೇಜ್ ನೋಡುತ್ತಾ ಟೈಂಪಾಸ್ ಮಾಡುತ್ತಿದ್ದೆ. ಫೇಸ್ಬುಕ್ನಲ್ಲಿ ಮುಳುಗಿದ್ದವನಿಗೆ ನೀನು ಬಂದದ್ದೇ ಗೊತ್ತಾಗಲಿಲ್ಲ. ನಿನಗೆ ನೆನಪಿರಬೇಕಲ್ಲ, ಚಿಕ್ಕಂದಿನಲ್ಲಿ ನಾವು ಕಚಗುಳಿ ಇಡಲು ಹಸಿರು ಹುಲ್ಲಿನಕಡ್ಡಿ ತಂದು ಬಟ್ಟೆ ಒಳಗೆ ಹಾಕಿಬಿಡುತ್ತಿದ್ದೆ..... ಅಂಥದ್ದೇ ಒಂದು ಈಗ ನನ್ನ ಟೀಶರ್ಟ್ನಲ್ಲಿ ಸಿಕ್ಕಿತು. ಇದು ಎಲ್ಲಿಂದ ಬಂತು ಎಂದು ತಲೆ ಕೆಡಿಸಿಕೊಳ್ಳುತ್ತಿದ್ದೆ. ನೀನು ಬಂದೆ....'' ಎಂದು ನಡೆದದ್ದು ವಿವರಿಸಿ ನಗುತ್ತಿದ್ದ.
ಅದಕ್ಕೆ ಸತೀಶನೂ ನಗುತ್ತಾ, ``ಆಗೆಲ್ಲ ನೀನು ತಂಬಾ ಅತ್ತುಕೊಳ್ಳುತ್ತಿದ್ದೆ, ಆಗೆಲ್ಲ ಲಾಲಿ ಅದನ್ನು ಬೇಕೆಂದೇ ನಿನ್ನ ಯೂನಿಫಾರ್ಮ್ನಲ್ಲಿ ಹಾಕಿಬಿಡುತ್ತಿದ್ದಳು. ನೀನು ಹೆಣ್ಣಪ್ಪಿಯಂತೆ ಮುಸು ಮುಸು ಅಳತೊಡಗಿದರೆ ನಾವೆಲ್ಲ ಗೇಲಿ ಮಾಡುತ್ತಾ ರೇಗಿಸುತ್ತಿದ್ದೆ. ಬಾಲ್ಯದ ಆ ಹಳೆಯ ನೆನಪುಗಳು ಎಷ್ಟು ಚೆಂದ ಅಲ್ಲವೇ.... ಅವಳೇ ಈಗ ಇಲ್ಲಿ ಬಂದಿದ್ದಾಳೇನು....... ನಿನಗೆ ಹೀಗೆ ಮಾಡಿ ಆಟ ಆಡಿಸ್ತಿದ್ದಾಳಾ? ಆ ದಿನಗಳು ಮತ್ತೆ ಬರಬಾರದೇ?''
``ಹೌದು ಕಣೋ, ಅಂಥ ಬಂಗಾರದ ದಿನಗಳು ಇನ್ನೆಲ್ಲಿ? ಅವರಲ್ಲಿ ಅತ್ಯಂತ ತುಂಟಿ, ಅನನ್ಯ ಗುಣಸ್ವಭಾವದವಳು ಎಂದರೆ ಲಾಲಿ! ಅವಳನ್ನು ಕಂಡು ಹೆದರುತ್ತಿದ್ದೆ, ಆದರೆ ಆ ತುಂಟತನ ಇನ್ನಷ್ಟು ಹೆಚ್ಚು ಬೇಕು ಎನಿಸುತ್ತಿತ್ತು. ಯಾವಾಗ ಏನು ಗಡಿಬಿಡಿ ಮಾಡಿಬಿಡುತ್ತಿದ್ದಳೋ.... ಯಾರಿಗೂ ಗೊತ್ತಾಗುತ್ತಿರಲಿಲ್ಲ.
ಈಗ ಎಲ್ಲಿದ್ದಾಳೋ ಏನೋ..... ಮಲ್ಲೇಶ್ವರದ 18ನೇ ಕ್ರಾಸ್ನಿಂದ ಶಾಲೆಯ ಬಸ್ಗೆ ಹತ್ತುತ್ತಿದ್ದಳು. ಅವರಮ್ಮ ಅಂತೂ ದಿನ ರಾಶಿ ಸಲಹೆ ನೀಡುತ್ತಿದ್ದರು, ``ಲಾಲಿ, ಶಾಲೆಯಿಂದ ಇನ್ನೇನೂ ಕಂಪ್ಲೇಂಟ್ ಬರಬಾರದು ನೋಡು..... ಯಾವ ಮಕ್ಕಳನ್ನು ಗೋಳು ಹೊಯ್ದುಕೊಳ್ಳಬೇಡ. ನಿನ್ನ ಬಾಕ್ಸ್ ನಲ್ಲಿ ಹಾಕಿಕೊಟ್ಟಿದ್ದನ್ನು ಮಾತ್ರ ತಿನ್ನಬೇಕು. ಬೇರೆಯವರದ್ದನ್ನು ತಿಂದು ಮತ್ತೆ ಬೈಸಿಕೊಳ್ಳಬೇಡ. ನಿನಗೆ ಇಷ್ಟವಾದ ಚಪಾತಿ, ಆಲೂ ಪಲ್ಯ ಇರಿಸಿದ್ದೇನೆ. ಗೊತ್ತಾಯ್ತಾ? ಸೋಮಣ್ಣ, ಈ ತರಲೆ ಮೇಲೆ ಒಂದು ಕಣ್ಣಿಟ್ಟಿರಿ,'' ಎಂದು ವ್ಯಾನ್ ಡ್ರೈವರ್ಗೆ ಹೇಳುತ್ತಿದ್ದರು ಅವರ ತಾಯಿ,'' ಎಂದು ಪ್ರಸಾದ್ ಹಳೆಯದನ್ನೆಲ್ಲ ನೆನಪಿಸಿಕೊಳ್ಳುತ್ತಾ ಹೇಳಿದ.





