ಕಥೆ– ಅನುಪಮಾ 

ಅಪರೂಪಕ್ಕೆ ಬೇಸಿಗೆಯಲ್ಲಿ ಮಳೆ ಬಂದು ವಾತಾವರಣ ಎಲ್ಲೆಡೆ ತಂಪಾಗಿತ್ತು. ಆಗ ಸುತ್ತಲಿನ ಪರಿಸರ ಮಾತ್ರವಲ್ಲದೆ, ಮನಸ್ಸು ಸಹ ಪ್ರಫುಲ್ಲಿತಗೊಳ್ಳುತ್ತದೆ. ಸುತ್ತಮುತ್ತಲಿನ ಆಹ್ಲಾದಕರ ವಾತಾವರಣದಂತೆಯೇ ಸ್ನೇಹಾಳ ಮನಸ್ಸೂ ಸಹ ಸಂತಸದಿಂದ ತುಂಬಿತ್ತು. ಆಗ ತಾನೇ ಬಂದ ಮೃದುಲಾಳ ಫೋನ್‌ ಕಾಲ್‌ ಅವಳ ಸಂತಸ ಹೆಚ್ಚಿಸಿತ್ತು.

ಇವರಿಬ್ಬರ ಮೈತ್ರಿ ಸ್ನೇಹದ ಗಡಿ ದಾಟಿ ಪ್ರೇಮಕ್ಕೆ ತಿರುಗಿತ್ತು! ಹೀಗಾಗಿ ತಮ್ಮ ಬಾಂಧವ್ಯಕ್ಕೆ ಒಂದು ಶಾಶ್ವತ ತಿರುವು ಕೊಡಲು, ಕೂಡಲೇ ಸಂಗಾತಿಗಳಾಗಿ ಬಾಳಲು ನಿಶ್ಚಯಿಸಿದರು. ಇದಕ್ಕೆ ಸ್ನೇಹಾಳ ಮನೆಯವರ ಒಪ್ಪಿಗೆ ಈಗಾಗಲೇ ಸಿಕ್ಕಿತ್ತು. ಇದೀಗ ಮೃದುಲಾ ಮನೆಯವರ ಒಪ್ಪಿಗೆಗಾಗಿ ಕಾಯುತ್ತಿದ್ದರು. ಹೀಗಾಗಿ ಸ್ನೇಹಾಳೇ ಒಂದು ಕೊನೆಯ ಪ್ರಯತ್ನ ಮಾಡಿ ಹೇಗಾದರೂ ನಿನ್ನ ಮನೆಯವರನ್ನು ಒಪ್ಪಿಸು ಎಂದು ಮೃದುಲಾಳನ್ನು ಮುಂಬೈಗೆ ಕಳುಹಿಸಿದ್ದಳು.

ಅವಳು ಅಲ್ಲಿಂದ ಕಾಲೇಜು ಕಲಿಯಲೆಂದೇ ಬೆಂಗಳೂರಿಗೆ ಬಂದು ಸೇರಿದ್ದಳು. ಒಂದೇ ಓರಗೆಯವರಾದ ಈ ಸಹಪಾಠಿಗಳು ಹೀಗೆ ಆಪ್ತರಾಗಿದ್ದರು. ಮೊದಮೊದಲು ಅವರ ಮನೆಯವರು ಒಪ್ಪಿರಲಿಲ್ಲ. ಆದರೆ ಈ ರೀತಿಯ ಟೆನ್ಶನ್‌ ಇಟ್ಟುಕೊಂಡು ಹೊಸ ಬಾಳು ಆರಂಭಿಸುವುದಕ್ಕಿಂತ, ಯಾವ ಮಾನಸಿಕ ಒತ್ತಡ ಇಲ್ಲದೆ, ಅವರ ಮನೆಯವರೂ ಒಪ್ಪಿಗೆ ನೀಡಲಿ ಎಂದು ಕಾಯುತ್ತಿದ್ದರು. ಕೊನೆಗೆ ಮುಂಬೈನಿಂದ ಕಾಲ್‌ ಬಂದು ಅವರ ಮನೆಯವರು ಒಪ್ಪಿದ್ದಾರೆಂದು ತಿಳಿದ ಮೇಲೆ ಮನಸ್ಸಿಗೆ ನಿರಾಳವಾಯಿತು.

ಮಾರನೇ ದಿನ ಮೃದುಲಾ ಹಾಗೂ ಅವಳ ತಾಯಿತಂದೆ ಮುಂಬೈನಿಂದ ಬೆಂಗಳೂರಿಗೆ ಬರುವವರಿದ್ದರು.ಸ್ನೇಹಾ ಮೊದಲ ಸಲ ಮೃದುಲಾಳನ್ನು ಭೇಟಿಯಾದಾಗ, ಅವಳ ಆತ್ಮವಿಶ್ವಾಸ ತುಂಬಿದ ನಿರ್ಭೀಕ ವ್ಯಕ್ತಿತ್ವವೇ ಇವಳನ್ನು ಹೆಚ್ಚು ಆಕರ್ಷಿಸಿದ್ದು.

ಸ್ನೇಹಾ ಕಾಲೇಜಿನ 3ನೇ ವರ್ಷದಲ್ಲಿದ್ದಳು. ತನ್ನ ಸುಮನೋಹರ ಸೌಂದರ್ಯ ಮತ್ತು ವರ್ಚಸ್ವೀ ವ್ಯಕ್ತಿತ್ವದಿಂದಾಗಿ ಅವಳು ಕಾಲೇಜಿನಲ್ಲಿ ಬಹಳ ಫೇಮಸ್‌ ಎನಿಸಿದ್ದಳು. ಆದರೆ ಓದಿನಲ್ಲಿ ಅವಳೇನೂ ಚುರುಕಾಗಿರಲಿಲ್ಲ. ಆದರೆ ಕಾಲೇಜಿನ ಪಠ್ಯೇತರ ಸಾಂಸ್ಕೃತಿಕ ಚಟುವಟಿಕೆಗಳು, ಆಟೋಟಗಳಲ್ಲಿ ಅವಳು ಸದಾ ಮುಂದು. ಕ್ಲಾಸ್‌ ಮುಗಿಸಿಕೊಂಡ ಸ್ನೇಹಾ ಕ್ಯಾಂಟೀನ್‌ ಕಡೆ ಹೊರಟಿದ್ದಳು. ಒಂದು ಕಡೆ ಗಲಾಟೆ ಗಮನಿಸಿ, ಅಲ್ಲೇ ನಿಂತಳು.

ಎಂಜಿನಿಯರಿಂಗ್‌ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗಳ ಮೊದಲ ದಿನವಾದ ಅಂದು ಹೆಚ್ಚಿನ ಕಡೆ ಸದ್ದುಗದ್ದಲವಿತ್ತು. ಕಾಲೇಜಿನಲ್ಲಿ ನಿಷೇಧ ಇದ್ದರೂ ಸಹ, ಸೀನಿಯರ್‌ ವಿದ್ಯಾರ್ಥಿಗಳು ಹೊಸಬರನ್ನು ರಾಗಿಂಗ್‌ ಹೆಸರಲ್ಲಿ ಗೋಳು ಹೊಯ್ದುಕೊಳ್ಳುತ್ತಿದ್ದರು. ಅಲ್ಲಿ ಸಾಕಷ್ಟು ಜೋರು ದನಿ ಕೇಳಿಸಿ ಸ್ನೇಹಾ ಅತ್ತ ಧಾವಿಸಿದಳು.“ಜೂನಿಯರ್‌ ಆಗಿದ್ದುಕೊಂಡು ನಿನಗೆ ಇಷ್ಟು ಧೈರ್ಯವೇ? ಈಗಲೇ `ರಂಗಿಲಾ ರೇ….’ ಹಾಡಿಗೆ ಡ್ಯಾನ್ಸ್ ಮಾಡಿ ತೋರಿಸು. ಇಲ್ಲದಿದ್ದರೆ ನಾವು ಜಂಗ್ಲಿ ಡ್ರೆಸ್‌ನಲ್ಲಿ ಬಂದು ನಿನಗೆ ಅದನ್ನು ಕಲಿಸುತ್ತೇವಷ್ಟೇ!”

“ಹ….ಹ್ಹ….ಹಾ” ಅಟ್ಟಹಾಸದ ನಗು ಅದರ ಜೊತೆಗೂಡಿತ್ತು.

“ದಾಸ್ಯತನ ಅನ್ನೋದು ಈಗ ನಮ್ಮ ದೇಶದಲ್ಲಿ ಇಲ್ಲ ಅನ್ನೋದು ನಿಮಗೆ ಗೊತ್ತಿಲ್ಲವೇ? ಯಾರೂ ಯಾರಿಗೂ ಗುಲಾಮರಲ್ಲ ಅನ್ನೋದು ನೆನಪಿಡಿ. ನೀವೇನಾದರೂ ಇನ್ನಷ್ಟು ದುರಹಂಕಾರ ತೋರಿಸಿದರೆ ಈಗಲೇ ಪ್ರಿನ್ಸಿಪಾಲ್ ಚೇಂಬರ್‌ಗೆ ಹೋಗಿ ನಿಮ್ಮ ಮೇಲೆ ದೂರು ಕೊಡ್ತೀನಿ. ಡ್ಯಾನ್ಸ್ ಮಾಡಿಸುತ್ತಾರಂತೆ ಡ್ಯಾನ್ಸು! ಅದನ್ನೆಲ್ಲ ಹೇಳೋಕ್ಕೆ ನೀವು ಯಾರು ಅಂತ? ರಾಗಿಂಗ್‌  ಅನ್ನೋದು ಈಗ ಎಲ್ಲೆಡೆ ನಿಷೇಧಿಸಲಾಗಿದೆ ಅನ್ನೋದನ್ನು ಮರೆಯಬೇಡಿ…..”

“ಬಿಚ್‌! ಗಂಡು ಹುಡುಗರ ತರಹ ಡ್ರೆಸ್‌ ಮಾಡಿಕೊಂಡು ಅವರ ತರಹ ತಲೆಗೂದಲು ಕಟ್‌ ಮಾಡಿಸಿಕೊಂಡು ಬಿಟ್ಟರೆ ನೀನು ಹುಡುಗಿ ಅಲ್ಲ ಅಂತ ಆಗೋಗುತ್ತಾ? ಮನಸ್ಸು ಮಾಡಿದರೆ ನಾವು ನಿನಗೆ ಏನು ಬೇಕಾದ್ರೂ ಮಾಡಬಹುದು ಅನ್ನುವುದು ನೆನಪಿರಲಿ!”

“ಖಂಡಿತಾ ಇಲ್ಲ….. ನಾನು ಒಬ್ಬ ಹುಡುಗಿ ಅನ್ನೋದನ್ನು ಖಂಡಿತಾ ಮರೆತಿಲ್ಲ. ಹುಡುಗರಿಗೆ ಇರುವ ಹಾಗೆಯೇ ಹುಡುಗಿಯರಿಗೂ ಕೈಕಾಲಲ್ಲಿ ಬೇಕಾದಷ್ಟು ಶಕ್ತಿ ಇದೆ. ಅರ್ಥವಾಗಲಿಲ್ಲ ಅಂದ್ರೆ ಸ್ವಲ್ಪ ರುಚಿ ತೋರಿಸಲೇನು…..?” ಎಂದು ಶರ್ಟ್‌ ಮಡಿಚುತ್ತಾ ಜಗಳಕ್ಕೆ ಸಿದ್ಧಳಾದಳು.

ರಂಗುರೂಪಿನಲ್ಲಿ ಸಾಧಾರಣವಾಗಿದ್ದರೂ, ನಿರ್ಭೀಕ ವ್ಯಕ್ತಿತ್ವದಿಂದ ಅಸಾಧಾರಣಳಾಗಿದ್ದ ಆ ಹೊಸ ಹುಡುಗಿ ಎಲ್ಲರನ್ನೂ ಪ್ರಭಾವಿತಗೊಳಿಸಿದ್ದಳು. ಸ್ನೇಹಾಳಿಗೆ ಅವಳನ್ನು ಕಂಡು ಹೆಮ್ಮೆ ಎನಿಸಿತು.

ಅದಕ್ಕೆ ಆ ಹುಡುಗರು ಇನ್ನೇನೋ ತರಲೆ ಉತ್ತರ ಕೊಡುವ ಮೊದಲೇ ಸ್ನೇಹಾ ತಕ್ಷಣ ಅವರಿಬ್ಬರ ಮಧ್ಯೆ ನುಗ್ಗಿದಳು. ಆ ಹುಡುಗರು ಮತ್ತೇನೂ ಹೇಳದಂತೆ ಅವಳು ತಡೆದಳು. ಆ ಹುಡುಗರು 2ನೇ ವರ್ಷದವರು. ತಮಗಿಂತ ಸೀನಿಯರ್‌ ಬಂದು ತಡೆದಾಗ, ಆ ಮಾತಿಗೆ ಬೆಲೆಕೊಟ್ಟು ಹುಡುಗರು ಅಲ್ಲಿಂದ ಸರಿದರು.

“ಅದು ಸರಿ….. ನಿನ್ನ ಹೆಸರೇನು?”

“ಮೃದುಲಾ ಸಿಂಗ್‌….. ನೀವು ನನ್ನ ಮೃದುಲಾ ಅಂತ್ಲೇ ಕರೆಯಿರಿ. ಈ ಸರ್‌ನೇಮ್ ಸಹವಾಸ ಸಾಕಾಗಿದೆ. ನಮ್ಮಪ್ಪ ಸ್ಕೂಲ್‌ನಲ್ಲಿ ಅಡ್ಮಿಷನ್‌ ಮಾಡಿಸುವಾಗ ಹಾಗೆ ಬರೆಸಿದ್ದಾರೆ. ನಾನೀಗ ನನ್ನ ಆಯ್ಕೆಯಂತೆ ಅದನ್ನು ಮೊಟಕುಗೊಳಿಸಿದ್ದೇನೆ…..”

“ಓ….. ಫಸ್ಟ್ ಇಯರಾ?”

“ಹ್ಞೂಂ….. ಅದಕ್ಕೆ ಈ ಹುಡುಗರು ನನ್ನನ್ನು ಟೇಕನ್‌ ಟು ಬಿ ಗ್ರಾಂಟೆಡ್‌ ಅಂದ್ಕೊಂಡಿದ್ದಾರೆ.”

ಸ್ನೇಹಾ ತನ್ನನ್ನು ತಾನು ಅವಳ ಮುಂದೆ ಅಸಹಜವಾಗಿ ಫೀಲ್‌ ಮಾಡಿದಳು. ನಂತರ ತುಸು ಮುಗುಳ್ನಕ್ಕು, ತನ್ನ ಕ್ಲಾಸಿನತ್ತ ನಡೆದಳು.

ಹಿಂದಿನಿಂದ ಅವಳ ದನಿ ಕೇಳಿಸಿತು, “ನೀವು ನಿಮ್ಮ ಹೆಸರೇ ಹೇಳಲಿಲ್ಲ…..”

“ನಾನಾ…..?”

“ಹ್ಞೂಂ ಮತ್ತೆ…. ಈ ಸುಂದರ ವದನಕ್ಕೆ ಒಂದು ಹೆಸರು ಇರಬೇಕಲ್ಲವೇ…..?”

“ನಾನು ಸ್ನೇಹಲತಾ…. ನಾನು ನನ್ನ ಹೆಸರನ್ನು ಮೊಟಕುಗೊಳಿಸಿಲ್ಲ. ನನ್ನ ಫ್ರೆಂಡ್ಸ್ ಎಲ್ಲಾ ನನ್ನನ್ನು ಸ್ನೇಹಾ ಅಂತ್ಲೇ ಕರೀತಾರೆ.”

“ನಾನು ನಿಮ್ಮನ್ನು ಹೇಗೆ ಕರೆಯಲಿ…. ಸ್ನೇಹಾ ಅಂತ ಡೈರೆಕ್ಟ್ ಆಗಿ ಕರೆದರೆ ಸಲುಗೆ ಆಗೋಯ್ತೇನೋ?”

“ಏ…. ನಾನು ನಿನ್ನ ಸೀನಿಯರ್‌! ನನ್ನನ್ನು ಸ್ನೇಹಾ ಮೇಡಂ ಅಂತ್ಲೇ ಕರೆಯಬೇಕು…..”

“ಸರಿ ಮೇಡಂ,”

“ಹ….ಹ್ಹ….ಹಾ!” ಎಂದು ಇಬ್ಬರೂ ಆ ಮಾತಿಗೆ ಕಿಲಕಿಲ ನಕ್ಕರು.

ಹೀಗೆ ಕ್ರಮೇಣ ಅವರಲ್ಲಿ ಸ್ನೇಹ, ಸಲುಗೆ, ಆತ್ಮೀಯತೆ ಹೆಚ್ಚತೊಡಗಿತು. ವಯಸ್ಸು, ಕ್ಲಾಸ್‌ ಬೇರೆ ಬೇರೆ ಆದರೂ ಅವರ ಈ ಅನ್ಯೋನ್ಯತೆಗೆ ಯಾವುದೂ ಅಡ್ಡಿಯಾಗಲಿಲ್ಲ.

ಮೃದುಲಾ ಮೊದಲಿನಿಂದ ಸಾಂಪ್ರದಾಯಿಕ ಪುಣೆ ಪರಿವಾರಕ್ಕೆ ಸೇರಿದವಳು. ಅವಳ ತಂದೆಗೆ ಮುಂಬೈಗೆ ವರ್ಗವಾದ ಮೇಲೂ ಆ ಪರಿವಾರಕ್ಕೆ ಯಾವುದೇ ಅತಿ ಎನಿಸುವ ಆಧುನಿಕತೆಯ ಸೋಂಕು ತಗುಲಿರಲಿಲ್ಲ. ಅಲ್ಲಿ ಪಿ.ಯು.ಸಿ ಓದುವಾಗ ಎಲ್ಲಾ ಹುಡುಗಿಯರಂತೆ ಅವಳು ಆಧುನಿಕ ಉಡುಗೆಗಳನ್ನು ಧರಿಸಲು ಬಿಡದೆ ಆಕ್ಷೇಪಿಸುತ್ತಿದ್ದರು. ಹಾಗೂ ಹೀಗೂ ಅವಳು ಒಂದೊಂದೇ ಸುಧಾರಣೆ ಮಾಡುತ್ತಾ, ತಾನು ಆಧುನಿಕಳಾದಳು. ಹಠ ಹಿಡಿದು, ಉಪವಾಸ ಕುಳಿತು, ಸ್ವತಂತ್ರಳಾಗಿರಬೇಕೆಂದು ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ಕಲಿಯಲು ಇಲ್ಲೇ ಬಂದು ನೆಲೆಸಿದಳು. ನಂತರ ಮನಸೋ ಇಚ್ಛೆ ಹೇರ್‌ಕಟ್‌ ಮಾಡಿಸಿ, ಶಾರ್ಟ್‌ ಡ್ರೆಸ್‌ ಧರಿಸಿ, ಹಾಸ್ಟೆಲ್‌ನಲ್ಲಿ ಜಂ ಅಂತ ಇರತೊಡಗಿದಳು. ಮನೆಯವರನ್ನು ಇದಕ್ಕಾಗಿ ಒಪ್ಪಿಸಿ ಅವಳು ಬೆಂಗಳೂರಿಗೆ ಬರುವಷ್ಟರಲ್ಲಿ ಏಳು ಕೆರೆ ನೀರು ಕುಡಿಯಬೇಕಾಯಿತು.

ಅವರ ಮನೆಯವರು ಖಾಸಗಿ ಡೇರಿ ಬಿಸ್‌ನೆಸ್‌ ನಡೆಸುತ್ತಿದ್ದರು. ಅವಳ ಅಣ್ಣ, ಅಕ್ಕನ ಮದುವೆ ಆಗಿ ಅವರು ಸೆಟಲ್ ಆಗಿದ್ದರು. ಇವಳು ಅತಿ ಮುದ್ದಿನಿಂದ ಬೆಳೆದಿದ್ದಳು, ಹೀಗಾಗಿ ಅತಿ ಹಠದ ಸ್ವಭಾವ. ಅದೇ ಇವಳ ತಂಗಿ, ತಾಯಿ ತಂದೆಯರಿಗೆ ವಿಧೇಯಳಾಗಿ ಚಾಚೂ ತಪ್ಪದೆ ಅವರು ಹೇಳಿದಂತೆ ನಡೆದುಕೊಳ್ಳುತ್ತಿದ್ದಳು.

ಆದರೆ ಮೃದುಲಾ ಮೊದಲಿನಿಂದಲೂ ಓದಿನಲ್ಲಿ ಮಹಾ ಜಾಣೆ. ಹೈಸ್ಕೂಲ್ ತಲುಪುವ ಹೊತ್ತಿಗೆ ಅವಳಿಗೆ ಸ್ಕಾಲರ್‌ಶಿಪ್‌, ಫ್ರೀಶಿಪ್‌ ಸಿಕ್ಕಿ ಮುಂದಿನ ಶಿಕ್ಷಣ ಸರಾಗವಾಯಿತು.

ಅದೇ ಸ್ನೇಹಲತಾ ಶ್ರೀಮಂತ ಕುಟುಂಬದ ಒಬ್ಬಳೇ ಮಗಳಾಗಿದ್ದಳು. ತಾಯಿ ತಂದೆಯರ ಅತಿ ಮುದ್ದಿನಿಂದ ತುಸು `ಅಹಂ’ ಬೆಳೆಸಿಕೊಂಡಿದ್ದಳು. ಅವಳ ತಂದೆ ಬೆಂಗಳೂರಿನಲ್ಲಿ ಖ್ಯಾತ ವಜ್ರಾಭರಣಗಳ ಮಳಿಗೆ ಹೊಂದಿದ್ದರು. ಇವಳ ಮನೆಯವರು ಮೊದಲಿನಿಂದಲೇ ಅತಿ ಆಧುನಿಕತೆಯ ಸ್ವಭಾವದವರು. ಅವಳೂ ಅದನ್ನೇ ಬೆಳೆಸಿಕೊಂಡು ಬಂದಿದ್ದಳು.

ಈ ರೀತಿ ಆರ್ಥಿಕ, ಸಾಮಾಜಿಕ ಹಾಗೂ ಕೌಟುಂಬಿಕ ಮೌಲ್ಯಗಳಲ್ಲಿ ಅಜಗಜಾಂತರ ವ್ಯತ್ಯಾಸವಿದ್ದರೂ ಅವರಿಬ್ಬರ ಪರಿಪಕ್ವ ಸ್ನೇಹಕ್ಕೆ ಯಾವ ಚ್ಯುತಿಯೂ ಬರಲಿಲ್ಲ. ದಿನೇದಿನೇ ಅವರಿಬ್ಬರ ಗೆಳೆತನ ಆಲದ ಬಿಳಲಿನಂತೆ ಗಟ್ಟಿಯಾಗುತ್ತಾ ಹೋಯಿತು. ಇಷ್ಟೆಲ್ಲ ವಿಭಿನ್ನತೆಗಳಿದ್ದರೂ ಇಬ್ಬರ ಗೆಳೆತನದಲ್ಲೂ ಬಿರುಕು ಬಿಡಲಾಗದ ಐಕ್ಯತೆ ಇತ್ತು. ಇಬ್ಬರಿಗೂ ಸ್ತ್ರೀ ಸಹಜ ಆಸೆಗಳಾದ ಬಟ್ಟೆಬರೆ, ಒಡವೆವಸ್ತ್ರ, ಫ್ಯಾಷನ್‌, ಸಿನಿಮಾ, ಸುತ್ತಾಟ ಯಾವುದರಲ್ಲೂ ಹೆಚ್ಚಿನ ಆಸಕ್ತಿ ಇರಲಿಲ್ಲ. ಗಂಡಸರಂತೆ ಸದಾ ಟೆಕ್ನಾಲಜಿ, ಎಂಜಿನಿಯರಿಂಗ್‌ ಉದ್ಯಮ, ರಾಜಕೀಯ ಇತ್ಯಾದಿ ಚಟುವಟಿಕೆಗಳಲ್ಲೇ ಮುಳುಗಿರುತ್ತಿದ್ದರು. ಇತರ ಗೆಳತಿಯರು ಇವರ ವಿಚಿತ್ರ ಸ್ವಭಾವ ಕಂಡು ಇವರನ್ನು ಅಂಟಿಸಿಕೊಳ್ಳದೆ ತುಸು ದೂರವೇ ಇರುತ್ತಿದ್ದರು.

ಕಾಲೇಜಿನಲ್ಲಿ ಇಬ್ಬರಿಗೂ ಹಲವು ಹುಡುಗರು ಫ್ರೆಂಡ್ಸ್ ಆಗಿದ್ದರು. ಅದೆಲ್ಲ ಕೇವಲ ಕಾಲೇಜಿನ ಪಠ್ಯ, ಪಠ್ಯೇತನ ಚಟುವಟಿಕೆಗಳಿಗಷ್ಟೇ ಸೀಮಿತವಾಗಿತ್ತು. ಯಾವ ಗಂಡಸರನ್ನೂ ಇವರಿಬ್ಬರೂ ಅಂತರಂಗಕ್ಕೆ ತೆಗೆದುಕೊಂಡವರಲ್ಲ. ಪ್ರೀತಿ, ಪ್ರೇಮ ಎಂಬ ಹುಚ್ಚು ವ್ಯಾಮೋಹಕ್ಕೆ ಬಲಿ ಬಿದ್ದವರೇ ಅಲ್ಲ. ಹಲವು ಹುಡುಗರು ಇವರ ಮೋಹಕ ರೂಪ, ಆಕರ್ಷಕ ವ್ಯಕ್ತಿತ್ವಕ್ಕೆ ಮಾರುಹೋಗಿ ಪ್ರಕೃತಿ ನಿಯಮದಂತೆ ಪ್ರೇಮ ನಿವೇದನೆ ತೋಡಿಕೊಂಡಿದ್ದರೂ, ಇವರು ಅದಕ್ಕೆ ಓಗೊಟ್ಟವರಲ್ಲ, ನಿರ್ಲಿಪ್ತರಾಗಿ ಇದ್ದುಬಿಟ್ಟಿದ್ದರು.

ಈ ವಯಸ್ಸಿನಲ್ಲಿ ಸ್ನೇಹಾ ಸಹಜವಾಗಿ ಒಬ್ಬ ತರುಣನಿಂದ ಬಯಸಬೇಕಾದ ಪ್ರೀತಿ ಪ್ರೇಮವನ್ನು ಮೃದುಲಾಳಿಂದ ಪಡೆಯ ಬಯಸಿದಳು. ಅದೇನು ಕಾರಣವೋ…. ಮೃದುಲಾ ಮುಂದೆ ಬೇರೆಲ್ಲ ಅವಳಿಗೆ ಗೌಣವೆನಿಸಿತ್ತು. ತಾನು ಬಾಯ್‌ಫ್ರೆಂಡ್ಸ್ ಗೆ ದುಂಬಾಲು ಬೀಳುವ ಇತರ ಸಾಧಾರಣ ಹುಡುಗಿಯರಂತಲ್ಲ ಎಂಬುದನ್ನು ಸ್ನೇಹಾ ಬಲು ಬೇಗ ಗುರುತಿಸಿಕೊಂಡಿದ್ದಳು.

ಮೃದುಲಾ ಕುರಿತಾಗಿ ಕೇವಲ ದೈಹಿಕ ಆಕರ್ಷಣೆ ಮಾತ್ರವಲ್ಲದೆ, ತನ್ನ ಹೃದಯ ಸದಾ ಅವಳ ಪ್ರೀತಿ ಪ್ರೇಮಕ್ಕಾಗಿ ಹಾತೊರೆಯುತ್ತಿರುತ್ತದೆ ಎಂಬುದನ್ನೂ ಗಮನಿಸಿದ್ದಳು. ಆದರೆ ತನ್ನ ಮನದಾಳದ ಈ ಮಾತುಗಳನ್ನು ಅವಳ ಬಳಿ ಹೇಳಿಕೊಳ್ಳುವುದಾದರೂ ಹೇಗೆ?

ಈ ರೀತಿ ಅವಳ ಹೃದಯದ ಭಾವನೆಗಳ ಹುಚ್ಚು ಹೊಳೆ ರಭಸವಾಗಿ ನುಗ್ಗಿ ಹರಿಯುತ್ತಿತ್ತು. ಅದನ್ನು ಮೃದುಲಾ ಬಳಿ ವ್ಯಕ್ತಪಡಿಸಲಾಗದೆ ಚಡಪಡಿಸುತ್ತಿದ್ದಳು. ಇದನ್ನು ಕೇಳಿಸಿಕೊಂಡ ಮೃದುಲಾ ತಪ್ಪಾಗಿ ಭಾವಿಸಿದರೆ ತನ್ನ ಮರ್ಯಾದೆಯ ಗತಿ? ಮುಂದೆ ತಮ್ಮ ಸ್ನೇಹ ಮುಂದುರಿಯುವುದೇ? ಇದನ್ನೇ ನೆಪವಾಗಿಸಿ ಅವಳು ಸ್ನೇಹ ತೊರೆದರೆ, ಅವಳ ಗೆಳೆತನವಿಲ್ಲದೆ ತಾನು ನೆಮ್ಮದಿಯಾಗಿ ಇರಬಲ್ಲೆನೇ….? ಈ ಆಲೋಚನೆಗಳಿಂದ ಅವಳಿಗೆ ಹುಚ್ಚು ಹಿಡಿದಂತಾಗಿತ್ತು. ಏನೇ ಆಗಲಿ, ಸ್ನೇಹಾ ಮೃದುಲಾಳ ಸ್ನೇಹ ಕಳೆದುಕೊಳ್ಳಲು ಸಿದ್ಧಳಿರಲಿಲ್ಲ.

ಇವಳ ಈ ಎಲ್ಲಾ ಸಮಸ್ಯೆಗಳಿಗೆ ಕೊನೆ ಹಾಡುವಂತೆ ಮೃದುಲಾ ತಾನೇ ಪರಿಹಾರ ಹುಡುಕಿದಳು. ತಮ್ಮ ಕ್ಲಾಸ್‌ ಮುಗಿದ ನಂತರ ಇಬ್ಬರೂ ಹತ್ತಿರದ ಪಾರ್ಕಿಗೆ ಹೋಗಿ ತುಸು ಹರಟೆ ಕೊಚ್ಚುವುದು ಅವರ ಪ್ರಿಯ ಹವ್ಯಾಸ.

ಆ ದಿನ ಸ್ನೇಹಲತಾಳನ್ನೇ ದಿಟ್ಟಿಸುತ್ತಾ ಮೃದುಲಾ ಕೇಳಿದಳು, “ಸ್ನೇಹಾ, ಬಹಳ ದಿನಗಳಿಂದ ನಿನ್ನನ್ನು ಗಮನಿಸುತ್ತಿದ್ದೇನೆ. ನೀನು ನನ್ನ ಬಳಿ ಏನೋ ಹೇಳಬೇಕೆಂದು ಪ್ರಯತ್ನಿಸುತ್ತಿದ್ದಿ….. ಆದರೆ ಹೇಳಲಾಗುತ್ತಿಲ್ಲ… ಏನದು?”

“ನಾ…ನಾ? ಇ….ಲ್ಲ……..ಲ್ಲ….?”

“ಇರಲಿ ಹೇಳು ಸ್ನೇಹಾ….”

“ಮೃದು…. ಅದು ಬಂದು…. ನಾನು ನಾನು….” ಇಷ್ಟು ಮಾತ್ರ ಹೇಳಲು ಸ್ನೇಹಾಳಿಗೆ ಸಾಧ್ಯವಾಯಿತು.

“ಗೊತ್ತಾಯ್ತು ಸ್ನೇಹಾ! ಅದಕ್ಕೆ ನೇರವಾಗಿ ಕೇಳಿದೆ…. ನೀನು ಮಾತ್ರ ನನ್ನನ್ನು ಅಲ್ಲ…. ನಾನೂ ನಿನ್ನನ್ನು ಆಳವಾಗಿ ಪ್ರೀತಿಸುತ್ತಿದ್ದೇನೆ…”

ಅತಿ ಆಧುನಿಕ ಸಂಸ್ಕೃತಿಯ ಸ್ನೇಹಾ ಯಾವ ಮಾತನ್ನು ಹೇಳಲಾರದೆ ಒದ್ದಾಡುತ್ತಿದ್ದಳೋ, ಸಾಂಪ್ರದಾಯಿಕ ವಾತಾವರಣದಲ್ಲಿ ಬೆಳೆದು ಖಂಡಿತವಾದಿಯಾಗಿ ನಿಂತಿದ್ದ ಮೃದುಲಾ ಸಹಜವಾಗಿ ಅದನ್ನು ಹೇಳಿಬಿಟ್ಟಳು.

ಇದನ್ನು ಕೇಳಿ ಸ್ನೇಹಾ ಮೂಕವಿಸ್ಮಿತಳಾದಳು.

“ಮೃದು…. ಆದರೆ ಈ ಅಸಾಮಾನ್ಯ ಸಂಬಂಧ…..”

“ಪ್ರೇಮ ಎಂದಿದ್ದರೂ ಪ್ರೇಮವೇ! ಅದರಲ್ಲಿ ಸಾಮಾನ್ಯ….. ಅಸಾಮಾನ್ಯ ಅಂಥದ್ದೇನಿಲ್ಲ. ನಾವಿಬ್ಬರೂ ಹೆಂಗಸರೇ ಆಗಿರುವುದರಿಂದ ನಮ್ಮ ನಡುವಿನ ಈ ಪ್ರೇಮ ಅನೈತಿಕ, ಅವಾಸ್ತವಿಕ, ಅಪ್ರಾಕೃತಿಕ, ಅಸಾಮಾನ್ಯ ಎಂದು ಈ ಸಮಾಜ ಲೇಬಲ್ ಅಂಟಿಸಿದೆ. ಪ್ರಕೃತಿ ಎಂದೂ ಭೇದಭಾವ ಮಾಡುವುದಿಲ್ಲ. ಈ ಸಮಾಜವೇ ಇಂಥ ವಿಭಜನೆ ಮಾಡಿರಿಸಿದೆ.

“ಈ ಸಮಾಜಕ್ಕೆ ಇಬ್ಬರು ಗಂಡಸರು ಅಥವಾ ಇಬ್ಬರು ಹೆಂಗಸರು ಪರಸ್ಪರ ಪ್ರೇಮಿಸಿ ಒಂದಾಗುವುದರಲ್ಲಿ ಆಕ್ಷೇಪಣೆ ಏಕೆ? ಸಮಾಜದ ಇತರ ಸಾಮಾನ್ಯ ಜನರಂತೆಯೇ ನಾವು ಎಂದೇಕೆ ಭಾವಿಸುವುದಿಲ್ಲ? ನಮಗೂ ಅವರಿಗೂ ಒಂದೇ ಒಂದು ವ್ಯತ್ಯಾಸ ಎಂದರೆ, ಅವರು ಪರಲಿಂಗಿಗಳನ್ನು ಬಯಸಿದರೆ ನಾವು ಸಲಿಂಗಿಗಳನ್ನೇ ಬಯಸುತ್ತೇವೆ. ಇದರಿಂದ ಬೇರೆಯವರಿಗಂತೂ ಏನೂ ಕೇಡಿಲ್ಲವಲ್ಲ….”

“ಆ ಪ್ರಕೃತಿಯೇ ನಮ್ಮನ್ನು ಪರಸ್ಪರ ಹೀಗೆ ಮೋಹಗೊಳ್ಳುವಂತೆ ಮಾಡಿದೆ ಎಂದು ಅವರು ಅರ್ಥ ಮಾಡಿಕೊಳ್ಳುವುದಿಲ್ಲ…..”

“ನೀನು ಸಂಗಮದ ಬಗ್ಗೆ ಕೇಳಿರುವೆ ತಾನೇ?” ಎಂದಳು ಮೃದುಲಾ.

“ಓಹೋ…. ನಮ್ಮ ತಲಕಾಡಿನ ಬಳಿ ಇರುವ ಸಂಗಮ, ಹಾಗೇ ಪ್ರಯಾಗದ ತ್ರಿವೇಣಿ ಸಂಗಮ…..”

“ಹೌದು, ನಮ್ಮಲ್ಲಿ 2 ನದಿಗಳ ಮಿಲನವಾಗುತ್ತದೆ. ಹಾಗೆ ಪ್ರಯಾಗದಲ್ಲಿ ಗಂಗಾಯಮುನಾ ನದಿಗಳು ಕೂಡುವ ಸ್ಥಳವದು. ಅದೇ ರೀತಿ ಸರಸ್ವತಿ ನದಿಯೂ ಇವುಗಳ ಜೊತೆ ಬೆರೆತುಹೋಗುತ್ತದೆ. ಇದು ಅಭೂತಪೂರ್ವ ಮಿಲನವಾಗಿ ತ್ರಿವೇಣಿ ಸಂಗಮ ಎನಿಸಿದೆ. ನಮ್ಮ ದೇಶದಲ್ಲಿ ಎಲ್ಲ ನದಿಗಳೂ ಹೆಣ್ಣಿನ ಹೆಸರನ್ನೇ ಹೊತ್ತಿವೆ.

“ಇದನ್ನೇ ನಾವು ಇನ್ನೊಂದು ಕೋನದಿಂದ ವಿಶ್ಲೇಷಿಸಿದರೆ….. 2 ನದಿಗಳು ಅಥವಾ ಇಬ್ಬರು ಹೆಂಗಸರು ಸಂಗಮಗೊಂಡರೆ….. ಎರಡೂ ಕಡೆ ಆಗುವುದು ಆಂತರಿಕ ವಿಲೀನವಷ್ಟೆ. ಅದು ಪೂಜನೀಯ ಎನಿಸಿದರೆ ಇಬ್ಬರು ಹೆಂಗಸರು ಸಹಬಾಳ್ವೆ ನಡೆಸುವುದನ್ನು ನಮ್ಮ ಸಮಾಜ ತಪ್ಪು ಎಂದು ಏಕೆ ಹೇಳಬೇಕು? ಇವೆರಡೂ ವಿರೋಧಾಭಾಸವಲ್ಲವೇ?”

“ಹ್ಞಾಂ ಮೃದು…. ಇದಂತೂ ನಿಜ. ಅನಾದಿ ಕಾಲದಿಂದ ನಮ್ಮ ದೇಶದಲ್ಲಿ ಅವರವರ ಆಸೆಯಂತೆ ಗಾಂಧರ್ವ ವಿವಾಹ ನಡೆಯುತ್ತಲೇ ಇದೆ. ಅದು ಸಮಾಜಕ್ಕೆ ಸಹ್ಯ. ಆದರೆ ತಮ್ಮ ಸ್ವಂತ ಮಕ್ಕಳು ಹೆತ್ತವರನ್ನು ವಿರೋಧಿಸಿ ತಮ್ಮಿಷ್ಟದಂತೆ ಮದುವೆಯಾದರೆ ತಪ್ಪು ಎಂದು ಆಕ್ಷೇಪಿಸುವುದೇಕೆ?”

“ಹೌದು ಸ್ನೇಹಾ, ಈ ಸಮಾಜದಲ್ಲಿ ಅತ್ಯಾಚಾರ ನಡೆಸುವ ಪಾಪಿ, ದಂಗೆ ಲೂಟಿ ಮಾಡುವ ಪಾಪಿ, ಕೊಲೆ ಮಾಡುವ ಪಾಪಿ ಎಲ್ಲರೂ ಓ.ಕೆ. ಇವರಲ್ಲಿ ಎಷ್ಟೋ ಜನ ರಾಜಕೀಯ ಪುಢಾರಿಗಳಾಗಿಯೂ ಮೆರೆಯುತ್ತಿದ್ದಾರೆ. ಆದರೆ ನಮ್ಮಂಥ ಮುಗ್ಧ ಅಮಾಯಕರು ಸಮಾಜದ ದೃಷ್ಟಿಯಲ್ಲಿ ಅಪರಾಧಿಗಳು…..”

ಈ ರೀತಿ ಪ್ರೇಮದಿಂದ ಒಂದಾದ ಅವರು ಆ ಮಾರ್ಗದಲ್ಲಿ ದೃಢವಾಗಿ ಮುಂದುವರಿಯಲು ನಿರ್ಧಾರ ಕೈಗೊಂಡರು. ಆದರೆ ತಮ್ಮ ಓದು, ಕೆರಿಯರ್‌ ಕಡೆ ಎಂದೂ ನಿರ್ಲಕ್ಷಿಸಲಿಲ್ಲ. ಅವರಿಬ್ಬರೂ ಬಹಳ ವ್ಯವಹಾರಿಕ ಜ್ಞಾನ ಉಳ್ಳವರು. ಈ ರೀತಿ ಯಾವುದೇ ನಿರ್ಣಯ ಕೈಗೊಳ್ಳುವ ಮುನ್ನ ತಾವು ಆರ್ಥಿಕವಾಗಿ ಸದೃಢರಾಗಲೇಬೇಕು ಎಂದು ಅವರಿಗೆ ತಿಳಿದಿತ್ತು. ಹೀಗಾಗಿ ಉತ್ತಮ ಅಂಕ ಗಳಿಸಿ ಒಳ್ಳೆಯ ಉದ್ಯೋಗ ಹುಡುಕಲು ಅವರು ತಮ್ಮ ಓದಿನಲ್ಲಿ ತಲ್ಲೀನರಾದರು.

ಇಬ್ಬರಿಗೂ ಸಾಫ್ಟ್ ವೇರ್ ಎಂಜಿನಿಯರ್‌ ಆಗಿ ಮುಂಬೈನ ಖ್ಯಾತ ಐಟಿ ಕಂಪನಿಯಲ್ಲಿ ಒಳ್ಳೆ ಕಡೆ ಕೆಲಸ ಸಿಕ್ಕಿತು! ಮೃದುಲಾ ಬರವಣಿಗೆಯ ಹವ್ಯಾಸ ಕೂಡ ಇರಿಸಿಕೊಂಡು, ಬಹುಬೇಗ ಜನಪ್ರಿಯ ಅಂಕಣಗಾರ್ತಿ ಎನಿಸಿದಳು. ಹಲವು ಪತ್ರಿಕೆಗಳಲ್ಲಿ ಅವಳ ಕಥೆ, ಕವಿತೆ, ಲೇಖನ ಪ್ರಕಟಗೊಂಡವು.

ಹೀಗೆ ಆರಂಭವಾದ ಇವರ ದೋಸ್ತಿ, ಒಂದೇ ಸೂರಿನಡಿ ವಾಸಿಸುತ್ತಾ 4-5 ವರ್ಷ ಕಳೆಯಿತು. ಮುಂಬೈನಲ್ಲಿ ಅವರು ತಮ್ಮದೇ ಸ್ವಂತ ಫ್ಲಾಟ್‌ ಕೂಡ ಹೊಂದಿದರು. ಅದು ಇವರ ಕೆಲಸಕ್ಕೆ ಹತ್ತಿರ, ಆದರೆ ಮೃದುಲಾಳ ಮನೆಯಿಂದ ಬಹು ದೂರ ವಿರುದ್ಧ ದಿಕ್ಕಿನಲ್ಲಿತ್ತು. ಮುಂಬೈನ ಮಹಾನಗರಿಯಲ್ಲಿ ಬೆರೆತುಹೋದ ಇವರನ್ನು ಅಲ್ಲಿನ ಜನ ಸಹಜವಾಗಿ ಹಾಗೇ ಸ್ವೀಕರಿಸಿದರು. ಮುಂಬೈನ ವೈಶಿಷ್ಟ್ಯವೇ ಅದು. ಯಾರ ಬಗ್ಗೆಯೂ ಭೇದಭಾವ ತೋರದೆ ಎಲ್ಲರನ್ನೂ ಆ ಮಾಯಾನಗರಿ ಕೈಚಾಚಿ ಅಪ್ಪಿಕೊಳ್ಳುತ್ತದೆ. ಅಲ್ಲಿನ ಗಣ್ಯರ ಅನೇಕ ಪಾರ್ಟಿ, ಔತಣಕೂಟಗಳಲ್ಲಿ ಇವರು ಒಟ್ಟಾಗಿ ಬೆರೆತು, ಭಾಗವಹಿಸಿ, ಸಂಭ್ರಮಿಸಿದ್ದರು.

ಇವರ ಈ ಸಂಬಂಧವನ್ನು ಇವರ ಫ್ರೆಂಡ್ಸ್ ಬಳಗ ಬಲು ಆತ್ಮೀಯತೆಯಿಂದ ಬರಮಾಡಿಕೊಂಡಿತು. ಅವರೆಲ್ಲ ಇವರ ಆದರ್ಶ ಪ್ರೇಮದ ಕುರಿತು ಹೆಮ್ಮೆಪಡುತ್ತಿದ್ದರು. ಕೆಲಸ ಸಿಕ್ಕಿ 4-5 ವರ್ಷಗಳಾದ್ದರಿಂದ ಮದುವೆ ಆಗಬೇಕು ಎಂದು ಎರಡೂ ಮನೆಗಳ ಕಡೆಯಿಂದ ಇವರಿಗೆ ಒತ್ತಡ ಬರತೊಡಗಿತು. ಹೀಗಾಗಿ ಇವರು ತಮ್ಮ ಈ ಸಂಬಂಧಕ್ಕೆ ಒಂದು ಹೆಸರು ಕೊಡಲು ನಿಶ್ಚಯಿಸಿದರು. ಮೃದುಲಾಳಿಗೆ ಇದು ಅತ್ಯಗತ್ಯ ಎನಿಸಲಿಲ್ಲ. ಆದರೆ ಸ್ನೇಹಾ ಇದಕ್ಕೆ ಮದುವೆಯ ಸಂಬಂಧ ನೀಡಲು ಬಯಸಿದಳು.

ಹೀಗಾಗಿ ತಮ್ಮ ಹಿರಿಯರಿಗೆ ಇಬ್ಬರೂ ಇದ್ದ ವಿಷಯ ತಿಳಿಸಿದರು. ಅಂದುಕೊಂಡಂತೆಯೇ ಎರಡೂ ಕುಟುಂಬಗಳಿಂದ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಇವರಿಬ್ಬರೂ ಆಪ್ತ ಗೆಳತಿಯರು, ಹೀಗಾಗಿ ಒಟ್ಟಿಗೆ ಇದ್ದಾರೆ ಎಂದೇ ಭಾವಿಸಿದ್ದರು, ವಿಷಯ ಹೀಗೆ ತಿರುಗುತ್ತದೆ ಎಂದು ಅವರು ಭಾವಿಸಿರಲಿಲ್ಲ.

ಸ್ನೇಹಾಳ ತಾಯಿ ತಂದೆಯರನ್ನು ಒಪ್ಪಿಸಲು ಇಬ್ಬರೂ ಮುಂಬೈನಿಂದ ಬೆಂಗಳೂರಿಗೆ ಒಟ್ಟಿಗೆ ಬಂದರು. ಕೆಲವೇ ದಿನಗಳಲ್ಲಿ  ಇವರಿಬ್ಬರ ಒಡನಾಟ ಕಂಡು, ಆ ಮನೆಯವರಿಗೆ ಇವರ ನಡುವಿನ ಪ್ರೀತಿಯ ಆಳದ ಅರಿವಾಯಿತು. ಹೀಗಾಗಿ ಲೋಕದ ಕೊಂಕು ಮಾತಿಗೆ ಬೆಲೆ ಕೊಡದೆ ಈ ಗೆಳತಿಯರ ಮದುವೆಗೆ ಒಪ್ಪಿಗೆ ನೀಡಿದರು. ಸ್ನೇಹಾಳ ತಾಯಿ ಮೃದುಲಾಳ ಕೈಹಿಡಿದು, “ನೀವಿಬ್ಬರೂ ಸದಾ ಕಾಲ ಇದೇ ರೀತಿಯ ಪ್ರೀತಿ ವಾತ್ಸಲ್ಯ ಹೊಂದಿರಬೇಕು,” ಎಂದಾಗ ಮೃದುಲಾ ಕಣ್ಣಲ್ಲಿ ನೀರು ತಂದುಕೊಂಡು, ಅವರನ್ನು ಅಪ್ಪಿಕೊಂಡಳು.

ಆದರೆ ಮೃದುಲಾಳ ಕುಟುಂಬದವರನ್ನು ಒಪ್ಪಿಸುವುದು ಇಷ್ಟು ಸುಲಭವಾಗಿರಲಿಲ್ಲ. ಏನೇ ಆದರೂ ಇಂಥದಕ್ಕೆ ತಾವು ಒಪ್ಪುವುದಿಲ್ಲ ಎಂದು ಮೃದುಲಾಳೊಂದಿಗೆ ಮಾತನಾಡುವುದನ್ನೇ ಬಿಟ್ಟರು. ಅದೇ ಮುಂಬೈನಲ್ಲಿದ್ದರೂ ಸುಮಾರು 1 ವರ್ಷದವರೆಗೂ ಅವಳು ತಾಯಿ ತಂದೆಯರನ್ನು ಬಂದು ಭೇಟಿ ಆಗುವಂತಿರಲಿಲ್ಲ. ಹೀಗೆ ಮಗಳ ಸಂಬಂಧ ಶಾಶ್ವತವಾಗಿ ಬಿಟ್ಟುಹೋಗುತ್ತದೆ ಎನಿಸಿದಾಗ, ಒಲ್ಲದ ಮನದಿಂದಲೇ ಈ ಮದುವೆಗೆ ಅವರು ಒಪ್ಪಿಗೆ ನೀಡಿದರು. ಕೊನೆಯ ಪ್ರಯತ್ನ ನೋಡೇಬಿಡೋಣ ಎಂದು ವರ್ಷದ ಮೇಲೆ ತಾನು ಹುಟ್ಟಿ ಬೆಳೆದ ಮನೆಗೆ ಹೋಗಿ, ಎಲ್ಲರನ್ನೂ ಕಂಡು ಅವರನ್ನು ಒಪ್ಪಿಸುವಲ್ಲಿ ಮೃದುಲಾ ಯಶಸ್ವಿಯಾಗಿದ್ದಳು. ಮುಂದಿನ ವಾರದೊಳಗೆ ಮದುವೆ ದಿನಾಂಕ ನಿಗದಿಪಡಿಸಿಕೊಂಡರು.

ಇಬ್ಬರೂ ಸ್ನೇಹಾಳ ಮನೆಯವರನ್ನು ಒಪ್ಪಿಸಿದಂತೆ ಮೃದುಲಾಳ ಮನೆಯವರನ್ನು ಒಪ್ಪಿಸುವುದೆಂದು ಒಟ್ಟಿಗೆ ಅಲ್ಲಿಗೆ ಹೋಗಲು ತೀರ್ಮಾನಿಸಿದರು. ಆದರೆ ಸಂಪ್ರದಾಯಸ್ಥರಾದ ತನ್ನ ತಾಯಿ ತಂದೆ ಅಕಸ್ಮಾತ್‌ ತಿರುಗಿಬಿದ್ದು ಸ್ನೇಹಾಳಿಗೇನಾದರೂ ಕಟುವಾಗಿ ಅಂದಾರು ಎಂದು ಮೃದುಲಾ ತಾನೇ ಅದನ್ನು ತಡೆದಳು. ಅಂತೂ ಈ ರೀತಿ ಅವರ ಒಪ್ಪಿಗೆ ದೊರಕಿತು. ಈ ವಿಷಯ ಫೋನ್‌ನಲ್ಲಿ ಕೇಳಿದಾಗಿನಿಂದ ಸ್ನೇಹಾ ಹಿಗ್ಗಿಹೋದಳು.

ಈ ಬಾರಿ ತಾಯಿತಂದೆಯರನ್ನು ಒಪ್ಪಿಸಲು ಬೆಂಗಳೂರಿಗೆ ಬಂದಿದ್ದ ಸ್ನೇಹಾ ಲಾಂಗ್‌ ಲೀವ್‌ ಪಡೆದಿದ್ದಳು. ಆ ಕಡೆಯಿಂದ ಮೃದುಲಾ ಬರುವಳೆಂದು ಅವಳಿಗಾಗಿ ಕಾದು ಕುಳಿತಿದ್ದಳು. ಬೆಂಗಳೂರಿನಲ್ಲಿ ಮದುವೆ ಮುಗಿಸಿ, ಸರಳವಾಗಿ ಒಂದು ಪಾರ್ಟಿ ಏರ್ಪಡಿಸಿ, ಫ್ರೆಂಡ್ಸ್, ಸಹೋದ್ಯೋಗಿಗಳೆಲ್ಲ ಹೆಚ್ಚಾಗಿ ತುಂಬಿದ್ದ ಮುಂಬೈನಲ್ಲಿ ಭಾರಿ ಗೆಟ್‌ ಟುಗೆದರ್‌ ಪಾರ್ಟಿ ಅರೇಂಜ್‌ ಮಾಡಿಕೊಂಡಿದ್ದರು.

ಮೃದುಲಾಳ ಬರುವಿಕೆಗಾಗಿ ಕಾದು ಕುಳಿತಿದ್ದ ಸ್ನೇಹಾಳಿಗೆ ಹೊತ್ತೇ ಹೋಗಲಿಲ್ಲ. ತಮ್ಮ ಬಂಗಾರದ ಭವಿಷ್ಯದ ಬಗ್ಗೆ ಎಷ್ಟು ಕನಸು ಕಂಡರೂ ಸಾಲದೆನಿಸಿತ್ತು ಅವಳಿಗೆ, ಮೃದುಲಾ ಇಲ್ಲದ ಒಂದೊಂದು ಘಳಿಗೆ ಕಳೆಯುವುದೂ ಅವಳ ಪಾಲಿಗೆ ಯುಗದಂತಾಗಿತ್ತು.

ಮಾರನೇ ದಿನ ಭಾನುವಾರ ಅಭ್ಯಾಸ ಬಲದಂತೆ ತಡವಾಗಿ ಏಳಬೇಕಿದ್ದ ಸ್ನೇಹಾ ನಿದ್ದೆ ಬಾರದ ಕಾರಣ ಬೆಳಗ್ಗೆ ಬೇಗ ಎದ್ದಳು. ಫ್ರೆಶ್‌ ಆಗಿ ಕಾಫಿ ಮಾಡಿ ಸವಿದು, ಅಂದು ಮೃದುಲಾ ಬರುವಳೆಂದು ಇಡೀ ಮನೆಯನ್ನು ನೀಟಾಗಿ ಓರಣಗೊಳಿಸತೊಡಗಿದಳು.

ಆದರೆ ಇದೇನಿದು….? ಗೆಳತಿಗಾಗಿ ಅಡುಗೆ ಮಾಡಿಟ್ಟು ಸ್ನೇಹಾ ಕಾದದ್ದೇ ಬಂತು, ಮೃದುಲಾ ಮಧ್ಯಾಹ್ನ 2 ಗಂಟೆ ಮಾತ್ರವಲ್ಲ ರಾತ್ರಿ 8 ಗಂಟೆ ದಾಟಿದರೂ ಬರಲೇ ಇಲ್ಲ! ಅವಳ ಫೋನಾದರೂ ಬರುತ್ತದೇನೋ ಎಂದು ಎದುರು ನೋಡುತ್ತಿದ್ದವಳಿಗೆ ಅಲ್ಲಿಯೂ ನಿರಾಸೆ…. ತಡೆಯಲಾರದೆ ಸಂಜೆಯಿಂದಲೇ ಸ್ನೇಹಾ ಮತ್ತೆ ಮತ್ತೆ ಅವಳಿಗೆ ಫೋನ್‌ ಮಾಡಿದಳು. ಆದರೆ ಮೃದುಲಾಳ ಫೋನ್‌ ಮಾತ್ರ ಸಿಗುತ್ತಲೇ ಇರಲಿಲ್ಲ. ಮುಂಬೈನಲ್ಲಿ ಇಷ್ಟೊಂದು ನೆಟ್‌ವರ್ಕ್‌ ಸಮಸ್ಯೆ ಬರಬಾರದಲ್ಲ ಎಂದು ಸ್ನೇಹಾ ಗಾಬರಿಗೊಂಡಳು. ಕೊನೆಗೆ ತಡೆಯಲಾರದೆ ಸ್ನೇಹಾ ಮೃದುಲಾಳ ತಂದೆಗೇ ಫೋನ್‌ ಮಾಡಿದಳು. ಆದರೆ ಅವರ ಫೋನ್‌ ಸಹ ಸ್ವಿಚ್‌ ಆಫ್‌ ಆಗಿತ್ತು.

ಏಕೋ ಏನೋ ಸ್ನೇಹಾಳ ಎದೆ ಅರಿಯದ ಆತಂಕದಿಂದ ಜೋರಾಗಿ ಹೊಡೆದುಕೊಳ್ಳತೊಡಗಿತು. ಇವಳ ಆತಂಕ ಗಮನಿಸಿ ಬೆಂಗಳೂರಿನ ಫ್ರೆಂಡ್ಸ್ ಇವರ ಮನೆಗೆ ಬಂದು ವಿಚಾರಿಸಿಕೊಂಡರು, ಧೈರ್ಯ ತುಂಬಿದರು. ಸ್ನೇಹಾ ಮಾನಸಿಕವಾಗಿ ಕುಸಿದಿದ್ದಳು.

ಮಾರನೇ ಬೆಳಗ್ಗೆ ಮುಂಬೈ ಬಾಂದ್ರಾದ ಪೊಲೀಸ್‌ ಠಾಣೆಯಿಂದ ಸ್ನೇಹಾಳ ಸೆಲ್‌ಗೆ ಕಾಲ್‌…… ಥರಥರ ನಡುಗುವ ಕೈಗಳಿಂದ. ಅದನ್ನು ರಿಸೀವ್‌ ಮಾಡಿದಳು, “ನಿಮ್ಮ ಗೆಳತಿ ಮೃದುಲಾ ಸಿಂಗ್‌ ತಮ್ಮ ಅಪಾರ್ಟ್‌ಮೆಂಟ್‌ನ 18ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೊಬೈಲ್‌‌ನಿಂದ ನೀವಿಬ್ಬರೂ ಆಪ್ತ ಗೆಳತಿಯರೆಂದು ತಿಳಿಯಿತು. ಅವರ ಮನೆಯವರೆಲ್ಲ ಶೋಕಸಾಗರದಲ್ಲಿ ಮುಳುಗಿದ್ದಾರೆ. ಇಂದು ಅವರ ಅಂತಿಮ ಸಂಸ್ಕಾರ. ನೀವು ಬಯಸಿದರೆ ತಕ್ಷಣ ಮುಂಬೈಗೆ ಹೊರಟುಬನ್ನಿ, ಗೆಳತಿಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಿ!”

ನೋವಿನಿಂದ ಚೀರಿಕೊಂಡ ಸ್ನೇಹಾ ಮೊಬೈಲ್‌ ಎಸೆದು ಕುಸಿದು ಕುಳಿತಳು. ಬಿಕ್ಕಿ ಬಿಕ್ಕಿ ಅಳತೊಡಗಿದಳು. ಮನೆಯವರು, ಫ್ರೆಂಡ್ಸ್ ಎಷ್ಟು ಸಂತೈಸಿದರೂ ಅವಳ ದುಃಖದ ಗೋಳು ಮುಗಿಯುವ ಹಾಗಿರಲಿಲ್ಲ. ಆದರೆ ಇದೆಲ್ಲ ಹೇಗೆ ಸಾಧ್ಯ ಆಯಿತು…..? ಮೃದುಲಾ ತನ್ನ ಮನೆಯವರು ಒಪ್ಪುವುದಿಲ್ಲ, ನೀನು ಅಲ್ಲಿಗೆ ಬರುವುದು ಬೇಡ ಎಂದು ನಿರಾಕರಿಸಿ ತನ್ನನ್ನು ಮುಂಬೈಗೆ ಬರದಂತೆ ಮಾಡಿ, ಒಬ್ಬಳೇ ಮನೆಯವರೊಡನೆ ಹೋರಾಡಿ ಸೋತು ಇಂಥ ನಿರ್ಧಾರ ಕೈಗೊಂಡಳೇ? ಆದರೆ ಅವಳು ಖಂಡಿತಾ ದುರ್ಬಲ ಮನಸ್ಸಿನವಳಲ್ಲ!

ಅವಳನ್ನು ಒಬ್ಬಳನ್ನೇ ಮನೆಯವರನ್ನು ಒಪ್ಪಿಸಿ ಬಾ ಎಂದು ಕಳುಹಿಸಿ ತಾನು ದೊಡ್ಡ ತಪ್ಪು ಮಾಡಿದೆ ಎಂದು ಸ್ನೇಹಾ ತಲೆ ತಲೆ ಚಚ್ಚಿಕೊಂಡಳು. ಒಂದು ವಿಧದಲ್ಲಿ ಅವಳನ್ನು ಅಲ್ಲಿಗೆ ಕಳುಹಿಸಿ ಮೃದುಲಾಳ ಸಾವಿಗೆ ತಾನೇ ಕಾರಣಳಾದೆ ಎಂಬ ಅಪರಾಧಿಪ್ರಜ್ಞೆ ಅವಳನ್ನು ನುಚ್ಚುನೂರಾಗಿಸಿತು. ದಿನೇದಿನೇ ಕುಸಿದು ಕಂಗಾಲಾಗುತ್ತಿದ್ದ ಮಗಳನ್ನು ಕಾಪಾಡಿಕೊಳ್ಳುವಲ್ಲಿ ಅವಳ ತಾಯಿ ತಂದೆ ಹೈರಾಣಾದರು. ತಾವೇ ಇವಳ ಮುಂಬೈ ಆಫೀಸಿಗೆ ಫೋನ್‌ ಮಾಡಿ ವಿಷಯ ತಿಳಿಸಿ, 1 ತಿಂಗಳ ಸಿಕ್‌ ಲೀವ್ ಗೆ ಮೇಲ್ ಕಳುಹಿಸಿದರು.

ಹೀಗೆ 1  ವಾರ ಕಳೆದಾಗ ಅವಳು ಫೋನ್‌ ತೆಗೆದುಕೊಂಡು ತಮ್ಮಿಬ್ಬರ ಹಳೆಯ ಚ್ಯಾಟಿಂಗ್‌ ಇತ್ಯಾದಿ ಗಮನಿಸತೊಡಗಿದಳು. ಅವಳಿಗೆ ಪೊಲೀಸ್‌ ಠಾಣೆಯಿಂದ ಕರೆಬಂದ ಹಿಂದಿನ ರಾತ್ರಿ ಒಂದು ವಾಯ್ಸ್ ಮೆಸೇಜ್‌ ಬಂದಿತ್ತು. ಆ ಟೆನ್ಶನ್‌ನಲ್ಲಿ ಅಂದು ಅವಳು ಅದನ್ನು ಗಮನಿಸಿಕೊಂಡಿರಲಿಲ್ಲ.

ಅದರಲ್ಲಿ ಮೃದುಲಾ ಹೀಗೆ ಮಾತನಾಡಿದ್ದಳು, “ಸ್ನೇಹಾ….. ಬಹುಶಃ….. ಇದೇ ನಾನು ನಿನಗೆ ಹೇಳಲಿರುವ ಕೊನೆಯ ಮಾತು. ನಮ್ಮ ಮನೆಯವರು ನನ್ನನ್ನು ಹೊಡೆದುಬಡಿದು ಸಾಯುವಂತೆ ಮಾಡಿದ್ದಾರೆ. ಇಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವೇ…. ಇಲ್ಲ…. ಲವ್ ಯೂ…. ಸ್ನೇ….ಹಾ…..”

ಸ್ನೇಹಾ ವಿಕಾರವಾಗಿ ಕಿರುಚಿದಾಗ ಅವಳ ತಾಯಿತಂದೆ ಓಡಿಬಂದರು. ಅವಳ ಮೊಬೈಲ್‌ನ ಮೆಸೇಜ್‌ ಗಮನಿಸಿ ವಿಷಯ ತಿಳಿದುಕೊಂಡರು. ಅವಳು ತಲೆ ತಲೆ ಚಚ್ಚಿಕೊಳ್ಳುತ್ತಾ ಹುಚ್ಚಿಯಂತಾಗಿ ಹೋದಳು. ಅವಳನ್ನು ಕಂಟ್ರೋಲ್ ಮಾಡುವಷ್ಟರಲ್ಲಿ ಅವರಿಗೆ ಸಾಕುಸಾಕಾಯಿತು. ಮಾರನೇ ದಿನ ಅವಳ ಫ್ರೆಂಡ್ಸ್ ಬಂದ ಮೇಲೆ ವಿಷಯ ತಿಳಿಸಿ, ಸಮೀಪದ ಠಾಣೆಗೆ ದೂರು ನೀಡಿದರು. ಅಲ್ಲಿಂದ ಕೇಸ್‌ನ್ನು ಮುಂಬೈನ ಬಾಂದ್ರಾ ಠಾಣೆಗೆ ವರ್ಗಾಯಿಸಲಾಯಿತು. ಫ್ರೆಂಡ್ಸ್ ಜೊತೆ ಅವಳು ಹೋಗಿ ಅಲ್ಲಿ ತನ್ನಯ ಫೋನ್‌ ಮೆಸೇಜ್‌ ತೋರಿಸಿ, ದೂರು ದಾಖಲಿಸಿದಳು.

ಹಲವಾರು ತಿಂಗಳುಗಳ ಕಾಲ ಕೇಸ್‌ ನಡೆದು ವಿಚಾರಣೆ ಮುಂದುವರಿಯುತ್ತಲೇ ಇತ್ತು. ಅಪರಾಧಿಗಳನ್ನು ಸೆರೆಗೆ ಹಾಕುವುದು ಅಷ್ಟು ಸುಲಭವಾಗಿರಲಿಲ್ಲ.

ತಾವಿದ್ದ ಮನೆಗೆ ಬಂದು ಅವಳು ಮೃದುಲಾಳ ವಾರ್ಡ್‌ರೋಬ್‌ ತೆರೆದಾಗ, ಅವಳು ಅರ್ಧ ಬರೆದು ಅಪೂರ್ಣಗೊಳಿಸಿದ್ದ `ಚಂದ್ರಮುಖಿ….ಪ್ರಾಣಸಖಿ’ ಕಾದಂಬರಿಯನ್ನು ಕೈಗೆತ್ತಿಕೊಂಡಾಗ ಗಳಗಳನೆ ಅತ್ತುಬಿಟ್ಟಳು. ಅದರಲ್ಲಿ ಮೃದುಲಾ ಇವರಿಬ್ಬರ ಪರಿಚಯ, ಸ್ನೇಹದಿಂದ ಬದುಕು ಹೇಗೆ ಮುಂದುವರಿಯುತ್ತಿದೆ ಎಂದು ಇಬ್ಬರು ಗೆಳತಿಯರ ಒಡನಾಟದ ಕಾದಂಬರಿ ಬರೆದಿದ್ದಳು. ಗೆಳತಿ ಕಣ್ಮುಂದೆ ಬಂದು ನಿಂತಂತೆ ಆಯಿತವಳಿಗೆ.

ಕೂಡಲೇ ದೃಢ ನಿರ್ಧಾರ ಕೈಗೊಂಡು ತಾನೇ ಆ ಕಾದಂಬರಿಯನ್ನು ಪೂರ್ತಿಗೊಳಿಸಿ, ಆ ಶ್ರೇಯಸ್ಸನ್ನು ಮೃದುಲಾಗೆ ಕೊಡಿಸಲು ನಿರ್ಧರಿಸಿದಳು ಸ್ನೇಹಾ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ