ಕಥೆ – ಪ್ರಫುಲ್ಲಾ ನರೇಂದ್ರ 

ತಾರಿಣಿ ಅಡುಗೆಮನೆಯ ಕೆಲಸ ಮುಗಿಸಿ ತಿಂಡಿ ತಟ್ಟೆ ಹಿಡಿದುಕೊಂಡು ಸೋಫಾ ಮೇಲೆ ಕುಳಿತು, ತಿಂಡಿ ತಿಂದು ಮುಗಿಸುತ್ತಿದ್ದ ಹಾಗೆ ಕರೆಗಂಟೆ ಬಾರಿಸಿತು. `ಯಾರಿರಬಹುದು? ಗಂಡ ಇದೇ ತಾನೇ ಆಫೀಸಿಗೆ ಹೋದರು. ಏನೋ ಮರೆತುಬಿಟ್ಟಿರಬೇಕು. ಅದಕ್ಕೆ ವಾಪಸ್‌ ಬಂದಿರಬಹುದು,’ ಎಂದುಕೊಂಡು ಬಾಗಿಲು ತೆರೆದಳು. ಬಾಗಿಲು ಬಳಿ ಅಪರಿಚಿತ ವ್ಯಕ್ತಿಯೊಬ್ಬ ನಿಂತಿದ್ದ.

“ಯಾರು ಬೇಕಾಗಿತ್ತು?” ಎಂದು ಕೇಳಿದಳು ತಾರಿಣಿ.

“ಯಾರೂ ಬೇಡ,” ಎಂದವನೆ ಒಂದು ಕಾಗದ ಅವಳ ಕೈಗೆ ತುರುಕಿದ. ತಾರಿಣಿ ಪತ್ರ ಬಿಚ್ಚಿ ಓದಿದಳು. `ತಾರಿ, ಎಷ್ಟೋ ವರ್ಷಗಳ ಮೇಲೆ ನಿನ್ನನ್ನು ಹುಡುಕಿದ್ದೇನೆ. ನಾನು ಸಾಯುವ ಸ್ಥಿತಿಯಲ್ಲಿದ್ದೇನೆ. ಕಡೆಗಾಲದಲ್ಲಿ ನಿನ್ನ ಕ್ಷಮೆ ಯಾಚಿಸಿ ಶಾಂತಿಯಿಂದ ಸಾಯಲು ಇಚ್ಛಿಸುತ್ತೇನೆ,

ನಿನ್ನ ವೀರೇಶ.’

ತಾರಿಣಿ ಪತ್ರ ಓದಿ ಆ ವ್ಯಕ್ತಿಯನ್ನು ನೋಡಿದಳು. ಅವನು ಅವಳನ್ನೇ ದಿಟ್ಟಿಸುತ್ತಿದ್ದ. ತಾರಿಣಿಗೆ ಗಾಬರಿಯಾಯಿತು. “ನಿನಗೆ ಈ ಪತ್ರ ಯಾರು ಕೊಟ್ಟರು? ನನ್ನ ಮನೆ ಹೇಗೆ ಗೊತ್ತಾಯಿತು?” ಎಂದು ಕೇಳಿದಳು.

“4-5 ದಿನಗಳಿಂದ ನಿಮ್ಮನ್ನು ಹುಡುಕ್ತಾ ಇದೀನಿ. ಹಳೆ ಮನೆಗೆ ಹೋಗಿದ್ದೆ. ನೀವು ಮನೆ ಬದಲಾಯಿಸಿದ್ದೀರಿ ಅಂತ ಅಲ್ಲಿ ಗೊತ್ತಾಯಿತು. ಅವರೇ ಇಲ್ಲಿಯ ವಿಳಾಸ ಕೊಟ್ಟರು. ವೀರೇಶ ಸರ್ಕಾರಿ ಆಸ್ಪತ್ರೇಲಿ ವಾರ್ಡ್‌ನಂ.33ರಲ್ಲಿ ಇದ್ದಾನೆ. ಅವನೇ ನನ್ನನ್ನು ಕಳಿಸಿದ್ದು. ಬಹಳ ಸೀರಿಯಸ್ಸಾಗಿದೆ. ನೀವು ಬೇಗ ಹೋದರೆ ಒಳ್ಳೆಯದು.”

ಬರಹ ಚಿರಪರಿಚಿತವಾದದ್ದು. ಆದರೆ ಕೈ ನಡುಗುತ್ತಿರಬೇಕು. ಅಕ್ಷರಗಳು ಸ್ವಲ್ಪ ಸೊಟ್ಟಗಾಗಿದ್ದವು. ತಾರಿ ಎಂಬ ಸಂಬೋಧನೆ ಅವಳ ಮನಸ್ಸನ್ನು ಅಲ್ಲಾಡಿಸಿಬಿಟ್ಟಿತು. ವೀರೇಶನನ್ನು ಬಿಟ್ಟರೆ ಯಾರೂ ಎಂದೂ ಅವಳನ್ನು ತಾರಿ ಎಂದು ಕರೆದಿರಲಿಲ್ಲ. ಮೊದಲೇ ಚಿಕ್ಕದಾಗಿದ್ದ ಹೆಸರನ್ನು ಇನ್ನೂ ಚಿಕ್ಕದಾಗಿಸಿದ್ದ. ಆದರೆ ಆ ಎರಡು ಅಕ್ಷರಗಳಲ್ಲಿ ವಿಶ್ವದ ಪ್ರೀತಿಯೆಲ್ಲಾ ಒಟ್ಟುಗೂಡಿದೆ ಎನಿಸುತ್ತಿತ್ತು. ಅವಳಿಗೆ ಹೆದರಿಕೆಯಾಯಿತು. ಎದುರಿಗೆ ಆ ವ್ಯಕ್ತಿ ನಿಂತಿದ್ದ. ಅವನನ್ನು ಕುಳಿತುಕೊಳ್ಳಲು ಹೇಳುವುದೋ ಅಥವಾ ಹೋಗಲು ಹೇಳುವುದೋ…. ಏನು ಮಾಡುವುದೆಂದು ತೋಚಲಿಲ್ಲ,

“ಸರಿ ನಾನು ಹೋಗ್ತೀನಿ,” ಎಂದಳು. ಅವನಿಗೇನಾದರೂ ತನ್ನ ಹಿಂದಿನ ಕಥೆ ತಿಳಿದುಬಿಟ್ಟರೆ….,  ಅವಳ ಹೃದಯದ ಬಾಗಿಲು ಬಲವಂತವಾಗಿ ತೆರೆದು ಅವಳು ಗತಕಾಲಕ್ಕೆ ಹೋಗಿದ್ದಳು.

ಆಮೇಲೆ ಬೇಗನೆ ತಯಾರಾಗಿ ಅವಳು ಟ್ಯಾಕ್ಸಿ ಹಿಡಿದಳು. ಪತಿಗೆ ಫೋನ್‌ ಮಾಡಿ ತನ್ನ ಆಪ್ತ ಗೆಳತಿಯ ಪತಿಗೆ ಹುಷಾರಿಲ್ಲ ಎಂದು ಫೋನ್‌ ಬಂತು. ಅದಕ್ಕೆ ಆಸ್ಪತ್ರೆಗೆ ಹೋಗುತ್ತಿದ್ದೇನೆ ಎಂದು ಹೇಳಿದಳು. ವೀರೇಶನಿಗೇನಾಗಿದೆ ಎಂದು ಅವಳು ದಾರಿಯುದ್ದಕ್ಕೂ ಚಿಂತಿಸುತ್ತಿದ್ದಳು. ಅವನು ಇಲ್ಲಿಗೇಕೆ ಬಂದಿದ್ದಾನೆ? ಅನುಮಾನಗಳು ಮುತ್ತಿದವು.

ಅವಳ ಮತ್ತು ವೀರೇಶನ ಪರಿಚಯ ಒಂದು ಮದುವೆ ಮನೆಯಲ್ಲಾಗಿತ್ತು. ತಾರಿಣಿ ತಂದೆ ತಾಯಿ ಜೊತೆಗೆ ಚಿಕ್ಕಪ್ಪನ ಮಗಳ ಮದುವೆಗೆಂದು ಮಡಿಕೇರಿಯಿಂದ ಬೆಂಗಳೂರಿಗೆ ಬಂದಿದ್ದಳು. ಪ್ರಕೃತಿ ಸೌಂದರ್ಯದ ನೆಲೆವೀಡಾದ ಕೊಡಗೆಲ್ಲಿ, ಮಾನವ ನಿರ್ಮಿತ ಎತ್ತರದ ಕಟ್ಟಡಗಳಿಂದ ತುಂಬಿದ ಸದಾ ಧಾವಂತದ ಜನನಿಬಿಡ ಯಾಂತ್ರಿಕ ಜೀವನದ ಬೆಂಗಳೂರೆಲ್ಲಿ? ಅವಳಿಗೆ ಇಲ್ಲಿ ಹಸಿರು ತುಂಬಿದ ಲಾಲ್‌ಬಾಗ್‌ ಮಾತ್ರ ಇಷ್ಟವಾಗಿತ್ತು. ಮರುದಿನ ವಿವಾಹದ ಶಾಸ್ತ್ರಗಳು ಶುರುವಾಗುತ್ತಿದ್ದುದರಿಂದ ಮಧ್ಯಾಹ್ನ ಸ್ವಲ್ಪ ಹೊತ್ತಿನ ಮಟ್ಟಿಗೆ ಲಾಲ್‌ಬಾಗ್‌ ನೋಡಿದಳು.

ಅವಳು ಮನಸ್ಸಿಲ್ಲದೆ ತಯಾರಾದಳು. ಸಂಜೆಗೆ ದಿಬ್ಬಣ ಬರುವುದಿತ್ತು. ತಾರಿಣಿ ಎಲ್ಲರೊಂದಿಗೆ ದಿಬ್ಬಣ ಎದುರುಗೊಳ್ಳಲು ಹೊರಗೆ ಬಂದಳು. ಜೊತೆಗೆ ವಧುವಿನ ಗೆಳತಿಯರು, ತಾರಿಣಿ ಅಕ್ಕಂದಿರೂ ಇದ್ದರು. ಎಲ್ಲರೂ ವರನನ್ನು ನೋಡುತ್ತಿದ್ದರು. ತಾರಿಣಿಯ ಕಣ್ಣುಗಳು ಒಬ್ಬ ಚೆಲುವಾಂತ ಚೆನ್ನಿಗನ ಮೇಲೆ ಕೀಲಿಸಿಬಿಟ್ಟಿತ್ತು. ಅವನೂ ತಾರಿಣಿಯನ್ನು ನೋಡಿದ. ನೋಡಿದವನು ನೋಡುತ್ತಲೇ ಇದ್ದ. ಅವಳ ಅನುಪಮ ಸೌಂದರ್ಯವನ್ನು ನೋಡಿ ಅವನು ಮುಗ್ಧನಾಗಿದ್ದ. ವಿವಾಹದ ಶಾಸ್ತ್ರಗಳ ನಡುವೆ ಇಬ್ಬರೂ ಒಬ್ಬರನ್ನೊಬ್ಬರು ನೋಡುತ್ತಲೇ ಇದ್ದರು. ಆಗ ತಾರಿಣಿಯ ಚಿಕ್ಕಪ್ಪನ ಮಗಳು ಆ ಯುವಕನ ಪರಿಚಯ ಮಾಡಿಸುತ್ತಾ, “ತಾರಿಣಿ, ಇವನು ವೀರೇಶ. ಇಲ್ಲಿನ ಪ್ರತಿಷ್ಠಿತ ಸಂಸ್ಥೆಯ ಜನರಲ್ ಮ್ಯಾನೇಜರ್‌. ವೀರೂ, ಇವಳು ತಾರಿಣಿ. ಅದೇ ಮಾತಿಗೆ ಮುಂಚೆ ಅಳುತ್ತಿದ್ದಳಲ್ಲ ಅವಳು,” ಎಂದಳು.

ವೀರೇಶನಿಗೆ ನೆನಪಾಯಿತು. 10-11 ವರ್ಷವಾಗಿದ್ದಾಗ ತಾರಿಣಿ ಬೆಂಗಳೂರಿಗೆ ಬಂದಿದ್ದಳು. ಇವನು ಅವಳನ್ನು ಮಾತುಮಾತಿಗೂ ರೇಗಿಸುತ್ತಿದ್ದ. ಆಗ ಅವಳು ಅಳುತ್ತಿದ್ದಳು. ವೀರೇಶ ತನ್ನ ಅಮ್ಮನಿಂದ ಬೈಸಿಕೊಳ್ಳುತ್ತಿದ್ದ. ಬೆಳಗ್ಗೆ ವಧು ತನ್ನ ಅತ್ತೆಮನೆಗೆ ಹೊರಟುಹೋದಳು. ವಾತಾವರಣ ಶಾಂತವಾಗಿತ್ತು. ತಾರಿಣಿಗೆ ಇಷ್ಟೊಂದು ಒಂಟಿತನ ಎಂದೂ ಕಾಡಿರಲಿಲ್ಲ. ಅವಳ ಕಣ್ಣೆದುರಿಗೆ ಮತ್ತೆ ಮತ್ತೆ ವೀರೇಶನ ನಗುಮುಖ ಸುಳಿಯುತ್ತಿತ್ತು. ಅವಳು ತಲೆ ಕೊಡವಿ ಬೇರೇನಾದರೂ ಯೋಚಿಸುವ ಪ್ರಯತ್ನ ಮಾಡುತ್ತಿದ್ದಳು.

ಮಧ್ಯಾಹ್ನದ ಸಮಯ. ಎಲ್ಲರೂ ಆಯಾಸದಿಂದ ತಂತಮ್ಮ ಕೋಣೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ತಾರಿಣಿಯೂ ಮೌನವಾಗಿ ಕುಳಿತಿದ್ದಳು. ಆಗ ವೀರೇಶ ಬಂದ. ಅವನನ್ನು ನೋಡಿ ತಾರಿಣಿಯ ಮುಖ ಅರಳಿತು. ಅವಳು ತನ್ನ ಸಂತಸವನ್ನು ಮುಚ್ಚಿಡಲು ಬಹಳ ಪ್ರಯತ್ನಪಟ್ಟಳು. ಆದರೆ ಸಂತೋಷವನ್ನು ಬಚ್ಚಿಡಲು ಸಾಧ್ಯವೇ? 10 ನಿಮಿಷ ವೀರೇಶ ಇದ್ದು ಹೊರಟುಹೋದ. 2-3 ದಿನಗಳ ನಂತರ ಊರಿಗೆ ಹೋಗುವುದೆಂದು ತಾರಿಣಿಯ ತಂದೆ ನಿರ್ಧರಿಸಿದರು. ಈ ಮಧ್ಯೆ ವೀರೇಶ ತನ್ನ ತಂದೆತಾಯಿ ಜೊತೆಗೆ ಬಂದಿದ್ದ. ಅವನ ತಾಯಿ ಮದುವೆ ಮನೆಯಲ್ಲಿ ತಾರಿಣಿಯನ್ನು ನೋಡಿದ್ದರು. ಇಂದು ಅವರ ಕಣ್ಣಿಗೆ ಇನ್ನೂ ಸುಂದರಿಯಾಗಿ ಕಂಡಳು. ಅವರು ಮನಸ್ಸಿನಲ್ಲಿ ಅವಳನ್ನು ತಮ್ಮ ಸೊಸೆಯಾಗಿ ಮಾಡಿಕೊಳ್ಳುವುದೆಂದು ನಿರ್ಧರಿಸಿದ್ದರು. ಎರಡು ಮನೆಯವರ ಮಧ್ಯೆ ಮಾತುಕತೆಯಾಗಿ ಮದುವೆ ನಿಶ್ಚಯವಾಯಿತು. ತಾರಿಣಿಗೆ ಇದೀಗ ಬೆಂಗಳೂರು ಮಾತ್ರವಲ್ಲ, ಇಡೀ ಪ್ರಪಂಚವೇ ಸುಂದರವಾಗಿ ಕಂಡಿತು. ಜನರ ಗುಂಪು, ಮತ್ತು ಧಗೆಯಿಂದ ಕೂಡಿದ್ದ ಬೆಂಗಳೂರು ಅವಳಿಗೀಗ ಪ್ರಿಯವಾಯಿತು. ಅವಳ ಮನಸ್ಸು ಸುಂದರ ಮಡಿಕೇರಿಯನ್ನು ಮರೆತುಬಿಟ್ಟಿತು. ವೀರೇಶನಂತೂ ಆಕಾಶದಲ್ಲಿ ಹಾರಾಡುತ್ತಿದ್ದ. ತಾರಿಣಿಯಂಥ ಸುಂದರ, ಸುಶೀಲ ಯುವತಿ ತನ್ನವಳಾಗುತ್ತಾಳೆಂದು ಅವನು ಕನಸಿನಲ್ಲೂ ಎಣಿಸಿರಲಿಲ್ಲ. ಅವನು ಅವಳನ್ನು ಪ್ರೀತಿಯಿಂದ ತಾರಿ ಎಂದು ಕರೆಯುತ್ತಿದ್ದ.

ಅವನ ತನುಮನವೆಲ್ಲ ತಾರಿಣಿಯೇ ಆಗಿದ್ದಳು. ಅವಳ ಬಗ್ಗೆ ಮಾತ್ರ ಅವನು ಯೋಚಿಸುತ್ತಿದ್ದ. ತಾರಿಣಿ ಊರಿಗೆ ಹಿಂದಿರುಗಿದಳು. ವೀರೇಶನಿಗೆ ಅವಳ ಮಧುರ ಮಂದಹಾಸ, ಮೆಲುನುಡಿ, ನಡಿಗೆ ಎಲ್ಲ ನೆನಪಾಗುತ್ತಿತ್ತು.

ಅತ್ತ ತಾರಿಣಿಗೆ ವೀರೇಶನ ಯೋಚನೆ ಬಿಟ್ಟರೆ ಬೇರೆ ಮಾತೇ ಹೊಳೆಯುತ್ತಿರಲಿಲ್ಲ. ರಾತ್ರಿ ಯಾವುದು ಹಗಲು ಯಾವುದು ತಿಳಿಯದಂತಹ ಸ್ಥಿತಿ.

ಆದರೆ ಇದ್ದಕ್ಕಿದ್ದಂತೆ ಭಾರಿ ಆಘಾತವಾಯಿತು. ವೀರೇಶನ ಕಾರು ಅಪಘಾತಕ್ಕೆ ಗುರಿಯಾಯಿತು. ಅವನು ಜೀವನ ಮರಣಗಳ ನಡುವೆ ತೂಗಾಡುತ್ತಾ ಬದುಕಿಕೊಂಡ. ಆದರೆ ಅವನ ಬಲಗಾಲು ಗಂಭೀರವಾಗಿ ಫ್ರಾಕ್ಚರ್‌ ಆಗಿತ್ತು. ಅನೇಕ ಆಪರೇಶನ್‌ಗಳಾದರೂ ಸರಿಹೋಗಲಿಲ್ಲ. ಅವನು ಊರುಗೋಲಿನ ಆಸರೆ ಪಡೆಯಬೇಕಾಯಿತು.

ಇದಕ್ಕೂ ದೊಡ್ಡ ಆಘಾತವೆಂದರೆ ಅಪಘಾತದಿದ ಪುರುಷತ್ವ ಕಳೆದುಕೊಂಡ ಅವನು ಮದುವೆ ಮಾಡಿಕೊಳ್ಳಲು ಯೋಗ್ಯನಾಗಿ ಉಳಿದಿರಲಿಲ್ಲ. ತಾರಿಣಿಯಂತಹ ಸುಂದರ ಯುವತಿಯ ಭವಿಷ್ಯ ಹಾಳಾಗಬಾರದು ಎಂದು ಯೋಚಿಸಿ ಅವನು ತಾರಿಣಿಗೆ ತಾನು ಮದುವೆಯಾಗಲು ಸಾಧ್ಯವೇ ಇಲ್ಲ ಎಂದು ಕಠೋರವಾಗಿ ಹೇಳಿಬಿಟ್ಟ.

ಅತ್ತು ಅತ್ತು ತಾರಿಣಿಯ ಸ್ಥಿತಿ ನೋಡಲಾಗುತ್ತಿರಲಿಲ್ಲ. ಈ ಅಪಘಾತ ಮದುವೆಯ ನಂತರ ಆಗಿದ್ದರೆ ಎಂದು ವಾದಿಸಿದಳು. ನಾನೀಗಲೂ ಅವನನ್ನೇ ಮದುವೆಯಾಗ್ತೇನೆ ಎಂದಳು. ತಂದೆತಾಯಿಗೆ ಏನು ಮಾಡುವುದೆಂದು ಗೊತ್ತಾಗಲಿಲ್ಲ. ಒಂದು ಕಡೆ ಮಗಳ ದುಃಖ. ಇನ್ನೊಂದು ಕಡೆ ಅವಳ ಭವಿಷ್ಯ.

ಸ್ವಲ್ಪ ದಿನಗಳಲ್ಲಿ ಪ್ರೀತಿಯ ನಶೆ ಇಳಿದ ಮೇಲೆ ಸತ್ಯ ಸಂಗತಿ ಎದುರಾದಾಗ ಮಗಳ ಜೀವನ ದುರ್ಭರವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ತಾರಿಣಿಗೆ ಪ್ರಪಂಚವೇ ಶೂನ್ಯವೆನಿಸಿತು. ಜೀವವಿಲ್ಲದವಳಂತೆ ಅವಳು ಕಿಶೋರನ ಮನೆ ತುಂಬಿದಳು. ಪತಿಯೇ ಸರ್ವಸ್ವನಾಗಿಬಿಡುವುದು ಭಾರತೀಯ ಹೆಣ್ಣಿನ ವಿಡಂಬನೆ. ಅವನೇ ಅವಳ ಪ್ರಪಂಚ. ಸುಖದುಃಖ, ಕಳೆದು ಹೋದ ಜೀವನವನ್ನು ಮರೆಯುವ ಪ್ರಯತ್ನ ಮಾಡಿದಳು. ವೀರೇಶ ಬಹಳ ನೆನಪಿಗೆ ಬರುತ್ತಿದ್ದ. ಅವಳು ಅವನನ್ನು ನೆನೆಯದ ಕ್ಷಣವೇ ಇರಲಿಲ್ಲ. ಅವಳ ಮನಸ್ಸು ಕಿಶೋರನಲ್ಲಿ ಸೇರಿದ್ದರೂ ಆತ್ಮ ಬಹುಶಃ ಇನ್ನೂ ವೀರೇಶನದೇ ಆಗಿತ್ತು. ಅವಳ ಹೃದಯ ಮಂದಿರದಲ್ಲಿ ವೀರೇಶನ ಸೌಮ್ಯ ಸುಂದರ ಮೂರ್ತಿ ಪ್ರತಿಷ್ಠಾಪಿತವಾಗಿತ್ತು.

ಜೋರಾಗಿ ಬ್ರೇಕ್‌ ಹಾಕಿದಾಗ ತಾರಿಣಿ ಎಚ್ಚೆತ್ತಳು. ಟ್ಯಾಕ್ಸಿ ಆಸ್ಪತ್ರೆ ತಲುಪಿತು. ತಾರಿಣಿ ಓಡುತ್ತಲೇ ಮೆಟ್ಟಿಲುಗಳನ್ನು ಹತ್ತಿದಳು. ಹುಡುಕುತ್ತಾ ವೀರೇಶನ ಮಂಚದ ಬಳಿ ಬಂದಳು. ಅವಳು ಸುತ್ತಲೂ ವೀರೇಶನಿಗಾಗಿ ಹುಡುಕಾಡತೊಡಗಿದಳು. ಹಾಸಿಗೆಯ ಮೇಲೆ ಅಸ್ಥಿ ಪಂಜರದಂತಹ ದೇಹ ಕಾಣಿಸಿತು. ತಾರಿಣಿಯನ್ನು ನೋಡಿ ಅದು ಮುಗುಳ್ನಕ್ಕಿತು. ಕ್ಷೀಣ ದನಿಯಲ್ಲಿ `ತಾರಿ’ ಎಂದು ಕರೆದಾಗ ಅವಳು ಬೆಚ್ಚಿದಳು.

“ಏನಾಗಿ ಹೋಗಿದೆ? ಹೇಗಾಯಿತು?” ಅವಳು ಪ್ರಶ್ನೆಗಳ ಮಳೆ ಸುರಿಸಿದಳು.

ಅವನು ಅವಳ ಎರಡು ಕೈಗಳನ್ನು ಹಿಡಿದು, “ತಾರಿ, ನೀನು ಬಂದಿದ್ದು ಒಳ್ಳೆಯದಾಯಿತು. ನಾನೀಗ ನೆಮ್ಮದಿಯಿಂದ ಸಾಯುತ್ತೇನೆ. ನನ್ನ ಆತ್ಮದ ಮೇಲಿದ್ದ ಹೊರೆ ಇಳಿಯಿತು” ಎಂದ.

“ನೀನು ಇದುವರೆಗೂ ಎಲ್ಲಿದ್ದೆ? ಅಮ್ಮ ಅಪ್ಪ ಎಲ್ಲಿ? ನೀನು ಇಲ್ಲಿಗೆ ಹೇಗೆ ಬಂದೆ?” ಎಂದು ತಾರಿಣಿ ಪ್ರಶ್ನೆಯ ಮೇಲೆ ಪ್ರಶ್ನೆ ಹಾಕಿದಳು.

ವೀರೇಶ ನಿಧಾನವಾಗಿ ಉತ್ತರಿಸಿದ, “ನಿನ್ನ ಇಷ್ಚು ಪ್ರಶ್ನೆಗಳಿಗೆ ಉತ್ತರಿಸುವಷ್ಟು ಸಮಯ ನನ್ನಲ್ಲಿದೆಯೇ?”

“ನಿನಗೇನೂ ಆಗುವುದಿಲ್ಲ. ನೀನು ಹುಷಾರಾಗುತ್ತೀಯ. ನಾನು ನಿನ್ನನ್ನು ಒಳ್ಳೆ ಡಾಕ್ಟರ್‌ ಹತ್ತಿರ ಕರೆದುಕೊಂಡು ಹೋಗುತ್ತೇನೆ,” ಅಧೀರಳಾಗಿ ತಾರಿಣಿ ನುಡಿದಳು.

ಅವಳ ಅಧೀರತೆಯನ್ನು ಕಂಡು ಮತ್ತು ಅವಳ ಮಾತುಗಳನ್ನು ಕೇಳಿದ ವೀರೇಶ್‌ ಹೇಳಿದ, “ತಾರಿ, ಏನೂ ಲಾಭವಿಲ್ಲ, ನನಗೆ ಕ್ಯಾನ್ಸರ್‌ ಆಗಿದೆ. ನೀನು ಬಂದೆಯಲ್ಲ…. ನಿನ್ನನ್ನು ನೋಡಿದೆ, ಬಹುಶಃ ನನಗೆ ಮುಕ್ತಿ ಸಿಗುತ್ತದೆ.”

ತಾರಿಣಿ ಸುತ್ತಲೂ ನೋಡಿ ಹೇಳಿದಳು. “ನಿನ್ನ ಬಳಿ ಯಾರೂ ಇಲ್ಲವೇ? ಅಮ್ಮ ಅಪ್ಪ ಎಲ್ಲಿದ್ದಾರೆ?”

ವೀರೇಶ ಅದೇ ಪರಿಚಿತ ನಗುವನ್ನು ಬೀರಿದ. “ಹುಚ್ಚಿ, ಅಮ್ಮ ಅಪ್ಪ ಜೀವನಪೂರ್ತಿ ಜೊತೆ ಇರ್ತಾರೇನು? ಮಗನ ದುಃಖದಿಂದ ಅವರು ಸಮಯಕ್ಕೆ ಮೊದಲೇ ಹೊರಟುಹೋದರು. ಇನ್ನು ಮದುವೆಯಾಗುವ ಪ್ರಶ್ನೆಯೇ ಇರಲಿಲ್ಲ. ನಾನು ಅದೃಷ್ಟಹೀನ. ಊರಿಂದ ಊರಿಗೆ ಅಲೆಯುತ್ತಾ ಇದ್ದೆ. ಕಡೆಗೆ ನಿನ್ನ ವಿಳಾಸ ಸಿಕ್ಕಿತು. ನಾನೇ ಬಂದು ನಿನ್ನನ್ನು ಭೇಟಿಯಾಗುವ ಭಾಗ್ಯ ನನ್ನ ಹಣೆಯಲ್ಲಿ ಬರೆದಿಲ್ಲ. ನನ್ನನ್ನು ನಾರಾಯಣ ನೋಡಿಕೊಳ್ಳುತ್ತಾನೆ. ನಿನಗೆ ಪತ್ರ ತಲುಪಿಸಿದವನೇ ಅವನು,” ಎಂದು ಹೇಳುತ್ತಿದ್ದ ವೀರೇಶ ಆ ವ್ಯಕ್ತಿಯ ಕಡೆಗೆ ಕಣ್ಣುಗಳನ್ನು ಹೊರಳಿಸಿದ.

“ಇಲ್ಲ ವೀರೇಶ್‌, ಇಲ್ಲ ನೀನಗೇನೂ ಆಗುವುದಿಲ್ಲ!” ತಾರಿಣಿ ಸ್ವರ ಕೂಗಿದಂತೆ ಇತ್ತು.

ಸ್ವಲ್ಪ ಹೊತ್ತು ವೀರೇಶ್‌ ಜ್ಞಾನವಿಲ್ಲದಂತೆ ಇದ್ದ. ತಾರಿಣಿ ಅವನನ್ನೇ ನೋಡುತ್ತಿದ್ದಳು. ಅವನು ಕಣ್ಣು ತೆರೆದು ನಿಧಾನವಾಗಿ ಹೇಳಿದ, “ತಾರಿ ನನ್ನನ್ನು ಕ್ಷಮಿಸು…”

ವೀರೇಶ ಮತ್ತೆ ಮತ್ತೆ ಕ್ಷಮೆ ಕೇಳುವುದೇಕೆ ಎಂದು ಅವಳಿಗೆ ಅರ್ಥವಾಗಲಿಲ್ಲ. ಅವನು ತಪ್ಪು ಮಾಡಿರಲಿಲ್ಲ. ವೀರೇಶ್‌ ಕಂಪಿಸಿದ. ಅವನ ತುಟಿಗಳು ಅಲುಗಾಡಿದವು. ತಾರಿಣಿ ಅವನ ಮೇಲೆ ಬಗ್ಗಿ ಅವನ ತುಟಿಗಳ ಬಳಿ ತನ್ನ ಕಿವಿಯನ್ನು ತಂದಳು.

ವೀರೇಶ ಮೆಲ್ಲನೆಯ ದ್ವನಿಯಲ್ಲಿ, “ತಾರಿ ನನ್ನನ್ನು ಕ್ಷಮಿಸು. ನಾನು ಮದುವೆಯಾಗಲು ಯೋಗ್ಯನಾಗಿಲ್ಲ ಎಂದು ನಿನಗೆ ಸುಳ್ಳು ಹೇಳಿದ್ದೆ. ನನ್ನ ಪುರುಷತ್ವ ಹಾಳಾಗಿರಲಿಲ್ಲ. ನನ್ನ ಕುಂಟುಕಾಲು ನನ್ನಲ್ಲಿ ಕೀಳರಿಮೆ ಹುಟ್ಟಿಸಿತ್ತು. ನಿನ್ನಂತಹ ಯುವತಿ ಒಬ್ಬ ಕುಂಟನ ಜೊತೆ ಜೀವನಪೂರ್ತಿ ಕಳೆಯುವಂತೆ ಮಾಡಲು ನನಗಾವ ಹಕ್ಕೂ ಇಲ್ಲ ಎಂದು ನಾನು ಯೋಚಿಸಿದೆ.”

ಅವನ ಮಾತು ಕೇಳಿದ ತಾರಿಣಿಗೆ ಆಕಾಶದಿಂದ ಭೂಮಿಗೆ ಬಿದ್ದಂತಾಯಿತು. ಮರಣಕ್ಕೆ ಸಮೀಪಿಸಿದ್ದ ವೀರೇಶನ ಮೇಲೆ ಕನಿಕರದ ಜೊತೆ ಕೋಪ ಉಕ್ಕಿ ಬಂತು. ಅಷ್ಟರಲ್ಲಿ ಡಾಕ್ಟರ್‌ ಅಲ್ಲಿಗೆ ಬಂದು. “ನೀವು ಬಂದಿದ್ದು ಒಳ್ಳೆದಾಯಿತು. ಇವರ ಕಾಲಿನ ಗಾಯ ಕ್ಯಾನ್ಸರ್‌ ರೂಪ ತಾಳಿದೆ. ಇವರನ್ನು ಕ್ಯಾನ್ಸರ್‌ ಆಸ್ಪತ್ರೆಗೆ ಸೇರಿಸಿದರೆ ಒಳ್ಳೆಯದು. ಆದರೆ ಬಹುಶಃ ಈಗ ಬಹಳ ತಡವಾಗಿದೆ….”

ವೀರೇಶನ ಮುಖದ ಮೇಲೆ ಕಾಣುತ್ತಿದ್ದ ಶಾಂತಿ, ಸಂತೋಷ ಮತ್ತು ತೃಪ್ತಿಯನ್ನು ನೋಡಿ ತಾರಿಣಿಗೆ ಗಾಬರಿಯಾಯಿತು. ಅವನು ಅವಳನ್ನೇ ನೋಡುತ್ತಿದ್ದ. ಆ ಪ್ರಾಣವಿಲ್ಲದ ಕಣ್ಣುಗಳಲ್ಲಿನ ತೃಪ್ತಿಯನ್ನು ನೋಡಿ ತಾರಿಣಿ ದಹಿಸಿಹೋದಳು. ಚೀತ್ಕರಿಸುತ್ತಾ ಬಿದ್ದು ಜ್ಞಾನ ತಪ್ಪಿದಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ