ಕಥೆ - ಸದ್ಯೋಜಾತ
ಹಳ್ಳಿಯ ಪರಿಸರದಲ್ಲಿ ತನ್ನ ಜಾಣ್ಮೆಯಿಂದ ಹಂತ ಹಂತವಾಗಿ ಮೇಲೇರಿ, ಸಂಸಾರದಲ್ಲಿ ತೊಡಗಿದ ನಂತರ ತಾನು ಬಯಸಿದಂತೆ ಡಾಕ್ಟರ್ ಆಗಲೇಬೇಕೆಂಬ ಛಲದಿಂದ ಪ್ರದ್ಯೋತ, ನಿವೃತ್ತಿ ನಂತರ ವೈದ್ಯನಾಗಲು ಬಯಸಿದ. ಅದರಲ್ಲಿ ಅವನು ಯಶಸ್ವಿಯಾದನೇ.....?
ಪ್ರದ್ಯೋತ ಸಣ್ಣವನಿದ್ದಾಗ ಓದಿನಲ್ಲಿ ಬಹಳ ಚುರುಕು. ಅವನನ್ನು ಅವನ ನೆಚ್ಚಿನ ಮೇಷ್ಟ್ರು ಗೊರರ್ ಸೂಜಿಗಲ್ಲು ಎನ್ನುತ್ತಿದ್ದರು. ಅವರು ಹೇಳಿದ್ದನ್ನು ಶಿರಸಾವಹಿಸಿ ಪಾಲಿಸುತ್ತಿದ್ದ. ಕನ್ನಡವೆಂದರೆ ಪಂಚಪ್ರಾಣ. ಇನ್ನು ವಿಜ್ಞಾನದ ಮೇಷ್ಟ್ರು ಶಿವಲಿಂಗಪ್ಪ ಹೇಳುತ್ತಿದ್ದುದೇ ಬೇರೆ, ``ಇವನು ವಿಜ್ಞಾನವನ್ನು ಬಿಟ್ಟು ಬೇರೆ ವಿಷಯಗಳನ್ನು ಓದುತ್ತಾನೋ ಇಲ್ಲವೋ,'' ಎಂದು ಸಂಶಯ ವ್ಯಕ್ತಪಡಿಸುತ್ತಿದ್ದರು. ಅದಕ್ಕೆಂದೇ ಒಮ್ಮೆ ಹೆಡ್ ಮೇಸ್ಟ್ರಿಗೆ ಹೇಳಿ, ಅವನ ಇತರೆ ವಿಷಯಗಳಲ್ಲಿ ತೆಗೆದ ಮಾರ್ಕ್ಸ್ ತರಿಸಿ ನೋಡಿದರು. ಪ್ರದ್ಯೋತ ಮಾತ್ರ ಎಲ್ಲಾ ವಿಷಯಗಳಲ್ಲಿಯೂ ಉತ್ತಮ ಅಂಕಗಳನ್ನೇ ಪಡೆದುಕೊಳ್ಳುತ್ತಿದ್ದ. ಹಳ್ಳಿಯ ಸ್ಕೂಲಿನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದರೂ ಓದಿನಲ್ಲಿ ಸದಾ ಮುಂದು ಮತ್ತು ಎಲ್ಲಾ ಮೇಷ್ಟ್ರುಗಳ ಅಚ್ಚುಮೆಚ್ಚಿನ ಶಿಷ್ಯನಾಗಿದ್ದ.
ಅವನ ಶಾಲೆಯಲ್ಲಿ ಎಲ್ಲಾ ಮೇಷ್ಟ್ರುಗಳು ಗೈಡ್ ರೆಫರ್ ಮಾಡಬೇಡಿ, ಮೇಷ್ಟ್ರು ಹೇಳಿಕೊಟ್ಟಿದ್ದನ್ನು ಗಮನವಿಟ್ಟು ಓದಿಕೊಳ್ಳಿ. ವಿಷಯ ಅರ್ಥವಾಗದಿದ್ದಲ್ಲಿ ಪುನಃ ಕೇಳಿ ಸಂದೇಹಗಳನ್ನು ಬಗೆಹರಿಸಿಕೊಳ್ಳಿ ಎಂದು ಯಾವಾಗಲೂ ಹೇಳುತ್ತಿದ್ದರು. ಪ್ರದ್ಯೋತ ಒಂಬತ್ತನೆ ತರಗತಿಯಲ್ಲಿ ಕನ್ನಡ ವಾರ್ಷಿಕ ಪರೀಕ್ಷೆಯಲ್ಲಿ ನೂರಕ್ಕೆ ತೊಂಬತ್ತೆಂಟು ಅಂಕ ಗಳಿಸಿದ್ದ. ಇದು ಎಲ್ಲಾ ಹುಡುಗರ ಕಣ್ಣು ಕುಕ್ಕಿತು. ಪ್ರದ್ಯೋತನ ಕ್ಲಾಸ್ ಮೇಟ್ ಪಾರ್ವತಿ ಗೊರರ್ ಮೇಷ್ಟ್ರು ಹತ್ತಿರ ರಗಳೆ ತೆಗೆದಳು.
``ಸಾರ್, ಈ ಪ್ರದ್ಯೋತ ಕನ್ನಡ ಗೈಡ್ ಬಳಸಿ ಉತ್ತರ ಬರೆಯುತ್ತಾನೆ. ನೀವೆಲ್ಲರೂ ಗೈಡ್ ಬಳಸಬಾರದು ಎಂದು ಹೇಳ್ತೀರೀ.... ಇದು ನ್ಯಾಯಾ? ಅವನು ಮಾತ್ರ ನೂರಕ್ಕೆ ತೊಂಬತ್ತೆಂಟು ಮಾರ್ಕ್ಸ್ ಪಡೆಯುತ್ತಾನೆ. ನಾವೆಲ್ಲಾ ಕಡಿಮೆ ಪಡೆಯುತ್ತೇವೆ,'' ಎಂದು ಪ್ರದ್ಯೋತನ ವಿರುದ್ಧ ಯುದ್ಧ ಸಾರಿದಳು.
ಮೇಷ್ಟ್ರು ಪ್ರದ್ಯೋತನನ್ನು ಕರೆದು, ``ನೀನು ಗೈಡ್ ಬಳಸುತ್ತಿದ್ದೀಯಾ....?'' ಎಂದು ಕೇಳಿದರು.
ಅದಕ್ಕವನು, ``ಸಾರ್, ನಾನು ಗೈಡ್ ಬಳಸುತ್ತಿಲ್ಲ. ನನ್ನ ಅಕ್ಕ ಕನ್ನಡದಲ್ಲಿ ಬಹಳ ಜಾಣೆ. ಆಕೆ ನನಗೆ ಮನೆಯಲ್ಲಿ ಕನ್ನಡ ಪಾಠ ಮತ್ತೆ ಹೇಳಿಕೊಡುತ್ತಾಳೆ. ಮೇಲಾಗಿ ನೋಟ್ಸ್ ಕೂಡ ಸಿದ್ಧ ಮಾಡಿಕೊಡುತ್ತಾಳೆ. ಅದರಿಂದ ಓದಿ ನಾನು ಉತ್ತರ ಬರೆಯುತ್ತೇನೆ,'' ಎಂದು ನಿಜವನ್ನು ತೆರೆದಿಟ್ಟ. ಪ್ರದ್ಯೋತನ ಅಕ್ಕ ಮನೆಯಲ್ಲಿ ಇವನ ಕನ್ನಡ ಪುಸ್ತಕ ಓದಿ ನೋಟ್ಸ್ ಮಾಡಿಕೊಂಡು ಪ್ರತಿನಿತ್ಯ ಪಾಠ ಹೇಳಿಕೊಡುತ್ತಿದ್ದಳು.
``ನಿಮಗೆ ನಂಬಿಕೆ ಬರದಿದ್ದಲ್ಲಿ ಒಮ್ಮೆ ನಾನು ನಮ್ಮ ಅಕ್ಕನ ನೋಟ್ಸ್ ತಂದು ತೋರಿಸುತ್ತೇನೆ,'' ಎಂದು ಅಕ್ಕ ಬರೆದ ನೋಟ್ಸ್ ಗಳನ್ನು ಶಾಲೆಗೆ ತಂದು ತೋರಿಸಿದ.
ನೋಟ್ಸ್ ನೋಡಿದ ಗೊರರ್ ಮೇಷ್ಟ್ರು ಸಮಾಧಾನಗೊಂಡರು. ಪಾರ್ವತಿಯನ್ನು ಕರೆದು, ``ನೀನು ಪ್ರದ್ಯೋತನ ಅಕ್ಕನ ಬಳಿ ಪಾಠಕ್ಕೆ ಹೋಗು. ನಿನಗೂ ಉತ್ತಮ ಅಂಕಗಳು ದೊರೆಯುತ್ತವೆ,'' ಎಂದರು.
ಎಸ್.ಎಸ್.ಎಲ್.ಸಿಯಲ್ಲಿ ಪಾರ್ವತಿ ದಿನ ಪ್ರದ್ಯೋತನ ಮನೆಗೆ ಬಂದು ಅವನ ಅಕ್ಕನ ಬಳಿ ಪಾಠ ಹೇಳಿಸಿಕೊಂಡಳು. ಆದರೂ ಕ್ಲಾಸಿನಲ್ಲಿ ಕನ್ನಡದಲ್ಲಿ ಅವಳಿಗೆ ಎರಡನೇ ಸ್ಥಾನವೇ ಗಟ್ಟಿಯಾಗಿರುತ್ತಿತ್ತು. ಅಷ್ಟಾದರೂ ಸಾಧಿಸಿದೆನಲ್ಲ ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದಳು. ಒಂಬತ್ತನೇ ತರಗತಿಯಲ್ಲಿ ಪ್ರದ್ಯೋತನನ್ನು ವೈರಿಯಂತೆ ನೋಡುತ್ತಿದ್ದಳು, ನಂತರ ಎಸ್.ಎಸ್.ಎಲ್.ಸಿಯಲ್ಲಿ ಸ್ನೇಹಿತನಂತೆ ನೋಡಲಾರಂಭಿಸಿದಳು. ಕಾರಣ ಕ್ಲಾಸಿನಲ್ಲಿ ಎರಡನೇ ಸ್ಥಾನ ಗಟ್ಟಿಯಾದ್ದರಿಂದ.





