ಕಥೆ - ರಮಾಶ್ರೀ ನಾಡಿಗೇರ್
ಪ್ರೀತಿ ಪ್ರೇಮ ಪ್ರಣಯ ಎಂಬುದು ಅನಾದಿ ಕಾಲದಿಂದಲೂ ಮಾವನ ಹೃದಯಕ್ಕೆ ವೇದ್ಯ. ಪೀಳಿಗೆಯಿಂದ ಪೀಳಿಗೆಗೆ ಇದರ ಅಭಿವ್ಯಕ್ತಿ ಬದಲಾದರೂ ಅದನ್ನು ಒಲ್ಲೆ ಎನ್ನುವವರೂ ಉಂಟೆ.....?
ಸುಭದ್ರಮ್ಮ ಬೆಳಗ್ಗೆಯಿಂದ ಹೊರಬಾಗಿಲಿಗೂ ದೇವರ ಮನೆಗೂ ನಾಲ್ಕಾರು ಬಾರಿ ಓಡಾಡಿದ್ದರು.
``ಅಮ್ಮ..... ಯಾಕೆ ಅಷ್ಟು ಸಾರಿ ಹೊರಗೆ ಒಳಗೆ ಓಡಾಡ್ತಾ ಇದಾಳೆ. ಮೊದ್ಲೇ ಅವಳಿಗೆ ಕಾಲು ನೋವು,'' ಕಾಫಿ ತಂದುಕೊಟ್ಟ ಮಡದಿ ಪುಷ್ಪಾರನ್ನು ಪ್ರಶ್ನಿಸಿದ ಅಮರ್.
``ಇವತ್ತು ಮಲ್ಲಿಗೆ ಹೂ ಕೊಡೋಳು ಬಂದಿಲ್ಲ. ಅದಕ್ಕೇ ಹೀಗೆ ಓಡಾಡ್ತಾ ಇದಾರೆ,'' ಎಂದರು ಪುಷ್ಪಾ ನಸುನಗುತ್ತಾ.
``ಓಹೋ ಅದಾ ವಿಷ್ಯಾ.....'' ಎಂದು ನಗುತ್ತಾ ಕಾಫಿ ತೆಗೆದುಕೊಂಡು ಕುಡಿಯತೊಡಗಿದರು.
ರೂಮಿನಿಂದ ಹೊರಬಂದ ಮಗ ವಿಶ್ವಾಸ್ ನನ್ನು ನೋಡಿ, ``ವಿಶು, ಸರ್ಕಲ್ ಹತ್ರ ಮಲ್ಲಿಗೆ ಹೂ ಸಿಗುತ್ತಾ ನೋಡ್ಕೊಂಡು ಬಾಪ್ಪಾ.... ಇವತ್ತು ಹೂವಿನವಳು ಬಂದಿಲ್ಲ. ನಿಮ್ಮ ಅಜ್ಜಿ ಹೊರಗೂ ಒಳಗೂ ಓಡಾಡಿ ದಣಿಯುತ್ತಾಳೆ,'' ಎಂದರು ಅಮರ್.
``ಅಜ್ಜಿ.... ಇವತ್ತು ನಿಮ್ಮ ಹೂವಿನ ಹುಡುಗಿ ಬರಲ್ಲ. ಯಾಕೆ ಸುಮ್ನೆ ಆಚೆ ಈಚೆ ಓಡಾಡ್ತೀರಾ.....?'' ಎಂದ ವಿಶ್ವಾಸ್.
``ಇವತ್ತು ಬರಲ್ವಾ..... ಯಾಕೆ....?'' ಮುಗ್ಧವಾಗಿ ಕೇಳುತ್ತಿದ್ದ ಅಜ್ಜಿಯ ಕೆನ್ನೆ ಹಿಂಡುತ್ತಾ, ``ಇವತ್ತು ನಿಮ್ಮ ಹೂವಿನ ಹುಡುಗಿ ಗುಲಾಬಿ ಹೂಗಳನ್ನೆಲ್ಲಾ ತೊಗೊಂಡು ಕಾಲೇಜುಗಳ ಹತ್ರ ಹೋಗಿರ್ತಾಳೆ. ಯಾಕಂದ್ರೆ ಇವತ್ತು ವ್ಯಾಲೆಂಟೈನ್ ಡೇ.....'' ಎಂದ.
``ಎಂಥಾ ಡೇನೋ ಅದು.....'' ಎಂದು ಕೇಳಿದ ಅಜ್ಜಿಗೆ, ``ಇವತ್ತು ಪ್ರೇಮಿಗಳ ದಿನ ಕಣಜ್ಜಿ....'' ಎಂದು ಮೊಮ್ಮಗ ಹೇಳಿದಾಗ ಸುಭದ್ರಮ್ಮನ ಮುಖ ಸಪ್ಪಗಾಯಿತು.
ಅಷ್ಟರಲ್ಲಿ ಒಳ ಬಂದ ಪ್ರೀತಿ, ``ಅಜ್ಜಿ, ಇವತ್ತು ನಿನ್ಮ ತುರುಬಿಗೆ ಮಲ್ಲಿಗೆ ದಂಡೆ ಬದಲು ಸಂಪಿಗೆ ದಂಡೆ ಮುಡಿದುಕೊಳ್ಳಿ,'' ಎನ್ನುತ್ತಾ ನಾಲ್ಕಾರು ಸಂಪಿಗೆ ಸೇರಿಸಿ ಮಾಡಿದ್ದ ಸಂಪಿಗೆ ದಂಡೆಯನ್ನು ಕೊಟ್ಟಳು.
ತಮ್ಮ ಮನೆಯಲ್ಲೇ ಬಿಟ್ಟ ಸಂಪಿಗೆ ಹೂವನ್ನೇ ದಂಡೆ ಮಾಡಿಕೊಟ್ಟ ಸೊಸೆಯ ಕಡೆ ವಾತ್ಸಲ್ಯದ ನೋಟ ಹರಿಸಿದರು ಪುಷ್ಪಾ. ಮಲ್ಲಿಗೆ ಸಿಗಲಿಲ್ಲ ಎಂಬ ಬೇಸರವಿದ್ದರೂ ಮೊಮ್ಮಗನ ಹೆಂಡತಿ ಕೊಟ್ಟ ಸಂಪಿಗೆ ದಂಡನ್ನೇ ತುರುಬಿಗೆ ಏರಿಸಿಕೊಂಡು ಒಳಗೆ ನಡೆದರು.
ಸುಭದ್ರಮ್ಮ ಎಪ್ಪತ್ತಾರು ವರ್ಷದ ಹಿರಿ ಮುತ್ತೈದೆ. ವೆಂಕಟೇಶರಾಯರನ್ನು ಮದುವೆಯಾಗಿ ಬಂದಾಗ ಅವರಿಗೆ ಹನ್ನೆರಡು ವರ್ಷ, ವೆಂಕಟೇಶರಾಯರಿಗೆ ಹದಿನೆಂಟು ವರ್ಷ. ಎಂಟು ಮಕ್ಕಳನ್ನು ಪಡೆದು ತುಂಬು ಜೀವನ ಕಂಡವರು ಈ ದಂಪತಿಗಳು.

ಬೆಳಗ್ಗೆ ಪೂಜೆಗೆ ಕೂರುವಾಗ ತಮ್ಮ ತುರುಬಿನಲ್ಲಿ ಮಲ್ಲಿಗೆ ಮುಡಿಯುವುದು ಸುಭದ್ರಮ್ಮನವರಿಗೆ ಅಂದಿನಿಂದಲೂ ಅಭ್ಯಾಸ. ಮಲ್ಲಿಗೆ ಹೂವೆಂದರೆ ಅವರಿಗೆ ಪ್ರಾಣ.
``ಪುಷ್ಪಾ, ನಾನು ಸ್ನಾನ ಮಾಡಿಕೊಂಡು ಬರ್ತೀನಿ. ನೀನು ಬೇಗ ತಿಂಡಿಗೆ ರೆಡಿ ಮಾಡ್ಬಿಡು,'' ಎನ್ನುತ್ತಾ ಅಮರ್ ಸ್ನಾನಕ್ಕೆ ಹೊರಟರು.
``ಅತ್ತೆ, ಇವತ್ತು ವ್ಯಾಲೆಂಟೈನ್ಸ್ ಡೇ ಪಾರ್ಟಿ ನಮ್ಮ ಫ್ರೆಂಡ್ ರೆಸಾರ್ಟ್ ನಲ್ಲಿ ಇದೆ. ಇವತ್ತು ಆಫೀಸ್ ನಿಂದ ಅಲ್ಲಿಗೇ ಡೈರೆಕ್ಟ್ ಆಗಿ ಹೋಗ್ತೀವಿ. ನಾನು ವಿಶ್ವಾಸ್ ಅಲ್ಲೇ ಉಳಿದುಕೊಂಡು ನಾಳೆ ಬರ್ತೀವಿ,'' ಎಂದಳು ಸೊಸೆ ಪ್ರೀತಿ.





