ಕಥೆ - ವತ್ಸಲಾ ವಿಶ್ವನಾಥ್
''ಹರಿಣಿ ತವರಿನಿಂದ ಹಿಂದಿರುಗಿ ಬಂದಂದಿನಿಂದ ಕೊಂಚ ಬದಲಾಗಿರುವಂತೆ ಉಮೇಶನಿಗೆ ಭಾಸವಾಯಿತು. ಈ ಹಿಂದೆ ಅವನು ಆಫೀಸಿಗೆ ಹೊರಡುವ ಸಮಯದಲ್ಲಿ ಅವನಿಗೆ ಬೇಕಾದ ಎಲ್ಲ ವಸ್ತುಗಳ ಬಗ್ಗೆಯೂ ಗಮನಿಸುತ್ತಿದ್ದಳು. ಅವನ ಬೆಳಗಿನ ತಿಂಡಿ, ಆಫೀಸಿನ ಲಂಚ್ ಬಾಕ್ಸ್, ಮೊಬೈಲ್ ಫೋನ್, ಪರ್ಸ್, ಪೆನ್, ವಾಚ್, ಕರ್ಚೀಫ್ ಎಲ್ಲ ಕೈಗೆಟುಕುವಂತೆ ಇರುತ್ತಿದ್ದವು.
ಸ್ನಾನ ಮಾಡಿ ಹೊರಬರುತ್ತಿದ್ದಂತೆ ಒಗೆದು ಇಸ್ತ್ರೀ ಮಾಡಿದ ಉಡುಪು, ಪಾಲಿಶ್ ಮಾಡಿದ ಬೂಟುಗಳು ಸಿದ್ಧವಾಗಿರುತ್ತಿದ್ದವು. ದಿನ ರುಚಿಯಾದ ಡಿನ್ನರ್, ಭಾನುವಾರದಂದು ಸ್ಪೆಶಲ್ ಲಂಚ್, ಅಚ್ಚುಕಟ್ಟಾದ ಮನೆ, ಕಣ್ಣಿನಲ್ಲಿ ಪ್ರೀತಿಯ ಹೊಳೆ ಹರಿಸುತ್ತಾ ಪತಿಯ ಸೇವೆಯಲ್ಲಿ ಸುಖ ಕಾಣುತ್ತಿದ್ದ ಹರಿಣಿಯ ನಡವಳಿಕೆಯು ಈಗ ಬೇರೆಯದೇ ರೀತಿಯಾಗಿ ಕಂಡುಬರುತ್ತಿತ್ತು.
ಈಚೆಗೆ ಉಮೇಶನಿಗೆ ತನ್ನ ಯಾವವೂ ವಸ್ತು ಕೈಗೆ ಸಿಗುತ್ತಿರಲಿಲ್ಲ. ಹರಿಣಿಯನ್ನು ಕೇಳಿದರೆ, ``ನಿಮ್ಮ ಸಾಮಾನುಗಳನ್ನು ನೀವು ನೋಡಿಕೊಳ್ಳಿ. ನಾನೊಬ್ಬಳೇ ಎಷ್ಟು ಅಂತ ಮಾಡಲಿ,'' ಎಂದು ಎದುರುತ್ತರ ಕೊಡುತ್ತಿದ್ದಳು.
ಉಮೇಶನ ತಲೆಯಲ್ಲಿ ಹುಳು ಕೊರೆಯತೊಡಗಿತು, `ಅವನಿಗೆ ಜ್ವರ ಬಂದಿದೆಯೆಂದು ತಿಳಿದು ಅವನ ಹಳೆಯ ಸೆಕ್ರೆಟರಿ ನೋಡಿ ಹೋಗಲೆಂದು ಮನೆಗೆ ಬಂದಿದ್ದಳು. ಆ ವಿಷಯಕ್ಕಾಗಿ ಹರಿಣಿ ಬೇಸರ ಪಟ್ಟುಕೊಂಡಿರಬಹುದೇ? ಅವಳು ತವರಿನಲ್ಲಿ ಈ ವಿಷಯದ ಕುರಿತು ಮಾತನಾಡಿ ಅವಳ ಅತ್ತಿಗೆ ಅದರ ಬಗ್ಗೆ ಕಿವಿಯೂದಿ ಕಳಿಸಿರಬಹುದೇ? ಅಥವಾ ಈಗ ಆಫೀಸ್ನಲ್ಲಿ ಕೆಲಸ ಹೆಚ್ಚಾಗಿರುವುದರಿಂದ ಅವಳೊಂದಿಗೆ ಹೆಚ್ಚು ಸಮಯ ಕಳೆಯಲಾಗುತ್ತಿಲ್ಲ. ಅದಕ್ಕಾಗಿ ಬೇಸರ ಮಾಡಿಕೊಂಡಿರಬಹುದು. ಮನೆಯಲ್ಲಿ ಒಬ್ಬಳೇ ಇದ್ದು ಅವಳಿಗೆ ಬೋರ್ ಆಗಿರಬೇಕು..... ಇನ್ನೂ ಮಗು ಆಗಿಲ್ಲ. 2-3 ವರ್ಷವಾದ ಮೇಲೆ ಮಗುವಿನ ಪ್ಲಾನ್ ಮಾಡಲು ಇಬ್ಬರೂ ಕೂಡಿಯೇ ತೀರ್ಮಾನಿಸಿದ್ದೆವು. ಕೇಳಿದರೆ ಯಾವುದಕ್ಕೂ ಸರಿಯಾಗಿ ಉತ್ತರವನ್ನೇ ಕೊಡುತ್ತಿಲ್ಲ,' ಉಮೇಶ ಯೋಚಿಸತೊಡಗಿದ.
``ಉಮೇಶ್, ಅಡುಗೆ ಮಾಡಿದ್ದೇನೆ. ನೀವು ಬಡಿಸಿಕೊಂಡು ಊಟ ಮಾಡಿ. ಉಳಿದದ್ದನ್ನು ಫ್ರಿಜ್ನಲ್ಲಿ ಇಟ್ಟುಬಿಡಿ. ನಾನು ಮನೆಗೆ ಬರುವುದು ತಡವಾಗಬಹುದು. ಫ್ರೆಂಡ್ ಮನೆಯಲ್ಲಿ ಕಿಟಿ ಪಾರ್ಟಿ ಇದೆ,'' ಹರಿಣಿ ಭಾವರಹಿತ ದನಿಯಲ್ಲಿ ಹೇಳಿದಳು.
``ಭಾನುವಾರದ ದಿನ ಯಾರು ಕಿಟಿ ಪಾರ್ಟಿ ಮಾಡುತ್ತಾರೆ? ಇದೊಂದು ದಿನ ತಾನೇ ಜೆಂಟ್ಸ್ ಎಲ್ಲ ಮನೆಯಲ್ಲಿರುತ್ತಾರೆ....?''
``ನಾವು ಪ್ರತಿದಿನ ಮನೆಯಲ್ಲಿ ಇರುತ್ತೇವಲ್ಲ. ಅದು ಲೆಕ್ಕ ಇಲ್ಲವೇನು? ಹಾಸಿಗೆ ಮೇಲೆ ನಿನ್ನೆಯಿಂದ ನಿಮ್ಮ ಬಟ್ಟೆಗಳು ಹರಡಿಕೊಂಡು ಬಿದ್ದಿವೆ. ಅವನ್ನೆಲ್ಲ ಎತ್ತಿಟ್ಟುಕೊಳ್ಳಿ. ನಿಮ್ಮ ಕೆಲಸಗಳನ್ನೆಲ್ಲ ನನಗೇ ಯಾಕೆ ಬಿಡುತ್ತೀರಿ ಅಂತ ನನಗೆ ಅರ್ಥವಾಗುವುದಿಲ್ಲ,'' ಎನ್ನುತ್ತಾ ಹರಿಣಿ ಧಡ್ ಎಂದು ಬಾಗಿಲನ್ನು ಮುಚ್ಚಿಕೊಂಡು ಹೊರಟುಹೋದಳು.
ಉಮೇಶ್ ಮೊದಲಿನಿಂದಲೂ ಎಲ್ಲವನ್ನೂ ಹಾಗೆಯೇ ಬಿಟ್ಟಿರುತ್ತಿದ್ದನು... ಆಗೆಲ್ಲ ಹರಿಣಿ ಸಂತೋಷದಿಂದ ಆ ಕೆಲಸಗಳನ್ನೆಲ್ಲ ಮಾಡುತ್ತಿದ್ದಳು. ಈಗ ಈ ರೀತಿ ಕೋಪಿಸಿಕೊಳ್ಳುವಂತಹದನ್ನು ನಾನೇನು ಮಾಡಿದೆ ಎಂದು ಉಮೇಶ್ ಯೋಚಿಸಿದ. ಹೋಗಲಿ, ಇನ್ನು ಮುಂದೆ ಅವಳಿಗೆ ಕೆಲಸದ ಹೊರೆ ಹೆಚ್ಚಿಸುವುದು ಬೇಡ. ನನ್ನ ಕೆಲಸ ನಾನೇ ಮಾಡಿಕೊಳ್ಳುತ್ತೇನೆ. ಹರಿಣಿ ರುಚಿ ರುಚಿಯಾಗಿ ಅಡುಗೆ ಮಾಡುತ್ತಿದ್ದಳು. ಹೀಗಾಗಿ ಉಮೇಶ್ ಹೊರಗೆ ತಿನ್ನುವುದನ್ನೇ ಬಿಟ್ಟುಬಿಟ್ಟಿದ್ದ. ಆದರೆ ಈಗ ಅಡುಗೆಗೆ ಒಮ್ಮೆ ಉಪ್ಪು ಹೆಚ್ಚಾಗಿದ್ದರೆ, ಮತ್ತೊಮ್ಮೆ ಸಪ್ಪೆ ಸಾಂಬಾರ್, ಬೆಂದಿಲ್ಲದ ತರಕಾರಿ, ಸೀದಿರುವ ಚಪಾತಿ..... ಅವಳಿಗೇನಾಗಿದೆ ಎಂದು ಉಮೇಶ್ಅಚ್ಚರಿಗೊಂಡ. ಅವನಿಗೇನೂ ತಿಳಿಯಲಿಲ್ಲ. ಅರ್ಧ ಮನಸ್ಸಿನಿಂದಲೇ ಊಟ ಮಾಡಿದ. ಊಟವಾದ ನಂತರ ಛಾವಣಿಯನ್ನೇ ದಿಟ್ಟಿಸುತ್ತಾ ಮಲಗಿದ್ದವನಿಗೆ ಒಂದು ಆಲೋಚನೆ ಬಂದಿತು, `ದಿನ ಅವಳೇ ಅಡುಗೆ ಮಾಡುತ್ತಾಳೆ. ಇಂದು ಅವಳು ಮನೆಗೆ ಬರುವುದರೊಳಗೆ ವಿಶೇಷವಾದ ಡಿನ್ನರ್ ಸಿದ್ಧಪಡಿಸಿಡುತ್ತೇನೆ.... ಅವಳಿಗೆ ಹಿಂದಿ ಸಿನಿಮಾ ಎಂದರೆ ಬಲು ಇಷ್ಟ. ನೈಟ್ ಶೋಗೆ ಟಿಕೆಟ್ಬುಕ್ ಮಾಡುತ್ತೇನೆ,' ಎಂದುಕೊಂಡು ಕೂಡಲೇ ಎದ್ದು ಆನ್ಲೈನ್ ಟಿಕೆಟ್ ಬುಕ್ ಮಾಡಿದ. ಇಬ್ಬರಿಗೂ ಇಷ್ಟವಾದ ಅಡುಗೆ ತಯಾರಿಸಿದ.