ಕಥೆ – ಕರುಣಾ ಶರ್ಮ

ಎದುರಿನ ಬಂಗಲೆಯಲ್ಲಿ ಸುಣ್ಣಬಣ್ಣದ ಕೆಲಸ ನಡೆಯುತ್ತಿತ್ತು. ಎಷ್ಟೋ ವರ್ಷಗಳಿಂದ ಅದರ ಬಾಗಿಲಿಗೆ ಬೀಗ ಜಡಿಯಲ್ಪಟ್ಟಿತ್ತು. ಅಲ್ಲಿ ಯಾರೂ ಸುಳಿದಾಡದ ಕಾರಣ ಮನೆಯ ಸುತ್ತಲೂ ಗಿಡ ಮರ ಬಳ್ಳಿಗಳು ಯಥೇಚ್ಛವಾಗಿ ಬೆಳೆದು ಬಂಗಲೆಯನ್ನೇ ಅರ್ಧ ಭಾಗದಷ್ಟು ಮರೆ ಮಾಡಿ, ಅದೊಂದು ಭೂತ ಬಂಗಲೆಯಂತೆ ತೋರಿಬರುತ್ತಿತ್ತು. ಅಷ್ಟು ವರ್ಷಗಳ ಮಳೆಗಾಳಿಗಳನ್ನು ಎದುರಿಸಿ ನಿಂತ ಅದರ ಗೋಡೆಗಳು ಕಪ್ಪು ಬಣ್ಣಕ್ಕೆ ತಿರುಗಿದ್ದವು. ಕಿಟಕಿ ಬಾಗಿಲುಗಳೆಲ್ಲ ಬಣ್ಣಗೆಟ್ಟು ಮಾಸಲಾಗಿದ್ದರೂ, ಅವುಗಳ ಕೊಠಡಿಗಳು ಮಾತ್ರ ಭದ್ರವಾಗಿ ಕೊಂಡಿಗಳು ಅವುಗಳನ್ನು ಹಿಡಿದಿಟ್ಟಿದ್ದವು.

ತಾರಿಣಿಗೆ ಕುತೂಹಲವಾಗತೊಡಗಿತು. ಈ ಮನೆಗೆ ವಾಸಿಸಲು ಬರುತ್ತಿರುವವರು ಯಾರಿರಬಹುದು? ಅವರು ಮನೆಯನ್ನು ಕೊಂಡುಕೊಂಡಿರಬಹುದು. ಇಷ್ಟು ದೊಡ್ಡ ಬಂಗಲೆಯನ್ನು ಕೊಂಡಿರುವವರು ಯಾರು? ಈಗಂತೂ ಜನರು ಫ್ಲಾಟ್‌ಗಳಲ್ಲಿ ವಾಸಿಸಲು ಹೆಚ್ಚು ಬಯಸುತ್ತಿದ್ದಾರೆ. ಈ ಬಂಗಲೆಯನ್ನು ಕೊಂಡಿರುವವರು ಸಾಮಾನ್ಯ ವ್ಯಕ್ತಿಯಾಗಿರಲಾರರು. ತನ್ನ ಮನೆಯ ಮುಂದಿನ ಮೆಟ್ಟಿಲ ಮೇಲೆ ಕುಳಿತು ತಾರಿಣಿ, ಎದುರಿನ ಬಂಗಲೆಯಲ್ಲಿ ನಡೆಯುತ್ತಿರುವ ಚಟುವಟಿಕೆಯನ್ನು ಗಮನಿಸುತ್ತಾ ಆ ಬಗ್ಗೆಯೇ ಯೋಚಿಸುತ್ತಿದ್ದಳು.

ಆಗ ಒಬ್ಬ ಯುವಕ ಕಾರಿನಿಂದಿಳಿದು, ಆ ಬಂಗಲೆಯತ್ತ ನಡೆದು, ಅಲ್ಲಿದ್ದ ಕೆಲಸಗಾರರಿಗೆ ಪೇಂಟಿಂಗ್‌ ಬಗ್ಗೆ ಮತ್ತು ಗಿಡಗಂಟಿಗಳನ್ನು ಸ್ವಚ್ಛಗೊಳಿಸುವ ಬಗ್ಗೆ ನಿರ್ದೇಶನ ನೀಡತೊಡಗಿದ. ತಾರಿಣಿ, `ಇಂತಹ ಹಳೆಯ ಬಂಗಲೆ ಕೊಳ್ಳುವುದರಲ್ಲಿ ಇವನ ಆಸಕ್ತಿ ಅಥವಾ ಯೋಜನೆ ಏನಿರಬಹುದು, ಯಾರ ಯಾರ ಇಷ್ಟ ಹೇಗಿರುತ್ತದೋ ಯಾರಿಗೆ ಗೊತ್ತು,’ ಎಂದು ಭಾವಿಸಿದಳು.

“ಎಕ್ಸ್ ಕ್ಯೂಸ್‌  ಮಿ,” ಆ ಯುವಕ ತಾರಿಣಿಯ ಮನೆಯ ಗೇಟ್‌ ಮುಂದೆಯೇ ಬಂದು ನಿಂತಿದ್ದ.

ಭಾವಲೋಕದಲ್ಲಿದ್ದ ತಾರಿಣಿಗೆ ಮನೆಯಿಂದ ಅನತಿ ದೂರದಲ್ಲಿದ್ದ ಗೇಟ್‌ನಿಂದ ಅವನು ಮಾತನಾಡಿದ್ದು ಕೂಡಲೇ ಗ್ರಹಣವಾಗಲಿಲ್ಲ. ಅವಳು ಕೊಂಚ ಬೆಚ್ಚಿ, ಪೆಚ್ಚಾಗಿ ಅವನನ್ನೇ ನೋಡಿದಳು.“ಹಲೋ ಆಂಟಿ,” ಆ ಯುವಕ ಅವಳ ಗಮನವನ್ನು ತನ್ನತ್ತ ಸೆಳೆಯಲು ಪ್ರಯತ್ನಿಸಿದ.

ಆಂಟಿ ಎನ್ನುವ ಪದ ಅವಳಿಗೆ ವಿಚಿತ್ರವೆನಿಸಿತು. `ನಾನು ಆಂಟಿ ಎಂದು ಕರೆಸಿಕೊಳ್ಳುವಂತೆ ಇದ್ದೇನೆಯೇ? ನನ್ನ ವಯಸ್ಸೇನೋ 50 ಆಯಿತು. ಆದರೆ 35 ವರ್ಷಕ್ಕಿಂತ ಹೆಚ್ಚಾಗಿರುವಂತೆ ತೋರುವುದಿಲ್ಲವಲ್ಲ. ಒಂದೆರಡು ಬಿಳಿ ಕೂದಲು ಬಂದಿರುವುದೇನೋ ನಿಜ. ಈಗ ಹದಿ ವಯಸ್ಸಿನವರಿಗೂ ಬಿಳಿ ಕೂದಲು ಇರುತ್ತದೆ.’

ತಾರಿಣಿ ತನ್ನ ಯೋಚನೆಗಳನ್ನು ಅಡಗಿಸಿಕೊಂಡು ಗೇಟಿನತ್ತ ನಡೆದಳು.

ಯುವಕ ವಿನಯವಾಗಿ ತನ್ನ ಪರಿಚಯ ಹೇಳಿಕೊಂಡು, “ನನ್ನ ಹೆಸರು ಅಂಜನ್‌ಕುಮಾರ್‌. ಈ ಮನೆಯ ರಿಪೇರಿ ಕೆಲಸ ಮಾಡಿಸುತ್ತಿದ್ದೇವೆ. ಕೆಲಸಕ್ಕೆ ನೀರು ಬೇಕಾಗಿದೆ. ನೀರಿನ ಕನೆಕ್ಷನ್‌ ನಾಳೆ ಕೊಡುತ್ತಾರಂತೆ. ಅಲ್ಲಿಯವರೆಗೆ ನೀರಿಲ್ಲದೆ ತೊಂದರೆಯಾಗುತ್ತಿದೆ.”

“ಆಗಲಿ, ನೀರು ಕೊಡೋಣ,” ಎನ್ನುತ್ತಾ  ತಾರಿಣಿ ತನ್ನ ತೋಟದ ಮಾಲಿಯನ್ನು ಕರೆದಳು, “ಮುಂದೆ ಇರುವ ನಲ್ಲಿಗೆ ಪೈಪ್‌ಸೇರಿಸಿ ಎದುರು ಮನೆ ಕೆಲಸಕ್ಕೆ ನೀರು ಕೊಡು,” ಎಂದು ಮಾಲಿಗೆ ಹೇಳಿ ಅಂಜನ್‌ನನ್ನು ಒಳಗೆ ಕರೆದಳು, “ಬನ್ನಿ, ನೀವು ಸ್ವಲ್ಪ ಕಾಫಿ ಕುಡಿದು ಹೋಗಬಹುದು.”

ತಾರಿಣಿ ಇತ್ತ ತಿಂಡಿ ಕಾಫಿ ಸೇವಿಸುತ್ತಾ ಅಂಜನ್‌ ತಮ್ಮ ಕುಟುಂಬದ ಬಗ್ಗೆ ವಿವರವಾಗಿ ಹೇಳಿ ತಾರಿಣಿಯ ಕುತೂಹಲವನ್ನು ತಣಿಸಿದ. ಅದು ಅಂಜನ್‌ ಕುಮಾರ್‌ನ ತಾತನ ಕಾಲದ ಬಂಗಲೆ. ಅವನ ತಂದೆ ಅರವಿಂದರು ಉದ್ಯೋಗ ನಿಮಿತ್ತ ನೈರೋಬಿಗೆ ಹೋಗಿ ಅಲ್ಲಿಯೇ ನೆಲೆಸಿದ್ದರು. ಈಗ ಮಗಳಿಗೆ ಇಲ್ಲಿಯ ಉದ್ಯೋಗಪತಿಯೊಬ್ಬರ ಮೊಮ್ಮಗನೊಡನೆ ಮದುವೆ ನಿಶ್ಚಯವಾಗಿರುವುದರಿಂದ ಈ ವಿಶಾಲವಾದ ಪಿತ್ರಾರ್ಜಿತ ಬಂಗಲೆಯಲ್ಲಿ ಕಾರ್ಯ ನಡೆಸಲು ಉತ್ಸುಕರಾಗಿದ್ದಾರೆ. ಅದಕ್ಕಾಗಿಯೇ ರಿಪೇರಿ ಕೆಲಸ ಮತ್ತು ಪೇಂಟಿಂಗ್‌ ನಡೆಯುತ್ತಿದೆ.

“ಮದುವೆ ಯಾವಾಗ?” ತಾರಿಣಿ ಕೇಳಿದಳು.

“ಮುಂದಿನ ತಿಂಗಳು 25ನೇ ತಾರೀಖು. ಹೆಚ್ಚು ಸಮಯವಿಲ್ಲ. ಅದಕ್ಕೇ ಬೇಗ ಬೇಗ ಕೆಲಸ ನಡೆಯುತ್ತಿದೆ. ಇದನ್ನು ನೋಡಿಕೊಳ್ಳುವುದಕ್ಕೇ ಅಂತಲೇ ನನ್ನನ್ನು ಕಳುಹಿಸಿದ್ದಾರೆ.”

ಅಂಜನ್‌ ಹೋದ ನಂತರ ತಾರಿಣಿ ಕನ್ನಡಿಯ ಮುಂದೆ ನಿಂತಳು. ತಾನು ಆಂಟಿ ಹಾಗೆ ಕಾಣುತ್ತಿರುವೆನೇನು ಎಂದು ತನ್ನನ್ನು ನೋಡಿಕೊಂಡಳು. ತಲೆಯಲ್ಲಿ ಬೆಳ್ಳಿಯ ಎಳೆಗಳು ಕಾಣಿಸಿದರೂ ಅವಳ ಸೌಂದರ್ಯಕ್ಕೇನೂ ಕೊರತೆ ಇರಲಿಲ್ಲ.

ತಾರಿಣಿ ಮನೆಯಲ್ಲಿ ಒಬ್ಬಳೇ ವಾಸಿಸುತ್ತಿದ್ದಳು. ಅಕ್ಕಪಕ್ಕದವರಿಗೆಲ್ಲ ಅವಳು ಪರಿಚಿತಳಾಗಿದ್ದಳು. ಅವಳು ಅವಿವಾಹಿತೆ ಎಂದು ಅವರಿಗೆಲ್ಲ ಗೊತ್ತು. ಆ ಬಗ್ಗೆ ಅವರು ತಮ್ಮ ತಮ್ಮಲೇ ಚರ್ಚಿಸುತ್ತಿದ್ದುದೂ ಉಂಟು. ಆದರೆ ಅದಕ್ಕೆ ಕಾರಣವೇನೆಂದು ಅವರಾರಿಗೂ ತಿಳಿದಿರಲಿಲ್ಲ.

ತಾರಿಣಿಗೆ ತಾನು ಜೀವನವಿಡೀ ಕುಮಾರಿಯಾಗಿ ಉಳಿದಿರುವುದಕ್ಕೆ ಕಾರಣವೇನೆಂದು ಗೊತ್ತು. ಆದರೆ ತಪ್ಪು ಯಾರದು? ಹಣೆಬರಹವೇ ಅಥವಾ ಮನೆಯವರೋ ಅಥವಾ ಸ್ವತಃ ತಾನೋ? ಬಹುಶಃ ಅವಳೇ ದೋಷಿ ಎನ್ನಬಹುದು. ಅವಳ ಮದುವೆ ನಡೆದಿದ್ದರೆ, ಇಷ್ಟು ಹೊತ್ತಿಗೆ ಅವಳಿಗೂ ಅಂಜನ್‌ನಂತಹ ಒಬ್ಬ ಮಗ ಇದ್ದಿರಬಹುದಾಗಿತ್ತು. ಒಂದು ದೀರ್ಘವಾದ ಉಸಿರೆಳೆದುಕೊಂಡು ಅವಳು ಬಡಬಡಿಸಿದಳು, “ಎಲ್ಲಿದ್ದೀರಿ ಪ್ರವೀಣ್‌? ನಿಮಗೆ ನನ್ನ ನೆನಪು ಇದೆಯೋ ಅಥವಾ ಮರೆತುಬಿಟ್ಟಿರುವಿರೋ?”

“ತಾರಾ, ಸಾಯಂಕಾಲ ಕ್ಲಾಸ್‌ ಮುಗಿದ ಮೇಲೆ ಸಿಗೋಣ,” ಪ್ರವೀಣ್‌ ಅವಳನ್ನು ತಾರಾ ಎಂದು ಕರೆಯುತ್ತಿದ್ದ.

“ಆದರೆ ನನಗೆ ಕಡೆಯಲ್ಲಿ ಪ್ರಾಕ್ಟಿಕಲ್ ಕ್ಲಾಸ್‌ ಇದೆ. ಕ್ಲಾಸ್‌ ಮುಗಿದ ಕೂಡಲೇ ಮನೆಗೆ ಹೋಗದಿದ್ದರೆ, ಅಮ್ಮನಿಗೆ ಕೋಪ ಬರುತ್ತದೆ ಅಂತ ನಿಮಗೂ ಗೊತ್ತಲ್ಲ.”

ಅವಳ ಕಷ್ಟದ ಬಗ್ಗೆ ಅರಿವಿದ್ದರೂ ಅವಳನ್ನು ಭೇಟಿ ಮಾಡದೆ ಇರಲಾರದ ಪ್ರವೀಣ್‌, “ಗೊತ್ತು. ಆದರೆ ನಾನು ಕಾಯುತ್ತಾ ಇರುತ್ತೇನೆ ಅನ್ನುವುದು ನಿನಗೂ ಗೊತ್ತಲ್ಲ,” ಎಂದು ಹೇಳಿ ಹೊರಟುಹೋದ.

ತನ್ನ ಬಗ್ಗೆ ಇರುವ ಪ್ರವೀಣನ ಆಸಕ್ತಿಯನ್ನು ಅರಿತಿದ್ದ ತಾರಿಣಿಯ ಮನ ಮುದಗೊಂಡಿತು.

ತಾರಿಣಿ ಎಂಎಸ್ಸಿ ಎರಡನೇ ವರ್ಷದ ವಿದ್ಯಾರ್ಥಿನಿ. ಪ್ರವೀಣ್‌ ಅದೇ ವಿಭಾಗದಲ್ಲಿ ರಿಸರ್ಚ್‌ ಮಾಡುತ್ತಿದ್ದ. ಅವಳಿಗಿಂತ ಎರಡು ವರ್ಷ ಸೀನಿಯರ್‌ ಆಗಿದ್ದ. ಅವಳ ಸೆಮಿನಾರ್‌ನಲ್ಲಿ  ಸಹಾಯ ಮಾಡುತ್ತಿದ್ದ. ಪ್ರೊಫೆಸರ್‌ ಲ್ಯಾಬ್‌ಗೆ ಬಂದಿಲ್ಲದ ದಿವಸಗಳಲ್ಲಿ ಅವನೇ ಪ್ರಾಕ್ಟಿಕಲ್ಸ್ ಕ್ಲಾಸ್‌ ಸಹ ತೆಗೆದುಕೊಳ್ಳುತ್ತಿದ್ದ.

ಪ್ರವೀಣನ ಮೃದು ವ್ಯಕ್ತಿತ್ವದಿಂದ ತಾರಿಣಿ ಆಕರ್ಷಿತಳಾಗಿದ್ದಳು. ಪ್ರವೀಣ್‌ ಸಹ ಯಾವುದೋ ಒಂದು ಅವ್ಯಕ್ತ ಭಾವನೆಯಿಂದ ಅವಳೆಡೆಗೆ ಸೆಳೆಯಲ್ಪಟ್ಟಿದ್ದ. ಅವಳ ನಸುಗೆಂಪು ಛಾಯೆ, ಹಾರಾಡುವ ಗುಂಗುರು ಕೂದಲು ಎಲ್ಲ ಅವನನ್ನು ಮೋಹಗೊಳಿಸಿದ್ದವು. ಇಬ್ಬರೂ ತಮ್ಮ ಪ್ರೀತಿಯನ್ನು ಪರಸ್ಪರ ವ್ಯಕ್ತಪಡಿಸಿರಲಿಲ್ಲ. ಇತರರ ಎದುರಿಗಂತೂ ಪ್ರಕಟಪಡಿಸಿರಲೇ ಇಲ್ಲ. ಆದರೂ ಅವರ ಡಿಪಾರ್ಟ್‌ಮೆಂಟ್‌ನಲ್ಲಿ ಎಲ್ಲರಿಗೂ ಆ ಬಗ್ಗೆ ತಿಳಿದಿತ್ತು. `ಪ್ರೀತಿಯನ್ನು ಮುಚ್ಚಿಡಲು ಆಗುವುದಿಲ್ಲ,’ ಎಂದು ಹೇಳುತ್ತಾ ಇಬ್ಬರನ್ನೂ ರೇಗಿಸುತ್ತಿದ್ದರು.

“ತಾರಾ, ಪ್ರವೀಣ್‌ ಯಾರು? ನಿಜ ಹೇಳು, ಶುಭಾ ಏಕೆ ಅವನ ಹೆಸರು ಹೇಳಿ ನಿನ್ನನ್ನು ರೇಗಿಸುತ್ತಾಳೆ?” ತಾರಿಣಿಯ ತಂದೆ ತಾಯಿಯರು ಕೊಂಚ ಸಂಶಯದಿಂದ ಅವಳನ್ನು ಪ್ರಶ್ನಿಸಿದರು.

“ಏನಿಲ್ಲ ಅಮ್ಮಾ,  ಅವರು ನನ್ನ ಸೀನಿಯರ್‌ ಅಷ್ಟೆ. ಸೆಮಿನಾರ್‌ನಲ್ಲಿ ಮತ್ತು ಪ್ರಾಕ್ಟಿಕಲ್ಸ್ ನಲ್ಲಿ ಸಹಾಯ ಮಾಡುತ್ತಾರೆ,” ತಾರಿಣಿ ತಾಯಿಯ ಅನುಮಾನವನ್ನು ನಿವಾರಿಸಲು ಪ್ರಯತ್ನಿಸಿದಳು.

“ಇಷ್ಟೇ ಆದರೆ ಸರಿ. ಇನ್ನೂ ಮುಂದುವರಿಯುವುದಕ್ಕೆ ಆಸ್ಪದ ಕೊಡಬೇಡ ತಿಳಿಯಿತಾ?” ತಾಯಿ ಅವಳಿಗೆ ತಾಕೀತು ಮಾಡಿದರು.

`ನಿಜವಾಗಲೂ ಇಷ್ಟೇ ಏನು..?’ ತಾರಿಣಿಯ ಮನಸ್ಸು ಅವಳನ್ನೇ ಪ್ರಶ್ನಿಸಿತು.

`ಇಲ್ಲ… ಇಲ್ಲ… ಇದಕ್ಕಿಂತಲೂ ಹೆಚ್ಚಿನ ವಿಷಯ ಇದೆ. ಕನ್ನಡಿಯಲ್ಲಿ ಮುಖ ನೋಡಿಕೊ, ಅವನನ್ನು ನೋಡಿದ ಕೂಡಲೇ ನಿನ್ನ ಮುಖ ಎಷ್ಟು ಕೆಂಪಾಗುತ್ತದೆ. ಮತ್ತೆ ನೀನು ಸದಾ ಅವನ ನಿರೀಕ್ಷೆಯಲ್ಲೇ ಇರುತ್ತೀಯ. ಪ್ರವೀಣ್‌ ಸಹ ಯಾವಾಗಲೂ ನಿನಗಾಗಿ ಕಾತರಿಸುತ್ತಾನೆ. ಇದು ಪ್ರೀತಿಯಲ್ಲದೆ ಮತ್ತೇನು?’ ಮನಸ್ಸು ತಾರಿಣಿಯನ್ನು ಅಣಕಿಸಿತು.

ಆ ಒಳಗುಟ್ಟು ಹೊರಬರಲು ಹೆಚ್ಚು ಕಾಲ ಹಿಡಿಯಲಿಲ್ಲ. ಒಂದು ದಿನ ತಾರಿಣಿ ಕಾಲೇಜ್‌ ಲೈಬ್ರರಿಯಲ್ಲಿ ಬೀರುವಿನ ಬಳಿ ತನಗೆ ಬೇಕಾದ ಪುಸ್ತಕ ಹುಡುಕುತ್ತಿದ್ದಳು. ಹಿಂದಿನಿಂದ ಪ್ರವೀಣನ ಧ್ವನಿ ಕೇಳಿ ಬೆಚ್ಚಿದಳು.“ಅರೆ… ನೀವಾ? ಏನು ವಿಷಯ?”

“ಮುಖ್ಯವಾದ ವಿಷಯ ಇದೆ. ನಿನ್ನ ಜೀವನದಲ್ಲಿ ನನಗೆ ಯಾವ ಸ್ಥಾನ ಕೊಟ್ಟಿದ್ದೀಯಾ?” ಪ್ರವೀಣ್‌ ಬಾಗಿ ಪಿಸುಗುಟ್ಟಿದ.

“ಅದನ್ನು ಬಾಯಿಬಿಟ್ಟು ಹೇಳಬೇಕೇನು? ನೀವಿಲ್ಲದೆ ನನಗೆ ಅಸ್ತಿತ್ವವೇ ಇಲ್ಲ. ಪ್ರವೀಣ್‌ ಇದ್ದರೆ ತಾರಿಣಿ ಇರುತ್ತಾಳೆ. ಮರಕ್ಕೆ ಹಬ್ಬಿರುವ ಬಳ್ಳಿ ತನಗೂ ಮರಕ್ಕೂ ಯಾವ ಬಂಧವಿದೆ ಎನ್ನುವುದನ್ನು ಬಿಡಿಸಿ ಹೇಳಬೇಕೇನು?” ತಾರಿಣಿ ಯಾವುದೋ ಭಾವದಲ್ಲಿ ಹೇಳಿಬಿಟ್ಟಳು. ಕೂಡಲೇ ನಾಲಿಗೆ ಕಚ್ಚಿಕೊಂಡಳು. `ನಾನು ಇದೇನು ಮಾತನಾಡಿಬಿಟ್ಟೆ. ಪ್ರವೀಣ್‌ ಖಂಡಿತ ನಾಚಿಕೆ ಇಲ್ಲದ ಹುಡುಗಿ ಎಂದುಕೊಂಡಿರುತ್ತಾರೆ,’ ಎಂದುಕೊಂಡಳು.

“ಹೇಳು, ಯಾಕೆ ಸುಮ್ಮನಾಗಿಬಿಟ್ಟೆ? ನಿನ್ನ ಮನಸ್ಸಿನಲ್ಲಿರುವುದು ನಿನ್ನ ಬಾಯಿಂದ ಹೊರ ಬಂತು. ಈ ವಿಷಯದಲ್ಲಿ ನನಗೆ ನಂಬಿಕೆ ಇತ್ತು. ಆದರೆ ಅದನ್ನು ನಿನ್ನ ಬಾಯಲ್ಲಿ ಕೇಳಬೇಕು ಅನ್ನುವ ಇಷ್ಟ ಇತ್ತು,” ಎನ್ನುತ್ತಾ ಪ್ರವೀಣ್‌ಅವಳನ್ನು ತನ್ನ ಬಲಿಷ್ಠ ಬಾಹುಗಳಿಂದ ಬಂಧಿಸಿದ. ಅವಳ ತುಟಿಗಳ ಮೇಲೆ ತನ್ನ ಪ್ರೀತಿಯ ಮುದ್ರೆಯೊತ್ತಿದ.

ತಾರಿಣಿ ಲಜ್ಜೆಯಿಂದ ಕೆಂಪಾದಳು. ಮೆಲ್ಲನೆ ಅವನಿಂದ ಬಿಡಿಸಿಕೊಂಡು ಅಲ್ಲಿಂದ ಓಡಿದಳು.

ಇಬ್ಬರ ಪ್ರೀತಿಯ ಹೊಳೆ ಉಕ್ಕೇರತೊಡಗಿತು. ಸಹಪಾಠಿಗಳು ಅವರನ್ನು `ಮೇಡ್‌ ಫಾರ್‌ ಈಚ್‌ ಅದರ್‌’ ಎಂದು ಪ್ರಶಂಸಿಸಿದರು. ತಾರಿಣಿಯ ತಂದೆ ತಾಯಿಯರು ವಿಷಯನ್ನು ಅರ್ಥ ಮಾಡಿಕೊಂಡು ಇಬ್ಬರ ಮದುವೆ ಮಾಡುವುದೇ ಸೂಕ್ತವೆಂದು ಭಾವಿಸಿದರು. ಪ್ರವೀಣನ ರಿಸರ್ಚ್‌ ಮುಗಿದು ಅವನಿಗೆ ಚೆನ್ನೈನ ವಿಶ್ವವಿದ್ಯಾಲಯದಲ್ಲಿ ಅಸಿಸ್ಟೆಂಟ್‌ ಪ್ರೊಫೆಸರ್‌ ಹುದ್ದೆ ದೊರೆಯಿತು. ಅವನೂ ವಿವಾಹಕ್ಕೆ ಸಿದ್ಧನಾಗಿದ್ದ. ತಾರಿಣಿಯ ಕೋರ್ಸ್‌ ಸಹ ಕೊನೆಯ ಹಂತದಲ್ಲಿತ್ತು. ಅವಳಿಗೆ ಸಂತೋಷದಿಂದ ಕುಣಿಯುವಂತಾಯಿತು.

ಎರಡು ಮನೆಯವರೂ ಮದುವೆಯ ಮಾತುಕತೆ ನಡೆಸಲು ಮುಂದಾದಾಗ ಪದ್ಧತಿಯಂತೆ ಇಬ್ಬರ ಜಾತಕ ಹೊಂದಾಣಿಕೆ ನೋಡಿಸಲು ಜೋಯಿಸರ ಬಳಿ ಹೋದರು. ತಾರಿಣಿಯ ಜಾತಕ ಅಮಂಗಳಕರವೆಂದು ಹೇಳಿದ ಜೋಯಿಸರು ಈ ಮದುವೆಯಿಂದ ಹುಡುಗನಿಗೆ ಪ್ರಾಣಾಪಾಯವಾಗುವುದೆಂದು ಸೂಚಿಸಿದರು. ಅದನ್ನು ತಿಳಿದ ಪ್ರವೀಣನ ಅಜ್ಜಿ ಈ ಮದುವೆ ಖಂಡಿತ ನಡೆಯಕೂಡದು ಎಂದುಬಿಟ್ಟರು. ಏಕೆಂದರೆ ಪ್ರವೀಣ್‌ ಅವರಿಗಿದ್ದ ಒಬ್ಬನೇ ಮೊಮ್ಮಗ. ಅವರ ವಂಶದ ವಾರಸುದಾರ.

ತಾರಿಣಿಯ ತಂದೆತಾಯಿಯರಿಗೆ ಜಾತಕ, ಕುಂಡಲಿಗಳಲ್ಲಿ ನಂಬಿಕೆ ಇರಲಿಲ್ಲ. ಅವರ ಪ್ರಕಾರ, ಅದೆಲ್ಲ ಮೂಢನಂಬಿಕೆ, ಜೋಯಿಸರು ತಮ್ಮ ಸಂಪಾದನೆಗಾಗಿ ರೂಪಿಸಿರುವ ತಂತ್ರ, ಪ್ರವೀಣ ಆಧುನಿಕ ಕಾಲದ ವಿದ್ಯಾಂತ ಯುವಕ. ಅವನ ಮನಸ್ಸಿನಲ್ಲಿ ತಾರಿಣಿಯ ಹೊರತು ಬೇರಾರಿಗೂ ಎಡೆಯಿಲ್ಲ. ತನ್ನ ಪ್ರೀತಿಯ ಹುಡುಗಿ ಸಿಗದಿದ್ದರೆ ತಾನೆಂದೂ ಮದುವೆಯಾಗುವುದೇ ಇಲ್ಲ ಎಂದು ಅವನು ಹಠಹಿಡಿದ.

ತಾರಿಣಿಗೆ ಈ ವಿಷಯವೆಲ್ಲ ತಿಳಿದಾಗ ಅವಳು ಮದುವೆಯಾಗಲು ಹಿಮ್ಮೆಟ್ಟಿದಳು, “ಈ ಮದುವೆಯಿಂದ ನಿಮ್ಮ ಪ್ರಾಣಕ್ಕೆ ಅಪಾಯವಿರುವುದಾದರೆ ಅಂತಹ ಮದುವೆಯನ್ನು ನಾನು ಖಂಡಿತ ಒಪ್ಪಲಾರೆ. ನನಗೆ ನಿಮ್ಮನ್ನು ಪಡೆಯುವುದು ಮುಖ್ಯವಲ್ಲ. ನಿಮ್ಮೊಡನೆ ಜೀವನವಿಡೀ ಬಾಳಬೇಕೆಂಬುದು ನನ್ನ ಬಯಕೆ. ನಿಮಗೇನಾದರೂ ಆದರೆ, ನೀವಿಲ್ಲದೆ ನಾನು ಹೇಗಿರಲಿ?” ಎಂದು ಅವಳು ಪ್ರವೀಣನಿಗೆ ಹೇಳಿದಳು.

ಅವಳ ಮಾತು ಕೇಳಿ ಪ್ರವೀಣ್‌ ಆಶ್ಚರ್ಯಗೊಂಡು, “ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿರುವಾಗ ಈ ಹಳೆ ಕಾಲದ ನಂಬಿಕೆಗಳ ಭಯದಿಂದ ನೀನು ಹೆಜ್ಜೆಯನ್ನು ಹಿಂದೆ ಇಡುತ್ತೀಯೇನು? ನೀನು ಕಾಲೇಜ್‌ನಲ್ಲಿ ಮೂಢನಂಬಿಕೆಯನ್ನು ಒಪ್ಪುವುದನ್ನು ಕಲಿತೆಯಾ? ಬಿ ಲಾಜಿಕ್‌,” ಎಂದು ಹೇಳಿದ.

ತಾರಿಣಿ ಉತ್ತರ ಕೊಡಲಿಲ್ಲ. ಪ್ರವೀಣ್‌ ಅವಳ ಎಡಗೈಯನ್ನು ಹಿಡಿದು ತನ್ನ ಹೆಸರಿದ್ದ ವಜ್ರದುಂಗುರವನ್ನು ಬೆರಳಿಗೆ ತೊಡಿಸಿದ.

“ತಾರಾ, ಇದು ನಮ್ಮ ನಿಶ್ಚಿತಾರ್ಥದ ಸಂಕೇತದ ಉಂಗುರ. ನಾನು ನಿನ್ನ ಒಪ್ಪಿಗೆಯ ನಿರೀಕ್ಷೆಯಲ್ಲಿಯೇ ಇರುತ್ತೇನೆ,” ಎಂದು ಹೇಳಿ ಪ್ರವೀಣ್‌ ಹೊರಟುಹೋದ.

ಅಂದಿನಿಂದ ತಾರಿಣಿ ಅವನನ್ನು ಭೇಟಿ ಮಾಡುವುದನ್ನು ಕಡಿಮೆ ಮಾಡಿದಳು. ಅವನ ಪ್ರೀತಿಗೆ ಸೋತು, ಅವನ ಮಾತನ್ನು ಒಪ್ಪಿಬಿಡಬಹುದೆಂಬ ಭಯ ಅವಳಿಗೆ. ಪ್ರವೀಣ್‌ ಸಹ ಮೌನವಾಗಿದ್ದುಕೊಂಡು ಅವಳ ಒಪ್ಪಿಗೆಗಾಗಿ ಕಾಯುತ್ತಿದ್ದ. ಈ ಮಧ್ಯೆ ತಾರಿಣಿಯ ಪರೀಕ್ಷಾ ಫಲಿತಾಂಶ ದೊರೆತು ಅವಳಿಗೆ ಅಲ್ಲೇ ಒಂದು ಕಾಲೇಜಿನಲ್ಲಿ ಲೆಕ್ಚರರ್‌ ಕೆಲಸ ದೊರೆಯಿತು. ಅವಳು ತನ್ನ ಶಿಕ್ಷಕ ವೃತ್ತಿಯ ಕೆಲಸದಲ್ಲಿ ಮಗ್ನಳಾದಳು.

ಪ್ರವೀಣನಿಗೆ ಕೆನಡಾದ ಯೂನಿವರ್ಸಿಟಿಯೊಂದರಲ್ಲಿ ಫೆಲೊಶಿಪ್‌ ದೊರೆತು, ಅಲ್ಲಿಗೆ ಹೊರಟುಹೋದ. ಇಬ್ಬರೂ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಕ್ರಮೇಣ ಅದೂ ಕಡಿಮೆಯಾಗುತ್ತಾ ಬಂದಿತು.

ಒಂದು ದಿನ ತಾರಿಣಿಯ ಗೆಳತಿ ಶುಭಾ ಒಂದು ಸುದ್ದಿ ಕೊಟ್ಟಳು. ಅವಳು ಪ್ರವೀಣನ ಚಿಕ್ಕಪ್ಪನ ಮಗಳು. “ಮೃತ್ಯುಶಯ್ಯೆಯಲ್ಲಿರುವ ನಮ್ಮ ಅಜ್ಜಿ ಪ್ರವೀಣನ ಮದುವೆ ನೋಡಬೇಕೆಂದು ಆಗ್ರಹ ಮಾಡಿದರು. ಅಜ್ಜಿಯ ಆಸೆಯನ್ನು ಪೂರೈಸುವುದಕ್ಕಾಗಿ ಪ್ರವೀಣ್‌ ಮದುವೆಗೆ ಒಪ್ಪಿದ್ದಾನೆ,” ಎಂದು ಶುಭಾ ಹೇಳಿದಳು.

ಕಣ್ಣೀರನ್ನು ಕಷ್ಟಪಟ್ಟು ತಡೆಯುತ್ತಾ ತಾರಿಣಿ ಪ್ರವೀಣ್‌ ತೊಡಿಸಿದ್ದ ಉಂಗುರವನ್ನು ಬಿಗಿಯಾಗಿ ಅದುಮಿ ಹಿಡಿದಳು.`ನಾನು ಅವರವಳು ಮತ್ತು ಅವರು ನನ್ನವರು. ಅವರ ಮದುವೆ ಬೇರೆಯವರ ಜೊತೆ ಆದರೂ ಸಹ, ನನ್ನ ಬೆರಳಿನಲ್ಲಿ ಅವರ ಪ್ರೀತಿಯ ಚಿಹ್ನೆಯಿದೆ,’ ಈ ರೀತಿಯಾಗಿ ಭಾವಿಸಿ ಅವಳು ಅವಿವಾಹಿತೆಯಾಗಿ ಬಾಳಲು ನಿರ್ಧರಿಸಿದಳು.

ಮಗಳು ಮದುವೆಯಾಗುವುದೇ ಇಲ್ಲವೆಂಬ ತೀರ್ಮಾನ ತಳೆದ ಮೇಲೆ ತಾರಿಣಿಯ ತಂದೆತಾಯಿಯರು ಮಗನಿಗೆ ಮದುವೆ ಮಾಡಿದರು. ಅವರ ನಿಧನಾನಂತರ ತಾರಿಣಿಯು ತನ್ನ ಅಣ್ಣ ಅತ್ತಿಗೆ ಮತ್ತು ಅವರ ಮಕ್ಕಳೊಂದಿಗೆ ಇದ್ದಳು. ಅವಳ ಅತ್ತಿಗೆಗೆ ಅವಳು ತಮ್ಮೊಂದಿಗಿರುವುದು ಅಸಹನೆಯಾಗತೊಡಗಿತು.

`ಒಂಟಿಯಾಗಿರುವುದೂ ಒಂದು ಜೀವನಾನಾ? ಎಲ್ಲರಿಗೂ ತಮ್ಮ ತಮ್ಮ ಮನೆ, ಸಂಸಾರ ಅಂತ ಇದ್ದರೇ ಚೆನ್ನ,’ ಎಂದು ಚುಚ್ಚಿ ಮಾತನಾಡುತ್ತಿದ್ದಳು.

ಅತ್ತಿಗೆ ಹಾಗೇಕೆ ಮಾತನಾಡುವಳೆಂದು ತಾರಿಣಿಗೆ ಗೊತ್ತು. ಕಳೆದ ಸಲ ಟೈಫಾಯಿಡ್‌ ಜ್ವರದಿಂದ ಅವಳು ಹಾಸಿಗೆ ಹಿಡಿದಾಗ, ಅತ್ತಿಗೆ ಅವಳ ಸೇವೆ ಮಾಡಬೇಕಾಯಿತು. ಅದಕ್ಕಾಗಿಯೇ ಈ ರೀತಿ ಮಾತನಾಡುತ್ತಿದ್ದಳು. ಆದರೆ ಅವಳ 3-3 ಸಲದ ಬಾಣಂತನದಲ್ಲಿ ತಾರಿಣಿ ಎಷ್ಟೆಲ್ಲ ಸೇವೆ ಮಾಡಿದಳೆಂಬುದನ್ನು ಅವಳು ಮರೆತೇಬಿಟ್ಟಳು. ಅತ್ತಿಗೆ ಆರಾಮವಾಗಿ ಮಲಗಲಿ ಎಂದು ಅವಳು ರಾತ್ರಿಯೆಲ್ಲ ನಿದ್ರೆಗೆಟ್ಟು ಎಳೆಯ ಮಕ್ಕಳನ್ನು ಸುಧಾರಿಸಿದ್ದಳು. ಬೆಳಗ್ಗೆ ಮನೆಗೆಲಸವನ್ನೆಲ್ಲ ಮುಗಿಸಿ ಕಾಲೇಜಿಗೆ ಹೋಗುತ್ತಿದ್ದಳು. ಮನೆ ಖರ್ಚಿಗಾಗಿ ಅತ್ತಿಗೆಯ ಕೈಗೆ ಹಣವನ್ನೂ ಕೊಡುತ್ತಿದ್ದಳು. ಅತ್ತಿಗೆ ಮೊಸಳೆ ಕಣ್ಣೀರನ್ನು ಸುರಿಸುತ್ತಾ, “ಅಯ್ಯೋ… ಮಗಳಂತಿರುವ ನಾದಿನಿಯಿಂದ ಮನೆ ಖರ್ಚಿಗೆ ಹಣ ತೆಗೆದುಕೊಳ್ಳುತ್ತೇನೆಲ್ಲ, ನನ್ನ ಕೈ ಸೇದಿ ಹೋಗುತ್ತೆ ಅಷ್ಟೆ. ಆದರೆ ನಾನೇನು ಮಾಡಲಿ? ಸಾಮಾನಿನ ಬೆಲೆಗಳು ಏರುತ್ತಾ ಇವೆಯಲ್ಲ…..” ಎನ್ನುತ್ತಿದ್ದಳು.

ಕೆಲವು ವರ್ಷಗಳ ನಂತರ ಅವಳ ಅಣ್ಣ ಒಂದು ಫ್ಲಾಟ್‌ ಕೊಂಡುಕೊಂಡಾಗ ಇನ್ನು ಅವರಿಗೆ ತನ್ನೊಡನೆ ವಾಸಿಸಲು ಇಷ್ಟವಿಲ್ಲ ಎಂಬುದು ತಾರಿಣಿಗೆ ಅರ್ಥವಾಯಿತು. ಅವಳು ಒಂಟಿಯಾಗುತ್ತಾಳೆ ಎಂಬುದನ್ನೂ ಯೋಚಿಸದೆ ಅವಳ ಅಣ್ಣ ತನ್ನ ಸಂಸಾರದೊಂದಿಗೆ ಹೊರಟುಹೋದ ಮೇಲೆ ಅವಳು ಒಬ್ಬಳೇ ವಾಸಿಸತೊಡಗಿದಳು.

ಡೋರ್‌ ಬೆಲ್‌ನ ಶಬ್ದ ಕೇಳಿ ಅವಳು ವಾಸ್ತವಕ್ಕೆ ಮರಳಿದಳು. ಎದ್ದು ಹೋಗಿ ನೋಡಲು ಬಾಗಿಲಲ್ಲಿ ಅಂಜನ್‌ ನಿಂತಿದ್ದ. ಅವನ ಕೈಲಿ ತಂಗಿಯ ವಿವಾಹದ ಆಮಂತ್ರಣ ಪತ್ರಿಕೆ ಇತ್ತು.“ಆಂಟಿ, ನೀವು ಖಂಡಿತ ಮದುವೆಗೆ ಬರಬೇಕು,” ಎಂದು ಆಹ್ವಾನಿಸಿ ಅಂಜನ್‌ ಹೊರಟುಹೋದ.

“ನಂದಿತಾ ಮತ್ತು ಪ್ರತೀಕ್‌,” ತಾರಿಣಿ ಆಮಂತ್ರಣ ಪತ್ರವನ್ನು ಬಿಡಿಸಿ ವಿವರಗಳನ್ನು ಓದತೊಡಗಿದಳು. ವರನ ತಂದೆಯ ಹೆಸರು ಪ್ರವೀಣ್‌ ಜೋಶಿ ಎಂದು ನೋಡಿ ಬೆಚ್ಚಿ ಕುಸಿದು ಕುಳಿತಳು.

`ಅಂದರೆ, ಪ್ರತೀಕ್‌ ನನ್ನ ಪ್ರವೀಣನ ಮಗನೇನು? ಇಲ್ಲ ಇಲ್ಲ…. ಇವನು ಬೇರೆಯೇ ಇರಬಹುದು,’ ಎಂದು ಅವಳು ತನ್ನನ್ನು ತಾನೇ ಸಮಾಧಾನಪಡಿಸಿಕೊಳ್ಳಲು ಪ್ರಯತ್ನಿಸಿದಳು.

ತಾರಿಣಿ ಕನ್ನಡಿಯ ಮುಂದೆ ಹೋಗಿ ನಿಂತಳು, ತನ್ನನ್ನು ಸೂಕ್ಷ್ಮವಾಗಿ ಅವಲೋಕಿಸಿದಳು. ವೃದ್ಧಾಪ್ಯ ತನ್ನ ಛಾಯೆಯನ್ನು ಬೀಸುತ್ತಿರುವಂತೆ ಅವಳಿಗೆ ಭಾಸವಾಯಿತು. ಕಳೆದ ಸಮಯ ಮರಳಿ ಬರುವಂತಿದ್ದರೆ ತಾನು ಪ್ರವೀಣನನ್ನು ತನ್ನ ತೋಳುಗಳಿಂದ ಬಂಧಿಸಿ ಹಿಡಿದಿಟ್ಟುಕೊಂಡಿರುತ್ತಿದ್ದೆ ಎಂದು ಆಲೋಚಿಸಿದಳು.

“ಬನ್ನಿ ಪ್ರವೀಣ್‌, ನಿಮ್ಮ ತಾರಾ ಇಂದೂ ಸಹ ನಿಮಗಾಗಿ ಕಾಯುತ್ತಿದ್ದಾಳೆ,” ತಾರಿಣಿ ಕಣ್ಣುಮುಚ್ಚಿ ಕನವರಿಸಿದಳು.

ಅಂದು 25ನೇ ತಾರೀಖು. ನಂದಿನಿ ಮತ್ತು ಪ್ರತೀಕ್‌ರ ಮದುವೆಯ ದಿನ. ತಾರಿಣಿ ಮದುವೆಗೆ ಹೋಗಲು ಏನೂ ತಯಾರಿ ಮಾಡಿಕೊಂಡಿರಲಿಲ್ಲ. ಹೋಗುವುದೋ ಬೇಡವೋ ಎಂಬ ಗೊಂದಲದಲ್ಲಿದ್ದಳು. ಯಾವುದೇ ಉಡುಗೊರೆಯನ್ನು ಕೊಂಡು ತಂದಿರಲಿಲ್ಲ. `ಬರಿಗೈಯಲ್ಲಿ ಹೋಗಲಾಗದು, ಕ್ಯಾಶ್‌ ಕೊಟ್ಟು ಬಿಡೋಣ,’ ಎಂದು ಯೋಚಿಸಿದಳು.

ತಾರಿಣಿ ಸಡಿಲವಾಗಿ ಜಡೆ ಹೆಣೆದು ಹೂ ಮುಡಿದು, ನೀಲಿ ಬಣ್ಣದ ರೇಶ್ಮೆ ಸೀರೆಯುಟ್ಟಳು. ಮುತ್ತು ಕೆಂಪಿನ ಸೆಟ್‌ ಧರಿಸಿದಳು. ಉಂಗುರದ ಅವಶ್ಯಕತೆಯೇ ಇರಲಿಲ್ಲ. ಏಕೆಂದರೆ ಪ್ರವೀಣನ ಪ್ರೀತಿಯ ನಿಶಾನೆ ಆ ಮೊದಲೇ ಅವಳ ಬೆರಳಿನಲ್ಲಿ ರಾರಾಜಿಸುತ್ತಿತ್ತು. ಮದುವೆಯ ಮನೆ ತಳಿರುತೋರಣ ದೀಪಾಲಂಕಾರಗಳಿಂದ ನವವಧುವಿನಂತೆ ಅಲಂಕೃತವಾಗಿತ್ತು.

ವಾದ್ಯದ ಸದ್ದು ಜೋರಾಗಿ ಕೇಳಿ ಬರಲು ತಾರಿಣಿ ಹೊರಗೆ ಬಂದು ನೋಡಿದಳು. ವರನ ದಿಬ್ಬಣ ಸಾಗುತ್ತಿತ್ತು. ಅವಳ ದೃಷ್ಟಿ ವರನ ಹಿಂದೆ ನಡೆಯುತ್ತಿದ್ದ ವರನ ತಂದೆಯ ಮೇಲೆ ಬಿದ್ದಿತು. ಹೌದು, ಅವರು ಪ್ರವೀಣ್‌! ಪಕ್ಕದಲ್ಲಿದ್ದವರೊಡನೆ ನಗುತ್ತಾ ಮಾತನಾಡುತ್ತಿದ್ದರು. ಕಿವಿಯ ಅಕ್ಕಪಕ್ಕದಲ್ಲಿ ಬೆಳ್ಳಗಾಗುತ್ತಿದ್ದ ಕೂದಲು, ಕಣ್ಣಿಗೆ ಕನ್ನಡಕ, ಇವು ವಯಸ್ಸು ಹೆಚ್ಚುತ್ತಿರುವುದನ್ನು ಸೂಚಿಸುತ್ತಿದ್ದವು. ಕೊಂಚವೇ ಇದ್ದ ಹೊಟ್ಟೆಯ ಬೊಜ್ಜು ಸುಖ, ಸಮೃದ್ಧಿಯ ಗುರುತಾಗಿತ್ತು.

‘ಇಲ್ಲ…. ಇವರು ನನ್ನ ಪ್ರವೀಣ್‌ ಅಲ್ಲ,’ ಎಂದು ಅವಳ ಮನಸ್ಸು ಒಪ್ಪಲು ಅಸಹಕಾರ ಹೂಡಿತು.

ಮರುಕ್ಷಣದಲ್ಲಿ ತಾರಿಣಿ ಏನೋ ಒಂದು ನಿರ್ಧಾರಕ್ಕೆ ಬಂದು ದಿಬ್ಬಣದ ಪಕ್ಕದಿಂದ ಹಾದು ಮದುವೆ ಮನೆಯೊಳಗೆ ಹೋದಳು. ಮದುಮಗಳು ನಂದಿತಾ ಸಾಲಂಕೃತಳಾಗಿ, ಮಧುವಿನ ಕೋಣೆ ಎಂಬ ಫಲಕ ಹೊತ್ತ ಬಾಗಿಲಿನ ಮುಂದೆ ನಸು ನಾಚುತ್ತಾ ನಿಂತಿದ್ದಳು. ಆ ಕ್ಷಣದಲ್ಲಿ ತಾರಿಣಿಯ ಮನಸ್ಸಿಗೆ ಏನೋ ಹೊಳೆಯಿತು. ಕೂಡಲೇ ಅವಳು ಪ್ರವೀಣನ ಪ್ರೀತಿಯ ನಿಶಾನೆಯ ಉಂಗುರವನ್ನು ನಂದಿತಾಳ ಬೆರಳಿಗೆ ತೊಡಿಸಿದಳು. ಏನಾಗುತ್ತಿದೆ ಎಂದು ನಂದಿತಾ ಅರ್ಥ ಮಾಡಿಕೊಳ್ಳುವ ವೇಳೆಗೆ ತಾರಿಣಿ ಅಲ್ಲಿಂದ ಹೊರಬಿದ್ದಳು.

`ಸೊಸೆಯ ಬೆರಳಿನಲ್ಲಿ ಈ ಉಂಗುರ ನೋಡಿದಾಗ ಪ್ರವೀಣ್‌ಗೆ ನನ್ನ ನೆನಪಾಗುವುದೇ?’ ಅರ್ಧ ಕಣ್ಣು ಮುಚ್ಚಿ ಸೋಫಾಗೆ ತಲೆಯೊರಗಿಸಿ ಕುಳಿತಿದ್ದ ತಾರಿಣಿ, ಹಾಗೇ ಸ್ವಪ್ನಾಸ್ಥೆಗೆ ಜಾರಿದಳು. ಪ್ರವೀಣ್‌ ತನ್ನ ಬಾಳಿಗೆ ಮರಳಿ ಬಂದಾನೆಂಬ ಭರವಸೆ ಅಳಿಸಿಹೋಗಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ