ಕಥೆ – ಸುಪ್ರೀತಾ ಭಟ್
“ಹೊಸ ದೇಶ….. ಎಲ್ಲರೂ ಹೊಸ ಜನ…. ನನಗೆ ಇಲ್ಲಿ ಮನಸ್ಸೇ ನಿಲ್ಲುತ್ತಿಲ್ಲ. ಯಾಕೋ ಯಾವುದೂ ಸರಿ ಹೋಗುತ್ತಿಲ್ಲ. ಆದಷ್ಟು ಬೇಗ ನಮ್ಮ ಭಾರತಕ್ಕೇ ವಾಪಸ್ಸು ಹೋಗಿಬಿಡೋಣ ಅನಿಸುತ್ತೆ,” ಸಮೀಕ್ಷಾ ಎಂದಿನ ತನ್ನ ಆಲಾಪನೆಗೆ ತೊಡಗಿದ್ದಳು.
“ಇದು ಆಸ್ಟ್ರೇಲಿಯಾ! ಅತ್ಯುತ್ತಮ ಪ್ರಗತಿ ಹೊಂದಿದ ದೇಶಗಳಲ್ಲಿ ಇದೂ ಒಂದು. ನಮ್ಮ ಭಾರತದವರು ಇಲ್ಲಿ ಬಂದು ಸೆಟಲ್ ಆಗಿ ನೌಕರಿ ಗಿಟ್ಟಿಸಲು ಭೂಮಿ ಆಕಾಶ ಒಂದು ಮಾಡುತ್ತಾರೆ. ಹಾಗಿರುವಾಗ ನೀನು ಇಲ್ಲಿಂದ ವಾಪಸ್ ಹೋಗೋಣ ಅಂತಿದ್ದೀಯಲ್ಲ? ಇದನ್ನು ನಿನ್ನ ಮಕ್ಕಳಾಟದ ಬುದ್ಧಿ ಎನ್ನಬೇಕೋ…. ಏನೆನ್ನಬೇಕು?” ಗಂಡ ಪ್ರತೀಕ್ ಹೇಳಿದ.
“ನಾನು ಏನು ಮಾಡಲಿ? ಬೆಳಗ್ಗೆ 8ಕ್ಕೆ ಹೊರಟರೆ ರಾತ್ರಿ 10ಕ್ಕೆ ಬರುತ್ತೀರಿ, ಸದಾ ಕೆಲಸ. ರಜೆ ಇರುವಾಗಲೂ ಫೋನು…. ಲ್ಯಾಪ್ ಟಾಪ್ ಹಿಡಿದು ಬಿಝಿ ಇರುತ್ತೀರಿ. ಇನ್ನು ಈ ಮಕ್ಕಳೋ ತಮ್ಮ ಶಾಲೆ, ಫ್ರೆಂಡ್ಸ್, ಆಟೋಟ, ಜಿಮ್ ಮಣ್ಣುಮಸಿ ಅಂತ ತಮ್ಮದೇ ಲೋಕದಲ್ಲಿ ಇರುತ್ತಾರೆ. ನಾನು ಸದಾ ಅಡುಗೆ, ಮನೆಗೆಲಸ, ಟಿ.ವಿ…… ಇದರಲ್ಲೇ ಮುಳುಗಿರಬೇಕು. ಎಲ್ಲರಿಗೂ ಎಲ್ಲ ಟೈಮಿಗೆ ಆಗುತ್ತಿರಬೇಕು. ಹೀಗಾಗಿ ನನಗೆ ಗೃಹಬಂಧನ ತಪ್ಪಿಲ್ಲ…..”
“ಹ್ಞಾಂ….. ಬಹಳ ಹೊತ್ತು ಯಾರೊಂದಿಗೂ ಮಾತುಕಥೆ ಇಲ್ಲದೆ ಬಾಯಿ ಹೊಲಿದಂತಾಗಿದೆ ಅಲ್ಲವೇ….” ಪ್ರತೀಕ್ ಬೇಕೆಂದೇ ಕೆಣಕಿದ.
“ನಿಮಗೆ ಚೆಲ್ಲಾಟ….. ನನಗಿಲ್ಲಿ ಪ್ರಾಣಸಂಕಟ. ನನ್ನ ಈ ಸಮಸ್ಯೆ ಬಗ್ಗೆ ಗಂಭೀರಳಾಗಿದ್ದೇನೆ. ನನ್ನ ಸ್ಥಿತಿ ಬಾವಿಯ ಕಪ್ಪೆಯಂತಾಗಿ ಹೋಗಿದೆ. ಮದುವೆಗೆ ಮುಂಚೆ ನಾನು ಪಡೆದಿದ್ದ ವಿಜ್ಞಾನದ ಡಿಗ್ರಿಗಳು, ನನ್ನ ಓದು…. ಎಲ್ಲಾ ಮರೆತೇಹೋಗಿದೆ.”
“ನಿನ್ನನ್ನು ಬಾವಿ ಕಪ್ಪೆ ಆಗಿರು ಎಂದವರಾರು? ನೀನು ಹಕ್ಕಿಯ ಹಾಗೆ ಆಕಾಶದಲ್ಲಿ ಹಾರಾಡುತ್ತಿರು!” ಎಂದು ಪ್ರತೀಕ್ ನಾಟಕೀಯವಾಗಿ ಹೇಳಿದ.
“ನಮ್ಮ ಮನೆಯಲ್ಲಿನ ಈ 3 ಪ್ರಾಣಿಗಳನ್ನು ಸುಧಾರಿಸುವುದೇ ನನಗೆ ದೊಡ್ಡ ಕೆಲಸವಾಗಿದೆ. ಕನಿಷ್ಠ 4ನೇ ಪ್ರಾಣಿಯ ಮುಖವನ್ನಾದರೂ ನೋಡುವ ಅವಕಾಶ ಇದ್ದಿದ್ದರೆ ಚೆನ್ನಾಗಿರುತ್ತಿತ್ತು….. ಹಾಗಿರುವಾಗ ಆಕಾಶದಲ್ಲಿ ಹಕ್ಕಿಯ ಹಾಗೆ ಹೇಗೆ ತಾನೇ ಹಾರಾಡಲಿ?”
“ಎಲ್ಲ ನಾವು ಜೀವನವನ್ನು ನೋಡುವ ದೃಷ್ಟಿಯಲ್ಲಿದೆ ಸಮೀಕ್ಷಾ…… ನಮ್ಮ ಜೀವನದಲ್ಲಿ ಸಿಗುವಂಥ ಅತ್ಯುತ್ತಮ ಕ್ಷಣಗಳನ್ನೇ ಅಮೃತ ಸಮಾನವಾಗಿ ಪರಿಗ್ರಹಿಸಿ ಮುಂದುವರಿಯಬೇಕಷ್ಟೆ,” ಅವಳು ನೀಡಿದ ಟೀ ಕಪ್ ತೆಗೆದುಕೊಳ್ಳುತ್ತಾ ತನ್ನ ಪಕ್ಕದಲ್ಲೇ ಸೋಫಾದಲ್ಲಿ ಕೂರಿಸಿಕೊಂಡ ಪ್ರತೀಕ್.
ತಾನೂ ಟೀ ಕುಡಿಯುತ್ತಾ ಸಮೀಕ್ಷಾ ಹೇಳಿದಳು, “ನೋಡಿ, ಇದೆಲ್ಲ ಭಾಷಣ ಮಾಡಲಿಕ್ಕೆ ಚೆಂದದ ಫಿಲಾಸಫಿ ಅಷ್ಟೆ. ನನ್ನ ಸಮಸ್ಯೆಗೆ ಪರಿಹಾರವಲ್ಲ.”
“ಅದು ಸರಿ, ನಾನು ಕೆಲವು ದಿನಗಳಿಂದ ನಿನ್ನ ತೊಂದರೆ ಗಮನಿಸುತ್ತಿದ್ದೇನೆ. ಮಕ್ಕಳು ಕ್ರಮೇಣ ತುಸು ದೊಡ್ಡವರಾದಂತೆ ಮನೆಯಲ್ಲಿ ನಿನ್ನ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳುತ್ತಾರೆ. ಅವರಿಗೆ ತಮ್ಮದೇ ಆದ ಒಂದು ಪ್ರಪಂಚ ಆಗಿಬಿಡುತ್ತದೆ. ಈಗಿನದಕ್ಕಿಂತ ಆಗ ನಿನ್ನ ಏಕಾಂಗಿತನ ಇನ್ನೂ ಹೆಚ್ಚು ಕಾಡುತ್ತದೆ. ಆ ಹೊತ್ತಿಗೆ ಅದನ್ನು ಎದುರಿಸುವುದು ಹೇಗೆ ಅಂತ ಈಗಿನಿಂದಲೇ ತಯಾರಿ ಶುರು ಮಾಡು. ಏನಾದರೂ ಕೋರ್ಸ್ ಬೇಕಿದ್ದರೆ ಮಾಡಿಕೊ.”
“ಈ ವಯಸ್ಸಿನಲ್ಲಿ ನಾನೆಂಥ ಕೋರ್ಸಿಗೆ ಸೇರಿ ಓದಲಿ? ಇರಲಿ, ನಿಮ್ಮ ಮಾತಿನಂತೆ ನಾನು 2 ವರ್ಷದ ಕೋರ್ಸ್ ಮುಗಿಸಿಕೊಂಡೆ ಅಂತಿಟ್ಕೊಳ್ಳಿ. ಆಮೇಲೆ…..? ಎಲ್ಲಿ ಹಾಸಿದ ಕಂಬಳಿ ಅಲ್ಲೇ ಬಿದ್ದಿರುತ್ತೆ. ಈ ವಯಸ್ಸಿನಲ್ಲಿ ನನಗೆ ಯಾರು ಕೆಲಸ ಕೊಡುತ್ತಾರೆ?”
“ನಮ್ಮ ಭಾರತದಲ್ಲಿ ನೌಕರಿಗೂ ವಯಸ್ಸಿಗೂ ಇರುವ ಸಂಬಂಧ ಈ ಆಸ್ಟ್ರೇಲಿಯಾದಲ್ಲಿಲ್ಲ. ಇಲ್ಲಿನ ವಿಶೇಷತೆ ಎಂದರೆ, ಈ ದೇಶದ ಮಕ್ಕಳು ತುಸು ದೊಡ್ಡವರಾದಂತೆ ತಾಯಂದಿರು ಕೆಲಸಕ್ಕೆ ಸೇರಿ ತಮ್ಮದೇ ಹೊಸ ಕೆರಿಯರ್ ಮಾಡಿಕೊಳ್ಳುತ್ತಾರೆ. ಇಂದಿನ ಆಧುನಿಕ ಇಂಡಸ್ಟ್ರಿಗೆ ಬೇಕಾಗುವಂಥ ಯಾದಾದರೂ ಟೆಕ್ನಿಕ್ ಕೋರ್ಸ್ ಇದ್ದರೆ ನೋಡು.”
“ಹ್ಞಾಂ, ಈಗ ನೀವು ಹೇಳಿದ ಮಾತು ಸರಿ ಇದೆ. ನಾನು ಇವತ್ತು ಮಧ್ಯಾಹ್ನದಿಂದಲೇ ಎಲ್ಲಾ ಯೂನಿವರ್ಸಿಟಿಗಳ ವೆಬ್ಸೈಟ್ ಗಮನಿಸಿ, ನನಗೆ ಹೊಂದಿಕೆ ಆಗುವಂಥದ್ದೇನಾದರೂ ಕೋರ್ಸ್ ಇದೆಯಾ ನೋಡುತ್ತೇನೆ.”
“ಶಭಾಷ್!” ಎಂದು ಹೆಂಡತಿಯ ಹಣೆಗೆ ಮುತ್ತಿಟ್ಟು ಪ್ರತೀಕ್ ಬ್ರೀಫ್ಕೇಸ್ ಹಿಡಿದು ಆಫೀಸ್ ಕಡೆ ಹೊರಟ.
ಹೀಗೆ ಸತತ 3-4 ದಿನ ವಿವಿಧ ಶಿಕ್ಷಣ ಸಂಸ್ಥೆಗಳ ವೆಬ್ಸೈಟ್ಸ್ ನ್ನು ತಾಸುಗಟ್ಟಲೆ ಹುಡುಕಾಡಿದ ನಂತರ, ಅವಳಿಗೆ ಇಷ್ಟವಾದ ಕೋರ್ಸ್ ಸಿಕ್ಕಿತು, ಅದುವೇ `ಈವೆಂಟ್ ಮ್ಯಾನೇಜ್ಮೆಂಟ್’ ಕೋರ್ಸ್, ತನಗೆ ಒಪ್ಪುತ್ತದೆ ಎನಿಸಿತು. 15 ವರ್ಷಗಳ ನಂತರ ಮತ್ತೆ ಓದನ್ನು ಶುರು ಮಾಡುವ ಹೊಸ ಉತ್ಸಾಹದಲ್ಲಿ ತುಸು ಆತಂಕದೊಂದಿಗೇ ಅವಳು ಟೆಫ್ ಇನ್ಸ್ಟಿಟ್ಯೂಟ್ ತಲುಪಿದಳು.
ಇಲ್ಲಿ ಅವಳಿಗೆ ಎದುರಾದವಳೇ ಹಫೀಜಾ. ಅವಳೂ ಸಹ ಅದೇ ಕೋರ್ಸ್ ಸೇರಲೆಂದು ಬಂದು ಸಾಲಿನಲ್ಲಿ ನಿಂತಿದ್ದಳು. ಅವಳ ಆಂಗ್ಲ ಭಾಷೆ ಮತ್ತು ವ್ಯಾವಹಾರಿಕ ಜ್ಞಾನ ಸುಮಾರಾಗಿತ್ತಷ್ಟೆ. ಹಾಗಾಗಿ ಸ್ವತಂತ್ರವಾಗಿ ಮುಂದುವರಿಯಲು ಹಫೀಜಾ ಅಳುಕುತ್ತಿದ್ದಳು. ಪರಿಚಯವಾದ ಸ್ವಲ್ಪ ಹೊತ್ತಿನಲ್ಲೇ ಸಮೀಕ್ಷಾಳೆದುರು ಇಷ್ಟನ್ನು ಬಡಬಡನೆ ಹೇಳಿಕೊಂಡ ಹಫೀಜಾಳ ಸರಳ ಸ್ವಭಾವ ಇವಳಿಗೆ ಬಹಳ ಇಷ್ಟವಾಯಿತು. ಇಂಥ ಗೆಳತಿಗೆ ತಾನಾಗಿ ಮುಂದೆ ಬಂದು ಸಹಾಯ ಮಾಡಬೇಕೆನಿಸಿತು.
ಬಾಲ್ಯದಿಂದಲೂ ಸಮೀಕ್ಷಾ ತಿಳಿದುಕೊಂಡಿದ್ದ ಒಂದು ವಿಚಾರವೆಂದರೆ ನಮ್ಮ ಬಳಿಯ ಜ್ಞಾನವನ್ನು ಹಂಚಿದಷ್ಟೂ ಅದು ಹೆಚ್ಚುತ್ತದೆ. ವ್ಯಾವಹಾರಿಕ ಜೀವನದಲ್ಲಿ ಈ ಸತ್ಯವನ್ನು ಪರೀಕ್ಷಿಸುವ ಸಲುವಾಗಿ ಸಮೀಕ್ಷಾ ಹಫೀಜಾಳ ಕಡೆ ದೋಸ್ತಿಗಾಗಿ ಮುಂದಾದಳು. ತನಗೆ ಸಮಯ ಸಿಕ್ಕಾಗೆಲ್ಲ ಹಫೀಜಾಳನ್ನು ಮನೆಗೆ ಕರೆಸಿಕೊಂಡು ಅಥವಾ ತಾನೇ ಅವಳ ಮನೆಗೆ ಹೋಗಿ ಹಫೀಜಾಳಿಗೆ ಆಂಗ್ಲ ಭಾಷೆ ಕಲಿಸತೊಡಗಿದಳು.
ಸಮೀಕ್ಷಾಳಂಥ ಬುದ್ಧಿಜೀವಿ ಗೆಳತಿ ದೊರೆತದ್ದು ಹಫೀಜಾಳಿಗೆ ಬಲು ಹೆಮ್ಮೆ ಎನಿಸಿತು. ಆ ಗೆಳೆತನ ಉಳಿಸಿಕೊಳ್ಳುವ ಸಲುವಾಗಿಯೇ ಹಲವು ಸಲ ಸಮೀಕ್ಷಾಳ ಕುಟುಂಬದವರನ್ನು ತನ್ನ ಮನೆಗೆ ಕರೆದು ಇರಾಕ್ ವ್ಯಂಜನಗಳ ಕೈರುಚಿ ತೋರಿಸುತ್ತಿದ್ದಳು. ಅದೇ ತರಹ ಸಮೀಕ್ಷಾ ಸಹ ತನ್ನ ಭಾರತೀಯ ಶೈಲಿಯ ನಾರ್ಥ್ & ಸೌತ್ ಡಿಶೆಸ್ ಸರ್ವ್ ಮಾಡಿ ಅವರಿಂದ ಶಭಾಷ್ಗಿರಿ ಪಡೆದಿದ್ದಳು. ಎಷ್ಟೋ ಸಲ ಸಮೀಕ್ಷಾ ಇನ್ಸ್ಟಿಟ್ಯೂಟ್ಗೆ ಹೋಗುವಾಗ 2-2 ಬಾಕ್ಸ್ ಸಿದ್ಧಪಡಿಸಿಕೊಂಡೇ ಹೊರಡುತ್ತಿದ್ದಳು. ಕ್ಲಾಸ್ ಮುಗಿಸಿಕೊಂಡು ಇಬ್ಬರೂ ಅದನ್ನು ಸವಿಯುತ್ತಿದ್ದರು.
ಕ್ಲಾಸ್ರೂಮಿನಲ್ಲೂ ಇಬ್ಬರೂ ಅಕ್ಕಪಕ್ಕ ಕೂರುತ್ತಿದ್ದರು. ಒಟ್ಟೊಟ್ಟಿಗೆ ಅಸೈನ್ಮೆಂಟ್ಸ್ ಮುಗಿಸಿ, ಅಭ್ಯಾಸ ಮಾಡುತ್ತಿದ್ದರು. ಇಬ್ಬರ ಮಧ್ಯೆ ಗೆಳೆತನದ ಬಾಂಧವ್ಯ ದಿನೇದಿನೇ ಗಾಢವಾಗುತ್ತಾ ಹೋಯಿತು. ಮೂಲತಃ ಪಂಜಾಬಿ ಹುಡುಗಿಯಾದ ಸಮೀಕ್ಷಾ, ಇರಾಕ್ ಹುಡುಗಿ ಹಫೀಜಾಳ ತರಹವೇ ಗೌರವರ್ಣ ಹೊಂದಿದ್ದು ಇಬ್ಬರೂ ಚೆಲುವೆಯರೆನಿಸಿದ್ದರು. ಹೀಗಾಗಿ ಇವರ ಎಷ್ಟೋ ಸಹಪಾಠಿಗಳು ಇವರನ್ನು ಅಕ್ಕತಂಗಿ ಎಂದೇ ಭಾವಿಸಿದ್ದರು. ಯಾರಾದರೂ ಅವರನ್ನು ಮಾತನಾಡಿಸಿ ದೀರ್ಘ ಸಂಭಾಷಣೆಗೆ ತೊಡಗಿದಾಗ ಅವರಿಬ್ಬರೂ ಬೇರೆ ಬೇರೆ ಎಂದು ಗೊತ್ತಾಗುತ್ತಿತ್ತು. ಸಮೀಕ್ಷಾ ಸುಲಲಿತವಾಗಿ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಿದ್ದರೆ, ಹಫೀಜಾ ಹರಕಲು ಮುರುಕಲು ಆಂಗ್ಲದಲ್ಲಿ ಪಕ್ಕಾ ಇರಾಕಿ ಶೈಲಿಯಲ್ಲೇ ಹೇಳುವಳು.
“ನಿನ್ನ ಆಂಗ್ಲ ಭಾಷೆ ಹೇಗೆ ಇಷ್ಟು ಚೆನ್ನಾಗಿದೆ?” ತನ್ನ ಆಂಗ್ಲ ಭಾಷೆಯ ಕುರಿತು ಬೇಸರಗೊಂಡಿದ್ದ ಹಫೀಜಾ ಕೇಳಿದಳು.
“ನಮ್ಮ ದೇಶದಲ್ಲಿ ಆಂಗ್ಲ ಭಾಷೆ ಎಂದರೆ ಎರಡನೇ ರಾಷ್ಟ್ರಭಾಷೆಗೆ ಸಮ. ನಮ್ಮ ದೇಶದಲ್ಲಿ ಆಂಗ್ಲ ಮಾಧ್ಯಮದಲ್ಲೇ ಕಲಿಯಲು ಒಂದಕ್ಕಿಂತ ಒಂದು ಮಿಗಿಲಾದ ಪಬ್ಲಿಕ್ ಸ್ಕೂಲುಗಳಿವೆ. ಉನ್ನತ ಶಿಕ್ಷಣದ ಮಾಧ್ಯಮವಂತೂ ಇಂಗ್ಲಿಷ್ ಎಂಬುದರಲ್ಲಿ ಎರಡು ಮಾತಿಲ್ಲ. ನಮ್ಮ ದೇಶದಲ್ಲಿ ಆಂಗ್ಲ ಭಾಷೆಯ ವೈವಿಧ್ಯಮಯ ಪತ್ರಿಕೆಗಳು, ಭಾರತೀಯ ಮೂಲದ ಆಂಗ್ಲ ಸಿನಿಮಾಗಳೂ ತಯಾರಾಗುತ್ತವೆ,” ಎಂದು ಸಮೀಕ್ಷಾ ಹೆಮ್ಮೆಯಿಂದ ತಾನು ಭಾರತ ದೇಶದ ಪ್ರತಿನಿಧಿ ಎಂಬಂತೆ ಎಲ್ಲವನ್ನೂ ವಿವರಿಸಿದಳು.
ಸಮೀಕ್ಷಾಳ ಮಾತು ಕೇಳಿ ಅವಾಕ್ಕಾದ ಹಫೀಜಾ, “ಕೆಲವರ ಪಾಲಿಗೆ ಜೀವನ ಬಾಳೆಹಣ್ಣು ಸುಲಿದಂತೆ ಎಲ್ಲ ಸುಲಲಿತ…. ನಿಮ್ಮಂಥವರು ಆಸ್ಟ್ರೇಲಿಯಾ ಏನು, ಎಲ್ಲಿಗೆ ಹೋದರೂ ಜಯಿಸಬಲ್ಲಿರಿ. ಆದರೆ ನಮ್ಮಂಥವರಿಗೆ ಇಂಥ ದೇಶಗಳಿಗೆ ಬಂದರೆ ಎಲ್ಲಕ್ಕೂ ಮೊದಲು ಈ ಇಂಗ್ಲಿಷ್ ಜೊತೆ ಹೆಣಗುವುದರಲ್ಲೇ ಆಗಿಹೋಗುತ್ತದೆ….. ಉಳಿದ ಯಶಸ್ಸೆಲ್ಲ ನಂತರದ್ದು,” ಎಂದು ಖಿನ್ನಳಾಗಿ ನುಡಿದಳು.
“ಹ್ಞೂಂ ಹಫೀಜಾ….. ಅದೇನೋ ನಿಜ. ನಾನು ಎಷ್ಟೋ ಸಲ ಯೋಚಿಸಿದ್ದೀನಿ, ಇಂಥ ಪರಿಸ್ಥಿತಿಯಲ್ಲಿ ನೀನು ಆಸ್ಟ್ರೇಲಿಯಾಗೆ ಬಂದು ಸೆಟಲ್ ಆದದ್ದು ಹೇಗೆ ಅಂತ….. ಯಾವ ದೇಶಕ್ಕೆ ನಾವು ಹೋಗಲಿದ್ದೇವೋ ಆ ದೇಶದಲ್ಲಿ ಚಾಲ್ತಿಯಲ್ಲಿರುವ ಒಂದಾದರೂ ಭಾಷೆಯನ್ನು ನಾವು ಸುಲಲಿತವಾಗಿ ಬಳಸದಿದ್ದರೆ ಖಂಡಿತಾ ನಮಗೆ ಆ ದೇಶದಿಂದ ವೀಸಾ ಇಶ್ಯೂ ಆಗುವುದಿಲ್ಲ. ಹಾಗಿರುವಾಗ ನೀನು ಇಷ್ಟು ದೂರದ ಆಸ್ಟ್ರೇಲಿಯಾಗೆ ಹೇಗೆ ಬಂದು ಸೆಟಲ್ ಆದೆ?” ಎಂದು ಕೇಳಿದಳು ಸಮೀಕ್ಷಾ.
“ಅದು…. ಅದು ಬಂದು…. ನಾನು ಬೇರೆ ವಿಧದಲ್ಲಿ ಇಲ್ಲಿಗೆ ಬಂದೆ ಬಿಡು,” ಎಂದು ಹಫೀಜಾ ಏನೋ ಜಾರಿಕೆಯ ಉತ್ತರ ನೀಡಿ ಆ ಸಂದರ್ಭ ಸಂಭಾಳಿಸಿದಳು. ಹೀಗೆಯೇ ಕಾಲ ಮುಂದುವರಿದಿತ್ತು. ಎಷ್ಟೋ ದಿನಗಳಾದ ಮೇಲೆ ಹಫೀಜಾ ವಿಧವೆ ಎಂಬುದು ಸಮೀಕ್ಷಾಳಿಗೆ ತಿಳಿಯಿತು. ಅವಳಿಗೆ ಗಂಡು ಮಗು ಹುಟ್ಟುವ 3 ತಿಂಗಳ ಮೊದಲೇ ಅವಳ ಗಂಡ ತೀರಿಕೊಂಡಿದ್ದ. ತನ್ನ ನೆಂಟರ ನೆರವಿನಿಂದ ಅವಳು ಹೇಗೋ ರೆಫ್ಯೂಜಿ ಎಂಬಂತೆ ಬಂದು ಆಸ್ಟ್ರೇಲಿಯಾದಲ್ಲಿ ಸೇರಿಕೊಂಡಿದ್ದಳು. ಅವಳ ಬಂಧು ಬಳಗ ಸಹ ಎಷ್ಟೋ ವರ್ಷಗಳ ಹಿಂದೆ ಇಲ್ಲಿಗೆ ಬಂದು ಸೆಟಲ್ ಆಗಿ, ಈ ಹೊತ್ತಿಗೆ ಆಸ್ಟ್ರೇಲಿಯನ್ ನಾಗರಿಕರೇ ಆಗಿಹೋಗಿದ್ದರು. ಓದಿನ ಜೊತೆಜೊತೆಗೆ ಅವಳು ಒಂದು ರೆಸ್ಟೋರೆಂಟ್ನಲ್ಲಿ ವೇಟರ್ ಕೆಲಸ ಸಹ ಮಾಡುತ್ತಿದ್ದಳು.
ಹಫೀಜಾಳ ಲೈಫ್ಸ್ಟೈಲ್ ಗಮನಿಸಿ ಸಮೀಕ್ಷಾ ಬೆರಗಾಗಿದ್ದಳು. ಹಫೀಜಾಳ ಉಡುಗೆತೊಡುಗೆ, ಖರ್ಚು ಮಾಡುವ ಪರಿ, ಯಾವ ಶ್ರೀಮಂತರಿಗೂ ಕಡಿಮೆ ಇರಲಿಲ್ಲ. ಅವಳು ಒಳ್ಳೆ ಪಾಶ್ ಏರಿಯಾದಲ್ಲಿ ಉತ್ತಮ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದಳು. ಅವಳ ಮಗ ಆ ಏರಿಯಾದ ದುಬಾರಿ ಕಾನ್ವೆಂಟ್ನಲ್ಲಿ ಕಲಿಯುತ್ತಿದ್ದ.
“ಇದನ್ನೆಲ್ಲ ನಿಭಾಯಿಸುವುದು ಅಂದ್ರೆ ನಿನಗೆ ಬಹಳ ಕಷ್ಟ ಆಗಿರಬೇಕಲ್ವೇ? ಇದನ್ನೆಲ್ಲ ಆರಾಮವಾಗಿ ಹೇಗೆ ನಿಭಾಯಿಸುವೆ? ಕೆಲವು ಗಂಟೆಗಳ ಕಾಲ ವೇಟರ್ ಆಗಿ ಕೆಲಸ ಮಾಡುವವಳಿಗೆ ಈ ರೀತಿ ಶ್ರೀಮಂತಿಕೆ ಮೆರೆಯಲು ಸಾಧ್ಯವೇ?” ಒಂದು ಸಲ ಹಫೀಜಾಳ ಬಾಯಿಂದ ನಿಜ ತಿಳಿಯಲೇಬೇಕು ಎಂದು ಸಮೀಕ್ಷಾ ಕೇಳಿದಳು.
“ನಾನೊಬ್ಬ ಸಿಂಗಲ್ ಮಾಮ್ ಎಂದು ನಿನಗೆ ಗೊತ್ತಿದೆ ಅಲ್ಲವೇ….. ಹೀಗಾಗಿ ನನಗೆ ಇಲ್ಲಿನ ಸರ್ಕಾರದಿಂದ `ಸೋಶಿಯಲ್ ಸೆಕ್ಯೂರಿಟಿ ಅಲೋಯೆನ್ಸ್’ ಎಂದು ಮಾಸಿಕ ಹಣ ಸಿಗುತ್ತದೆ,” ಎಂದಳು ಹಫೀಜಾ.
ಅವಳ ಪ್ರಾಮಾಣಿಕ ಉತ್ತರದಿಂದ ಉತ್ತೇಜನಗೊಂಡು ಸಮೀಕ್ಷಾ ಮುಂದುವರಿಸಿದಳು, “….. ಮತ್ತೆ ನೀನೇ ಹೇಳಿದೆಯಲ್ಲ… ಆಸ್ಟ್ರೇಲಿಯಾಗೆ ಬಂದ ಹೊಸದರಲ್ಲಿ ನಿನಗೆ ಒಂದು ಚೂರೂ ಇಂಗ್ಲಿಷ್ ಮಾತನಾಡಲು ಬರುತ್ತಿರಲಿಲ್ಲ ಅಂತ….. ಈಗ ಹರಕಲು ಮುರುಕಲು ಕಲಿತು ಹೇಗೋ ಪಬ್ಲಿಕ್ನಲ್ಲಿ ವ್ಯಾವಹಾರಿಕವಾಗಿ ಕೆಲಸ ನಿಭಾಯಿಸುವಂತೆ ಆಗಿರುವೆ. ಇದನ್ನೆಲ್ಲ ನೀನು ನಿನ್ನ ಲೆವೆಲ್ನಲ್ಲಿ ಹೇಗೆ ನಿಭಾಯಿಸಿದೆ?”
“ನಾನು ಇಲ್ಲಿಗೆ ಬಂದ ಮೇಲೆ `ಅಡ್ಟ್ ಮೈಗ್ರೆಂಟ್ ಇಂಗ್ಲಿಷ್ ಪ್ರೋಗ್ರಾಂ’ ನೆರವಿನಿಂದ ಸರ್ಕಾರದ ವತಿಯಿಂದ 5-10 ಘಂಟೆಗಳ ಉಚಿತ ಟ್ಯೂಷನ್ ದೊರಕಿದೆ…. ಈ ರೀತಿ ಇಂಗ್ಲಿಷ್ ಕಲಿಯುವಂತಾಯಿತು.”
“ಅದೇ ಮತ್ತೆ ನಾನು ಅಂದುಕೊಂಡಿದ್ದು….. ನೀನು ಇಷ್ಟು ಟಿಪ್ಟಾಪ್ ಆಗಿ ರಿಚ್ಗ್ರಾಂಡ್ ಲೈಫ್ಸ್ಟೈಲ್ ಮೇಂಟೇನ್ ಮಾಡುತ್ತಿರುವುದು ಹೇಗೆ ಅಂತ…. ಈಗ ತಿಳಿಯಿತು ಬಿಡು, ನಿಮ್ಮ ದೇಶದಿಂದ ಇಷ್ಟು ಮಂದಿ ಯಾಕೆ ದಿನೇದಿನೇ ಬೋಟ್ನಲ್ಲಿ ಕುಳಿತು ಆಸ್ಟ್ರೇಲಿಯಾ ಸೇರುತ್ತಿದ್ದಾರೆ ಅಂತ…. ಕೆಲವು ಆಯ್ದ ದೇಶಗಳಿಂದ ಬರುವ ಶರಣಾರ್ಥಿಗಳ ಕುರಿತು ನ್ಯಾಷನಲ್ ನ್ಯೂಸ್ನಲ್ಲಿ ಇಷ್ಟೆಲ್ಲ ರಾದ್ಧಾಂತ ಆಗುವುದು ಏಕೆ ಎಂದು ಈಗ ಅರ್ಥವಾಗುತ್ತಿದೆ,” ಆತುರದಲ್ಲಿ ಮಾತನಾಡುವಾಗ ಸಮೀಕ್ಷಾಳ ಬಾಯಿಂದ ಸತ್ಯದ, ಆದರೆ ಕಹಿಯಾದ ಮಾತುಗಳು ಹೊರಬಿದ್ದವು.
“ನಮಗಿಂತ ಹೆಚ್ಚಾಗಿ ನಿಮ್ಮ ಭಾರತೀಯರು ಇಲ್ಲಿಗೆ ಬರುತ್ತಾರೆ ಗೊತ್ತಾ?” ಹಫೀಜಾ ತಾನೇನೂ ಕಡಿಮೆ ಇಲ್ಲ ಎಂಬಂತೆ ಹೇಳಿದಳು.
“ಹ್ಞೂಂ….. ಬರುತ್ತಾರೆ ಎಂಬುದೇನೋ ನಿಜ. ಆದರೆ ಅವರು ಬರುವ ವಿಧಾನ ನಿಮ್ಮ ಜನರಂತೆ ಅಲ್ಲ. ನಮ್ಮಂಥ ಸುಶಿಕ್ಷಿತ ಜನ ಸ್ಕಿಲ್ ಮೈಗ್ರೇಶನ್ ವೀಸಾ ಆಧಾರದ ಮೇಲೆ ಬರುತ್ತೇವೆ ಅಥವಾ ಸ್ಟೂಡೆಂಟ್ ವೀಸಾ ಇರುತ್ತದೆ. ಎರಡೂ ರೀತಿಯಲ್ಲಿ ನಾವು ಈ ದೇಶದ ಆರ್ಥಿಕ ವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ಧಕ್ಕೆ ತರುವುದಿಲ್ಲ. ಪ್ರಗತಿಗೆ ದಾರಿ ಆಗುತ್ತಿದ್ದೇವೆ….”
ಅಷ್ಟರಲ್ಲಿ ಹಫೀಜಾ ಸಮೀಕ್ಷಾಳ ಮಾತು ತಡೆಯುತ್ತಾ, “ಅದೇನು ಹೇಳಿದೆ ನೀನು….. ನ್ಯಾಷನಲ್ ನ್ಯೂಸ್ನಲ್ಲಿ ನಮ್ಮಂಥವರ ಕುರಿತಾಗಿ ರಾದ್ಧಾಂತ ನಡೆಯುತ್ತಿರುತ್ತೆ ಅಂತ…. ನೀನು ಎಂದಾದರೂ ಟಿವಿ ಚ್ಯಾನೆಲ್ ನೋಡಿದ್ದೀಯಾ? ಅದರಲ್ಲಿ ನಿಮ್ಮ ಭಾರತ ದೇಶದ ಬಗ್ಗೆ ಎಂತೆಂಥ ಡಾಕ್ಯುಮೆಂಟರೀಸ್ ಬರುತ್ತಿರುತ್ತೆ ಗೊತ್ತಾ….? ಅದರಲ್ಲಿ ನಿಮ್ಮ ಭಾರತದ ಕುರಿತಾಗಿ…. ಹೇಳೋದೇ ಬೇಡ ಬಿಡು. ಎಲ್ಲಿ ನೋಡಿದರೂ ನಿಮ್ಮ ದೇಶದಲ್ಲಿ ತೆರೆದ ಗುಂಡಿಗಳು, ದುರ್ನಾತ ಬೀರುವ ಮೋರಿಗಳು, ಕೊಳಕಾದ ಗುಡಿಸಲು ಜೋಪಡಿಗಳ ಸ್ಲಮ್ ಗಳು….” ತಾನೇನೋ ಅದರ ಮುಂದೆ ನಿಂತಿದ್ದೇನೆ ಎಂಬಂತೆ ಮುಖ ಸಿಂಡರಿಸಿದಳು ಹಫೀಜಾ.
“ಕೆಲವು ವರ್ಷಗಳ ಹಿಂದೆ ಒಂದು ಆಸ್ಕರ್ ಅವಾರ್ಡ್ ಚಿತ್ರ ಬಂದಿತ್ತು ನಿಮ್ಮ ದೇಶದ ವೈಭವ ತೋರಿಸಲು…. ಆ ಚಿತ್ರದಲ್ಲೂ ಇಂಡಿಯಾ ಅಂದ್ರೆ ಸ್ಲಮ್ ಏರಿಯಾ ಅಂತ್ಲೇ ತೋರಿಸಿದ್ದಾರೆ…. ಏನದು ಹೆಸರು `ಸ್ಲಮ್ ಡಾಗ್ ಮಿಲಿಯನೇರ್!’ ನಿನ್ನ ದೇಶದ ಸ್ಥಿತಿ ಹೀಗೆ ಹದೆಗೆಟ್ಟಿರಬೇಕಾದರೆ ನೀನೇನೋ ಆಕಾಶದಲ್ಲಿ ಮೇಘಗಳ ಮಧ್ಯೆ ನಡೆದಾಡುತ್ತಿರುವವಳಂತೆ ದೊಡ್ಡದಾಗಿ ಬಾಯಿ ಮಾಡ್ತೀಯಲ್ಲ…..”
“ಸ್ವಲ್ಪ ಸುಮ್ಮನಿರ್ತೀಯಾ…. ನಾವು ಸ್ವಾಭಿಮಾನಿ ಜನ. ನಿಮ್ಮ ದೇಶದವರ ತರಹ ಬಿಟ್ಟಿ ಕೂಳು, ಪುಗಸಟ್ಟೆ ಮಜಾ ಸಿಗುತ್ತೆ ಅಂದ್ರೆ ಧಾವಿಸಿ ಓಡಿಬರುವವರಲ್ಲ ನಾವು! ಶಾಂತಿಪ್ರಿಯ ರಾಷ್ಟ್ರವಾದ ನಮ್ಮ ಭಾರತ ಇಡೀ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಂಥ ಹೆಸರು ಪಡೆದಿದೆ ಎಂದು ನಾನು ನಿನಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನಮ್ಮ ಭಾರತ ಎಂದಿದ್ದರೂ ಭಾರತವೇ…… ನಿಮ್ಮ ಇರಾಕ್ ಏನಿದ್ದರೂ ಇರಾಕೇ! ಇವೆರಡು ದೇಶಗಳನ್ನು ಹೋಲಿಸಿ ನೋಡಲಿಕ್ಕಾದರೂ ಸಾಧ್ಯವೇ?
“ಇಂಥ ಅಭಿವೃದ್ಧಿಗೊಂಡ ರಾಷ್ಟ್ರಗಳಿಗೆ ನಮ್ಮಂಥ ಪ್ರತಿಭಾಶಾಲಿ ಟೆಕ್ನಿಕ್ಸ್ ನುರಿತ ಜನರ ಸೇವೆ ಬೇಕೇಬೇಕು. ಹೀಗಾಗಿಯೇ ದೊಡ್ಡ ದೊಡ್ಡ ಕಂಪನಿಗಳು ನಮ್ಮಂಥವರಿಗೆ ಉಚಿತವಾಗಿ ವೀಸಾ ಸ್ಪಾನ್ಸರ್ ಮಾಡುತ್ತವೆ. ಅಷ್ಟು ಮಾತ್ರವಲ್ಲದೆ, ಎಲ್ಲಾ ಮುಂದುವರಿದ ದೇಶಗಳಾದ ಇಂಗ್ಲೆಂಡ್, ಜರ್ಮನಿ, ಅಮೆರಿಕಾಗಳು ನಮ್ಮ ದೇಶದಲ್ಲೇಕೆ ಅಷ್ಟೊಂದು ಸಾವಿರ ಕಾಲ್ಸೆಂಟರ್ಸ್, MNC ಸಂಸ್ಥೆಗಳನ್ನು ತೆರೆದು ನಮ್ಮವರಿಗೆ ನಮ್ಮ ದೇಶದಲ್ಲೇ ಸಿಗುವುದಕ್ಕಿಂತ 5-6 ಪಟ್ಟು ಹೆಚ್ಚಿನ ಸಂಬಳ ಕೊಡುತ್ತಾರೆ?
“ವಿಶ್ವದೆಲ್ಲೆಡೆಯ ಇನ್ಫಾರ್ಮೇಶನ್ ಟೆಕ್ನಾಲಜೀಸ್ ನಮ್ಮಂಥ ನುರಿತ ಭಾರತೀಯರಿಂದಲೇ ನಡೆಯುತ್ತಿದೆ. ಭಾರತೀಯರು ಎಂದಿದ್ದರೂ ಭಾರತೀಯರೇ ಎಂದು ನೆನಪಿಡು. ಅಗತ್ಯ ಇಲ್ಲದಿದ್ದರೂ ಶರಣಾರ್ಥಿಗಳಾಗಿ ಬಂದು ಇಂಥ ಶ್ರೀಮಂತ ರಾಷ್ಟ್ರಗಳ ಆರ್ಥಿಕ ಅಧೋಗತಿಗೆ ಎಂದೂ ಕಾರಣರಾಗುವುದಿಲ್ಲ!” ತನ್ನ ಸುದೀರ್ಘ ವಿವರಣೆಯಿಂದ ತಾಯ್ನಾಡಿನ ವಿರುದ್ಧ ಕೇಳಿದ ಮಾತಿಗೆ ಚಾಟಿ ಏಟಿನಂತೆ ಉತ್ತರವಿತ್ತಳು ಸಮೀಕ್ಷಾ.
“ಮಹಾನ್ ಬುದ್ಧಿಂತರು ನಿಮ್ಮ ಜನ….. ಅಷ್ಟೆಲ್ಲ ಬುದ್ಧಿವಂತರಾಗಿದ್ದರೆ ಬ್ರಿಟೀಷರೇಕೆ ನಿಮ್ಮನ್ನು 200 ವರ್ಷ ಆಳಿದ್ದು….? ವಿದೇಶೀಯರೇಕೆ ಬಂದು ನಿಮ್ಮಲ್ಲಿನ ಸಂಪತ್ತನ್ನು ಕೊಳ್ಳೆಹೊಡೆಯಲು ಅವಕಾಶ ಮಾಡಿಕೊಟ್ಟಿರಿ?”
“ಹೌದು….. ಸಿರಿ ಸಂಪತ್ತು ತುಂಬಿರುವ ಕಡೆ ತಾನೇ ಕಳ್ಳಕಾಕರು ಬಂದು ಲೂಟಿ ಹೊಡೆಯುವುದು? ವಿಶ್ವದ ಇತಿಹಾಸ ಗಮನಿಸಿದರೆ ನಮ್ಮ ದೇಶದಲ್ಲಿ ಕೋಟ್ಯಂತರ ಬೆಲೆಬಾಳುವ ಸಿರಿಸಂಪತ್ತು, ಜ್ಞಾನಕೇಂದ್ರ ತುಂಬಿದ ಕಣಜ ಇದ್ದದ್ದು ಸ್ಪಷ್ಟವಾಗಿಯೇ ಇದೆ. ಯಾರನ್ನು ನೋಡು, ನಮ್ಮ ದೇಶದ ಅಮೂಲ್ಯ ಸಂಪತ್ತನ್ನು ಲೂಟಿ ಮಾಡಲು ಆಕ್ರಮಿಸುವವರೇ! ಬ್ರಿಟಿಷರು ನಮ್ಮ ದೇಶಕ್ಕೆ ವ್ಯಾಪಾರಕ್ಕೆಂದು ಬಂದಾಗ ನಮ್ಮ ದೇಶದ ಜಾಗತಿಕ ಮಟ್ಟದಲ್ಲಿ 25% ಆಗಿತ್ತು… ಬೇರೆ ಬೇರೆ ಹಲವು ದೇಶಗಳ ಲೂಟಿಕೋರರು ಬಂದು ದಂಡೆತ್ತಿ ಕೊಂಡು ದೋಚಿದರೂ ಬ್ರಿಟಿಷರು ಬಂದು ಲಾಭ ಮಾಡಿಕೊಳ್ಳಲು ಇನ್ನೂ ಅಷ್ಟು ಉಳಿದಿತ್ತು ಗೊತ್ತಾ? ಇಡೀ ವಿಶ್ವಕ್ಕೆ ಮಕುಟಪ್ರಾಯ ನಮ್ಮ ದೇಶ ಅಂತ ನೆನಪಿಡು!” ಸಮೀಕ್ಷಾಳ ಮಾತುಗಳು ಕ್ರಾಂತಿಕಾರಿಯಾಗಿ ಸಿಡಿಯುತ್ತಿದ್ದವು.
“ಓಹೋ… ಅಷ್ಟೆಲ್ಲ ನೀವು ಗ್ರೇಟ್ ಆಗಿದ್ದರೆ ಮೆಲ್ಬೋರ್ನ್ನಲ್ಲಿ ಇಂಡಿಯನ್ ಸ್ಟೂಡೆಂಟ್ಸ್ ಮೇಲೆ ಯಾಕೆ ಹಲ್ಲೆ ನಡೆದು ಅವಾಂತರಗಳಾಗಬೇಕು?” ಹಫೀಜಾ ಭಾರತದ ವಿರುದ್ಧ ಹಳೆಯ, ಹೊಸತರ ಎಲ್ಲಾ ವಿಷಯ ಸಂಗ್ರಹಿಸಿಕೊಂಡೇ ವಾದಕ್ಕಿಳಿದಿದ್ದಳು.
“ಹುಚ್ಚರು ಎಲ್ಲಾ ಸಂದರ್ಭಗಳಲ್ಲೂ ವಿಶ್ವದಲ್ಲಿ ಎಲ್ಲೆಡೆ ಕಂಡುಬರುತ್ತಾರೆ… ಎಲ್ಲಾ ದೇಶಗಳಲ್ಲೂ ಈಗಲೂ ಈ ಭೇದಭಾವ ಇದ್ದೇ ಇರುತ್ತದೆ ಬಿಡು. ಆದರೆ ನಿಮ್ಮ ದೇಶದ ಜನ ಇದ್ದೀರಲ್ಲ… ಎಲ್ಲಿ ಆಶ್ರಯ ಬೇಡಿ ಬಂದು ವಾಸಿಸುತ್ತೀರೋ ಅಲ್ಲೇ ದಂಗೆ ಎಬ್ಬಿಸಿ ಗಲಾಟೆ ಮಾಡ್ತೀರಿ. ಇಡೀ ವಿಶ್ವಕ್ಕೆ ಇರಾಕ್ ಅಂದ್ರೆ ಏನು ಅಂತ ಗೊತ್ತಾಗಿದೆ ಬಿಡು… ಶಾಂತಚಿತ್ತರಾಗಿ ನೆಮ್ಮದಿಯಿಂದ ಬಾಳುವುದನ್ನು ನೀವು ಕಲಿಯಲೇ ಇಲ್ಲ ಬಿಡು. ಎಲ್ಲಿ ನಿಮಗೆ ಅನುಕೂಲ ಇದೆಯೋ, ಸೌಲಭ್ಯ ಸಿಗುತ್ತೋ ಅದನ್ನು ಹುಡುಕಿಕೊಂಡು ಹೋಗುತ್ತೀರಿ. ಸದಾ ಲಾಭ ಹುಡುಕುವ ಸ್ವಾರ್ಥಿಗಳು ನೀವು… ಯಾವ ದೇಶಕ್ಕೆ ಹೋದರೂ ಅದನ್ನು ನಿಮ್ಮದೆಂದು ಭಾವಿಸುವುದೇ ಇಲ್ಲ.”
ಹಫೀಜಾ ಸಮೀಕ್ಷಾಳನ್ನೇ ತಿಂದುಬಿಡುವಂತೆ ದುರುಗುಟ್ಟಿ ನೋಡಿದಳು. ಜವಾಬಿಗೆ ಸಮೀಕ್ಷಾ ಒಂದು ಮುಗುಳ್ನಗುವಷ್ಟೇ ಬೀರಿ ತನ್ನ ಪುಸ್ತಕ ಜೋಡಿಸಿಕೊಂಡು ಹೊರಡಲು ಎದ್ದಳು. ಎದುರಿಗಿದ್ದ ಮೇಜನ್ನು ಜೋರಾಗಿ ಗುದ್ದಿದ ಹಫೀಜಾ ಅಲ್ಲಿಂದ ಎದ್ದು ಹೊರಗೆ ಹೊರಟಳು. ಎರಡು ದೇಶದ ಪ್ರತಿನಿಧಿಗಳೆಂಬಂತೆ ಇವರು ಮಾಡಿದ ವಾದ ಆಲಿಸಲು ಅವರ ಪುಣ್ಯಕ್ಕೆ ಕ್ಲಾಸಿನಲ್ಲಿ ಆಗ ಯಾರೂ ಇರಲಿಲ್ಲ. ಇವರಿಬ್ಬರೂ ಫ್ರೀ ಪೀರಿಯಡ್ನಲ್ಲಿ ಆಂಗ್ಲ ಭಾಷೆಯ ಅಭ್ಯಾಸ ಮಾಡಲು ಕುಳಿತವರು, ಕಾವೇರಿದ ವಾದದಿಂದಾಗಿ ಈಗ ತಮ್ಮ ಸ್ನೇಹ ತ್ಯಜಿಸುವ ಮಟ್ಟಕ್ಕೆ ಬಂದಿದ್ದರು.
ಆ ದಿನದ ನಂತರ ಅವರು ಎಂದೂ ಹಿಂದಿನಂತೆ ಒಂದೇ ಬೆಂಚಿನಲ್ಲಿ ಕೂರುವುದು ಇತ್ಯಾದಿ ಮಾಡಲಿಲ್ಲ. ಕ್ರಮೇಣ ಸ್ನೇಹದ ಬಿಸುಪು ಕಡಿಮೆ ಆಗಿ ಅಪರಿಚಿತರಂತೆ ದೂರ ಇರತೊಡಗಿದರು. ಇಷ್ಟು ದಿನಗಳ ಇವರ ಸ್ನೇಹ ಕಂಡಿದ್ದ ಸಹಪಾಠಿಗಳೆಲ್ಲ ಇದೇಕೆ ಹೀಗೆ ಅಗಲಿದ್ದಾರೆ ಎಂದು ಬೆರಗಾದರು. ತಮ್ಮ ನಡುವೆ ಸ್ನೇಹದ ಸುಭದ್ರ ಕೋಟೆ ಬೆಳೆದಿದೆ ಎಂದೇ ನಂಬಿದ್ದ ಸಮೀಕ್ಷಾ , ಅದು ಕೇವಲ ಮಾತಿನ ವಾಗ್ಝರಿಗೆ ತುಂಡರಿಸಿದ ನೂಲಿನ ಬೇಲಿ ಎಂದು ಅರಿಯುವಷ್ಟರಲ್ಲಿ ಸಮಯ ಮೀರಿತ್ತು.