ಡಾಲರ್‌/ರೂಪಾಯಿ ಎರಡೂ ಬಿದ್ಹೋಯ್ತು. ಸುಮ್ಮನೆ ಪರ್ಸ್‌ ಯಾಕೆ ತೋರಿಸೋದು? ಡಾಲರ್‌ ಅಪರಿಚಿತವಾಯ್ತು. ಈರುಳ್ಳಿಯ ಮೋಹ ಹೆಚ್ಚಾಯ್ತು. ಅದರ ಬೆಲೆಯೂ ಹೆಚ್ಚಾಯ್ತು.

ಹೌದು. ಜನ ಇಂದು ರೂಪಾಯಿಯನ್ನು ಕಂಡರೆ ಮುಖ ತಿರುಗಿಸುತ್ತಾರೆ. ಅದರಿಂದ ಈರುಳ್ಳಿಯೂ ಬರುವುದಿಲ್ಲ ಎನ್ನುತ್ತಾರೆ. ಆದರೆ 1 ಡಾಲರ್‌ಗೆ 1 ಕೆ.ಜಿ. ಈರುಳ್ಳಿ ಸಿಗುತ್ತದೆ. ಈ ಈರುಳ್ಳಿ ಒಮ್ಮೆ ಬಡವರ ರೊಟ್ಟಿಗೆ ಆಧಾರವಾದರೆ, ಇನ್ನೊಮ್ಮೆ ಫೈವ್ ‌ಸ್ಟಾರ್‌ ಹೋಟೆಲ್‌ನ ವೈಭವವಾಗುತ್ತದೆ. ಹೋಟೆಲ್‌‌ಗಳ ಮೆನು ಕಾರ್ಡ್‌ನಲ್ಲಿ ಸ್ವಾದಿಷ್ಟ ಈರುಳ್ಳಿ ದೋಸೆ, ಈರುಳ್ಳಿ ಪರೋಟಾ ಎಂದು ದೊಡ್ಡದಾಗಿ ಬರೆದಿರುತ್ತಾರೆ. ಈಗಂತೂ ಈರುಳ್ಳಿ ನೋಡಿದರೆ ಸಾಕು ಮನಸ್ಸು ಅರಳುತ್ತದೆ. ಆದರೆ ಅದನ್ನು ಕೊಳ್ಳೋ ಸಾಮರ್ಥ್ಯವಂತೂ ಇಲ್ಲ. ಅದರ ಬೆಲೆ ಕೇಳಿದರೆ ತುಟಿಗಳಲ್ಲಿ ಮಂದಹಾಸ ಮೂಡುತ್ತದೆ. ಏಕೆಂದರೆ ಈಗ ನಮ್ಮ ನೆರೆಮನೆಯವನೂ ಅದನ್ನು ಖರೀದಿಸಲು ಆಗೋದಿಲ್ಲ. ತಾಕತ್ತಿದ್ದರೆ ಖರೀದಿಸಿ ತೋರಿಸಲಿ.

ರಾಜಕೀಯ ಮುಖಂಡರು ಗಲ್ಲಿಗಲ್ಲಿಯಲ್ಲಿ ಈರುಳ್ಳಿ ಮಾರುತ್ತಿದ್ದಾರೆ ಹಾಗೂ ಪರಸ್ಪರರಿಗಿಂತ ಬೆಲೆ ಕಡಿಮೆ ಮಾಡುತ್ತಿದ್ದಾರೆ. ಗೃಹಿಣಿಯರು ಈ ಎಲ್ಲ ಕನ್‌ಫ್ಯೂಷನ್‌ ಅನುಭವಿಸುತ್ತಿದ್ದಾರೆ.

ಈಗಂತೂ ಕಾಲ ಬದಲಾಗಿದೆ. ಹೈಟೆಕ್‌ ಅಲ್ಲ, ಆನಿಯನ್‌ ಟೆಕ್‌ ಆಗಿಬಿಟ್ಟಿದೆ. ರಾಲಿಗಳನ್ನು, ಸಭೆಗಳನ್ನು ಭಂಗಗೊಳಿಸಲು ಈಗ ಕೊಳೆತ ಟೊಮೇಟೊ, ಕೊಳೆತ ಮೊಟ್ಟೆಗಳು ಬೇಕಾಗುವುದಿಲ್ಲ. ಈಗ ಈರುಳ್ಳಿ ಎಸೆಯುತ್ತಿರುತ್ತಾರೆ. ಕೆಲವರು ಅವನ್ನು ತಮ್ಮ ಜೇಬುಗಳಲ್ಲಿ ಇಟ್ಟುಕೊಂಡರೆ, ಕೆಲವರು ತಮ್ಮ ಸೀರೆಯ ಸೆರಗಿನಲ್ಲಿ ಗಂಟು ಕಟ್ಟಿಕೊಳ್ಳುತ್ತಾರೆ.

ಭಾಷಣಗಳು ನಡೆಯುತ್ತಲೇ ಇರುತ್ತವೆ. ಆದರೆ ಈರುಳ್ಳಿ ಮುಫತ್ತಾಗಿ ಸಿಗುವುದಿಲ್ಲ. ಗುಂಪನ್ನು ನಿಯಂತ್ರಿಸಲು ಪೊಲೀಸರು ಜನರ ಮೇಲೆ ಅಶ್ರುವಾಯು ಸಿಡಿಸಿದರೆ ಇದಕ್ಕೆ ಪ್ರತಿಯಾಗಿ ಕಾರ್ಯಕರ್ತರು ಈರುಳ್ಳಿ, ಸೋರೆಕಾಯಿ, ಹೀರೆಕಾಯಿಗಳನ್ನು ಎಸೆಯುತ್ತಾರೆ. ಈರುಳ್ಳಿ ಮತ್ತು ಇತರ ತರಕಾರಿಗಳು ಇದಕ್ಕೇ ಲಾಯಕ್ಕಾಗಿವೆ.

ಈಗ ಹಬ್ಬಗಳಲ್ಲೂ ಈರುಳ್ಳಿ ರಂಗೇರುತ್ತಿದೆ. ರಕ್ಷಾಬಂಧನದಲ್ಲಿ ತಂಗಿಯರು ಅಣ್ಣನಿಗೆ, “ಅಣ್ಣಾ, ಈ ಬಾರಿ ರಕ್ಷಾಬಂಧನಕ್ಕೆ ಗಿಫ್ಟ್ ಆಗಿ 2 ಕಿಲೋ ಈರುಳ್ಳಿ ತಂದುಕೊಡು,” ಎನ್ನುತ್ತಾರೆ.

ಈರುಳ್ಳಿಯ ಮಾದಕತೆಯ ನೆರಳು ಪ್ರೀತಿಯ ಮೇಲೂ ಬೀಳತೊಡಗಿದೆ. ಪ್ರೇಯಸಿ ಪ್ರಿಯತಮನಿಗೆ, “ಪ್ರಿಯಾ, 2 ಕೆ.ಜಿ. ಈರುಳ್ಳಿ ತೆಗೆದುಕೊಂಡು ಬಾ. ನಿನ್ನ ಎದೆಗೊರಗಿ ಮುತ್ತಿನ ಮಳೆ ಸುರಿಸುತ್ತೇನೆ,” ಎನ್ನುತ್ತಾಳೆ.

ಪಾಪ ಗಂಡನ ಸ್ಥಿತಿ ಅಧೋಗತಿಯಾಗಿರುತ್ತದೆ. ಹೆಂಡತಿ ಕೋಪಗೊಂಡು ಹಟದಿಂದ ಈರುಳ್ಳಿ ತಂದ್ಕೊಡಿ ಅಂದರೆ ಗತಿಯೇನು? ಈಗ ಹಬ್ಬಗಳ ಸೀಸನ್‌. 10-15 ಮಿ.ಗ್ರಾಂ ಈರುಳ್ಳಿಯನ್ನು ತಂದಿಡಲಾಗಿದೆ. ಏಕೆಂದರೆ ಅತಿಥಿಗಳ ಎದುರಿಗೆ ಅಗೌರವ ಉಂಟಾಗಬಾರದು. ಇವರ ಮನೇಲಿ ಈರುಳ್ಳಿ ಕೂಡ ಇಲ್ಲ ಎಂದು ಅವರು ಅಂದ್ಕೋಬಾರದು.

ಆ ಈರುಳ್ಳಿ ಬರೀ ತೋರಿಸೋಕೆ ಮಾತ್ರ. ತಿನ್ನೋಕಲ್ಲ. ಅದು ಯಾವಾಗ ಅಗ್ಗವಾಗುತ್ತೋ ಆಗ ತಿಂದ್ರಾಯ್ತು.

ಈ ದುಬಾರಿಯ ದಿನಗಳಲ್ಲಿ ಹೆಂಡತಿಯ ಕೋಪ ತಡೆದುಕೊಳ್ಳಲಾಗುವುದಿಲ್ಲ. ಅವರೆಲ್ಲಾದ್ರೂ ಕೋಪದಿಂದ, “ನಾನು ಎಲ್ಲಾ ಈರುಳ್ಳಿಗಳನ್ನು ಕತ್ತರಿಸಿಬಿಡ್ತೀನಿ,” ಅಂದರೆ ಬಹಳ ಕಷ್ಟ.

“ಒಮ್ಮೆ ತೆಪ್ಪಗಿದ್ದರೆ ನೂರರಷ್ಟು ಸುಖ,” ಎಂಬ ಹೇಳಿಕೆ ಈರುಳ್ಳಿಯ ಬೆಲೆಯನ್ನು ಕಂಡೇ ಹೇಳಿದಂತಿದೆ.

ಸ್ನೇಹಿತನ ಮನೆಯದಂತೂ ಇನ್ನೂ ಕೆಟ್ಟ ಪರಿಸ್ಥಿತಿ. ನಾನು ಒಂದು ದಿನ ಅವನ ಮನೆಗೆ ಹೋಗಿದ್ದೆ. ಅವನು ಡೌಲು ಪ್ರದರ್ಶಿಸುತ್ತಾ, “ಲೇ ಊಟದ ಜೊತೆ ಸ್ವಲ್ಪ ಈರುಳ್ಳಿ ಚೂರುಗಳನ್ನು ಕತ್ತರಿಸು. ನೆಂಚಿಕೊಳ್ಳೋಕೆ ಚೆನ್ನಾಗಿರುತ್ತೆ,” ಎಂದ.

ಸ್ನೇಹಿತನ ಹೆಂಡತಿ ಒಳಗಿನಿಂದ ಓಡಿ ಬಂದು, “ಈರುಳ್ಳಿನಾ? ಅದೇ ಗುಂಡುಗುಂಡಗೆ ಇರುತ್ತಲ್ವಾ?” ಎಂದು ಕೇಳಿದಳು.

“ಹೌದು. ಗುಂಡುಗುಂಡಗೆ ಇರುತ್ತೆ,” ಸ್ನೇಹಿತ ಬೆರಳುಗಳಿಂದ ತೋರಿಸಿದ.

“ಅದು ಈರುಳ್ಳಿ ತರಹ ಕೆಂಪು ಬಣ್ಣದ್ದಲ್ವಾ?” ಅವಳು ಕೇಳಿದಳು.

“ಹೌದು. ಕೆಂಪು ಬಣ್ಣದ್ದು,” ಸ್ನೇಹಿತ ಸಿಟ್ಟಿನಿಂದ ಹೇಳಿದ.

“ಅದನ್ನು 15 ದಿನಗಳಿಂದ ನಾನು ನೋಡಯೇ ಇಲ್ಲ,” ಎಂದು ಹೇಳಿ ಆಕೆ ವೇಗವಾಗಿ ಒಳಗೋಡಿದಳು. ಪಾಪ. ನನ್ನ ಸ್ನೇಹಿತ ಪೆಚ್ಚಾಗಿ ನೋಡತೊಡಗಿದ. ನನ್ನ ಎದುರಿಗೆ ಅವನಿಗೆ ಭಾರೀ ಅವಮಾನವಾಗಿತ್ತು. ನನಗೆ ಒಳಗೊಳಗೇ ನಗು ಉಕ್ಕುತ್ತಿದ್ದರೂ ಎಲ್ಲರ ಮನೆ ದೋಸೇನೂ ತೂತೇ ಎಂದು ಅವನಿಗೆ ಸಮಾಧಾನಪಡಿಸಿದೆ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ