ಮಗಳು ರಜನಿಯನ್ನು ಬೀಳ್ಕೊಟ್ಟ ರೇಷ್ಮಾ ನೇರವಾಗಿ ವಿಮಾನ ನಿಲ್ದಾಣದಿಂದ ಮನೆಗೆ ಬಂದು, ಡ್ರಾಯಿಂಗ್‌ ರೂಮಿನಲ್ಲಿದ್ದ ಸೋಫಾದ ಮೇಲೆ ಉದ್ದಕ್ಕೆ ಕಾಲು ಚಾಚಿಕೊಂಡು, ಮೈ ಚೆಲ್ಲಿದಳು. ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಸಡಗರ, ಸಂಭ್ರಮ, ಕೇಕೆ, ಕೂಗಾಟ ಎಲ್ಲ ಮುಗಿದು ಮನೆಯ ವಾತಾವರಣ ಸ್ತಬ್ಧವಾಗಿ `ಬಿಕೊ' ಎನ್ನುತ್ತಿತ್ತು. ಅದು ಗಿಜಿಗುಡುತ್ತಿದ್ದ ಬಂಧುಗಳು, ಅತಿಥಿಗಳು, ಹರಿಬರಿ, ಗಡಿಬಿಡಿ ಎಲ್ಲ ನಿಂತು ಒಂದು ರೀತಿಯಲ್ಲಿ ಮಳೆ ನಿಂತ ಮೇಲಿನ ನಿಶ್ಶಬ್ದದ ಶೂನ್ಯ ಸೃಷ್ಟಿಸಿತ್ತು. ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಟ್ಟು ಬಂದ ರೇಷ್ಮಾಳ ಕಂಗಳಲ್ಲಿ ನೋವು ಹೆಪ್ಪುಗಟ್ಟಿತ್ತು. ಮಗಳ ಅಗಲುವಿಕೆಯ ನೋವು ಪ್ರವಾಹದಂತೆ ಒತ್ತರಿಸಿ ಬರುತ್ತಿದ್ದರಿಂದ ಅದನ್ನು ತಡೆಯಲು ಕಣ್ಣಿನ ರೆಪ್ಪೆಗಳು ಸತತವಾಗಿ ಸೋಲುತ್ತಿದ್ದವು. ಕಳೆದ 25 ವರ್ಷಗಳಿಂದ ಬದುಕಿನ ಹೋರಾಟದಲ್ಲಿ ಪ್ರತಿಯೊಂದು ಹೆಜ್ಜೆಯನ್ನೂ ಆತ್ಮವಿಶ್ವಾಸದಿಂದಲೇ ಮುಂದಿಟ್ಟು, ಪ್ರತಿ ಸಮಸ್ಯೆಯನ್ನು ಧೈರ್ಯದಿಂದಲೇ ಮೆಟ್ಟಿ ನಿಂತು ಈ ಸುಖದ ಮಹಲನ್ನು ಕಟ್ಟಿಸಿದ್ದಳು.

ಶ್ಯಾಮರಾಯರದು ಊರಲ್ಲಿ ಬಹು ದೊಡ್ಡ ಹೆಸರು. ಇವರ ಪರಿಚಯವಿರದವರು ಅತಿ ವಿರಳ. ಊರಿನ ಪ್ರತಿಷ್ಠಿತ ವ್ಯಕ್ತಿ, ಗೌರವಸ್ಥ ಮನೆತನ, ಜೊತೆಗೆ ಆಗರ್ಭ ಶ್ರೀಮಂತರು. ಮನೆಯ ಯಜಮಾನರಾಗಿದ್ದ ಶ್ಯಾಮರಾಯರು ಖ್ಯಾತ ವಕೀಲರಾಗಿದ್ದರು. ಬದುಕಿನ  ಮುಸ್ಸಂಜೆಯಲ್ಲಿ ಅದೆಷ್ಟು ಚುರುಕು, ಚೂಟಿಯಾಗಿದ್ದರೆಂದರೆ ಹದಿನಾರರ ಯುವಕರು ನಾಚಿಕೆಪಟ್ಟುಕೊಳ್ಳುವಷ್ಟು ಲವಲವಿಕೆಯಿಂದ ಇರುತ್ತಿದ್ದರು.

ಇಲ್ಲಿಯವರೆಗೂ ಕುಟುಂಬದ ಪ್ರತಿಷ್ಠೆ ಹಾಗೂ ಮರ್ಯಾದೆಯನ್ನು ಜತನದಿಂದ ರಾಯರು ಕಾಪಾಡಿಕೊಂಡು ಬಂದಿದ್ದರು. ಕುಟುಂಬದ ಏಕೈಕ ಹೆಣ್ಣುಮಗಳಾದ ರೇಷ್ಮಾಳ ಕುರಿತು ರಾಯರು ಚಿಂತಿಸುತ್ತಿದ್ದರು. ಅವರು ಚಿಂತಿಸುವುದಕ್ಕೆ ಕಾರಣವಿತ್ತು. ರೇಷ್ಮಾಳಿಗೆ ಜನ್ಮ ನೀಡಿ ತಂದೆ ಎನಿಸಿಕೊಂಡಿದ್ದ ಮಗ ಶಂಭುನಾಥ ತನ್ನ ವಿಪರೀತ ಕುಡಿತದ ಚಟದಿಂದಾಗಿ, ಮನೆಯ ಮರ್ಯಾದೆ ಜೊತೆಗೆ ಹಣ, ಒಡವೆ ಎಲ್ಲವನ್ನೂ ಮಣ್ಣುಪಾಲು ಮಾಡಿಬಿಟ್ಟಿದ್ದ.

ಮಗನನ್ನು ಸರಿದಾರಿಗೆ ತರುವ ರಾಯರ ಪ್ರಯತ್ನಗಳೆಲ್ಲ ವ್ಯರ್ಥವಾಗಿದ್ದವು. ಮಗ ತಮ್ಮಂತೆಯೇ ವಕೀಲಿಗಿರಿ ಮಾಡಿಕೊಂಡು ಸುಖವಾಗಿರಲೆಂದು, ಗೌರವಯುತವಾಗಿ ಬದುಕಲು ಸಹಾಯವಾಗಲಿ ಎಂದು ವಕಾಲತ್ತಿಗೆ ಅನುಕೂಲಾದ ಡಿಗ್ರಿಗಳನ್ನು ಕೊಡಿಸಿದ್ದರು. ಮಗ ಓದಿ ದೊಡ್ಡ ವಕೀಲನಾಗಿ ಹೆಸರು ಮಾಡಿ ತಮ್ಮ ವೃತ್ತಿಗೆ ಸಾಥ್‌ ನೀಡುತ್ತಾನೆ ಎನ್ನುವ ದೊಡ್ಡ ಕನಸು ಕಟ್ಟಿಕೊಂಡ ರಾಯರು ಹೆಮ್ಮೆಯಿಂದ ಓಡಾಡುತ್ತಿದ್ದರು.

ಆದರೆ ಕೆಲವೇ ದಿನಗಳಲ್ಲಿ ಮಗ ರಾಯರ ಕನಸನ್ನು ನುಚ್ಚು ನೂರು ಮಾಡಿಬಿಟ್ಟ. ಕೋರ್ಟ್‌ ಕಛೇರಿಗೆ ಹೋಗೋ ಬದಲು, ಸಾರಾಯಿ ಅಂಗಡಿ ಕಾಯುವ ಕೆಲಸ ಮಾಡಹತ್ತಿದ. ರಾತ್ರಿ ಹಗಲು ಎನ್ನದೆ ಸದಾ ಮತ್ತಿನಲ್ಲೇ ತೇಲಾಡುತ್ತಾ, ಬಾಯಿಗೆ ಬಂದಂತೆ ಕಿರುಚಾಡುವ ಈ ಕುಡುಕ ವಕೀಲನ ಬಳಿ ವಕಾಲತ್ತಿಗಾಗಿ ಯಾರು ಬರುತ್ತಾರೆ? ಅಷ್ಟಕ್ಕೂ ಶ್ಯಾಮರಾಯರ ಸೊಸೆ ಕೂಡ ಜವಾಬ್ದಾರಿಯುತ ಗೃಹಿಣಿಯಾಗಿರಲಿಲ್ಲ. ಗಂಡಮಕ್ಕಳನ್ನು ಅಷ್ಟೋ ಇಷ್ಟೋ ನೋಡಿಕೊಳ್ಳುವುದರ ಹೊರತಾಗಿ ಮಿಕ್ಕುಳಿದ ಸಮಯವೆಲ್ಲ ಜಗಳ, ಬೈಗುಳಕ್ಕೆ ಮೀಸಲಾಗಿರುತ್ತಿತ್ತು. ಇಂತಹ ವಾತಾವರಣದಲ್ಲಿ ಬೆಳೆಯುವ ಮಕ್ಕಳಿಗೆ ಎಂತಹ ಸಂಸ್ಕಾರ ದಕ್ಕಬಹುದು? ಜೊತೆಗೆ ಎಂತಹ ಭವಿಷ್ಯ ದೊರಕಬಹುದು? ಎಂದು ತಾತಾ ಶ್ಯಾಮರಾಯರಿಗೆ ಅರ್ಥವಾಗಿ ಹೋಗಿತ್ತು. ಮಗನ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲು ಹೋಗದ ರಾಯರಿಗೆ ತಮ್ಮ ಮುದ್ದು ಮೊಮ್ಮಗಳಾದ ರೇಷ್ಮಾಳ ಕುರಿತು ಹೆಚ್ಚು ಚಿಂತೆ. ರೂಪವಂತೆ ಹಾಗೂ ಗುಣವತಿಯಾದ ಇವಳನ್ನು ತಂದೆತಾಯಿ ದಾರಿ ತಪ್ಪಿಸಿಯಾರು ಎನ್ನುವ ಆತಂಕ ಎದೆಯಲಿತ್ತು. ಬೇಜವಾಬ್ದಾರಿ ತಂದೆ ತಾಯಿಯೊಂದಿಗೆ ಮೊಮ್ಮಗಳನ್ನು ಬಿಡಿಲೊಪ್ಪದ ರಾಯರು ಮೆಟ್ರಿಕ್‌ ಪರೀಕ್ಷೆ ಮುಗಿಯುತ್ತಿದ್ದಂತೆ 18 ತುಂಬಿದ ರೇಷ್ಮಾಳಿಗೆ ಸೂಕ್ತ ವರನನ್ನು ನೋಡಿ ಅದ್ಧೂರಿಯಾಗಿ ಮದುವೆ ಮಾಡಿ ತಲೆಯ ಮೇಲಿದ್ದ ಭಾರವನ್ನು ಕೆಳಗಿಳಿಸಿಕೊಂಡರು. ಮೊಮ್ಮಗಳನ್ನು ದಡ ಸೇರಿಸಿದ ತೃಪ್ತಿ ರಾಯರಿಗೆ ಇತ್ತು. ರೇಷ್ಮಾಳ ಕೈಹಿಡಿದ ರಾಜೀವ್ ಗೆ ಬೆಂಗಳೂರಿನಲ್ಲಿ ಬಹುದೊಡ್ಡ ಫರ್ನೀಚರ್‌ ಶೋರೂಂ ಇತ್ತು. ರಾಜೀವ್ ಮನೆಗೆ ಒಬ್ಬನೇ ಮಗ. ತನಗಿದ್ದ ಇಬ್ಬರು ತಂಗಿಯರನ್ನು ಒಳ್ಳೆಯ ಕಡೆ ಮದುವೆ ಮಾಡಿಕೊಟ್ಟಿದ್ದ. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಮಕ್ಕಳು ಚಿಕ್ಕಮ್ಮನ ಆಸರೆ, ಲಾಲನೆ ಪಾಲನೆಯಲ್ಲಿ ಸುಖವಾಗಿ ಬೆಳೆದಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ