ಕಥೆ – ಅರವಿಂದ ಜೋಷಿ
ಅನಾಥನಾದ ಪ್ರದೀಪನಿಗೆ ಆಶ್ರಯ ನೀಡಿ, ಮುಂದೆ ಸಮಾಜದಲ್ಲಿ ಒಬ್ಬ ಗಣ್ಯ ವ್ಯಕ್ತಿಯಾಗುವಂತೆ ರೂಪಿಸಲು, ಯಾವುದೇ ಸಂಬಂಧವಿಲ್ಲದ ಮಧ್ಯಮ ವರ್ಗದ ಗುರುಮೂರ್ತಿ ಬಹಳ ಶ್ರಮಿಸಿದರು. ಮುಂದೆ ಅವರನ್ನು ಬಹುತೇಕ ಮರೆತಿದ್ದ ಪ್ರದೀಪ್, ಅವರ ಋಣ ತೀರಿಸಿಕೊಂಡದ್ದು ಹೇಗೆ…..?
ಇದ್ದಕ್ಕಿದ್ದಂತೆ ಜಿಲ್ಲಾಧಿಕಾರಿ ಪ್ರದೀಪ್ ರ ಕಾರು, ರಸ್ತೆ ಬದಿಯ ಚಹಾ ಮಾರು ಗೂಡಂಗಡಿ ಎದುರು ಬಂದು ನಿಂತಾಗ, ಚಹಾ ಮಾರು ಗಾಬರಿಗೊಂಡ. ಜಿಲ್ಲಾಧಿಕಾರಿ ಪ್ರದೀಪ್ ಕಾರಿನಿಂದ ಇಳಿದು ಬಂದು ಆ ಚಹಾ ಮಾರುವವನಿಗೆ, “ಏನಪ್ಪಾ ಇಲ್ಲಿ ಗುರುಮೂರ್ತಿ ಎಲ್ಲಿದ್ದಾರೆ?” ಎಂದು ಕೇಳಿದರು.
ಚಹಾ ಮಾರುವವನು, “ಯಾವ ಗುರುಮೂರ್ತಿ ಸಾಹೇಬ್ರೇ….? ಅವನು ಯಾರು ಅಂತ ಗೊತ್ತಿಲ್ಲ,” ಎಂದ.
ಮುಂದುವರಿದ ಜಿಲ್ಲಾಧಿಕಾರಿ, “ಅವರೇ…. ಅವರೆ ಕಣಪ್ಪ ಇಲ್ಲಿ ಚಹಾ ಮಾಡಿ ಮಾರುತ್ತಿದ್ದವರು,” ಎಂದರು.
“ಓ….. ಅವರಾ ಸಾರ್….. ಈಗ್ಗೆ 34 ವರ್ಷಗಳ ಹಿಂದೆನೇ ತಮ್ಮ ಹಳ್ಳಿಗೆ ಹೋದರು. ಆವತ್ತಿನಿಂದ ನಾನೇ ಇಲ್ಲಿ ಚಹಾ ಮಾಡಿ ಮಾರುತ್ತಿದ್ದೇನೆ,” ಎಂದು ಹೇಳಿದ.
ಅದನ್ನು ಕೇಳುತ್ತಿದ್ದಂತೆಯೇ ಜಿಲ್ಲಾಧಿಕಾರಿ ಪ್ರದೀಪ್ ರ ಮುಖ ಸಪ್ಪಗಾಯಿತು. ಪುನಃ ಅವರು ಆ ಚಹಾ ಮಾರುವವನಿಗೆ, “ಅವರು ಹಳ್ಳಿಗೆ ಯಾಕೆ ಹೋದ್ರು ಅಂತ ನಿನಗೇನಾದರೂ ಗೊತ್ತಾ…..?” ಎಂದು ಕೇಳಿದರು.”
ಗೊತ್ತಿಲ್ಲ ಸಾರ್….. ನಾನಂತೂ ಆ ಬಗ್ಗೆ ಅವರನ್ನು ಕೇಳಿಯೂ ಇಲ್ಲ…. ನಾನು ಇಲ್ಲಿ ಬಂದಿದ್ದಾಗ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ನಿಶ್ಶಕ್ತಿಯಿಂದ ಒಳ್ಳೆ ಕಡ್ಡಿಯಂತಾಗಿದ್ದರು. ಹೀಗಾಗಿ ಬಂದಷ್ಟು ಬರಲಿ ಎಂದು ತಮ್ಮ ಈ ಅಂಗಡಿಯನ್ನು ನನಗೆ ಮಾರಿ ಹೊರಟು ಹೋದ್ರು….”
ಅವನ ಮಾತು ಕೇಳಿದ ಜಿಲ್ಲಾಧಿಕಾರಿ ಪ್ರದೀಪ್ ರ ಹೃದಯ ಹೊಡೆದುಕೊಳ್ಳಲಾರಂಭಿಸಿತು. ಅವರಿಗೆ ತಮ್ಮ ಮೇಲೆಯೇ ಕೋಪ ಬರತೊಡಗಿತು. ಅವರು ತಮ್ಮಷ್ಟಕ್ಕೆ ತಾವೇ, `ಛೇ…. ಅವರು ಎಂಥಾ ಒಳ್ಳೆಯ ಮನುಷ್ಯ…. ಇಷ್ಟು ಬೇಗ ಹಳ್ಳಿ ಸೇರಿಕೊಂಡ್ರಾ….’ ಎಂದುಕೊಳ್ಳುತ್ತಾ ಅಲ್ಲಿದ್ದ ಒಂದು ಹಳೇ ಕಾಲದ ಫೋಲ್ಡಿಂಗ್ ಕುರ್ಚಿಯನ್ನು ಎಳೆದುಕೊಂಡು ಕುಳಿತರು.
ಚಹಾ ಮಾರುವವನು, “ಸಾಹೇಬ್ರೇ, ಚಹಾ ಮಾಡಿ ಕೊಡ್ಲಾ…..?” ಎಂದು ಕೇಳಿದ.
“ಹ್ಞಾಂ…. ಎರಡರಲ್ಲಿ ಮೂರು ಮಾಡಿ, ಒಂದು ಇಲ್ಲಿ ಕೊಡು, ಉಳಿದೆರಡನ್ನು ಕಾರಿನಲ್ಲಿ ಕುಳಿತ ಡ್ರೈವರ್ ಹಾಗೂ ಪಿ.ಎ.ಗೆ ಕೊಡು,” ಎಂದು ಹೇಳಿ ಅದೇ ಕುರ್ಚಿಯಲ್ಲಿ ಒರಗಿ ಕುಳಿತುಕೊಂಡರು. ಹಾಗೇ ಕುಳಿತಿದ್ದ ಅವರಿಗೆ ಹದಿನೈದು ವರ್ಷಗಳ ಹಿಂದಿನ ಘಟನೆಗಳು ಮನದಲ್ಲಿ ಮೂಡಲಾರಂಭಿಸಿತು.
ಹೌದು….ಅಂದು ನಾನು ಇಲ್ಲೇ ಇದ್ದ ಒಂದು ಹಳೇ ಮರದ ಬೆಂಚಿನ ಮೇಲೆ ಹಸಿದು ಬಂದು ನಿತ್ರಾಣನಾಗಿ ಕುಳಿತಿದ್ದೆ. ಆಗ ಅಲ್ಲಿ ಚಹಾ ಮಾಡಿ ಮಾರುತ್ತಿದ್ದ ಗುರುಮೂರ್ತಿ ನನ್ನನ್ನು ಕಂಡು ಕಕ್ಕುಲಾತಿಯಿಂದ, “ಯಾರಪ್ಪಾ ನೀನು….? ತುಂಬಾ ದುಃಖದಲ್ಲಿ ಇದ್ದಂತೆ ಕಾಣ್ತೀಯಾ…. ಚಹಾ ಮಾಡಿ ಕೊಡಲೇ….?” ಎಂದು ಕೇಳಿದರು.
ಹಾಗೆ ಹೇಳಿದೊಡನೆ ನನಗೆ ಕಣ್ತುಂಬ ನೀರು ಬಂದು, “ಅಂಕಲ್ ನನ್ನ ಹತ್ರ ದುಡ್ಡಿಲ್ಲ…..” ಎಂದಿದ್ದೆ.
ಅದಕ್ಕವರು, “ಅಯ್ಯೋ…. ಹುಚ್ಚಪ್ಪಾ, ನೀನು ತುಂಬಾ ಹಸಿದಂತೆ ಕಾಣ್ತಿದ್ದೀ. ಚಹಾದ ಜೊತೆಗೆ ಬಿಸ್ಕತ್ತು ಕೊಡ್ತೀನಿ ತಿನ್ನು,” ಎಂದು ಒಂದು ಲೋಟ ಚಹಾ ಹಾಗೂ ಹತ್ತಾರು ಬಿಸ್ಕತ್ತು ಕೊಟ್ಟರು. ಅದನ್ನು ತಿಂದ ನಂತರ ನಾನು ಇನ್ನೂ ಅಲ್ಲಿಯೇ ಕುಳಿತಿದ್ದಾಗ ಗುರುಮೂರ್ತಿಯವರು ಹತ್ತಿರ ಬಂದು, “ಏನಪ್ಪಾ….ನೀನು ಮನೆಯಿಂದ ಓಡಿ ಬಂದಿದ್ದೀಯಾ….?” ಎಂದು ಕೇಳಿದರು.
`ಹ್ಞಾಂ…. ಹೌದು ಅಂಕಲ್,’ ಎನ್ನುವಂತೆ ತಲೆ ಆಡಿಸಿದೆ.
ಮುಂದುವರಿದ ಗುರುಮೂರ್ತಿ ನನ್ನ ಪರಿಸ್ಥಿತಿ ಅರಿತು, “ಮಗೂ… ನೀನು ಈಗಲೇ ವಾಪಸ್ ಹೋಗು. ಹೆತ್ತವರನ್ನು ತಪ್ಪಾಗಿ ತಿಳಿಯಬಾರದು. ಅವರು ಕೋಪದಿಂದ ನಾಲ್ಕು ಮಾತು ಆಡಿದರೂ ಅದರಲ್ಲಿ ಪ್ರೀತಿ ಇರುತ್ತೆ,” ಎಂದು ಹೇಳಿದರು.

ನಾನು ಅಳುತ್ತಾ, “ಅಂಕಲ್….. ನನಗೆ ಅಮ್ಮ ಅಪ್ಪ ಯಾರೂ ಇಲ್ಲ…. ಅವರಿಬ್ಬರೂ ನಾನು ಚಿಕ್ಕ ವಯಸ್ಸಿನಲ್ಲಿದ್ದಾಗಲೇ ತೀರಿಕೊಂಡರು. ನಾನು ನನ್ನ ಚಿಕ್ಕಪ್ಪ, ಚಿಕ್ಕಮ್ಮನ ಜೊತೆ ಇದ್ದೆ. ಅಲ್ಲಿ ನನ್ನ ಪಾಡು ನಾಯಿ ಪಾಡಾಗಿತ್ತು. ಅವರು ನಾನು ಶಾಲೆಗೆ ಹೋಗುವುದನ್ನು ಬಿಡಿಸಿ, ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಆದರೆ ನನಗೆ ಮುಂದೆ ಓದಬೇಕೆಂಬ ಆಸೆ ತುಂಬಾ ಇದೆ,” ಎಂದು ಹೇಳಿದೆ.
ಅದಕ್ಕೆ ಗುರುಮೂರ್ತಿಯವರು, “ಏನೇ ಆಗಲಿ ಅವರೂ ನಿನ್ನವರೇ ಅಲ್ವಾ….? ತಿರುಗಿ ಅವರ ಬಳಿ ಹೊರಟುಹೋಗು. ನೀನು ಒಬ್ಬಂಟಿಯಾಗಿದ್ದರೆ, ಈ ಪ್ರಪಂಚ ನಿನ್ನನ್ನು ಭಿಕ್ಷುಕನನ್ನಾಗಿ ಮಾಡುತ್ತದೆ,” ಎಂದು ಬುದ್ಧಿ ಹೇಳಿದರು.
ನಾನು ಅವರ ಪಾದಕ್ಕೆ ಬಿದ್ದು, “ಅಂಕಲ್…. ಸದ್ಯಕ್ಕೆ ನನಗೆ ಇರಲು ಒಂದು ನೆರಳು ಕೊಡಿ, ನಾನು ಯಾವುದಾದರೂ ಕೆಲಸ ಮಾಡುತ್ತಾ, ನನ್ನ ಓದು ಮುಂದುವರಿಸುತ್ತೇನೆ,” ಎಂದು ಕೇಳಿಕೊಂಡೆ.
ಗುರುಮೂರ್ತಿ, “ಆಯ್ತು….. ನೀನು ನನ್ನ ಜೊತೆ ಇರು. ನಾನು ಪಟ್ಟಣದಲ್ಲಿ ಒಂದು ರೂಮಿನಲ್ಲಿ ಬಾಡಿಗೆಗೆ ಇದ್ದೇನೆ, ನನ್ನ ಹೆಂಡತಿ, ಮಕ್ಕಳು ಹಳ್ಳಿಯಲ್ಲಿದ್ದಾರೆ,” ಎಂದು ಹೇಳಿ ನನ್ನ ಪಾಲಿಗೆ ಸಾಕ್ಷಾತ್ ದೇವರೇ ಆಗಿದ್ದರು.
ಹೀಗೆ ಒಬ್ಬ ಅಪರಿಚಿತನಿಗೆ ಉಳಿದುಕೊಳ್ಳಲು ಸೂರಿನ ವ್ಯವಸ್ಥೆ ಮಾಡಿದ್ದು, ಇದೇ ರೀತಿ ನಾಲ್ಕೈದು ವರ್ಷ ಅವರ ಜೊತೆಗಿದ್ದ ನಾನು ಸುತ್ತಲಿನ ಹತ್ತಾರು ಮಕ್ಕಳಿಗೆ ಪಾಠ ಹೇಳಿಕೊಡುತ್ತಾ ಅಲ್ಪಸ್ವಲ್ಪ ಸಂಪಾದನೆ ಮಾಡತೊಡಗಿದ್ದೆ. ಆದರೆ ಇದ್ಯಾವುದೂ ನನ್ನ ಓದುಬರಹದ ಖರ್ಚಿಗೆ ಸಾಕಾಗುತ್ತಿರಲಿಲ್ಲ. ಆದರೂ ಗುರುಮೂರ್ತಿ ನನ್ನನ್ನು ತಮ್ಮ ಜೊತೆ ಇರಿಸಿಕೊಂಡಿದ್ದು, ಹಾಗೂ ಹೀಗೂ ನಾನು ಉತ್ತಮ ಅಂಕಗಳೊಂದಿಗೆ ಗ್ರಾಜ್ಯುಯೇಶನ್ ಮುಗಿಸಿದ ನಂತರ ಐ.ಎ.ಎಸ್ ಸಿದ್ಧತೆಗಾಗಿ ದೆಹಲಿಗೆ ಹೊರಟು ಹೋಗಿದ್ದೆ. ಆಗ ಅದರ ಎಲ್ಲ ಖರ್ಚುಗಳನ್ನೂ ಗುರುಮೂರ್ತಿಯವರೇ ನೋಡಿಕೊಂಡಿದ್ದರು.
ಏಕೆಂದರೆ, ತಮ್ಮ ಮುಂದಿದ್ದ ಹುಡುಗ ತನ್ನ ಕನಸನ್ನು ಸಾಕಾರಾಗೊಳಿಸಲಿ ಎಂಬುದಷ್ಟೇ ಅವರ ಉದ್ದೇಶವಾಗಿತ್ತು. ಇಷ್ಟೇ ಅಲ್ಲದೇ ನಾನು ದೆಹಲಿಗೆ ಹೊರಟು ನಿಂತಿದ್ದಾಗ, ಅಲ್ಲಿ ತಮ್ಮ ಆಪ್ತರೊಬ್ಬರ ವಿಳಾಸ ಹಾಗೂ ಅವರಿಗೆ ಬರೆದ ಪತ್ರ ಕೊಡುತ್ತಾ, “ನೀನು ತಪ್ಪದೇ ಅವರನ್ನು ಕಾಣು. ಅವರು ನಿನಗೆ ಯಾವುದಾದರೂ ಪಾರ್ಟ್ ಟೈಮ್ ಕೆಲಸ ಕೊಡಿಸಲು ಹೇಳಿರುವೆ…. ಇದರಿಂದ ನಿನಗೆ ಸ್ವಲ್ಪ ಸಹಾಯ ಆಗಬಹುದು. ಹಾಗೂ ಒಂದು ವೇಳೆ ನಿನಗೆ ಏನಾದರೂ ಸಮಸ್ಯೆ ಎದುರಾದರೆ, ಹಣ ಬೇಕಿದ್ದರೆ ನಿಸ್ಸಂಕೋಚವಾಗಿ ನನಗೆ ತಕ್ಷಣ ಪತ್ರ ಬರೆ. ಒಟ್ಟಾರೆ ನೀನು ದೊಡ್ಡ ಅಧಿಕಾರಿಯಾಗಿ ವಾಪಸ್ ಬರಬೇಕು, ಅಷ್ಟೇ ನಿನ್ನ ಗುರಿ,” ಎಂದು ಕಾಳಜಿ ಪೂರ್ವಕವಾಗಿ ಹೇಳಿದ್ದರು.
ಮುಂದಿನ ದಿನದಲ್ಲಿ ನಾನು ತುಂಬಾ ಶ್ರಮಹಿಸಿ ಓದಿ ಒಳ್ಳೆ ರಾಂಕ್ ನಲ್ಲಿ ಐ.ಎ.ಎಸ್ ಕ್ಲಿಯರ್ ಮಾಡಿದ್ದೆ. ಆ ಕಾರಣದಿಂದಾಗಿ ನನಗೆ ಹೋಂ ಟೌನ್ ಕೇಡರ್ ಸಿಕ್ಕಿದ್ದು. ನಾನು ಈ ಒಂದು ಸಾಧನೆ ಮಾಡಿ ಮುಗಿಸಲು ಭೂಮಿ ಆಕಾಶ ಒಂದು ಮಾಡಿದ್ದು….. ಈ ಪ್ರಪಂಚದಲ್ಲಿ ನನ್ನವರು ಎಂದು ಯಾರೂ ಇಲ್ಲದಿದ್ದರೂ ಗುರುಮೂರ್ತಿ ಅಂಕಲ್ ತನ್ನ ಪಾಲಿಗೆ ತಂದೆ ತಾಯಿ ಆಗಿ ಪ್ರೀತಿಯ ಧಾರೆ ಎರೆದಿದ್ದರು. ಆನಂತರ ಕೆಲವು ತಿಂಗಳುಗಳ ಕಾಲ ಮುಗಿಸಿ ನಾನು ಇಚ್ಛಿಸಿದ ಸ್ಥಳಕ್ಕೆ ಪೋಸ್ಟಿಂಗ್ ಆಗಿದ್ದು ಎಲ್ಲವನ್ನೂ ನೆನಪಿಸಿಕೊಳ್ಳುತ್ತಿದ್ದರು.
“ಸಾಹೇಬ್ರೇ….. ಚಹಾ ತಗೋಳಿ….” ಎಂದ ಚಹಾ ಮಾರುನ ಧ್ವನಿ ಕೇಳಿಸಿದಾಗ ಯೋಚನಾ ಜಗತ್ತಿನಿಂದ ವಾಸ್ತವ ಜಗತ್ತಿಗೆ ಬಂದರು ಪ್ರದೀಪ್.
ಅವನು ಕೊಟ್ಟ ಚಹಾವನ್ನು ಒಬ್ಬ ಜಿಲ್ಲಾಧಿಕಾರಿ ಅಹಂಕಾರವಿಲ್ಲದೆ, ಸಹಜವಾಗಿ ಕುಡಿಯುತ್ತಿರುವ ದೃಶ್ಯವನ್ನು ಅಕ್ಕಪಕ್ಕದ ಇತರೇ ಅಂಗಡಿಯವರು ಬೆರಗುಗಣ್ಣಿನಿಂದ ನೋಡತೊಡಗಿದ್ದರು. ಚಹಾ ಕುಡಿದ ಪ್ರದೀಪ್, ಅಂಗಡಿಯವನಿಗೆ, “ಫಸ್ಟ ಕ್ಲಾಸ್ ಚಹಾ ಕೊಟ್ಟೆ,” ಎನ್ನುತ್ತಾ ಅದರ ಬಾಬ್ತು ಹಣ ಕೊಟ್ಟು ತಮ್ಮ ಸರ್ಕಾರಿ ಕಾರನ್ನು ವಾಪಸ್ ಕಳುಹಿಸಿ, ಒಂದು ಖಾಸಗಿ ಕಾರನ್ನು ಬಾಡಿಗೆಗೆ ಪಡೆದು ಗುರುಮೂರ್ತಿಯವರಿದ್ದ ಹಳ್ಳಿಯ ಕಡೆ ಪ್ರಯಾಣ ಬೆಳೆಸಿದರು. ಕಾರು ಹೊರಡುತ್ತಿದ್ದಂತೆ ಮತ್ತೆ ಅವರಿಗೆ ಹಿಂದಿನ ನೆನಪು ಬರತೊಡಗಿತು. ಏಳು ವರ್ಷಗಳ ಹಿಂದೆ ನಾನು ದೆಹಲಿಗೆ ಹೊರಟು ನಿಂತಾಗ ಇದೇ ಗುರುಮೂರ್ತಿಯವರು ಎಷ್ಟೊಂದು ಉತ್ಸಾಹದಿಂದ ನನ್ನನ್ನು ರೈಲಿನಲ್ಲಿ ಕೂರಿಸಲು ಬಂದಿದ್ದವರು ಮನಬಿಚ್ಚಿ, “ನೋಡು ಪ್ರದೀಪ್…. ನೀನು ಇನ್ನು ಎಂದಿಗೂ ಒಬ್ಬಂಟಿ ಎಂದು ತಿಳಿಬೇಡಾ. ನನಗಂತೂ ಯಾವ ಗಂಡು ಮಕ್ಕಳಿಲ್ಲ. ನೀನೇ ನನಗೆ ಮಗ ಇದ್ದಂತೆ. ಹಳ್ಳಿಯಲ್ಲಿ ನಿನ್ನ ತಾಯಿ ಅಲ್ಲದೇ, ನಿನ್ನಿಬ್ಬರು ಚಿಕ್ಕ ಸಹೋದರಿಯರು ಇದ್ದಾರೆ. ಅವರಿಗೆ ನಿನ್ನ ಬಗ್ಗೆ ಎಲ್ಲ ಗೊತ್ತಿದೆ. ಅವರು ನಿನ್ನನ್ನು ನೋಡಲು ತುಂಬಾ ಉತ್ಸುಕರಾಗಿದ್ದಾರೆ……” ಎಂದು ಹೇಳಿದರು.
“ಅಂಕಲ್…. ನಾನು ಪ್ರಮಾಣ ಮಾಡಿ ಹೇಳ್ತೀನಿ. ನಾನು ಯಶಸ್ವಿಯಾಗಿ ಬಂದ ನಂತರ ಖಂಡಿತಾ ನಿಮ್ಮ ಹಳ್ಳಿಗೆ ಹೋಗಿ ಅವರನ್ನು ಭೇಟಿ ಮಾಡುವೆ,” ಎಂದು ಹೇಳುತ್ತಿದ್ದಂತೆ ರೈಲು ನಿಧಾನವಾಗಿ ಹೊರಟಿತ್ತು.
ಗುರುಮೂರ್ತಿಯವರು ರೈಲಿನ ಜೊತೆ ಓಡೋಡಿ ಬರುತ್ತಾ, “ಪ್ರದೀಪಾ…. ಅಲ್ಲಿ ಇಲ್ಲಿ ಏನೇನೋ ತಿಂದು ಆರೋಗ್ಯ ಹಾಳು ಮಾಡ್ಕೋಬೇಡಾ… ಆ ಬ್ಯಾಗ್ ನಲ್ಲಿ ನಿನಗೆ ಎರಡು ದಿನಕ್ಕೆ ಬೇಕಾಗುವಷ್ಟು ಊಟ ತಿಂಡಿ ಇಟ್ಟಿದ್ದೇನೆ,” ಎಂದು ಕಕ್ಕುಲತೆಯಿಂದ ಹೇಳಿದರು. ರೈಲು ಮುಂದೆ ಸ್ವಲ್ಪ ಜೋರಾಗಿ ಚಲಿಸಿದಾಗ ನನ್ನ ಮುಖ ಕಣ್ಮರೆಯಾಗುವ ತನಕ ಕೈಬೀಸುತ್ತಲೇ ಇದ್ದದ್ದು ನೆನೆಸಿಕೊಂಡಾಗ ನನಗೆ ಕಣ್ಣಾಲಿಗಳು ತುಂಬಿ ಬಂದಿತ್ತು.
`ಛೇ…. ಅವರು ಅಷ್ಟು ಕಾಳಜಿ ವಹಿಸಿದ್ದರೂ ತಾನು ತನ್ನದೇ ಲೋಕದಲ್ಲಿ ಇದ್ದು ಒಂದು ಪತ್ರ ಕೂಡ ಬರೆದಿರಲಿಲ್ಲ, ಎಷ್ಟು ಸ್ವಾರ್ಥಿ ಆಗಿಬಿಟ್ಟೆ! ದೊಡ್ಡ ಮನುಷ್ಯನಾಗು ಉಮೇದಿನಲ್ಲಿ ಕುರುಡನಾಗಿದ್ದೆ,’ ಎಂದು ತಮ್ಮನ್ನೇ ಹಳವಿಸಿಕೊಂಡರು ಪ್ರದೀಪ್.
ಅವರೆಂದೂ ಗುರುಮೂರ್ತಿಯವರ ಹಳ್ಳಿಗೆ ಬಂದಿದ್ದೇ ಇಲ್ಲ. ಆದರೆ ಆ ಹಳ್ಳಿ ಯಾವುದೆಂದು ಚೆನ್ನಾಗಿ ಗೊತ್ತಿತ್ತು. ಹೀಗಾಗಿ ಆ ಹಳ್ಳಿಗೆ ತಲುಪಿ, ಅವರಿವರನ್ನು ವಿಚಾರಿಸುತ್ತಾ ಗುರುಮೂರ್ತಿಯವರ ಮನೆ ಎದುರು ಬಂದು ಕಾರಿನಿಂದ ಇಳಿದರು.
ಅದು ಹಳೇ ಕಾಲದ ಹೆಂಚಿನ ಮನೆ, ಎದುರುಗಡೆ ಟಿನ್ ಶೀಟ್ ನಿಂದ ನಿರ್ಮಿಸಿದ್ದ ಶೆಡ್. ಅದರಲ್ಲಿ ಕುಳಿತು ಗುರುಮೂರ್ತಿಯವರ ಪತ್ನಿ ಗೌರಮ್ಮ ಹಸುವಿನ ಹಾಲು ಕರೆಯುತ್ತಿದ್ದರು. ಅಲ್ಲಿಯೇ ಪಕ್ಕದಲ್ಲಿ ಗುರುಮೂರ್ತಿಯವರ ದೊಡ್ಡ ಮಗಳು ಪಾತ್ರೆ ತೊಳೆಯುತ್ತಿದ್ದಳು, ಚಿಕ್ಕಮಗಳು ಜಗುಲಿ ಮೇಲೆ ಕುಳಿತು ಸೊಪ್ಪು ಬಿಡಿಸುತ್ತಿದ್ದಳು. ಎರಡು ಮೂರು ಹೆಜ್ಜೆ ಮುಂದೆ ಬಂದ ಪ್ರದೀಪ್, ಸ್ವಲ್ಪ ಗಂಟಲು ಸರಿಪಡಿಸಿಕೊಂಡು, “ಅಮ್ಮಾ….. ಗುರುಮೂರ್ತಿಯವರು ಇದ್ದಾರಾ…?” ಎಂದು ಕೇಳಿದರು.
ಆಕೆ ಹಾಲಿನ ಪಾತ್ರೆ ಇಟ್ಟು ಸೆರಗು ಸರಿಪಡಿಸಿಕೊಳ್ಳುತ್ತಾ, “ಸಾರ್, ತಾವು…..” ಎಂದು ಪ್ರಶ್ನಿಸಿದರು.
“ಅಮ್ಮಾ…. ನಾನು ಪ್ರದೀಪ್ ಈ ನಗರದ ಜಿಲ್ಲಾಧಿಕಾರಿ….” ಎಂದು ಮಾತು ಮುಗಿಸುವ ಮೊದಲೆ ಜಗುಲಿ ಮೇಲೆ ಕುಳಿತಿದ್ದ ಚಿಕ್ಕ ಮಗಳು ಒಳಗೆ ಓಡಿ ಹೋಗಿ ಕೈಯಲ್ಲಿ ಒಂದು ಫೋಟೋ ತಂದು, ತನ್ನ ಅಪ್ಪನ ಜೊತೆ ಇದ್ದ ವ್ಯಕ್ತಿಯ ಫೋಟೋ ತೋರಿಸುತ್ತಾ, “ಇದು ನೀವೇ ಅಲ್ವಾ ಸಾರ್….. ಅಪ್ಪ ತೀರಿಹೋಗಿ ಆಗಲೇ ಎರಡು ಮೂರು ವರ್ಷಗಳಾದವು,” ಎಂದಳು.
ಆ ಪೋರಿಯ ಮಾತು ಕೇಳುತ್ತಿದ್ದಂತೇ ಪ್ರದೀಪ್ ಗೆ ದುಃಖ ತಡೆಯಲಾಗಲಿಲ್ಲ. ಅವರಿಗೆ ಅರಿವಿಲ್ಲದಂತೆ ಕಣ್ಣಿನಿಂದ ನೀರು ಸುರಿಯಿತು. ಕಣ್ಣೊರೆಸಿಕೊಳ್ಳುತ್ತಾ ಮನೆಯ ಒಳಗೆ ಹೋಗಿ ಸಾಂತ್ವನದ ಮಾತನ್ನಾಡಿ, ಗೌರಮ್ಮ ಕೊಟ್ಟ ಹಾಲು ಕುಡಿದರು.
“ಅಮ್ಮಾ….. ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ನನ್ನ ಕೆಲಸದ ಭರಾಟೆಯಲ್ಲಿ ಅಂಕಲ್ ರನ್ನು ಕಾಣಲು ಬರಲಾಗಲಿಲ್ಲ. ಇಂದು ನಾನು ಈ ಒಂದು ಹಂತಕ್ಕೆ ತಲುಪಲು ನನಗೆ ಅವರು ಯಾವ್ಯಾವ ರೀತಿಯಲ್ಲಿ ಸಹಾಯ ಮಾಡಿದರು ಎಂದು ಹೇಳಲು ಪದಗಳೇ ಇಲ್ಲ. ಅವರು ಮಾಡಿದ ಉಪಕಾರವನ್ನು ಏಳು ಜನ್ಮ ಬಂದರೂ ಅವರ ಋಣ ತೀರಿಸಲು ಆಗುವುದಿಲ್ಲ. ಅವರು ಅಂತಹ ಮಹಾನ್ ಪುರುಷ…. ನಾನೀಗ ಬಂದಿದ್ದೇನೆ…. ಇನ್ನು ನೀವು ಈ ಹಳ್ಳಿಯಲ್ಲಿ ಇರುವುದು ಬೇಡ. ನಗರದಲ್ಲಿ ನನ್ನೊಂದಿಗೆ ಬಂದಿರಿ. ಇನ್ನು ಒಂದು ತಿಂಗಳಲ್ಲಿ ಎಲ್ಲಾ ವ್ಯವಸ್ಥೆ ಮಾಡುವೆ. ಯಾವುದಕ್ಕೂ ಚಿಂತೆ ಮಾಡಬೇಡಿ. ನಾನು ಗುರುಮೂರ್ತಿಯವರ ಮಗನಾಗಿ ನಿಂತು ನಿಮ್ಮೆಲ್ಲರನ್ನೂ ನೋಡಿಕೊಳ್ಳುವೆ,” ಎಂದು ಅವರಿಗೆ ಸಮಾಧಾನದ ಮಾತು ಹೇಳಿ, ಭಾರದ ಹೃದಯದಿಂದ ನಗರಕ್ಕೆ ಹಿಂದಿರುಗಿದರು.
ಪ್ರದೀಪ್ ಗೌರಮ್ಮರಿಗೆ ಭರವಸೆ ಕೊಟ್ಟಂತೆ ಮುಂದಿನ ಎರಡು ಮೂರು ತಿಂಗಳೊಳಗೆ ಸುಸಜ್ಜಿತವಾದ ವಿಶಾಲವಾದ ಮನೆ ಖರೀದಿಸಿ, ತಾವೇ ಖುದ್ದಾಗಿ ಒಂದು ದಿನ ಗುರುಮೂರ್ತಿಯವರ ಹಳ್ಳಿಗೆ ಹೋಗಿ ಅವರ ಪರಿವಾರದವರನ್ನು ಕರೆತಂದು ತಮ್ಮ ಜೊತೆಯಲ್ಲೇ ಇರಿಸಿಕೊಂಡರು. ಅಷ್ಟಲ್ಲದೇ, ಗುರುಮೂರ್ತಿಯವರ ಇಬ್ಬರು ಹೆಣ್ಣುಮಕ್ಕಳನ್ನು ಕಾಲೇಜು ಓದಿಸಿ, ಮದುವೆ ವ್ಯವಸ್ಥೆ ಸಹ ಮಾಡಿದರು.





