ಕಥೆ - ಚಂಚಲಾ ವೇಣು
``ಕಂಗ್ರಾಟ್ಸ್ ನಿತ್ಯಾ! ಅಂತೂ ಮನೇಲಿ ನಿಂಗೆ ಬೇಕಾದಂತಹ ಹುಡುಗನನ್ನೇ ಹುಡುಕಿದ್ದಾರೆ.....'' ಗೆಳತಿ ಕಾಂತಿ, ನಿತ್ಯಾಗೆ ವಿವಾಹ ಗೊತ್ತಾಗುತ್ತಿದ್ದಂತೆ ಶುಭಾಶಯ ಕೋರಿದಳು.
ನಿತ್ಯಾ ಬೆಳ್ಳನೆಯ ಬಣ್ಣದ, ಗುಂಗುರು ಕೂದಲಿನ ಪುಟ್ಟ ಪುಟ್ಟ ಕಣ್ಣುಗಳ ಸುಂದರ ಹುಡುಗಿ, ಹೆತ್ತವರಿಗೆ ಒಬ್ಬಳೇ ಮಗಳು. ಎಂಜಿನಿಯರಿಂಗ್ ಮುಗಿಯುತ್ತಿದ್ದಂತೆ ಮದುವೆ ಸಿದ್ಧತೆ ನಡೆಸಿದ್ದರು ಹೆತ್ತವರು. ಪ್ರೀತಿ ಪ್ರೇಮವೆಂದು ಅವಳು ಯಾವ ಗೋಜಿಗೂ ಹೋಗದಿದ್ದುದು ಮನೆಯಲ್ಲಿ ನೆಮ್ಮದಿ ತಂದಿತ್ತು.
ಅವಳದು ಸ್ವತಂತ್ರ ಮನೋಭಾವ, ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಅಂತೆಯೇ ತನ್ನ ಮನಸ್ಸಿಗೆ ಬಂದದ್ದನ್ನು ಮಾಡದೆಯೇ ಬಿಡುವವಳೂ ಅಲ್ಲ, ಮದುವೆ ಕುರಿತಾಗಿ ಅವಳ ಕನಸುಗಳು ಬೇರೆಯೇ ಇದ್ದವು. ಮದುವೆಯ ನಂತರ ತಾನು ಸ್ವಇಚ್ಛೆಯಿಂದ ಇರಬೇಕೆನ್ನುವ ಹಂಬಲವಿತ್ತು. ಯಾವ ತೊಡಕುಗಳು ಇರಬಾರದು, ಯಾರ ಅಂಕೆಯೂ ಇರಬಾರದೆಂದು ಆಸೆ ಪಟ್ಟಿದ್ದಳು. ಎಲ್ಲೆಡೆ ವರದಕ್ಷಿಣೆ ಹಿಂಸೆ, ಹಣದ ದಾಹ, ಕಿರುಕುಳ, ಆತ್ಮಹತ್ಯೆ ಎಂದೆಲ್ಲಾಆ ಸುದ್ದಿ ಕೇಳಿ ಅವಳಿಗೆ ಸಾಕಾಗಿತ್ತು.
``ಮಮ್ಮಿ ನನಗೆ ಅತ್ತೆ ಮಾವ ಇಲ್ಲದ ಮನೆಯನ್ನೇ ಹುಡುಕಿಕೊಡಿ. ಗಂಡನೊಂದಿಗೆ ಆರಾಮವಾಗಿ ಇರಬಹುದು, ಯಾವ ಕಿರಿಕಿರಿ ರಗಳೆ ಬೇಡ......'' ಎಂದಾಗ ಅವಳಮ್ಮ ಅಚ್ಚರಿಯಿಂದ, ``ಇಲ್ಲ ನಿತ್ಯಾ ನಿನ್ನ ಭಾವನೆ ತಪ್ಪು. ಎಲ್ಲರೂ ಹಾಗಿರುವುದಿಲ್ಲ, ಹಿರಿಯರಿದ್ದಲ್ಲಿ ನಿನಗೆ ಹೇಗೆ ತೊಂದರೆಯಾಗುತ್ತದೆ? ಇನ್ನೂ ನಿನ್ನನ್ನು ಅವರು ಕಾಳಜಿ ಮುಚ್ಚಟೆಗಳಿಂದ ನೋಡಿಕೊಳ್ತಾರೆ.....'' ಎಂದರು.
``ನೋ..... ಮಮ್ಮಿ ನನಗೆ ಜಾಯಿಂಟ್ ಫ್ಯಾಮಿಲಿ ಇಷ್ಟವಿಲ್ಲ..... ಅತ್ತೆ ಮಾವ ಯಾರೂ ಬೇಡ. ನನ್ನನ್ನು ಯಾರೂ ಅಂಕೆ ಮಾಡಬಾರದು. ಗಂಡ ಮಾತ್ರ ಸಾಕು.... ಯಾವ ಉಪದೇಶ, ಜವಾಬ್ದಾರಿಗಳಾಗಲೀ ನನಗೆ ಬೇಕಾಗಿಲ್ಲ. ಸಂಪೂರ್ಣ ಫ್ರೀಡಂ ಬಯಸುವವಳು ನಾನು. ನನ್ನದೇ ಆದಂತಹ ಸಾವಿರ ಕನಸುಗಳಿವೆ. ಅದಕ್ಕೆ ಯಾರಿಂದಲೂ ತೊಡಕಾಗುವುದು ಬೇಡ....'' ಎಂದು ಖಡಾಖಂಡಿತವಾಗಿ ಹೇಳಿಬಿಟ್ಟಳು. ಮಗಳ ಮನೋಭಾವಕ್ಕೆ ತಂದೆಯೂ ಬೆಚ್ಚಿಬಿದ್ದರು.
``ನೀನು ತುಂಬಾ ಸ್ವಾರ್ಥಿ ನಿತ್ಯಾ..... ನೀನು ಅಂದುಕೊಂಡಿರುವುದೆಲ್ಲಾ ತಪ್ಪು. ನಿನ್ನ ಜೊತೆ ಇಲ್ಲದಿದ್ದರೂ ಬೇರೆ ಊರಲ್ಲಿರುವುದೂ ಬೇಡವೇ?'' ತಾಯಿ ಗಾಬರಿಯಿಂದ ಕೇಳಿದರು.
``ಬೇಡ ಮಮ್ಮಿ.... ನಾವು ಅವರಲ್ಲಿಗೆ ಹೋಗುವುದು, ಅವರು ನಮ್ಮಲ್ಲಿಗೆ ಬರುವುದು ಇವೆಲ್ಲಾ ನನಗೆ ಸರಿಬರುವುದಿಲ್ಲ. ಮುಂದೊಂದು ದಿನ ಅವರ ಜವಾಬ್ದಾರಿ ನಾನೇ ಹೊರಬೇಕಾಗುತ್ತದೆ. ನಾನು ಅದಕ್ಕೆಲ್ಲ ಸಿದ್ಧಳಿಲ್ಲ... ಅವರ ಕುಟುಂಬದ ಸಂಪ್ರದಾಯ, ಆಚರಣೆ, ರೀತಿನೀತಿ ಇವೆಲ್ಲಾ ನಾನು ಪಾಲಿಸಬೇಕಾಗುತ್ತದೆ. ನಾನು ಪಾಲಿಸದಿದ್ದಲ್ಲಿ ಜಗಳ, ಕಿರಿಕಿರಿಗಳು ಶುರುವಾಗುತ್ತದೆ. ಇವ್ಯಾವುದಕ್ಕೂ ನಾನು ಒಪ್ಪುವುದಿಲ್ಲ.
``ಈ ವಿಷಯದಲ್ಲಿ ನನ್ನ ಬಲವಂತ ಪಡಿಸಬೇಡ... ಸಣ್ಣ ಕುಟುಂಬವಿರುವ ಹುಡುಗನನ್ನೇ ಹುಡುಕಿ. ಅಂತಹ ಗಂಡು ಸಿಗುವವರೆಗೆ ನಾನು ಕಾಯ್ತೀನಿ...'' ಎಂದು ನಿಷ್ಟುರವಾಗಿ ಹೇಳಿದಾಗ ಹೆತ್ತವರು ಸುಮ್ಮನಾಗಬೇಕಾಯಿತು.
ಎಷ್ಟು ಹೇಳಿದರೂ ಅವಳು ಈ ವಿಷಯದಲ್ಲಿ ಮಾತ್ರ ರಾಜಿ ಆಗಲೇ ಇಲ್ಲ. ಸೋತು ಸುಮ್ಮನಾದರು ಹೆತ್ತವರು.
ಆರು ತಿಂಗಳಲ್ಲಿ ಅವಳಿಗೆ ಅಕ್ಕ ತಮ್ಮ ಮಾತ್ರ ಇರುವಂತಹ ಸಂಬಂಧ ಸಿಕ್ಕಿತು. ಅಕ್ಕ ಮದುವೆಯಾಗಿ ಸಿಂಗಪುರದಲ್ಲಿದ್ದಳು, ಹುಡುಗ ಬಿ.ಇ. ಮುಗಿಸಿ ಬಾಂಬೆಯಲ್ಲಿ ದೊಡ್ಡ ಕಂಪನಿಯಲ್ಲಿ ಕೆಲಸಕ್ಕಿದ್ದ. ಅವನ ಚಿಕ್ಕಪ್ಪ ಚಿಕ್ಕಮ್ಮ ಇದೇ ಊರಿನಲ್ಲಿದ್ದರು ಈ ಸಂಬಂಧ ಕುದುರಿಸಿದ್ದರು.