ಇತರರೊಡನೆ ಸಂವಹನ ನಡೆಸಲು ಪ್ರತಿಯೊಬ್ಬರಿಗೂ ಭಾಷೆಯ ಅಗತ್ಯವಿರುತ್ತದೆ. ಜಗತ್ತಿನಲ್ಲಿ ಸಾವಿರ ಸಂಖ್ಯೆಯಲ್ಲಿ ಭಾಷೆಗಳಿದ್ದು ನೂರಾರು ರೀತಿಯಲ್ಲಿ ಸಂವಹನ ನಡೆಯುತ್ತದೆ, ಆದರೆ ಕೆಲವೊಮ್ಮೆ ಕೆಲವರಿಗೆ ಈ ಸಂಹನವೇ ಸವಾಲಾಗುತ್ತದೆ. ಶಬ್ದಗಳೆಂದರೇನು? ಭಾಷೆ ಎಂದರೇನು? ಮಾತು ಎಂದರೇನೆಂದೇ ಅರಿಯದ ಹಲವಾರು ಜನರು ನಮ್ಮ ನಡುವೆ ಇದ್ದಾರೆ. ಕಿವಿ ಕೇಳಿಸದ, ಮಾತನಾಡಲೂ ಬಾರದ ಇಂತಹ ಜನರು ಇತರರೊಡನೆ ಬೆರೆತು ಬಾಳುವುದು ಬಲು ಕಷ್ಟಕರ.

ಇಂತಹ ಸಂಪರ್ಕ ನ್ಯೂನತೆಯುಳ್ಳವರನ್ನು ಸಲಹುತ್ತಾ, ಅವರನ್ನೂ ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಸುವುದಕ್ಕೆ ಶ್ರಮಿಸುತ್ತಿರುವ ಸಂಸ್ಥೆಯೊಂದು ಬೆಂಗಳೂರಿನಲ್ಲಿದೆ. ಅದುವೇ `ಎಸ್‌.ಜಿ.ಎಸ್‌. ವಾಗ್ದೇವಿ ಸಂಪರ್ಕ ನ್ಯೂನತೆಯುಳ್ಳವರ ಪುನಶ್ಚೇತನ ಕೇಂದ್ರ.’

ಇದರ ಸಾರಥ್ಯ ವಹಿಸಿದವರು ಅತ್ಯುತ್ತಮ ಶಿಕ್ಷಕಿ ರಾಜ್ಯ ಪ್ರಶಸ್ತಿ ವಿಜೇತೆ ಡಾ. ಶಾಂತಾ ರಾಧಾಕೃಷ್ಣ. ಮೂಲತಃ ಮೈಸೂರಿನವರಾದ ಶಾಂತಾ ರಾಧಾಕೃಷ್ಣ ಮೈಸೂರಿನ ಅಖಿಲ ಭಾರತ ವಾಕ್‌ ಶ್ರವಣ ವಿಶ್ವ ವಿದ್ಯಾನಿಲಯದಲ್ಲಿ  ವಾಕ್‌ ಶ್ರವಣ ವಿಷಯದಲ್ಲಿ ಎಂ.ಎಸ್ಸಿ. ಪದವಿ ಪಡೆದುಕೊಂಡರು. ಕೊಯಂಬತ್ತೂರಿನಲ್ಲಿ ಸ್ಪೀಚ್‌ ಥೆರಪಿಸ್ಟ್ ಆಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಇವರು, 1973 ರಿಂದಲೂ ವಾಕ್‌ ಶ್ರವಣ ಪೀಡಿತ ಮಕ್ಕಳ ಪುನಶ್ಚೇತನಕ್ಕಾಗಿ ಶಾಂತಾ ತಮ್ಮ ಜೀವನ ಮುಡಿಪಾಗಿಟ್ಟರು. 1985-86ರಲ್ಲಿ ಅಮೆರಿಕಾದ ಓಕ್ಲಹಾಮಾ ವಿಶ್ವವಿದ್ಯಾನಿಲಯದಲ್ಲಿ ಸ್ಪೀಚ್‌ ಲ್ಯಾಂಗ್ವೇಜ್‌ನಲ್ಲಿ ಎಂ.ಎಸ್ಸಿ. ತರಬೇತಿಯನ್ನು ಮುಗಿಸಿದರು. ಅಮೆರಿಕನ್‌ ಸ್ಪೀಚ್‌ ಲ್ಯಾಂಗ್ವೇಜ್‌ ಅಸೋಸಿಯೇಶನ್‌ನಿಂದ ಕ್ಲಿನಿಕ್‌ ಕಾಂಪಿಟೆನ್ಸ್ ಸರ್ಟಿಫಿಕೇಟ್ ಪಡೆದಿರುವ ಇವರು 2010ರಲ್ಲಿ ಎಸ್‌. ್ಯಾಸಾದಿಂದ ಪಿ.ಎಚ್‌.ಡಿ. ಪದವಿ ಗಳಿಸಿದ್ದಾರೆ.

ಅಮೆರಿಕಾಗೆ ತೆರಳುವ ಮೊದಲು ಶಾಂತಾ ದೆಹಲಿಯ ಬಲವಂತ ರಾಯ್‌ ವಿದ್ಯಾ ಭವನದಲ್ಲಿ ಸಂಶೋಧನಾ ತರಬೇತುದಾರರಾಗಿ ಕೆಲವು ಕಾಲ ಸೇವೆ ಸಲ್ಲಿಸಿದ್ದರು. ಇದಲ್ಲದೆ 1983ರಲ್ಲಿ ಬೆಂಗಳೂರಿನಲ್ಲಿ ವಾಕ್‌ ಶ್ರವಣ ದೋಷವುಳ್ಳ ಮಕ್ಕಳಿಗಾಗಿ ಸಂಯುಕ್ತ ಸಂಸ್ಥೆಯೊಂದನ್ನು ಸ್ಥಾಪನೆ ಮಾಡಿದ್ದರು. ಹೀಗೆ ಸಂಸ್ಥೆಯೊಂದನ್ನು ಸ್ಥಾಪಿಸಿದ ತರುವಾಯ ಇಂತಹ ಮಕ್ಕಳ ತರಬೇತಿಗೆ ಅಗತ್ಯವಾದ ಪರಿಕರಗಳ ಕೊರತೆ ಇವರನ್ನು ಕಾಡಿತ್ತು. ಆಗ ತಾವೇ ಖುದ್ದಾಗಿ ಮಕ್ಕಳಿಗೆ ಓದಲೂ, ಹೇಳಿಕೊಡಲೂ ಅನುಕೂಲಕರಾದ ಪಠ್ಯ ಕ್ರಮವನ್ನು ಅವರೇ ಇಂಗ್ಲಿಷ್‌ ಹಾಗೂ ಕನ್ನಡದಲ್ಲಿ ತಯಾರಿಸಿದರು.

“ಸಂವಹನ ತೊಂದರೆಯುಳ್ಳರನ್ನು ಗುರುತಿಸಿ ಅವರಿಗೆ ಅಗತ್ಯ ತರಬೇತಿಗಳನ್ನು ನೀಡಬೇಕಾಗಿದೆ. ಉಳಿದ ಸಾಮಾನ್ಯ ಮಕ್ಕಳಂತೆಯೇ ಇವರಿಗೂ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಅವರು ಸ್ವತಂತ್ರವಾಗಿ ಬದುಕುವಂತೆ ಮಾಡುವುದೇ ಈ ಸಂಸ್ಥೆಯ ಮೂಲ ಉದ್ದೇಶವಾಗಿದೆ,” ಎನ್ನುವ ಶಾಂತಾ, “ಮಕ್ಕಳಲ್ಲಿನ ಕಿವುಡುತನವನ್ನು ಆದಷ್ಟು ಬೇಗನೆ ಗುರುತಿಸಿದ್ದರೆ ಒಳ್ಳೆಯದು. ಮಕ್ಕಳು ಮಾತು ಕಲಿಯುವ ಅವಧಿ ಎಂದರೆ ಮೂರು ತಿಂಗಳಿನಿಂದ ಎರಡು ವರ್ಷಗಳ ನಡುವೆ ಅವರಿಗೆ ಸರಿಯಾದ ಶ್ರವಣೋಪಕರಣ ತೊಡಿಸಿ ಮಾತನಾಡಲು, ಕೇಳಲು ಸೂಕ್ತವಾದ ತರಬೇತಿಯನ್ನು ಕೊಡಬೇಕಾಗುತ್ತದೆ,” ಎನ್ನುತ್ತಾರೆ.

ಈ ಸಂಸ್ಥೆಯಲ್ಲಿ ಮಕ್ಕಳಿಗಷ್ಟೇ ಅಲ್ಲದೆ, ಇಂತಹ ಮಕ್ಕಳ ತಾಯಂದಿರಿಗೂ ತರಬೇತಿಯನ್ನು ನೀಡಲಾಗುತ್ತದೆ. ಎರಡು ವರ್ಷಗಳ ಒಳಗಿನ ಮಗುವನ್ನು ತಾಯಿ ಹೇಗೆಲ್ಲಾ ಮಾತನಾಡಿಸಬೇಕು? ಮಗುವಿನೊಡನೆ ಹೇಗೆ ವರ್ತಿಸಬೇಕು ಎನ್ನುವುದನ್ನು ಹೇಳಿಕೊಡಲಾಗುತ್ತದೆ. ಈ ತರಬೇತಿಗಾಗಿ ರಾಜ್ಯ, ಹೊರ ರಾಜ್ಯಗಳಿಂದ ತಾಯಂದಿರು ಇಲ್ಲಿಗೆ ಬರುತ್ತಾರೆ. ಶಾಂತಾ ಹೇಳುವಂತೆ, “ತಾಯಿಯೇ ಮೊದಲ ಗುರುವಾಗಿರುವುದರಿಂದ ಇಂತಹ ನ್ಯೂನತೆಯುಳ್ಳ ಮಕ್ಕಳನ್ನು ತಾಯಿ ಸರಿಯಾದ ಬಗೆಯಲ್ಲಿ ತರಬೇತುಗೊಳಿಸಿದ್ದಾದರೆ ಮಕ್ಕಳು ಉತ್ತಮ ಬೆಳವಣಿಗೆ ಹೊಂದುತ್ತಾರೆ.”

ಸಂಸ್ಥೆಯಲ್ಲಿ ಕೇಲವು ಕಿವುಡು ಮೂಕ ಮಕ್ಕಳಿಗೆ ಮಾತ್ರವೇ ತರಬೇತಿಯನ್ನು ನೀಡುವುದಲ್ಲ, ಬದಲಿಗೆ ಬುದ್ಧಿಶಕ್ತಿಯಲ್ಲಿ ಸ್ವಲ್ಪ ಹಿಂದೆ ಬಿದ್ದಿರುವ ಇಂಟಿಕ್ಚು್‌ ಡಿಸ್‌ಆರ್ಡರ್‌ ಎನ್ನಬಹುದಾದ ಮಕ್ಕಳಿಗೆ, `ಆಟಿಸಂ’ನಿಂದ ಬಳಲುತ್ತಿರುವವರಿಗೆ, ಅತಿ ಚಾಂಚಲ್ಯತೆ (ಎಡಿಎಚ್‌ಡಿ) ಹೊಂದಿರುವವರಿಗೆ ಹಾಗೂ ಕಲಿಕೆಯಲ್ಲಿ ಹಿಂದೆ ಇರುವವರಿಗೆ ಸಹ ಸಕಾಲದಲ್ಲಿ ಸೂಕ್ತ ತರಬೇತಿಯನ್ನು ನೀಡಲಾಗುತ್ತದೆ. ಇನ್ನು ತೊದಲುವಿಕೆಯ ಸಮಸ್ಯೆ, ಉಚ್ಚಾರಣಾ ದೋಷ ಹೊಂದಿರುವ ಮಕ್ಕಳಿಗೆ ಸಹ ಇಲ್ಲಿ ತರಬೇತಿ ನೀಡಿ ತೊಂದರೆಗಳನ್ನು ದೂರವಾಗಿಸುತ್ತಾರೆ. ಇಷ್ಟೇ ಅಲ್ಲದೆ, ಯಾವ ಯಾವ ಕಾರಣಗಳಿಂದೋ ವಾಕ್‌ ತೊಂದರೆಗಳಿಗೆ ತುತ್ತಾಗುವ ಎಲಾ ವಯೋಮಾನದವರಿಗೂ ಈ ಸಂಸ್ಥೆಯಲ್ಲಿ ಚಿಕಿತ್ಸೆ ಹಾಗೂ ತರಬೇತಿ ನೀಡಲಾಗುತ್ತದೆ.

ಅಂತೆಯೇ ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ನಾನಾ ಜನರಲ್ಲಿ ನಾನಾ ಪ್ರಕಾರದ ಶ್ರವಣ ತೊಂದರೆಗಳಿರುತ್ತವೆ. ಅವುಗಳನ್ನು ಗುರುತಿಸಿ ಸೂಕ್ತ ಶ್ರವಣೋಪಕರಣ ನೀಡುವುದು ಹಾಗೂ ಸೂಕ್ತ ಶ್ರವಣ ತರಬೇತಿಯನ್ನು ಕೊಡುವ ಕೆಲಸವನ್ನೂ ಈ ಕೇಂದ್ರ ಮಾಡುತ್ತದೆ.

ಶಾಂತಾ ಹೇಳುವಂತೆ ವಾಗ್ದೇವಿ ಸಂಸ್ಥೆಗೆ ಸೇರುವುದಕ್ಕೆ ಯಾವ ವಯೋಮಿತಿ ಇರುವುದಿಲ್ಲ. ಹಾಗೆಯೇ ವರ್ಷದ ಯಾವ ತಿಂಗಳಲ್ಲಿಯೂ ಸಹ ಸೇರಿಕೊಳ್ಳಬಹುದು. ಇಲ್ಲಿ ಮಕ್ಕಳಿಗೆ ಒಂದರಿಂದ ಹತ್ತನೇ ತರಗತಿವರೆಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತದೆ. ಇಷ್ಟರವರೆಗೂ ಸುಮಾರು ಮೂರರಿಂದ ನಾಲ್ಕು ಬ್ಯಾಚ್‌ ವಿದ್ಯಾರ್ಥಿಗಳು ಹತ್ತನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇಲ್ಲಿಗೆ ಸೇರಲು ಬಂದವರಲ್ಲಿ ಕಲಿಕೆಗೆ ಬೇಕಾದ ಅಗತ್ಯ ಗುಣಗಳು ಇವೆಯೇ ಎನ್ನುವುದನ್ನು ಮೊದಲು ಗುರುತಿಸಲಾಗುತ್ತದೆ, ಬಳಿಕವಷ್ಟೇ ಕೇಂದ್ರಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು.

ವಾಕ್‌ ಶ್ರವಣ ಚಿಕಿತ್ಸಾಲಯವನ್ನೂ ಸಹ ಇದೇ ಸಂಸ್ಥೆಯರು ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಮಾತು ಹಾಗೂ ಕೇಳಿಸಿಕೊಳ್ಳಲು ತೊಂದರೆ ಇರುವ ಯಾರು ಬೇಕಾದರೂ ಚಿಕಿತ್ಸೆ ಪಡೆಯಬಹುದು. ಕಿವುಡು ಮಕ್ಕಳ ಶಿಕ್ಷಣ, ಅನುಕೂಲಕ್ಕಾಗಿ ವಿಶೇಷ ಪುಸ್ತಕ `ವರ್ಕ್‌ ಬುಕ್‌ಫಾರ್‌ ದಿ ಹಿಯರಿಂಗ್‌ ಇಂಪೇರ್ಡ್‌ ಚಿಲ್ಡ್ರನ್‌’ನ್ನು ರಚಿಸಿದ ಶಾಂತಾ, ಮುಂದೆ `ಕಿವುಡು ಮಕ್ಕಳ ಶಿಕ್ಷಕರ ಆಕರ ಗ್ರಂಥ,’ `ಗ್ಲಾಸರಿ ಆಫ್‌ ಟರ್ಮ್ಸ್ ವಿತ್‌ ರೆಫರೆನ್ಸ್ ಟು ಹಿಯರಿಂಗ್‌ ಇಂಪೇರ್ಡ್‌,’ `ದತ್ತಾ ಮೆಥಡಾಲಜಿ ಫಾರ್‌ ಎನ್‌ಹ್ಯಾನ್ಸಿಂಗ್‌ಲರ್ನಿಂಗ್‌ ಗೈಡ್‌ ಲೈನ್ಸ್ ಫಾರ್‌ ಟೀಚರ್ಸ್‌ ಅಂಡ್‌ ಪೇರೆಂಟ್ಸ್,’ (ಕನ್ನಡ ಹಾಗೂ ಇಂಗ್ಲಿಷ್‌) `ಶ್ರವಣ ನ್ಯೂನತೆಯುಳ್ಳವರಿಗೆ ಸಂಕೇತ ಮಾತು’ ಎನ್ನುವ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಇಷ್ಟೇ ಅಲ್ಲದೆ, ದೂರದರ್ಶನ ಹಾಗೂ ರೇಡಿಯೋ ಕಾರ್ಯಕ್ರಮಗಳ ಮೂಲಕ ಕಿವುಡು ಹಾಗೂ ಸಂವಹನ ನ್ಯೂನತೆಯ ಕುರಿತಂತೆ ಜನಸಾಮಾನ್ಯರಿಗೂ ತಿಳಿಯುವಂತೆ ಸಾಕಷ್ಟು ಉಪನ್ಯಾಸಗಳನ್ನು ನೀಡಿದ್ದಾರೆ. ಇವರು ವಾಕ್‌ ಶ್ರವಣ ತರಬೇತುದಾರರಾಗಿ ಭಾರತ ಹಾಗೂ ವಿದೇಶಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ.

ಒಳ್ಳೆಯ ವಾಗ್ಮಿಯಾಗಿರುವ ಶಾಂತಾ ತಮ್ಮ ಕಾಲೇಜು ದಿನಗಳಿಂದಲೂ ನಾಟಕಗಳಲ್ಲಿ ಆಸಕ್ತಿ ಹೊಂದಿದ್ದರು. ಯೋಗಾಭ್ಯಾಸದಲ್ಲಿಯೂ ಪ್ರಾವೀಣ್ಯತೆ ಗಳಿಸಿರುವ ಇವರು ಆಟಿಸಂನಿಂದ ಬಳಲುವ ಮಕ್ಕಳಿಗೆ ಯೋಗದಿಂದ ಸುಧಾರಣೆ ಹೊಂದುವುದು ಸಾಧ್ಯವಿದೆ ಎಂದು ಕಂಡುಕೊಂಡರು. ಇದೇ ವಿಚಾರವಾಗಿ ಸಂಶೋಧನೆ ನಡೆಸಿ `ಸಂಯುಕ್ತ ಯೋಗ ಥೆರಪಿ ಹಾಗೂ ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್ಸ್‌’ ಎನ್ನುವ ಸಂಶೋಧನಾ ಗ್ರಂಥವನ್ನು ವಿವೇಕಾನಂದ ಯೋಗ ಅನುದಾನ ಸಂಸ್ಥೆಗೆ ಸಲ್ಲಿಸಿದ್ದಾರೆ.

ಕಿವುಡು ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಶಾಂತಾ ಸಲ್ಲಿಸಿದ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ 2007ರಲ್ಲಿ ಇವರಿಗೆ `ಅತ್ಯುತ್ತಮ ಶಿಕ್ಷಕಿ’ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸಂವಹನಾ ನ್ಯೂನತೆಯುಳ್ಳವರ ಪುನಶ್ಚೇತನ ಕಾರ್ಯಕ್ರಮದಲ್ಲಿ ಶಾಂತಾ ಸಲ್ಲಿಸಿರುವ ಸೇವೆಯನ್ನು ಗುರುತಿಸಿ 2013ರಲ್ಲಿ ರಾಷ್ಟ್ರಪತಿಗಳು ಪ್ರಶಸ್ತಿ ಫಲಕ ನೀಡಿ ಗೌರವಿಸಿದ್ದಾರೆ.

ರಾಘವೇಂದ್ರ ಅಡಿಗ ಎಚ್ಚೆನ್

ಎಸ್‌.ಜಿ.ಎನ್‌. ವಾಗ್ದೇವಿ ಸಂಪರ್ಕ ನ್ಯೂನತೆಯುಳ್ಳವರ ಪುನಶ್ಚೇತನ ಕೇಂದ್ರಾಗ್ದೇವಿ ಸಂವಹನಾ ನ್ಯೂನತೆಯುಳ್ಳವರ ಪುನಶ್ಚೇತನ ಕೇಂದ್ರ ಪ್ರಾರಂಭವಾದದ್ದು 1996, ಜನವರಿ 1ರಲ್ಲಿ. ಕೇವಲ ಎಂಟು ಮಕ್ಕಳೊಂದಿಗೆ ಶಾಂತಾರ ಮನೆಯ ಆವರಣದಲ್ಲಿಯೇ ಈ ಪುನಶ್ಚೇತನ ಕೇಂದ್ರ ಪ್ರಾರಂಭಗೊಂಡಿತು. ಕೆಲವು ತಿಂಗಳ ನಂತರ ಗಿರಿನಗರದ ಮೂರನೇ ಹಂತದಲ್ಲಿ ಸಂಸ್ಥೆಯ ಕೇಂದ್ರ ಸ್ಥಾಪನೆಗೊಂಡಿತು. ದಿನ ದಿನಕ್ಕೆ ಹೆಚ್ಚುತ್ತಾ ಬಂದ ಮಕ್ಕಳ ಸಂಖ್ಯೆಯಿಂದ ತಮಗೆ ಇನ್ನು ಸಾಧ್ಯವಿಲ್ಲ ಎಂದೆನಿಸಲು 2001ರಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು, ಅಧೂತ ದತ್ತ ಪೀಠ ಇವರ ಆಶ್ರಯಕ್ಕೆ ಸಂಸ್ಥೆಯನ್ನು ಹಸ್ತಾಂತರಿಸಲಾಗಿ ವಾಗ್ದೇವಿ ಸಂಸ್ಥೆಯು ಎಸ್‌.ಜಿ.ಎಸ್‌ ವಾಗ್ದೇವಿ ಎನ್ನುವ ಹೆಸರಿನಲ್ಲಿ ಕರೆಯಲ್ಪಟ್ಟಿತು. ಇದೀಗ ಇಪ್ಪತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ಸಂಸ್ಥೆಯಲ್ಲಿ ಇದುವರೆಗೆ ಕಲಿತವರಲ್ಲಿ ಹಲವಾರು ಮಂದಿ ಬೇರೆ ಬೇರೆ ಕೆಲಸದಲ್ಲಿದ್ದಾರೆ. ಒಬ್ಬ ವಿದ್ಯಾರ್ಥಿ ಶಿಕ್ಷಕ ವೃತ್ತಿಯಲ್ಲಿದ್ದಾರೆ ಎನ್ನುವುದು ವಿಶೇಷ.

ಸಂಸ್ಥೆಯ ಇಪ್ಪತ್ತನೇ ವರ್ಷಾಚರಣೆಯ ಪ್ರಯುಕ್ತ ಈ ವರ್ಷ ಜನವರಿ ಪ್ರಾರಂಭದಲ್ಲಿ ಬೆಂಗಳೂರಿನ ಸಂಸ್ಥೆಯ ಆವರಣದಲ್ಲಿಯೇ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮ್ಮೇಳನದಲ್ಲಿ ವಿವಿಧ ರಾಜ್ಯ ಮತ್ತು ರಾಷ್ಟ್ರದ ತಜ್ಞರೊಂದಿಗೆ ಸಂವಾದ ನಡೆದಿತ್ತು. ಒಟ್ಟಾರೆ ಪಾಲಕರಲ್ಲಿ ಜಾಗೃತಿ ಮೂಡಬೇಕಿದೆ. ಕಿವುಡು ಇಲ್ಲವೇ ಸಂವಹನ ನ್ಯೂನತೆಯುಳ್ಳ ಮಗುವನ್ನು ಹೇಗೆ ನೋಡಿಕೊಳ್ಳಬೇಕೆನ್ನುವ ಅರಿವು ಮೂಡಬೇಕಿದೆ. ಅಮೆರಿಕಾದಂತಹ ದೇಶಗಳಲ್ಲಿರುವಂತೆ ಇಲ್ಲಿಯೂ ಚಿಕ್ಕ ಮಕ್ಕಳಿರುವಾಗಲೇ ಅರಿಗಿರುವ ಕಿವುಡುತನವನ್ನು ಗುರುತಿಸಿ ಸೂಕ್ತ ಚಿಕಿತ್ಸೆ  ನೀಡುವಂತಾಗಬೇಕು. ಅದಕ್ಕಾಗಿ ವಿದೇಶಗಳಲ್ಲಿರುವ ವಿಶೇಷ ಚಿಕಿತ್ಸೆಗಳು ನಮ್ಮಲ್ಲಿಯೂ ಲಭ್ಯವಾಗಬೇಕಿವೆ. ಇವನ್ನು ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಮಾನವ ಸಂಪನ್ಮೂಲದ ಅಗತ್ಯವಿದ್ದು ಇದಕ್ಕೆ ಅವಕಾಶ ಒದಗಿಸಬೇಕು. ಇಂತಹ ಮಕ್ಕಳಿಗೆ ತರಬೇತಿಗೊಳಿಸಲು ಸೂಕ್ತ ತರಬೇತುದಾರರು ಬೇಕಾಗುತ್ತಾರೆ. ಇಷ್ಟೆಲ್ಲ ಆದಾಗ ಮಾತ್ರ ಶಾಂತಾರಂತಹ ಮಹಿಳೆಯರ ಪ್ರಯತ್ನಕ್ಕೆ ಒಂದು ಸಾರ್ಥಕತೆ ದೊರಕುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ